ಅಥವಾ

ಒಟ್ಟು 33 ಕಡೆಗಳಲ್ಲಿ , 12 ವಚನಕಾರರು , 27 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೂಷಕನವನೊಬ್ಬ ದೇಶವ ಕೊಟ್ಟಡೆ, ಆಸೆಮಾಡಿ ಅವನ ಹೊರೆಯಲಿರಬೇಡ. ಮಾದಾರ ಶಿವಭಕ್ತನಾದಡೆ, ಆತನ ಹೊರೆಯಲು ಭೃತ್ಯನಾಗಿಪ್ಪುದು ಕರ ಲೇಸಯ್ಯಾ, ತೊತ್ತಾಗಿಪ್ಪುದು ಕರ ಲೇಸಯ್ಯಾ. ಕಾಡ ಸೊಪ್ಪು ತಂದು ಓಡಿನಲ್ಲಿ ಹುರಿದಿಟ್ಟು, ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ. 136
--------------
ಬಸವಣ್ಣ
ವೇಷವ ಹೊತ್ತು , ಆಶೆ ರೋಷವ ಬಿಡದೆ, ದೇಶವ ತಿರುಗಿ, ಹೊರವೇಷದ ವಿಭೂತಿ ರುದ್ರಾಕ್ಷಿ ಕಾವಿ ಕಾಷಾಯಾಂಬರವ ಧರಿಸಿ ಫಲವೇನು? ಕಾಮ ಕೆಡದು, ಕ್ರೋಧ ಬಿಡದು, ಲೋಭ ಹಿಂಗದು, ಮೋಹ ನಿಲ್ಲದು, ಮದ ಹೆರೆಸಾರದು, ಮತ್ಸರ ಬೆಂದುಹೋಗದು. ಇವೆಲ್ಲ ಸಹಿತ ಜಂಗಮಭಕ್ತರೆಂದು ಸುಳಿವವರ ಕಂಡು ನಾಚಿತ್ತು ಎನ್ನ ಮನ. ಭಕ್ತಜಂಗಮ ಘನವನೇನೆಂದು ಉಪಮಿಸುವೆ ? ರೂಪಿನ ಹಾಗೆ, ನೆಳಲಿನ ಹಾಗೆ, ದೇಹದ ಹಾಗೆ, ಪ್ರಾಣದ ಹಾಗೆ, ಭಾವದ ಹಾಗೆ, ನಿರ್ಭಾವದ ಹಾಗೆ, ಉರಿಯ ಹಾಗೆ, ಕರ್ಪುರದ ಹಾಗೆ, ಆವಿಯ ಹಾಗೆ, ನೀರ ಹಾಗೆ, ಎರಡೊಂದಾದರೆ ತೆರಹಿಲ್ಲ. ಆ ನಿಲುವಿಂಗೆ ನಮೋ ನಮೋ ಎನುತಿರ್ದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಅಯ್ಯಾ, ತನ್ನ ತಾನರಿಯದೆ, ತನ್ನ ಇಷ್ಟಲಿಂಗದ ಹೊಲಬು ತಿಳಿಯದೆ, ಕಾಮವ ತೊರೆಯದೆ, ಹೇಮವ ಜರೆಯದೆ, ನಾವು ಹರ ಗುರು ಚರ ಷಟ್‍ಸ್ಥಲದ ವಿರಕ್ತರೆಂದು ಚೆನ್ನಾಗಿ ನುಡಿದುಕೊಂಡು, ಕಾವಿ ಕಾಷಾಯಾಂಬರವ ಹೊದ್ದು, ಶಂಖ ಗಿಳಿಲು ದಂಡಾಗ್ರವ ಹೊತ್ತು, ಕೂಳಿಗಾಗಿ ನಾನಾ ದೇಶವ ತಿರುಗಿ, ಕಾಂಚನಕ್ಕೆ ಕೈಯೊಡ್ಡುವ ಪಂಚಮಹಾಪಾತಕರನು ಕಾಗೆಯ ಗರ್ಭದಲ್ಲಿ ಹುಟ್ಟಿಸಿ ಕಾಕಾ ಎಂದು ಕೂಗಿಸುತಿರ್ಪ[ನು] ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ವೇಷವ ಧರಿಸಿ, ಭಾಷೆಯ ಕಲಿತು, ದೇಶವ ಸುತ್ತಿ ಬಳಲಬೇಡ. ಜಗದೀಶನ ಪಾದವನೊಲಿದು ಪೂಜಿಸಿರಣ್ಣಾ. ಸವಿಯೂಟದಾಸೆಗೆ ಮನವೆಳಸಬೇಡ. ಪರಮೇಶನ ಪಾದವ ನೆನೆದು ಸುಖಿಸಿರಣ್ಣಾ. ತರ್ಕಶಾಸ್ತ್ರ ಆಗಮ ಮಾಯಾಜಾಲದ ಹರಟೆಗೆ ಹೊಗದೆ, ಮೂಲಮಂತ್ರ[ವ] ಮರೆಯದೆ ಸ್ಮರಿಸಿರಣ್ಣಾ. ಸಂಸಾರಿಗಳ ಸಂಗದೊಳಗೆ ಇರಬೇಡ. ಸದ್ಭಾವರ ಸಂಗದೊಳಗಿರ್ದು ನಿತ್ಯವ ಸಾದ್ಥಿಸಿಕೊಳ್ಳಿರಣ್ಣಾ. ಪರರ ಯಾಚಿಸಿ ತನುವ ಹೊರೆಯಬೇಡ. ಶಿವನಿಕ್ಕಿದ ಬ್ಥಿಕ್ಷೆಯೊಳಗಿದ್ದು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನೊಲಿಸಿರಣ್ಣಾ.
--------------
ಸ್ವತಂತ್ರ ಸಿದ್ಧಲಿಂಗ
ಮಣ್ಣ ಮೆಚ್ಚಿ ಗುರುವಿಗೆ ಹೊರತಾದೆ, ಹೆಣ್ಣ ಮೆಚ್ಚಿ ಲಿಂಗಕ್ಕೆ ಹೊರತಾದೆ, ಹೊನ್ನ ಮೆಚ್ಚಿ ಜಂಗಮಕ್ಕೆ ಹೊರತಾದೆ. ಇಂತೀ ತ್ರಿವಿಧವ ಮೆಚ್ಚಿ ಅಕಟಕಟಾ ಕೆಟ್ಟೆನೆಂದು ಗುರೂಪಾವಸ್ತೆಯಂ ಮಾಡಿ, ಗುರುವಾಕ್ಯ ಪ್ರಮಾಣವಿಡಿದು, ಆಚರಿಸುವ ಜ್ಞಾನಕಲಾತ್ಮನಿಗೆ ಈ ಲೋಕದ ಜಡಜೀವರು ಕಡುಪಾತಕರು ಬಂದು ಈ ಸಂಸಾರದಲ್ಲಿ ಪಾರಮಾರ್ಥವುಂಟು, ಇದರೊಳಗೆ ಸಾದ್ಥಿಸಬೇಕೆಂದು ಇಹ ಬಿಟ್ಟು ವೈರಾಗ್ಯದಲ್ಲಿ ಮೋಕ್ಷವಿಲ್ಲೆಂದು ಹೇಳುವರು. ಇದಕ್ಕೆ ಉಪಮೆ- ಹಿಂದೆ ಕಲ್ಯಾಣಪಟ್ಟಣಕ್ಕೆ ತಮ್ಮ ತಮ್ಮ ದೇಶವ ಬಿಟ್ಟು ಬಂದ ಗಣಂಗಳಾರಾರೆಂದಡೆ: ಮೋಳಿಗೆ ಮಾರತಂದೆಗಳು ಕಾಶ್ಮೀರದೇಶದ ಅರಸು. ನಿಜಗುಣಸ್ವಾಮಿಗಳು ಕೈಕಾಡದೇಶದ ಅರಸು. ನುಲಿಯ ಚಂದಯ್ಯನವರು ಕೈಕಾಣ್ಯದೇಶದ ಅರಸುಗಳು. ಇಂತಿವರು ಮೊದಲಾದ ಬಸವಾದಿ ಪ್ರಭುದೇವರಾಂತ್ಯಮಾದ ಏಳನೂರೆಪ್ಪತ್ತು ಪ್ರಮಥಗಣಂಗಳು. ತಮ್ಮ ತಮ್ಮ ದೇಶವ ಬಿಟ್ಟು ಕಲ್ಯಾಣಕ್ಕೆ ಬಂದರು. ಅವರೆಲ್ಲರು ಹುಚ್ಚರು, ನೀವೇ ಬಲ್ಲವರು. ಬಸವೇಶ್ವರದೇವರು ಮೊದಲಾಗಿ ಏಳನೂರೆಪ್ಪತ್ತು ಪ್ರಮಥಗಣಂಗಳು ಕೂಡಿ ತಮ್ಮ ತಮ್ಮ ಹೃನ್ಮಂದಿರದಲ್ಲಿ ನೆಲಸಿರುವ ಪರಶಿವಲಿಂಗಲೀಲಾವಿನೋದದಿಂ ಎರಡೆಂಬತ್ತೆಂಟುಕೋಟಿ ವಚನಗಳನ್ನು ಹಾಡಿಕೊಂಡರು. ಇದರನುಭಾವವ ತಿಳಿಯಬಲ್ಲರೆ ಹೇಳಿರಿ; ಅರಿಯದಿದ್ದರೆ ಕೇಳಿರಿ. ತನು-ಮನ-ಧನ ನೀನಲ್ಲ, ಪಂಚವಿಂಶತಿತತ್ವ ನೀನಲ್ಲ, ಪಂಚಭೂತಪ್ರಕೃತಿ ನೀನಲ್ಲ, ಮನ ಮೊದಲಾದ ಅರವತ್ತಾರುಕೋಟಿ ಕರಣಾದಿ ಗುಣಂಗಳು ನೀನಲ್ಲ. ಇಂತೀ ಎಲ್ಲವನು ನೀನಲ್ಲ, ನೀನು ಸಾಕಾರಸ್ವರೂಪಲ್ಲವೆಂದು ಸ್ವಾನುಭಾವಜ್ಞಾನಗುರುಮುಖದಿಂದ ತಿಳಿದು ಸಕಲಪ್ರಪಂಚವನೆಲ್ಲವ ನಿವೃತ್ತಿಯ ಮಾಡಿ, ಸಕಲಸಂಶಯವಂ ಬಿಟ್ಟು, ನಿಶ್ಚಿಂತನಾಗಿ, ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸೆಂದು ಹಾಡಿದರಲ್ಲದೆ ಅವರೇನು ದಡ್ಡರೇ? ನೀವೇ ಬಲು ಬುದ್ಧಿವಂತರು, ಬಲುಜಾಣರು ! ಇಂಥ ಯುಕ್ತಿ ವಿಚಾರವ ಹೇಳುವ ಮತಿಭ್ರಷ್ಟ ಹೊಲೆಯರ ಕಾಲು ಮೇಲಕ್ಕೆ ಮಾಡಿ, ತಲೆ ಕೆಳಯಕ್ಕೆ ಮಾಡಿ ಅವರಂಗದ ಮೇಲಿನ ಚರ್ಮವ ಹೋತು ಕುರಿಗಳ ಚರ್ಮವ ಹರಿದ ಹಾಗೆ ಹರಿದು, ಅವರ ತಿದಿಯನೆ ಹಿರಿದು, ಅವರ ಕಂಡವ ಕಡಿದು, ಚಿನಿಪಾಲವ ಮಾಡಿ, ಹದ್ದು ಕಾಗೆ ನಾಯಿ ನರಿಗಳಿಗೆ ಹಾಕೆಂದ ಕಾಣಾ ನಿಮ್ಮ ಶರಣ ವೀರಾದ್ಥಿವೀರ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಕೆಚ್ಚಿಲ್ಲದ ಮರನ ಕ್ರಿಮಿ ಇಂಬುಗೊಂಬಂತೆ, ಒಡೆಯನಿಲ್ಲದ ಮನೆಯ ಶುನಕ ಸಂಚುಗೊಂಬಂತೆ, ನೃಪತಿಯಿಲ್ಲದ ದೇಶವ ಮನ್ನೆಯರಿಂಬುಗೊಂಬಂತೆ, ನಿಮ್ಮ ನೆನಹಿಲ್ಲದ ಶರೀರವ ಭೂತ ಪ್ರೇತ ಪಿಶಾಚಿಗಳಿಂಬುಗೊಂಬಂತೆ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ದಾಸೋಹಿ ದಾಸೋಹಿಗಳೆಂದು ಬೇಸರಿಲ್ಲದೆ ಅಂಚೆಬೆಂತನಂತೆ ದೇಶ ದೇಶವ ತಿರುಗಿ ಆಸೆಯೆಂಬ ಅದ್ಭುತ ಅಂಗಗೊಂಡು ಹೇಸಿಕೆಯೊಳು ಬಿದ್ದೇಳದ ಮಕ್ಷುಕನಂತೆ ಮಲಬದ್ಧ ಮನುಜರ ಬೋದ್ಥಿಸಿ ಕಾಡಿ ಕರೆಕರೆಸಿ, ಕಾಸಾದಿ ದ್ರವ್ಯವ ಕೊಂಡು ಬಂದು ಹಾಸಿ ಹಬ್ಬಕಿಕ್ಕಿ, ನಾಮಾಡಿದೆನೆಂಬ ನಾಯಿಯ ತೇಜವ ಹೊತ್ತು ತೊಳಲುವ ತಥ್ಯ ಭಂಡರ ಸೋಗಿಗೆ ಸೊಗಸರಯ್ಯಾ ನಿಮ್ಮ ಭಕ್ತರು ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇಪ್ಪತ್ತೈದು ಶಿವಾಲಯದ ಮೇಲೆ ಸುತ್ತಿಕೊಂಡಿಪ್ಪ ಲಿಂಗವ ಕಂಡೆನಯ್ಯ. ಆ ಲಿಂಗದಲ್ಲಿ ಮೂವರು ಪೂಜಾರಿಗಳಿಪ್ಪರು ನೋಡಾ. ಆ ಪೂಜಾರಿಗಳು ಆರು ದೇಶವ ಪೊಕ್ಕು, ಭಕ್ತಾಂಗನೆಯ ಸಂಗವ ಮಾಡಿ, ಮುಕ್ತಿಸಾಮ್ರಾಜ್ಯಕೆ ಹೋಗಿ ನಿರ್ವಿಕಲ್ಪ ನಿತ್ಯಾತ್ಮಕರಾದರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಆರು ಸ್ಥಲದಲ್ಲಿ ಆರು ಮೂರ್ತಿಗಳು ಆರು ಶಕ್ತಿಯರ ಸಂಗವ ಮಾಡಿ, ಮೂರು ದೇಶವ ಮೀರಿ, ಸಾವಿರೆಸಳಮಂಟಪವ ಪೊಕ್ಕು, ಸಾವಿರ ಲಿಂಗಾರ್ಚನೆಯ ಮಾಡುತಿಪ್ಪರು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ದೇಶದೇಶವ ತಿರುಗುವರು ಧನಿಕರ ಧರ್ಮದಿಂದೆ. ದೇಶವ ತಿರುಗುವರು ಒಡಲ ಪೋಷಿಸುವುದರಿಂದ. ದೇಶವ ತಿರುಗುವರು ಮಲಮೂರರ ಆಸೆ, ವೇಶ್ಯೆಯ ಮಚ್ಚು ತಲೆಗೇರಿ, ಗುರುಸೇವೆ ಮುಂದುಗೊಂಡು ದೇಶಾಂತರವ ಮಾಡಲಿಲ್ಲ. ಲಿಂಗಪೂಜೆ ಮುಂದುಗೊಂಡು ದೇಶವ ತಿರುಗಲಿಲ್ಲ. ಜಂಗಮದಾಸೋಹ ಮುಂದುಗೊಂಡು ದೇಶವ ತಿರುಗಲಿಲ್ಲ. ಇಂತು ಅಪ್ರಯೋಜನ ಪ್ರಾಣಿಗಳ ಶಿವಯೋಗಿಗಳೆಂದು ನಿರ್ಮಲ ಗಮನಮತಿಮಹಿಮರು ನುಡಿದುಕೊಳ್ಳಲಾಗದು ಗುರುನಿರಂಜನ ಚನ್ನಬಸವಲಿಂಗಕ್ಕೆ ದೂರವಾದ ದುರ್ಜನರನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಆರುತತ್ವದ ಮೇಲೆ ನಿತ್ಯತ್ವ ನಿಜಪರಬ್ರಹ್ಮಲಿಂಗವು ತಾನೇ ನೋಡಾ. ಆ ಲಿಂಗದ ಸಂಗದಿಂದ ಒಬ್ಬ ಸತಿಯಳು ಆರು ಮೂರು ದೇಶವ ನೋಡಿ ನಿರ್ದೇಶದಲ್ಲಿ ನಿಂದು ಪರವಶವಾದ ಸೋಜಿಗವ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಲಿಂಗನಿಷ್ಪತ್ತಿಗಳಾಚರಣೆಯ ಕಂಡು, ಸಂಗಹೇಯ ಮಾಡದೆ, ಗುರುಮುಟ್ಟಿ ಗುರುವಾದೆವೆಂದು ಬಿಟ್ಟು ಹಿಡಿದು ಹಿಡಿದು ಬಿಟ್ಟು ಹೊಟ್ಟೆಯ ಹೊರೆಯಲೋಸುಗ ನಂಟುಬಿಚ್ಚಿ ಗಂಟಿಕ್ಕುವ ತುಂಟು ಹೊಯ್ಮಾಲಿಗಳನೆಂತು ಶರಣರೆನ್ನಬಹುದು ? ಕಾಸಿನಾಸೆಗೆ ದೇಶವ ತಿರುಗಿ, ಬೇಸರಿಲ್ಲದೆ ಬೇಡಿ ಬೇಡಿ ಘಾಸಿಯಾಗಿ, ಮುಂದಣ ಹೇಸಿಕೆ ಕಂಡು ಕಂಡು ಬೀಳುವ ಖೂಳ ಕುಟಿಲ ಕಾಳಮಾನವರನೆಂತು ಶರಣರೆನ್ನಬಹುದು ? ಬಾಳಿ ಬದುಕಲರಿಯದೆ ಕೇಳಿ ಮೇಳವ ಮಾಡಿ ಹಾಳುಗೋಷಿ*ಯಕಲಿತು, ಕಲಿಯುಪಾಧಿಯೊಳು ನಿಂದು ನಿಜಭಕ್ತಿ ಸುಜ್ಞಾನ ಪರಮವೈರಾಗ್ಯವನರಿಯದೆ ಹಿರಿಯರೆನಿಸಿಕೊಂಡು, ಹೋಗಿ ಬಂದುಂಬ ಕುರಿಗಳನೆಂತು ಶರಣರೆನ್ನಬಹುದು ? ನಮ್ಮ ಗುರುನಿರಂಜನ ಚನ್ನಬಸವಲಿಂಗದಂಗವೆಂಬ ಘನಪ್ರಸಾದವ ಹಿಂಗದಿರ್ದ ತ್ರಿವಿಧಶೂನ್ಯಶರಣರಂತಲ್ಲದ ಮರುಳುಗಳನೆಂತು ಶರಣರೆನ್ನಬಹುದು ?
--------------
ದೇಶಿಕೇಂದ್ರ ಸಂಗನಬಸವಯ್ಯ
ದೇಶಿಕಶಿವಯೋಗಿ ಭುವನಾಕಾಶವಿಡಿದು ದೇಶಾಂತರವ ಮಾಡುವ ಪರಿಯೆಂತೆಂದೊಡೆ: ಕನ್ನಡದೇಶದಿಂದೆ ನೋಡಿ, ಮರಾಠ ಮಲಯ ದೇಶವ ಹಿಂದೆ ಬಿಟ್ಟು, ಕೊಂಕಣದೇಶವಿಡಿದು ಕಲ್ಯಾಣಪುರವರಾಧೀಶ್ವರ ಬಸವರಾಜೇಂದ್ರನ ಕಂಡು ಶರಣುಹೋಗಬೇಕೆಂದು ಮಧ್ಯದೇಶದ ಧರ್ಮರಾಯನ ಕಂಡು ಮೂಕೋಟಿ ದ್ರವ್ಯವನಿತ್ತು ತೋರೆಂದಡೆ ಮುಟ್ಟಿ ಕರ್ನಾಟಕದೇಶದಿಂದೆ ತೋರಿದ ನೋಡಾ. ಕಂಡ ಕಲ್ಯಾಣದೊಳೊಪ್ಪುವ ಬಸವಣ್ಣಂಗೆ ಹೊರಗೊಳಗೊಳಗೆ ಕರಣತ್ರಯಗೂಡಿ ಚರಣಗಳ ಪಿಡಿದು ಸಕಲ ಜನರಿಗೆ ಉತ್ತರದೇಶದ ಪರಿಯನರುಪಲು ಸುಖಮುಖಿಗಳಾದವರು. ಅಲ್ಲಿಂದೆ ಮೂಡಣದೇಶವ ತಿರುಗಿ, ಬಂಗಾಳದೇಶಕ್ಕೆ ದಕ್ಷಿಣವಾದ ನಂಜುಂಡನ ಜಾತ್ರೆಯ ನೋಡಲು, ಆ ನಂಜುಂಡನ ಜಾತ್ರೆಯ ಮುನ್ನವೆ ಕೂಡಲಸಂಗಮನಾಥನ ಜಾತ್ರೆಯಾಗಿ ಕಾಣುತಿರ್ದಿತ್ತು. ಆ ಜಾತ್ರೆಯೊಳು ನಿಂದು ಪಾಂಡವದೇಶದ ಸುಖವನು ಕುಂತಣದೇಶದತ್ತ ಆರು ಮಠವ ನಿರ್ಮಿಸಿದ ಆರು ದರ್ಶನ ಗತಿಮತಿಯನರಿದು ಕುಂಭಕೋಣೆಯ ರಂಭೆಯ ಕೈವಿಡಿದು, ಪಶ್ಚಿಮದೇಶದಲ್ಲಿ ಪರಮಹರುಷವೆರೆದು ಘನಗಂಭೀರ ಕಡಲೋಕುಳಿಯಾಡುತಿರ್ದು ಗುರುನಿರಂಜನ ಚನ್ನಬಸವಲಿಂಗಸನ್ನಿಹಿತ ಅನಂತ ದೇಶವ ಪಾವನಮಾಡಿ ಮೀರಿದ ದೇಶದತ್ತ ಸಾರಿದನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಆದಿಯಲ್ಲಿ ಉದಯವಾದ ದೇವನು, ಮೂರಾರು ದೇಶವ ನೋಡಿ, ಆರು ದೇಶದಲ್ಲಿ ಅಂಗವ ಸಂಬಂಧಿಸಿ, ಮೂರು ದೇಶದಲ್ಲಿ ಲಿಂಗವ ಸಂಬಂಧಿಸಿ, ಅಂಗಲಿಂಗಸಂಬಂಧವ ಗರ್ಭೀಕರಿಸಿಕೊಂಡು ಪರವಶದಲ್ಲಿ ನಿಂದು, ಪರಕೆಪರವನೈದ ಮಹಾಬ್ರಹ್ಮವೆನಿಸಿದನು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಯ್ಯಾ, ನಾವು ಪರಮವಿರಕ್ತರು, ಪಟ್ಟದ ಅಯ್ಯನವರು, ಚರಮೂರ್ತಿಗಳು, ಪರದೇಶಿಗಳು ಎಂದು ಶಂಖ ಗಿಳಿಲು ದಂಡಾಗ್ರ ಎಂಬ ಬಿರುದು ಪಿಡಿದು, ಕಾವಿ ಕಾಷಾಯಾಂಬರವ ಹೊತ್ತು, ಸರ್ವಕಾರ್ಯದಲ್ಲಿ ಶ್ರೇೀಷ*ರೆಂದು ಗರ್ವದಲ್ಲಿ ಕೊಬ್ಬಿ, ಕಾಮನಾಟದಲ್ಲಿ ಕಲಕಿ, ಮನಸ್ಸಿನಲ್ಲಿ ದುರ್ಗುಣವನ್ನಿಟ್ಟುಕೊಂಡು ಮಾತಿನಲ್ಲಿ ನೀತಿಯ ಸೇರಿಸುತ್ತ ಕಪಟದಲ್ಲಿ ಚರಿಸುವಂತಹ ತೊನ್ನ ಹೊಲೆಮಾದಿಗರ ಸಂಗಮಾಡಲಾಗದು, ಅವರ ಪ್ರಸಂಗವ ಕೇಳಲಾಗದು. ಅದೇನು ಕಾರಣವೆಂದಡೆ: ಗುರುಲಿಂಗಜಂಗಮವಾದ ಬಳಿಕ ಅಷ್ಟಾವರಣದಲ್ಲಿ ನಿಷಾ*ಪರವಾಗಿರಬೇಕು. ಪರಧನ ಪರಸತಿಯರ ಹಿಡಿಯೆನೆಂಬ ನೇಮದಲ್ಲಿ ಬಲ್ಲಿದರಾಗಿರಬೇಕು. ಶಿವಭಕ್ತರಾದವರ ಭವವ ಗೆಲಿಸಿ ಮೋಕ್ಷವ ಹೊಂದಿಸಬೇಕು. ಶಿವಲಾಂಛನವ ಹೊತ್ತ ಬಳಿಕ ಶಿವನಂತಿರಬೇಕು ಬರಿದೆ, ನಾನು ಮಾಹೇಶ್ವರನೆಂದು, ನಾನು ಶಿವಭಕ್ತನೆಂದು ತನ್ನ ಹೃನ್ಮಂದಿರದಲ್ಲಿ ನೆಲಸಿದ ಚಿನ್ಮಯಜಂಗಮಲಿಂಗಕ್ಕೆ ತನು-ಮನ-ಧನವೆಂಬ ತ್ರಿವಿಧಪದಾರ್ಥವನರ್ಪಿಸಿ, ತ್ರಿವಿಧಪ್ರಸಾದವ ಗರ್ಭೀಕರಿಸಿಕೊಂಡು, ಪ್ರಸನ್ನಪ್ರಸಾದವ ಸ್ವೀಕರಿಸಿ ಪರತತ್ವಪ್ರಸಾದದಲ್ಲಿ ತಾನು ತಾನಾಗಲರಿಯದೆ ಉಚ್ಚಂಗಿದುರ್ಗಿಗೆ ಬಿಟ್ಟ ಪೋತರಾಜನಂತೆ ಮೂರು ಮೂರು ಜಡೆಗಳ ಬಿಟ್ಟು, ಆಡಿನೊಳಗಿರುವ ಹಿರಿಯ ಹೋತಿನಂತೆ ಮೊಳ ಮೊಳ ಗಡ್ಡವ ಬಿಟ್ಟು, [ಡಂ]ಬ ಜಾತಿಗಾರನಂತೆ ವೇಷವ ತೊಟ್ಟು, ಮೀಸೆಯ ಬೋಳಿಸಿಕೊಂಡು, ಕೈಪವ ಧರಿಸಿ, ಸಂಸ್ಕೃತ ಗೀರ್ವಾಣಭಾಷೆಯ ಕಲಿತು, ಕಾಕ ಕುಟಿಲ ಕುಹಕದ ಗಾಳಿಪೂಜೆಯಿಂದ ಬಂದ ಸುಡಗಾಡು ಸಿದ್ಧಯ್ಯಗಳಂತೆ, ಗಿಡಮೂಲಿಕೆಗಳು ತಂತ್ರ ಮಂತ್ರ ಯಂತ್ರದ ಭಾಷೆಗಳ ಕಲಿತುಕೊಂಡು ಪುರಜನರ ಮೆಚ್ಚಿಸಬೇಕೆಂದು ಅಯ್ಯಾ, ನಾವು ಕೆರೆ ಭಾವಿಯನಗೆಸಬೇಕೆಂದು, ಮಠ ಗುಡಿಯ ಕಟ್ಟಿಸಬೇಕೆಂದು, ಮಾನ್ಯದಲಿ ಬಿಲ್ವಗಿಡಗಳ ಹಚ್ಚಬೇಕೆಂದು, ಮದುವೆ ಅಯ್ಯಾಚಾರವ ಮಾಡಬೇಕೆಂದು, ಅನ್ನಕ್ಷೇತ್ರ ಅರವಟ್ಟಿಗೆಯ ಇಡಿಸಬೇಕೆಂದು, ಪುರಾಣಗಳ ಹಚ್ಚಿಸಬೇಕೆಂದು, ಇಂತಪ್ಪ ದುರಾಸೆಯ ಮುಂದುಗೊಂಡು ನಾನಾ ದೇಶವ ತಿರುಗಿ, ಅರಸರ ಮದದಂತೆ ಗರ್ವದಿಂದ ಹೆಚ್ಚಿ, ಹೇಸಿ ಹೊಲೆ ಮಾದಿಗರ ಕಾಡಿ ಬೇಡಿ, ಹುಸಿಯನೆ ಬೊಗಳಿ ಒಬ್ಬನ ಒಲವ ಮಾಡಿ[ಕೊಂ]ಡು, ವ್ಯಾಪಾರ ಮರ್ಯಾದೆಯಲ್ಲಿ ಪೇಟೆಯಲ್ಲಿ ಕುಳಿತು ಅನಂತ ಮಾತುಗಳನಾಡುತ್ತ, ಸೆಟ್ಟಿ ಮುಂತಾದ ಅನಂತ ಕಳ್ಳ ಹಾದರಗಿತ್ತಿಯ ಮಕ್ಕಳ ಮಾತಿನಿಂದೊಲಿಸಿ, ಅವರು ಕೊಟ್ಟಡೆ ಹೊಗಳಿ, ಕೊಡದಿರ್ದಡೆ ಬೊಗಳಿ, ಆ ಭ್ರಷ್ಟ ಹೊಲೆಮಾದಿಗರು ಕೊಟ್ಟ ದ್ರವ್ಯಗಳ ತೆಗೆದುಕೊಂಡು ಬಂದು ಕಡೆಗೆ ಚೋರರು ಒಯ್ದರೆಂದು ಮಠದೊಳಗೆ ಮಡಗಿಕೊಂಡು ಪರಸ್ತ್ರೀಯರ ಹಡಕಿ ಯೋನಿಯೊಳಗೆ ಇಂದ್ರಿಯ ಬಿಟ್ಟು, ಕಾಮಕ್ರೋಧದಲ್ಲಿ ಮುಳುಗಿ ಮತಿಗೆಟ್ಟು, ಶಿವಪಥಕ್ಕೆ ದೂರಾಗಿ, ದುರಾಚಾರವ ಆಚರಿಸಿ, ನಡೆನುಡಿಗಳ ಹೊರತಾಗಿ, ವ್ಯರ್ಥ ಹೊತ್ತುಗಳೆದು, ಸತ್ತುಹೋಗುವ ಜಡದೇಹಿ ಕಡುಪಾತಕ ಕತ್ತೆ ಹಡಿಕರಿಗೆ ಪರಮ ನಿರಂಜನ ಜಂಗಮಲಿಂಗದೇವರೆಂದು ಕರೆತಂದು, ಪಾದತೀರ್ಥ ಪ್ರಸಾದವ ತೆಗೆದುಕೊಂಬುವರಿಗೆ ಇಪ್ಪತ್ತೊಂದು ಯುಗಪರಿಯಂತರ ನರಕಕೊಂಡದಲ್ಲಿಕ್ಕುವ. ಇಂತಪ್ಪ ಜಂಗಮವನು ಪೂಜೆ ಮಾಡುವಂತಹ ಶಿವಭಕ್ತನ ಉಭಯತರ ಮೂಗ ಸೀಳಿ ಮೆಣಸಿನ ಹಿಟ್ಟು ತುಪ್ಪವ ತುಂಬಿ, ಪಡಿಹಾರಿ [ಉತ್ತಣ]ಗಳೆಡದ ಪಾದುಕೆಯಿಂದ ಪಡಪಡನೆ ಹೊಡಿ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಇನ್ನಷ್ಟು ... -->