ಅಥವಾ

ಒಟ್ಟು 100 ಕಡೆಗಳಲ್ಲಿ , 39 ವಚನಕಾರರು , 87 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆರು ಇಲ್ಲದ ಅರಣ್ಯದಲ್ಲೊಂದು ಬೀಜವಿಲ್ಲದ ವೃಕ್ಷ ಪುಟ್ಟಿತ್ತು. ಆ ವೃಕ್ಷಕ್ಕೆ ಹೂವಿಲ್ಲದೆ ಕಾಯಿಯಾಯಿತ್ತು; ಕಾಯಿಯಿಲ್ಲದೆ ಹಣ್ಣಾಗಿತ್ತು. ಗಾಳಿಯಿಲ್ಲದೆ ಗಂಧವ ತೋರಿತ್ತು. ಆ ವಾಸನಕ್ಕೆ ಪಕ್ಕವಿದಲ್ಲದ ಹಕ್ಕಿ ಹಾರಿಹೋಗಿ ಹಣ್ಣನೆ ಕಚ್ಚಿತ್ತು. ಆ ಹಣ್ಣಿನ ರಸ ಭೂಮಿಯಮೇಲೆ ಸುರಿಯಲು ಭೂಮಿ ಬೆಂದು, ಸಮುದ್ರ ಬತ್ತಿ, ಅರಸನ ಮಾರ್ಬಲವೆಲ್ಲ ಪ್ರಳಯವಾಗಿ, ಅರಸು ಪ್ರಧಾನಿ ಸತ್ತು ಅರಸಿ ಅರಮನೆಯಲ್ಲಿ ಬಯಲಾಗಿ, ಎತ್ತ ಹೋದರೆಂದರಿಯಬಲ್ಲರೆ ಗುಹೇಶ್ವರಲಿಂಗವು ತಾನೆಯೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ವಾರುವ ಮುಗ್ಗಿದಡೆ ವಾಗೆದಲ್ಲಿ ಆದರಿಸಬೇಕಲ್ಲದೆ, [ಅ]ದ ಗಾರುಮಾಡಿ ಹೊಯ್ವರೆ ಮಿಡಿಯನು? ಮಾರಾರಿಯ ಶರಣರು ಮೀರಿ ಒಂದು ನುಡಿದಡೆ, ದೂರು ಮಾಡುವರೆ ? ನೀರರದ ಅಡಿಯೊಳಗಾದವನ ಸೂರೆಗೊಂಬವರುಂಟೆ? [ಲೇಸ] ತೋರುವರಯ್ಯಾ [ಐ]ದರ ಬೇಗೆಯಲಿ ಬೆಂದು ಗಾರಾದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಲೆಯ ಮನೆಯೊಳಗಣ ಕಿಚ್ಚು ಅಲೆದಾಡದ ಮುನ್ನ, ಊರ ಮುಂದೆ ನಾಲ್ವರು ಸತ್ತು ಒಳಗೆ ಬೇವುದ ಕಂಡೆ. ಊರು ಬೆಂದು, ಕಿಚ್ಚಿನ ಊನ್ಯವ ಕೇಳಬಂದ ರಕ್ಷಿ, ಹುಲಿಯನೇರಿಕೊಂಡು ಕಳೆದುಳಿದುದಕ್ಕೆ ತಾನೊಡತಿಯಾಗಿ ಊರುಂಬಳಿಯನುಂಬುದ ಕಂಡೆ. ಅತ್ತುದೊಂದಲ್ಲದೆ ಹೆಣ ಬಂದು ಕಚ್ಚದಿದೇನು ಚೋದ್ಯದ ದುಃಖ ಹೇಳಾ ! ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕಾಮದಲ್ಲಿ ಅಳಿದು, ಕ್ರೋಧದ ದಳ್ಳುರಿಯಲ್ಲಿ ಬೆಂದು, ಮೋಹದ ಸಮುದ್ರದಲ್ಲಿ ಮುಳುಗಿ, ನಾನಾ ಭವರಸಂಗಳನುಂಡು ಘೋರಸರಾಗಬೇಡ. ಅರಿ, ಐಘಟದೂರ ರಾಮೇಶ್ವರಲಿಂಗವ.
--------------
ಮೆರೆಮಿಂಡಯ್ಯ
ಮಾಯೆಯಿಂದಾದ ಸಂಸಾರದಡವಿಯೊಳಗೆ ತಿರಿಗಿ ತಿರಿಗಿ ಘಾಸಿಯಾಗಿ, ಈಷಣತ್ರಯವೆಂಬ ಮೋಹಿನಿಯ ಕೈವಶವಾಗಿ, ಅರಿಗಳೊಡನೆ ಪುದುವಾಳಾಗಿ, ಆಶೆಯಾಮಿಷ ತಾಮಸಂಗಳಿಂದ ನೊಂದು, ತಾಪತ್ರಯಗಳಿಂದ ಬೆಂದು, ಸಂಸಾರ ಸರ್ವಮುಖವಾಗಿ ನುಂಗಿ ಉಗುಳುತ್ತಿರಲೆಂತಕ್ಕೆ ನಿಮ್ಮ ನೆನಹೆಂಬ ಕಿಚ್ಚು ಭವಾರಣ್ಯವ ಸುಡಲು, ಕರ್ಮದ ಕೈಬೆಂದು ಮಾಯಾಪಾಶವುರಿದು, ಮಲ ನಿರ್ಮಲವಾಗಿ, ಬಿಂದು ಭುವನವ ಹೊದ್ದದೆ, ತೀರೋಧಾನ ನಿರೋಧಾನವೆಯ್ದಿ, ನಿಮ್ಮಲ್ಲಿ ಅಚ್ಚೊತ್ತಿದಂತಿರಿಸಯ್ಯಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕತ್ತಲಾಗಿ ಹೋಯಿತ್ತು ನಿತ್ಯ ಸೂರ್ಯನಿಂದೆ. ಸತ್ಯವೆಂದಲ್ಲಿ ಮಿಥ್ಯ ಸಾಕಾರ ಸಂದಳಿಸಿ ಬೆಂದು ನಿಂದವು. ತಾಯಿ ತಂದೆಯಾಗಿ ನಿಂದ ನಿಲವ, ನಾನೆಂದು ಕಂಡು ಬದುಕುವೆನಯ್ಯಾ ನಿರಂಜನ ಚನ್ನಬಸವಲಿಂಗಾ ?
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನು ಆ ಆತ್ಮನು ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ ಪಂಚಭೂತಂಗಳಂ ಪಂಚಭೂತಾಂಶಿಕಮಂ ಕೂಡಿಕೊಂಡು ದೇಹವಾಗಿ ಬೆಳೆದು, ಆಧ್ಯಾತ್ಮಿಕ, ಆದ್ಥಿದೈವಿಕ, ಆದ್ಥಿಭೌತಿಕವೆಂಬ ತಾಪತ್ರಯಂಗಳಿಂದ ನೊಂದು ಬೆಂದು ಪುಣ್ಯಪಾಪ ವಶದಿಂದ ಜೀವನಾಗಿ, ಅಂಡಜ, ಸ್ವೇದಜ, ಉದ್ಬಿಜ, ಜರಾಯುಜವೆಂಬ ಚೌರಾಶಿಲಕ್ಷ ಜೀವಜಂತುಗಳ ಯೋನಿಯಲ್ಲಿ ಬಂದು, ಹುಟ್ಟದ ಯೋನಿಯಿಲ್ಲ, ಮೆಟ್ಟದ ಭೂಮಿಯಿಲ್ಲ, ಉಣ್ಣದ ಆಹಾರವಿಲ್ಲ, ಕಾಣದ ಸುಖದುಃಖವಿಲ್ಲ. ಇದಕ್ಕೆ ಈಶ್ವರ ಉವಾಚ : ``ನಾನಾಯೋನಿಸಹಸ್ರಾಣಿ ಗತ್ವಾ ಚೈವಂತು ಮಾಯಯಾ | ಆಹಾರಂ ವಿವಿಧಂ ಭುಕ್ತ್ವಾ ಪೀತ್ವಾ ಚ ವಿವಿಧಸ್ತನಾನ್ ||'' ಇಂತೆಂದುದಾಗಿ, ಅಪ್ರಮಾಣಕೂಡಲಂಸಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಜಲನಿಧಿ ತಟಾಕದಲ್ಲಿ ಕನ್ನವನಿಕ್ಕಿ ಉದಕವ ತಂದು ಮಜ್ಜನಕ್ಕೆರೆವರೆಲ್ಲ ಶೀಲವಂತರೆ ? ಭವಿಪಾಕವನೊಲ್ಲೆವೆಂದು ಭುಂಜಿಸುವ ಉದರಪೋಷಕರೆಲ್ಲ ಶೀಲವಂತರೆ? ವರಲ್ಲ, ನಿಲ್ಲು ಮಾಣು. ಅಶನವರತು ವ್ಯಸನ ಬೆಂದು ವ್ಯಾಪ್ತಿಗಳು ಅಲ್ಲಿಯೆ ಲೀಯವಾಗಿ ಅಷ್ಟಮದ ಬೆಂದು ನಷ್ಟವಾಗಿ, ತನುಗುಣ ಸಮಾಧಾನವಾದಡೆ ಕೂಡಲಚೆನ್ನಸಂಗಯ್ಯನಲ್ಲಿ ಅಚ್ಚಶೀಲವೆಂಬೆ
--------------
ಚನ್ನಬಸವಣ್ಣ
ಮುಪ್ಪುರದರಸಿಂಗೆ ಮುಖವೈದು, ಬಾಯಿ ಹದಿನಾರು, ಹಲ್ಲು ಇನ್ನೂರ ಹದಿನಾರು ನೋಡಾ. ಆರೂಢನಂಗದಲ್ಲಿ ಅರ್ಭುತದ ಕಿಚ್ಚು ಹುಟ್ಟಲು ಮೂರೂರು ಬೆಂದು, ಮುಖವೈದು ಕೆಟ್ಟು, ಬಾಯಿ ಹದಿನಾರು ಮುಚ್ಚಿ, ಇನ್ನೂರಹದಿನಾರು ಹಲ್ಲು ಮುರಿದವು ನೋಡಾ. ಮುಪ್ಪರದರಸ ನುಂಗಿದ್ದ ಕಿಚ್ಚು ನಿಷ್ಪತ್ತಿಯಾಗಲು ಲಿಂಗಾಂಗ ಸಂಯೋಗವಾಯಿತ್ತು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮೊಲನ ಕಂಡರೆ ಶ್ವಾನಂಗಳು ತುಡುಕುವಂತೆ. ಹೊನ್ನು ಹೆಣ್ಣು ಮಣ್ಣು ಮೂರೆಂಬ ಮೊಲಕ್ಕೆ ಪಂಚೇಂದ್ರಿಯಂಗಳೆಂಬ ಬೇಟೆಯ ನಾಯಿಗಳು ತೊಡರುತ ಎನ್ನಬಿಡು ತನ್ನ ಬಿಡು ಎನ್ನುತ್ತಲಿವೆ. ನೊಂದೆನಿವರ ದಾಳಿಯಲ್ಲಿ, ಬೆಂದೆನಿವರ ದಾಳಿಯಲ್ಲಿ. ನೊಂದು ಬೆಂದು ಕುಂದಿ ಕುಸಿವನ `ಕಂದ ಬಾ' ಎಂದು ಎನ್ನ ತಲೆದಡಹೊ ಭವವಿರಹಿತ ತಂದೆ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಜಗತ್‍ಸೃಷ್ಟನಹ ಅಜನ ಕೊಂಬು ಮುರಿಯಿತ್ತು. ಧರೆಯ ಚಂದ್ರಸೂರ್ಯರಿಬ್ಬರೂ ನೆಲಕ್ಕೆ ಬಿದ್ದರಲ್ಲಾ ! ಉದಯ ನಿಂದಡೆ ಅಸ್ತಮಾನವಹುದು. ಊರು ಬೆಂದು ಉಲುಹಳಿದುದು. _ಇದೇನು ಸೋಜಿಗವೊ ! ದೇವ ಸತ್ತ ದೇವಿ ಕೆಟ್ಟಳು, ಆನು ಬದುಕಿದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆದಿಬಿಂದು ಬೀಜವನರಿದು, ಬಿಂದೋಪರಿ ಅನಾಹತನಾದವನರಿದು, ಆ ಪ್ರಣವ ಸೂತ್ರವಿಡಿದು ಶಿವಧ್ಯಾನವ ಮಾಡಲು, ಆ ಧ್ಯಾನಾಗ್ನಿಯಿಂದ, ಯೋಜನಾಂತರಶೈಲಸಮಾನಪಾಪ, ಬೆಂದು ಹೋದುದು ನೋಡಯ್ಯಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೆಂಬ, ನಿಜಪದವಿಯನೈದುವುು ಬಳಿಕ ನೋಡಯ್ಯಾ.
--------------
ಸ್ವತಂತ್ರ ಸಿದ್ಧಲಿಂಗ
ಮರನುರಿದು ಬೆಂದು ಕರಿಯಾದ ಮತ್ತೆ ಉರಿಗೊಡಲಾದುದ ಕಂಡು, ಆತ್ಮ ಪರಿಭವಕ್ಕೆ ಬಪ್ಪುದಕ್ಕೆ ಇದೆ ದೃಷ್ಟ. ಕರಿ ಭಸ್ಮವಾದ ಮತ್ತೆ ಉರಿಗೊಡಲಿಲ್ಲ, ಅರಿಕೆ ನಿಂದಲ್ಲಿ ಆತ್ಮ ಪರಿಭವಕ್ಕೆ ಬರಲಿಲ್ಲ, ಉರಿಯೊಳಗೊಡಗೂಡಿದ ತಿಲಸಾರ ತುಪ್ಪ ಮರಳಿ ಅಳೆತಕ್ಕುಂಟೆ ? ವಸ್ತುವಿನಲ್ಲಿ ಕರಿಗೊಂಡ ಚಿತ್ತ, ತ್ರಿವಿಧಮಲಕ್ಕೆ ಹೊರಳಿ ಮರಳುವದೆ ? ಈ ಗುಣ ನಡೆ ನುಡಿ ಸಿದ್ಧಾಂತವಾದವನ ಇರವು, ಗಾರುಡೇಶ್ವರಲಿಂಗವ ಕೂಡಿದವನ ಕೂಟ.
--------------
ಉಪ್ಪರಗುಡಿಯ ಸೋಮಿದೇವಯ್ಯ
ಪಂಚಮಹಾಪಾತಕಂಗಳ ಮಾಡಿದವನಾದಡಾಗಲಿ, ಉಪಪಾತಕಂಗಳ ಕೋಟ್ಯನುಕೋಟಿ ಮಾಡಿದವನಾದಡಾಗಲಿ, ಹತ್ತುಸಾವಿರ ಬ್ರಹ್ಮಹತ್ಯವ ಮಾಡಿದವನಾದಡಾಗಲಿ, ಒಬ್ಬ ಶಿವಭಕ್ತನ ದರ್ಶನವಾದಲ್ಲಿ ಆ ಪಾತಕಂಗಳು ಬೆಂದು ಭಸ್ಮವಾಗಿ ಹೋಗುವವು ನೋಡಾ ! ಅದೆಂತೆಂದೊಡೆ :ಲಿಂಗಪುರಾಣೇ- ``ಉಪಪಾತಕ ಕೋಟೀಶ್ಚ ಬ್ರಹ್ಮಹತ್ಯಾಯುತಾನಿ ಚ | ದಹತ್ಯಶೇಷಪಾಪಾನಿ ಶಿವಭಕ್ತಸ್ಯ ದರ್ಶನಂ ||'' ಎಂದುದಾಗಿ, ಶಿವಭಕ್ತನೇ ಶಿವನು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುವ ಪಡದು, ಧನವ ಗಳಿಸಬೇಕೆಂದು ಮನುಜರ ಮನೆಯ ಬಾಗಿಲಿಗೆ ಹೋಗಿ, ಮನಬಂದ ಪರಿಯಲ್ಲಿ ನುಡಿಸಿಕೊಂಡು, ಮನನೊಂದು ಬೆಂದು ಮರುಗುತ್ತಿರಲಾರೆ. ಸಕಳೇಶ್ವರದೇವಾ, ನೀ ಕರುಣಿಸಿ ಇದ ಠಾವಿನಲ್ಲಿ ಇಹಂಥಾ ಪರಮಸುಖ ಎಂದು ದೊರಕೊಂಬುದೊ ?
--------------
ಸಕಳೇಶ ಮಾದರಸ
ಇನ್ನಷ್ಟು ... -->