ಏಳು ಕಮಲದ ಮೇಲೆ ಎಲೆಯಿಲ್ಲದ ವೃಕ್ಷದಲ್ಲಿ ಫಲವಿಲ್ಲದ ಹಣ್ಣಿನ ರುಚಿಯ ತಲೆಯೆ ಬಾಯಾಗುಣಬಲ್ಲರೆ, ನೆಲ ಬೆಂದಿತ್ತು, ತಲೆ ಸತ್ತಿತ್ತು. ಇದರ ಹೊಲಬ ಬಲ್ಲಾತನೇ ಪರಶಿವಯೋಗಿ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
ಪಂಚಶತಕೋಟಿ ಯೋಜನದಾಚೇಲಿ ನೆಲವಿಲ್ಲದ ಭೂಮಿಯ ಕಂಡೆ. ಆ ಭೂಮಿಯಲ್ಲಿ ನೀರಿಲ್ಲದೆ ಒಂದು ವೃಕ್ಷ ಪುಟ್ಟಿ ಬೇರಿಲ್ಲದೆ ಬೆಳೆವುದ ಕಂಡೆ. ಶಾಖೆ ಪರ್ಣ ಮೊಗ್ಗೆಯಿಲ್ಲದೆ ಕುಸುಮ ತೋರುವುದ ಕಂಡೆ. ಫಲವಿಲ್ಲದ ಹಣ್ಣು ರಸಪೂರಿತವಾಗಿ ವೃಕ್ಷದ ಕೊನೆಯಲ್ಲಿರುವುದ ಕಂಡೆ. ಆ ಹಣ್ಣಿಗೆ ಹಲವರು ಹವಣಿಸಿ ಕಾಣದೆ ಹಿಂದಕ್ಕೆ ಬಿದ್ದುದ ಕಂಡೆ. ಆ ಹಣ್ಣನು ಕೈಕಾಲು ಕಣ್ಣು ತಲೆಯಿಲ್ಲದ ಅಧಮನು ಸೇವಿಸಿ ಸತ್ತುದ ಕಂಡೆ. ಸತ್ತ ಸುದ್ದಿಯ ಕೇಳಿ ಸತ್ತರು ನಿಮ್ಮವರು. ಸಾಯದೆ ಬದುಕಿದರು ಎಮ್ಮಡಿಯ ಮಕ್ಕಳು ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.