ಭಕ್ತಿಯಿಲ್ಲದೆ ಗುರುಪೂಜೆಯ ಅನಂತಕಾಲ ಮಾಡಿದರೂ
ವ್ಯರ್ಥವೆಂದಿತ್ತು ಗುರುವಚನ.
ಭಕ್ತಿಯಿಲ್ಲದೆ ಧ್ಯಾನ ಮೌನ ಗಂಗಾಸ್ನಾನ ಜಪತಪ
ನೇಮ-ನಿತ್ಯ ವ್ಯರ್ಥವೆಂದಿತ್ತು ಗುರುವಚನ.
ಜಂಗಮತೃಪ್ತಿಯಿಲ್ಲದೆ ಲಿಂಗಕೆ
ಪುಷ್ಪ ಪತ್ರಿಯನೇರಿಸಿ ಫಲವೇನು ?
ಲಿಂಗಕ್ಕೆ ಜಂಗಮವೆ ಬಾಯಿಯೆಂದಿತ್ತು ಗುರುವಚನ.
ವೃಕ್ಷಕ್ಕೆ ಭೂಮಿ ಬಾಯಿಯೆಂದು ನೀರನೆಸಿದರೆ
ಮೇಲೆ ಪಲ್ಲವಿಸಿತ್ತು ನೋಡಾ !
ಸ್ಥಾವರಕ್ಕೆ ಜಂಗಮವೆ ಬಾಯಿಯೆಂದು ಪಡಿಪದಾರ್ಥವ
ನೀಡಿದರೆ ಶಿವಂಗೆ ತೃಪ್ತಿಯೆಂದಿತ್ತು ರಹಸ್ಯ.
ಸಾಕ್ಷಿ : ``ವೃಕ್ಷಸ್ಯ ವದನಂ ಭೂಮಿಃ ಸ್ಥಾವರಸ್ಯತು ಜಂಗಮಃ ||
ಮಮ ತೃಪ್ತಿರುಮಾದೇವಿ ಉಭಯೋರ್ಲಿಂಗ ಜಂಗಮತಾ ||''
ಎಂದುದಾಗಿ,
``ಸ್ಥಾವರಾರ್ಪಿತನೈವೇದ್ಯಾತ್ ನ ತೃಪ್ತಿರ್ಮಮ ಪಾರ್ವತಿ |
ಜಂಗಮಾರ್ಪಿತ ನೈವೇದ್ಯಾತ್ ಮಮ ತೃಪ್ತಿಶ್ಚ ಸರ್ವಥಾ |
ಎಂದುದಾಗಿ,
ಈ ಶ್ರುತ ದೃಷ್ಟ ಅನುಮಾನವ ಕಂಡು,
ಮಾಡುವಾತನೆ ಸದ್ಭಕ್ತನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.