ಅಥವಾ

ಒಟ್ಟು 19 ಕಡೆಗಳಲ್ಲಿ , 7 ವಚನಕಾರರು , 14 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ಪನ ಗಮನದಂತೆ ಗಮನವುಳ್ಳರೆ ಭಕ್ತನೆಂಬೆ. ನವಿಲಿನ ಕಣ್ಣಿನಂತೆ ಕಣ್ಣುಳ್ಳರೆ ಭಕ್ತನೆಂಬೆ. ಬೆಕ್ಕಿನ ಹೃದಯದಂತೆ ಹೃದಯವುಳ್ಳರೆ ಭಕ್ತನೆಂಬೆ. ಕಾಕನ ಪಿಕನ ಸ್ನೇಹವ ಹಿಂದಿಟ್ಟು, ಸೂರ್ಯಂಗೆ ಕಮಲದ ರೂಪವ ಮುಂದಿಟ್ಟು ಮಾಟವರಿದು ಮಾಡುವಾತನಲ್ಲದೆ ಭಕ್ತನಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಭಕ್ತರಾದವರು ತ್ರಿಕಾಲದಲ್ಲಿ ಹರಸ್ಮರಣೆಯಲ್ಲದೆ ಹರಿಯೆಂದು ನುಡಿಯಲಾಗದು. ಹರಿ ಶಬ್ದವ ಕೇಳಲಾಗದು, ಹರಿಯ ರೂಪವ ನೋಡಲಾಗದು. ಅದೇನು ಕಾರಣವೆಂದೊಡೆ : ಪೂರ್ಣಾಯುಷ್ಯವು, ವಿಮಲಮತಿಯು, ಸತ್ಕೀರ್ತಿಯು, ಮಹಾಬಲವು, ಕೆಟ್ಟು ಹೋಗುತ್ತಿಹುದು ನೋಡಾ ! ಅದೆಂತೆಂದೊಡೆ :ಬ್ರಹ್ಮಾಂಡಪುರಾಣೇ ``ನ ಪ್ರದೋಷೇ ಹರಿಂ ಪಶ್ಯೇತ್ ಯದಿ ಪಶ್ಯೇತ್ ಪ್ರಮಾದತಃ | ಚತ್ವಾರಿ ತಸ್ಯ ನಶ್ಯಂತಿ ಆಯುಃ ಪ್ರಜ್ಞಾ ಯಶೋ ಬಲಮ್ ||'' ಎಂದುದಾಗಿ, ಸತ್ತು ಹುಟ್ಟುವ ಹರಿಗೆ ಇನ್ನೆತ್ತಣ ದೇವತ್ವ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ದೇವ ದೇವ ಮಹಾಪ್ರಸಾದ. ತನ್ನ ರೂಪವ ತಿಳಿದು ನೋಡಬೇಕೆಂದು ಕನ್ನಡಿಯನುಪಾಸ್ತಿ ಮಾಡಲು ಆ ಕನ್ನಡಿ ಬೇಕು ಬೇಡೆಂಬುದೆ ಅಯ್ಯಾ ? ಪತಿಯಾಜ್ಞೆಯಂತೆ ಸತಿಪತಿಭಾವವ ಧರಿಸಿದಡೆ ಸಂಯೋಗಕಾಲದಲ್ಲಿ ಅಲ್ಲವೆಂದೆನಬಹುದೆ ? ನೀವೆ ಮಾಡಿದಡೆ ನೀವೆ ಮಾಡಿದುದು ನಾನೆ ಮಹಾಪ್ರಸಾದವೆಂದು ಸ್ವೀಕರಿಸಿದಡೂ ನೀವೆ ಮಾಡಿದುದು. ಅಂಗೈಯ ಲಿಂಗದ ಲಕ್ಷಣವ ನೋಡಿ ಎಂದು ಕೈಯಲ್ಲಿ ಕೊಟ್ಟಡೆ, ಲಿಂಗದಲ್ಲಿ ಲಕ್ಷಣವನರಸಲಾಗದೆಂದು ಚೆನ್ನಸಂಗಮನಾಥನ `ಕೋ' ಎಂದು ಕೊಟ್ಟಡೆ ಮಹಾಪ್ರಸಾದವೆಂದು ಕೈಕೊಂಡೆನು ಗುರುವೆ. ಬೆದರಿ ಅಂಜಿದಡೆ ಮನವ ಸಂತೈಸಿ ಏಕಾರ್ಥದ ಭೇದದ ತೋರಿ ಬಿನ್ನಹವ ಮಾಡಿದೆನು. ಕೂಡಲಚೆನ್ನಸಂಗಮದೇವರ ಮಹಾಮನೆಯ ಗಣಂಗಳು ಮೆಚ್ಚಲು, ಸಂಗನಬಸವಣ್ಣನ ಕರುಣದ ಶಿಶುವೆಂಬುದ ಮೂರುಲೋಕವೆಲ್ಲವು ಅಂದು ಜಯ ಜಯ ಎನುತಿರ್ದುದು.
--------------
ಚನ್ನಬಸವಣ್ಣ
ಎನ್ನ ಘ್ರಾಣ ಗಂಧವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ಜಿಹ್ವೆ ರುಚಿಯ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ನೇತ್ರ ರೂಪವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ತ್ವಕ್ಕುಸ್ಪರ್ಶನವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಎನ್ನ ಶ್ರೋತ್ರ ಶಬ್ದವ ಗ್ರಹಿಸುವುದಕ್ಕೆ ಮೊದಲೆ ನಿಮಗರ್ಪಿತವಾಯಿತ್ತಯ್ಯಾ. ಇದು ಕಾರಣ ಅಖಂಡೇಶ್ವರಾ, ನಾ ನಿಮಗರಿದು ಕೊಡಬೇಕೆಂಬ ಖಂಡಿತಭಾವವು ಅಖಂಡಿತವಾಯಿತ್ತಯ್ಯಾ.
--------------
ಷಣ್ಮುಖಸ್ವಾಮಿ
ಭಕ್ತಿ ಜ್ಞಾನ ವೈರಾಗ್ಯ ಕ್ರಿಯಾಪೀಠಕರ್ತುಮೂರ್ತಿಯ ವರ್ತನೆಯ ಹೊತ್ತು ನಿಂದಲ್ಲಿ ಸತ್ಯಾಸತ್ಯ ವಿವೇಕಮುಖನಾಗಿರಬೇಕು. ಬಂದ ನಿಜಜ್ಞಪ್ತಿನಿಲುವನರಿವಡೆ ಸುಜ್ಞಪ್ತಿ ಮುಕುರವೆಂಬ ಹೃದಯವೊಳಗುಂಟು. ಮತ್ತೆ ನಾದವನೊರೆದು ನೋಡುವರೆ ಜ್ಞಾನಪದವುಂಟು. ಬಿಂದುವನೊರೆದು ನೋಡುವರೆ ಕ್ರಿಯಾಪದವುಂಟು. ಕಳೆಯನೊರೆದು ನೋಡುವರೆ ಚರ್ಯಾಪದವುಂಟು. ಆತ್ಮನನೊರೆದು ನೋಡುವರೆ ಅನಾದಿರೂಪುಂಟು. ಮತ್ತೆ ಹೀಗಿರ್ದು ಇದರ ರುಚಿಯನುಳಿದು ರೂಪವ ಹೊತ್ತುವಂದು ವಿಷಯಕೆ ಸಂದಿಸಿಕೊಂಡು ಮಾಡಿ ತೋರಿ ನಿಲಿಸಿದೆವೆನುತ ಬೇಡಿ ಕಾಡಿ ಬೇರೆ ಕೂಡೆಂದು ಸೆಳೆಸೆಳೆದು ಒಡಲ ಹೊರವ ತುಡುಗುಣಿಗಳು ಗುರುತ್ವಕ್ಕೆ ಸಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುವಾದಡೂ ತನ್ನ ಶಿಷ್ಯನ ಕೈಯ(ಕೈಯಿಂದ?) ಜಂಗಮಕ್ಕೆ ಸೇವೆಯ ಮಾಡಿಸದೆ, ತಾ ಮಾಡಿಸಿಕೊಂಡನಾದಡೆ ಶ್ವಾನ ಒಡಲ ಹೊರೆದಂತೆ. ಅದು ಹೇಗೆಂದಡೆ; ತನ್ನ ಲಿಂಗವನಾ ಶಿಷ್ಯಂಗೆ ಕೊಟ್ಟು, ತಾನು ವ್ರತಗೇಡಿಯಾಗಿ ಹೋಹಲ್ಲಿ, ಆ ಜಂಗಮವೆ ಸಾಕ್ಷಿಯಾಗಿರ್ದು ವಿಭೂತಿವೀಳೆಯವ ತೆಗೆದುಕೊಂಡು ಗುರು ಶಿಷ್ಯರಿಬ್ಬರ ಪೂರ್ವಾಶ್ರಯವ ಕಳೆದರಾಗಿ, ಆ ಜಂಗಮಕ್ಕೆ ಮಾಡಿಸುವುದು. ಗುರುವಾದಡಾಗ ಲಿಂಗವಾದಡಾಗಲಿ ಜಂಗಮ ತಾನಾದಡೂ ಆಗಲಿ ಜಂಗಮ ಪಾದೋದಕ ಪ್ರಸಾದವಿಲ್ಲದವರನೊಲ್ಲೆನೊಲ್ಲೆ. ಅವರು ಬರುಕಾಯರೆಂಬೆ, ಬರುಮುಖಿಗಳೆಂಬೆ, ಅಂಗಹೀನರೆಂಬೆ ಲಿಂಗಹೀನರೆಂಬೆ. ಜಂಗಮದಲ್ಲಿ ಗುಣವ ನೋಡದೆ, ಅವಗುಣವ ನೋಡದೆ ರೂಪವ ನೋಡದೆ, ನಿರೂಪವ ನೋಡದೆ, ಕೋಪವ ನೋಡದೆ, ಶಾಂತವ ನೋಡದೆ, ವಿವೇಕವ ನೋಡದೆ, ಅವಿವೇಕವ ನೋಡದೆ, ಮಲಿನವ ನೋಡದೆ, ಅಮಲಿನವ ನೋಡದೆ, ರೋಗವ ನೋಡದೆ, ನಿರೋಗವ ನೋಡದೆ, ಕುಲವ ನೋಡದೆ, ಛಲವ ನೋಡದೆ, ಆಶೆಯ ನೋಡದೆ, ನಿರಾಶೆಯ ನೋಡದೆ, ಅಂಗದ ಮೇಲಣ ಲಿಂಗವನೆ ನೋಡಿ, ಜಂಗಮಕ್ಕೆ ಮಾಡಿ ನೀಡಿ, ಪಾದೋದಕ ಪ್ರಸಾದವ ಕೊಂಬ ಶರಣನ ಬಸವಣ್ಣನೆಂಬೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎನ್ನಂತರಂಗದ ಆರು ಭುವನದ ಮೇಲೆ ತೋರುತಿರ್ಪ ಮಹಾಕೈಲಾಸದ ಮೂರು ಮಂಡಲದಲ್ಲಿ [ನಾಲ್ಕು] ಎಂಟು ಹದಿನಾರು ಮೂವತ್ತೆರಡು ತಂಡದಲ್ಲಿ ನಿಂದು ಓಲಗಂಗೊಡುತಿರ್ಪರು ಸಕಲಗಣಂಗಳು ನಿಮಗೆ. ಎನ್ನ ಮನ ಬುದ್ದಿ ಚಿತ್ತ ಅಹಂಕಾರಂಗಳು ನಿಮ್ಮ ಮಂತ್ರಿ ಪ್ರಧಾನಿಗಳಾಗಿರ್ಪರು. ಎನ್ನ ದಶವಾಯುಗಳು ನಿಮಗೆ ಹಸನಾಗಿ ಗಾಳಿಯ ಢಾಳಿಸುತಿರ್ಪರು. ಎನ್ನ ಅರಿಷಡ್ವರ್ಗಂಗಳು ನಿಮ್ಮ ಹೊಗಳುವ ಭಟಾಳಿಗಳಾಗಿ ನಿಮ್ಮ ನಾಮಮಂತ್ರಂಗಳ ಕೊಂಡಾಡುತಿರ್ಪರು. ಎನ್ನ ಚರಣಂಗಳು ನಿಮ್ಮ ಪ್ರದಕ್ಷಿಣೆಯ ಮಾಡುತಿರ್ಪವು. ಎನ್ನ ಹಸ್ತಂಗಳು ನಿಮ್ಮ ಶ್ರೀಪಾದವ ಪೂಜಿಸುತ್ತಿರ್ಪವು. ಎನ್ನ ಗುಹ್ಯ ನಿಮಗಾನಂದಸ್ಥಾನವಾಗಿರ್ಪುದು. ಎನ್ನ ಪಾಯು ನಿಮಗೆ ವಿಸರ್ಜನ ಕೃತ್ಯಕ್ಕನುವಾಗಿರ್ಪುದು. ಎನ್ನ ತ್ವಕ್ಕು ನಿಮಗೆ ಹಾಸಿಗೆಯ ಸುಖವನುಂಟುಮಾಡುತಿರ್ಪುದು. ಎನ್ನ ಕರ್ಣವು ನಿಮಗೆ ನಾದವ ಕೇಳಿಸುತಿರ್ಪುದು. ಎನ್ನ ಕಂಗಳು ನಿಮಗೆ ನಾನಾ ವಿಚಿತ್ರ ರೂಪವ ತೋರುತಿರ್ಪವು. ಎನ್ನ ಘ್ರಾಣವು ನಿಮಗೆ ಗಂಧ ಪರಿಣಾಮ ಮುಡಿಸುತಿರ್ಪುದು. ಎನ್ನ ಜಿಹ್ವೆ ನಿಮಗೆ ಷಡುರಸ ಪಂಚಕಜ್ಜಾಯಗಳ ದ್ರವ್ಯವ ಭೋಜನಕೆ ಎಡೆ ಮಾಡುತಿರ್ಪುದು. ಎನ್ನ ಸಕಲ ಕರಣಂಗಳು ನಿಮ್ಮ ನಿಜ ಸೇವೆಯನೆ ಮಾಡುತಿರ್ಪವು. ಇಂತೀ ನಾನಾ ತೆರದಿಂದಾಗುವ ನಿಮ್ಮ ಓಲಗದ ಒಡ್ಡವಣೆಯ ಕಂಡು, ಹೋದುದ ಬಂದುದನರಿಯದೆ ಸಂಪಿಗೆಯ ಪುಷ್ಪಕ್ಕೆರಗಿದ ಭ್ರಮರನಂತೆ ನಿಮ್ಮೊಳಗೆ ಪರವಶವಾಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರು ಶಿಷ್ಯ ಎರಡು ಒಂದಾದ ವಿನೋದವೇನೆಂಬೆ. ಶ್ರೀಗುರು ಮಹಾಂತಯೋಗೇಂದ್ರ ನೀವು ಎನಗೆ ಗತಿ ಮತಿ ಚೈತನ್ಯದಿ ಸರ್ವವು ನೀನೇ ಆದಿಯಲ್ಲಾ. ನಿನಗೆ ನಾನು ಏನಾದೆ ಹೇಳಾ ? ನಾನು ನೀನೇ ಆದದ್ದು ಹೇಳಬಾರದೆಂಬುದು ಅಹಂಕಾರವೇ ದೇವಾ ? ನೀನು ಅಹಂಕಾರಿಯಾಗಿರೆ ನಾನು ನಿರಹಂಕಾರಿಯಾದರೆ ಹೆಚ್ಚುಕಡಿಮೆಯಾಗುವದು. ಅದು ಕಾರಣ ನೀನು ಹೇಳದಿದ್ದರೆ ನಾನು ಹೇಳುವೆನು. ಅದೆಂತೆಂದೊಡೆ : ನಾನು ನಿನ್ನ ಗುರುವಿನಲ್ಲಿ ಮುಂದೆ ಹುಟ್ಟಿದೆ, ನೀನು ನನ್ನ ಹಿಂದೆ ಹುಟ್ಟಿದೆ : ನಿನಗೆ ನಾನು ಏನಾದೆ ? ನಿನಗೆ ನಾನು ಅಣ್ಣನಾದೆ. ಮತ್ತೆ ನಾನು ಮುಂದೆ ಗುರುವ ಪಡದು ನಾ ನಿನ್ನ ಪಡೆದೆ. ನಿನಗೆ ನಾನು ತಂದಿಯಾದೆ. ನಾ ಮುಂದೆ ಗುರುವಿನ ಪಡೆದು ಆ ಗುರುವಿನಿಂದ ನಿನ್ನ ಪಡದಲ್ಲಿ ನಾ ನಿನಗೆ ಮುತ್ತ್ಯಾನಾದೆ. ಮುಂದೆ ಸಾಧುರ ಸಂಗ ಪಡೆದು ಆ ಸಾಧುರ ಸಂಗದಿಂದೆ ಗುರುವಿನ ಪಡೆದು ಆ ಗುರುವಿನಿಂದ ನಿನ್ನ ಪಡದಲ್ಲೆ ನಾ ನಿನಗೆ ಅಜ್ಜನಾದೆ. ಮುಂದೆ ಸತ್ಕರ್ಮ, ಆ ಸತ್ಕರ್ಮ ಪಡದಲ್ಲೆ ಸಾಧುರಸಂಗ, ಆ ಸಾಧುರಸಂಗದಿಂದ ಗುರು, ಆ ಗುರುವಿನಲ್ಲಿ ನೀನಾದುದಕ್ಕೆ ನಿನಗೆ ಪಣಜನಾದೆ. ಮುಂದೆ ನೀತಿ ಪಡದಲ್ಲಿ ಆ ನೀತಿಯಿಂದ ಸತ್ಕರ್ಮ, ಆ ಸತ್ಕರ್ಮದಿಂದೆ ಸಾಧುರಸಂಗ, ಆ ಸಾಧುರಸಂಗದಿಂದೆ ಗುರು, ಆ ಗುರುವಿನಿಂದ ನಾನಾದಮ್ಯಾಲೆ ನಾ ನಿನಗೆ ಪಣಜನಪ್ಪನಾದೆ. ಮುಂದೆ ನಾನು ಜ್ಞಾನ ಪಡೆದಲ್ಲಿ ಆ ಜ್ಞಾನದಿಂದ ನೀತಿ, ಆ ನೀತಿಯಿಂದೆ ಸತ್ಕರ್ಮ, ಆ ಸತ್ಕರ್ಮದಿಂದೆ ಸಾಧುರಸಂಗ, ಆ ಸಾಧುರಸಂಗದಿಂದೆ ಗುರುವು, ಆ ಗುರುವಿನಿಂದ ನಿನ್ನ ಪಡೆದಲ್ಲಿ ನಾ ನಿನಗೆ ಪಣಜನ ಮುತ್ತ್ಯನಾದೆ. ನಾ ಮುಂದೆ ನರಜನ್ಮ ಪಡದಲ್ಲಿ ಜ್ಞಾನ, ಆ ಜ್ಞಾನದಿಂದೆ ನೀತಿ, ನೀತಿಯಿಂದ ಸತ್ಕರ್ಮ, ಸತ್ಕರ್ಮದಿಂದೆ ಸಾಧುರ ಸಂಗ, ಸಾಧುರಸಂಗದಿಂದೆ ಗುರುವು, ಗುರುವಿನಿಂದೆ ನೀನು, ನಾ ನಿನಗೆ ಪಣಜನಜ್ಜನಾದೆ. ಈ ನರಜನ್ಮಕ್ಕೆ ಮುಂದೆ ಪುಣ್ಯವೆ ಕಾರಣ. ಮುಂದೆ ಪುಣ್ಯಪಡೆದಲ್ಲಿ ಆ ಪುಣ್ಯದಿಂದೆ ಈ ನರಜನ್ಮಪಡೆದೆ. ಈ ನರಜನ್ಮದಿಂದೆ ಜ್ಞಾನಪಡೆದೆ, ಈ ಜ್ಞಾನದಿಂದೆ ನೀತಿಪಡೆದೆ, ನೀತಿಯಿಂದೆ ಸತ್ಕರ್ಮ, ಸತ್ಕರ್ಮದಿಂದೆ ಸಾಧುರಸಂಗಪಡೆದೆ. ಈ ಸಾಧುರಸಂಗದಿಂದೆ ಗುರುವಿನಪಡೆದೆ. ಗುರುವಿನಿಂದ ನಿನ್ನ ಪಡೆದೆ ; ನಾ ನಿನಗೆ ಪಣಜನ ಪಣಜನಾದೆ. ಇಷ್ಟಾದರೂ ಆಯಿತೇ ? ಮತ್ತೆ ನಿನ್ನ ಘ್ರಾಣಕ್ಕೆ ಗಂಧವಕೊಟ್ಟೆ, ನಿನ್ನ ಜಿಹ್ವೆಗೆ ರಸವ ನೀಡಿದೆ, ನಿನ್ನ ನೇತ್ರಕ್ಕೆ ರೂಪವ ತೋರಿದೆ, ನಿನ್ನ ಅಂಗಕ್ಕೆ ಆಭರಣವನಿಟ್ಟೆ, ನಿನ್ನ ಶ್ರೋತ್ರಕ್ಕೆ ಶಬ್ದವ ಕೊಟ್ಟೆ, ನಿನ್ನ ಹೃದಯಕ್ಕೆ ತೃಪ್ತಿಯಮಾಡಿದೆ. ನಾನು ಈ ಪರಿಯಲ್ಲಿ ನಿನ್ನ ಹುಟ್ಟಿಸಿದೆ, ನಿನ್ನ ಬೆಳೆಸಿದೆ, ನಿನ್ನ ಮನ್ನಿಸಿದೆ, ನಿನ್ನ ವರ್ಣಿಸಿದೆ. ಮತ್ತೆ ಗುರು-ಶಿಷ್ಯ ಸತಿ-ಪತಿನ್ಯಾಯ. ನೀ ಪತಿ ನಾ ಸತಿ, ಅಹುದೋ ಅಲ್ಲವೋ ? ಮತ್ತೆ ನೀ ಪತಿಯಾದ ಮೇಲೆ ನಿನಗೆ ನಾನು ಸೋಲಬೇಕೋ ನನಗೆ ನೀನು ಸೋಲಬೇಕೋ ? ನನಗೆ ನೀ ಸೋತಲ್ಲಿ ನಾ ಹೆಚ್ಚೊ ? ನೀ ಹೆಚ್ಚೊ ? ನಾನೇ ಹೆಚ್ಚು. ಅದು ಹೇಗೆಂದಡೆ : ನನ್ನ ಮುಡಿಯಲಾದ ಗಂಧಕ್ಕೆ ನಿನ್ನ ಘ್ರಾಣೇಂದ್ರಿಯ ಸೋತಿತು. ನನ್ನ ಅಧರಾಮೃತಕ್ಕೆ ನಿನ್ನ ಜಿಹ್ವೇಂದ್ರಿಯ ಸೋತಿತು. ನನ್ನ ಹಾವ ಭಾವ ವಿಭ್ರಮ ವಿಲಾಸ ಶೃಂಗಾರ ತೋರಿಕೆಗೆ ನಿನ್ನ ನಯನೇಂದ್ರಿಯ ಸೋತಿತು. ನನ್ನ ಅಂಗದಾಲಿಂಗಕ್ಕೆ ನಿನ್ನ ತ್ವಗೇಂದ್ರಿಯ ಸೋತಿತು. ನನ್ನ ಸಂಗಸಮರಸದಲ್ಲಿ ನಿನ್ನ ಸಂಯೋಗ ಸೋತಿತು. ನೀನು ಆವ ಪರಿಯಾಗಿ ನನ್ನ ಸೋಲಿಸಬಂದರೆ. ನಾನು ನಿನ್ನ ಆವಾವ ಪರಿಯಾಗಿ ಸೋಲಿಸಿದೆ. ಅದು ಹಾಂಗಿರಲಿ, ಇನ್ನೊಂದುಂಟು-ಅದು ಏನೆನಲು : ನೀನು ನಾ ಮುಡದದ್ದು ಮುಡದಿ, ನಾ ಉಂಡದ್ದು ಉಂಡಿ, ನಾ ಕಂಡದ್ದು ಕಂಡಿ, ನಾ ಉಟ್ಟದ್ದು ಉಟ್ಟಿ, ನಾ ಕೇಳಿದ್ದು ಕೇಳಿದಿ, ನಾ ಕುಡದದ್ದು ಕುಡಿದಿ, ನೀನು ನನ್ನ ಪ್ರಸಾದಿ ಆದಿಯಲ್ಲಾ. ಮತ್ತೆ ನನ್ನ ಮೂಗೇ ನಿನ್ನ ಮೂಗು, ನನ್ನ ಬಾಯಿಯೇ ನಿನ್ನ ಬಾಯಿ, ನನ್ನ ಕಣ್ಣೇ ನಿನ್ನ ಕಣ್ಣು, ನನ್ನ ಮೈಯ್ಯೇ ನಿನ್ನ ಮೈ, ನನ್ನ ಕಿವಿಯೇ ನಿನ್ನ ಕಿವಿ, ನನ್ನ ಹೃದಯವೇ ನಿನ್ನ ಹೃದಯ, ನನ್ನ ಪ್ರಾಣವೇ ನಿನ್ನ ಪ್ರಾಣ, ನನ್ನ ಮನವೇ ನಿನ್ನ ಮನ, ನನ್ನ ಪ್ರಾಣವೇ ನಿನ್ನ ಪ್ರಾಣ, ನನ್ನ ಮನವೇ ನಿನ್ನ ಮನ, ನಾನೇ ನೀನು, ನನ್ನ ಬಿಟ್ಟರೆ ನಿನಗೆ ಗತಿಯಿಲ್ಲ. ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನೀ ಲಿಂಗಮುಖಕ್ಕೆ ಅರ್ಪಿಸುವ ಅವಧಾನವಾವುದೆಂದೊಡೆ: ಪೃಥ್ವಿಯೇ ಅಂಗವಾದ ಭಕ್ತನು ಸುಚಿತ್ತವೆಂಬ ಹಸ್ತದಿಂದ ಆಚಾರಲಿಂಗಕ್ಕೆ ಘ್ರಾಣವೆಂಬ ಮುಖದಲ್ಲಿ ಗಂಧವ ಸಮರ್ಪಣವ ಮಾಡಿ ಆಚಾರಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಜಲವೇ ಅಂಗವಾದ ಮಾಹೇಶ್ವರನು ಸುಬುದ್ಧಿಯೆಂಬ ಹಸ್ತದಿಂದ ಗುರುಲಿಂಗಕ್ಕೆ ಜಿಹ್ವೆಯೆಂಬ ಮುಖದಲ್ಲಿ ರಸವನು ಸಮರ್ಪಣವ ಮಾಡಿ ಗುರುಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಅಗ್ನಿಯೇ ಅಂಗವಾದ ಪ್ರಸಾದಿಯು ನಿರಹಂಕಾರವೆಂಬ ಹಸ್ತದಿಂದ ಶಿವಲಿಂಗಕ್ಕೆ ನೇತ್ರವೆಂಬ ಮುಖದಲ್ಲಿ ರೂಪವ ಸಮರ್ಪಣವ ಮಾಡಿ ಶಿವಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ವಾಯುವೇ ಅಂಗವಾದ ಪ್ರಾಣಲಿಂಗಿಯು ಸುಮನವೆಂಬ ಹಸ್ತದಿಂದ ಜಂಗಮಲಿಂಗಕ್ಕೆ ತ್ವಕ್ಕೆಂಬ ಮುಖದಲ್ಲಿ ಸ್ಪರ್ಶನ ಸಮರ್ಪಣವಮಾಡಿ ಜಂಗಮಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆಕಾಶವೇ ಅಂಗವಾದ ಶರಣನು ಸುಜ್ಞಾನವೆಂಬ ಹಸ್ತದಿಂದ ಪ್ರಸಾದಲಿಂಗಕ್ಕೆ ಶ್ರೋತ್ರವೆಂಬ ಮುಖದಲ್ಲಿ ಶಬ್ದವ ಸಮರ್ಪಣವ ಮಾಡಿ ಪ್ರಸಾದಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಆತ್ಮನೇ ಅಂಗವಾದ ಐಕ್ಯನು ಸದ್ಭಾವವೆಂಬ ಹಸ್ತದಿಂದ ಮಹಾಲಿಂಗಕ್ಕೆ ಮನೆವೆಂಬ ಮುಖದಲ್ಲಿ ತೃಪ್ತಿಯ ಸಮರ್ಪಣವ ಮಾಡಿ ಮಹಾಲಿಂಗದ ಪ್ರಸನ್ನ ಪ್ರಸಾದವ ಸ್ವೀಕರಿಸುತ್ತಿಪ್ಪನಯ್ಯ. ಈ ಅರ್ಪಿತ ಅವಧಾನದ ಭೇದವನರಿದು ಭೋಗಿಸುವ ಭೋಗವಲ್ಲವು ಲಿಂಗಭೋಗ ಪ್ರಸಾದ, ಅಂಗಭೋಗ ಅನರ್ಪಿತ; ಅನಪಿರ್ತವೇ ಕರ್ಮದ ತವರುಮನೆ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವನೊಮ್ಮೆಯೂ ಮುಟ್ಟವು.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ನಿರುಪಮಲಿಂಗ ಸುಖಮುಖಭರಿತ ಶರಣನೊಂದು ವೇಳೆ, ರೂಪವ ಹೊತ್ತರೆ ಜಡನಲ್ಲ, ನಿರೂಪವ ಹೊತ್ತರೆ ಅದ್ವೈತಿಯಲ್ಲ, ಮತ್ತೆ ದ್ವಂದ್ವಾವಲಂಬ ನಿರಾವಲಂಬ ಗುರುನಿರಂಜನ ಚನ್ನಬಸವಲಿಂಗಕ್ಕೆ ತಾನಿಲ್ಲವಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಂಗಳೊಳಗೆ ತೊಳಗಿ ಬೆಳಗುವ ದಿವ್ಯ ರೂಪವ ಕಂಡು ಮೈಮರೆದೆನವ್ವಾ. ಮಣಿಮುಕುಟದ ಫಣಿಕಂಕಣದ ನಗೆಮೊಗದ ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವಾ. ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ, ಆನು ಮದುವಣಿಗಿ ಕೇಳಾ ತಾಯೆ.
--------------
ಅಕ್ಕಮಹಾದೇವಿ
ಬಸವಣ್ಣನ ರೂಪವ ನಾನು ಕಾಣಲಿಲ್ಲ, ಮಡಿವಾಳಯ್ಯನ ರೂಪವ ನಾನು ಕಾಣಲಿಲ್ಲ, ಮರುಳಶಂಕರದೇವರ ರೂಪವ ನಾನು ಕಾಣಲಿಲ್ಲ, ಸಿದ್ಧರಾಮಯ್ಯನ ರೂಪವ ನಾನು ಕಾಣಲಿಲ್ಲ, ಪ್ರಭುವಿನ ರೂಪವ ನಾನು ಕಾಣಲಿಲ್ಲ, ಘಟ್ಟಿವಾಳಯ್ಯನ ರೂಪವ ನಾನು ಕಾಣಲಿಲ್ಲ. ಕಂಡು ಮಹಾದೇವಿಯಕ್ಕನ ಪದಕಮಲಕ್ಕೆ ಮರುಳುಗೊಂಡ ಮರಿದುಂಬಿಯಯ್ಯಾ ಗುರುನಿರಂಜನ ಚನ್ನಬಸವಲಿಂಗ ಸನ್ನಿಹಿತ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಂಗಳು ಬದುಕುತಲಿರ್ದವು ನಿಮ್ಮ ರೂಪವ ಕಾಣಲು. ಕರ್ಣವಾಲಿಸಿ ಸುಯ್ಗರೆಯುತಿರ್ದವು ನಿಮ್ಮ ನುಡಿಯನಾಲಿಸೆ. ಹಸ್ತಂಗಳು, ನಿಮ್ಮ ಉಪಚಾರಕ್ಕೆಳಸಿ ಕಳವಳಿಸುತಿರ್ದವು ಚರಣಗಳುಲಿದು ಹೆಜ್ಜೆದುಡುಕುತಿರ್ದವು ನಿಮ್ಮ ಬರವ ಭಾವಿಸುತ. ಹೃದಯ ವಿಕಸನವಾಗಿ ಮುಂಬಾಗುತಿದೆ ನಿಮ್ಮ ಸತ್ಕ್ರಿಯೆ ಸಮರಸಸುಖವನಿಚ್ಫೈಸಿ- ಗುರುನಿರಂಜನ ಚನ್ನಬಸವಲಿಂಗ, ನಿಮ್ಮ ಬರವಿಂಗೆ ಸದ್ಭಕ್ತನವಯವಂಗಳು.
--------------
ದೇಶಿಕೇಂದ್ರ ಸಂಗನಬಸವಯ್ಯ
ಗುರುಭಕ್ತರಾದವರು ಶಿವಭಕ್ತರಾದವರ ದಣಿವ ಕಂಡು ಸುಮ್ಮನಿರಲಾಗದು. ಅದೇನು ಕಾರಣವೆಂದಡೆ : ಒಬ್ಬ ಗುರುವಿನ ಮಕ್ಕಳಾದ ಮೇಲೆ ತನಗೆ ಗುರುವು ಕೊಟ್ಟ ದ್ರವ್ಯವ ಸವೆಸಲೇಬೇಕು. ಮತ್ತೆ ಪ್ರಪಂಚಿನ ತಂದೆ ಒಬ್ಬನಿಗೆ ಮಕ್ಕಳೈವರು. ಅವರು ತಂದೆಯ ಬದುಕು ನ್ಯಾಯದಿಂದ ಸರಿಮಾಡಿಕೊಂಬರು. ಈ ದೃಷ್ಟವ ಕಂಡು ನಮಗೆ ಭಕ್ತಿಪಕ್ಷವಾಗದಿದ್ದಡೆ ಈ ಪ್ರಪಂಚರಿಗಿಂತ ಕಡಿಮೆಯಾಯಿತಲ್ಲಾ ಗುರುವೆ ಎನ್ನ ಬಾಳುವೆ. ಒಂದಗಳ ಕಂಡರೆ ಕಾಗೆ ಕರೆಯದೆ ತನ್ನ ಬಳಗವನೆಲ್ಲವ ? ಒಂದು ಗುಟುಕ ಕಂಡರೆ ಕೋಳಿ ಕೂಗಿ ಕರೆಯದೆ ತನ್ನ ಕುಲವನೆಲ್ಲವ ? ಇಂತಪ್ಪ ದೃಷ್ಟವ ಕಂಡು ನೋಡಿ ಆ ಭಕ್ತರಿಗೆ ಭಕ್ತಿಪಕ್ಷವಾಗದಿದ್ದಡೆ ಆ ಕಾಗೆ ಕೋಳಿಗಿಂದ ಕರಕಷ್ಟವಾಯಿತಲ್ಲಾ ಎನ್ನ ಬಾಳುವೆ. ಭಕ್ತರಿಗೆ ಕಡಬಡ್ಡಿ ಕೊಟ್ಟ ಮೇಲೆ ಕೊಟ್ಟರೆ ಲೇಸು, ಕೊಡದಿರ್ದಡೆ ಲೇಸು. ಬೇಡಲಾಗದು, ಅದೇನು ಕಾರಣವೆಂದಡೆ ಅವರಲ್ಲಿ ಗುರು-ಲಿಂಗ-ಜಂಗಮವು ಇಪ್ಪರಾಗಿ. ಗುರುವಿನ ದ್ರವ್ಯ ಗುರುವಿಗೆ ಮುಟ್ಟಿತಲ್ಲದೆ, ಮತ್ತೆ ನ್ಯಾಯಕಿಕ್ಕಿ ಅನ್ಯರಿಗೆ ಹೇಳಿ ಅವರ ಭಂಗವ ಮಾಡಿಸಿದರೆ ಗುರುಹಿರಿಯರೆಂಬರು, ನಮ್ಮ ಮನೆಯ ಬೆಕ್ಕು ನಾಯಿಗೆ ಮನ್ನಿಸಬೇಕಲ್ಲದೆ, ಮನ್ನಿಸದಿದ್ದಡೆ ಅವರಿಗೆ ಅವರ ತಕ್ಕ ಶಿಕ್ಷೆಯಾದೀತು. ಮತ್ತೆ ಭಕ್ತಾಭಕ್ತರಿಗೆ ಕೊಟ್ಟು ಕೊಂಬ ಉದ್ಯೋಗವಾಗಲಿ ಆಚಾರ-ವಿಚಾರವಾಗಲಿ, ಬೈದರಾಗಲಿ, ಹೊಯ್ದರಾಗಲಿ ಮತ್ತೆ ಏನಾದರು ತೊಡಕು ಬರಲಿ ತಮ್ಮ ಮನೆಯೊಳಗೆ ಸುಮ್ಮನೆ ಇರುವುದು ಲೇಸು. ಮತ್ತೆ ಭಕ್ತಗಣಂಗಳು ಇದ್ದಲ್ಲಿಗೆ ಇಬ್ಬರೂ ಹೋಗಿ ತಮ್ಮಲ್ಲಿ ಇರುವ ಸ್ಥಿತಿಯ ಹೇಳಿ, ಅವರು ಹೇಳಿದ ಹಾಗೆ ಕೇಳಿಕೊಂಡು ಇಪ್ಪುದೇ ಲೇಸು. ಇಲ್ಲಿ ಭಕ್ತಗಣಂಗಳು ಒಪ್ಪಿದರೆ ಅಲ್ಲಿ ಒಪ್ಪುವರು. ಕಡ ಒಯ್ದದ್ದು ಕೊಡದಿದ್ದಡೆ, ಮತ್ತೆ ಭಕ್ತರು ಬೈದರೆ ನಮಗೆ ದುಮ್ಮಾನವಾಗುವದು ಸ್ವಾಮಿ. ಅನ್ಯರು ಒಯ್ದ ದ್ರವ್ಯ ಮುಳುಗಿದಡೆ ಚಿಂತೆಯಿಲ್ಲವು, ಭವಿಜನಾತ್ಮರು ಬೈದಡೆ ಎಳ್ಳಷ್ಟು ಸಿಟ್ಟಿಲ್ಲವು. ಇಂಥ ಬುದ್ಧಿಯ ಕೊಡಬಹುದೆ ಲಿಂಗವೆ ! ನೀವು ಬೇಡಿದುದನೀವೆನೆಂಬ ನಿಮ್ಮ ತಮ್ಮಟ ಬಿರಿದನು ಕೇಳಿ ಬೇಡಿಕೊಂಬೆನು. ಏನೆಂದಡೆ : ಉದ್ಯೋಗ ವ್ಯಾಪಾರ ಮಾಡುವಲ್ಲಿ ಹುಸಿ [ಬರೆಹವ] ಮಾಡಿ ಒಬ್ಬರ ಮನೆಯ ದ್ರವ್ಯವ ಒಬ್ಬರ ಮನೆಗೆ ಹಾಕಿ, ಅಹುದಲ್ಲದ ಮಾಡುವದ ಬಿಡಿಸು. ನಿಮ್ಮ ನೆನಹಿನೊಳಗೆ ಇಟ್ಟ ಮೇಲೆ ಮತ್ತೆ ರೊಕ್ಕ ಕೊಟ್ಟು ಉದ್ಯೋಗವ ಮಾಡದಿರಯ್ಯ. ಈ ರೊಕ್ಕವು ತಂದೆ-ಮಕ್ಕಳಿಗೆ ವಿರೋಧ. ಕೊಂಬಲ್ಲಿ ವಿರೋಧ, ಕೊಟ್ಟಲ್ಲಿ ವಿರೋಧ. ಇಂತಿದ ತಿಳಿದ ಮೇಲೆ ಹೇಸಿಕೆಯಾಯಿತ್ತು. ರೊಕ್ಕವ ಕೊಡಬೇಡ, ಸಿರಿತನ ಬೇಡ, ಬಡತನ ಕೊಡಿರಯ್ಯ. ಹಿರಿತನ ಬೇಡ ಕಿರಿತನ ಕೊಡಿರಯ್ಯ. ಒಡೆತನ ಬೇಡ ಬಂಟತನ ಕೊಡಿರಯ್ಯ. ಭಕ್ತಗಣಂಗಳ ಸೇವೆಯ ಕೊಡಿರಯ್ಯ. ಭಕ್ತರ ನೆರೆಯಲ್ಲಿ ಇರಿಸಯ್ಯ. ಅವರು ಒಕ್ಕುಮಿಕ್ಕ ಪ್ರಸಾದವ ಕೊಡಿಸಯ್ಯ. ಅವರು ತೊಟ್ಟ ಮೈಲಿಗೆಯ ಕೊಡಿಸಯ್ಯ. ಅವರ ಬಾಗಿಲ ಕಾಯಿಸಯ್ಯ. ಅವರ ಬಂಟತನ ಮಾಡಿಸಯ್ಯ. ಅವರ ಸಂಗ ಎಂದೆಂದಿಗೂ ಅಗಲಿಸದಿರಯ್ಯ. ನಾಲಗೆಯಲ್ಲಿ ಪಂಚಾಕ್ಷರವ ನಿಲಿಸಯ್ಯ. ನೇತ್ರದೊಳಗೆ ನಿಮ್ಮ ರೂಪವ ನಿಲಿಸಯ್ಯ. ಇಷ್ಟನು ಕೊಡದಿರ್ದಡೆ ನೀವು ಬೇಡಿದ್ದನೀವನೆಂಬ ನಿಮ್ಮ ತಮ್ಮಟ ಬಿರಿದು ಕೇಳಿ ನಮ್ಮ ಗಣಂಗಳು ಹಿಡಿತಿಯ ಹಿಡಿದಾರಯ್ಯ ! ಎಂದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
-->