ಅಥವಾ

ಒಟ್ಟು 35 ಕಡೆಗಳಲ್ಲಿ , 12 ವಚನಕಾರರು , 26 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಪರಮಸಚ್ಚಿದಾನಂದಮಂತ್ರಮೂರ್ತಿ ಜಂಗಮದೇವನು ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಪ್ಪಿಗೆಯಿಂದ ನಿರಂಜನಜಂಗಮಕ್ಕೆ ಉಪರಿಸಿಂಹಾಸನ ಮಾಡಿ, ಮುಹೂರ್ತಮಾಡಿದ ಮೇಲೆ ಷಡಕ್ಷರಮಂತ್ರಸ್ವರೂಪವಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯದಲ್ಲಿ ಮೂರ್ತಿಗೊಂಡಿರುವ ಈಶಾನ್ಯಕಲಶ ಮೊದಲಾಗಿ ಪಂಚಕಲಶಂಗಳಿಗೆ ಜಂಗಮದೀಕ್ಷಾಪಾದೋದಕವ ತುಂಬಿ, ಮಂಟಪಷಟ್ಸಮ್ಮಾರ್ಜನೆ, ಷಡ್ವಿಧ ವರ್ಣದ ರಂಗಮಾಲೆ, ನವಧಾನ್ಯ, ನವಸೂತ್ರ, ವಿಭೂತಿವಿಳ್ಯೆ, ಸುವರ್ಣಕಾಣಿಕೆ, ಪಂಚಮುದ್ರೆ, ಅಷ್ಟವಿಧ ಷೋಡಶೋಪಚಾರಂಗಳಿಂದೊಪ್ಪುವ ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ ಕಲಶಮೂರ್ತಿಗಳ ಪಶ್ಚಿಮಭಾಗದಲ್ಲಿ ಜಂಗಮಪಾದ ಸೋಂಕುವಂತೆ ಗುರುವು ಮುಹೂರ್ತಮಾಡಿ, ಆ ಕಲಶಂಗಳ ಸೂತ್ರವ ತನ್ನ ಪಾದಕ್ಕೆ ಹಾಕಿ, ತನ್ನ ಚಿದ್ಬೆಳಗಿನ ಮುಂದೆ ಮೂರ್ತಿಗೊಂಡಿರುವ ಕಲಶಂಗಳ ಪೂರ್ವಭಾಗದಲ್ಲಿ ಕರಿಯಕಂಬಳಿಯ ಗರ್ದುಗೆಯ ಮಾಡಿಸಿ, ಹಸೆಯ ರಚಿಸಿ, ಆ ಗರ್ದುಗೆಯ ಮೇಲೆ ಶಿಷ್ಯೋತ್ತಮನ ಮುಹೂರ್ತವ ಮಾಡಿಸಿ, ಆತನಂಗಕ್ಕೆ ಗುರುಸೂತ್ರವ ಹಾಕಿ, ಶಿಷ್ಯನಂಗದ ಮೇಲೆ ಮೂರ್ತಿಗೊಂಡಿರುವ ಪರಶಿವಲಿಂಗವ ಗಣಸಾಕ್ಷಿಯಾಗಿ ಶ್ರೀ ಗುರುದೇವನು ತನ್ನ ಕರಸ್ಥಲದಲ್ಲಿ ಮುಹೂರ್ತವ ಮಾಡಿಸಿ, ಆ ಲಿಂಗದ ಮಸ್ತಕದ ಮೇಲೆ ನಿರಂಜನಜಂಗಮದ ಪಾದವಿಡಿಸಿ, ಆ ಪಂಚÀಕಲಶಂಗಳಲ್ಲಿ ಶೋಬ್ಥಿಸುವಂಥ ದೇವಗಂಗಾಜಲಸ್ವರೂಪವಾದ ಗುರುಪಾದೋದಕವನ್ನು ಒಂದು ಪಾತ್ರೆಯಲ್ಲಿ ಆ ಕಲಶಂಗಳೈದರಲ್ಲಿ ತೆಗೆದುಕೊಂಡು ಗುರುವಿನ ದಕ್ಷಿಣಭಾಗದಲ್ಲಿ ಮೂರ್ತಿಗೊಂಡಿರುವ ಪಾದೋದಕ ಕುಂಭದಲ್ಲಿ ಒಂದು ಬಿಂದುವ ತಗೆದುಕೊಂಡು ಆ ಪಾತ್ರೆಯಲ್ಲಿ ಹಾಕಿ, ಇವಾರುತೆರದ ಅರ್ಘೋದಕಂಗಳ ಪ್ರಮಥಗಣರಾಧ್ಯ ಭಕ್ತಮಹೇಶ್ವರರೆಲ್ಲ ಆ ಗುರುವಿನ ಹಸ್ತಕಮಲದಲ್ಲಿರುವಂಥ ಉದಕವನ್ನು ತೆಗೆದುಕೊಂಡು, ಶರಣಸತಿ ಲಿಂಗಪತಿಯಾಗಿ ಒಪ್ಪುವ ಶಿಷ್ಯೋತ್ತಮನ ಮಸ್ತಕದಮೇಲೆ ಮಂತ್ರಧ್ಯಾನದಿಂದ ಸಂಪ್ರೋಕ್ಷಣೆಯ ಮಾಡುವಂಥಾದೆ ಕಲಶಾಬ್ಥಿಷೇಕದೀಕ್ಷೆ. ಇಂತುಟೆಂದು ಶ್ರೀಗುರು ನಿಷ್ಕಳಂಕ ಚನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅಯ್ಯಾ, ಪರಾತ್ಪರ ಸತ್ಯ ಸದಾಚಾರ ಗುರುಲಿಂಗಜಂಗಮದ ಶ್ರೀಚರಣವನು ಹಿಂದೆ ಹೇಳಿದ ಅಚ್ಚಪ್ರಸಾದಿಯೋಪಾದಿಯಲ್ಲಿ ನಿರ್ವಂಚಕತ್ವದಿಂದ ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ, ಒಪ್ಪತ್ತು ಅಷ್ಟವಿಧಾರ್ಚನೆ ಷೋಡಶೋಪಚಾರದಿಂದ ಅರ್ಚನೆಯ ಮಾಡಿ, ಆ ಚರಣೋದಕ ಪ್ರಸಾದವನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗದೇವಂಗೆ ಕೊಟ್ಟು ಕೊಂಬುವಂತಹದೆ ಇದಿರಿಟ್ಟು ಜಂಗಮ ಪಾದೋದಕ ಪ್ರಸಾದವ ಕೊಂಬ ಆಚರಣೆಯ ನಿಲುಗಡೆ ನೋಡಾ. ಆಮೇಲೆ ಒಪ್ಪತ್ತು ಸಂಬಂಧವಿಟ್ಟು ಆಚರಿಸುವ ನಿಲುಕಡೆ ಎಂತೆಂದಡೆ: ಅಯ್ಯಾ, ನಿನ್ನ ಷಟ್‍ಸ್ಥಾನದಲ್ಲಿ ನೆಲೆಸಿರ್ಪ ಇಷ್ಟಮಹಾಲಿಂಗದೇವನ ತ್ರಿವಿಧಸ್ಥಾನದಲ್ಲಿ ಓಂ ಬಸವಣ್ಣ ಚೆನ್ನಬಸವಣ್ಣ ಅಲ್ಲಮಪ್ರಭುವೆಂಬ ತ್ರಿವಿಧ ನಾಮಸ್ವರೂಪವಾದ ಷೋಡಶಾಕ್ಷರಂಗಳೆ ಷೋಡಶವರ್ಣವಾಗಿ ನೆಲೆಸಿಪ್ಪರು ನೋಡಾ. ಇಂತು ಷೋಡಶಕಳಾಸ್ವರೂಪವಾದ ಚಿದ್ಘನ ಮಹಾಲಿಂಗದೇವನ ನಿರಂಜನ ಜಂಗಮದೋಪಾದಿಯಲ್ಲಿ ಸಗುಣ ನಿರ್ಗುಣ ಪೂಜೆಗಳ ಮಾಡಿ ಜಂಗಮಚರಣಸೋಂಕಿನಿಂ ಬಂದ ಗುರುಪಾದೋದಕವಾದಡೂ ಸರಿಯೆ, ಅದು ದೊರೆಯದಿದ್ದಡೆ, ಲಿಂಗಾಣತಿಯಿಂ ಬಂದೊದಗಿದ ಪರಿಣಾಮೋದಕವಾದಡೂ ಸರಿಯೆ, ಒಂದು ಭಾಜನದಲ್ಲಿ ಸೂಕ್ಷ್ಮದಿಂ ರಚಿಸಿ ಆ ಉದಕದೊಳಗೆ ಹಸ್ತೋದಕ ಮಂತ್ರೋದಕ ಭಸ್ಮೋದಕವ ಮಾಡಿ, ಆ ಮೇಲೆ ಅನಾದಿ ಮೂಲಪ್ರಣವ ಪ್ರಸಾದಪ್ರಣವದೊಳಗೆ ಅಖಂಡಜ್ಯೋತಿಪ್ರಣವ, ಅಖಂಡಮಹಾಜ್ಯೋತಿಪ್ರಣವವ ಲಿಖಿತವಮಾಡಿ, ಶುದ್ಧಾದಿಯಾದ ಪೂರ್ಣಭಕ್ತಿಯಿಂದ ಮಹಾಚಿದ್ಘನತೀರ್ಥವೆಂದು ಭಾವಿಸಿ ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ ಅನಿಮಿಷದೃಷ್ಟಿಯಿಂ ನಿರೀಕ್ಷಿಸಿ, ಮೂರು ವೇಳೆ ಪ್ರದಕ್ಷಿಣವ ಮಾಡಿ, ಆ ಚಿದ್ಘನ ತೀರ್ಥವನು ದ್ವಾದಶದಳ ಕಮಲದ ಮಧ್ಯದಲ್ಲಿ ನೆಲೆಸಿರ್ಪ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟವಿಧಮಂತ್ರ ಸಕೀಲಂಗಳಿಂದ ಆಚಾರಾದಿ ಶೂನ್ಯಾಂತವಾದ ಅಷ್ಟವಿಧ ಲಿಂಗಧ್ಯಾನದಿಂದ ಅಷ್ಟವಿಧ ಬಿಂದುಗಳ ಸಮರ್ಪಿಸಿದಲ್ಲಿಗೆ ಅಷ್ಟವಿಧೋದಕವಾಗುವುದಯ್ಯಾ. ಆ ಇಷ್ಟಮಹಾಲಿಂಗ ಜಂಗಮವೆತ್ತಿ ಅಷ್ಟಾದಶಮಂತ್ರ ಸ್ಮರಣೆಯಿಂದ ಮುಗಿದಲ್ಲಿಗೆ ನವಮೋದಕವಾಗುವುದಯ್ಯಾ. ಉಳಿದೋದಕವ ತ್ರಿವಿಧ ಪ್ರಣವಧ್ಯಾನದಿಂದ ಮುಕ್ತಾಯವ ಮಾಡಿದಲ್ಲಿಗೆ ದಶವಿಧೋದಕವೆನಿಸುವುದಯ್ಯಾ. ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪ ಪಾದತೀರ್ಥ ಮುಗಿದ ಮೇಲೆ ತಟ್ಟೆ ಬಟ್ಟಲಲ್ಲಿ ಎಡೆಮಾಡಬೇಕಾದಡೆ ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿರ್ದಡೆ ತಾ ಸಲಿಸಿದ ಪಾದೋದಕ ಪ್ರಸಾದವ ಕೊಡುವುದಯ್ಯಾ. ಸಹಜಲಿಂಗಭಕ್ತರಾದಡೆ ಮುಖ ಮಜ್ಜನವ ಮಾಡಿಸಿ ತಾ ಧರಿಸುವ ವಿಭೂತಿಧಾರಣವ ಮಾಡಿಸಿ ಶಿವಶಿವಾ ಹರಹರ ಬಸವಲಿಂಗಾ ಎಂದು ಬೋಧಿಸಿ ಎಡೆಮಾಡಿಸಿಕೊಂಬುವುದಯ್ಯಾ. ಆಮೇಲೆ ತಾನು ಸ್ಥಲವಾದಡೆ ಸಂಬಂಧಪಟ್ಟು, ಪರಸ್ಥಲವಾದಡೆ ಚಿದ್ಘನ ಇಷ್ಟಮಹಾಲಿಂಗ ಜಂಗಮವ ವಾಮಕರಸ್ಥಲದಲ್ಲಿ ಮೂರ್ತಮಾಡಿಸಿಕೊಂಡು ದಕ್ಷಿಣಹಸ್ತದಲ್ಲಿ ಗುರುಲಿಂಗಜಂಗಮ ಸೂತ್ರವಿಡಿದು ಬಂದ ಕ್ರಿಯಾಭಸಿತವ ಲೇಪಿಸಿ, ಮೂಲಪ್ರಣವ ಪ್ರಸಾದಪ್ರಣವದೊಳಗೆ ಗೋಳಕಪ್ರಣವ ಅಖಂಡಗೋಳಕಪ್ರಣವ ಅಖಂಡ ಮಹಾಗೋಳಕಪ್ರಣವ, ಜ್ಯೋತಿಪ್ರಣವ ಧ್ಯಾನದಿಂದ ದ್ವಾದಶ ಮಣಿಯ ಧ್ಯಾನಿಸಿ ಪ್ರದಕ್ಷಿಸಿ, ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ, ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ, ಪದಾರ್ಥದ ಪೂರ್ವಾಶ್ರಯವ ಕಳೆದು ಶುದ್ಧಪ್ರಸಾದವೆಂದು ಭಾವಿಸಿ, ಆ ಇಷ್ಟ ಮಹಾಲಿಂಗ ಜಂಗಮಕ್ಕೆ ಅಷ್ಟಾದಶ ಮಂತ್ರಸ್ಮರಣೆಯಿಂದ ಮೂರುವೇಳೆ ರೂಪ ಸಮರ್ಪಿಸಿ, ಎರಡು ವೇಳೆ ರೂಪ ತೋರಿ, ಚಿರಪ್ರಾಣಲಿಂಗ ಮಂತ್ರ ಜಿಹ್ವೆಯಲ್ಲಿಟ್ಟು ಆರನೆಯ ವೇಳೆಗೆ ಭೋಜ್ಯಗಟ್ಟಿ ಆ ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ, ಷಡ್ವಿಧ ಲಿಂಗಲೋಲುಪ್ತಿಯಿಂದ ಸಂತೃಪ್ತನಾಗಿ ಆಚರಿಸಿದಾತನೆ ಗುರುಭಕ್ತನಾದ ನಿಚ್ಚಪ್ರಸಾದಿಯೆಂಬೆ ಕಾಣಾ ಚೆನ್ನಮಲ್ಲಿಕಾರ್ಜುನಾ
--------------
ಅಕ್ಕಮಹಾದೇವಿ
ಅಯ್ಯ, ಇಂತು ಕಲ್ಯಾಣಪಟ್ಟಣದ ಅನುಭಾವಮಂಟಪದ ಶೂನ್ಯಸಿಂಹಾಸನದಲ್ಲಿ ಪ್ರಭುಸ್ವಾಮಿಗಳು ಬಸವರಾಜೇಂದ್ರ ಮುಖ್ಯವಾದ ಸಕಲಪ್ರಮಥಗಣಂಗಳು ಕೂಡಿ, ಚಿಕ್ಕದಂಡನಾಯಕ ಮುಖವಚನದಿಂದೆ ಶಿವಯೋಗಿ ಸಿದ್ಧರಾಮೇಶ್ವರನ ಉಪದೇಶಕಾರಣಾರ್ಥವಾಗಿ, ನವರತ್ನ ಖಚಿತ ಮಂಟಪವ ರಚಿಸಿ, ಶುಚಿ, ರುಚಿ, ಪರುಷ, ನಿಜ, ಸದ್ಭಕ್ತಿ, ಜ್ಞಾನ, ವೈರಾಗ್ಯ, ಸತ್ಕ್ರಿಯಾಚಾರ ಷಟ್ಸ್ಥಲಮಾರ್ಗವ ಚೆನ್ನಬಸವಣ್ಣನ ಮುಖವಚನದಿಂದೆ ಸಿದ್ಧರಾಮದೇಶಿಕೇಂದ್ರನಿಗೆ ಬೋದ್ಥಿಸಿದ ನಿಲುಕಡೆಯ ಸೂತ್ರವದೆಂತೆಂದಡೆ : ಅಯ್ಯ, ಮೂವತ್ತಾರು ತತ್ವಂಗಳಲ್ಲಿ ಸಂಬಂಧವಾದ ಅಷ್ಟಾವರಣಂಗಳ ಕೂಡಿ ನಾಲ್ವತ್ತುನಾಲ್ಕು ಚಿದಂಗತತ್ವಂಗಳೆಂದೆನಿಸಿ, ಅಯ್ಯ, ಇಷ್ಟಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಪ್ರಾಣಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು, ಭಾವಲಿಂಗಜಪಪ್ರದಕ್ಷಿಣ ಪ್ರಣಮ ಹತ್ತೊಂಬತ್ತು ಕೂಡಲಾಗಿ ಐವತ್ತೇಳು ಮಹಾಪ್ರಣಮಂಗಳೆ ಚಿದ್ಛನಲಿಂಗಸ್ಥಲಂಗಳಾಗಿ ಶೋಬ್ಥಿಸುವಂಥ ಚಿದಂಗ-ಚಿದ್ಘನಲಿಂಗವ ಉಭಯಭಾವವಳಿದು ನೂರೊಂದುಸ್ಥಲವ ಸಂಬಂಧವಮಾಡಿ, ಮಾರ್ಗಾಚರಣೆಯ ಕುರುಹ ತೋರಿ, ಅಂತರಂಗದಲ್ಲಿ ಶೋಬ್ಥಿಸುವ ಲೋಮವಿಲೋಮದಳಂಗಳೆ ನೂರೆಂಟು ತೆರದ ಚಿದಂಗಂಗಳಾಗಿ, ಆ ದಳಂಗಳಲ್ಲಿ ಝಗಝಗಾಯಮಾನವಾಗಿ ಪ್ರಕಾಶಿಸುವ ಪ್ರಣಮಂಗಳೆ ನೂರೆಂಟು ತೆರದ ಚಿದ್ಘನಲಿಂಗಂಗಳಾಗಿ, ಒಳಗು-ಹೊರಗು ಎಂಬ ಉಭಯ ನಾಮ ರೂಪು ಕ್ರಿಯವನಳಿದು ಇನ್ನೂರ ಹದಿನಾರು ಸ್ಥಲವ ಸಂಬಂಧವ ಮಾಡಿ ಮೀರಿದ ಕ್ರಿಯಾಚರಣೆಯ ಕುರುಹ ತೋರಿ ಅನಾದ್ಥಿಗುರು ಬಸವರಾಜೇಂದ್ರನ ಪ್ರಸಿದ್ಧಪ್ರಸಾದನೆ ಮಾರ್ಗಕ್ರಿಯಾರೂಪವಾದ ನೂರೊಂದು ಸ್ಥಲಂಗಳಾಗಿ, ಅನಾದಿಜಂಗಮ ಪ್ರಭುರಾಜೇಂದ್ರನ ಶುದ್ಧಪ್ರಸಾದವೆ ಮೀರಿದ ಕ್ರಿಯಾರೂಪವಾದ ಇನ್ನೂರ ಹದಿನಾರುಸ್ಥಲಂಗಳಾಗಿ, ಇವರಿಬ್ಬರ ಮಹಾಪ್ರಸಾದವೆ ಘಟ್ಟಿಗೊಂಡು ಅನಾದಿಶರಣರೂಪವ ತಾಳಿ ಚೆನ್ನಬಸವಣ್ಣನೆಂಬಬ್ಥಿಧಾನದಿಂದ ಮಾರ್ಗಕ್ರಿಯಾಸ್ವರೂಪ ನೂರೊಂದುಸ್ಥಲವೆ ಆಚರಣೆಯಾಗಿ ಮೀರಿದ ಕ್ರಿಯಾಸ್ವರೂಪ ಇನ್ನೂರ ಹದಿನಾರುಸ್ಥಲವೆ ಸಂಬಂಧವಾಗಿ ಅನಾದಿಪರಶಿವರೂಪ ಶಿವಯೋಗಿಸಿದ್ಧರಾಮನ ಕರ-ಮನ-ಭಾವಂಗಳಲ್ಲಿ ಮಿಶ್ರಾಮಿಶ್ರಂಗಳೊಡನೆ ಅಗಣಿತ ಸೂರ್ಯಚಂದ್ರಾಗ್ನಿ ಪ್ರಕಾಶಕ್ಕೆ ಮಿಗಿಲಾಗಿ ತ್ಯಾಗ-ಭೋಗ-ಯೋಗಾನುಸಂಧಾನದಿಂದ ಸಿದ್ಧರಾಮನ ಕರಸ್ಥಲದಲ್ಲಿ ಶುದ್ಧಪ್ರಸಾದ-ಇಷ್ಟಲಿಂಗವಾಗಿ ಅಷ್ಟವಿಧಾರ್ಚನೆ-ಷೋಡಶೋಪಚಾರವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಮನಸ್ಥಲದಲ್ಲಿ ಸಿದ್ಧಪ್ರಸಾದ-ಪ್ರಾಣಲಿಂಗವಾಗಿ ಮಂತ್ರ-ಧ್ಯಾನ-ಜಪ-ಸ್ತೋತ್ರಂಗಳ ಕೈಕೊಂಡು ಒಪ್ಪುತ್ತಿರ್ಪರು ನೋಡ. ಭಾವಸ್ಥಲದಲ್ಲಿ ಪ್ರಸಿದ್ಧಪ್ರಸಾದ-ಭಾವಲಿಂಗವಾಗಿ ಮನೋರ್ಲಯ ನಿರಂಜನ ಪೂಜಾಕ್ರಿಯಾನಂದ ಕೂಟವ ಕೈಕೊಂಡು ಒಪ್ಪುತ್ತಿರ್ಪರು ನೋಡ. ಇಂತು ಸಂಬಂಧಾಚರಣೆಯ ಸ್ಥಲಕುಳಂಗಳ ಚಿದ್ಬೆಳಗಿನಲ್ಲಿ ಶೋಬ್ಥಿಸುವ ಬಸವಣ್ಣ, ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ ಪ್ರಮಥಗಣಂಗಳ ಮಹಾಪ್ರಸಾದ ಬೆಳಗಿಗೆ ಯೋಗ್ಯರಾಗಿ ದಗ್ಧಪಟನ್ಯಾಯ, ಉರಿವುಂಡ ಕರ್ಪೂರದಂತಾದೆವು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇನ್ನು ಪ್ರಾಣಾಯಾಮದ ಲಕ್ಷಣವೆಂತೆಂದೊಡೆ : ಪ್ರಾಕೃತಪ್ರಾಣಾಯಾಮವೆಂದು, ವೈಕೃತಪ್ರಾಣಾಯಾಮವೆಂದು, ಆ ಎರಡರಿಂ ಪೊರತಾದ ಕೇವಲ ಕುಂಭಕವೆಂದು, ಮೂರು ಪ್ರಕಾರವಾಗಿರ್ಪುದದೆಂತೆನೆ : ದಿನವೊಂದಕ್ಕೆ ಇಪ್ಪತ್ತೊಂದು ಸಾವಿರದ ಆರುನೂರು ಹಂಸ ಹಂಸವೆಂದುಚ್ಚರಿಸುವ ಅಹಂಕಾರಾತ್ಮಕವಾದ ಜೀವಜಪವೇ ಪ್ರಾಕೃತ ಪ್ರಾಣಾಯಾಮವೆನಿಸುವುದು. ಮತ್ತಾ ಜೀವಜಪವನು ಗೂರೂಪದೇಶದಿಂದೆ ಲೋಪವಮಾಡಿ ಸೋಹಂ ಸೋಹಂ ಎಂಬ ಮಂತ್ರಸಂಸ್ಕಾರದಿಂದುಚ್ಚರಿಸುವುದೆ ವೈಕೃತಪ್ರಾಣಾಯಾಮವೆನಿಸುವುದು. ಆ ವೈಕೃತಪ್ರಾಣಾಯಾಮವೆ ಇನ್ನೊಂದು ಪ್ರಕಾರವಾಗಿ ಪೇಳಲ್ಪಡುವುದದೆಂತೆನೆ : ಕನಿಷ್ಠೆ ಅನಾಮಿಕೆಗಳಿಂದೆ ಈಡನಾಡಿಯಂ ಬಲಿದು, ಪಿಂಗಳನಾಡಿಯಿಂದೆ ದೇಹಾಂತರ್ಗತ ವಾಯುಮಂ ಅಕಾರೋಚ್ಚರಣದಿಂ ಪನ್ನೆರಡು ಮಾತ್ರೆ ರಚಿಸಿ, ಮತ್ತೆ ಪಿಂಗಳನಾಡಿಯಂ ಅಂಗುಷ್ಠದಿಂ ಬಲಿದು, ಈಡಾನಾಡಿಯಿಂದೆ ಪನ್ನೆರಡು ಮಾತ್ರೆ ಉಕಾರೋಚ್ಚರಣದಿಂ ಪೂರಿಸಿ, ನಾಬ್ಥಿ ಹೃದಯ ಕಂಠವೆಂಬ ತ್ರಿಸ್ಥಾನದೊಳೊಂದರಲ್ಲಿ ಪನ್ನೆರಡು ಮಾತ್ರೆ ಮಕಾರೋಚ್ಚರಣದಿಂ ತುಂಬಿಪುದೆ ಕನಿಷ್ಠಪ್ರಾಣಾಯಾಮವೆನಿಸುವುದು. ಅದೆಂತೆಂದೊಡೆ : ಶೀಘ್ರವಲ್ಲದೆ ವಿಳಂಬವಲ್ಲದೆ ಜಾನುಪ್ರದಕ್ಷಿಣಮಂ ಮಾಡಿ, ಅಂಗುಲಿಸ್ಫೋಟನಮಂ ಮಾಡಿದರೆ ಒಂದು ಮಾತ್ರೆ ಎನಿಸುವುದು. ಇಂತಹ ಮಾತ್ರೆ ಪನ್ನೆರಡು ಆದರೆ ಕನಿಷ್ಠವೆನಿಸುವುದು. ಮತ್ತಾ ಮಾತ್ರೆ ಇಪ್ಪತ್ತು ನಾಲ್ಕಾದರೆ ಮಧ್ಯಮವೆನಿಸುವುದು. ಬಳಿಕಾ ಮಾತ್ರೆ ಮೂವತ್ತಾರಾದರೆ ಉತ್ತಮವೆನಿಸುವುದು. ಇಂತೀ ಮೂವತ್ತಾರು ಮಾತ್ರೆಗಳು ಮಂತ್ರ ಸ್ಮರಣೆ ಧ್ಯಾನ ಸಹಿತಮಾಗಿ ಮಾಳ್ಪುದೆ ಪ್ರಾಣಾಯಾಮದಲ್ಲಿ ಉತ್ತಮ ಪ್ರಾಣಾಯಾಮವೆನಿಸುವುದು. ಇನ್ನು ಕೇವಲ ಕುಂಭಕವೆಂತೆನೆ : ವಾಮಭಾಗದ ಈಡಾನಾಡಿಯೇ ಚಂದ್ರನಾಡಿಯೆಂದು ಯಮುನಾನದಿ ಎಂದು ಪೇಳಲ್ಪಡುವುದು. ದಕ್ಷಿಣಭಾಗದ ಪಿಂಗಳನಾಡಿಯೇ ಸೂರ್ಯನಾಡಿಯೆಂದು ಗಂಗಾನದಿಯೆಂದು ಪೇಳಲ್ಪಡುವುದು. ಸುಷುಮ್ನೆಯೆಂಬ ಮಧ್ಯನಾಡಿಯೇ ಅಗ್ನಿಯೆಂದು ಸರಸ್ವತಿನದಿಯೆಂದು ಪೇಳಲ್ಪಡುವುದಾಗಿ, ಆ ನದಿತ್ರಯಂಗಳ ಸಂಬಂಧದಿಂ ತ್ರಿವೇಣಿಯೆಂಬ ಯೋಗಸ್ಥಲಕೆ ತ್ರಿಕೂಟವೆಂದು, ಮಧ್ಯಹೃದಯವೆಂದು, ಕಾಶಿಕ್ಷೇತ್ರವೆಂದು, ಕೂರ್ಚವೆಂದು ಆಜ್ಞಾಚಕ್ರವೆಂದು, ಪರ್ಯಾಯ ನಾಮಂಗಳನುಳ್ಳ ಶಿವಧ್ಯಾನಕ್ಕೆ ರಹಸ್ಯವಾದ ಭ್ರೂಮಧ್ಯಸ್ಥಾನದಲ್ಲಿ ಮನೋಮಾರುತಂಗಳನೈದಿಸಿ ಯೋಗಮಂ ಸಾದ್ಥಿಸಲ್ತಕ್ಕುದೇ ಪ್ರಾಣಾಯಾಮಾಭ್ಯಾಸ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅಯ್ಯ, ಶ್ರೀಗುರುಲಿಂಗಜಂಗಮವೇ ರುದ್ರಲೋಕದ ರುದ್ರಗಣಂಗಳಿಗೆ, ಶಾಂಭವಲೋಕದ ಶಾಂಭವಗಣಂಗಳಿಗೆ, ನಾಗಲೋಕದ ನಾಗಗಣಂಗಳಿಗೆ, ದೇವಲೋಕದ ದೇವಗಣಂಗಳಿಗೆ, ಮರ್ತೃಲೋಕದ ಮಹಾಗಣಂಗಳಿಗೆ ಅವರವರ ಮನ-ಭಾವ-ಕಾರಣಂಗಳು ಹೇಗುಂಟೊ ಹಾಂಗೆ ಆಯಾಯ ಪ್ರಸನ್ನೇತಿ ಪ್ರಸಾದವಾಗಿರ್ಪರು ನೋಡ. ಸ್ವರ್ಗ-ಮರ್ತೃ-ಪಾತಾಳಲೋಕದಲ್ಲಿ ಚರಿಸುವ ಹÀರಿಸುರಬ್ರಹ್ಮಾದಿ ದೇವದಾನವಮಾನವ ಮನಮುನಿಗಳೆಲ್ಲ ಅತ್ಯತಿಷ*ದ್ದಶಾಂಗುಲವೆಂದು ಹೊಗಳುವ ಶ್ರುತಿಯಂತೋ ಹಾಂಗೆ ಅವರವರ ಮನದಂತೆ ಮಹಾದೇವನಾಗಿ ಫಲಪದಂಗಳ ಕೊಟ್ಟು, ದುಷ್ಟನಿಗ್ರಹ ಶಿಷ್ಟಪ್ರತಿಪಾಲಕತ್ವದಿಂದ ಸರ್ವಲೋಕಂಗಳಿಗೆಲ್ಲ ಸೂತ್ರಧಾರಿಗಳಾಗಿರ್ಪರು ನೋಡ. ಇಂತು ಏಕಮೇವ ಪರಬ್ರಹ್ಮವೆಂಬ ಶ್ರುತಿಯ ದಿಟವಮಾಡಿ ಪರಮಸ್ವಸ್ಥಿರದ ಮಂಡಲದ ಮೇಲೆ ಶಿವ-ಶಕ್ತಿ, ಅಂಗ-ಲಿಂಗವೆಂಬ ಉಭಯನಾಮವಳಿದು ಶಿಷ್ಯರೂಪಿನಿಂದ ಕುಳ್ಳಿರಿಸಿ ದೀಕ್ಷಾಪಾದೋದಕ ಮಿಶ್ರವಾದ ಗೋಮೂತ್ರದಿಂದ ಸಪ್ತವ್ಯಸನ ಸಂಬಂಧವಾದಂಗ, ಸಪ್ತಧಾತುಸಂಬಂಧವಾದ ಲಿಂಗ, ಇಂತು ಅಂಗದ ಮಲಿನಭಾವ, ಲಿಂಗದ ಶಿವಭಾವವ ಕಳದು, ಕ್ಷೀರ, ಘೃತ, ರಂಭಾ, ಇಕ್ಷು, ಮಧುಯುಕ್ತವಾದ ರಸಪಂಚಾಮೃತವ ಜಂಗಮಚರಣೋದಕ ಮಿಶ್ರದಿಂದ ಅಭಿಷೇಕಮಾಡಿಸಿ, ಅದರಿಂ ಮೇಲೆ ಗುರುಪಾದೋದಕದಲ್ಲಿ ಶರಣಗಣಂಗಳು ಹಸ್ತೋದಕ, ಮಂತ್ರೋದಕ, ಶುದ್ಧೋದಕ, ಗಂಧೋದಕ, ಪುಷ್ಪೋದಕವೆಂಬ ಪಂಚಪರಮಾನಂದ ಜಲದಿಂದ ಅಭ್ಯಂಗಸ್ನಾನ ಮಾಡಿಸಿ, ಹಿಂದು-ಮುಂದಣ ಕಾಲಕಾಮರ ಭಯಕ್ಕೆ ಅಂಜಬೇಡವೆಂದು ತ್ರಿವಿಧಂಗುಲಪ್ರಮಾಣವಾದ ದರ್ಭೆಯ ಅಂತು ಮಾಡಿ ತ್ರಿವಿಧಮಂತ್ರಸ್ಮರಣೆಯಿಂದ ಕಟಿಯಲ್ಲಿ ಧರಿಸಿದರಯ್ಯ. ಆರುವೈರಿಗಳಿಗೆ ಒಳಗಾಗಬೇಡವೆಂದು ಷಡಂಗುಲಪ್ರಮಾಣವಾದ ರಂಭಾಪಟ್ಟೆಯ ಕೌಪೀನವ ಮಾಡಿ ಷಡಕ್ಷರಮಂತ್ರಸ್ಮರಣೆಯಿಂದ ಹರಿಯಜದ್ವಾರಗಳ ಬಂಧಿಸಿದರಯ್ಯ. ಅದರಿಂದ ಮೇಲೆ ನಾರಂಗಶಾಟಿಯ ಪವಿತ್ರತೆಯಿಂ ಹೊದ್ದಿಸಿ, ಶ್ರೀ ಗುರುದೇವನ ಚರಣಕಮಲಕ್ಕೆ ಅಷ್ಟಾಂಗಪ್ರಣಿತನ ಮಾಡಿಸಿ, ಶಿವಶರಣ ಭಕ್ತ ಮಾಹೇಶ್ವರರುಗಳಿಗೆ ಹುಸಿಯ ನುಡಿಯದೆ, ದಿಟವ ಬಿಡದೆ, ಆಪ್ತತ್ವದಿಂದ ನಡೆ-ನುಡಿ, ಕೊಟ್ಟುಕೊಂಬ ವಿಚಾರಂಗಳ ಶ್ರುತಮಾಡಿದಲ್ಲಿ ಶ್ರೀ ಗುರುದೇವನು ಶರಣಗಣ ಒಪ್ಪಿಗೆಯಿಂದ ಶಿಷ್ಯನ ಮಸ್ತಕದ ಮೇಲೆ ಅಭಯಹಸ್ತವನ್ನಿಟ್ಟು, ಗುರುಶಿಷ್ಯಭಾವವಳಿದು, ಗುರುವಿನ ಸೂತ್ರದ ಶಿಷ್ಯಹಿಡಿದು, ಶಿಷ್ಯನ ಸೂತ್ರವ ಗುರುವು ಹಿಡಿದು, ಅಂತರಂಗಬಹಿರಂಗದಲ್ಲಿ ಶಿವಯೋಗಾನುಸಂಧಾನದಿಂದ ಏಕರೂಪವಾಗಿ ಭೃತ್ಯರಿಂದ ಕಳಸಾರ್ಚನೆಯ ರಚಿಸಿ, ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರರೊಡಗೂಡಿ ನವರತ್ನಖಚಿತವಾದ ಶೂನ್ಯಸಿಂಹಾಸನದ ಮೇಲೆ ಮೂರ್ತಿಗೊಂಡಿರುವಂಥ ಮಂತ್ರಮೂರ್ತಿ ನಿರಂಜನಜಂಗಮಕ್ಕೆ ವಿಭೂತಿ ವೀಳ್ಯ, ಸುವರ್ಣಕಾಣಿಕೆ, ದಶಾಂಗಘನಸಾರ, ಪುಷ್ಪದಮಾಲೆ, ವಸ್ತ್ರಾಭರಣ ಮೊದಲಾಗಿ ಸಪ್ತಪದಾರ್ಥಂಗಳ ಪ್ರಮಥಗಣಾರಾಧ್ಯ ಭಕ್ತಮಾಹೇಶ್ವರ ಮಧ್ಯದಲ್ಲಿ ಇಟ್ಟು ಅಷ್ಟಾಂಗಯುಕ್ತರಾಗಿ ಸ್ವಸ್ಥದೃಢಚಿತ್ತದಿಂದ ಬಹು ಪರಾಕು ಭವರೋಗ ವೈದ್ಯನೆ ಎಂದು ತ್ರಿಕರಣಶುದ್ಧತಿಯಿಂದ ಅಭಿವಂದಿಸುವಂಥಾದ್ದೆ ಸ್ವಸ್ತಿಕಾರೋಹಣದೀಕ್ಷೆ. ಇಂತುಟೆಂದು ಶ್ರೀ ಗುರುನಿಷ್ಕಳಂಕಮೂರ್ತಿ ಚೆನ್ನಬಸವರಾಜೇಂದ್ರನು ನಿರ್ಲಜ್ಜಶಾಂತಲಿಂಗದೇಶಿಕೋತ್ತಮಂಗೆ ನಿರೂಪಮಂ ಕೊಡುತಿರ್ದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಮಹಾಮೇರುವೆಂಬ ಪಟ್ಟಣದರಸಂಗೆ ಮೂರು ಪ್ರಧಾನಿಗಳು, ಆರು ಮಂದಿ ವಜೀರರು, ಮೂವತ್ತಾರು ಮಂದಿ ಸರದಾರರು, ಐವತ್ತೆರಡು ಮಂದಿ ಮಹಾಲದಾರರು ಕೂಡಿ ಕತ್ತಲ ಕಾಳಂಧವೆಂಬ ದೇಶವನು ಕಾಳಗವ ಮಾಡಿ ತಕ್ಕೊಂಬುವುದ ಕಂಡೆನಯ್ಯ. ಅದು ಹೇಗೆಂದಡೆ: ಹತ್ತುಲಕ್ಷ ರಾವುತರ ಹಿಡಿದು, ಎಂಟು ಸಾವಿರ ಕುದುರೆಗಳ ಹಿಡಿದು, ಅರವತ್ತು ಕೋಟಿ ಕಾಲಮಂದಿಯ ಸಂದಿಸಂದಿನಲ್ಲಿ ನಿಲಿಸಿ, ಸಪ್ತೇಳುಸಾಗರವ ದಾಂಟಿ, ಕತ್ತಲಕಾಳಂಧವೆಂಬ ದೇಶವನು, ಕೈಸೆರೆಯ ಮಾಡಿಕೊಂಡು, ಐದು ಠಾಣ್ಯವ ಬಲಿದು, ಕಡೆಯ ಠಾಣ್ಯದ ಮುಂದೆ ಚಾವಡಿಯ ರಚಿಸುವುದ ಕಂಡೆನಯ್ಯ. ಅದು ಹೇಗೆಂದಡೆ: ಅದಕೆ ಕಂಬ ಒಂದು, ತೊಲೆ ಮೂರು, ಆರು ಜಂತಿಗಳು, ಮೂವತ್ತಾರು ನೆಲೆಗಳ ಹೂಡಿ. ಒಂಬತ್ತು ಬಾಗಿಲಲ್ಲಿ ನವ ಬೊಂಬೆಗಳ ನಿಲಿಸಿ, ಅವಕ್ಕೆ ನವರತ್ನವ ಕೆತ್ತಿಸಿ, ಐದು ತೊಂಡಲಂಗಳ ಕಟ್ಟಿ, ಹವಳ ನೀಲ ರತ್ನ ಧವಳ ಮುತ್ತು ಮಾಣಿಕ್ಯದ ಗದ್ದುಗೆಯ ಮೇಲೆ ಆ ಅರಸನ ಮೂರ್ತಂಗೊಳಿಸಿ, ಸಪ್ತದ್ವೀಪಂಗಳಂ ರಚಿಸಿ, ಸೋಮವೀದಿ ಸೂರ್ಯವೀದಿಯ ಶೃಂಗಾರವ ಮಾಡಿ, ಆ ಅರಸಿಂಗೆ ಒಡ್ಡೋಲಗವಂ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ: ಪಾತಾಳಲೋಕವೆಂಬ ಠಾಣ್ಯದಲ್ಲಿ ತಾಳ, ಕಂಸಾಳ, ಘಂಟೆ, ಜಾಗಟೆ ಮೊದಲಾದ ಶಬ್ದಂಗಳು, ಮತ್ರ್ಯಲೋಕವೆಂಬ ಠಾಣ್ಯದಲ್ಲಿ ಕಿನ್ನರವೇಣು ತಂಬೂರವೇಣು ಕೈಲಾಸವೇಣುಗಳು ಮೊದಲಾದ ಶಬ್ದಗಳು, ಸ್ವರ್ಗಲೋಕವೆಂಬ ಠಾಣ್ಯದಲ್ಲಿ ಭೇರಿ ಡಮರು ತುಡುಮೆ ಡಿಂಡಿಮ ಮೊದಲಾದ ಶಬ್ದಂಗಳು, ತತ್ಪುರುಷವೆಂಬ ಲೋಕದಲ್ಲಿ, ಕೊಳಲು ನಾಗಸ್ವರ ಶಂಖ ಸನಾಯ ಬುರುಗು ನಪಿರಿ ಹೆಗ್ಗಾಳೆ ಚಿನಿಗಾಳೆ ಚಂದ್ರಗಾಳೆ ಮೊದಲಾದ ಶಬ್ದಂಗಳು, ಈಶಾನ್ಯಲೋಕವೆಂಬ ಠಾಣ್ಯದಲ್ಲಿ ಗೀತಪ್ರಬಂಧ ರಾಗಭೇದ ಮೊದಲಾದ ಶಬ್ದಂಗಳು, ಇಂತಿವು ಆ ಅರಸಿಂಗೆ ಒಡ್ಡೋಲಗವ ಮಾಡುವುದ ಕಂಡೆನಯ್ಯ. ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೇಣು, ರುದ್ರಂಗೆ ಮೃದಂಗ, ಈಶ್ವರಂಗೆ ಉಪಾಂಗ, ಸದಾಶಿವಂಗೆ ಗಾಯನ- ಇಂತೀ ಐವರು ಆ ಅರಸಿಂಗೆ ಗಂಧರ್ವರಾಗಿರ್ಪರು ನೋಡಾ. ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಇಂತೈವರು ನಾಂಟ್ಯವನಾಡುತಿರ್ಪರು ನೋಡಾ. ಒಬ್ಬ ಸತಿಯಳು ಆ ಅರಸಿಂಗೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆಯ ಮೇಲೆ, ಮಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು, ಪ್ರಾಣಲಿಂಗಿಯೆಂಬ ತುಪ್ಪವನೆರೆದು, ಶರಣನೆಂಬ ಸಕ್ಕರೆಯ ತಳೆದು, ಆ ಅರಸಿಂಗೆ ನೈವೇದ್ಯವ ಮಾಡುತಿರ್ಪಳು ನೋಡಾ. ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಪಂಚದೀಪಂಗಳ ರಚಿಸಿ, ಆ ಅರಸಿಂಗೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಹರಹರ ಶಿವಶಿವ ಜಯಜಯ ಕರುಣಾಕರ ಮತ್ಪ್ರಾಣನಾಥ ಮಹಾಪರಾತ್ಪರಬ್ರಹ್ಮ ಪ್ರಭು ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದ ಹರನ ತ್ರಿವಿಧನೇತ್ರದಿಂದುದಯವಾದ ತ್ರಿವಿಧವರ್ಣದ ಬಿಂದುಗಳ ಅನಾದಿಚಿತ್ಪ್ರಭು ಬಸವೇಶ್ವರಸ್ವಾಮಿಗಳು, ಆ ಬಿಂದುಗಳ ತಮ್ಮ ಅನಿಮಿಷದೃಷ್ಟಿಯಿಂದ ನಿರೀಕ್ಷಿಸಿ ಚಿದ್ಬಿಂದು ಚಿನ್ಮಂತ್ರ ಮಣಿಮಾಲಿಕೆಯೆಂದು ತತ್ವಸ್ಥಾನಂಗಳಲ್ಲಿ ಧರಿಸಿ, ಮಹಾಪ್ರಭು ನಿರಂಜನ ಜಂಗಮಕ್ಕೆ ಇಪ್ಪತ್ತೊಂದು ಲಕ್ಷ ಮಣಿಗಳಿಂದ ಶೂನ್ಯಸಿಂಹಾಸನಮಂಟಪವ ರಚಿಸಿ, ಆ ಸಿಂಹಾಸನದ ಮೇಲೆ ಮಹಾಪ್ರಭುನಿರಂಜನಜಂಗಮವ ಮೂರ್ತವ ಮಾಡಿಸಿ, ಮಹಾವೈಭವದಿಂದ ಸಕಲಮಹಾಪ್ರಮಥಗಣಂಗಳಿಗೆ ಆ ಚಿದ್ಬಿಂದುಗಳಮಲದಲ್ಲಿ ಅನಾದಿಗುರು, ಅನಾದಿಪ್ರಣಮವ ಸಂಬಂಧವ ಮಾಡಿ, ಮುಖಂಗಳಲ್ಲಿ ಅನಾದಿಲಿಂಗ ಪಾದೋದಕ ಪ್ರಸಾದವ ಸಂಬಂಧವ ಮಾಡಿ, ನಾಳದಲ್ಲಿ ಅನಾದಿಜಂಗಮ ಚಿತ್ಪ್ರಕಾಶ ಚಿದ್ಭಸಿತವ ಸಂಬಂಧವ ಮಾಡಿ, ಮಹಾ ಸಂತೋಷವೆಂಬ ಹರುಷಾನಂದ ಜಲವುಕ್ಕಿ, ಕಡಗ-ಕಂಠಮಾಲೆ-ಕರ್ಣಾಭರಣ-ಹಾರ-ಹೀರಾವಳಿಗಳ ಮಾಡಿ ಧರಿಸಿ, ಚಿಂತಾಮಣಿಯೆಂದು ಪ್ರಮಥಗಣ, ರುದ್ರಗಣ, ಷೋಡಶಗಣ, ತೇರಸಗಣ, ದಶಗಣ, ಮತ್ರ್ಯಲೋಕದ ಮಹಾಗಣ ಸಮೂಹಕ್ಕೆಲ್ಲ ಒರದು ಬೋಧಿಸಿದರು ನೋಡ. ಶ್ರೀಗುರುಲಿಂಗಜಂಗಮದ ಕರುಣಕಟಾಕ್ಷೆಯಿಂದುದಯವಾದ ಚಿನ್ಮಂತ್ರ ಮಾಲಿಕೆ ಪರಮಚಿಂತಾಮಣಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಶ್ರೀಗುರುವಿನ ಕರಗರ್ಭದಲ್ಲಿ ಉದಯವಾದ ಶರಣಸತಿ ನಾನು. ಶ್ರೀಗುರುವಿನ ಹೃದಯಗರ್ಭದಲ್ಲಿ ಉದಯವಾದ ಲಿಂಗಪತಿಗೆ ಎನ್ನ ಮದುವೆಯ ಮಾಡುವ ಕಾಲದಲ್ಲಿ ಸಹಸ್ರದಳಕಮಲವೆಂಬ ಸಾವಿರಕಂಬದ ಮಂಟಪವ ರಚಿಸಿ, ಆ ಮಂಟಪದ ಮಧ್ಯದಲ್ಲಿ ಪಂಚಪಾತ್ರವೆಂಬ ಪಂಚಮುದ್ರೆಯ ರಂಗವಲ್ಲಿಯ ತುಂಬಿ, ಆ ಪಂಚಮುದ್ರೆಯಲ್ಲಿ ಪಂಚಪ್ರಣವೆಂಬ ಪಂಚಕಲಶವ ಹೂಡಿ, ಆ ಪಂಚಕಲಶಂಗಳಿಗೆ ಸ್ವಾನುಭಾವಜ್ಞಾನವೆಂಬ ಸುರಗಿಯ ಸುತ್ತಿ, ಆ ಮಧ್ಯದಲ್ಲಿ ಎನಗೆ ಶೃಂಗಾರವ ಮಾಡಿದರೆಂತೆನಲು, ಸರ್ವಾಚಾರಸಂಪತ್ತೆಂಬ ಸೀರೆಯನುಡಿಸಿ, ಸುಜ್ಞಾನವೆಂಬ ಕುಪ್ಪಸವ ತೊಡಿಸಿ, ಸದ್ಭಕ್ತಿಯೆಂಬ ಬಳೆಯನಿಡಿಸಿ, ಏಕಭಾವದ ನಿಷೆ*ಯೆಂಬ ತಾಳಿಯ ಕಟ್ಟಿ, ನಿಜಮುಕ್ತಿಯೆಂಬ ಮೂಗುತಿಯನಿಟ್ಟು ಶಿವಮಂತ್ರವೆಂಬ ಕರ್ಣಾಭರಣವ ಧರಿಸಿ, ಸತ್ಕ್ರಿಯೆಯೆಂಬ ಪಾದಾಭರಣವ ಧರಿಸಿ, ಪರಮೇಶ್ವರನ ಚಿತ್‍ಪ್ರಕಾಶವೆಂಬ ಚಿದ್‍ವಿಭೂತಿಯನೆ ತಂದು, ಎನ್ನ ಲಲಾಟದಲ್ಲಿ ಪಟ್ಟವ ಕಟ್ಟಿ, ಸತಿಸಂಗವಗಲಬೇಡವೆಂದು ಎನ್ನ ಪತಿಯ ಸೆರಗ ತಂದು ಎನ್ನ ಸೆರಗಿಗೆ ಕೂಡಿಸಿ, ಷಟ್‍ಸ್ಥಲಬ್ರಹ್ಮಗಂಟನಿಕ್ಕಿ, ಪತಿಭಕ್ತಿಯಗಲದಿರೆಂದು ಎನ್ನ ಮುಂಗೈಯಲ್ಲಿ ಸಕಲಗಣಂಗಳ ಸಾಕ್ಷಿಯಾಗಿ ಬಿರುದಿನ ವೀರಕಂಕಣವ ಕಟ್ಟಿ, ಜಂಗಮದ ಪಾದತೀರ್ಥ ಪ್ರಸಾದವೆಂಬ ಭೂಮವನುಣಿಸಿ, ಮದುವೆಯ ಮಾಡಿದರಂದು. ಇಂದು ಎನಗೆ ಯೌವನವಾಯಿತ್ತು. ಏಳುನೆಲೆಯ ಮೇಲುಪ್ಪರಿಗೆಯ ಮೇಲೆ ಲೀಲೆಯಿಂದ ಕೂಡಿ ಸುಖಿಸಯ್ಯಾ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅನಾದಿಶರಣ ಜಂಗಮಲಿಂಗದ ಪಾದಪೂಜೆಯನಿಳುಹಿದ ಶರಣನು, ಪಾದೋದಕ ಸ್ಪರಿಶನೋದಕ ಭಸ್ಮೋದಕ ಸಂಬಂಧವಾದ ಪಾತ್ರೆಯ ಉದಕದೊಳಗೆ ಮೂಲಪ್ರಣಮವ ಲಿಖಿಸಿ, ಚಿದ್ಬಿಂದುವನಿಟ್ಟು ಪಡಕೊಂಬುವ ತಟ್ಟೆ ಬಟ್ಟಲೊಳಗೆ ಷಡಕ್ಷರಪ್ರಣಮವ ಸಪ್ತಕೋಟಿಮಹಾಮಂತ್ರಗಳಿಗೆ ಜನನಸ್ಥಾನವಾದ ಷಡುಪ್ರಣಮಗಳ ಪ್ರಥಮ ತಟ್ಟೆಯಲ್ಲಿ , ಪೂರ್ವಪಶ್ಚಿಮ ಉತ್ತರದಕ್ಷಿಣಕ್ಕೆ ಷಡ್ವಿಧ ರೇಖೆಗಳ ರಚಿಸಿ, ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನಮುಖಸ್ಥಾನವರಿದು, ಪಂಚದಿಕ್ಕುಗಳಲ್ಲಿ ಪಂಚಪ್ರಣಮವ ಲಿಖಿಸಿ, ದ್ವಿತೀಯ ಬಟ್ಟಲೊಳಗೆ ಮೂಲಪ್ರಣಮವ ಲಿಖಿಸಿ, ಪಾದಾಂಗುಷ*ದಡಿಯಲ್ಲಿಟ್ಟು, ತನ್ನ ವಾಮಕರದಂಗುಲಿಗಳೊಳಗೆ ಲಿಂಗಜಂಗಮ ಜಂಗಮಲಿಂಗ ಲಿಂಗಶರಣ ಬಸವಲಿಂಗ ಲಿಂಗಪ್ರಸಾದವೆಂಬ ಇಪ್ಪತ್ತೈದು ಪ್ರಣಮಗಳೆ ಪ್ರಭುಲಿಂಗಲೀಲೆಯೆಂದು ಆ ಕರಸ್ಥಲದಿರವ ಗುರುಮುಖದಿಂದರಿದು ತನ್ನ ತಾ ಮರೆದಿಪ್ಪವರೆ ನಿರವಯಮಹಾಂತರೆಂಬೆ ಕಾಣಾ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಪ್ರಥಮ ಕಾಲದಲ್ಲಿ ಒಬ್ಬ ಶಿವಶರಣನಿಪ್ಪ ನೋಡಾ. ಆ ಶಿವಶರಣನ ಅಂತರಂಗದಲ್ಲಿ ಮೂವರು ಕಂಡಿಕಾರರು ಇಪ್ಪರು ನೋಡಾ. ಆರುಮಂದಿ ಪೂಜಾರಿಗಳು, ಆರುಲಿಂಗಾರ್ಚನೆಯ ಮಾಡುತಿಪ್ಪರು ನೋಡಾ. ಏಕೋಭಾಮಿನಿಯೆಂಬ ಸತಿಯಳು ನವರತ್ನದ ಹರಿವಾಣಂಗಳಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ, ಪಂಚದೀಪಂಗಳ ರಚಿಸಿ, ಓಂ ನಮೋ ಓಂ ನಮೋ ಓಂ ನಮೋ ಎಂದು ಬೆಳಗುತಿಪ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸಹಸ್ರದಳಕಮಲಮಂಟಪದಲ್ಲಿ ಓಂಯೆಂಬ ತಾಯಿ ಒಬ್ಬ ಮಗನ ಹಡೆದು ಸಾಕಿ ಸಲುಹಿ ತನ್ನಂತೆ ಮಾಡಿಕೊಂಡು ತತ್ಪುರುಷಲೋಕದಲ್ಲಿರುವ ಈಶ್ವರನ ಮಗಳ ತಕ್ಕೊಂಡು, ನಿಟಿಲವೆಂಬ ಹಸೆಯಜಗುಲಿಯ ಮೇಲೆ ಮದಲಿಂಗ ಮೊದಲಗಿತ್ತಿಯ ಕುಳ್ಳಿರಿಸಿ, ಅಂತಃಕರಣಚತುಷ್ಟಯಂಗಳೆಂಬ ನಾಲ್ಕು ಕಂಬವ ನಿಲ್ಲಿಸಿ, ಮಹಾಜ್ಞಾನವೆಂಬ ಹಂದರವ ಹೊಂದಿಸಿ, ಪ್ರಾಣಾಪಾನ ವ್ಯಾನ ಉದಾನ ಸಮಾನ ನಾಗ ಕೂರ್ಮ ಕ್ರಕರ ದೇವದತ್ತ ಧನಂಜಯಯೆಂಬ ಹತ್ತು ತೋರಣವ ಕಟ್ಟಿ, ಚಂದ್ರ ಸೂರ್ಯರೆಂಬ ದೀವಿಗೆಯ ಮುಟ್ಟಿಸಿ, ಪಾತಾಳಲೋಕದಲ್ಲಿರ್ಪ ಭಕ್ತನ ಕರೆಸಿ, ಮತ್ರ್ಯಲೋಕದಲ್ಲಿರ್ಪ ಮಹೇಶ್ವರನ ಕರೆಸಿ, ಸ್ವರ್ಗಲೋಕದಲ್ಲಿರ್ಪ ಪ್ರಸಾದಿಯ ಕರೆಸಿ, ತತ್ಪುರುಷಲೋಕದಲ್ಲಿರ್ಪ ಪ್ರಾಣಲಿಂಗಿಯ ಕರೆಸಿ, ಈಶಾನ್ಯಲೋಕದಲ್ಲಿರ್ಪ ಶರಣನ ಕರೆಸಿ, ಈ ಪಂಚಮೂರ್ತಿಗಳಂ ಮಜ್ಜನಂಗೈಸಿ ಕುಳ್ಳಿರ್ದರು ನೋಡಾ ! ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೀಣೆ, ರುದ್ರಂಗೆ ಮೃದಂಗ, ಈಶ್ವರಂಗೆ ಶಂಖ, ಸದಾಶಿವಂಗೆ ಘಂಟೆ, ಈ ಪಂಚಮೂರ್ತಿಗಳು ನಾದವಾಲಗವಂ ಮಾಡುತಿಪ್ಪರು ನೋಡಾ ! ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಈ ಐವರು ನಾಂಟ್ಯವನಾಡುತ್ತಿಪ್ಪರು ನೋಡಾ ! ನಿಷ್ಪತಿಯೆಂಬ ಬಸವಣ್ಣನ ಮೇಲೆ ಮದಲಿಂಗ ಮೊದಲಗಿತ್ತಿಯ ಕುಳ್ಳಿರಿಸಿ, ಸೋಮಬೀದಿ ಸೂರ್ಯಬೀದಿಯಲ್ಲಿ ಮೆರವಣಿಗೆಯಂ ಮಾಡಿ, ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಫಾಶಕ್ತಿ ಆದಿಶಕ್ತಿ ಪರಾಶಕ್ತಿ ಈ ಐವರು ನವರತ್ನದ ಹರಿವಾಣಗಳಲ್ಲಿ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಸಪ್ತದೀಪಂಗಳ ರಚಿಸಿ ಓಂ ನಮೋ ಓಂ ನಮೋ ಶಿವಾಯಯೆಂದು ಬೆಳಗುತಿರ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನಂತರದಲ್ಲಿ ದಾಂತ್ಯಾದಿ ಸಾಧನಸಂಪನ್ನಾಗಿ, ಶ್ರೀಗುರುವಿಂ ಶಾಸನೀಯ ನಪ್ಪುದರಿಂ ಶಿಷ್ಯನಾದಾತ್ಮನು ಶುಭಕಾಲದೇಶಾದಿಗಳಂ ಪರೀಕ್ಷಿಸಿ ಬಳಿಕಾ ಚಾರ್ಯ ಸಂಪ್ರದಾಯಸಿದ್ಧನಾದ ಸಕಲಸದ್ಗುಣಸಹಿತನಾದ ಶ್ರೀಗುರುವನೆಯಿ, ಮತ್ತಮಾ ಗುರುವಿನನುಮತದಿಂ ಶಿವಪೂಜಾ ಪಾರಾಯಣರಾದ ಕೀರ್ತಿಮಯ ರಾದ ನಾಲ್ವರು ಋತ್ವಿಕ್ಕುಗಳಂ ಸ್ನಾನಧವಲಾಂಬರ ಆಭರಣ ಪುಷ್ಪಾದಿ ಗಳಿಂದಲಂ ಕರಿಸಿ, ಬಳಿಕಾ ಶ್ರೀಗುರುವಿನಾಜ್ಞೆಯಿಂ ತಾನಾ ರಾತ್ರೆಯಲ್ಲಿ, ಕ್ಷೀರಾಹಾರಿಯಾಗಿರ್ದು, ಮೇಲೆ ಪ್ರಭಾತಸಮಯದಲ್ಲಿ ದಂತಧಾವನಂಗೆಯ್ದು, ಮಂಗಲಸ್ನಾನಂ ಮಾಡಿ ಧವಲಾಂಬರವನುಟ್ಟು ಪೊದೆದು, ಭಸಿತೋದ್ಧೂಳನಂ ರಚಿಸಿ, ತ್ರಿಪುಂಡ್ರ ಧಾರಣಮಂ ವಿಸ್ತರಿಸಿ, ರುದ್ರಾಕ್ಷಮಾಲೆಗಳಂ ಧರಿಸಿ, ಸುವರ್ಣಾಭರಣಾದಿಗಳಿಂ ಸಿಂಗರಂಬಡೆದು, ಬಳಿಕಾಚಾರ್ಯನ ಸವಿೂಪಕ್ಕೆ ಬಂದು, ಭಯಭಕ್ತಿಯಿಂದಷ್ಟಮಂತ್ರಪೂರ್ವಕದಿಂ ವಿನಯವಿನಮಿತನಾಗಿ ಸುವರ್ಣ ಪುಷ್ಪಾದಿಗಳಿಂ ವಿತ್ತಾನುಸಾರಮಾಗಿ ಗುರುಪೂಜನಂಗೆಯ್ದು ಮರಳಿ ಗಂಧ ಪುಷ್ಪಾದಿಗಳಿಂ ಋತ್ವಿಕ್ಕುಗಳಂ ಭಜಿಸಿ, ಮೇಲೆ ಶ್ರೀಗುರು ಮುಖ್ಯಸಕಲಮಾಹೇಶ್ವರರಂ ವಂದಿಸಿ ವಿಭೂತಿ ವೀಳೆಯಂಗಳಂ ಸಮರ್ಪಿಸಿ, ಬಳಿಕ ಖನನ ದಹನ ಶೋಧನ ಸಂಪ್ರೋಕ್ಷಣ ಮರ್ದನ ಲೇಪನವೆಂಬ ಷಟ್ಕಮರ್ಂಗಳಿಂ ಸಾರಣೆ ಕಾರಣೆ ತಳಿರತೋರಣ ಕುಸುಮತೋರಣ ಸರವಿಸರ ಪಳವಳಿಗೆ ಧೂಪ ಧೂಮ್ನಾದಿಗಳಿಂ ಪರಿಶೋಭೆವಡೆದು, ಮನೋಹರಮಾದ ದೀಕ್ಷಾಮಂಟಪದಲ್ಲಿ ಗೋಚರ್ಮ ಮಾತೃಭೂಮಿಯಂ ಚೌಕಮಾಗಿ, ಗೋರೋಜನ ಗೋಮಯ ಗೋಮೂತ್ರ ಗೋದಧಿ ಘೃತ ಗೋಕ್ಷೀರಯೆಂಬ ಷಟ್ಸಮ್ಮಾರ್ಜನಂಗೆಯು, ಬಳಿಕಾ ಚೌಕಮಧ್ಯದಲ್ಲಿ ಪ್ರವಾಳ ಮೌಕ್ತಿಕ ಶುಭ್ರ ಪಾಷಾಣ ಸುವ್ಯರ್ಣ ಶ್ವೇತಾಭ್ರಕ ತಂಡುಲಾದಿಗಳ ಚೂರ್ಣಂಗಳಿಂದ ಷ್ಟದಳಕಮಲಮಂ ರಚಿಸಿ, ಮತ್ತದರಾ ವಿವರ:ಶಂಖ ಚಕ್ರ ಶೂಲ ಡಮರುಗ ಪರಶು ಘಂಟೆ ಛತ್ರ ಚಾಮರಮೃಷಭ ಚರಣಾದಿ ವಿಚಿತ್ರವರ್ಣಕಮಂ ತುಂಬುತ್ತದರ ಮೇಲೆ ಎಳ್ಳು ಜೀರಿಗೆ ಗೋದುವೆ ಅಕ್ಕಿ ಉದ್ದುಗಳೆಂಬ ಪಂಚಧಾನ್ಯವನಾದರೂ ಕೇವಲ ತಂಡುಲವನಾದರೂ ಮೂವತ್ತೆರಡಂಗುಲ ಪ್ರಮಾಣಿನ ಚತುರಸ್ರಮಾಗಿ ಹರಹುತ್ತದರ ಮೇಲೆ ತೀರ್ಥಾಂಬುಪೂರ್ಣ ಮಾದ ಸುವರ್ಣಾದಿ ನವೀನ ಪಂಚಕಳಶಂಗಳಂ ಪೂರ್ವದಕ್ಷಿಣ ಪಶ್ಚಿಮ ಉತ್ತರ ಮಧ್ಯ ಕ್ರಮದಿಂದಾಚಾರ್ಯನೆ ಸ್ಥಾಪಿಸುತ್ತಾ, ಕಳಶಂಗಳಂ ಬೇರೆ ಬೇರೆ ನೂತನ ವಸ್ತ್ರಂಗಳಿಂ ಸುತ್ತಿ, ನವಪಂಚತಂತುಗಳಿಂ ಪರಿವೇಷ್ಟಿಸಿ ಸುವರ್ಣಾದಿನಗಳನವ ರೊಳಿರಿಸಿ, ಬಳಿಕ್ಕಾಮ್ರಪಲ್ಲವ ದೂರ್ವಾಂಕುರ ಪೂಗ ಕುಸುಮ ನಾಗವಳಿ... (ಇಲ್ಲಿ ಒಂದು ಗರಿ ಕಳೆದುಹೋಗಿದೆ).
--------------
ಶಾಂತವೀರೇಶ್ವರ
ನಾದಬಿಂದುಕಳಾತೀತಲಿಂಗವನು, ಒಬ್ಬ ಪುರುಷನು ಉನ್ಮನಿಯ ಬಾಗಿಲ ಮುಂದೆ ನಿಂದು ಜಂಗಮರೂಪಿನಿಂದ ಲಿಂಗಧ್ಯಾನ ಮಹಾಧ್ಯಾನಮಂ ಮಾಡಿ, ಪಶ್ಚಿಮದಿಕ್ಕಿನಲ್ಲಿ ನಿಂದು ಚಿತ್ರಿಕನಾಗಿ ಎರಡು ಕಮಲಂಗಳ ರಚಿಸಿ, ಅಷ್ಟಕುಳಪರ್ವತದ ಮೇಲೆ ಲಿಂಗಾರ್ಚನೆಯಂ ಮಾಡಿ, ನವಸ್ಥಲದ ಗುಡಿಯ ಶಿಖರವಿಡಿದಿರಲು, ಒಸರುವ ಕೆರೆಬಾವಿಗಳು ಬತ್ತಿದವು ನೋಡಾ! ಸಪ್ತದ್ವೀಪಂಗಳ ರಚಿಸಿದ ನಿಶ್ಚಿಂತ ನಿರಾಕುಳವೆಂಬ ಸಿಂಹಾಸನದ ಮೇಲೆ ಪರಂಜ್ಯೋತಿಯೆಂಬ ಲಿಂಗವು ತೊಳಗಿ ಬೆಳಗುತಿರ್ಪುದು ನೋಡಾ! ಆ ಲಿಂಗದ ಬೆಳಗಿನೊಳಗೆ ಅನಂತಕೋಟಿ ಸೋಮಸೂರ್ಯರ ಬೆಳಗು ನೋಡಾ! ಆ ಲಿಂಗಕ್ಕೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆ,ಮಹೇಶ್ವರನೆಂಬ ಹರಿವಾಣ, ಪ್ರಸಾದಿಯೆಂಬ ನೈವೇದ್ಯ, ಪ್ರಾಣಲಿಂಗಿಯೆಂಬ ತೈಲ, ಶರಣನೆಂಬ ಮೇಲೋಗರ, ಐಕ್ಯನೆಂಬ ಭೋಜಿಯನು ಆ ಲಿಂಗಕ್ಕೆ ತೃಪ್ತಿಯನೆಯ್ದಿಸಿ, ಮನಜ್ಞಾನವೆ ವೀಳ್ಯೆಯ, ಸುಜ್ಞಾನವೆ ಅಡಕಿ, ಪರಮಜ್ಞಾನವೆ ಸುಣ್ಣ, ಮಹಾಜ್ಞಾನವೆ ತಾಂಬೂಲ, ಅಜಾಂಡಬ್ರಹಾಂಡ್ಮವೆ ಕುಕ್ಷಿ, ಅಲ್ಲಿಂದತ್ತ ಮಹಾಲಿಂಗದ ಬೆಳಗು, ಸ್ವಯಾನಂದದ ತಂಪು, ನಿರಂಜನದ ಸುಖ, ಪರಿಪೂರ್ಣವೆಂಬ ಆಶ್ರಮದಲ್ಲಿ ತೊಳಗಿ ಬೆಳಗುವ ಮಹಾಮಹಿಮಂಗೆ ಓಂ ನಮಃ ಓಂ ನಮಃ ಎನುತಿರ್ದೆನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದ ಪ್ರಕೃತಿ ಲಿಂಗದಲ್ಲಿ ಅಳಿದು, ಮನದ ಪ್ರಕೃತಿ ಅರಿವಿನಲ್ಲಿ ಅಳಿದು, ಜೀವಭ್ರಾಂತಿ ನಿಶ್ಚಿಂತಪದದಲ್ಲಿ ಅಳಿದು, ನಿಶ್ಶೂನ್ಯ ನಿರಾಮಯವಾದ ನಿವಾಸಕ್ಕೆ ಸದಾಚಾರವೆಂಬ ಕೆಸರುಗಲ್ಲನಿಕ್ಕಿ, ಸರ್ವಾಚಾರಸಂಪತ್ತೆಂಬ ಹೂಗಲ್ಲ ಮುಚ್ಚಿ, ಅಂತಃಕರಣಚತುಷ್ಟಯವೆಂಬ ನಾಲ್ಕು ಕಂಬಗಳಂ ನಿಲಿಸಿ, ಜ್ಞಾತೃವೆಂಬ ಭಿತ್ತಿಯ ಮೇಲೆ ಜ್ಞಾನವೆಂಬ ಶಿಖರಿಯನನುಗೊಳಿಸಿ, ಜ್ಞೇಯವೆಂಬ ಹೊನ್ನಕಳಶಮಂ ಶೃಂಗಾರಮಂ ಮಾಡಿ, ಬ್ರಹ್ಮರಂಧ್ರದ ಊಧ್ರ್ವದ್ವಾರವೆಂಬ ನಿಜದ್ವಾರಮಂ ಮಾಡಿ, ನಿರ್ವಯಲಲ್ಲಿ ನೆಲೆಗೊಳಿಸಿ, ಬಸವಪ್ರಿಯ ಕೂಡಲಚನ್ನಸಂಗನ ಶರಣ ಪ್ರಭುದೇವರ ಬರವಿಂಗೆ ಶೂನ್ಯಸಿಂಹಾಸನವಂ ರಚಿಸಿ, ಬರವ ಹಾರುತ್ತಿದನೆನ್ನ ಪರಮಗುರು ಬಸವಣ್ಣನು.
--------------
ಸಂಗಮೇಶ್ವರದ ಅಪ್ಪಣ್ಣ
ಅಯ್ಯ, ಪ್ರವೃತ್ತಿಮಾರ್ಗದಲ್ಲಿ ಚರಿಸುವ ಅಧೋ ಕುಂಡಲಿ ಭೇದವೆಂತೆಂದಡೆ : ದ್ವಾದಶಮಲಂಗಳೆ ಅಂಗವಾಗಿರ್ಪುದಯ್ಯ. ಷೋಡಶಮದಂಗಳೆ ಪ್ರಾಣವಾಗಿರ್ಪುದಯ್ಯ. ಸಪ್ತವ್ಯಸನಂಗಳೆ ಸಂಗವಾಗಿರ್ಪುದಯ್ಯ. ದುರ್ಗಣಂಗಳೆ ವಸ್ತ್ರಾಭರಣವಾಗಿರ್ಪುದಯ್ಯ. ಅನಾಚಾರಂಗಳೆ ನಡೆನುಡಿಯಾಗಿರ್ಪುದಯ್ಯ. ಅಸತ್ಯವೆ ವಾಹನವಾಗಿರ್ಪುದಯ್ಯ. ಕುಂಭಾವಂಗಳೆ ಪಿತಮಾತೆಯಾಗಿರ್ಪುದಯ್ಯ. ಕುಚಿತ್ತಗಳೆ ಬಂಧುಬಳಗವಾಗಿರ್ಪುದಯ್ಯ. ಕುಬುದ್ಧಿಗಳೆ ಒಡಹುಟ್ಟಿದರಾಗಿರ್ಪುದಯ್ಯ. ದುರಹಂಕಾರಗಳೆ ನೆಂಟರಾಗಿರ್ಪುದಯ್ಯ. ಕುಮನವೆ ಸ್ತ್ರೀಯಳಾಗಿರ್ಪುದಯ್ಯ. ಅಜ್ಞಾನವೆ ಮಂದಿರವಾಗಿರ್ಪುದಯ್ಯ. ದುರ್ಭಾವವೆ ಆಹಾರವಾಗಿರ್ಪುದಯ್ಯ. ಅರಿಷಡ್ವರ್ಗವೆ ದೈವವಾಗಿರ್ಪುದಯ್ಯ. ಷಡ್ಭಾವವಿಕಾರಂಗಳೇ ಅವಯವಂಗಳಾಗಿರ್ಪುದಯ್ಯ. ಆಸೆಯೆ ಧನಧಾನ್ಯವಾಗಿರ್ಪುದಯ್ಯ. ಇಂತು ಸಂಸಾರವೆಂಬ ಪಾಶದಲ್ಲಿ ಜನ್ಮ-ಜರೆ-ಮರಣಂಗಳಿಂದ ತಿರುಗುವ ಜೀವನೆ ಅಧೋಕುಂಡಲಿಸರ್ಪನೆನಿಸುವುದಯ್ಯ. ಆ ಸರ್ಪನೆ ಮೂಲಹಂಕಾರವೆಂಬ ಪಟ್ಟಣವ ರಚಿಸಿ ಜಿಹ್ವಾಲಂಪಟ-ಗುಹ್ಯಲಂಪಟದಲ್ಲಿ ಮುಳುಮುಳುಗಿ ತೇಲುತ್ತಿರ್ಪುದು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಇನ್ನಷ್ಟು ... -->