ಅಥವಾ

ಒಟ್ಟು 102 ಕಡೆಗಳಲ್ಲಿ , 23 ವಚನಕಾರರು , 76 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪರುಷದ ಪುತ್ಥಳಿಯ ಬಸುರಲ್ಲಿ ಅವಲೋಹ ಹುಟ್ಟುವುದೆ ಅಯ್ಯಾ ? ಮರಳಿ ಮರಳಿ ಪರುಷ ಮುಟ್ಟಿ ಸುವರ್ಣವಹರೆ, ಮುನ್ನ ಮುಟ್ಟಿತ್ತೆಲ್ಲಾ ಹುಸಿಯೇ ? ಇದು ಕಾರಣ ಕೂಡಲಚೆನ್ನಸಂಗಯ್ಯ ಮೆಚ್ಚ, ಭವಿಯ ಕಳೆದು ಸಂಬಂಧಿಗೆ ಸಂಗವಾದರೆ.
--------------
ಚನ್ನಬಸವಣ್ಣ
ಲಿಂಗೈಕ್ಯವಿಲ್ಲದವರನೊಲ್ಲ ಲಿಂಗಧಾರಿ. ಲಿಂಗಾರ್ಚನೆಯ ಕಾಲದಲ್ಲಿ ಪ್ರಸಾದ ಭೋಗದ ಕಾಲದಲ್ಲಿ, ಅಂಗದ ಮೇಲೆ ಲಿಂಗವಿಲ್ಲದ ಭವಿಯ ನೇಮಸ್ತನೆಂದುಕೊಂಡರೆ. ಪಂಚಮಹಾಪಾತಕವೆಂದುದಾಗಿ ಲಿಂಗೈಕ್ಯಂ ಲಿಂಗಧಾರೀಣಾಂ ಅಂಗಬಾಹ್ಯೇ ವಿಧೀಯತೇ. ಭವೀನಾಂ ಪಾಪದೃಷ್ಟೀನಾಂ ಪ್ರಚ್ಛನ್ನಪಟಮುತ್ತಮಂ ಎಂದುದಾಗಿ-ಭವಿಮಾರ್ಗ ನೇಮಸ್ತಗುಂಟಾಗಿ ಭವಿಯ ಸಂಗವ ಕಳೆದ ಲಿಂಗೈಕ್ಯರನಲ್ಲದೊಲ್ಲ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಹೆಂಡಿರು_ಮಕ್ಕಳಿಗೆ ಕುಲದೈವ ಮನೆದೈವವಲ್ಲದೆ ಎನಗೆ ಕುಲದೈವ ಮನೆದೈವವಿಲ್ಲೆಂಬ ಭಂಡನ ಭಕ್ತಿಯ ಪರಿಯ ನೋಡಾ. [ಆ] ಯುಕ್ತಿಶೂನ್ಯಂಗೆ ಮುಂದೆ ದೃಷ್ಟವ ಹೇಳಿಹೆನು: ತನ್ನ ಹೆಂಡತಿ ಮತ್ತೊಬ್ಬನ ಮೆಚ್ಚಿಕೊಂಡು ಹೋಗುತ್ತಿರೆ, ಹೋದರೆ ಹೋಗಲಿ ಎಂದು ಸೈರಿಸಬಲ್ಲಡೆ ತಾನವರೊಳಗಲ್ಲ. ಅಕಟಕಟಾ ಲೌಕಿಕಕ್ಕೆ ಆಜ್ಞೆಯುಂಟು ಪಾರಮಾರ್ಥಕ್ಕೆ ಆಜ್ಞೆಯಿಲ್ಲವೆ ! ಇದು ಕಾರಣ_ಕೂಡಲಚೆನ್ನಸಂಗಯ್ಯಾ ಭಕ್ತನಾಗಿ ಭವಿಯ ಬೆರಸುವ ಅನಾಚಾರಿಯ ತೋರದಿರಯ್ಯಾ.
--------------
ಚನ್ನಬಸವಣ್ಣ
ಶರಣ ಸಂಬಂಧವನರಿದ ಬಳಿಕ ಮರಳಿ ಭವಿಯ ಬೆರಸಲಾಗದು. ಬ್ರಹ್ಮೇತಿ ಭ್ರೂಣಹತ್ಯ ವೈತರಣಿ ದುರ್ಗತಿ ಪಂಚಮಹಾಪಾತಕದಿಂದದ್ಥಿಕ ನೋಡಾ. ಅಳುಪಿ ಭವಿಯೊಡನುಂಡಡೆ ಭಕ್ತನಲ್ಲ ಕೂಡಲಸಂಗಮದೇವಾ.
--------------
ಬಸವಣ್ಣ
ಭವಿಯ ತಂದು ಪೂವಾಶ್ರಯವ ಕಳೆದು ಭಕ್ತನ ಮಾಡಿದ ಬಳಿಕ, ಪೂರ್ವವನ್ನೆತ್ತಿ ನುಡಿವ ಶಿವದ್ರೋಹಿಯ ಮಾತ ಕೇಳಲಾಗದು. ಲಿಂಗವೆ ಗುರು, ಗುರುವೇ ಲಿಂಗವೆಂದು, ಹೆಸರಿಟ್ಟು ಕರೆವ ಗುರುದ್ರೋಹಿಯ ಮಾತ ಕೇಳಲಾಗದು. ಹೆಸರಿಲ್ಲದ ಅಪ್ರಮಾಣ ಮಹಿಮನನು ಹೆಸರಿಟ್ಟು ಕರೆವ ಲಿಂಗದ್ರೋಹಿಯ ಮಾತ ಕೇಳಲಾಗದು. ಪೂರ್ವವಿಲ್ಲದ ಶಿಷ್ಯ, ನೇಮವಿಲ್ಲದ ಗುರು, ಹೆಸರಿಲ್ಲದ ಲಿಂಗ ಈ ತ್ರಿವಿಧವನರಿಯದೆ ಕೆಟ್ಟು ಹೋದರು, ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಭವಿಯ ಕಳೆದು ಭಕ್ತನ ಮಾಡಿ ಅಂಗದ ಮೇಲೆ ಲಿಂಗವ ಧರಿಸಿ, ಗುರುರೂಪನ ಮಾಡಿದ ತನ್ನ ನಿಜಗುರುವಪ್ಪ ಪೂರ್ವಾಚಾರ್ಯನನತಿಗಳೆದು; ಯತಿ ಜತಿಗಳಿವರು ಅತಿಶಯರೆಂದು ಅವರಲ್ಲಿ ಹೊಕ್ಕು, ಪ್ರತಿದೀಕ್ಷೆಯ ಕೊಂಡವಂಗೆ ಗುರುದ್ರೋಹ ಕೊಟ್ಟವಂಗೆ ಲಿಂಗದ್ರೋಹ. ಇವರಿಬ್ಬರಿಗೂ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ ಜಂಗಮವಿಲ್ಲವಾಗಿ ಪಾದೋದಕವಿಲ್ಲ, ಪಾದೋದಕವಿಲ್ಲವಾಗಿ ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪತಿತರನು, ಗುರು ಚರ ಪರವೆಂದು ಆರಾಧಿಸಿದವಂಗೆ ಅಘೋರನರಕ ತಪ್ಪದು. ಅದೆಂತೆಂದಡೆ:``ಯಸ್ತು ಗುರು ಭ್ರಷ್ಟಾರಾರಾಧಿತಃ ತಸ್ಯ ಘೋರನರಕಃ' ಎಂದುದಾಗಿ_ ಇವಂದಿರನು ಗುರುಹಿರಿಯರೆಂದು ಸಮಪಂಕ್ತಿಯಲ್ಲಿ ಕೂಡಿ ಪ್ರಸಾದವ ನೀಡಿ, ಒಡಗೂಡಿಕೊಂಡು ನಡೆಯ ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಭಕ್ತನೆದ್ದು ಭವಿಯ ಮುಖವ ಕಂಡರೆ, gõ್ಞರವ ನರಕವೆಂಬರು. ಭಕ್ತನಾವನು ? ಭವಿಯಾವನು ? ಬಲ್ಲರೆ ಹೇಳಿ, ಅರಿಯದಿದ್ದರೆ ಕೇಳಿ. ಕಾಮ ಒಂದನೆಯ ಭವಿ, ಕ್ರೋಧ ಎರಡನೆಯ ಭವಿ, ಲೋಭ ಮೂರನೆಯ ಭವಿ, ಮೋಹ ನಾಲ್ಕನೆಯ ಭವಿ, ಮದ ಐದನೆಯ ಭವಿ, ಮತ್ಸರ ಆರನೆಯ ಭವಿ. ಇಂತೀ ಷಡ್ವಿಧ ಭವಿಯ ತಮ್ಮೆದೆಯೊಳಗೆ ಇಂಬಿಟ್ಟುಕೊಂಡು, `ನಾನು ಭವಿಯ ಮೋರೆಯ ಕಾಣಬಾರದು, ಎಂದು ಮುಖದ ಮೇಲೆ ವಸ್ತ್ರವ ಬಾಸಣಿಸಿಕೊಂಡು ತಿರುಗುವ ಕುನ್ನಿಗಳ ಮೆಚ್ಚುವನೆ ಕೂಡಲಚೆನ್ನಸಂಗಮದೇವ ?
--------------
ಚನ್ನಬಸವಣ್ಣ
ತನ್ನರಿದವಂಗೆ ಇದಿರೆಂಬುದಿಲ್ಲ, ತನ್ನರಿಯದವಂಗೆ ಇದಿರೆಂಬುದುಂಟು. ಅರುಹು ಮರಹು ಕುರುಹಳಿಯಿತ್ತು, ಬೆರಗಾಯಿತ್ತು. ಬೆರಗು ಬೆರಗಿನೊಳಗೆ ಕರಿಗೊಂಡಿತ್ತು ಇದೇನೊ? ಭ್ರಾಂತು ಭ್ರಾಂತನೆ ನುಂಗಿ ಗುಹೇಶ್ವರ ಭವಿಯ ಬೆಂಬತ್ತಿ ಭವಿಯಾದ ಕಾರಣ
--------------
ಅಲ್ಲಮಪ್ರಭುದೇವರು
ಭವಿಯ ಸಂಗವುಳ್ಳನ್ನಬರ ಭಕ್ತನಲ್ಲ, ಪರಧನ ಪರಸತಿಯಾಸೆಯುಳ್ಳನ್ನಬರ ಮಾಹೇಶ್ವರನಲ್ಲ, ಸಕಲ ಪದಾರ್ಥವನೆಲ್ಲ ಗ್ರಹಿಸುವನ್ನಕ್ಕ ಪ್ರಸಾದಿಯಲ್ಲ, ಪ್ರಾಣಲಿಂಗದಲ್ಲಿ ಸ್ವಸ್ಥಿರವಾಗದನ್ನಕ್ಕ ಪ್ರಾಣಲಿಂಗಿಯಲ್ಲ, ಕರಣಾದಿಗಳು ವರ್ತಿಸುವನ್ನಕ್ಕ ಶರಣನಲ್ಲ, ಜನನಮರಣವುಳ್ಳನ್ನಕ್ಕ ಐಕ್ಯನಲ್ಲ. ಕೂಡಲಚೆನ್ನಸಂಗಮದೇವರಲ್ಲಿ ಈ ಷಡುಸ್ಥಲದ ನಿರ್ಣಯವ ಬಸವಣ್ಣನೆ ಬಲ್ಲ.
--------------
ಚನ್ನಬಸವಣ್ಣ
ಮಡಿಲಲ್ಲಿ ಸುತ್ತಿದ ಹಾವಿನಂತೆ ಮಡಿಲಲ್ಲಿ ಕಟ್ಟಿದಡೇನು ? ಕೊರಳಲ್ಲಿ ಸುತ್ತಿದ ಹಾವಿನಂತೆ ಕೊರಳಲ್ಲಿ ಕಟ್ಟಿದಡೇನು ? ಕಳವು ಹಾದರ ಭವಿಯ ಸಂಗ ಅನ್ಯದೈವವ ಬಿಡದನ್ನಕ್ಕ ಲಿಂಗಭಕ್ತನೆನಿಸಲು ಬಾರದಯ್ಯ. ಅನಾಚಾರದಿಂದ ನರಕ, ಆಚಾರದಿಂದ ಸ್ವರ್ಗ. ಕೂಡಲಚೆನ್ನಸಂಗಯ್ಯನೊಲ್ಲ ಭೂಮಿಭಾರಕರ.
--------------
ಚನ್ನಬಸವಣ್ಣ
ಜಗದ ಕರ್ತನ ಕೈಯಲ್ಲಿ ಹಿಡಿದುಕೊಂಡು ಮನೆಮನೆ ತಪ್ಪದೆ ತಿರುಗುವ ತುಡುಗುಣಿಯಂತೆ ಕಾಡಲಾಗದು ಭಕ್ತನ, ಬೇಡಲಾಗದು ಭವಿಯ. ಕಾಡಿ ಬೇಡಿ ನೀವು ಒಲಿಸಿಕೊಂಡಡೆ, ಬೇಂಟೆಯ ಶ್ವಾನ ಮೊಲಕ್ಕೆ ಬಾಯಿದೆರೆದಂತೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಆರು ನೆಲೆ ಮಂಟಪದ ಕೋಣೆಯಲ್ಲಿ ಆರು ಜ್ಯೋತಿಯ ಮುಟ್ಟಿಸಿ ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ ಆರು ಲಿಂಗದ ಪ್ರತುಮೆಯಲ್ಲಿ ಆರು ಹಂತದ ಸೋಪಾನದಲ್ಲಿ ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ ಆ ದುರ್ಗದಲ್ಲಿ ಅರಸಂಗೆ ಕಾಲಿಲ್ಲದಾಕೆಯ ಮದುವೆಯ ಮಾಡಿ ತೂತಿಲ್ಲದ ಭೋಗಕ್ಕೆ ಕೂಡಿ ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ. ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ ಶರಣನಾಚರಣೆಯನೆಂತೆಂಬೆನು. ಇದ ಕಂಡು ನಡೆಯಲರಿಯದೆ, ತಮ್ಮ ಮನ ಬಂದಂತೆ ನಡೆವರು. ಶಿವಯೋಗಕ್ಕೆ ದೂರವಾದರು ನೋಡಾ. ಹೊನ್ನ ಕಟ್ಟಿ ವಿರಕ್ತನು ಬ್ಥಿಕ್ಷೆಯೆನಲಾಗದು. ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ ಆ ಭಕ್ತನು ಎದ್ದು ನಮಸ್ಕರಿಸಿ ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ ಶಿವಾರ್ಪಣವ ಮಾಡ[ಬ]ಹುದಲ್ಲದೆ. ಇದಲ್ಲದೆ, ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ. ಕೋಳಿ ಒಂದು ಕುಟುಕ ಕಂಡರೆ ತನ್ನ ಮರಿಗೆ ತೋರದುಳಿವುದೆ? ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕರೆಯದುಳಿವುದೆ? ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ ಜಂಗಮವ ಮರೆದವನಾದರೆ ಸತ್ತ ದನವಿಗೆ ನರಿ ಹೋದಂತಾಯಿತ್ತು. ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು. ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು? ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು ತಮ್ಮ ನಡೆ ನುಡಿಗಳ ಬಿಡದೆ ನಡೆವುದು. ಅದ ಕಂಡು ಕಣ್ದೆರೆದು ನೋಡಿದೆನಯ್ಯ. ಆವ ವರ್ತನೆಯಲ್ಲಿ ತಾನಿದ್ದರೇನು? ಆವ ಭಾವ ಹೇಂಗಿದ್ದರೇನು? ನಮ್ಮಾಚರಣೆ ನಮಗೆ ಶುದ್ಧ. ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ, ಅವನಿಗೆ ಬಂಧ ದೊರಕುವದಲ್ಲದೆ ನನಗೆ ದೊರಕದೆಂದು ತಾನು ನಿಶ್ಚೆಸಿದರೆ ತನಗೆ ದೊರಕಬಲ್ಲದೆ? ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ? ಪ್ರಾಣಿಹಿಂಸೆಯ ಮಾಡುವಾತನಾದರೆಯು ಅವನಿಗೆ ಕಲ್ಪಿತವೇತಕ್ಕೆ? ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ ಅವನಿಗೆ ಬಂದಿತಲ್ಲದೆ ಗಗನದ ಮಂಟಪದ ಮೇಲೆ ಊಧ್ರ್ವಮುಖದ ಗದ್ದುಗೆಯ ಮಾಡಿ ಮಹಾಪ್ರಕಾಶವೆಂಬ ಬೆಳಗಂ ತೋರಿ ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ ನಿರ್ಮಳವೆಂಬ ಪೂಜಾರಿಯಾಗಿರ್ಪನು. ಇದನರಿಯದೆ ತಮ್ಮ ಮನ ಬಂದಂತೆ ಇಪ್ಪವರ ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೇ? ಪಾಪವ ಮಾಡಿದನಾರು ಅವನ ಗೃಹಕ್ಕಲ್ಲದೆ ಅವನೊಂದಿಗೆ ಬೆರಸಿದವನಾದರು ಅವನಿಗೆ ಪಾಪ ಸಂಭವಿಸುವುದುಂಟೇ? ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ? ಒರ್ವಾನೊಬ್ಬನು ಭವಿಯ ಒಡನಾಡಲು ಅವನ ಪಾಪವು ಅವನಲ್ಲಿಪ್ಪುದಲ್ಲದೆ ಮಿಕ್ಕಿನ ಗೃಹಕ್ಕೆ ಸಂಬಂಧವೇನು? `ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ ಮಾಡಲಾಗದು'ಯೆಂಬುದು ಗುರುವಚನ. ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ. ಇಂತೀ ಭಾವಶುದ್ಧವುಳ್ಳಾತನು ಮತ್ರ್ಯಲೋಕಕ್ಕೆ ಮರಳಿ ಬಾರನೆಂಬುದು. ಶರಣ ಸಕಲವಿದ್ಯವ ಕಲಿತು ಫಲವೇನು? ನಿಂದ್ಯನೆ ದೊರಕೊಂಡಮೇಲೆ? ಹುಣ್ಣು ಹುಗಳು ಕೋಷ್ಠವಾಗಿರಲು, ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ. ಇಂದ್ರಿಯಸುಖಕ್ಕೆ ಹೋಗಿ ಬಿದ್ದು ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು. ತನ್ನ ಮನವು ಶುದ್ಧವಾದ ಮೇಲೆ, ಸಕಲ ಸುಖಂಗಳು ತನಗುಂಟಲ್ಲದೆ, ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ. ಇದನರಿದು, ಮುಂದುಗೊಂಡು ತಿರುಗುವ, ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಮಾತಂಗಿಯ ಹೊಳೆಯಲ್ಲಿ ಉತ್ತಮನ ನೆಳಲು ಸುಳಿದಡೆ ರೂಪು ಹೊಲೆಯನಾಗಬಲ್ಲುದೆ ಅಯ್ಯಾ? ಮತ್ರ್ಯಲೋಕದ ಮಾನವರೊಳಗೆ ಶರಣ ಸುಳಿದಡೆ ಶರಣ ಸೂತಕಿಯಾಗಬಲ್ಲನೆ ಅಯ್ಯಾ? ಮತ್ರ್ಯರ ಭವಿಯ ಮಾತ ವರ್ತಮಾನವೆಂಬ ಜೀವಿಗಳ ಆಗೆದೊಗೆಯದೆ ಮಾಬನೆ ಮಹಾಲಿಂಗ ಗಜೇಶ್ವರಯ್ಯ
--------------
ಗಜೇಶ ಮಸಣಯ್ಯ
ಹೊರಗಣ ಭವಿಯ ಕಳೆದೆವೆಂಬರು, ಒಳಗಣ ಭವಿಯ ಕಳೆಯಲರಿಯರು. ಕಾಮವೆಂಬುದೊಂದು ಭವಿ, ಕ್ರೋಧವೆಂಬುದೊಂದು ಭವಿ, ಲೋಭವೆಂಬುದೊಂದು ಭವಿ, ಮೋಹವೆಂಬುದೊಂದು ಭವಿ, ಮದವೆಂಬುದೊಂದು ಭವಿ, ಮಚ್ಚರವೆಂಬುದೊಂದು ಭವಿ, ಆಸೆಯೆಂಬುದೊಂದು ಭವಿ, ಆಮಿಷವೆಂಬುದೊಂದು ಭವಿ, ಹೊನ್ನೆಂಬುದೊಂದು ಭವಿ, ಹೆಣ್ಣೆಂಬುದೊಂದು ಭವಿ, ಮಣ್ಣೆಂಬುದೊಂದು ಭವಿ. ಇಂತೀ ಭವಿಯ ಕಳೆದುಳಿದ ಕೂಡಲಚೆನ್ನಸಂಗಾ ನಿಮ್ಮ ಶರಣ.
--------------
ಚನ್ನಬಸವಣ್ಣ
ಭವಿತನಕ್ಕೆ ಹೇಸಿ ಭಕ್ತನಾದ ಬಳಿಕ ಭವಿಯ ಸಂಗ ಮತ್ತೇಕಯ್ಯಾ ? ಕಾಮನು ಬಾಣವಕೊಂಡು, ತನು ತನುಮುಖಕ್ಕೆ ಎಚ್ಚರೆ ಭವಿ ಬಳಿಕವುಂಟು ನೋಡಾ ! ಕಾಮನ ಬಾಣವ ಮುರಿದು ಮಾಯದ ಸಂಚವ ಕೆಡಿಸಿ ಎನಗೆ ತನಗೆಂಬುದಳಿದ ಬಳಿಕ ಲಿಂಗಸಂಗಿ ಶರಣನಾಗಿಪ್ಪನು. ಭವ ಬಳಿಕೆಲ್ಲಿಯದೊ ? ಅಂತರಂಗದ ಅನುಭವವರಿದು ಮನದ ಆಗು ಹೋಗಬಲ್ಲರೆ, ಕೂಡಲಚೆನ್ನಸಂಗನಲ್ಲಿ ಲಿಂಗಸಂಗಿ ಶರಣನ್ಞಗಿಪ್ಪನು.
--------------
ಚನ್ನಬಸವಣ್ಣ
ಇನ್ನಷ್ಟು ... -->