ಅಥವಾ

ಒಟ್ಟು 23 ಕಡೆಗಳಲ್ಲಿ , 13 ವಚನಕಾರರು , 23 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶಿವಶಿವಾ, ಈ ಲೋಕದ ಮಾನವರನೇನೆಂಬೆನಯ್ಯಾ. ಅದೆಂತೆಂದಡೆ: ನಾವು ಗುರುಗಳು, ನಾವು ಲಿಂಗಾಂಗಿಗಳು, ನಾವು ಜಂಗಮಲಿಂಗಿಗಳು, ನಾವು ಸದಾಚಾರಸದ್ಭಕ್ತರು ಎಂಬರಯ್ಯ. ಇಂತಿವರ ನಡತೆ ಆಚರಣೆಯೆಂತಾಯಿತೆಂದಡೆ: ಒಬ್ಬಾನೊಬ್ಬ ಜಾತಿಹಾಸ್ಯಗಾರನು ವೇಷವ ಧರಿಸಿಕೊಂಡು ಪುರಜನರ ಮೆಚ್ಚಿಸಿ, ತನ್ನ ಒಡಲಹೊರವಂತೆ, ವಿಭೂತಿ ರುದ್ರಾಕ್ಷಿ ಕಾವಿ ಕಾಷಾಂಬರ ಮುಂತಾಗಿ ವೇಷವ ಧರಿಸಿ, ಗುರು-ಹಿರಿಯರು ಜಂಗಮಲಿಂಗಿಗಳೆಂದು ನಾಮವ ತಾಳಿ, ಭಕ್ತರಿಗೆ ಸದಾಚಾರಮಾರ್ಗವ ಹೇಳೇವು, ಸದಮಲದ ಬೆಳಗ ತೋರೇವು ಎಂದು ಧನಿಕರಿದ್ದೆಡೆಗೆ ಬಂದು, ನಿಮಗೆ ಉಪದೇಶವ ಹೇಳಿ, ಲಿಂಗಾಂಗಸಮರಸವ ತೋರಿ, ಮಾಂಸಪಿಂಡವಳಿದು ಮಂತ್ರಪಿಂಡವ ಮಾಡೇವು ಎಂದು ಹೇಳಿ, ಆ ಭಕ್ತರ ಕೈಯಲ್ಲಿ ಅನ್ನ ಹಚ್ಚಡ ಹೊನ್ನು ವಸ್ತ್ರವ ತೆಗೆದುಕೊಂಡು ಆ ಜಾತಿಕಾರನ ಹಾಗೆ ಇವರು ತಮ್ಮ ಉದರಾಗ್ನಿ ಅಡಗಿಸಿಕೊಂಬುವರಲ್ಲದೆ ಇಂತಪ್ಪ ಗುರು-ಶಿಷ್ಯರ, ದೇವ-ಭಕ್ತರೆಂಬುಭಯರ ಆಚರಣೆಯೆಂತಾಯಿತ್ತೆಂದೊಡೆ- ಹಂದಿಯ ಬಾಯೊಳಗಿನ ತುತ್ತ ನಾಯಿ ಬಂದು ಕಚ್ಚಿದಂತೆ. ಅದೆಂತೆಂದೊಡೆ: ಜೀವನಬುದ್ಭಿಯುಳ್ಳ ಗುರುವೆಂದಾತ ಹಂದಿ, ಕರಣಬುದ್ಧಿಯುಳ್ಳ ಶಿಷ್ಯನೆಂಬಾತ ನಾಯಿ. ಇಂತಪ್ಪ ಗುರು-ಶಿಷ್ಯರ ಸಮ್ಮೇಲನವು ಹುಟ್ಟುಗುರುಡನ ಕೈಯ ಕಟ್ಟಿ ಲೊಟ್ಟಿಗಣ್ಣವ ಪಿಡಿದು ಕಾಣದೆ ಕಮ್ಮರಿಬಿದ್ದಂತಾಯಿತಯ್ಯ. ಅದೇನು ಕಾರಣವೆಂದಡೆ, ಗುರುವಿನಂತ ಶಿಷ್ಯನರಿಯ, ಶಿಷ್ಯನಂತ ಗುರುವರಿಯ, ಜಂಗಮನಂತ ಭಕ್ತನರಿಯ, ಭಕ್ತನಂತ ಜಂಗಮವರಿಯದ ಕಾರಣ. ಉಪಾದ್ಥಿಯುಳ್ಳವರು ಗುರುವಲ್ಲ ಶಿಷ್ಯರಲ್ಲ. ಉಪಾದ್ಥಿಯುಳ್ಳವರಲ್ಲಿ ಉಪದೇಶವ ಹಡಿಯಬೇಕೆಂಬವರ, ಉಪಾದ್ಥಿಯುಳ್ಳವರಿಗೆ ಉಪದೇಶವ ಹೇಳಬೇಕೆಂಬವರ, ಈ ಉಭಯಭ್ರಷ್ಟ ಹೊಲೆಮಾದಿಗರ ಸೂರ್ಯಚಂದ್ರರು ಅಳಿದುಹೋಗುವ ಪರಿಯಂತರವು ಹಂದಿ ನಾಯಿಯ ನರಕದಲ್ಲಿಕ್ಕದೆ ಬಿಡನೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೊರವೇಷದ ವಿಭೂತಿ ರುದ್ರಾಕ್ಷಿಯನು ಧರಿಸಿಕೊಂಡು ವೇದ ಶಾಸ್ತ್ರ ಪುರಾಣ ಆಗಮದ ಬಹುಪಾಠಿಗಳು; ಅನ್ನ ಹೊನ್ನು ವಸ್ತ್ರವ ಕೊಡುವವನ ಬಾಗಿಲ ಕಾಯುವ ಮಣ್ಣ ಪುತ್ಥಳಿಯಂತಹ ನಿತ್ಯನಿಯಮದ ಹಿರಿಯರುಗಳು. ಅದೆಂತೆಂದಡೆ: ``ವೇದವೃದ್ಧಾ ಅಯೋವೃದ್ಧಾಃ ಶಾಸ್ತ್ರವೃದ್ಧಾ ಬಹುಶ್ರುತಾಃ ಇತ್ಯೇತೇ ಧನವೃದ್ಧಸ್ಯ ದ್ವಾರೇ ತಿಷ್ಠಂತಿ ಕಿಂಕರಾಃ _ಎಂದುದಾಗಿ ಎಲ್ಲ ಹಿರಿಯರು ಲಕ್ಷ್ಮಿಯ ದ್ವಾರಪಾಲಕರು_ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಧರೆಯ ಮೇಲೆ ಹರಡಿರುವ ಶಿಲೆಯ ತಂದು ಕಲ್ಲುಕುಟಿಕ ಕಟೆದು ಲಿಂಗವ ಮಾಡಿದರೆ ಅದೆಂತು ಲಿಂಗವೆಂಬೆನಯ್ಯ ? ಅದು ಶಿಲೆಯು. ಆ ಲಿಂಗವ ತಂದು, ಗುರುವಿನ ಕೈಯಲ್ಲಿ ಕೊಟ್ಟು ದೀಕ್ಷೆ ಉಪದೇಶವಂ ಮಾಡಿ, ಆ ಲಿಂಗವ ಧರಿಸಿಕೊಂಡು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಿ, ಶಿಲಾಲಿಖಿತವ ತೊಡೆದು ಕಲಾಭೇದವನರಿದು ಇಷ್ಟಲಿಂಗ ಪ್ರಾಣಲಿಂಗ ಭಾವಲಿಂಗವೆಂಬ ಲಿಂಗತ್ರಯಗಳನರಿದು ಇರಬಲ್ಲ ಶರಣರ ಎನಗೊಮ್ಮೆ ತೋರಿಸಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸೆಜ್ಜೆ ಶಿವದಾರ ವಸ್ತ್ರದಲ್ಲಿ ಹುದುಗಿಸಿ ಲಿಂಗವ ಧರಿಸಿಕೊಂಡು ಅಂಗಲಿಂಗಸಾಹಿತ್ಯವಾಗಿ, ಭಕ್ತರೆಂದು ಮಜ್ಜನಕ್ಕೆರೆವ ಭಂಗಿತರ ಮಾತ ಕೇಳಲಾಗದು, ಬಾಲನುಡಿ. ತನುಗುಣವಿರಹಿತವಾಗಿ ಮಜ್ಜನಕ್ಕೆರೆಯಲರಿಯರಾಗಿ ಭಕ್ತರೆನ್ನೆ. ಮನವೇ ಸೆಜ್ಜೆ, ನೆನಹೇ ಶಿವದಾರವಾಗಿ, ಸಮತೆಯೇ ಲಿಂಗವಾಗಿ ತನ್ನ ಮರೆದು ಮಜ್ಜನಕ್ಕೆರೆವರ ಭಕ್ತರೆಂಬೆನಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಹಜ್ಜೆ ಇಲ್ಲದ ಪುರುಷ, ಆ ಸಜ್ಜನಸ್ತ್ರೀ, ಷಡುಪಂಚಮರುದ್ರ, ಕಾಳಾಂಧರ, ವಾರಿದ್ಥಿ, ಆತ್ಮಾನಾತ್ಮ ಇಂತಿವೇನೂ ಇಲ್ಲದಂದು, ಅತ್ತತ್ತಲಿರ್ದ ಬೆಳಗಿನ ಚಿನ್ಮೂರ್ತಿಯಲ್ಲಿ ಚಿದ್ವಿಭೂತಿ ಇದ್ದಿತ್ತು. ಆ ಚಿದ್ವಿಭೂತಿ ಚಿದ್ಘನಾತ್ಮಕ ರತ್ನವಾಯಿತ್ತು. ಆ ಚಿದ್ಘನಾತ್ಮಕ ರತ್ನವೆ ಚಿಚ್ಛಕ್ತಿಯಾಯಿತ್ತು. ಆ ಚಿಚ್ಛಕ್ತಿ ಸಕಲಚೈತನ್ಯಾತ್ಮಕ ಶರಣನಾಯಿತ್ತು. ಆ ಶರಣನೊಳಗೊಂದು ಕೋಳಿ ದ್ವಾದಶವರ್ಣದ ಸುನಾದವಾಗಿ ಕೂಗಿತ್ತು. ಆ ಸುನಾದಂಗಳ ಝೇಂಕಾರವು ಚತುರ್ದಶ ಸಾವಿರಕ್ಷರ ರೂಪಕವಾಗಿ, ಆ ಶರಣನ ಸಪ್ತಚಕ್ರದ ಕಮಲದೊಳಗೆ ಪ್ರವೇಷ್ಟಿಸಿ, ಗೋಪ್ಯವಾಗಿದವು. ಆ ಶರಣನಲ್ಲಿ ಷಡುಶಿವಮೂರ್ತಿಗಳುದಯಿಸಿದರು. ಆ ಮೂರ್ತಿಗಳಲ್ಲಿ ಷಡುಸ್ಥಲ ಸತ್ಕ್ರಿಯೆಗಳು ತೋರಿದವು. ಅವರೆಲ್ಲರಲ್ಲಿ ಅನಂತಕೋಟಿ ಮೂರ್ತಿಗಳ ಮೇಲೆ, ತೊಂಬತ್ತಾರುಸಾವಿರ ಶಿವಮೂರ್ತಿಗಳುದಯಿಸಿದರು. ಆ ಶರಣನ ನಾಡಿಗಳೊಳಗೆ ಚಿದ್ಮಣಿ, ಚಿದ್ಭಸ್ಮ, ಚಿಲ್ಲಿಂಗ ಇಂತಿವೆಲ್ಲ ತೋರಿದವು. ಇವನೆಲ್ಲವ, ಶಿವಗಣಂಗಳಲ್ಲಿ ಆ ಶರಣನು, ಉಪದೇಶಮಾರ್ಗದಿಂ ಧರಿಸಿಕೊಂಡು, ನೂರೊಂದರ ಮೇಲೆ ನಿಂದು, ದ್ವಾದಶ ಸಪ್ತವಿಂಶತಿ ಛತ್ತೀಸದ್ವಯವೆ ಎಪ್ಪತ್ತು ಶತಾಷ್ಟವೆಂಬ ಪಂಚಜಪಮಾಲೆಗಳಿಗೆ ಹನ್ನೆರಡು ಸಿಡಿಲ ಸುನಾದವನೊಡದು, ತ್ರಿ ಆರುವೇಳೆ ಕೂಡಿ, ನೂರೆಂಟಕ್ಕೆ ಸಂದಾನಿಸಿ ಜಪಿಸುತ್ತಿಪ್ಪ ಅನಂತ ಪ್ರಮಥರಂ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಕಂಡು ಸುಖಿಯಾದೆನು.
--------------
ಸಂಗಮೇಶ್ವರದ ಅಪ್ಪಣ್ಣ
ಪೃಥ್ವಿಯಲ್ಲಿ ಹುಟ್ಟಿದ ಶಿಲೆಯ ತಂದು ಕಲ್ಲುಕುಟಿಕನಿಂದ ಕಟಿಸಿ, ಕರಿಯ ಕೆಸರ ಮೆತ್ತಿ, ಪಾತಕಗುರುವಿನ ಕೈಯಲ್ಲಿ ಪ್ರೇತಲಿಂಗವ ಕೊಟ್ಟು, ಭೂತದೇಹಿಗಳು ಪಡಕೊಂಡು ಅಂಗೈಯಲ್ಲಿ ಆ ಲಿಂಗವ ಕುಳ್ಳಿರಿಸಿ, ಕರುವಿಲ್ಲದ ಎಮ್ಮಿಗೆ ಮುರುವು ಹಾಕಿದಹಾಗೆ, ಅಡವಿಯೊಳಗಣ ಕಾಡುಮರದ ಹಸರು ತಪ್ಪಲು ತಂದು ಆ ಲಿಂಗಕ್ಕೆ ಹಾಕಿದರೆ ಸಾಕೆನ್ನದು ಬೇಕೆನ್ನದು. ಅನ್ನ ನೀರು ತೊರೆದರೆ ಒಂದಗುಳನ್ನ ಸೇವಿಸದು. ಒಂದು ಹನಿ ಉದಕವ ಮುಟ್ಟದು. ಇಂತಪ್ಪ ಲಿಂಗವ ಪೂಜಿಸಿ ಮರಣಕ್ಕೆ ಒಳಗಾಗಿ ಹೋಹಲ್ಲಿ ಪ್ರಾಣಕ್ಕೆ ಲಿಂಗವಾವುದು ಎಂದರಿಯದೆ ತ್ರಿಲೋಕವೆಲ್ಲ ಪ್ರಳಯವಾಗಿ ಹೋಗುತಿರ್ಪುದು ನೋಡಾ. ಅದೇನು ಕಾರಣವೆಂದಡೆ : ತಮ್ಮ ನಿಜವ ಮರೆದ ಕಾರಣ. ಲಿಂಗದ ಗೊತ್ತು ತಮಗಿಲ್ಲ, ತಮ್ಮ ಗೊತ್ತು ಲಿಂಗಕ್ಕಿಲ್ಲ. ಇಂತಪ್ಪ ಆಚಾರವೆಲ್ಲ ಶೈವಮಾರ್ಗವಲ್ಲದೆ ವೀರಶೈವಮಾರ್ಗ ಮುನ್ನವೇ ಅಲ್ಲ. ಅದೆಂತೆಂದೊಡೆ : ಆದಿ ಅನಾದಿಯಿಂದತ್ತತ್ತಲಾದ ನಿಃಕಲಚಿದ್ರೂಪಲಿಂಗವನು ನಿಃಕಲಸದ್ರೂಪಾಚಾರ್ಯನಲ್ಲಿ ಪಡಕೊಂಡು ಆತ್ಮನೆಂಬ ಅಂಗದ ಮೇಲೆ ಅರುಹೆಂಬ ಲಿಂಗವ ಧರಿಸಿಕೊಂಡು, ಸದ್ಭಾವವೆಂಬ ಹಸ್ತದಲ್ಲಿ ಸುಜ್ಞಾನವೆಂಬ ಲಿಂಗವ ಮೂರ್ತಗೊಳಿಸಿ, ಪರಮಾನಂದವೆಂಬ ಜಂಗಮದ ಜಲದಿಂ ಮಜ್ಜನಕ್ಕೆರದು, ಮಹಾಜ್ಞಾನ ಕುಸುಮದಿಂ ಪುಷ್ಪವ ಧರಿಸಿ, ಪೂಜಿಸಬಲ್ಲರೆ ಭವಹಿಂಗುವದು. ಮುಕ್ತಿಯೆಂಬುವದು ಕರತಳಾಮಳಕವಾಗಿ ತೋರುವದು ಎಂದನಯ್ಯ ನಿಮ್ಮ ಶರಣ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಲಿಂಗಾಂಗಸಾಮರಸ್ಯವನರಿಯದೆ ಖಂಡಿತ ಬುದ್ಧಿಯಿಂದೆ ಲಿಂಗವ ಬೇರಿಟ್ಟುಕೊಂಡು ಸಕಲಭೋಗೋಪಭೋಗವನು ಅರ್ಪಿಸಿದೆವೆಂಬ ಭಂಗಗೇಡಿಗಳ ಮಾತ ಕೇಳಲಾಗದು. ಅದೆಂತೆಂದೊಡೆ : ಆ ಲಿಂಗಕ್ಕೆ ಶರಣನಂಗದ ಮಜ್ಜನಸುಖವಲ್ಲದೆ ಬೇರೆ ಮಜ್ಜನಸುಖವುಂಟೆ ? ಆ ಲಿಂಗಕ್ಕೆ ಶರಣನ ಲಲಾಟದ ಶ್ರೀವಿಭೂತಿ ಗಂಧಾಕ್ಷತೆಯ ಶೃಂಗಾರವಲ್ಲದೆ ಬೇರೆ ಶೃಂಗಾರವುಂಟೆ ? ಆ ಲಿಂಗಕ್ಕೆ ಶರಣನ ಕರ್ಣದಲ್ಲಿಯ ಪಂಚಮಹಾವಾದ್ಯದ ಕೇಳಿಕೆಯಲ್ಲದೆ ಬೇರೆ ಕೇಳಿಕೆಯುಂಟೆ ? ಆ ಲಿಂಗಕ್ಕೆ ಶರಣನ ಜಿಹ್ವೆಯಲ್ಲಿಯ ಷಡುರಸಾನ್ನದ ನೈವೇದ್ಯವಲ್ಲದೆ ಬೇರೆ ನೈವೇದ್ಯವುಂಟೆ ? ಆ ಲಿಂಗಕ್ಕೆ ಶರಣನ ಕಂಗಳಲ್ಲಿಯ ನಾನಾ ವಿಚಿತ್ರರೂಪಿನ ವಿನೋದವಲ್ಲದೆ ಬೇರೆ ವಿನೋದವುಂಟೆ ? ಆ ಲಿಂಗಕ್ಕೆ ಶರಣನ ತ್ವಕ್ಕಿನಲ್ಲಿಯ ವಸ್ತ್ರಾಭರಣದ ಅಲಂಕಾರವಲ್ಲದೆ ಬೇರೆ ಅಲಂಕಾರವುಂಟೆ ? ಆ ಲಿಂಗಕ್ಕೆ ಶರಣನ ಘ್ರಾಣದಲ್ಲಿಯ ಸುಗಂಧ ಪರಿಮಳವರ್ಪಿತವಲ್ಲದೆ ಬೇರೆ ಅರ್ಪಿತವುಂಟೆ ? ಆ ಲಿಂಗಕ್ಕೆ ಶರಣನ ಪರಮ ಹೃದಯಕಮಲವೆ ನಿಜವಾಸವಲ್ಲದೆ ಬೇರೆ ನಿಜವಾಸವುಂಟೆ ? ಇಂತೀ ಶರಣಸನ್ನಿಹಿತಲಿಂಗ, ಲಿಂಗಸನ್ನಿಹಿತ ಶರಣನೆಂಬುದನರಿಯದೆ ಅನಂತಕಾಲ ಲಿಂಗವ ಧರಿಸಿಕೊಂಡು ಲಿಂಗಾಂಗಿಯೆನಿಸಿಕೊಂಡಡೇನು ? ಅದು ಪಶುವಿನ ತೊಡೆಯಲ್ಲಿ ಬರೆದ ಮುದ್ರೆಯಂತೆ ಕಂಡೆಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ವರ ವೇಷದ ವಿಭೂತಿ ರುದ್ರಾಕ್ಷಿಯ ಧರಿಸಿಕೊಂಡು ವೇದ ಶಾಸ್ತ್ರ ಪುರಾಣಾಗಮದ ಬಹುಪಾಠಿಗಳು ಅನ್ನ ಹೊನ್ನು ವಸ್ತ್ರವ ಕೊಡುವನ ಬಾಗಿಲಕಾಯಿದು ಮಣ್ಣ ಪುತ್ಥಳಿಯಂತೆ ಅನಿತ್ಯನೇಮದ ಹಿರಿಯರುಗಳು. ಅದೆಂತೆಂದಡೆ: ವೇದವೃದ್ಧಾ ವಯೋವೃದ್ಧಾ ಶಾಸ್ತ್ರವೃದ್ಧಾ ಬಹುಶ್ರುತಾಃ ಇತ್ಯೇತೆ ಧನವೃದ್ಧಸ್ಯ ದ್ವಾರೇ ತಿಷ*ಂತಿ ಕಿಂಕರಾಃ ಎಲ್ಲಾ ಹಿರಿಯರುಗಳು ಲಕ್ಷ್ಮಿಯ ದ್ವಾರಪಾಲಕರಾದರಯ್ಯ. ಅರುಹಿಂಗೀ ವಿಧಿಯೇ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಆಧಾರದಲ್ಲಿ ಬ್ರಹ್ಮ ಸ್ವಾಯತವಾದ, ಸ್ವಾದಿಷಾ*ನದಲ್ಲಿ ವಿಷ್ಣು ಸ್ವಾಯತವಾದ. ಮಣಿಪೂರಕದಲ್ಲಿ ರುದ್ರ ಸ್ವಾಯತವಾದ, ಅನಾಹತದಲ್ಲಿ ಈಶ್ವರ ಸ್ವಾಯತವಾದ. ವಿಶುದ್ಧಿಯಲ್ಲಿ ಸದಾಶಿವ ಸ್ವಾಯತವಾದ, ಆಜ್ಞೆಯಲ್ಲಿ ಉಪಮಾತೀತ ಸ್ವಾಯತವಾದ._ ಇವರೆಲ್ಲರು; ಬಯಲಲ್ಲಿ ಹುಟ್ಟಿ ಬಯಲಲ್ಲಿ ಬೆಳೆದು, ಬಯಲಲಿಂಗವನೆ ಧರಿಸಿಕೊಂಡು, ಬಯಲನೆ ಆರಾಧಿಸಿ ಬಯಲಾಗಿ ಹೋಯಿತ್ತ ಕಂಡೆ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಇನ್ನು ಬ್ರಹ್ಮಾಂಡಕಪಾಲದೊಳಗಣ ಸೃಷ್ಟಿಯ ವಿಸ್ತೀರ್ಣವದೆಂತೆಂದಡೆ : ಆ ಭುವನಂಗಳು ಇಹ ಕ್ರಮವೆಂತೆಂದಡೆ : ಬ್ರಹ್ಮಾಂಡಕಪಾಲ ಸಹಸ್ರಕೋಟಿ ಯೋಜನ ಪ್ರಮಾಣು. ಅದರೊಳಗಾಗಿ ಅತಳಲೋಕ ಇಪ್ಪತ್ತೊಂದುಕೋಟಿ ಯೋಜನದಲ್ಲಿ ಶಿವನ ಆಜ್ಞಾಶಕ್ತಿಯಿಂದ ಆಧಾರಶಕ್ತಿ ಇಹಳು. ಆ ಆಧಾರಶಕ್ತಿಯ ಉದ್ದ ಗಾತ್ರದೊಳಗಾಗಿ ಐದು ಸಾವಿರಕೋಟಿ ಯೋಜನದಲ್ಲಿ ವಿತಳಲೋಕವಿಹುದು. ಆ ವಿತಳಲೋಕ ಆರುಸಾವಿರಕೋಟಿ ಯೋಜನಪ್ರಮಾಣು. ಆ ವಿತಳಲೋಕದ ಮೇಲೆ ಐದುಸಾವಿರಕೋಟಿ ಯೋಜನದಲ್ಲಿ ಸುತಳಲೋಕವಿಹುದು. ಆ ಸುತಳಲೋಕ ಅಗ್ನಿ ಜ್ವಾಲೆಯಾಗಿಹುದು. ಆ ಸುತಳಲೋಕದೊಳು ಕಾಲಾಗ್ನಿ ರುದ್ರರಿಹರು. ಆ ಸುತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ರಸಾತಳಲೋಕವಿಹುದು. ಆ ರಸಾತಳಲೋಕ ಬಯಲಾಗಿಹುದು. ಆ ರಸಾತಳಲೋಕದ ಮೇಲೆ ಐದುಸಾವಿರಕೋಟಿಯೋಜನದಲ್ಲಿ ತಳಾತಳಲೋಕವಿಹುದು. ಆ ತಳಾತಳಲೋಕ ಮಹಾಗ್ನಿ ಜ್ವಾಲೆಯಾಗಿಹುದು. ಆ ತಳಾತಳಲೋಕದ ಮೇಲೆ ಮಹಾತಳಲೋಕವಿಹುದು. ಆ ಮಹಾತಳಲೋಕದ ಮೇಲೆ ಪಾತಾಳಲೋಕವಿಹುದು. ಆ ಪಾತಾಳಲೋಕ ಎಂಬತ್ತು ಸಾವಿರ ಕೋಟಿ ಯೋಜನ ಭೂಮಿಯಮೇಲೆ ಜಲಮಯವಾಗಿಹುದು. ಆ ಜಲಮಯವಾಗಿಹ ಪಾತಾಳಲೋಕವು ಆಧಾರಶಕ್ತಿಯ ಆಜ್ಞೆಯಿಂದ ಹದಿನಾರು ದಿಕ್ಕುಗಳಲ್ಲಿಯೂ ಹದಿನಾರುಮಹಾಭೂತಂಗಳು ಸುತ್ತಿಹವು. ಹದಿನಾರುಭೂತಗಣಂಗಳ ನಡುವೆ ಕೂರ್ಮಾಂಡನೆಂಬ ಮಹಾಕೂರ್ಮನ ಅಗಲವದೆಂತೆಂದಡೆ : ಐದುಸಾವಿರಕೋಟಿ ವಿಸ್ತೀರ್ಣದಗಲ ನೋಡಾ. ಆ ಕೂರ್ಮಾಂಡನೆಂಬ ಮಹಾಕೂರ್ಮನ ಉದ್ದ ಹದಿನೆಂಟುಸಾವಿರಕೋಟಿಯೋಜನ ಪರಿಪ್ರಮಾಣುದ್ದದ ಬೆನ್ನ ಮೇಲೆ ಶತಕೋಟಿಯೋಜನ ಪರಿಪ್ರಮಾಣುದ್ದದ ಭೂಮಿಯ ಮೇಲೆ ಐನೂರು ಶಿರಸ್ಸನುಳ್ಳ ಶೇಷನು, ನಾಲ್ವತ್ತುಸಾವಿರ ಶೇಷನು ವಳಯಾಕೃತವಾಗಿ ಸುತ್ತಿರಲು, ಆ ನಾಲ್ವತ್ತುಸಾವಿರ ಶೇಷನ ಒಳಯಾಕೃತದಲ್ಲಿ, ಮಧ್ಯದಲ್ಲಿ ಶೇಷಾಹಿಯೆಂಬ ಮಹಾನಾಗ ಇಪ್ಪುದು. ಆ ಶೇಷಾಹಿಯೆಂಬ ಮಹಾನಾಗವು ಎಂಟುಸಾವಿರಕೋಟಿ ಯೋಜನಪ್ರಮಾಣು ನೀಳವು. ಹತ್ತುಸಾವಿರಕೋಟಿ ಸುತ್ತು ವಿಸ್ತೀರ್ಣವು. ಐದುಸಾವಿರ ಕೋಟಿ ಅಗಲದ ಹೆಡೆಯು. ಸ್ವರ್ಗ ಜ್ಯೋತಿಪ್ರಕಾಶದ ದೇಹವನುಳ್ಳುದಾಗಿ, ಸಹಸ್ರ ಶಿರ, ದ್ವಿಸಹಸ್ರಾಕ್ಷವು. ಆ ಸಹಸ್ರ ಶಿರದಲ್ಲಿ ಮಾಣಿಕ್ಯದ ಬಟ್ಟುಗಳ ಧರಿಸಿಕೊಂಡು ಮಹಾಗ್ನಿಜ್ವಾಲೆಯನುಳ್ಳ ಮಹಾಶೇಷನಿಹನು. ಐನೂರು ಶಿರಸ್ಸನುಳ್ಳ ಶೇಷ ನೂರುನಾಲ್ವತ್ತುಸಾವಿರ ಶೇಷನ ಸುತ್ತುವಳಯಾಕೃತವಾಗಿ ಅಷ್ಟದಿಗ್ಗಜಂಗಳಿಹವು. ಆ ಅಷ್ಟದಿಗ್ಗಜಂಗಳ ಮೇಲೆ ವಿಸ್ತೀರ್ಣ ಒಂದೊಂದು ಗಜಂಗಳು ನವಕೋಟಿಯೋಜನಪ್ರಮಾಣದುದ್ದವು, ಸಾವಿರಕೋಟಿಯೋಜನಪ್ರಮಾಣದಗಲವು, ಶತಕೋಟಿಸಾವಿರಯೋಜನಪ್ರಮಾಣದ ನೀಳವನುಳ್ಳುದಾಗಿ ಅಷ್ಟದಿಕ್‍ಮಹಾಗಜಂಗಳಿಹವು. ಆ ಅಷ್ಟದಿಕ್‍ಮಹಾಗಜಂಗಳು ಆಧಾರವಾಗಿ ಭೂಲೋಕವಿಹುದು. ಆ ಭೂಲೋಕ ಮೊದಲಾಗಿ ಕೆಳಗಿನಂಡಬ್ರಹ್ಮಾಂಡಕಪಾಲ ಕಡೆಯಾಗಿ ಅರುವತ್ತುಸಾವಿರಕೋಟಿಯೋಜನ ಪರಿಪ್ರಮಾಣು. ಆ ಭುವರ್ಲೋಕವು ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಕಬ್ಬುಣವಾಗಿಹುದು. ಸಾವಿರಕೋಟಿಯೋಜನಪರಿಪ್ರಮಾಣು ಉದ್ದ ಮಣ್ಣಾಗಿಹುದು. ಇದು ಮಧ್ಯಭೂಮಿ. ಈ ಮಧ್ಯಭೂಮಿ ಅಜಲಮಯವಾಗಿ ಉತ್ತರ-ದಕ್ಷಿಣ ಶತಸಹಸ್ರಕೋಟಿಯೋಜನಪರಿಪ್ರಮಾಣು. ಸುತ್ತ ಅಗಲ ಮುನ್ನೂರರುವತ್ತುಕೋಟಿಯೋಜನಪರಿಪ್ರಮಾಣು. ದಕ್ಷಿಣ-ಉತ್ತರ ಸಮುದ್ರ ತೊಡಗಿ ಉತ್ತರ ಹಿಮವತ್ಪರ್ವತ. ಇದಕ್ಕೆ ಹೆಸರು ಭರತವರುಷ. ಈ ಹಿಮವತ್ಪರ್ವತವು ಉತ್ತರ ದಕ್ಷಿಣ ಇಪ್ಪತ್ತುಸಾವಿರ ಯೋಜನಪ್ರಮಾಣು. ಕೆಳಗೆ ಮೇಲೆ ಇಪ್ಪತ್ತುಸಾವಿರಯೋಜನಪ್ರಮಾಣು. ಮೇಲುದ್ದವು ಎಂಬತ್ತೈದುಸಾವಿರಯೋಜನಪ್ರಮಾಣು. ಉತ್ತರ ಸಮುದ್ರಕ್ಕೆ ದಕ್ಷಿಣ ಉತ್ತರ ಸಾವಿರಕೋಟಿ ಯೋಜನದಲ್ಲಿ ವಿಂಧ್ಯಪರ್ವತವಿಹುದು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ಮೂರುಸಾವಿರ, ದಕ್ಷಿಣ ಉತ್ತರ ಮೂವತ್ತುಸಾವಿರಯೋಜನಪ್ರಮಾಣು. ಕೆಳಗು ಮೇಲು ಮೂವತ್ತುಸಾವಿರಯೋಜನಪ್ರಮಾಣು. ಆ ವಿಂಧ್ಯಪರ್ವತದ ಮೇಲುದ್ದವು ತೊಂಬತ್ತುನೂರುಸಾವಿರಯೋಜನ ಪ್ರಮಾಣು. ಪಶ್ಚಿಮದೆಸೆಯ ಸಮುದ್ರದಲ್ಲಿಹ ಅಸ್ತಮಾನಪರ್ವತ. ಆ ಪರ್ವತ ದಕ್ಷಿಣ-ಉತ್ತರ ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಕೆಳಗು ಮೇಲು ಮೂವತ್ತೈದುಸಾವಿರ ಯೋಜನಪ್ರಮಾಣು. ಆ ಪರ್ವತದ ಮೇಲುದ್ದವು ತೊಂಬತ್ತುಸಾವಿರ ಯೋಜನಪ್ರಮಾಣು ಭೂಮಿಗೆ ನಡುವಾಗಿ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ಉತ್ತರ ದಕ್ಷಿಣ ಹದಿನಾರುಸಾವಿರ ಯೋಜನಪ್ರಮಾಣು. ಆ ಮೇರುಪರ್ವತದ ಮೇಲುದ್ದವು ಸಾವಿರಕೋಟಿಯ ಮೇಲೆ ನೂರುಸಾವಿರದ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಮಹಾಮೇರುವಿನ ಪೂರ್ವದಿಕ್ಕಿನಲ್ಲಿ ಮಂದರಪರ್ವತವಿಹುದು. ಅಲ್ಲಿಹ ವೃಕ್ಷ ಕದಂಬವೃಕ್ಷ. ಆ ಮಹಾಮೇರುವಿನ ದಕ್ಷಿಣದಿಕ್ಕಿನಲ್ಲಿ ಗಂಧಮಾದನಪರ್ವತವಿಹುದು. ಅಲ್ಲಿಹ ವೃಕ್ಷ ಜಂಬೂವೃಕ್ಷ. ಆ ಮಹಾಮೇರುವಿನ ನೈಋತ್ಯದಿಕ್ಕಿನಲ್ಲಿ ನೀಲಗಿರಿಪರ್ವತವಿಹುದು. ಅಲ್ಲಿಹ ವೃಕ್ಷ ಭೂದಳವೃಕ್ಷ. ಆ ಮಹಾಮೇರುವಿನ ಪಶ್ಚಿಮದಿಕ್ಕಿನಲ್ಲಿ ಕಾಶೀಪರ್ವತವಿಹುದು. ಅಲ್ಲಿಹ ವೃಕ್ಷ ಬಿಲ್ವದ ವೃಕ್ಷ. ಆ ಮಹಾಮೇರುವಿನ ವಾಯುವ್ಯದಿಕ್ಕಿನಲ್ಲಿ ನೀಲಪರ್ವತವಿಹುದು. ಅಲ್ಲಿಹ ವೃಕ್ಷ ಬ್ರಹ್ಮವೃಕ್ಷ. ಆ ಮಹಾಮೇರುವಿನ ಉತ್ತರದಿಕ್ಕಿನಲ್ಲಿ ಮಧುರಾದ್ರಿಪರ್ವತವಿಹುದು. ಅಲ್ಲಿಹ ವೃಕ್ಷ ವಟವೃಕ್ಷ. ಆ ಮಹಾಮೇರುವಿನ ಈಶಾನ್ಯದಿಕ್ಕಿನಲ್ಲಿ ಕಪಿಲ ಮಹಾಪರ್ವತವಿಹುದು. ಅಲ್ಲಿಹ ವೃಕ್ಷ ಶಾಕಾಫಲವೃಕ್ಷ. ಸಪ್ತಕುಲಪರ್ವತಂಗಳು ಒಂದೊಂದು ಬಗೆ ಹತ್ತುಸಾವಿರ ಯೋಜನಪ್ರಮಾಣು. ಆ ಸಪ್ತಕುಲಪರ್ವತಂಗಳೊಂದೊಂದಿಗೆ ಐದುಸಾವಿರ ಯೋಜನಪ್ರಮಾಣು. ಈ ಸಪ್ತಕುಲಪರ್ವತಂಗಳ ನಡುವೆ ಮಹಾಮೇರುಪರ್ವತವಿಹುದು. ಆ ಮೇರುಪರ್ವತದ ತುದಿಯಲ್ಲಿ ಪಂಚಸಹಸ್ರಯೋಜನದಗಲ ಚುತುಃಚಕ್ರಾಕಾರವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ನವರತ್ನಖಚಿತವಾಗಿ ಪ್ರಮಥಗಣಂಗಳು ನಂದಿ, ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದರಿಂ ಸುಖಂಗಳಲಿಪ್ಪಂತಾಗಿ ಶಿವಪುರವಿಹುದು. ಆ ಶಿವಪುರದೊಳು ಸಿಂಹಾಸನಾರೂಢನಾಗಿ ಮಹಾರುದ್ರಮೂರ್ತಿ ಇಹನು. ಆ ಮಹಾರುದ್ರಮೂರ್ತಿಯ ಚಂದ್ರಾದಿತ್ಯರು, ನಕ್ಷತ್ರ ನವಗ್ರಹಂಗಳು ಮೊದಲಾಗಿ ಎಲ್ಲಾ ದೇವರ್ಕಳು ಪ್ರದಕ್ಷಣಬಹರು. ಯಕ್ಷ ಕಿನ್ನರ ಗಂಧರ್ವ ಸಿದ್ಧ ವಿದ್ಯಾಧರ ಬ್ರಹ್ಮ ವಿಷ್ಣು ಇಂದ್ರಾದಿ ದೇವರ್ಕಳೆಲ್ಲರು ಒಡ್ಡೋಲಗಂಗೊಟ್ಟಿರಲು ಎಲ್ಲ ಲೋಕಕ್ಕೂ ಸಾಕ್ಷೀಭೂತನಾಗಿ ಆ ಮಹಾರುದ್ರಮೂರ್ತಿ ಇಹನು. ಆ ಮಹಾಮೇರುವಿನ ದಕ್ಷಿಣದ ಕೆಳಗಣ ಪಾಶ್ರ್ವದಲ್ಲಿ ಚಿಕ್ಕದೊಂದು ಕೋಡು. ಆ ಕೋಡಿನಲ್ಲಿ ಕಲ್ಪವೃಕ್ಷವಿಹುದು. ಆ ದಕ್ಷಿಣ ಕೋಡಿನಲ್ಲಿ ಜಂಬೂವೃಕ್ಷದ ಹಣ್ಣಿನ ರಸ ಸೋರಿ ಜಾಂಬೋಧಿಯೆಂಬ ಮಹಾನದಿ ಹರಿಯುತ್ತಿಹುದು. ಆ ನೀರ ಸೇವಿಸಿದವರು ಸ್ವರ್ಣವರ್ಣವಹರು. ಆ ನೀರು ಹರಿದ ಠಾವೆಲ್ಲ ಸ್ವರ್ಣಬೆಳೆಭೂಮಿ. ಆ ಭೂಮಿಗೆ ಉತ್ತರ ಪೂರ್ವವಾಗಿ ಶ್ರೀ ಕೈಲಾಸಪರ್ವತವಿಹುದು. ಆ ಕೈಲಾಸಪರ್ವತ ಏಳು ನೆಲೆಯಾಗಿ ರತ್ನಮಯವಾಗಿ ಅನಂತ ಕೋಡುಗಳುಂಟಾಗಿಹುದು. ಆ ಕೈಲಾಸಪರ್ವತವು ಉತ್ತರ ದಕ್ಷಿಣ ಹದಿನಾರುಸಾವಿರಕೋಟಿಯೋಜನ ಪರಿಪ್ರಮಾಣು. ಆ ಕೈಲಾಸಪರ್ವತದ ಮೇಲುದ್ದವು ಸಾವಿರಕೋಟಿ ನೂರುಸಾವಿರದ ಮೇಲೆ ಎಂಬತ್ತುನಾಲ್ಕುಸಾವಿರ ಯೋಜನಪ್ರಮಾಣು. ಭೂಮಿಯಲ್ಲಿ ಹೂಳಿಹುದು ಎಂಬತ್ತುನಾಲ್ಕುಸಾವಿರಕೋಟಿ ಯೋಜನ ಪ್ರಮಾಣು. ಆ ಕೈಲಾಸಪರ್ವತದ ತುದಿಯಲ್ಲಿ ಶಿವಪುರದ ವಿಸ್ತೀರ್ಣ ಪಂಚಸಹಸ್ರ ಯೋಜನದಗಲ. ಚತುಷ್ಟಾಕಾರವಾಗಿ ನವರತ್ನಖಚಿತವಾಗಿ ಅಷ್ಟದಳವೇಷ್ಟಿತವಾಗಿ ಅಷ್ಟಧಾನ್ಯಂಗಳುಂಟಾಗಿಹಂತೆ ಶತಸಹಸ್ರಕೋಟಿ ಕನಕಗೃಹಂಗಳುಂಟಾಗಿ ಪ್ರಮಥಗಣಂಗಳು, ನಂದಿ ಮಹಾನಂದಿಕೇಶ್ವರಗಣಂಗಳು, ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು ನವಗ್ರಹಂಗಳು, ಬ್ರಹ್ಮ ವಿಷ್ಣು ನಾರದ ಸುಖಂಗಳಲ್ಲಿಪ್ಪಂತಾಗಿ ಮಹಾಶಿವಪುರವಿಹುದು. ಆ ಶಿವಪುರದೊಳು ಶ್ರೀಕಂಠನೆಂಬ ಸದಾಶಿವಮೂರ್ತಿ ಇಹನು. ಆ ಶಿವಪುರದ ಬಾಗಿಲ ಕಾವಲಾಗಿ ನಂದಿ-ಮಹಾಕಾಳರೆಂಬ ಮಹಾಗಣಂಗಳಿಹರು. ನಂದಿ-ಮಹಾನಂದಿ-ಅತಿಮಹಾನಂದಿಕೇಶ್ವರರು ವಿಘ್ನೇಶ್ವರ ಕುಮಾರಸ್ವಾಮಿ ಮಹಾಭೈರವೇಶ್ವರ ಮಹಾಕಾಳಿ ಮೊದಲಾದ ಅಸಂಖ್ಯಾತ ಮಹಾಗಣಂಗಳು ಅಷ್ಟದಿಕ್ಪಾಲರು, ಏಕಾದಶರುದ್ರರು, ದ್ವಾದಶಾದಿತ್ಯರು, ಅಷ್ಟವಶುಗಳು, ನವಗ್ರಹಂಗಳು, ಬ್ರಹ್ಮ , ವಿಷ್ಣು , ರುದ್ರಗಣಂಗಳು, ಮೂವತ್ಮೂರುಕೋಟಿ ದೇವರ್ಕಳು, ನಾಲ್ವತ್ತೆಂಟುಸಾವಿರ ಮುನಿಗಳು, ಅಷ್ಟದಶ ಗಣಂಗಳು, ಯೋಗೀಶ್ವರರು, ಯಕ್ಷ ಕಿನ್ನರ ಗರುಡ ಗಂಧರ್ವ ಸಿದ್ಧ ವಿದ್ಯಾಧರರು, ರಾಕ್ಷಸಗಣ ನಾಗಗಣ ಭೂತಗಣಂಗಳು ಮೊದಲಾದ ಎಲ್ಲಾ ಗಣಂಗಳ ಸನ್ನಿಧಿಯಲ್ಲಿ ಒಡ್ಡೋಲಗಂಗೊಟ್ಟಿರಲು, ಚತುರ್ವೇದಂಗಳು ಮೊದಲಾಗಿ ಎಲ್ಲಾ ವೇದಂಗಳು `ವಿಶ್ವಾಧಿಕೋ ರುದ್ರೋ ಮಹಾಋಷಿ' ಎನಲು 'ಋತಂ ಸತ್ಯಂ ಪರಬ್ರಹ್ಮ ' ಎನಲು `ಅತ್ಯತಿಷ್ಟರ್ದಶಾಂಗುಲಂ' ಎನಲು `ತತ್ಪರ ಬ್ರಹ್ಮ ವಿಜಾತಿ', ಎನಲು `ಓಮಿತೈಕಾಕ್ಷರ ಬ್ರಹ್ಮ' ಎಂದು ಬೊಬ್ಬಿಟ್ಟು ಸಾರುತ್ತಿರಲು ತುಂಬುರ ನಾರದರು ಗೀತಮಂ ಪಾಡುತಿರಲು ನಂದಿ ಮದ್ದಳೆವಾದ್ಯಮಂ ಬಾರಿಸುತ್ತಿರಲು, ವಿಷ್ಣು ಆವುಜವ ನುಡಿಸಲು, ಬ್ರಹ್ಮ ತಾಳವನೊತ್ತಲು, ಪಂಚಮಹಾವಾದ್ಯಂಗಳು ಮೊಳಗುತ್ತಿರಲು ಭೃಂಗೀಶ್ವರ ಮಹಾನಾಟ್ಯವನಾಡಲು ಉಮಾಮಹೇಶ್ವರಿಯೊಡನೆ ಪರಮೇಶ್ವರನು ಸಿಂಹಾಸನಾರೂಢನಾಗಿ ಕುಳ್ಳಿರ್ದು ಭೃಂಗೀಶ್ವರನ ಮಹಾನಾಟ್ಯವ ತಮ್ಮ ಲೀಲಾವಿನೋದದಲ್ಲಿ ನೋಡುತ್ತ ಶ್ರೀ ಕೈಲಾಸಪರ್ವತದಲ್ಲಿ ಇರುತ್ತಿರ್ದನು. ಈ ಭೂಮಿಗೆ ದಕ್ಷಿಣ ಪೂರ್ವದಲ್ಲಿ ಆದಿಯ ಮಹಾದ್ರಿಪರ್ವತವಿಹುದು. ಆ ಆದಿಯ ಮಹಾದ್ರಿಪರ್ವತದಲ್ಲಿ ಅಗಸ್ತ್ಯಮಹಾಮುನಿ ಇಹನು. ಈ ಭೂಮಿ ಒಂಬತ್ತು ತುಂಡಾಗಿಹುದು. ಒಂಬತ್ತು ತುಂಡಾದ ಅಂತರಾಳವೆಲ್ಲವು ಜಲಮಯವಾಗಿ ಹೊರಗೆ ಬಿರಿದುದ್ದವಾಗಿ ಬೆಳೆಯಲು ನವಖಂಡಪೃಥ್ವಿಯೆಂದು ಹೆಸರಾಯಿತ್ತು. ಈ ಭೂಮಿ ಜಂಬೂದ್ವೀಪ. ಈ ಭೂಮಿಗೆ ಜನನ ಲವಣಸಮುದ್ರ. ಆ ಜಂಬೂದ್ವೀಪ ಲವಣಸಮುದ್ರದ ವಿಸ್ತೀರ್ಣ: ಆ ಜಂಬೂದ್ವೀಪದ ಅಗಲ ಶತಕೋಟಿಯೋಜನಪ್ರಮಾಣು. ಆ ಜಂಬೂದ್ವೀಪ ವಳಯಾಕೃತವಾಗಿ ಸುತ್ತಿಕೊಂಡು ಶತಕೋಟಿಯೋಜನಪರಿಪ್ರಮಾಣದಗಲವಾಗಿ ಲವಣಸಮುದ್ರವಿಹುದು. ಅದರಿಂದಾಚೆ ಪ್ಲಕ್ಷದ್ವೀಪ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಇಕ್ಷುಸಮುದ್ರ. ಅದರಗಲ ಇನ್ನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಕುಶದ್ವೀಪ. ಅದರಗಲ ನಾನೂರುಕೋಟಿಯೋಜನಪ್ರಮಾಣು. ಅದರಿಂದಾಚೆ ಸುರೆಯ ಸಮುದ್ರ. ಅದರಗಲ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಶಾಕದ್ವೀಪ. ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಘೃತಸಮುದ್ರ, ಅದರಗಲ ಎಂಟುನೂರುಕೋಟಿ ಯೋಜನ ಪರಿಪ್ರಮಾಣು. ಅದರಿಂದಾಚೆ ಸಾಲ್ಮಲೀದ್ವೀಪ. ಅದರಗಲ ಸಾವಿರದಾರು ನೂರು ಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ಷೀರಸಮುದ್ರ. ಅದರಗಲ ಸಾವಿರದಾರುನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಪುಸ್ಕರದ್ವೀಪ. ಅದರಗಲ ಮೂರುಸಾವಿರಕೋಟಿ ಯೋಜನ ಪ್ರಮಾಣು. ಅದರಿಂದಾಚೆ ದಧಿಸಮುದ್ರ. ಅದರಗಲ ಮೂರುಸಾವಿರದಿನ್ನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಕ್ರೌಂಚದ್ವೀಪ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವಾದೋದಕಸಮುದ್ರ. ಅದರಗಲ ಆರುಸಾವಿರದ ನಾನೂರುಕೋಟಿ ಯೋಜನ ಪ್ರಮಾಣು. ಅದರಿಂದಾಚೆ ಸ್ವರ್ಣಬೆಳೆಯಭೂಮಿ. ಅದರಗಲ ಹನ್ನೆರಡುಸಾವಿರಕೋಟಿಯೋಜನ ಪ್ರಮಾಣು. ಅದರಿಂದಾಚೆಯಲಿ ಚಕ್ರವಾಳಗಿರಿ. ಅದರಗಲ ಇಪ್ಪತ್ತೈದುಸಾವಿರಕೋಟಿ ಯೋಜನ ಪ್ರಮಾಣು. ಈ ಸಪ್ತಸಮುದ್ರಂಗಳು ಸಪ್ತದ್ವೀಪಂಗಳು ಹೊರಗೆ ಬಿರಿದು ಬೆಳೆಯಲು ಸಪ್ತಸಮುದ್ರಂಗಳು, ದೆಸೆಗಳು ಕೂಡಿ ಮೇಳೈಸಲು ನಾಲ್ವತ್ರೊಂಬತ್ತುಸಾವಿರಕೋಟಿ ಯೋಜನ ಪ್ರಮಾಣಿನ ಮೇಲೆ ತೊಂಬತ್ತು ಸಾವಿರದೈವತ್ತುಕೋಟಿಯ ಮಧ್ಯಭೂಮಿ ಯೋಜನ ಪ್ರಮಾಣುಮಂ ಕೂಡಿ ನೂರುಸಾವಿರಕೋಟಿ ಯೋಜನ ಪ್ರಮಾಣು. ಈ ಭೂಮಿಗೂ ಚಕ್ರವಾಳಗಿರಿಗೂ ಹೊರಗೆ ಕಾವಲಾಗಿ ಅಷ್ಟದಿಕ್ಪಾಲರಿಹರು. ಮೇರು ಮಂದರ ಕೈಲಾಸ ಗಂಧಮಾದನ ವಿಂಧ್ಯ ಹಿಮಾಲಯ ನಿಷಧ ಚಿತ್ರಕೂಟವೆಂಬ ಅಷ್ಟಕುಲಪರ್ವತಂಗಳ ತಪ್ಪಲಲ್ಲಿ ಅನಂತವಾಸುಗಿ ಕಶ್ಚ ಕರ್ಕಾಟಕ ಪರ ಮಹಾಪರ ಶಂಕವಾಲಿ ಕುಳಿಕನೆಂಬ ಅಷ್ಟಮಹಾಗಣಂಗಳಿಹವು. ಈಶಾನಮುಖದಲ್ಲಿ ವಡಬಮುಖಾಗ್ನಿ ಇಹುದು. ಉತ್ತರದೆಸೆಯಲ್ಲಿ ಕ್ಷೀರಸಮುದ್ರದೊಳು ವಿಷ್ಣು ಅನಂತಶಯನದಲ್ಲಿ ತಮೋಗುಣಯುಕ್ತನಾಗಿ ನಿದ್ರಾಲಂಬಿಯಾಗಿಹನು. ಈ ಭೂಮಿಗೆ ದಕ್ಷಿಣದೆಸೆಯಾಗಿ ಉತ್ತರ ಪರಿಯಂತರ ಬ್ರಹ್ಮ ಮಹೇಶ್ವರಿ ಕೌಮಾರಿ ವೈಷ್ಣವಿ ವರಾಹಿ ಮಾಹೇಂದ್ರಿ ಚಾಮುಂಡಿಯೆಂಬ ಸಪ್ತಮಾತೃಕೆಯರು ಇಹರು. ಮೇಲುಗಡೆಯಲ್ಲಿ ವಿನಾಯಕ, ಕೆಳಗಡೆಯಲ್ಲಿ ಭೈರವನಿಹನು. ಈ ಭೂಮಿಗೆ ಉತ್ತರ ದಕ್ಷಿಣ ಪೂರ್ವ ಪಶ್ಚಿಮದಲ್ಲಿ ಭೈರವ ಮಹಾಭೈರವ ಕಾಲಭೈರವ ದುರ್ಗಿ ಮಹಾದುರ್ಗಿ ಮೊದಲಾದ ಅನಂತ ಭೂತಗಣಂಗಳು ಕಾವಲಾಗಿಹರು. ಈ ಭೂಮಿಯಿಂದ ಮೇಲೆ ಯೋಜನ ಪ್ರಮಾಣದಲ್ಲಿ ಸಪ್ತಮೇಘಂಗಳು, ವಾಯುವಿನ ದೆಸೆಯಿಂದ ಚಲಿಸುತ್ತಿಹುದು. ಅವಾವೆಂದಡೆ : ನೆಲವೃಷ್ಟಿ ನೀರವೃಷ್ಟಿ ಸ್ವರ್ಣವೃಷ್ಟಿ ಪುಷ್ಪವೃಷ್ಟಿ ಕಲ್ಪವೃಷ್ಟಿ ಮಣ್ಣವೃಷ್ಟಿ ಮೌಕ್ತಿಕವೃಷ್ಟಿ- ಎಂಬ ಸಪ್ತವೃಷ್ಟಿಗಳು ವೃಷ್ಟಿಸುತ್ತಿರಲು ಆ ಸಪ್ತಮೇಘಮಂಡಲಂಗಳ ಮೇಲೆ ಶತಕೋಟಿಯೋಜನದಲ್ಲಿ ಭುವರ್ಲೋಕವಿಹುದು. ಆ ಭುವರ್ಲೋಕದಲ್ಲಿ ಆದಿತ್ಯ ಚರಿಸುತ್ತಿಹನು. ಆ ಆದಿತ್ಯನ ರಥದ ಪ್ರಮಾಣು ತೊಂಬತ್ತುಸಾವಿರಯೋಜನಪ್ರಮಾಣದುದ್ದವು, ನಾಲ್ವತ್ತೈದುಸಾವಿರ ಯೋಜನದಗಲವು. ಆ ರಥಕ್ಕೆ ಒಂದೇ ಗಾಲಿ, ಒಂದೆ ನೊಗದಲ್ಲಿ ಕಟ್ಟುವ ಪಚ್ಚವರ್ಣದ ವಾಜಿಗಳೇಳು. ಉರದ್ವಯವಿಲ್ಲದ ಅರುಣ ರಥದ ಸಾರಥಿ. ಆ ಅರುಣನ ಕಂಡುದೆ ಉದಯ, ಕಾಣದುದೇ ಅಸ್ತಮಯ. ಆದಿತ್ಯಪಥಕ್ಕೆ ಶತಕೋಟಿ ಯೋಜನದಲ್ಲಿ ಚಂದ್ರಮನ ಪಥವು ಆ ಚಂದ್ರಮನ ಪಥಕ್ಕೆ ಶತಕೋಟಿ ಯೋಜನದಲ್ಲಿ ಅಂಗಾರಕನ ಪಥವು. ಅಂಗಾರಕನ ಪಥಕ್ಕೆ ಶತಕೋಟಿಯೋಜನದಲ್ಲಿ ಬುಧನ ಪಥವು. ಆ ಬುಧನ ಪಥಕ್ಕೆ ಶತಕೋಟಿಯೋಜನದಲ್ಲಿ ಬೃಹಸ್ಪತಿಯ ಪಥವು. ಆ ಬೃಹಸ್ಪತಿಯ ಪಥಕ್ಕೆ ಶತಕೋಟಿಯೋಜನದಲ್ಲಿ ಶುಕ್ರನ ಪಥವು. ಆ ಶುಕ್ರನ ಪಥಕ್ಕೆ ಶತಕೋಟಿ ಯೋಜನದಲ್ಲಿ ಶನೀಶ್ವರನ ಪಥವು. ಆ ಶನೀಶ್ವರನ ಪಥಕ್ಕೆ ಶತಕೋಟಿ ಯೋಜನದಲ್ಲಿ ರಾಹುಕೇತುಗಳ ಪಥವು. ಆ ರಾಹುಕೇತುಗಳ ಪಥಕ್ಕೆ ಶತಕೋಟಿಯೋಜನದಲ್ಲಿ ನಕ್ಷತ್ರಾದಿಗಳ ಪಥವು. ಆ ನಕ್ಷತ್ರಾದಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸಪ್ತಮಹಾಋಷಿಗಳ ಪಥವು. ಆ ಸಪ್ತಮಹಾಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಅಶ್ವಿನೀದೇವತೆಗಳ ಪಥವು. ಆ ಅಶ್ವಿನೀದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ವಿಶ್ವದೇವತೆಗಳ ಪಥವು. ಆ ವಿಶ್ವದೇವತೆಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಬಾಲಸೂರ್ಯರ ಪಥವು. ಆ ಬಾಲಸೂರ್ಯರ ಪಥಕ್ಕೆ ಶತಕೋಟಿಯೋಜನದಲ್ಲಿ ಸೇನ ಮಹಾಸೇನ ಋಷಿಗಳ ಪಥವು. ಆ ಸೇನ ಮಹಾಸೇನ ಋಷಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಕ್ರುಕರನೆಂಬ ಋಷಿಗಳ ಪಥವು. ಆ ಕ್ರುಕರನೆಂಬ ಮುನಿಗಳ ಪಥಕ್ಕೆ ಶತಕೋಟಿಯೋಜನದಲ್ಲಿ ಸ್ವರ್ಣಪ್ರಭವಾಗಿ ಸ್ವರ್ಗಲೋಕವಿಹುದು. ಆ ಸ್ವರ್ಗಲೋಕದಲ್ಲಿ ಕಲ್ಪವೃಕ್ಷವಿಹುದು. ಆ ಕಲ್ಪವೃಕ್ಷದ ನೆಳಲಲ್ಲಿ ಅಮರಾವತಿಪುರ. ಆ ಪುರದೊಳು ದೇವೇಂದ್ರನಿಹನು. ಆ ದೇವೇಂದ್ರನ ಓಲಗದೊಳಗೆ ಸಪ್ತಮಹಾಋಷಿಗಳು, ಮೂವತ್ಮೂರು ಕೋಟಿ ದೇವರ್ಕಳಿಹರು. ಆ ಸ್ವರ್ಗಲೋಕಕ್ಕೆ ಶತಕೋಟಿ ಯೋಜನದಲ್ಲಿ ಮಹರ್ಲೋಕವಿಹುದು; ಅದು ಬ್ರಹ್ಮ ಪಥವು. ಆ ಮಹರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಜನರ್ಲೋಕವಿಹುದು; ಅದು ವಿಷ್ಣುವಿನ ಪಥವು. ಆ ಜನರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ತಪರ್ಲೋಕವಿಹುದು ; ಅದು ರುದ್ರಪಥವು. ಆ ತಪರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸತ್ಯರ್ಲೋಕವಿಹುದು ; ಅದು ಈಶ್ವರಪಥವು. ಆ ಸತ್ಯರ್ಲೋಕಕ್ಕೆ ಶತಕೋಟಿ ಯೋಜನದಲ್ಲಿ ಸದಾಶಿವಲೋಕವಿಹುದು. ಆ ಸದಾಶಿವಲೋಕಕ್ಕೆ ತ್ರಿಶತ ಸಹಸ್ರಕೋಟಿ ಯೋಜನದಲ್ಲಿ ಶಿವಾಂಡವಿಹುದು. ಆ ಶಿವಾಂಡವು ಪಂಚಶತಸಹಸ್ರಕೋಟಿ ಲಕ್ಷವು ತ್ರಿಶತ ಸಹಸ್ರಕೋಟಿ ಲಕ್ಷದ ಮೇಲೆ ಶತಕೋಟಿ ಸಾವಿರ ಲಕ್ಷ ಯೋಜನ ಪ್ರಮಾಣದಗಲವನುಳ್ಳ ಶಿವಾಂಡವು, ಮಹಾಸಮುದ್ರಂಗಳನು, ಅಣುವಾಂಡಗಳನು, ಬ್ರಹ್ಮಾಂಡಂಗಳನು, ಅನಂತಕೋಟಿ ಲೋಕಾದಿಲೋಕಂಗಳನೊಳಕೊಂಡು ಮಹಾಪ್ರಳಯಜಲದೊಳಗಿಹುದು. ಆ ಶಿವಾಂಡಕ್ಕೆ ಹೊರಗಾಗಿ ಅಖಂಡ ಚಿದ್ಬ ್ರಹ್ಮಾಂಡವಿಹುದು. ಅಖಂಡ ಚಿದ್ಬ್ರಹ್ಮಾಂಡವು ಅನಂತಕೋಟಿ ಬ್ರಹ್ಮಾಂಡವನೊಳಕೊಂಡು ಆದಿ ಮಧ್ಯಾವಸಾನಂಗಳಿಲ್ಲದೆ ಅಖಂಡಿತ ಅಪ್ರಮೇಯ ಅವ್ಯಕ್ತ ಅಚಲಿತ ಅಪ್ರಮಾಣ ಅಗೋಚರ ಅಖಂಡಪರಿಪೂರ್ಣವಾಗಿಹುದು ನೋಡಾ ಚಿದ್ಬ್ರಹ್ಮಾಂಡವು ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹೊನ್ನೆಂಬ ಕಾರ್ಮಿಕವ ಜರಿದು ಹರಿದು, ಮಣ್ಣೆಂಬ ಭವದ ಭವದ ಹರಿದು, ಹೆಣ್ಣೆಂಬ ರಾಕ್ಷಸಿಯ ಅಣಲೊಳಗೆ ಸಿಕ್ಕಿ ಅಗಿದಗಿದು ತಿನಿಸಿಕೊಂಬ ಜಡಜೀವಿಗಳ ಸಂಗದಿಂದಾದ ಸಕಲ ಸುಖಭೋಗಂಗಳ ಬಿಟ್ಟು; ಲಿಂಗರತಿ ಪರಮಸುಖದ ಚಿದಮೃತದ ನಿತ್ಯ ತೃಪ್ತಿ ಸಂತೋಷ ಇಂಬುಗೊಂಡು, ವೇಷದ ಭ್ರಾಂತಿನ ಭ್ರಾಮಕದ ಸಮಯ ಕುಲಪಾಷಂಡಿಗಳ ತತ್ಸಂಗವ ಬಿಟ್ಟು ನಿರಾಶಾ ಪಥದ ಸುಜ್ಞಾನವೆ ಅನುಕೂಲವಾಗಿ ಘೃತ ಫಳ ಮಧುರರಸ ಮೃಷ್ಟಾನ್ನಂಗಳಲ್ಲಿ ಮನಮಗ್ನವಾದ ಪರಮ ಪ್ರಸಾದದಲ್ಲಿ ಪರಿಣಾಮಿಯಾದ ಪರಮಲಿಂಗೈಕ್ಯ ವಿರಕ್ತಂಗೆ ಲಿಂಗಾರ್ಪಿತವಲ್ಲದೆ_ ಇಂತೀ ಕ್ರಮವನರಿದು ಸಕಲಭ್ರಾಂತನಳಿಯದೆ ಮನ್ಮಥವೇಷಧಾರಿಗಳು ಪಂಚಲೋಹ ಕಾರ್ಮಿಕವ ಧರಿಸಿಕೊಂಡು ಲಿಂಗಾರ್ಪಿತ ಭಿಕ್ಷೆಯೆಂದು ಭುಂಜಿಸುವ ಭುಂಜನೆಯೆಲ್ಲವು ವರಾಹ ಕುಕ್ಕುಟದ ಮೇಧ್ಯವು, ಅವರಿಗೆ ಪ್ರಸಾದವೆಂಬುದು ಸ್ವಪ್ನದಲ್ಲಿಯೂ .... .......ಕೊಂಬುದೆಲ್ಲವು ಕತ್ತೆಯ ಮಾಂಸ ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಅರಿಯಲಿಲ್ಲದ ಅರಿವು ಎನ್ನಲ್ಲಿ ತೋರಿತ್ತಾಗಿ ಧರೆ ಮೊದಲಖಿಳವನಳಿದುಳಿದ ಅಮಲಮೂರುತಿಯ ಕಂಡೆ. ಆ ಮೂರುತಿಯಿಂದೆ ಅನಂತ ಮನುಮುನಿಗಳ ಅರಿತಕ್ಕಗೋಚರವಾದ ಅನಾಮಯಮೂರುತಿಯ ಕಂಡೆ. ಆ ಮೂರುತಿಯನೆನ್ನ ಕರದೊಳು ಧರಿಸಿಕೊಂಡು ಅಗಣಿತಮಹಿಮನಾದೆನು ಕಾಣಾ ನಿರಂಜನ ಚನ್ನಬಸವಲಿಂಗಾ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಮೂರು ಸ್ಥಲದ ಮೂಲವನರಿಯರು, ಪುಣ್ಯಪಾಪವೆಂಬ ವಿವರವನರಿಯರು. ಇಹಪರವನರಿಯದೆ ಚರ್ಮದ ಬೊಂಬೆಯ ಮೆಚ್ಚಿ ಉಚ್ಚೆಯ ಬಚ್ಚಲಲ್ಲಿ ಬಿದ್ದಿರ್ಪ ಕರ್ಮದ ಸುನಿಗಳನೆಂತು ದೇವರೆಂಬೆನಯ್ಯಾ ? ಹೊನ್ನು ವಸ್ತ್ರವ ಕೊಡುವವ[ನ] ಬಾಗಿಲ ಕಾಯ್ವ ಪಶುಪ್ರಾಣಿಗಳಿಗೆ ದೇವರೆನ್ನಬಹುದೇನಯ್ಯಾ ? ಜಗದ ಕರ್ತನಂತೆ ವೇಷವ ಧರಿಸಿಕೊಂಡು ಸರ್ವವನು ಬೇಡಲಿಕೆ ಕೊಟ್ಟರೆ ಒಳ್ಳಿದನು, ಕೊಡದೆ ಇದ್ದರೆ ಪಾಪಿ, ಚಾಂಡಾಲ, ಅನಾಚಾರಿ ಎಂದು ದೂಷಿಸಿ ಒಳಹೊರಗೆಂದು ಬೊಗಳುವ ಮೂಳಮಾನವರಿಗೆ ಮಹಾಂತಿನ ಆಚರಣೆ ಎಲ್ಲಿಯದೊ ? ಇಲ್ಲವೆಂದಾತ ನಮ್ಮಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ನಿಃಕಳ ನಿರುಪಮ ತೇಜೋಮಯ ನಿರಂಜನಲಿಂಗದ ನೆನಹಿನ ಮಹಾಘನ ಮಹತ್ವವನುಳ್ಳ ಮಹಾಂತ ಅಖಂಡಪರಶಿವನೊಳಗೆ ಷಡ್‍ವಕ್ತ್ರವನುಳ್ಳ ಪರಬ್ರಹ್ಮವಿರ್ಪುದು, ಆ ಪರಬ್ರಹ್ಮದಲ್ಲಿ ಬ್ರಹ್ಮಾಂಡವಿರ್ಪುದು, ಆ ಬ್ರಹ್ಮಾಂಡದೊಳಗೆ ಸಕಲ ಸ್ಥಿರಚರಪ್ರಾಣಿಗಳಿರ್ಪುವು. ಆ ಪ್ರಾಣಿಗಳ ಸತ್ಕರ್ಮ ದುಷ್ಕರ್ಮದಿಂದಾದ ಪುಣ್ಯ ಪಾಪಂಗಳಿಂದೆ ಬಂದ ಸುಖದುಃಖಂಗಳನುಂಡು ಸೃಷ್ಟಿ ಸ್ಥಿತಿ ಲಯಕ್ಕೊಳಗಾಗಿ ಅನಂತಕಾಲ ಎಂಬತ್ತುನಾಲ್ಕುಲಕ್ಷ ಜೀವರಾಶಿಯೋನಿಯಲ್ಲಿ ಬರುತಿರ್ಪುದು. ಆ ಬರುವದರೊಳಗೆ ಸತ್ಕರ್ಮದಿಂದ ಪುಣ್ಯವೊದಗಿ ಮಾನವಜನ್ಮ ಬರಲು ಈ ಮಾನವಜನ್ಮದ ಅಜ್ಞಾನಕ್ಕೆ ಆ ಮಹಾಮಹಾಂತ ಪರಿಮಳವನೊಳಕೊಂಡು ಮಹಾಂತಮಾರುತ ಸುಳಿಯಲು ಆ ಮಾರುತನ ಸೋಂಕಿಗೆ ಆ ಅಜ್ಞಾನ ಸುಜ್ಞಾನವಾಯಿತ್ತು. ಆ ಸುಜ್ಞಾನದಿಂದೆ ಸತ್ಕರ್ಮವ ಮಾಡಲು ಸಾಧುರಸಂಗವು ದೊರಕಿತ್ತು. ಆ ಸಾಧುರಸಂಗದಿಂದ ಸುಗುಣ ಅಳವಟ್ಟಿತ್ತು. ಆ ಸುಗುಣ ಅಳವಟ್ಟಲ್ಲಿ ಸಂಸಾರ ಹೇಯವಾಯಿತ್ತು. ಆ ಸಂಸಾರ ಹೇಯವಾದಲ್ಲಿ ಮುಕ್ತನಾಗಬೇಕೆಂಬೋ ಚಿಂತೆ ತಲೆದೋರಿತ್ತು. ಆ ಚಿಂತಾಪರವಶದಿಂದೆ ದುಃಖಗೊಂಡಿರಲು ಆ ಮಹಾಂತಪರಿಮಳವನೊಳಕೊಂಡು, ಮಹಾಂತಮಾರುತನೆಂಬ ಪ್ರಭುವೇ ತಾ ಮುನ್ನ ಸೋಂಕಿದ್ದಕ್ಕೆ ತನ್ನ ಬಯಸುವ ಶಿಷ್ಯನಲ್ಲಿಗೆ ತಾನೇ ಗುರುವಾಗಿ ಬಂದು, ಮೋಕ್ಷವಾಸನಿಗೆ ಅವಸ್ಥೆಯೊಳಗಿದ್ದ ಶಿಷ್ಯನ ಸಂತೈಸಿ, ಮಹಾಂತಪರಿಮಳವನುಳ್ಳ ಮುಕ್ತಿಫಲವಾಗುವ ಘನವೆಂಬ ಪುಷ್ಪಕ್ಕೆ ಮೂಲನೆನವಾದ ಮನವೆಂಬ ಲಿಂಗದಲ್ಲಿ ನಿಃಕಲವೇ ನಾನು, ನಾನೇ ನೀನು. ಹೀಗೆಂಬುವುದ ಉಸುರದೆ ಮರೆಗೈದು, ಆ ಲಿಂಗಮಂ ಪರಿಪೂರ್ಣವಾದ ಕರಕಮಲಕ್ಕೆ ಕೊಟ್ಟು ಮನವೆಂಬ ಲಿಂಗದ ನೆನವೆಂಬ ಬಳ್ಳಿಯೇ ಜಂಗಮವೆಂದು ತೋರಿ, ಆ ಬಳ್ಳಿಯ ಬೊಡ್ಡಿಯ ತಂಪು ಪಾದೋದಕವು. ಆ ಆನಂದ ತಂಪ್ಹಿಡಿಯುವುದಕ್ಕೆ ಮಡಿಯಾದ ಮೃತ್ತಿಕೆಯು ನಿರಂಜನಪ್ರಸಾದ. ಆ ಮೃತ್ತಿಕೆಗೆ ಒಡ್ಡಾದ ತೇಜೋಮಯವೇ ವಿಭೂತಿ, ಆ ತೇಜಸ್ಸು ಲಿಂಗಪೂಜೆಯೇ ರುದ್ರಾಕ್ಷಿ, ಆ ತೇಜಸ್ಸು ಲಿಂಗಸ್ಫುಟನಾದವೇ ನಿರುಪಮಮಂತ್ರ, ಇಂತೀ ಅಷ್ಟಾವರಣ ಘಟ್ಟಿಗೊಂಡು ಪೂಜಿಸಲಾಗಿ ಆ ಶಿಷ್ಯನು ಗುರುವ ಹಾಡಿ, ಲಿಂಗವ ನೋಡಿ, ಜಂಗಮವ ಪೂಜಿಸಿ, ಪಾದೋದಕವನ್ನುಪಾರ್ಜಿಸಿ, ಪ್ರಸಾದವನುಂಡು, ವಿಭೂತಿಯ ಲೇಪಿಸಿಕೊಂಡು, ರುದ್ರಾಕ್ಷಿಯ ಧರಿಸಿಕೊಂಡು, ಮಂತ್ರವ ಚಿತ್ತದೊಳಿರಿಸಿ ಆಚರಿಸಲು, ಆ ಶಿಷ್ಯನ ಕಾಯ ಆ ಗುರುವನಪ್ಪಿ ಸದ್ಗುರುವಾಯಿತ್ತು. ಮನವು ಲಿಂಗವ ಕೂಡಿ ಘನಲಿಂಗವಾಯಿತ್ತು. ಪ್ರಾಣ ಜಂಗಮವ ಮರೆಗೊಂಡು ನಿಜಜಂಗಮವಾಯಿತ್ತು. ತೃಷೆ ಪಾದೋದಕದಲ್ಲಿ ಮುಳುಗಿ ಆನಂದಪಾದೋದಕವಾಯಿತ್ತು. ಹಸಿವು ಪ್ರಸಾದದಲ್ಲಡಗಿ ಪ್ರಸಿದ್ಧಪ್ರಸಾದವಾಯಿತ್ತು. ಚಂದನ ವಿಭೂತಿಯಲ್ಲಿ ಸತ್ತು ಚಿದ್ವಿಭೂತಿಯಾಯಿತ್ತು. ಶೃಂಗಾರ ರುದ್ರಾಕ್ಷಿಯಲ್ಲಿ ಕರಗಿ ಏಕಮುಖರುದ್ರಾಕ್ಷಿಯಾಯಿತ್ತು. ಚಿತ್ತ ಮಂತ್ರದಲ್ಲಿ ಸಮರಸವಾಗಿ ಮೂಲಮಂತ್ರವಾಯಿತ್ತು. ಇಂಥಾ ಮೂಲಮಂತ್ರವೇ ಬ್ರಹ್ಮಾಂಡ, ಪಿಂಡಾಂಡ, ಸ್ಥಿರ, ಚರ, ಸಮಸ್ತಕ್ಕೆ ಕಾರಣ ಚೈತನ್ಯಸೂತ್ರವಾಗಿ ಅಂತರಂಗ ನಿವೇದಿಸಲು, ಅಲ್ಲಿ ಅಂತರಂಗದಲ್ಲಿ ತೋರುವ ಆರುಸ್ಥಲ, ಆರುಚಕ್ರ, ಆರುಶಕ್ತಿ, ಆರುಭಕ್ತಿ, ಆರುಲಿಂಗ, ಆರಾರು ಮೂತ್ತಾರು, ಇನ್ನೂರಾಹದಿನಾರು ತೋರಿಕೆಗೆ ಆ ಮೂಲಮಂತ್ರ ತಾನೇ ಕಾರಣ ಚೈತನ್ಯಸೂತ್ರವಾಗಿ ಕಾಣಿಸಲು ಸಮ್ಯಜ್ಞಾನವೆನಿಸಿತು. ಆ ಸಮ್ಯಜ್ಞಾನಬೆಳಗಿನೊಳಗೆ ಮುದ್ರೆ ಸಂಧಾನ ವಿವರ ವಿಚಾರದಿಂದೆ ಷಟ್ತಾರೆಗಳ ಸ್ವರೂಪದ ಆರುಭೂತ, ಆರುಮುಖ, ಆರುಹಸ್ತ, ಆರುಪ್ರಸಾದ, ಆರುತೃಪ್ತಿ, ಆರು ಅಧಿದೇವತೆ ಮೊದಲಾದ ಆರಾರು ಮೂವತ್ತಾರು ಇನ್ನೂರಾಹದಿನಾರು ಅನಂತ ತೋರಿಕೆಯೆಲ್ಲಾ ಮಂತ್ರಸ್ವರೂಪವೇ ಆಗಿ ತೋರಿದಲ್ಲಿ ತತ್ವಜ್ಞಾನವಾಯಿತು. ಒಳಗೇಕವಾದ ತತ್ವಜ್ಞಾನವು ಹೊರಗೆ ನೋಡಲು ಹೊರಗೇಕವಾಗಿ ತೋರಿತು. ಒಳಹೊರಗೆಂಬಲ್ಲಿ ನಡುವೆಂಬುದೊಂದು ತೋರಿತು. ಈ ಮೂರು ಒಂದೇ ಆಗಿ, ಒಂದೇ ಬ್ಯಾರೆ ಬ್ಯಾರೆ ಸ್ಥೂಲ ಸೂಕ್ಷ್ಮ ಕಾರಣ ಮೂರಾದಲ್ಲಿ ಆತ್ಮಜ್ಞಾನವಾಯಿತು. ಆ ಆತ್ಮಜ್ಞಾನದಿಂದ ಆತ್ಮಾನಾತ್ಮ ವಿಚಾರ ಗಟ್ಟಿಗೊಂಡಲ್ಲಿ ಮಹಾಜ್ಞಾನಪ್ರಕಾಶವಾಯಿತು. ಆ ಮಹಾಜ್ಞಾನದಿಂದೆ ಅನುಭವದ ದೃಷ್ಟಿಯಿಡಲು ಬೊಂಬೆಸೂತ್ರ ಆಡಿಸುವವನಂತೆ ಬ್ಯಾರೆ ಬ್ಯಾರೆ ಕಾಣಿಸಲು ಈ ಬೊಂಬೆಯ ಸೂತ್ರ ಆಡಿಸುವವನು ಇವು ಮೂರು ಎಲ್ಲಿಹವು, ಏನೆಂದು ತೂರ್ಯವೇರಿ ಸೂರೆಗೊಂಡಲ್ಲಿ ಸ್ವಯಂಬ್ರಹ್ಮವೆನಿಸಿತ್ತು. ಆ ಸ್ವಯಂಬ್ರಹ್ಮಜ್ಞಾನವು ತನ್ನ ತಾ ವಿಚಾರಿಸಲು ತನ್ನೊಳಗೆ ಜಗ, ಜಗದೊಳಗೆ ತಾನು, ತಾನೇ ಜಗ, ಜಗವೇ ತಾನೆಂಬಲ್ಲಿ ನಿಜಜ್ಞಾನವಾಯಿತು. ಆ ನಿಜಜ್ಞಾನದಿಂದೆ ನಿಜವರಿಯಲು ಆ ನಿಜದೊಳಗೆ ತಾನೇ ಜಗ, ಜಗದೊಳಗೆ ತಾನೇ ಎಂಬೋ ಎರಡಿಲ್ಲದೆ ತಾನೆ ತಾನೆಂಬೊ ಅರುವಾಯಿತು. ಆ ಅರುವು ಮರೆಗೊಂಡು ಕುರುಹು ಉಲಿಯದೆ ನಿರ್ಬೈಲಾಗಲು ಮಹಾಂತನೆಂಬ ಹೆಸರಿಲ್ಲದೆ ಹೋಗಿ ಏನೋ ಆಯಿತ್ತು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಎಲೋ ಮಾನವ ಕೇಳೆಲೊ, ಶೀಲದಲ್ಲಿ ಸಂಪನ್ನರಾದವರು ನೀವು ಕೇಳಿರೊ: ಹಣ್ಣುಗಳು ಸಣ್ಣ ಜಾತಿಯ ಎಂಜಲು, ಹಾಲು ಕರುವಿನ ಎಂಜಲು, ಮೊಸರು ಗೊಲ್ಲತಿಯ ಎಂಜಲು, ಅಕ್ಕಿ, ಗೋದಿ, ಬೇಳೆ, ಬೆಲ್ಲಗಳು ನೊಣದ ಎಂಜಲು, ನೀರು ಮೀನು ಕಪ್ಪೆಗಳ ಎಂಜಲು, ಉಪ್ಪು ಉಪ್ಪಾರನ ಎಂಜಲು, ಎಣ್ಣೆ ಸರ್ವಮಾನವರ ಎಂಜಲು, ಸಕಲಪದಾರ್ಥವು ಅನಂತ ಹುಳುಗಳ ಎಂಜಲು. ಇಂತಹ ಎಂಜಲವು ಎಂದು ಕಣ್ಣಾರೆ ನೋಡಿ, ಕಿವಿಯಾರೆ ಕೇಳಿ, ಮಾಡುವ ದುರಾಚಾರವ ಆರು ಬಣ್ಣಿಸಬಹುದುರಿ ಅರಿವು ಇಲ್ಲದವರು ಅರಮನೆಗೆ ಮಾಡಿದರು, ಭಕ್ತಿಯಿಲ್ಲದವರು ತಮ್ಮ ಗುರುಲಿಂಗಜಂಗಮಕ್ಕೆ ಮಾಡಿದರು. ಇಂತಪ್ಪ ಸರ್ವರ ಎಂಜಲು ತಿಂದು ಶಿವಲಿಂಗವ ಧರಿಸಿಕೊಂಡು, ಶಿವಭಕ್ತರೆಂದು ಹೇಳಿಸಿ, ಕಾಲಿಗೆ ಬಂದಂತೆ ಕುಣಿದು, ಬಾಯಿಗೆ ಬಂದಂತೆ ಅಂದು, ಮನಬಂದಂತೆ ಸ್ತ್ರೀಸಂಗದಲ್ಲಿ ಆಚರಿಸುವ ಭ್ರಷ್ಟ ಹೊಲೆಮಾದಿಗರಿಗೆ ಶೀಲವು ಎಲ್ಲಿಹುದು? ಆಚರಣೆ ಎಲ್ಲಿಹುದುರಿ ಕುಲವೆಲ್ಲಿಹುದು? ಇಂತಪ್ಪ ಮೂಳಹೊಲೆಯರ ಮೂಗ ಕೊಯ್ದು ಪಡಿಹಾರಿ ಉತ್ತಣ್ಣಗಳ ಪಾದುಕದಿ ಹೊಡೆ ಎಂದಾತ ನಮ್ಮ ಅಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->