ಅಥವಾ

ಒಟ್ಟು 41 ಕಡೆಗಳಲ್ಲಿ , 22 ವಚನಕಾರರು , 40 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕ್ರಿಯಾಸ್ವರೂಪವೇ ಲಿಂಗವೆಂದು, ಜಾÕನಸ್ವರೂಪವೇ ಜಂಗಮವೆಂದು, ಜಾÕನಸ್ವರೂಪವಪ್ಪ ಜಂಗಮದ ಪ್ರಸನ್ನೇತಿ ಪ್ರಸಾದ ಲಿಂಗಕ್ಕೆ ಜೀವಕಳೆಯೆಂದೆ. ಜ್ಯೋತಿ ಕರ್ಪೂರವ ನೆರೆದಂತೆ, ಅಂಗ ಲಿಂಗದಲ್ಲಡಗಿತ್ತು. ದೀಪ ದೀಪವ ಬೆರಸಿದಂತೆ ಪ್ರಾಣ ಜಂಗಮದಲ್ಲಿ ಅಡಗಿತ್ತು. ಈ ಕ್ರಿಯಾ ಜಾÕನ ಭಾವ ನಿರವಯವಾದವಾಗಿ ಲಿಂಗವೆನ್ನೆ, ಜಂಗಮವೆನ್ನೆ ಪ್ರಸಾದವೆನ್ನೆ ಇದುಕಾರಣ, ಕೊಟ್ಟೆನೆಂಬುದೂ ಇಲ್ಲ, ಕೊಂಡೆನೆಂಬುದೂ ಇಲ್ಲ. ಕೊಡುವುದು ಕೊಂಬುದು ಎರಡೂ ನಿರ್ಲೇಪವಾದ ಬಳಿಕ ನಾನೆಂಬುದೂ ನೀನೆಂಬುದೂ, ಏನು ಏನುಯೆಂಬೂದಕ್ಕೆ ತೆರಹಿಲ್ಲದೆ, ಪರಿಪೂರ್ಣ ಸರ್ವಮಯನಾದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ದಕ್ಷಿಣದ್ವಾರದ ವೃಕ್ಷದ ತಂಪಿನಲ್ಲಿ ಸ್ವಯಂಜ್ಯೋತಿ ಉರಿವುದ ಕಂಡೆ. ದೀಪ ಕೆಟ್ಟು ವೃಕ್ಷವಳಿದು ದಕ್ಷಿಣದ್ವಾರವ ದಾಂಟಿ ಉತ್ತರದ್ವಾರದ ಬಾಗಿಲ ಬಿಯ್ಯಗ ತೆಗೆದಲ್ಲಿ ನಾದಮೂರುತಿಲಿಂಗವ ಕಂಡೆ. ಮುಟ್ಟಿ ಪೂಜಿಸಿ ಹೋದಾತನ ನೆಟ್ಟನೆ ನುಂಗಿ, ತಾ ಬಟ್ಟಬಯಲಾಯಿತ್ತು ನೋಡಾ, ಸೌರಾಷ್ಟ್ರ ಸೋಮೇಶ್ವರನೆಂಬ ಲಿಂಗವು.
--------------
ಆದಯ್ಯ
ಶರಣ ಲಿಂಗಸಮರಸವಾಗಿ ಆಚರಿಸುವ. ಶರಣನ ಲಿಂಗ ಬ್ಥಿನ್ನವಾಗಿ ಓಸರಿಸಿಹೋದರೆ ನೋಡಿ, ಅರಸಿ ಸಿಕ್ಕಿದ ಸಮಯದಲ್ಲಿ ಆ ಲಿಂಗವ ಪರೀಕ್ಷಿಸಿ ನೋಡುವುದು. ಆರು ಸ್ಥಾನಂಗಳಲ್ಲಿ ಭಿನ್ನವಿಲ್ಲದಿರ್ದಡೆ ಧರಿಸಿಕೊಂಬುದು. ಸರ್ವಮಾಹೇಶ್ವರರು ನೋಡಿ ಶಂಕೆಯುಳ್ಳಡೆ ಬಿಡುವುದು. ಅದೆಂತೆಂದಡೆ : ಶರಣನ ಸಂಕಲ್ಪ ಸನ್ಮತ ತನ್ನದೆಂಬುದೆ ದಿಟವೆಂದು ತಾ ನಿಶ್ಚೈಸಿ ತೆತ್ತಿಗರಾದ ಸರ್ವಮಾಹೇಶ್ವರರು ಮಂತ್ರಬೋಧನೆಯ ಕರ್ಣದಲ್ಲಿ ಬೋದ್ಥಿಸಬೇಕಲ್ಲದೆ ಆ ಲಿಂಗಧ್ಯಾನಾರೂಢನಪ್ಪಾತಂಗೆ ಧೂಪ ದೀಪ ಅಂಬರಗಳೆಂಬ ಬಂಧನವೈಕ್ಯವಂ ಮಾಡಲಾಗದು. ಮಾಡಿದಡೆ ಜ್ಞಾನಿಗಳೊಪ್ಪರು. ಅದು ಕಾರಣವಾಗಿ ಶಿವಧ್ಯಾನ ನಿಶ್ಚಿಂತವ ಮಾಡಿದ ಕಾರಣ ಅವರ ತೆತ್ತಿಗರಲ್ಲವೆಂಬೆ, ದಿಟ ಕಾಣಾ ನೀ ಸಾಕ್ಷಿ ನಿಮ್ಮಾಣೆನಿಮ್ಮಅರ್ಧಾಂಗಿಯಾಣೆ ಅಮರಗುಂಡದ ಮಲ್ಲಿಕಾರ್ಜುನಾ |
--------------
ಪುರದ ನಾಗಣ್ಣ
ಪೂಜೆಯಾಯಿತ್ತದೇನೊ ? ಪೂಜೆಯ ಮೇಲೆ ಸಿಂಹಾಸನವಿದೇನೊ ? ಧೂಪ ದೀಪ ನಿವಾಳಿ ಇದೇನೊ ? ತಳದಲ್ಲಿ ಜ್ಯೋತಿ ಮೇಲೆ ಪ್ರಣತೆ ! ಕಳಸದ ಮೇಲಣ ನೆಲಗಟ್ಟು ಕಂಡು ನೋಡಿ ಬೆರಗಾದೆ ಗುಹೇಶ್ವರಾ !
--------------
ಅಲ್ಲಮಪ್ರಭುದೇವರು
ಎನ್ನ ಹೃದಯಕಮಲ ಮಧ್ಯದಲ್ಲಿ ಮೂರ್ತಿಗೊಂಡಿಪ್ಪ ಎನ್ನ ಪ್ರಾಣೇಶ್ವರಂಗೆ_ ಎನ್ನ ಕ್ಷಮೆಯೆ ಅಭಿಷೇಕ, ಎನ್ನ ಪರಮವೈರಾಗ್ಯವೆ ಪುಷ್ಪದಮಾಲೆ ಎನ್ನ ಸಮಾಧಿಸಂಪತ್ತೆ ಗಂಧ, ಎನ್ನ ನಿರಹಂಕಾರವೆ ಅಕ್ಷತೆ, ಎನ್ನ ಸದ್ವಿವೇಕವೆ ವಸ್ತ್ರ, ಎನ್ನ ಸತ್ಯವೆ ದಿವ್ಯಾಭರಣ ಎನ್ನ ವಿಶ್ವಾಸವೆ ಧೂಪ, ಎನ್ನ ದಿವ್ಯಜ್ಞಾನವೆ ದೀಪ, ಎನ್ನ ನಿಭ್ರಾಂತಿಯೆ ನೈವೇದ್ಯ, ಎನ್ನ ನಿರ್ವಿಷಯವೆ ತಾಂಬೂಲ ಎನ್ನ ವರಿõ್ಞನವೆ ಘಂಟೆ, ಎನ್ನ ನಿರ್ವಿಕಲ್ಪತೆಯೆ ಪ್ರದಕ್ಷಿಣೆ, ಎನ್ನ ಶುದ್ಧಿಯೆ ನಮಸ್ಕಾರ, ಎನ್ನ ಅಂತಃಕರಣದಿಂದ ಮಾಡುವ ಸೇವೆಯೆ ಉಪಚಾರಂಗಳು_ ಈ ಪರಿಯಲ್ಲಿ ಎಮ್ಮ ಗುಹೇಶ್ವರಲಿಂಗಕ್ಕೆ ಪ್ರಾಣ (ಲಿಂಗ) ಪೂಜೆಯೆ ಮಾಡಿ ಬಾಹ್ಯಕ್ರೀಯ ಮರೆದನು ಕಾಣಾ ಸಂಗನಬಸವಣ್ಣಾ.
--------------
ಅಲ್ಲಮಪ್ರಭುದೇವರು
ಆದಿ-ಅನಾದಿ, ಸಾಕಾರ-ನಿರಾಕಾರ ಎಂಬುವೇನುವಿಲ್ಲದ ವಾಗತೀತವಾದ ನಿರ್ನಾಮವಸ್ತು ತಾನೆ ! ತನ್ನ ಲೀಲಾವಿಲಾಸದಿಂದಾದ ಪ್ರಭಾವದ ಸ್ಫುರಣವೆ ಮಹಾಪ್ರಕಾಶ. ಆ ಮಹಾಪ್ರಕಾಶದ ಆವರಣವೆ ನಿಜಾತ್ಮನು. ಆ ನಿಜಾತ್ಮನೆ ತನ್ನಿಂದಾದ ಸಮಸ್ತವಸ್ತುಗಳೆನಿಪ ತತ್ವಂಗಳಿಗೆ ತಾನೇ ಕಾರಣವಾದ. ಇದನರಿಯದೆ ಆತ್ಮಂಗೆ ಅನಾದಿಮಲತನುತ್ವ ಪಾಶಬಂಧ ಉಂಟೆಂಬರು, ಅದು ಹುಸಿ. ಆ ಆತ್ಮನು ತನ್ನಿಂದ ಪ್ರವರ್ತಿಸುವ ಮಹದಾದಿ ತತ್ತ್ವಂಗಳಿಗೆ ತಾನೇ ಮೂಲಾಧಾರವಾದ ಕಾರಣ ಮೂಲಪ್ರಕೃತಿಸ್ವರೂಪವೆನಿಸಿಕೊಂಬನು. ಆ ನಿಜಾತ್ಮನಲ್ಲಿ ಅನಾದಿಮಲಪಾಶಂಗಳು ಸತ್ಯವಲ್ಲ. ಇದು ಕಾರಣ ಆ ಆತ್ಮನು ಮೇಲಣ ಘನಲಿಂಗವಾದುದು ತಾನೆ, ಲಯಿಸುವುದಕ್ಕೂ ಗಮಿಸುವುದಕ್ಕೂ ತಾನೆ. ತಾನಾ ಕಾರಣನಾದನಾಗಿ ಪ್ರತಿಪದಾರ್ಥವಿಲ್ಲ. ಅದೆಂತೆಂದಡೆ: ಪರಾತ್ಪರತರವಪ್ಪ ಪರಬ್ರಹ್ಮಕ್ಕೆ ಬೆಚ್ಚಿ ಬೇರಾಗದ ಕಾರಣ. ಅದು ದೀಪ ದೀಪದ ಪ್ರಭೆಯಂತೆ, ರತ್ನ ರತ್ನದ ಕಾಂತಿಯಂತೆ ಆತ್ಮಲಿಂಗೈಕ್ಯ. ಇಂತೀ ಸಹಜಸೃಷ್ಟಿಯನರಿಯದೆ ``ಅನಾದಿ ಆತ್ಮಂಗೆ ಪಾಶಂಗಳುಂಟು, ಆತ್ಮ ಪಶು ಪಾಶ ಮಾಯೆ ಪತಿ ಶಿವ`` ಎಂಬರು ! ಇಂತೀ ತೆರದಲ್ಲಿ ತ್ರಿಪಾದರ್ಥಗಳ ಹೇಳುವರು ! ಅದು ಹುಸಿ. ಸೃಷ್ಟಿ ಮೊದಲು ಐಕ್ಯ ಕಡೆಯಾಗಿ ಅಭೇದವಲ್ಲದೆ ಭೇದವಿಲ್ಲ. ಇನ್ನು ಅದ್ವೈತಮತದಲ್ಲಿ ವೇದಾಂತಿಯೆಂಬಾತ ನಿಜ ಸೃಷ್ಟಿಯರಿಯ. ಅದೆಂತೆಂದಡೆ: `ಶಕ್ತ್ಯಧೀನಂ ಪ್ರಪಂಚಶ್ಚ' ಎಂಬ ಶ್ರುತಿಯನರಿದು ! ಆ ಶಕ್ತಿಯ ಆಧಾರದಲ್ಲಿ ತೋರುವ ತತ್ತ್ವಂಗಳ ಪ್ರವರ್ತನೆ ವಿಶ್ವವೆನಿಸುವದು. ಅದನರಿಯದೆ ವೇದಾಂತಿ ದಗ್ದೈಶ್ಯವೆಂಬ, ದೃಕ್ಕೆ ವಸ್ತುವೆನಿಪಾತ್ಮನೆಂಬ, ದೃಶ್ಯವೆ ಮಾಯೆಯೆಂಬ ! ಅದು ಹುಸಿ; ಆ ಶಕ್ತಿಯ ಆಧಾರದಲ್ಲಿ ತೋರುವ ವಿಶ್ವಪ್ರಪಂಚವು. ಆ ಪ್ರಪಂಚದ ಮಧ್ಯದಲ್ಲಿ ತೋರುವ ಶಕ್ತಿಯ ಕ್ರಮವೆಂತೆಂದಡೆ: ಜಲಮಧ್ಯದಲ್ಲಿ ತೋರುವ ಇನಬಿಂಬದಂತೆ ಬಿಂಬಿಸುವುದಾಗಿ ! ಆ ಬಿಂಬವೇ ಜೀವನು, ಆ ಜೀವನೆ ದೃಕ್ಕು, ಅವನ ಕೈಯಲ್ಲಿ ಕಾಣಿಸಿಕೊಂಬ ವಿಷಯವೆ ಮಾಯೆ. ಈ ಎರಡರ ವ್ಯವಹಾರ ಆ ಶಕ್ತಿಗೆ ಇಲ್ಲವಾಗಿ, ದೃಕ್ಕುದೃಶ್ಯವೆಂಬ ವೇದಾಂತಿಯ ಮತವಂತಿರಲಿ. ಇಂತೀ ದ್ವೈತಾದ್ವೈತದಲ್ಲಿ ಪ್ರವರ್ತಿಸರು ಶಿವಶರಣರು. ಈ ದ್ವೈತಾದ್ವೈತದಲ್ಲಿ ಪ್ರವರ್ತಿಸುವ ಪ್ರವರ್ತನಕ್ಕೆ ತಾವೆ ಕಾರಣವೆನಿಪ್ಪರು. ಇಂತೀ ಕಾರಣವೆನಿಸಿರ್ಪ ಶರಣರ ನಿಲವೆಂತುಂಟೆಂದಡೆ: ಸಕಲವಿಶ್ವವೆ ಸತಿಯರೆನಿಸಿ ತಾನು ತನ್ನ ನಿಜಕ್ಕೆ ಅಂಗನಾಗಿ, ಆ ನಿಜವೆ ಆತ್ಮಂಗೆ ಅಂಗವಾಗಿ ನಿಂದ ನಿಲವೆ ಪರವಸ್ತುವಿನ ಪ್ರಭಾವ. ಆ ಪ್ರಭಾವಾದ ಶರಣನ ನಿಲುವೆ ಉರಿಲಿಂಗದೇವನೆಂಬ ಗಂಡನಾಗಿ ಬಂಧ ತೆಗೆದ.
--------------
ಉರಿಲಿಂಗದೇವ
ಪಾದೋದಕ ಪ್ರಸಾದಗಳೆಂದೆಂಬಿರಿ, ಪಾದೋದಕ ಪ್ರಸಾದದ ಬಗೆಯ ಪೇಳ್ವೆ. ಗದ್ದುಗೆಯ ಮೇಲೆ ಗದ್ದುಗೆಯ ಹಾಕಿ, ಜಂಗಮಲಿಂಗಿಗಳ ಕರತಂದು ಕುಳ್ಳಿರಿಸಿ, ಧೂಪ ದೀಪ ಪತ್ರಿ ಪುಷ್ಪದಿಂದ ಪಾದಪೂಜೆಯ ಮಾಡಿ, ಕೆರೆ ಬಾವಿ ಹಳ್ಳ ಕೊಳ್ಳ ನದಿ ಮೊದಲಾದವುಗಳ ನೀರ ತಂದು- ಬ್ರಹ್ಮರಂಧ್ರದಲ್ಲಿರುವ ಸತ್ಯೋದಕವೆಂದು ಮನದಲ್ಲಿ ಭಾವಿಸಿ, ಆ ಜಂಗಮದ ಉಭಯಪಾದದ ಮೇಲೆರೆದು, ಪಾದೋದಕವೇ ಪರಮತೀರ್ಥವೆಂದು ಲಿಂಗ ಮುಂತಾಗಿ ಸೇವಿಸಿ, ನವಖಂಡಪೃಥ್ವಿಯಲ್ಲಿ ಬೆಳೆದ ಹದಿನೆಂಟು ಜೀನಸಿನ ಧಾನ್ಯವ ತಂದು, ಉದಕದಲ್ಲಿ ಹೆಸರಿಟ್ಟು, ಅಗ್ನಿಯಲ್ಲಿ ಪಾಕವಮಾಡಿ, ತಂದು ಜಂಗಮಕ್ಕೆ ಎಡೆಮಾಡಿ, ಜಂಗಮವು ತನ್ನ ಲಿಂಗಕ್ಕೆ ಅರ್ಪಿಸಿ ಸೇವಿಸಿದಬಳಿಕ ತಾವು ಪ್ರಸಾದವೇ ಪರಬ್ರಹ್ಮವೆಂದು ಭಾವಿಸಿ, ಕೊಂಡು ಸಲಿಸುವರಯ್ಯ. ಇಂತೀ ಕ್ರಮದಿಂದ ಕೊಂಬುದು ಪಾದೋದಕಪ್ರಸಾದವಲ್ಲ. ಇಂತೀ ಉಭಯದ ಹಂಗು ಹಿಂಗದೆ ಭವಹಿಂಗದು, ಮುಕ್ತಿದೋರದು. ಮತ್ತಂ, ಹಿಂದಕ್ಕೆ ಪೇಳಿದ ಕ್ರಮದಿಂದಾಚರಿಸಿ, ಗುರುಲಿಂಗಜಂಗಮದಲ್ಲಿ ಪಾದೋದಕ ಪ್ರಸಾದವ ಸೇವಿಸಬಲ್ಲವರಿಗೆ ಪ್ರಸಾದಿಗಳೆಂಬೆ. ಇಂತಪ್ಪವರಿಗೆ ಭವ ಹಿಂಗುವದು, ಮುಕ್ತಿಯೆಂಬುದು ಕರತಳಾಮಳಕವಾಗಿ ತೋರುವುದು. ಈ ಪಾದೋದಕದ ಭೇದವ ಬಸವಣ್ಣ ಚೆನ್ನಬಸವಣ್ಣ ಪ್ರಭುದೇವರು ಮುಖ್ಯವಾದ ಏಳುನೂರೆಪ್ಪತ್ತು ಪ್ರಮಥಗಣಂಗಳು ಬಲ್ಲರಲ್ಲದೆ ಮಿಕ್ಕಿನ ಜಡಮತಿ ಕಡುಪಾತಕರಾದ ಭಿನ್ನಭಾವ ಜೀವಾತ್ಮರೆತ್ತ ಬಲ್ಲರಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನ ಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಒಂದು ರಾಷ್ಟ್ರದಲ್ಲಿ ಒಂಬತ್ತು ಅಗಸಿಯನುಳ್ಳ ಮೂರು ಸುತ್ತಿನಾ ಕೋಟಿಯ ಗಡಹವಿರ್ಪುದು. ಆ ಗಡಹವ ನೋಡ ಹೋಗಲು, ಆ ಗಡಹದ ನವದ್ವಾರವು ತೆರೆದಿರಲು, ಅಲ್ಲಿ ಒಳಹೊಕ್ಕು ನೋಡಲು ಎತ್ತ ನೋಡಿದರತ್ತ ವಜೀರ, ಉಮರಾವತ, ಅರಣ್ಯ, ಠಾಣ್ಯ ಮೊದಲಾದ ಅನಂತ ಪರಿವಾರ ಆರೈಸಿರುವದು. ಅಲ್ಲಿ ವೇದ ಆಗಮ ಪುರಾಣ ಮೊದಲಾದ ನೃತ್ಯ ಹಾಸ್ಯ ಗಾಯನ ಅನಂತ ಉತ್ಸಹವಿರ್ಪುದು. ಅಲ್ಲಿ ದೀವಟಿಗೆಯು ಬಿರಸು ಚಂದ್ರಜ್ಯೋತಿ ದೀಪ ಮೊದಲಾದ ಅನಂತ ಪ್ರಕಾಶವಿರ್ಪುದು. ಅಲ್ಲಿ ಭೇರಿ, ನಗಾರಿ, ತಮ್ಮಟೆ, ಕಾಳಿ, ಕರ್ಣಿ ಮೊದಲಾದ ಅನಂತ ನಾದವಿರ್ಪುದು. ಮತ್ತಲ್ಲಿ ಒಳಹೊಕ್ಕು ನೋಡಲು ಮುಂದೆ ಚಿತ್ರವಿಚಿತ್ರವಾದ ಮಂಟಪವಿರ್ಪುದು. ಆ ಮಂಟಪದ ಸುತ್ತ ಅರವಿಂದ ನೀಲೋತ್ಪಲ ಸಂಪಿಗಿ ಇರವಂತಿಗೆ ಶ್ಯಾವಂತಿಗಿ ಮೊಲ್ಲೆ ಮಲ್ಲಿಗಿ ಮೊದಲಾದ ಅನಂತ ಪುಷ್ಪಮಾಲೆಗಳಿರ್ಪುವು. ಬಹುವರ್ಣದ ರಂಗವಾಲಿಯ ನೆಲಗಟ್ಟಿರ್ಪುದು. ಅದರೊಳಗೆ ನೋಡಬೇಕೆಂದು ಹೋಗಲು ಮುಂದೆ ನವರತ್ನಖಚಿತವಾದ ಸಿಂಹಾಸನವಿರ್ಪುದು. ಆ ಸಿಂಹಾಸನದ ಮೇಲೆ ಅಧಿಪತಿಯಾಗಿ ಇರುವಾತ ಎಂಥಾತ ಆತನ ಆತುರದಿ ನೋಡಬೇಕೆಂದು ಆ ಸಿಂಹಾಸನವೇರಲು ಅಲ್ಲಿಯ ಅಧಿಪತಿ ತಾನೇ ಆಗಿರ್ದ. ಇದೇನು ಸೋಜಿಗವೋ, ತಾ ನೋಡ ಬಂದವನೆಂಬ ಅರವಿಲ್ಲ. ಅಲ್ಲಿ ಅರಸನ್ಯಾವನೆಂಬ ಸಂಶಯವಿಲ್ಲದೆ ಅಲ್ಲಿಯ ಸರ್ವಕ್ಕೆ ತಾನೇ ಅಧಿಪತಿಯಾಗಿ ಇದ್ದಾಗ್ಯೂ ಆವಾಗಲೂ ಅಲ್ಲೇ ಇರ್ದಂತೆ ಇರುತಿರ್ದೆನೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶೈವಸಿದ್ಧಾಂತಿಗಳೆಂಬ ಅಬದ್ಧ ಭವಿಗಳ ಮುಖವ ನೋಡಲಾಗದು. ಅದೇನು ಕಾರಣವೆಂದೊಡೆ : ಸಾಂಗೋಪಾಂಗ ಶುದ್ಧಶರೀರಿಯಾಗಿ ಉನ್ನತಾಸನ ಗದ್ದುಗೆಯಲ್ಲಿ ಕುಳಿತು ಕಣ್ಣುಮುಚ್ಚಿ ಅಂತರಂಗದಲ್ಲಿ ಪರಮಾತ್ಮನ ಕಳೆಯ ಧ್ಯಾನಿಸಿ ಮನಸ್ಸಿನಲ್ಲಿ ಕಟ್ಟಿ ದೃಷ್ಟಿಗೆ ತಂದು, ಆ ದೃಷ್ಟಿಯಿಂದ ಪುಷ್ಪದಲ್ಲಿ ತುಂಬಿ ಮೃತ್ತಿಕೆ ಪಾಷಾಣಾದಿ ನಾನಾ ತರಹದ ಲಿಂಗಾಕಾರದ ಮೂರ್ತಿಯ ಸ್ಥಾಪಿಸಿ, ದೇವರೆಂದು ಭಾವಿಸಿ, ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲಾದಿ ಅಷ್ಟವಿಧಾರ್ಚನೆ ಷೋಡಶೋಪಚಾರಂಗಳನೆ ಮಾಡಿ, ಆ ಪೂಜಾಂತ್ಯದಲ್ಲಿ ಎನ್ನ ಮಲಿನ ದೇಹದಲ್ಲಿ ನೀನು ನಿರ್ಮಲವಾದ ವಸ್ತುವು ಇರಬೇಡ ಹೋಗೆಂದು ತನ್ನ ದೇವರ ಬಾವಿ ಕೆರೆ ಹಳ್ಳ ಕೊಳ್ಳಾದಿ ಸ್ಥಾನಂಗಳಲ್ಲಿ ಹಾಕಿ ಬಿಡುವ ಶಿವದ್ರೋಹಿಗಳಿಗೆ ಕುಂಭೀಪಾತಕ ನಾಯಕ ನರಕ ತಪ್ಪದಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಬಳಿಕ ನಿಷ್ಕಾಮನಾದ ಮೋಕ್ಷಾಧಿಕಾರಿಗಭ್ಯಂತರದಲ್ಲಿ ಮುಖ್ಯಮಾಗಿ ಜ್ಞಾನ ಮಯನಾದ ಪೂಜೆ ಕತ್ರ್ಯವ್ಯಮಾ ಪೂಜೋಪಚಾರಂಗಳಲ್ಲಿ ಉಪಚಾರಮಂ ಉಪಚಾರ್ಯಮಾದ ದೇವತೆಯ ಗುಣಂಗಳನಾರೋಪಿಸಿ ಮಾಡಲು ತಕ್ಕು ದದೆಂತೆಂದೊಡೆ :ಮೊದಲು ತದನಂತರದಲ್ಲಿ ಶಿವಧರ್ಮವೆ ಕಂದ, ಸುಜ್ಞಾನವೆ ನಾಳ, ಅಷ್ಟಮಹ ದೈಶ್ವರ್ಯವೆ ದಳ, ರುದ್ರೇಶ್ವರಾದಿಕವೆ ಕೇಸರ, ವೈರಾಗ್ಯವೆ ಕರ್ಣಿಕೆಗಳಾಗಿ ಚಂದ್ರಪ್ರಭಾಮಯವೆನಿಸಿ ಮೆರೆವ ಹೃದಯಕಮಲದ ಸೋಮ ಸೂರ್ಯಾಗ್ನಿ ಮಂಡಲತ್ರಯದ ಮಧ್ಯದಲ್ಲಿ ಸತ್ತೆಂಬ ದಿವ್ಯಮೂರ್ತಿಯಿಂ, ಚಿತ್ತೆಂಬ ಕಾಯ ಕಾಂತಿಯಿಂ, ಆನಂದವೆಂಬ ಲಾವಣ್ಯದಿಂ, ತತ್ವ ಪರಿಕಲ್ಪಿತಮಾ ದಾಭರಣಾಯುಧಾದಿಗಳಿಂದಲಂಕೃತ ಮಾಗಿ, ಸ್ಫಟಿಕದೊಳಗಣ ದೀಪದಂತೆ ಒಳಹೊರಗೆ ಬೆಳಗುತ್ತಿರ್ದೀಶ್ವರನಂ ಪರಿಭಾವಿಸಿ ಬಳಿಕ ಸರ್ವಾಧಾರ ನೀಶ್ವರನೆಂಬ ಬುದ್ಧಿಯೆ ಆಸನ, ಪರಮಾತ್ಮನು ಪರಿಪೂರ್ಮನೆಂಬ ಮತಿ[ಯೆ] ಆವಾಹನ, ಜಗಕೆಲ್ಲಂ ಶಿವನ ಶ್ರೀಪಾದವೆಂಬ ತಿಳಿವೆ ಪಾದ್ಯಂ, ಸುಖಾಂಬುಧಿ ಶಂಭುವೆಂಬನುಸಂಧಾನವೆ ಅಘ್ರ್ಯ, ಪರಮಪವಿತ್ರ ಸ್ವರೂಪನಭವನೆಂಬರಿವೆ ಆಚಮನೀಯ, ನಿತ್ಯನಿರ್ಮಳ ನೀಶ್ವರನೆಂಬುಪಲಬ್ದಿಯೆ ಸ್ನಾನ, ಜಗವೆಲ್ಲವನತಿ ಕ್ರಮಿಸಿರ್ಪ ಶುದ್ಧವಿದ್ಯೆಯ ವಸ್ತ್ರ, ತ್ರಿಗುಣಾಗಮಾತೀತಮಾದ ಜ್ಞಾನವೆ ಯಜ್ಞ ಸೂತ್ರ, ಚೈತನ್ಯವೆ ಜಗದಲಂಕಾರಮೆಂಬ ಪ್ರತಿಭೆಯ ಆಭರಣ, ಶುದ್ಧಚಿಚ್ಛಕ್ತಿಯೆ ಅನುಲೇಪನ, ಕಾರುಣ್ಯವೆ ಅಕ್ಷತೆ, ಪ್ರಣವಾತ್ಮಕ ಸತ್ಯವಚನವೆ ಪುಷ್ಪ, ವಿಷಯ ವಾಸನಾವಿಲಯವೆ ಧೂಪ, ಜಗದ್ವರ್ತಿ ವಿಡಿದುಜ್ವಲಿಪ ಪರಂಜ್ಯೋತಿಯೆ ದೀಪ, ಜಗವೆಲ್ಲಮಂ ಕಬಳೀಕರಿಸಿಕೊಂಡಿಪ್ಪಾತ್ಮನೆ ನಿತ್ಯತೃಪ್ತನೆಂಬ ಸಂವಿತ್ತೇ ನೈವೇದ್ಯ, ತ್ರಿಗುಣಂಗಳ ನೊಳಕೊಂಡು ನಿಂದ ಜ್ಞಪ್ತಿಯೆ ತಾಂಬೂ, ಸೋಹಂ ಭಾವದಾವೃತ್ತಿಯೆ ಪ್ರದಕ್ಷಿಣ, ಸಮಸ್ತ ತತ್ತ್ವಂಗಳನತಿಕ್ರಮಿಸಿನಿಂದ ನಿಜವೆ ನಮಸ್ಕಾರ, ಶಿವೈಕ್ಯಸ್ಥಿತಿಯೆ ವಿಸರ್ಜನವೆಂಬ ಉಪಚಾರಂಗಳಿಂದಂತಃಪೂಜೆಯಂ ರಚಿಸೆಂದೊರೆದಿರಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ನಿತ್ಯಾನಂದ ಸಂವಿದಾಕಾರ ಜ್ಯೋತಿರ್ಲಿಂಗಮೂರ್ತಿಯಾದ ಶಿವನು ಜಲ ಗಂಧ ಅಕ್ಷತೆ ಪತ್ರೆ ಪುಷ್ಪ ಧೂಪ ದೀಪ ನೈವೇದ್ಯ ತಾಂಬೂಲಂಗಳಿಂದ ಪೂಜೆ ಮಾಡುವ ಪೂಜಕರ ಭಾವಕ್ಕೆ ನಿಲುಕವನಲ್ಲ ನೋಡಾ. ಮತ್ತೆಂತೆಂದಡೆ: ಭಾವವ ಬಲಿದು ನೆನಹ ನೇತಿಗೊಳಿಸಿ, ಜ್ಞಾನಪೂಜೆಯ ಮಾಡುವ ಮಹಂತರಿಗೆ ಸಿಲ್ಕುವ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು.
--------------
ಸ್ವತಂತ್ರ ಸಿದ್ಧಲಿಂಗ
ಜಲ ಗಂಧ ಅಕ್ಷತೆ ಪುಷ್ಪ ಧೂಪ ದೀಪ ನೈವೇದ್ಯ, ತಾಂಬೂಲ ಪಂಚವರ್ಣದ ಪತ್ರೆ ಪುಷ್ಪದ ಪೂಜೆಯ ರಚನೆಯ ಮಾಡುವೆನಯ್ಯಾ. ಅಷ್ಟವಿಧಾರ್ಚನೆ ಷೋಡಶೋಪಚಾರ ಮುಖ್ಯವಾಗಿ ಮಾಡುವೆನಯ್ಯಾ. ಸಕಲಕ್ಷೇಮದಿಂದ ನಡೆದು ನಿಮ್ಮಲ್ಲಿಗೆ ಸಾರುವೆನು ಕೂಡಲಚೆನ್ನಸಂಗಯ್ಯಾ.
--------------
ಚನ್ನಬಸವಣ್ಣ
ಮತ್ತಮಾ ಸಿಂಹಾಸನಾಗ್ರದಲ್ಲಿ ಶಿವಲಿಂಗ ವಾಹನ ಸ್ಥಾಪನ ಸನ್ನಿಧಾನ ಸಂರೋಧನ ಸಮ್ಮುಖೀಕರಣಮೆಂಬ ಕ್ರಿಯೆಗಳಂ ಮಾಡಿ, ಬಳಿಕ ಪೂಜಾ ಪ್ರಾರಂಭದಿಂ ತೊಡಗಿ, ಪೂಜಾ ಸಮಾಪ್ತಿ ಪರಿಯಂತರಂ ಕ್ಷಾಲನಪಾತ್ರ ಜಲಮಂ ಮರಳಿ ಮರಳಿ ಮುಷ್ಟಿ ಮುಷ್ಟಿ ಸಕಲ ಕ್ರಿಯೆಗಳನೀಶ್ವರಾರ್ಪಣಂ ಗೆಯ್ಯ ಬೇಕೆಂದರಿದು, ಬಳಿಕ ನದಿ ತ[ಟಾ]ಕ ಕೂಪಂಗಳಲ್ಲಿ ಸ್ವಾದುಮಿಶ್ರ ಲವಣಂಗಳಾದ ಕ್ರಮದಿಂದುತ್ತಮ ಮಧ್ಯಮ ಕನಿಷ್ಟಮಾದ ಪೂಜಾಯೋಗ್ಯ ಮಾದುದಕ ಭೇದಂಗಳಂ ಬಿಳಿಯ ಸಾಸಿವೆ ಕುಸುಮ ದೂರ್ವೆ ಕೋಷ್ಟ ಲಾಮಂಚ ಕರ್ಪೂರವೆಂಬಾರು ಪಾದ್ಯ ದ್ರವ್ಯಂಗಳಂ ಕುಶಾಗ್ರ ತಿಲ ಬಿಳಿಯ ಸಾಸಿವೆ ಜವೆ ನೆಲ್ಲು ಕ್ಷೀರಮೆಂಬಾರು ಅಘ್ರ್ಯ ದ್ರವ್ಯಂಗಳಂ, ಮುಖಾಂಬುಜಕ್ಕೀ ಘೃತದಧಿ ಮಧು ಮಿಶ್ರಮಾದ ಮಧುಪರ್ಕ ದ್ರವ್ಯಂಗಳಂ, ಫಲ ಕಚೋರ ಕರ್ಪೂರ ಕೋಷ್ಟ ಕುಂಕುಮ ಯಾಲಕ್ಕಿಯೆಂಬಾರು ಆಚಮನ ದ್ರವ್ಯಂಗಳಂ, ಪಂಚಗವ್ಯಂ ಪಂಚಾಮೃತಂಗಳಂ, ಗೋಧೂಮ ಚೂರ್ಣ ಗಂಧಾದ್ಯುದ್ವರ್ತನ ದ್ರವ್ಯಂಗಳಂ, ಮಂದೋಷ್ಣಾದಿ ಸ್ನಾನವಾರಿಗಳಂ, ಗಂಧೋದಕ ಪುಷ್ಪೋದಕ ರತ್ನೋದಕ ಮಂತ್ರೋದತಂಗಳಂ, ಮಹಾಸ್ನಾನೋದಕಂಗಳು, ವಿಧಿ ನಯ ಶುಭ್ರಾದಿ ಗುಣಯುಕ್ತ ಭಸಿತಂಗಳು, ಪ[ಟ್ಟೆ] ದೇವಾಂಗ ಶುಭ್ರ ಚಿತ್ರಾದಿ ವಸ್ತ್ರಂಗಳಂ, ಸುವರ್ಣ ರಜತ ಪ[ಟ್ಟೆ] ಸೂತ್ರಾದಿ ಯಜ್ಞೋಪವೀತಂಗಳಂ, ಕಿರೀWಟಾಘೆದ್ಯಾಭರಣಂಗಳಂ, ಚಂದನ ಅಗರು ಕಸ್ತೂರಿ ಕರ್ಪೂರ ತಮಾಲ ದಳ ಕುಂಕುಮ ಲಾಮಂಚ ಕೋಷ್ಟಂಗಳೆಂಬ ಅಷ್ಟಗಂಧಂಗಳಂ, ಜವೆ ಬಿಳಿಯ, ಸಾಸಿವೆ ತಿಲ ತಂಡುಲ ಮುಕ್ತಾಫಲಾಧ್ಯಕ್ಷತೆಗಳಂ, ಶುಭ್ರರಕ್ತ ಕೃಷ್ಣವರ್ಣ ಕ್ರಮದಿಂ ನಂದ್ಯಾದಿ ವತ್ರ್ತಾದಿ ಕಮಲಾದಿ ನೀಲೋತ್ಪಲಾದಿ ಸಾತ್ವಿಕ ರಾಜಸ ತಾಮಸ ಪುಷ್ಪಂಗಳಂ, ದೂರ್ವೆ ತುಲಸಿ ಬಿಲ್ವಾದಿ ಪತ್ರಜಾಲಂಗಳಂ, ಕರಿಯ[ಗ]ರು ಬಿಳಿಯಗರು ಗುಗ್ಗುಲ ಶ್ರೀಗಂಧ ಆಗರು ಬಿಲ್ವಫಲ ತುಪ್ಪ ಜೇನುತುಪ್ಪ ಸಜ್ಜರಸ ಕರ್ಪೂರವೆಂಬ ದಶಾಂಗ ಧೂಪಂಗಳಂ, ತೈಲವರ್ತಿ ಘೃತಕರ್ಪೂರವೆಂಬ ದೀಪ ಸಾಧನಂಗಳಂ, ಹರಿದ್ರಾನ್ನ ಪರಮಾನ್ನ ಮುದ್ಗಾನ್ನ ಕೃಸರಾನ್ನ ದಧ್ಯಾನ್ನ ಗುಡಾನ್ನಮೆಂಬ ಷಡ್ವಿಧಾನ್ನಾದಿ ನೈವೇದ್ಯಂಗಳಂ, ಪೂಗ ಪರ್ಣ ಚೂರ್ಣ ಕರ್ಪೂರಾದಿ ತಾಂಬೂಲ ದ್ರವ್ಯಂಗಳಂ, ಬೇರೆ ಬೇರೆ ಸಂಪಾದಿಸುವುದಯ್ಯಾ ಶಾಂತವೀರೇಶ್ವರಾ.
--------------
ಶಾಂತವೀರೇಶ್ವರ
ಆಗ್ಘವಣಿ ಪತ್ರೆ ಪುಷ್ಪ ಧೂಪ ದೀಪ ನಿವಾಳಿಯಲ್ಲಿ ಪೂಜಿಸಿ ಪೂಜಿಸಿ ಬಳಲುತ್ತೈದಾರೆ. ಏನೆಂದರಿಯರು ಎಂತೆಂದರಿಯರು. ಜನ ಮರುಳೊ ಜಾತ್ರೆ ಮರುಳೊ ಎಂಬಂತೆ; ಎಲ್ಲರೂ ಪೂಜಿಸಿ, ಏನನೂ ಕಾಣದೆ, ಲಯವಾಗಿ ಹೋದರು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಸತ್ಯವೆ ಜಲ, ಸಮತೆಯೆ ಗಂಧ, ಅರಿವೆ ಅಕ್ಷತೆ, ಭಾವ ಕುಸುಮ, ಸ್ವತಂತ್ರ ಧೂಪ, ನಿರಾಳ ದೀಪ, ಸ್ವಾನುಭಾವ ನೈವೇದ್ಯ, ಸಾಧನಸಾಧ್ಯ ಕರ್ಪುರವೀಳೆಯ. ಇವೆಲ್ಲವ ನಿಮ್ಮ ಪೂಜೆಗಂದನ್ನಕರಣಂಗಳು ಪಡೆದಿರಲು ಹೃದಯಮಧ್ಯದಲ್ಲಿದ್ದು ಗಮ್ಮನೆ ಕೈಕೊಂಡೆಯಲ್ಲಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಇನ್ನಷ್ಟು ... -->