ಅಥವಾ

ಒಟ್ಟು 111 ಕಡೆಗಳಲ್ಲಿ , 35 ವಚನಕಾರರು , 93 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬಯಲೆ ಅಂಗವಾಗಿ, ನಿರ್ವಯಲೆ ಲಿಂಗವಾಗಿ, ಭಾವಕೆ ಸಂಬಂಧವಾಯಿತ್ತು ನೋಡಾ. ಬಯಲಿಂದ ಅಂಗವಿಲ್ಲದೆ, ನಿರ್ವಯಲೆಂಬ ಲಿಂಗವು ನಿಶ್ಶಬ್ದವಾಗಿ, ಭಾವಕ್ಕೆ ಬೆರಗಾಯಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಶಿವ ಶಿವ ! ಪರಶಿವಮೂರ್ತಿ ಮಹಾಲಿಂಗವು ಕರುಣಿಸಿದ ಕರುಣದಿಂದ ನಾನಂಜೆ ಅಂಜೆನು. ವಾಙ್ಮನೋತೀತವು ಲಿಂಗವಾಗಿ ಅಂಗದ ಮೇಲೆ ನಿರಂತರವಾಗಿ ಸನ್ನಹಿತವಾಗಿ ಅಂಗಲಿಂಗ ಗುರುಲಿಂಗ ಏಕವಾಗಿ [ಪ್ರಾ]ಣಲಿಂಗವಾದನಾಗಿ [ಪ್ರಾ]ಣಲಿಂಗ. ಜಿಹ್ವೆಯಲ್ಲಿ ಮಂತ್ರಮಯ ಗುರುಲಿಂಗವಾಗಿ ಬಿಜಯಂಗೈದನಾಗಿ ಜಿಹ್ವೆಲಿಂಗ. ಕಂಗಳಲ್ಲಿ ಶಿವಲಿಂಗಮೂರ್ತಿಯಂ ತುಂಬಿದನಾಗಿ ಕಂಗಳು ಲಿಂಗ. ತ್ವಕ್ಕಿನಲ್ಲಿ ಜಂಗಮಲಿಂಗಮೂರ್ತಿಯಂ ತುಂಬಿದನಾಗಿ ತ್ವಕ್ಕು ಲಿಂಗ. ಕಿವಿಗಳಲ್ಲಿ ಲಿಂಗಮಹಾತ್ಮೆಯ ಶ್ರುತಿ ಪುರಾಣ ಪುರಾತರ ವಚನಂಗಳ ತುಂಬಿದನಾಗಿ ಶ್ರೋತ್ರ ಲಿಂಗವು. ಶಿವನ ಶ್ರೀಪಾದಕಮಲಪ್ರಸಾದವ ವಾಸಿಸುವಂತೆ ಮಾಡಿದನಾಗಿ ಘ್ರಾಣಲಿಂಗವು. ಲಿಂಗವ ನಿರಂತರ ಸ್ಪರ್ಶವ ಮಾಡುವಂತೆ ಮಾಡಿದನಾಗಿ ಹಸ್ತ ಲಿಂಗವಾದವು. ಲಿಂಗವನೆ ಭಾವಿಸುವಂತೆ ಮಾಡಿದನಾಗಿ ಭಾವ ಲಿಂಗವು. ಮನದಲ್ಲಿ ನೆನಹು ಭರಿತವಾಗಿ ಮನ ಲಿಂಗವು. ಸುವಿಚಾರ ಸಂಪೂರ್ಣವ ಗ್ರಹಿಸಿತ್ತಾಗಿ ಬುದ್ಧಿ ಲಿಂಗವು. ನಿಶ್ಚಯಪದವ ಹಿಡಿಯಿತ್ತಾಗಿ ಅಹಂಕಾರ ಲಿಂಗವು. ನಿರಂತರ ಮರೆಯದಂತೆ ಮಾಡಿದನಾಗಿ ಚಿತ್ತ ಲಿಂಗವು. ಇಂತು ಅಂತರಂಗ ಬಹಿರಂಗ ಲಿಂಗ, ಸರ್ವಾಂಗಲಿಂಗವ ಮಾಡಿ, ಸದ್ಗುರುಲಿಂಗವಾಗಿ ಜಂಗಮಲಿಂಗವಾಗಿ ಪ್ರಾಣಲಿಂಗವಾಗಿ ಪ್ರಸಾದಲಿಂಗವಾಗಿ ಪ್ರಸಾದವನಿಕ್ಕಿ ಸಲಹಿದನು. ಈ ಮಹಾಘನಪರಿಣಾಮವ ಶಿವ! ಶಿವ ನೀನೇ ಬಲ್ಲೆ ಶಿವ ಶಿವ! ಮಹಾದೇವ, ಶಿವ ಶಿವ! ಮಹಾದೇವ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ನೀನೇ ಬಲ್ಲೆ.
--------------
ಉರಿಲಿಂಗಪೆದ್ದಿ
ಅಹಂಕಾರವರತು ಗುರುವಾಗಿ, ಜಗವರತು ಲಿಂಗವಾಗಿ, ತ್ರಿವಿಧವರತು ಜಂಗಮವಾಗಿ, ಸಕಲೇಂದ್ರಿಯದ ಲಂಪಟವರತು ಭಕ್ತನಾಗಿ ಸಂಸಾರವೆಂಬ ಗಡಬಡೆಯಲ್ಲಿ ಸಿಲುಕದೆ, ಆವ ಸ್ಥಲದಲ್ಲಿ ನಿಂದು ನೋಡಿದಡೂ ಭಾವಶುದ್ಧವಾಗಿ ಗುರುವಿಂಗೆ ಗುರುವಾಗಿ, ಲಿಂಗಕ್ಕೆ ಲಿಂಗವಾಗಿ ಜಂಗಮಕ್ಕೆ ಜಂಗಮವಾಗಿ ಭಕ್ತರ ಯುಕ್ತಿಯ ಮಾರಿಕೊಂಡಿಪ್ಪ ಸದ್ಭಕ್ತ ಕಾಲಾಂತಕ ಬ್ಥೀಮೇಶ್ವರಲಿಂಗವು ತಾನೆ.
--------------
ಡಕ್ಕೆಯ ಬೊಮ್ಮಣ್ಣ
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ತನುವಿಂಗೆ ಗುರುಲಿಂಗ, ಮನಕ್ಕೆ ಆಚಾರಲಿಂಗ, ಆಚಾರಕ್ಕೆ ಅರಿವೆ ಲಿಂಗವಾಗಿ, ಅರಿವೇ ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವೆಂಬುದಕ್ಕೆ ಕುರುಹಾಯಿತ್ತು .
--------------
ಶಿವಲೆಂಕ ಮಂಚಣ್ಣ
ಬ್ರಹ್ಮನ ಪೂಜಿಸಿ ಸೃಷ್ಟಿಗೊಳಗಾಗುವುದ ಬಲ್ಲೆ. ರುದ್ರನ ಪೂಜಿಸಿ ಲಯಕ್ಕೊಳಗಾಗುವುದ ಬಲ್ಲೆ. ನಮ್ಮಿಷ್ಟಲಿಂಗಮೂರ್ತಿಯ ಪೂಜಿಸಿ ಲಿಂಗವಾಗಿ ಸರ್ವವಳಿವುದ ಬಲ್ಲೆ ನೋಡಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಹಲವು ಲೀಲೆಯೊಳಗೆ ಗುರುಶಿಷ್ಯ ಎರಡಾದ ವಿನೋದವೇನೆಂಬೆ ? ಎನ್ನ ಶ್ರೀಗುರು ಬಸವೇಶ್ವರನು ಎನ್ನ ಶಿಕ್ಷಿಸಿ ದೀಕ್ಷೆಯನೆಸಗಿ ಮೋಕ್ಷದಖಣಿಯಮೂರ್ತಿಯತಂದು, ತನ್ನ ಗುರು ತನ್ನ ಗುರ್ತವ ತೋರಿದಾ. ಆ ಗುರ್ತವ ಎನ್ನ ಕೈಯಲ್ಲಿಟ್ಟು ಈ ಮಹಾಂತನ ಪೂಜಿಸಿ ಮುಕ್ತಿಯ ಪಡಿಯೆಂದು ನಿರೂಪಿಸಲು, ಆ ಗುರುನಿರೂಪವ ಕೈಕೊಂಡು ಮಹಾಂತನ ಮುಂದಿಟ್ಟುಕೊಂಡು ಈ ಮಹಾಂತ ಎನ್ನ ಗುರುವಿನಗುರು ಎನಗೆ ಪರಮಾರಾಧ್ಯ ತಾ ಲಿಂಗವಾಗಿ ಬಂದಕಾರಣವೇನೆಂದು ತನ್ನೊಳಗೆ ತಾನೆ ವಿಚಾರಿಸಲು, ಅಲ್ಲಿ ಹೊಳೆದುದು ನೀನು ನನಗೆ ಪರಮಾರಾಧ್ಯ, ಒಂದೇ ಲಿಂಗವೇ ಹಲವರಾಗಿ ತೋರಿದಿರಿ. ಅದೆಂತೆಂದಡೆ : ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ವಿಭೂತಿ ರುದ್ರಾಕ್ಷಿ ಪಂಚಾಕ್ಷರಿಯಮಂತ್ರ ಮತ್ತು ಶಿಕ್ಷಾಗುರು ದೀಕ್ಷಾಗುರು ಮೋಕ್ಷಾಗುರು ಗುರುವಿನಗುರು ಪರಮಗುರು ಪರಮಾರಾಧ್ಯ ಮಹಾಂತದೇವರ ದೇವ ನೀನೇ ಆದಿ. ನೀವು ಹೀಂಗಾದ ಪರಿಯೆಂತೆಂದಡೆ : ಮೊದಲೇ ಶಿಕ್ಷಾಗುರು ಶಿಖಾಮಣಿಸ್ವಾಮಿಯೆನಿಸಿದಿರಿ, ದೀಕ್ಷಾಗುರು ಗುರುಬಸವಸ್ವಾಮಿಯೆನಿಸಿದಿರಿ, ಮೋಕ್ಷಾಗುರು ಶ್ರೀಮನ್‍ಮಹಾಮುರಘೆಯಸ್ವಾಮಿಗಳ ಚರಮೂರ್ತಿ ಸಿರಿವಾಸ ಚನ್ನಬಸವೇಶ್ವರರೆನಿಸಿದಿರಿ. ಗುರುವಿನಗುರು ಹಳಪ್ಯಾಟಿ ಬಸವಯ್ಯನೆನಿಸಿದಿರಿ. ಪರಮಗುರು ಭಂಗೀಪರ್ವತದೇವರೆನಿಸಿದಿರಿ. ಪರಮಾರಾಧ್ಯ ಗೊಬ್ಬೂರ ಸದಾಶಿವದೇವರೆನಿಸಿದಿರಿ. ಸರ್ವದೇವರು ಮಹೇಶ್ವರರು ಎನಗೆ ಮಹಾಮಹಾಂತನೆನಿಸಿದಿರಿ. ಎನ್ನ ದೇವರದೇವ ಸರ್ವವು ನೀನೇ ಆಗಿರ್ದು, ನೀನು ಒಂದೇ ಪರಮಾರಾಧ್ಯರೆನಲುಂಟೆ ? ಒಂದೇ ನೀ ಎನಗೆ ಲಿಂಗವಾದನೆನಲುಂಟೆ ? ಲಿಂಗವಾದಾತನು ನೀನೆ, ಪರಮಾರಾಧ್ಯನಾದಾತನು ನೀನೆ, ಗುರುವಾದಾತನು ನೀನೆ, ಅರುವಾದಾತನು ನೀನೆ, ನೀನಲ್ಲದೆ ಮತ್ತೊಂದು ಬ್ಯಾರೆ ಭಾವಿಸಲುಂಟೆ ? ಎನ್ನ ಹುಟ್ಟಿಸಿದ ಮಹಾಂತನು ನೀನೆ, ಎನ್ನ ಬೆಳಸಿದ ಶರಣಬಸವಪ್ಪನು ನೀನೆ ಎನ್ನ ಮನ್ನಿಸಿದ ಘನಸಿದ್ದಪ್ಪನು ನೀನೆ, ಎನ್ನ ನಿಂದಿಸಿದ ಹಳಪ್ಯಾಟಿ ಬಸಯ್ಯನು ನೀನೆ, ಉಣಿಸುವ ಉಡಿಸುವ ಹಾಸುವ ಹೊಚ್ಚುವ ಮುಚ್ಚುವ ಚುಚ್ಚುವ ಹಳಿವ ಮುಳಿವ ಸರ್ವವೂ ಎನಗೆ ನೀನಲ್ಲದೆ ಮತ್ತೊಬ್ಬರಿಲ್ಲ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ನುಡಿದರೆ ಗುರುವಾಗಿ ನುಡಿಯಬೇಕು, ನಡೆದರೆ ಪರವಾಗಿ ನಡೆಯಬೇಕು. ಕುಳಿತರೆ ಲಿಂಗವಾಗಿ ಕುಳಿತಿರಬೇಕು, ಇದ್ದರೆ ಜಂಗಮವಾಗಿ ಇರಬೇಕು. ಈ ನಾಲ್ಕರ ಹೊಂದಿಗೆಯನರಿಯದವರು ಎಷ್ಟು ದಿನವಿದ್ದರೂ ಫಲವೇನು ಹೇಳಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ ?
--------------
ಹಡಪದ ಅಪ್ಪಣ್ಣ
ಸೆಜ್ಜೆ ಶಿವದಾರ ವಸ್ತ್ರದಲ್ಲಿ ಹುದುಗಿಸಿ ಲಿಂಗವ ಧರಿಸಿಕೊಂಡು ಅಂಗಲಿಂಗಸಾಹಿತ್ಯವಾಗಿ, ಭಕ್ತರೆಂದು ಮಜ್ಜನಕ್ಕೆರೆವ ಭಂಗಿತರ ಮಾತ ಕೇಳಲಾಗದು, ಬಾಲನುಡಿ. ತನುಗುಣವಿರಹಿತವಾಗಿ ಮಜ್ಜನಕ್ಕೆರೆಯಲರಿಯರಾಗಿ ಭಕ್ತರೆನ್ನೆ. ಮನವೇ ಸೆಜ್ಜೆ, ನೆನಹೇ ಶಿವದಾರವಾಗಿ, ಸಮತೆಯೇ ಲಿಂಗವಾಗಿ ತನ್ನ ಮರೆದು ಮಜ್ಜನಕ್ಕೆರೆವರ ಭಕ್ತರೆಂಬೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸಪ್ತಕಮಲದ ಮಧ್ಯದಲ್ಲಿ ಉತ್ಪತ್ತಿಯಾದ ಪರಂಜ್ಯೋತಿ ತತ್ವ ಬ್ರಹ್ಮಾಂಡದಿಂದತ್ತತ್ತಲಾದ ಘನಕೆ ಘನ ಪರಕೆ ಪರವಾದ ಪರಾಪರವು ತಾನೆ ನೋಡಾ. ಆ ಪರಾಪರವು ತಾನೆ ತತ್ವ ಬ್ರಹ್ಮಾಂಡದೊಳಹೊರಗೆ ಸರ್ವವ್ಯಾಪಕನಾಗಿ, ಪರಿಪೂರ್ಣನಾಗಿ, ಸರ್ವವನು ಹೊದ್ದಿಯೂ ಹೊದ್ಧದ, ಮುಟ್ಟಿಯೂ ಮುಟ್ಟದ ಅಕಳಂಕನು ನೋಡಾ. ಸಪ್ತಕಮಲದ ಎಸುಳುಗಳೊಳಗೆ ಆಕ್ಷರಾತ್ಮಕ ಲಿಂಗವಾಗಿ ಅದ್ವಯನು ನೋಡಾ. ನವಚಕ್ರಾಂಬುಜಗಳ ದಳ ಕುಳ ವರ್ಣಾದಿ ದೇವತೆಗಳ ತೋರಿಕೆಯೇನುಯೇನೂ ಇಲ್ಲದ ನಿತ್ಯ ನಿರಂಜನ ನಿರಾಮಯನಾದ ಶರಣಂಗೆ ನಮೋ ನಮೋಯೆಂಬೆನು. ಆ ನಿರಾಮಯ ವಸ್ತುವೆ ಸಂಗನಬಸವಣ್ಣನು ನೋಡಾ. ಆ ಚಿದದ್ವಯವಾದ ಬಸವಣ್ಣನೇ ಎನ್ನ ಅಂಗಲಿಂಗ, ಎನ್ನ ಪ್ರಾಣಲಿಂಗ, ಎನ್ನ ಭಾವಲಿಂಗ, ಎನ್ನ ಸರ್ವಾಂಗಲಿಂಗವು ಕಾಣಾ. ಎನ್ನ ಷಡಾಧಾರದಲ್ಲಿ ಸಂಬಂಧವಾದ ಷಡಕ್ಷರ ಮಂತ್ರವು ಬಸವಣ್ಣನಾದ ಕಾರಣ, `ಬಸವಲಿಂಗ ಬಸವಲಿಂಗ ಬಸವಲಿಂಗಾ'ಯೆಂದು ಜಪಿಸಿ ಭವಾರ್ಣವ ದಾಂಟಿದೆನು ಕಾಣಾ. ಬಸವಣ್ಣನೇ ಪತಿಯಾಗಿ, ನಾನೇ ಸತಿಯಾಗಿ ಶರಣನಾದೆನು ಕಾಣಾ. ಬಸವನೇ ಲಿಂಗವಾದ ಕಾರಣ ನಾನಂಗವಾದೆನು. ಕರ್ತೃವೇ ಬಸವಣ್ಣ, ಭೃತ್ಯನೇ ನಾನು. ಒಡೆಯನೇ ಬಸವಣ್ಣ, ಬಂಟನೇ ನಾನಾದಕಾರಣ ದೇಹವೇ ನಾನು, ದೇಹಿಯೇ ಬಸವಣ್ಣನಯ್ಯ. ಇದು ಕಾರಣ, ಎನ್ನ ನಡೆವ ಚೇತನ, ಎನ್ನ ನುಡಿವ ಚೇತನ, ಎನ್ನ ನಡೆ ನುಡಿಯೊಳಗಿಪ್ಪ ಸರ್ವ ಚೈತನ್ಯಾತ್ಮಕ ಬಸವಣ್ಣನಯ್ಯ. ಇಂತಪ್ಪ ಬಸವಣ್ಣನ ಶ್ರೀಪಾದದಲ್ಲಿ ಅಡಗಿ ನಾನು ಶರಣನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಉಂಬೆಡೆಯಲ್ಲಿ ಭರಿತಾರ್ಪಣವೆಂದು ಮಿಕ್ಕಾದ ವಿಷಯೇಂದ್ರಿಯಂಗಳಲ್ಲಿ ಭರಿತಾರ್ಪಣದ ಸಂದನಳಿದು ಅರ್ಪಿಸಬಲ್ಲಡೆ, ಆ ಗುಣ ಉಭಯಭರಿತಾರ್ಪಣಭೇದ. ಇದನರಿಯದೆ ಲಿಂಗಕ್ಕೆ ಸಂದಲ್ಲದೆ, ತಾನೊಂದು ದ್ರವ್ಯವ ಮುಟ್ಟೆನೆಂಬ ಸಂದೇಹದ ಸಂಕಲ್ಪವಲ್ಲದೆ, ಭರಿತಾರ್ಪಣಾಂಗಿಯ ಲಿಂಗಾಂಗಿಯ ಮುಟ್ಟಲ್ಲ. ಭರಿತಾರ್ಪಣವಾವುದೆಂದಡೆ : ತಾ ಕಂಡುದ ಮುಟ್ಟದೆ, ತಾ ಮುಟ್ಟಿದುದನರ್ಪಿಸದೆ, ತಾ ಕಾಣದುದ ಮುನ್ನವೆ, ತಾ ಕಂಡುದ ಮುಟ್ಟದ ಮುನ್ನವೆ ಅರ್ಪಿತವಾದುದ ದೃಷ್ಟಾಂತವನರಿದು, ಭರಿತಾರ್ಪಣವೆಂಬ ಪರಿಪೂರ್ಣತ್ವವಂ ಕಂಡು, ಅಂಗಸಹಿತವಾಗಿ ಮುಟ್ಟದೆ, ಮನಸಹಿತವಾಗಿ ನೆನೆಯದೆ, ಇಂದ್ರಿಯಂಗಳು ಸಹಿತವಾಗಿ ಒಂದನೂ ಅನುಭವಿಸದೆ ಲಿಂಗವೆ ಅಂಗವಾಗಿ, ಅಂಗವೆ ಲಿಂಗವಾಗಿ ಅಂದಂದಿಗೆ ಕಾಯ ಹಿಂಗಬೇಕೆಂಬುದನರಿದಾಗವೆ ಭರಿತಾರ್ಪಣ, ಚೆನ್ನ ಚೆನ್ನ ಕೂಡಲ ರಾಮೇಶ್ವರಲಿಂಗದ ಸಂಗ.
--------------
ಭರಿತಾರ್ಪಣದ ಚೆನ್ನಬಸವಣ್ಣ
ಲೋಕಹಿತಾರ್ಥವಾಗಿ, ಪ್ರಾಣಿಗಳೆಲ್ಲ ಕೆಟ್ಟಹರೆಂದು ಶರಣ ಲಿಂಗವಾಗಿ, ಲಿಂಗಭರಿತ ಶರಣನಾಗಿ ಬದುಕಿಸಿದನು ಕೇಳಿರಣ್ಣಾ. ಯೇ ರುದ್ರಲೋಕಾದವತೀರ್ಯ ರುದ್ರಾ ಮಾನುಷ್ಯಮಾಶ್ರಿತ್ಯ ಜಗದ್ಧಿತಾಯ ಚರಂತಿ ನಾನಾವಿಧಚಾರುಚೇಷ್ಟಾಸ್ತೇಭ್ಯೋ ನಮಸ್ತ್ರ್ಯಂಬಕಪೂಜಕೇಭ್ಯಃ ಎಂದುದಾಗಿ, ಶರಣರೂಪಾಗಿ ಬಂದು ಶ್ರೀಮೂರ್ತಿಯ ತೋರಿ ಪಾಪವ ಕಳೆದನು. ಉಪಪಾತಕಕೋಟೀನಾಂ ಬ್ರಹ್ಮಹತ್ಯಶತಾನಿ ಚ ದಹಂತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಾತ್ ಭಕ್ತಜನಂಗಳ ಕೂಡೆ ಸಂಭಾಷಣೆಯ ಮಾಡಿ ಮಹಾಪಾತಕಂಗಳ ಕಳೆದನು. ಮಹಾಪಾತಕಕೋಟಿಘ್ನಃ ಶ್ವಪಚೋ[s]ಪಿ ಲಿಂಗಪೂಜಕಃ ತತ್ಸಂಭಾಷಣಾನ್ಮುಕ್ತಿರ್ಗಣಮುಖ್ಯಗಣೇಶ್ವರಃ ಶ್ರೀಗುರುಮೂರ್ತಿಯ ತೋರಿ ಸಂಭಾಷಣೆಯಂ ಮಾಡಿ ಪಾದೋದಕ ಪ್ರಸಾದವನಿತ್ತು ಸಲಹಿ ರಕ್ಷಿಸಲು ಬಂದನು ಕಾಣಿರಣ್ಣಾ. ಇದನರಿಯದೆ, ಶರಣರು ದ್ರವ್ಯಾರ್ಥಿಗಳಾಗಿ ಬಂದರೆಂಬಿರಿ, ನಾನು ಮಾಡಿದೆನು ಶರಣರು ಮಾಡಿಸಿಕೊಂಡಹರೆಂದೆಂಬಿರಿ, ಉಂಟೆಂದಿರಿ, ಇಲ್ಲೆಂದಿರಿ, ಈ ಪರಿ ಅಜ್ಞಾನದಲ್ಲಿ ಕಂಡು, ನುಡಿದು, ದೋಷಿಗಳಹಿರಿ. ಶರಣರ ಶಿವನೆಂದು ನಂಬಿಮಾಡಲು ಸಿರಿಯಾಳನು ಮಗನ ಕೊಟ್ಟಡೆ ಕೈಲಾಸವ ಕೊಟ್ಟನು. ದಾಸ ವಸ್ತ್ರನಿತ್ತಡೆ ಮಹಾವಸ್ತು ತವನಿದ್ಥಿಯ ಕೊಟ್ಟನು. ಬಲ್ಲಾಳ ವಧುವನಿತ್ತಡೆ, ತನ್ನನೇ ಕೊಟ್ಟನು. ಈ ಪರಿ ಅಣುವಿಂಗೆ ಅಣು, ಮಹತ್ತಿಂಗೆ ಮಹತ್ತವನೆ ಕೊಟ್ಟನು. ಸಕೃತ್ ಲಿಂಗಾರ್ಚಕೇ ದತ್ವಾ ಸುವರ್ಣಂ ಚಾಣುಮಾತ್ರಕಂ ದೇವಸಂಪೂಜ್ಯಮಾನೇಷು ಗಣಮುಖ್ಯೋ ಗಣೇಶ್ವರಃ ಭಕ್ತಿಯಿಂ ನಂಬಿ ಮಾಡಿರೆ, ದುಭಾರ್ವಿಸಿ ಕೆಡಬೇಡ. ಶರಣರೇ ಶಿವನೆಂದು ನಂಬಿ ಮಾಡಿರಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರನ ಕೂಡುವುದಯ್ಯಾ.
--------------
ಉರಿಲಿಂಗಪೆದ್ದಿ
ಮನಮುಕ್ತನಾದ ಶರಣ ತಾನೆ ಲಿಂಗವಾಗಿ ಪ್ರಾಣ ಮುಕ್ತನು ನೋಡಯ್ಯಾ. ಪ್ರಸಾದಸನ್ನಹಿತವಾಗಿ ಕಾಯಮುಕ್ತನು. ಅದೆಂತೆಂದಡೆ: ಸ್ವಲಿಂಗೀ ಪ್ರಾಣಮುಕ್ತಸ್ಯಾತ್ ಮನೋಮುಕ್ತಸ್ತು ಜಂಗಮಃ ಪ್ರಸಾದೀ ಕಾಯಮುಕ್ತಶ್ಚ ತ್ರಿವಿಧಸ್ತತ್ವನಿಶ್ಚಯಃ ಎಂದುದಾಗಿ, ಇಂತೀ ತ್ರಿವಿಧಮುಕ್ತನಾಗಿ ನಿರ್ಮಲ ನಿರ್ಮಾಯ ಸತ್ಯಜ್ಞಾನಾನಂದಭರಿತ ಸೌರಾಷ್ಟ್ರ ಸೋಮೇಶ್ವರಾ ನಿಮ್ಮ ಶರಣ.
--------------
ಆದಯ್ಯ
ಕಾಲಜ್ಞಾನಿ, ಕರ್ಮವಿದೂರ, ನಿತ್ಯತೃಪ್ತನೆ, ನಿಮ್ಮಭೇದಿಸುವರಾರು ಹೇಳಾ ಎಲೆ ಅಯ್ಯಾ. ಎನ್ನ ಭವಕರ್ಮವು ಕಳೆಯಲಿಕೆ ಏಕರೂಪವಾಗಿ ಬಂದೆಯಯ್ಯಾ. ನಿಮ್ಮ ಪದಂಗಳೆ ಲಿಂಗವಾಗಿ, ನಿಮ್ಮ ಕರಣಂಗಳೆ ಶ್ರೀಗುರುವಾಗಿ, ನಿಮ್ಮುರುತರಮಪ್ಪ ಜಿಹ್ವೆಯ ಜಂಗಮವಾಗಿ ಬಂದೆಯಯ್ಯಾ. ನೀನು ಶಿಷ್ಯ ಕಾರಣ ಪರಶಿವಮೂರ್ತಿಯಾದುದನು ನಾನಿಂದು ಕಂಡೆ ಕಾಣಾ, ಎನ್ನ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಬಯಲೇ ಅಂಗವಾದ ಶರಣಂಗೆ ನಿರ್ವಯಲೇ ಲಿಂಗವಾಗಿ ತೋರುತಿಪ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ಆರು ಮೂರ್ತಿಗಳು ಆರಾರ ಲಿಂಗಾರ್ಚನೆಯ ಮಾಡುತಿಪ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಇನ್ನಷ್ಟು ... -->