ಅಥವಾ

ಒಟ್ಟು 61 ಕಡೆಗಳಲ್ಲಿ , 18 ವಚನಕಾರರು , 40 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪ್ರಮಥವೇದಿಗಳೆಲ್ಲರೂ ಗತಿಯಲೆ ಸಿಲುಕಿದರು. ಅತೀತ ಅನಾಗತವೆಂಬ ನುಡಿಯಲೆ ಸಿಲುಕಿದರು. ಶ್ರುತಿವಂತರೆಲ್ಲರೂ ಆಗಮದಲ್ಲಿ ಸಿಲುಕಿದರು. ಇಂಥವನೆ ಲಿಂಗೈಕ್ಯನು ? ನುಡಿದ ನುಡಿಯ ನಡೆಯನು, ನಡೆದ ನಡೆಯ ನುಡಿಯನು, ಬಂದಲ್ಲಿ ಬಾರನು, ನಿಂದಲ್ಲಿ ನಿಲ್ಲನು, ನಿಸ್ಸೀಮನು ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಇಡುವ ಕೊಡುವ ಬಿಡುವ ಕಟ್ಟುವ ಗೊಡವೆಗಾರನಯ್ಯಾ; ಶರಣನು ಗಾಳಿಯ ಮರೆಯ ಜ್ಯೋತಿಯಂತೆ, ಸುಖಸೂಸದೆ ಇಪ್ಪನು. ತನ್ನರಿವು ಮರವೆಗಳೆಲ್ಲಾ ಪ್ರಾಣಲಿಂಗಾಧೀನವಲ್ಲದೆ, ಮತ್ತೊಂದನರಿಯನು. ಆಸರುವನಲ್ಲ ಬೇಸರುವನಲ್ಲ; ಜಗದ ಕಳಕಳಕ್ಕೆ ಎದ್ದು ಹರಿದಾಡುವನಲ್ಲ. ಸುಖಮುದ್ರಿತನು ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಹೆಣ್ಣಿನೊಳಗೆ ಕಣ್ಣುಗೊಂಡು ಹುಟ್ಟಿ, ಮಣ್ಣು ಹೊಯ್ದುಕೊಂಬ ಅಣ್ಣಗಳು ನೀವು ಕೇಳಿರೆ. ಈ ಬಣ್ಣದ ಪರಿಯಾಯಕ್ಕೆ ಕಣ್ಣುಗೆಟ್ಟು ಬಿದ್ದಿರಲ್ಲಾ. ಈ ಹೆಣ್ಣಿನ ಸಂಗ ನಿಮಗೇತಕಣ್ಣಾ. ತನ್ನಲ್ಲಿ ಹೆಣ್ಣುಂಟು, ತನ್ನಲ್ಲಿ ಹೊನ್ನುಂಟು, ತನ್ನಲ್ಲಿ ಮಣ್ಣುಂಟು. ಇಂತಿವ ನಿಮ್ಮಲ್ಲಿ ನೀವು ತಿಳಿದು ನೋಡಲಿಕ್ಕೆ, ತನ್ನಲ್ಲಿ ತಾನೆ ಕಾಣಬಹುದು. ತನ್ನ ತಾನರಿಲ್ಲದೆ ಇದಿರನರಿಯಬಾರದು. ಇದಿರನರಿದಲ್ಲದೆ ಪರವನರಿಯಬಾರದು. ಪರವನರಿದಲ್ಲದೆ ಸ್ವಯವನರಿಯಬಾರದು. ಸ್ವಯವನರಿದಲ್ಲದೆ ಅರಿವು ತಲೆದೋರದು ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಮಾಯ ಹಿಂಗಿದಲ್ಲದೆ ಮದವಳಿಯದು. ಮದವಳಿದಲ್ಲದೆ ಮತ್ಸರ ಹೆರೆಸಾರದು. ಮತ್ಸರ ಹೆರೆಸಾರಿದಲ್ಲದೆ ಮಹಾಘನವಳವಡದು. ಮಹಾಘನವಳವಟ್ಟಲ್ಲದೆ ಮಹಾಲಿಂಗವ ಕಾಣಬಾರದು. ಮಹಾಲಿಂಗವ ಕಂಡಲ್ಲದೆ ಮಹಾಪ್ರಕಾಶವ ಕಾಣಬಾರದು. ಮಹಾಪ್ರಕಾಶವ ಕಂಡಲ್ಲದೆ ನಿತ್ಯವ ಕಾಣಬಾರದು. ನಿತ್ಯವ ಕಂಡಲ್ಲದೆ ನಿಜವ ಕಾಣಬಾರದು. ನಿಜವ ಕಂಡಲ್ಲದೆ ನಿರ್ಣಯವನರಿಯಬಾರದು. ನಿರ್ಣಯವನರಿದಲ್ಲದೆ ಗುರುಲಿಂಗಜಂಗಮವನರಿಯಬಾರದು. ಗುರುಲಿಂಗಜಂಗಮವನರಿದಲ್ಲದೆ ಪಾದತೀರ್ಥಪ್ರಸಾದವನರಿಯಬಾರದು. ಪಾದತೀರ್ಥಪ್ರಸಾದವನರಿದಲ್ಲದೆ ಸಹಜ ಶರಣರ ಸಂಗವನರಿಯಬಾರದು. ಇಂತಪ್ಪ ಶರಣರ ಸಂಗವನರಿದಲ್ಲದೆ ಸರ್ವನಿರ್ಣಯವನರಿಯಬಾರದು. ಸರ್ವನಿರ್ಣಯವನರಿದಲ್ಲದೆ ಸಹಜಸದ್ಭಕ್ತರು ಮೆಚ್ಚರು. ಸಹಜಸದ್ಭಕ್ತರು ಕೂಡಿ ನಡೆಯಬಲ್ಲಡೆ ಇದೇ ಸುಖವು. ಸಂಗದೊಳಗೆ ಶರಣರ ಸಂಗವೆ ಸಂಗವು ಕೇಳಿರಯ್ಯಾ. ಇಂತು ಸಾಯದೆ ನೋಯದೆ ಸ್ವಯವನರಿದು, ಸದ್ಭಕ್ತರ ಸಂಗವ ಮಾಡಬಲ್ಲಾತನೆ ಲಿಂಗೈಕ್ಯನು. ಅವ ತಾನೆ ಘನಲಿಂಗವು. ಹೀಂಗಲ್ಲದೆ ಹಿಂದೆ ಮೆಟ್ಟಿಹೋಹ ಸಂದೇಹಿ ಮಾನವರೆಲ್ಲರೂ ಜಗದ ಜಂಗುಳಿಗಳ ದಂದುಗದೊಳಗಾಗಿಪ್ಪರು. ಆ ಗುಣವ ಬಿಟ್ಟು, ಶರಣರ ಸಂಗ ಸಹಜವೆಂದರಿದು, ನಿಜವಾಗಿ ಬಂದಬಳಿಕ ಪೂರ್ವಭಾಗೆಗೆ ಬಾರೆನೆಂಬ ನಿಶ್ಚಯದಿಂ ಪರಮ ಪ್ರಸಾದವನರಿದು, ಜಗದ ಹಂಗ ಹರಿದ ಶರಣನು ಎನ್ನ ತಂದೆಯಾಗಿಪ್ಪನು ಕಾಣಾ, ಶುದ್ಧಸಿದ್ಧ ಪ್ರಸಿದ್ಧ ಪ್ರಸನ್ನ ಪ್ರಭುವೆ ಶಾಂತಚೆನ್ನಮಲ್ಲಿಕಾರ್ಜುನದೇವಯ್ಯಾ. ಈ ಬಂದ ಪರಿಯಾಯವರಿದು, ತಾಮಸವ ಹಿಂಗಿ, ಸಹಜ ನಿಜನಿತ್ಯವನರಿದು ಹೋದ ಶರಣರ ನಿಲವಿನ ಪರಿಯ, ನೀವೆ ಬಲ್ಲಿರಲ್ಲದೆ ನಾನೆತ್ತ ಬಲ್ಲೆನಯ್ಯಾ, ನಿಮ್ಮ ಧರ್ಮ ನಿಮ್ಮ ಧರ್ಮ ನಿಮ್ಮ ಧರ್ಮ
--------------
ಮರುಳಶಂಕರದೇವ
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ, ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ, ಪ್ರಸಾದವಿಕಾರಿಗೆ ಮನೋವಿಕಾರವೆಂಬುದಿಲ್ಲ. ಇಂತೀ ತ್ರಿವಿಧ ಗುಣವನರಿದಾತನು ಅಚ್ಚ ಲಿಂಗೈಕ್ಯನು ಕೂಡಲಸಂಗಮದೇವಾ.
--------------
ಬಸವಣ್ಣ
ಸಾವಯವ ನಿರವಯವನಲ್ಲ ನೋಡಾ ಲಿಂಗೈಕ್ಯನು. ಗಮನಿಯಲ್ಲ ನಿರ್ಗಮನಿಯಲ್ಲ ನೋಡಾ ಲಿಂಗೈಕ್ಯನು. ಸುಮನಸಾರಾಯ ಸುಜ್ಞಾನಭರಿತನು ನೋಡಾ ಲಿಂಗೈಕ್ಯನು. ಅಮಲಬ್ರಹ್ಮದ ಕೂಟದ ಅಚಲಿತ ಅಭೇದ್ಯನು ನೋಡಾ ಲಿಂಗೈಕ್ಯನು. ಅದ್ವಯಭಾವ ಅಗಣಿತ ಮಹಿಮನು ನೋಡಾ ಅಖಂಡೇಶ್ವರಾ ನಿಮ್ಮ ನಿಜಲಿಂಗೈಕ್ಯನು.
--------------
ಷಣ್ಮುಖಸ್ವಾಮಿ
ಅಂಗವಿಲ್ಲದ ನಿರಂಗಿಗೆ ಅಗ್ನಿಯ ಬಳಗದ ಅವಯವಂಗಳು, ಬ್ರಹ್ಮಕಪಾಲವೇ ಶಿರಸ್ಸಾಗಿಪ್ಪುದು ನೋಡಾ. ಅಗ್ನಿಯಂಗದ ಉದರದೊಳಗೆ ಪರಿಪರಿಯ ರಸದ ಭಾವಿ. ಆ ರಸದ ಭಾವಿಯ ತುಳಕ ಹೋದವರೆಲ್ಲ ಅಗ್ನಿಯನುಣ್ಣದೆ, ಆ ರಸವನೆ ಉಂಡು, ಅಗ್ನಿಯ ಸ್ವರೂಪವಾದರು ನೋಡ. ಅಗ್ನಿಯ ಸ್ವರೂಪವಾದುದ ಕಂಡು ಕುರುಹಳಿದು ಅರುಹಡಗಿ ನಿರವಯಲಸಮಾದ್ಥಿಯಲ್ಲಿ ನಿಂದ ನಿಬ್ಬೆರಗು ಮೃತ ಗಮನ ರಹಿತನು ನೋಡಾ ಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಲಿಂಗೈಕ್ಯರು ಲಿಂಗೈಕ್ಯರು ಎಂದೆಂಬಿರಿ. ಲಿಂಗೈಕ್ಯರ ನಿಲವ ಆರು ಬಲ್ಲರಯ್ಯ ಎಂದಡೆ, ಅಜಗಣ್ಣತಂದೆ, ಮೋಳಿಗೆ ಮಾರಿತಂದೆ, ಕೂಗಿನ ಮಾರಿತಂದೆ, ನುಲಿಯಚಂದಯ್ಯ, ಹಡಪದ ಅಪ್ಪಣ್ಣ, ಮುಗ್ಧಸಂಗಯ್ಯನವರು, ಘಟ್ಟಿವಾಳತಂದೆ ಮೊದಲಾದ ಪ್ರಮಥಗಣಂಗಳು, ಶಿವಜ್ಞಾನೋದಯವಾದಂಥ ಜ್ಞಾನಕಲಾತ್ಮರು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕುರಿಮನುಜರೆತ್ತ ಬಲ್ಲರು ನೋಡೆಂದನಯ್ಯ ನಿಮ್ಮ ಲಿಂಗೈಕ್ಯನು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
`ಲಿಂಗಮಧ್ಯೇ ಜಗತ್‍ಸರ್ವಂ' ಎಂದುದಾಗಿ- ಜಗವ ಹೊರಗಿರಿಸಿ, ಲಿಂಗವನೊಳಗಿರಿಸಿಕೊಂಡು ಲಿಂಗ ಪ್ರೇಮಿಯಾದ ನಿರುತನು ಜಗ ತೋರುವಲ್ಲಿಯೂ ಅಡಗುವಲ್ಲಿಯೂ ತೋರಿಯಡದಗದೆ ಅನುಪಮಮಹಿಮನಯ್ಯ, ಮಹೇಶ್ವರನು. ಜಗದ ಒಳಹೊರಗೆ ಸರ್ವ ವ್ಯಾಪಕನಾದ ಪರಿಪೂರ್ಣ ಸರ್ವಗತನಯ್ಯ ಲಿಂಗೈಕ್ಯನು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಕಾಲ ಕೈಯೊಳಗಿರಿಸಿ ನಡೆವಾತನ ನಡೆ ಶುದ್ಧ. ಕೈಯ ಕಣ್ಣೊಳಗಿರಿಸಿ ನೋಡುತ್ತಿಪ್ಪಾತನ ನೋಟ ಶುದ್ಧ. ಆ ಕಣ್ಣ ಮನದೊಳಗಿರಿಸಿ ನೆನೆವುತ್ತಿಪ್ಪಾತನ ಮನ ಶುದ್ಧ, ಆ ಮನವ ಭಾವದೊಳಗಿರಿಸಿ ಭಾವಿಸುತ್ತಿಪ್ಪಾತನ ಭಾವ ಶುದ್ಧ. ಆ ಭಾವವು ನಿರ್ಭಾವವನೆಯ್ದಿ ನಿರವಯಲಾದರೆ, ಆತ ಸ್ವತಂತ್ರ ಶರಣ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ, ಒಂದಾದ ಲಿಂಗೈಕ್ಯನು.
--------------
ಸ್ವತಂತ್ರ ಸಿದ್ಧಲಿಂಗ
ಶಿವ ತಾನೆಂಬ ವಿವೇಕವಿಲ್ಲದೆ, ಶಿವನಲ್ಲಿ ತಾನಡಗಿ, ತನ್ನಲ್ಲಿ ಶಿವನಡಗಿ, ತಾನು ತಾನೇಕವಾದಾತಂಗೆ ಸಂದು ಸಂಶಯಂಗಳುಂಟೆ? ತೃಪ್ತಿ ಸಂಕೋಚವೆಂಬವಡಗಿದ ಬಳಿಕ ಮತ್ತೆ ಘನಕ್ಕೆ ಘನವಾದೆನೆಂಬ ನೆನಹುಂಟೆ? ನಿಜವೆಂತಿಪ್ಪುದಂತಿಪ್ಪನು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲಿ ಲಿಂಗೈಕ್ಯನು.
--------------
ಸ್ವತಂತ್ರ ಸಿದ್ಧಲಿಂಗ
ಭಾವಗೆಟ್ಟು ಭವನಷ್ಟನು ಒಡಹುಟ್ಟಿದ ಐವರ ಕೈಬಿಟ್ಟನು. ಭಂಡನು ಲಜ್ಜೆಭಂಡನು, ಕಂಡಡೆ ನುಡಿಸದಿರಾ ಮಾಯಾದೇವಿ. ಅರಿವೆಯ (ಅರಿವ?)ನುಟ್ಟು ನೆರೆ ಮರುಳಾದನು ಹುಟ್ಟ ಮುರಿದನು ಮಡಕೆಯನೊಡೆದನು ಆದಿ ಪುರಾತನು ಅಚಲ ಲಿಂಗೈಕ್ಯನು. ಗುಹೇಶ್ವರನಲ್ಲಯ್ಯಂಗೆ ಮೂಗಿಲ್ಲ ಮಗಳೆ.
--------------
ಅಲ್ಲಮಪ್ರಭುದೇವರು
ವಶಿಷ*ಗೋತ್ರದಲ್ಲಿ ಹುಟ್ಟಿದವನು ವಶಿಷ*ಗೋತ್ರದವನೆಂಬಂತೆ, ಭಾರದ್ವಾಜಗೋತ್ರದಲ್ಲಿ ಹುಟ್ಟಿದವನು ಭಾರದ್ವಾಜಗೋತ್ರದವನೆಂಬಂತೆ, ಕಾಶ್ಯಪಗೋತ್ರದಲ್ಲಿ ಹುಟ್ಟಿದವನು ಕಾಶ್ಯಪಗೋತ್ರದವನೆಂಬಂತೆ, ವಿಶ್ವಾಮಿತ್ರಗೋತ್ರದಲ್ಲಿ ಹುಟ್ಟಿದವನು ವಿಶ್ವಾಮಿತ್ರಗೋತ್ರದವನೆಂಬಂತೆ ಆ ಪರಿ ಆವಾವ ಗೋತ್ರದಲ್ಲಿ ಆವಾವ ಋಷಿಗಳ ವಂಶದಲ್ಲಿ ಜನಿಸಿದವನು ಆ ಗೋತ್ರ, ಆ ಸಂತತಿ, ಆ ಸುತನು ಎಂಬುದು ಉಪಚರ್ಯವೆ ? ಅಸತ್ಯವೇ ಹೇಳಿರಣ್ಣಾ ? ಅದು ತಾತ್ಪರ್ಯ, ಅದು ಸತ್ಯ. ಆ ಪರಿ ಬ್ರಾಹ್ಮಣನ ಮಗ ಬ್ರಾಹ್ಮಣನು, ಕ್ಷತ್ರಿಯನ ಮಗ ಕ್ಷತ್ರಿಯನು, ವೈಶ್ಯನ ಮಗ ವೈಶ್ಯನು, ಶೂದ್ರನ ಶೂದ್ರನು, ಆ ಪರಿ ತಪ್ಪದು. ದಿಟ ದಿಟ ವಿಚಾರಿಸಿ ನೋಡಿರೆ. ಅದು ಹೇಗೆಂದಡೆ ಶ್ರುತಿ: `ಮಹಾಬ್ರಾಹ್ಮಣಮೀಶಾನಂ' ಎಂದುದಾಗಿ ಮತ್ತಂ `ವಿರೂಪಾಕ್ಷಂ ದ್ವಿಜೋತ್ತಮಂ' ಎಂದುದಾಗಿ ಮಹಾಬ್ರಾಹ್ಮಣನೇ ಮಹಾದೇವನು. ಇದಕ್ಕೆ ಮತ್ತೆ ಶಿವರಹಸ್ಯದಲ್ಲಿ ಗುರುದೇವೋ ಮಹಾದೇವೋ ಗುರುದೇವಸ್ಸದಾಶಿವಃ ಗುರುದೇವಃ ಪರಂ ತತ್ತ್ವಂ ತಸ್ಮೈ ಶ್ರೀಗುರುವೇ ನಮಃ ಎಂದುದಾಗಿ, ಮಹಾದೇವನೇ ಶ್ರೀಗುರು ಕಾಣಿರಣ್ಣಾ. ಆ ಶ್ರೀಗುರುವಿನ ಕರಕಮಲದಲ್ಲಿ ಉದ್ಭವಿಸಿದ ತಚ್ಛಿಷ್ಯನೇ ಮಹಾಬ್ರಾಹ್ಮಣನು, ಇಂತೆಂಬುದು ಹುಸಿಯಲ್ಲ. ಜಾತಿ ಅಜಾತಿ ಎಂದು ಅಷ್ಟಾದಶಜಾತಿಯೊಳಗೆ ಇಕ್ಕಲಾಗದು. ಅಷ್ಟಾದಶಜಾತಿಯೊಳಗೊಂದೂ ಭಾವಿಸಲಾಗದು. ಆ ಮಹಿಮನೇ ಸತ್ಕುಲಜನು. ಇದಕ್ಕೆ ಮತ್ತುಂ `ಬ್ರಹ್ಮಣಾ ಚರತೀ ಬ್ರಾಹ್ಮಣಃ' ಎಂದುದಾಗಿ ಆ ಮಹಾಮಹಿಮನು ಬ್ರಹ್ಮವ ಆಚರಿಸುವನಾಗಿ ಬ್ರಾಹ್ಮಣ ಮತ್ತಂ ಕೂರ್ಮಪುರಾಣದಲಿ `ಸ ಏವ ಭಸ್ಮಜ್ಯೋತಿಃ' ಎಂದುದಾಗಿ ವಿಭೂತಿಯ ಧರಿಸಿಪ್ಪವನಾಗಿ ಆ ಮಹಾತ್ಮನೇ ಜ್ಯೋತಿರ್ಲಿಂಗವು. ಮತ್ತಂ ಶಿವಧರ್ಮದಲ್ಲಿ `ರುದ್ರಾಕ್ಷಂ ಧಾರಯೇನ್ನಿತ್ಯಂ ರುದ್ರಸ್ಸಾಕ್ಷಾದಿವ ಸ್ಮøತಃ' ಎಂದುದಾಗಿ ರುದ್ರಾಕ್ಷಿಯಂ ಧರಿಸಿಪ್ಪª ತಾನಾಗಿ ಆ ಮಹಾಮಹಿಮನೇ ರುದ್ರನು. ಮತ್ತಂ ಕಾಳಿಕಾಗಮದಲ್ಲಿ `ತಸ್ಮಿನ್ವೇದಾಶ್ಚ ಶಾಸ್ತ್ರಾಣಿ ಮಂತ್ರಃ ಪಂಚಾಕ್ಷರೀ ತಥಾ ಎಂದುದಾಗಿ, ಶ್ರೀ ಪಂಚಾಕ್ಷರಿಯ ಜಪಿಸುವನಾಗಿ ಆ ಮಹಿಮನೇ ವೇದವಿತ ಶಾಸ್ತ್ರಜ್ಞನು. ಮತ್ತಂ ಲೈಂಗೇ ಮೂಢನಾಮಪ್ಯಯುಕ್ತಾನಾಂ ಪಾಪಿನಾಂ ಚಾಭಿಚಾರಿಣಾಂ ಯಮಲೋಕೋ ನ ವಿದ್ಯೇತ ಸದಾ ವೈ ಲಿಂಗಧಾರಣಾತ್ ಎಂದುದಾಗಿ ಲಿಂಗವ ಧರಿಸಿಪ್ಪನಾಗಿ ಆ ಮಹಾಮಹಿಮನೇ ಲಿಂಗದೇಹಿ, ಲಿಂಗಕಾಯನು, ಲಿಂಗಪ್ರಾಣನು ಶಿವಲಿಂಗಾರ್ಚನೆಯಂ ಮಾಡುವನಾಗಿ, ಆ ಮಹಾಮಹಿಮನೇ ಶಿವನು ಮತ್ತಂ ಆದಿತ್ಯಪುರಾಣೇ ಅಕೃತ್ವಾ ಪೂಜನಂ ಶಂಭೋರ್ಯೋ ಭುಂಕ್ತೇ ಪಾಪಕೃದ್ದ್ವಿಜಃ ಕುಣಪಂ ಚ ಮಲಂ ಚೈವ ಸಮಶ್ನಾತಿ ದಿನೇ ದಿನೇ ಎಂದುದಾಗಿ ಶಿವಲಿಂಗಕ್ಕೆ ಅರ್ಪಿಸದೇ ಕೊಳ್ಳನಾಗಿ ಆ ಮಹಾಮಹಿಮನೇ ರುದ್ರನು. ಮತ್ತಂ ಶಾಂಕರಸಂಹಿತೆಯಲ್ಲಿ ತಿಲಷೋಡಶಭಾಗಂ ತು ತೃಣಾಗ್ರಾಂಬುಕಣೋಪಮಂ ಪಾದೋದಕಪ್ರಸಾದಾನಾಂ ಸೇವನಾನ್ ಮೋಕ್ಷಮಾಪ್ನುಯಾತ್ ಎಂದುದಾಗಿ ಪಾದೋದಕ ಪ್ರಸಾದವಂ ಕೊಂಬನಾಗಿ ಆ ಮಹಾತ್ಮರು ತಾನೇ ಲಿಂಗೈಕ್ಯನು. ಇನ್ನು ನಾನಾವೇದಶಾಸ್ತ್ರಪುರಾಣಾಗಮಂಗಳ ಸಮ್ಮತ ದೃಷ್ಟವಾಕ್ಯಂಗಳನು ವಿಚಾರಿಸಿ ನೋಡಿದಡೆಯೂ ಶಿವಭಕ್ತನೇ ಕುಲಜನು, ಶಿವಭಕ್ತನೇ ಉತ್ತಮನು. ಇಂತಹ ಶಿವಭಕ್ತನನು ಜಾತಿವಿಜಾತಿ ಎಂದು ಭಾವಿಸಿದಡೆ, ಮತ್ರ್ಯನೆಂದು ಭಾವಿಸಿದಡೆ ನರಕ ತಪ್ಪದು. ವಶಿಷ* ಪುರಾಣದಲ್ಲಿ ಕೇಳಿರೆ: ಮತ್ರ್ಯವನ್ಮನುತೇ ಯಸ್ತು ಶಿವನಿಷ*ಂ ದ್ವಿಜಂ ನರಃ ಕುಂಭೀಪಾಕೇ ತು ಪತತಿ ನರಕೇ ಕಾಲಮಕ್ಷಯಂ ಎಂದುದಾಗಿ ಇದು ಕಾರಣ ಅಷ್ಟಾದಶವಿದ್ಯಂಗಳನು ವಿಚಾರಿಸಿ ತಿಳಿದು ನೋಡಿದಡೆ ಋಷಿಪುತ್ರನ ಋಷಿ ಎಂಬಂತೆ ಶ್ರೀಗುರುಪುತ್ರನನು ಶ್ರೀಗುರು ಎಂಬುದಯ್ಯಾ. ಆ ಮಹಾಮಹಿಮನ ದರ್ಶನವ ಮಾಡಿ ಪಾದೋದಕ ಪ್ರಸಾದವ ಕೊಂಡು ಮುಕ್ತರಪ್ಪುದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ದೀಕ್ಷಾಮೂರ್ತಿರ್ಗುರುರ್ಲಿಂಗಂ ಪೂಜಾಮೂರ್ತಿಃ ಪರಶ್ಶಿವಃ | ದೀಕ್ಷಾಂ ಪೂಜಾಂ ಚ ಶಿಕ್ಷಾಂ ಚ ಸರ್ವಕರ್ತಾ ಚ ಜಂಗಮಃ || ಎಂದುದಾಗಿ, ಪಂಚಭೂತ ಅರಿಷಡ್ವರ್ಗದುರವಣೆಯ ನಿಲಿಸಿ, ಭೀತಿ ಪ್ರೀತಿ ಪ್ರೇಮ ಕಾಲೋಚಿತವನರಿದು, ಕಿಂಕಿಲನಾಗಿ, ನಿರುಪಾಧಿಕನಾಗಿ ದಾಸೋಹ ಮಾಡುವಲ್ಲಿ ಭಕ್ತನು. ಅನ್ಯದೈವ ಪರವಧು ಪರಧನವಂ ಬಿಟ್ಟು, ಇಹಪರದಲ್ಲಿಯ ಭೂಕ್ತಿ ಮುಕ್ತಿಗಳಾಶೆಇಲ್ಲದೆ, ಏಕೋನಿಷೆ* ಗಟ್ಟಿಗೊಂಡು ಮಾಹೇಶ್ವರನಾಗಿರಬೇಕು. ಕಾಯದ ಮರದಲ್ಲಿ ಇಷ್ಟಲಿಂಗಾರ್ಪಿತ. ಮನ ಮೊದಲಾದ ಕರಣಂಗಳನು ಒಂದೆ ಮುಖದಲ್ಲಿ ನಿಲಿಸಿ, ಅವಧಾನವಳವಟ್ಟ ರುಚಿಯನು ಜಿಹ್ವೆಯ ಕರದಿಂದಲರ್ಪಿಸುವಲ್ಲಿ ಪ್ರಾಣಲಿಂಗಾರ್ಪಿತ. ತಟ್ಟುವ ಮುಟ್ಟುವ ನಿರೂಪವಹ ಸರ್ವವನು ಜಾನುಮುಖದಲ್ಲಿ ಭಾವದ ಕರದಿಂದ ಲಿಂಗ ಮುಂದು ಭಾವ ಹಿಂದಾಗಿ, ತೃಪ್ತಿಲಿಂಗಕ್ಕರ್ಪಿಸುವಲ್ಲಿ ಭಾವಲಿಂಗಾರ್ಪಿತ. ಇಂತೀ ಅರ್ಪಿತತ್ರಯದ ಅನುಭಾವ ವತ್ಸಲನಾಗಿ, ಅರ್ಪಿತವನರಿತು ಅನರ್ಪಿತ ನಷ್ಟವಾದಲ್ಲಿ ಪ್ರಸಾದಿ. ಮನ ಬದ್ಧಿ ಚಿತ್ತ ಅಹಂಕಾರದ ಗುಣವಳಿದು, ಪ್ರಾಣಚೈತನ್ಯದೊಳು ವಾಯುವಿನೊಳಡಗಿದ ಪರಿಮಳದಂತೆ, ಲಿಂಗಚೈತನ್ಯ ನೆಲೆಗೊಂಡಿಪ್ಪಲ್ಲಿ ಪ್ರಾಣಲಿಂಗಿ. ಪಂಚೇಂದ್ರಿಯಂಗಳ ಸಂಚವ ನಿಲಿಸಿ, ಲಿಂಗೇಂದ್ರಿಯವೆನಿಸಿತ್ತು. ಸಪ್ತಧಾತುವಿನ ಉರವಣೆಯಂ ಮೆಟ್ಟಿ, ಪ್ರಸನ್ನ ಲಿಂಗದ ಪರಮಸುಖಕ್ಕೆ ರತಿಭೋಗದಲ್ಲಿ ಸತಿಯಾಗಿರಲು ಶರಣ. ಕಾಯಜೀವ, ಪುಣ್ಯಪಾಪ, ಇಹಪರವೆಂಬ ಭ್ರಮೆಯಳಿದು, ಮಹಾಲಿಂಗದಲ್ಲಿ ಅವಿರಳಸಂಬಂಧವಾದಲ್ಲಿ ಲಿಂಗೈಕ್ಯನು. ಈ ಷಡುಸ್ಥಲದ ಆದಿಕುಳವು ಆರಿಗೆಯೂ ಅಳವಡದು. ಘನಕ್ಕೆ ಘನವು, ಲೋಕ ಲೌಕಿಕರಿಗಸಾಧ್ಯ. ನಿಮ್ಮ ಶರಣರಿಗೆ ಸುಲಭ ಕಾಣಾ, ಮಹಾಲಿಂಗ ಕಲ್ಲೇಶ್ವರಾ. ಈ ಷಡುಸ್ಥಲಕ್ಕೆ ಒಡಲಾಗಿ, ಭಕ್ತಿಭಂಡಾರಿ ಬಸವಣ್ಣಂಗೆ ಅಳವಡಿಸಿ ಮರೆದಿರಿ.
--------------
ಹಾವಿನಹಾಳ ಕಲ್ಲಯ್ಯ
ಮನವೆಂಬ ಒರಳಿಗೆ ಸಕಲಕರಣಂಗಳೆಂಬ ತಂಡುಲವ ಹಾಕಿ, ಸುಜ್ಞಾನವೆಂಬ ಒನಕೆಯ ಪಿಡಿದು ಪರಮಪರಿಣಾಮದೊಳಗೋಲಾಡುತ್ತ ಕುಟ್ಟಿ, ಅಜ್ಞಾನವೆಂಬ ತೌಡ ಕೇರಿ ಚಿತ್ಕರಣಂಗಳೆಂಬ ಅಕ್ಕಿಯ ತೆಗೆದುಕೊಂಡು ಸದ್ಭಾವವೆಂಬ ಭಾಂಡದಲ್ಲಿ ತುಂಬಿ ಪರಮಾನಂದ ಜಲವೆಂಬ ಎಸರನಿಟ್ಟು, ತ್ರಿಪುಟಿಯೆಂಬ ಒಲೆಯ ಹೂಡಿ ಚಿದಗ್ನಿಯೆಂಬ ಬೆಂಕಿಯ ಪುಟವನಿಕ್ಕಿ ಅರಿಷಡ್ವರ್ಗಗಳೆಂಬ ಸೌದೆಯ ಹೊತ್ತಿಸಿ, ಮಹಾಜ್ಞಾನವೆಂಬ ಪಾಕವ ಮಾಡಿ ಪರಿಪೂರ್ಣವೆಂಬ ಪರಿಯಾಣದಲ್ಲಿ ಗಡಣಿಸಿಕೊಂಡು, ಅಖಂಡಪರಿಪೂರ್ಣ ಮಹಾಘನಲಿಂಗಕ್ಕೆ ಸಲಿಸಬಲ್ಲಾತನೆ ಶರಣನು. ಆತನೆ ನಿಜಾನುಭಾವಿ, ಆತನೆ ಲಿಂಗೈಕ್ಯನು. ಇಂತೀ ಭೇದವನರಿಯದೆ ಮಣ್ಣಪರಿಯಾಣ, ಲೋಹಪಾತ್ರೆಯಲ್ಲಿ ಮನಬಂದ ಪರಿಯಲ್ಲಿ ಹಾಯ್ಕಿ ಹಾಯ್ಕಿ ಒಟ್ಟಿಸಿಕೊಂಡು ಬಾಯಿಗೆ ಬಂದಂತೆ ತಿಂಬುವ ಜೀವಗಳ್ಳ ಭವಭಾರಕರಿಗೆ ಏಕಭಾಜನವೆಲ್ಲಿಯದಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಐಕ್ಯನೆಂಬಾತ ಅನ್ಯವನರಿಯ ತನ್ನುವನರಿಯ; ಸಕಲವನರಿಯ ನಿಷ್ಕಲವನರಿಯ. ಸರ್ವಸ್ವವೂ ಲಿಂಗವಾದಾತನಾಗಿ ತನ್ನ ಮೀರಿದ ಪರತತ್ವ ಒಂದೂ ಇಲ್ಲವಾಗಿ, ಎಲ್ಲಾ ತತ್ವಂಗಳಿಗೂ ಮಾತೃಸ್ಥಾನವಾದಾತನು. ಲಿಂಗವನವಗ್ರಹಿಸಿಕೊಂಡಿಪ್ಪ ಪರಮ ಸೀಮೆ ತಾನಾಗಿ, ಕಪಿಲಸಿದ್ಧಮಲ್ಲಿಕಾರ್ಜುನನ ಕೂಡಿ ಕಳೆಗಳ ಲಿಂಗಕಳೆಗಳ ಮಾಡಿದ ಲಿಂಗೈಕ್ಯನು.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->