ಅಥವಾ

ಒಟ್ಟು 68 ಕಡೆಗಳಲ್ಲಿ , 24 ವಚನಕಾರರು , 58 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಿಂಚುಬುಳು ಒಮ್ಮೆ ಪ್ರಚಂಡ ತೇಜೋಮಯ ಸೂರ್ಯಂಗೆ ಸರಿಯಾದಂದು, ಹರಿ ಹರಂಗೆ ಸರಿಯಹನು. ಕಹಿಬೇವಿನ ಕೊರಡು ಬಾವನ್ನ ಶ್ರೀಗಂಧಕ್ಕೆ ಸರಿಯಾದಂದು, ವಿರಿಂಚಿ ಗಿರೀಶಂಗೆ ಸರಿಯಹನು. ಅಜ್ಞಾನ ಸುಜ್ಞಾನಕ್ಕೆ ಸರಿಯಾದಂದು, ವಜ್ರಪಾಣಿ ಮೊದಲಾದ ದೇವ ದಾನವ ಮಾನವರು ಶೂಲಪಾಣಿಗೆ ಸರಿಯಹರು. ಏನ ಹೇಳುವೆ, ಅಜ್ಞಾನಿ ಜನರ ಅಜ್ಞಾನಪ್ರಬಲ ಚೇಷ್ಟೆಯನು ? ಅದೆಂತೆಂದಡೆ: ಖದ್ಯೋತೋಯದಿ ಚಂಡಭಾನು ಸದೃಶಸ್ತುತ್ಯೋ ಹರಿಃ ಶಂಭುನಾ ಕಿಂ ಕಾಷ್ಠಂ ಹರಿಚಂದನೇನ ಸದೃಶಂ ತುಲ್ಯೋಹಮೀಶೇನ ಚ | ಅಜ್ಞಾನಂ ಯದಿ ವೇದನೇನ ಸದೃಶಂ ದೇವೇನ ತುಲ್ಯೋ ಜನಾ ಕಿಂ ವಕ್ಷ್ಯೇ ಸುರಪುಂಗವಾ ಅಹಮಹೋಮೋಹಸ್ಯದುಶ್ಚೇಷ್ಟಿತಂ ನಿಮಗೆ ಸರಿಯೆಂಬವರಿಗೆ ನರಕವೆ ಗತಿಯಯ್ಯಾ, ಬಸವಪ್ರಿಯ ಕೂಡಲಸಂಗಮದೇವಾ.
--------------
ಸಂಗಮೇಶ್ವರದ ಅಪ್ಪಣ್ಣ
ಕಾಶಿಯಲ್ಲಿಪ್ಪ ಈಶನನರಿಯದ ಮೂವರ ಕೊರಳು ಕೈಗಳು ಮುರಿದು ಬಿದ್ದವು. ಕೈಲಾಸದಲ್ಲಿಪ್ಪ ಈಶನನರಿಯದ ಮೂವರ ದೇಹ ಕಾಲು ಕೈಗಳು ಮುರಿದುಬಿದ್ದವು. ಶ್ರೀಶೈಲದಲ್ಲಿಪ್ಪ ಈಶನನರಿಯದ ಮೂವರ ದೇಹ ಕರುಳು ತೊಗಲುಗಳು ಉದುರಿಬಿದ್ದವು. ಸಮುದ್ರದಲ್ಲಿಪ್ಪ ಈಶನನರಿಯದಿಬ್ಬರು ಒಬ್ಬರ ಹೊಟ್ಟೆಯ ಒಬ್ಬರು ಹೊಕ್ಕು ಬಿದ್ದರು. ಇಂತೀ ದೇವ ದಾನವ ಮಾನವರು ಮೊದಲಾದ ಸಕಲರೂ ಮಹಾದಾನಿ ಸೊಡ್ಡಳನನರಿಯದೆ ತರ್ಕಿಸಿ, ಕೆಟ್ಟುಹೋದರು.
--------------
ಸೊಡ್ಡಳ ಬಾಚರಸ
ಕಾಳಕೂಟ ಹಾಳಾಹಳ ವಿಷಂಗಳು ಕುಡಿದವರಲ್ಲನಲ್ಲದೆ ಮಿಕ್ಕವರನೇನನೂ ಮಾಡಲಮ್ಮವು ಸ್ತ್ರೀಯೆಂಬ ಕಡುನಂಜು ನೋಡಿದವರ, ನುಡಿಸಿದವರ, ಕೇಳಿದವರ, ಕೂಡಿದವರ, ಗಡಣ ಸಂಗಮಾತ್ರದಿಂ ಮಡುಹಿ ನರಕದಲ್ಲಿ ಕೆಡಹದೆ ಮಾಡಳು. ದೇವ ದಾನವ ಮಾನವರನಾದಡು ಉಳಿಯಲೀಯಳು! ಆವಂಗೆಯೂ ಗೆಲಬಾರದೀ ಮಾಯೆಯ! ಗೆಲಿದಾತ ನೀನೆ ಸಿಮ್ಮಲಿಗೆಯ ದಾತ ನೀನೆ, ಸಿಮ್ಮಲಿಗೆಯ ಚೆನ್ನರಾಮಾ!
--------------
ಚಂದಿಮರಸ
ಮರಹೆಂಬುದಾವರಿಸಿದವರಾರಾದಡಾಗಲಿ, ದೇವ ದಾನವ ಮಾನವರೊಳಗಾದವರಾರಾದರೂ, ಮಾಡಬಾರದ ಕರ್ಮವ ಮಾಡಿ, ಬಾರದ ಭವದಲಿ ಬಂದು ಉಣ್ಣದ ಅಪೇಯವ ಉಂಡು, ಕುಡಿದು ಕಾಣದ ದುಃಖವ ಕಂಡು ಸಾಯದ ನಾಯ ಸಾವ ಸತ್ತು ಹೋಹರಿಗೆ ಕಡೆಯಿಲ್ಲ. ಶಿವ ಶಿವ ಮಹಾದೇವ, ನೀನು ಮಾಡಿದ ಬಿನ್ನಾಣದ ಮರವೆಯ ಕಂಡು ನಾನು ಬೆರಗಾದೆನು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಕರ್ತಾರನಟ್ಟಿದ ವಿದ್ಥಿಗಂಜಿ, ಪಾತಾಳಲೋಕದಲ್ಲಿ ಹೊಕ್ಕಡಗಿದಡೆ, ಭೂತಳದ ಮೇಲೆ ಹೊಮ್ಮರೆಯಾಗಿ ಹರಿದಡೆ, ಕೊಲ್ಲದೆ ವಿದ್ಥಿ ? ತಪ್ಪು ತಡೆಯಿಲ್ಲದ ತಪಸಿಗಪ್ಪುದೆ ಶಲದ ವಿದ್ಥಿ ? ಹರನಟ್ಟಿದ ಬೆಸನದಿಂದ ಮೆಕ್ಕೆ ಹಾವಾಗಿ ತಿನ್ನದೆ ವಿದ್ಥಿ ? ದೇವ ದಾನವ ಮಾನವರ ಒಕ್ಕಲಿಕ್ಕಿ ಕೊಲ್ಲದೆ ವಿದ್ಥಿ ? ಮುಕ್ಕಣ್ಣ ಸೊಡ್ಡಳನಾಣತಿವಿಡಿದು.
--------------
ಸೊಡ್ಡಳ ಬಾಚರಸ
ಅರ್ಪಿತದ ಮಹಿಮೆಯ ಅನುವ, ಪ್ರಸಾದದ ಮಹಿಮೆಯ ಆವಂಗಾವಂಗರಿಯಬಾರದು. ವಿಷ್ಣ್ವಾದಿ ದೇವ ದಾನವ ಮಾನವ, ಋಷಿಜನಂಗಳಿಗೆಯೂ ಅರಿಯಬಾರದು. ಕಿಂಚಿತ್ತರಿದಡೆಯೂ ಅರ್ಪಿಸಬಾರದು. ಕಿಂಚಿತ್ ಅರ್ಪಿಸಿದಡೆಯೂ ಪ್ರಸಾದವ ಹಡೆಯಬಾರದು. ಕಿಂಚಿತ್ ಪ್ರಸಾದವ ಹಡೆದಡೆಯೂ, ಪ್ರಸಾದವ ಭೋಗಿಸಿ ಪರಿಣಾಮದಿಂ ಮುಕ್ತರಾಗಿರಲರಿಯರು. ಶಿವ ಶಿವಾ ! ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಲರಿಯರು. ಗುರು ಲಿಂಗ ಜಂಗಮವನೇಕೀಭವಿಸಿ ಮಹಾಲಿಂಗವನು ನೇತ್ರದಲ್ಲಿ ಧರಿಸಿ, ನೇತ್ರಲಿಂಗಕ್ಕೆ ನೇತ್ರದ ಕೈಯಲೂ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ಶ್ರೋತ್ರದಲ್ಲಿ ಧರಿಸಿ ಶ್ರೋತ್ರಲಿಂಗಕ್ಕೆ ಶ್ರೋತ್ರದ ಕೈಯಲೂ ಮಹಾಶಬ್ದವನರ್ಪಿಸಲರಿಯರು. ಆ ಮಹಾಲಿಂಗವನು ಘ್ರಾಣದಲ್ಲಿ ಧರಿಸಿ ಘ್ರಾಣಲಿಂಗಕ್ಕೆ ಘ್ರಾಣದ ಕೈಯಲೂ ಸುಗಂಧವನರ್ಪಿಸಲರಿಯರು. ಆ ಮಹಾಲಿಂಗವನು ಜಿಹ್ವೆಯಲ್ಲಿ ಧರಿಸಿ ಜಿಹ್ವೆಯಲಿಂಗಕ್ಕೆ ಜಿಹ್ವೆಯ ಕೈಯಲೂ ಮಹಾರಸವನರ್ಪಿಸಲರಿಯರು. [ಆ ಮಹಾಲಿಂಗವನು ತ್ವಕ್ಕಿನಲ್ಲಿ ಧರಿಸಿ ತ್ವಕ್‍ಲಿಂಗಕ್ಕೆ ಘ್ರಾಣದ ಕೈಯಲ್ಲಿ ಮಹಾಸ್ಪರ್ಶವನರ್ಪಿಸಲರಿಯರು] ಆ ಮಹಾಲಿಂಗವನು ಭಾವದಲ್ಲಿ ಧರಿಸಿ ಭಾವಲಿಂಗಕ್ಕೆ ಭಾವದ ಕೈಯಲೂ ಸರ್ವಸುಖಪರಿಣಾಮ ಮೊದಲಾದ ಭಾವಾಭಾವ ನಿಷ್ಕಲವಸ್ತುವನರ್ಪಿಸಲರಿಯರು. ಆ ಮಹಾಲಿಂಗವನು ಮನದಲ್ಲಿ ಧರಿಸಿ ಮನೋಮಯಲಿಂಗಕ್ಕೆ ಮನದ ಕೈಯಲೂ ಸಕಲ ನಿಷ್ಕಲಾದಿ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ವಾಕ್ಕಿನಲ್ಲಿ ಧರಿಸಿ ವಾಕ್‍ಲಿಂಗಕ್ಕೆ ವಾಕ್ಕಿನ ಕೈಯಲ್ಲೂ ಪಡಿಪದಾರ್ಥ ಮೊದಲಾದ ಸಕಲದ್ರವ್ಯಂಗಳ ರುಚಿ ಮೊದಲಾದ ಸುಖವನರ್ಪಿಸಲರಿಯರು. ಆ ಮಹಾಲಿಂಗವನು ಇಂತು ಮನೋವಾಕ್ಕಾಯವೆಂಬ ತ್ರಿವಿಧದಲ್ಲಿ ಏಕಾದಶ ಅರ್ಪಿತ ಸ್ಥಾನವನರಿದು ಅರ್ಪಿತವಾದ ಏಕಾದಶ ಪ್ರಸಾದವನರಿಯರು. ಮಹಾರ್ಪಿತವನು ಮಹಾಪ್ರಸಾದವನು ಎಂತೂ ಅರಿಯರು. ಪರಂಜ್ಯೋತಿಃ ಪರಂ ತತ್ತ್ವಂ ಪರಾತ್ಪರತರಂ ತಥಾ ಪರವಸ್ತು ಪ್ರಸಾದಃ ಸ್ಯಾದಪ್ರಮಾಣಂ ಪ್ರಸಾದಕಃ ಎಂಬುದನರಿಯರು. ಪೂಜಕಾ ಬಹವಸ್ಪಂತಿ ಭಕ್ತಾಶ್ಯತಸಹಸ್ರಶಃ ಮಹಾಪ್ರಸಾದಪಾತ್ರಂ ತು ದ್ವಿತ್ರಾ ವಾ ನೈವ ಪಂಚಷಃ ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಾಃ ವಿಷ್ಣುಪ್ರಮುಖದೇವಾಶ್ಚ ನ ಜಾನಂತಿ ಶಿವಂಕರಂ ಎಂಬ ಪ್ರಸಾದ ಎಲ್ಲರಿಗೆಯೂ ಅಸಾಧ್ಯ. ಅರ್ಪಿತ ಮುನ್ನವೇ ಅಸಾಧ್ಯ. ಅರ್ಪಿತವೂ ಪ್ರಸಾದವೂ ಚನ್ನಬಸವಣ್ಣಂಗಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಮನಕೆ ತೋರದು ನೆನೆವಡನುವಲ್ಲ, ಘನಕ್ಕೆ ಘನವನೇನ ಹೇಳುವೆ ? ಆರರಿಂದ ಮೀರಿದುದ, ಬೇರೆ ತೋರಲಿಲ್ಲದುದ, ದೇವ ದಾನವ ಮಾನವರ ಬಲ್ಲತನದ ಬಗೆಯ ಮೀರಿದುದನೇನ ಹೇಳುವೆ ? ಆದಿ ಮಧ್ಯಾಂತ ಶೂನ್ಯಂ ಚ ವ್ಯೋಮಾವ್ಯೋಮ ವಿವರ್ಜಿತಂ | ಧ್ಯಾನಜ್ಞಾನ ದಯಾದೂಧ್ರ್ವಂ ಶೂನ್ಯಲಿಂಗಮಿತಿ ಸ್ಮøತಂ || ಇಂತೆಂದುದಾಗಿ, ಅರಿಯಬಾರದು, ಕುರುಹ ತೋರದು, ತೆರಹಿಲ್ಲದ ಘನಮಹಾಲಿಂಗ ಕಲ್ಲೇಶ್ವರನ ನಿಜ.
--------------
ಹಾವಿನಹಾಳ ಕಲ್ಲಯ್ಯ
ಹಸಿವು ತೃಷೆ ವಿಷಯ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವಾದಿಯಾದ ತನುಗುಣಂಗಳು ದೇವ ದಾನವ ಮಾನವರಂತೆ ಆದಡೆ, ಲಿಂಗವಂತನೆಂಬ ಪರಿಯೆಂತಯ್ಯಾ? ತನುಗುಣಂಗಳು ಭೂತದೇಹಿಗಳಂತಾದಡೆ ಲಿಂಗದೇಹಿಕನೆಂಬ ಪರಿಯೆಂತಯ್ಯಾ? ಲಿಂಗಚಿಹ್ನವಿಲ್ಲದಡೆ ಲಿಂಗದೇಹಿಯೆಂಬ ಪರಿಯೆಂತಯ್ಯಾ? ಹಸಿವು ತೃಷೆ ವಿಷಯ ವ್ಯಸನವಡಗಿದಡೆ ಲಿಂಗಚಿಹ್ನೆ. ಕ್ರೋಧ ಲೋಭ ಮೋಹ ಮದ ಮತ್ಸರ ಇವಾದಿಯಾದ ದೇಹಗುಣಂಗಳಳಿದಡೆ ಲಿಂಗಚಿಹ್ನೆ. ದೇಹಗುಣಭರಿತನಾಗಿ ಲಿಂಗದೇಹಿ ಎಂದಡೆ, ಲಿಂಗವಂತರು ನಗುವರಯ್ಯಾ. ಅಂಗಗುಣವಳಿದು ಗುರುಲಿಂಗಜಂಗಮದಲ್ಲಿ ತನು ಮನ ಧನ ಲೀಯವಾದಡೆ ಆತನು ಸರ್ವಾಂಗಲಿಂಗಿಯಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ದೇವ ದಾನವ ಮಾನವ ಋಷಿಜಂಗಳೆಲ್ಲರನು ಮಹಾಲಿಂಗವ ಕಂಡೆಹೆವೆಂದು ಅನೇಕಕಾಲಂಗಳಲ್ಲಿ ತಪವ ಮಾಡಿ, ಧ್ಯಾನವ ಮಾಡಿ, ಜಪವ ಮಾಡಿಯೂ ಕಾಣಲರಿಯದೆ ಬಳಲುತ್ತೈದಾರೆ. ಅವರಲ್ಲಿ ಸಮರ್ಥಪುರುಷರು ಕಂಡಡೆಯೂ ಕಂಡರೇನು ಫಲ? ಲಿಂಗಕ್ಕೆ ಒಲಿಯರು, ಲಿಂಗವನೊಲಿಸಿಕೊಳಲರಿಯರು, ಕೂಡಲರಿಯರು. ಅಲ್ಪಭೋಗಂಗಳನಿಚ್ಛೈಸಿ, ಆ ಭೋಗಪದವ ಪಡೆದು, ಪುಣ್ಯಪಾಪಂಗಳ ಬಲೆಯೊಳು ಬೀಳುತ್ತಿಹರು. ಅವರುಗಳ ಪರಿಯಿಲ್ಲ, ಎನಗೆ. ಶಿವ ಶಿವಾ ಮಹಾದೇವ, ಮಹಾಲಿಂಗನ ಕರುಣವನು ಏನೆಂದುಪಮಿಸಬಹುದು ಶ್ರೀಗುರುವಾಗಿ ಕರುಣಿಸಿ ಶ್ರೀಹಸ್ತದಿಂದೆನಗೆ ಜನನವ ಮಾಡಿ ಮಾತಾಪಿತನು ತಾನೆಯಾದನು. ಮಹಾದೀಕ್ಷೆಯ ಮಾಡಿ ಶ್ರೀಗುರು ತಾನೆಯಾದನು. ಮಹಾಮಂತ್ರೋಪದೇಶವ ಮಾಡಿ ಮಂತ್ರರೂಪಾಗಿ ಕರ್ಣದಲ್ಲಿ ಭರಿತವಾದನು, ಪ್ರಸಾದರೂಪಾಗಿ ಜಿಹ್ವೆಯಲ್ಲಿ ಭರಿತವಾದನು, ಮಹಾವಿಭೂತಿಯಾಗಿ ಬಾಳದಲ್ಲಿ ಭರಿತವಾದನು, ಸರ್ವಾಂಗಭರಿತವಾದನು. ಮತ್ತೆ ಮತ್ತೆ ಮಹಾಚೋದ್ಯ, ಶ್ರೀಗುರು ಲಿಂಗಮೂರ್ತಿಯನು ಪ್ರಾಣವನೇಕೀಭವಿಸಿ ಪ್ರಾಣಲಿಂಗವಾದನಾಗಿ ಅಂಗದ ಮೇಲೆ ಬಿಜಯಂಗೈದು ಅಂಗಲಿಂಗವಾದನು. ಮಹಾಲಿಂಗವಾಗಿ ಕರಸ್ಥಲದಲ್ಲಿ ನಿರಂತರ ಪೂಜೆಗೊಳ್ಳುತ್ತಿದ್ದನು, ಇದೂ ವಿದಿತ. ಸುಜ್ಞಾನವನೂ ಪ್ರಸಾದವನೂ ಕರುಣಿಸಲೆಂದು ಶರಣಭರಿತನಾಗಿ ಬಂದು ಕರುಣಿಸಿದನು. ಇಂತು, ಶ್ರೀಗುರು ಲಿಂಗಜಂಗಮರೂಪಾಗಿ ಕರುಣಿಸಿ, ಪ್ರಸನ್ನನಾಗಿ ಮಹಾಪ್ರಸಾದವ ಕರುಣಿಸಿ, ಪ್ರಸಾದರೂಪವಾಗಿ ಸಲುಹಿದನು. ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯ ಚತುರ್ವಿಧಪದಕ್ಕೆ ಘನಪದದಾಸೋಹದಲ್ಲಿರಿಸಿದನು. ಸರ್ವಪದ ಮಹಾಪದಕ್ಕೆ ವಿಶೇಷ ಲಿಂಗಪದದಲ್ಲಿರಿಸಿದೆನು. ಶಿವ ಶಿವಾ ಮಹಾಪದವ ನಾನೇನೆಂದುಪಮಿಸಲರಿಯೆ. ಸದ್ಗುರುಕೃಪೆ, ವಾಙ್ಮನೋತೀತ. ಮಹಾಘನಪರಿಣಾಮಸುಖವನು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ ತಾನೆ ಬಲ್ಲ.
--------------
ಉರಿಲಿಂಗಪೆದ್ದಿ
ವನಾಂತರದಲ್ಲಿ ಕೋಗಿಲೆ ಸ್ವರಗೈದಿತೆಂದು ಕುಂಬ್ಥಿನಿಯ ಮೇಲೆ ಕಾಗಿ ತಾ ಕರೆದಂತೆ, ಅರಸಿ ಮಂಚವನೇರಿದಳೆಂದು ಕಸ ನೀರು ಹೊರುವ ದಾಸಿ ತಾ ಹೊರಸನೇರುವಂತೆ, ಮಹಾರಾಜಕುಮಾರನು ಆನೆಯನೇರಿದನೆಂದು ಮಣ್ಣು ಹೊರುವ ಉಪ್ಪರಿಗನಮಗ ತಾ ಕೋಣ[ನ]ನೇರುವಂತೆ, ಮಹಾವೀರಕುಮಾರ ಮಹಾತೇಜಿಯನೇರಿದನೆಂದು ಮೈಲಿಗೆಯ ತೊಳೆಯುವ ಮಡಿವಾಳನಮಗ ತಾ ಮೋಳಿಗೆಯ ಹೇರುವ ಕತ್ತೆಯನೇರುವಂತೆ, ಬಾಲಹನುಮನು ಲಂಕೆಗೆ ಹಾರಿದನೆಂದು ಒಂದು ಮರುಳಕೋತಿ ತಾ ಪರ್ವತವನೇರಿ ಕೆಳಕ್ಕೆ ಬಿದ್ದಂತೆ, ಮಹಾಮಲೆಯೊಳಗೆ ಒಂದು ಮಹಾವ್ಯಾಘ್ರನು ಘುಡುಘುಡಿಸಿ ಲಂಘಿಸಿ ಒಂದು ಪಶುವಿಗೆ ಹಾರಿತೆಂದು ಮಹಾ ಶೀಗರಿಮೆಳೆಯೊಳಗೊಂದು ಮರುಳ ನರಿ ತಾ ಒದರಿ ಹಲ್ಲು ಕಿಸಿದು ಕಣ್ಣು ತೆರೆದೊಂದು ಇಲಿಗೆ ತಾ ಲಂಘಿಸಿ ಹಾರುವಂತೆ. ಇಂತೀ ದೃಷ್ಟಾಂತದಂತೆ ಆದಿ ಆನಾದಿಯಿಂದತ್ತತ್ತಲಾದ ಘನಮಹಾಲಿಂಗದೊಳಗೆ ಜ್ಯೋತಿ ಜ್ಯೋತಿ ಕೂಡಿದಂತೆ, ಬೆರಸದ ಶಿವಶರಣರು ಹಾಡಿದ ವಚನವ ಶಿವಾಂಶಿಕರಾದ ಸಜ್ಜೀವಾತ್ಮರು ಹಾಡಿ ನಿರ್ವಯಲಾದರೆಂದು ತ್ರಿಭುವನ ಮೊದಲಾದ ಚತುರ್ದಶಭುವನದಲ್ಲಿರುವ ದೇವ ದಾನವ ಮಾನವರು ಮೊದಲಾದ ಜೀವಾತ್ಮರು ಇಟ್ಟೆಯ ಹಣ್ಣ ನರಿ ತಾ ತಿಂದು ಪಿಟ್ಟೆಸಿಕ್ಕು ಬಾಯಿತೆರೆದು ಒದರುವಂತೆ ಏಕಲಿಂಗ ನಿಷ್ಠಾಪಾರಿಗಳ ವಚನವ ಮಲತ್ರಯವೆಂಬ ಇಟ್ಟೆಯಹಣ್ಣ ತಿಂದು ಪಿಟ್ಟೆಸಿಕ್ಕು ಬಾಯಿ ತೆರೆದು ಬೇನೆಹಾಯ್ದ ಕುರಿಯಂತೆ ಒದರಿ ಒದರಿ ಸತ್ತು ಭವದತ್ತ ಮುಖವಾಗಿ ಹೋದರಲ್ಲದೆ ಇವರು ಲಿಂಗೈಕ್ಯಗಳಾಗಲರಿಯರು ನೋಡೆಂದನಯ್ಯ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಹೀಂಗೆ ಪೂರ್ವಪುರಾತನರು ಸದ್ಗುರು ವಚನೋಕ್ತಿಯಿಂದ ತಿಳಿದು ರೇವಣಸಿದ್ಭೇಶ್ವರ, ಮರುಳಸಿದ್ಧೇಶ್ವರ, ತೋಂಟದಸಿದ್ಧೇಶ್ವರ ನೂರೊಂದು ವಿರಕ್ತರು ಮೊದಲಾದ ಮತ್ರ್ಯಲೋಕದ ಮಹಾಗಣಂಗಳೆಲ್ಲ ಸರ್ವಾಚಾರ ಸತ್ಕಾಯಕ ಸತ್ಕ್ರಿಯಾ ಸಮ್ಯಜ್ಞಾನ ಸದ್ಭಕ್ತಿಯ ಸದ್ಗುರುಮುಖದಿಂದ ಬೆಸಗೊಂಡು ನಿಜಪ್ರಸಾದವೆಂದು ಸದ್ಭಾವದಿಂದ ಭಾವಿಸಿ ನಡೆದಂತೆ ನುಡಿದು, ನುಡಿದಂತೆ ನಡೆದು, ಹರುಕಿಲ್ಲದೆ ಹರಿ ಅಜ ಸುರ ಮನು ಮುನಿ ದೇವ ದಾನವ ಮಾನವರೆಲ್ಲ ಮುಳುಗಿಹೋದ ಹೊನ್ನು-ಹೆಣ್ಣು-ಮಣ್ಣು-ಅನ್ನ-ನೀರು-ವಸ್ತ್ರ-ಆಭರಣ-ವಾಹನವೆಂಬ ಮಾಯಾಪಾಶ ಕಡವರವ ದಾಂಟಿದರು ನೋಡ. ಮಾಯಾಭೋಗವಿರಹಿತರಾಗಿ ಲಿಂಗಭೋಗಸಂಪನ್ನರಾದರು ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಎಲೆ ನಾಥಾ, ಎಲೆ ನಾಥಾ, ಅಂಗದಾಶ್ರಯವ ಮಾಡಿಕೊಂಡೆಯಲ್ಲಾ, ಯಂತ್ರವಾಹಕ ಸಂಚನಾದೆಯಲ್ಲಾ. ನಿನ್ನ ಸಂಚವ ಹರಿಬ್ರಹ್ಮಾದಿಗಳರಿಯರು, ದಾನವ ಮಾನವರರಿಯರು, ಸಮಸ್ತ ಮೂರ್ತಿಗಳರಿಯರು, ಸುಭಾಷಿತರು ಶಿವನಾಮಿಗಳರಿಯರು, ಅಷ್ಟವಿಧಾರ್ಚಕರರಿಯರು, ವೇಷಭಾಷಿತರರಿಯರು, ಸುಳುಹು ನಿಂದವರರಿಯರು, ಜಡೆಯ ಮುಡಿಯ ಬೋಳರರಿಯರು, ಆರ ತೊಟ್ಟವನೆ ಮೂರ ಸುಟ್ಟವನೆ ನಾಕನೆಂದವನೆ ಎಂಟು, ಐದು, ಹತ್ತರಲ್ಲಿ ನಿತ್ಯನಾದೆಯಲ್ಲಾ! ಶತಪತ್ರ ಪದದಲ್ಲಿ ನಿವಾಸಿಯಾದೆಯಲ್ಲಾ! ಎನ್ನ ನಿನ್ನೆಡೆಗೆ ಏನೂ ಭೇದವಿಲ್ಲ ಸಲಿಸ, ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ.
--------------
ಘಟ್ಟಿವಾಳಯ್ಯ
ಶ್ರೀಗುರುವೇ ಪರಶಿವಲಿಂಗ, ಪರಶಿವಲಿಂಗವೇ ಜಂಗಮ, ಜಂಗಮವೇ ಪರಶಿವಲಿಂಗ. ಗುರು ಲಿಂಗ ಜಂಗಮ ತ್ರಿವಿಧವೂ ಪರಶಿವಲಿಂಗವೆಂದರಿದು ಮನೋವಾಕ್ಕಾಯವನೊಂದು ಮಾಡಿ ತನು ಮನ ಧನವನೊಂದು ಮಾಡಿ ಆ ಒಂದುಮಾಡಿದ ಮನವನೂ, ಆ ತ್ರಿವಿಧವನೊಂದುಮಾಡಿದ ಪರಶಿವಲಿಂಗದಲ್ಲಿ ಅರ್ಪಿಸಲು ಆ ಲಿಂಗಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಪರಶಿವಲಿಂಗ. ಇಂತು ಬೀಜ-ವೃಕ್ಷ, ಪುಷ್ಪ-ಫಲ ಒಂದೇ. ಪರಶಿವನು ಭಕ್ತಜನಂಗಳ ರಕ್ಷಿಸಲೋಸುಗ[ರ] ದೇವದಾನವ ಮಾನವರಿಗೆ ಕೃಪೆಮಾಡಿ ದೀಕ್ಷೆಯ ಮಾಡಲೋಸುಗರ, ಬಹುವಿಧದಲ್ಲಿ ಶ್ರೀಗುರುರೂಪಾದನು. ಆದರೆ ಶ್ರೀಗುರು ಒಂದೇ ವಸ್ತು, ಪರಶಿವನು. `ಸ್ಥಾವರಂ ಜಂಗಮಾಧಾರಂ' ಎಂದುದಾಗಿ, ಪರಶಿವನು ಶಕ್ತಿವಿನೋದಕಾರಣ ಸದ್ಭಕ್ತಜನಂಗಳಿಗೆ ಪ್ರಸನ್ನವಾಗಲೋಸುಗರ, ದೇವ ದಾನವ ಮಾನವರಲ್ಲಿ ವಿನೋದಿಸಿ ಉತ್ಪತ್ತಿಸ್ಥಿತಿಲಯವ ಮಾಡಲೋಸುಗರ, ಅನೇಕತತ್ತ್ವರೂಪಾದನು ಸರ್ವತತ್ತ್ವರೂಪು ಪರಶಿವನೊಂದೇ ವಸ್ತು, `ತತ್ತ್ವಂ ವಸ್ತುಕಂ' ಎಂದುದಾಗಿ, `ನಾನಾರೂಪಧರಂ ದೇವಂ' ಎಂದುದಾಗಿ, ಪರಶಿವನೊಂದೇ ವಸ್ತು. ಸರ್ವಲೋಕವ ರಕ್ಷಿಸಲೋಸುಗರ, ತನು ಮನ ಧನವನೂ ತನ್ನಲ್ಲಿಗೆ ತೆಗೆದುಕೊಂಡು ಪಾದೋದಕ ಪ್ರಸಾದವನಿತ್ತು ರಕ್ಷಿಸಲೋಸುಗರ, ನಾನಾರೂಪು ಬಹುವಿಧಶೀಲದಿಂ ಜಂಗಮರೂಪಾದನು. `ದಂಡಕ್ಷೀರದ್ವಯಂ ಹಸ್ತೇ' ಎಂದುದಾಗಿ, ಪರಶಿವನೊಂದೇ ವಸ್ತು. `ಯೇ ರುದ್ರಲೋಕಾದವತೀರ್ಯ ರುದ್ರಾ ಎಂದುದಾಗಿ, ಜಂಗಮ ಪರಶಿವನೂ ಒಂದೇ ವಸ್ತು. ಪರಶಿವನ ಪ್ರಸನ್ನವೇ ಪ್ರಸಾದ, ಗುರುಲಿಂಗಜಂಗಮ ತ್ರಿವಿಧಲಿಂಗದಲ್ಲಿ ತನು ಮನ ಧನವನೂ ಸರ್ವಪದಾರ್ಥ ಸರ್ವದ್ರವ್ಯವನೂ ನೇತ್ರದ ಕೈಯಲೂ ಘ್ರಾಣದ ಕೈಯಲೂ ಜಿಹ್ವೆಯ ಕೈಯಲೂ ಪರುಷಭಾವ ಮನವಾಕ್ಕಿನ ಕೈಯಲೂ ಈ ಪ್ರಕರದಿಂದೆಲ್ಲಾ ತೆರದಲ್ಲಿ ಸಕಲನಿಷ್ಕಲವನೆಲ್ಲವನೂ ಅರ್ಪಿಸಿದಲ್ಲಿ ಆ ಪರಶಿವನು ಅನೇಕ ವಿಧದಲ್ಲಿ, ಅನೇಕ ಮುಖದಲ್ಲಿ, ಅರ್ಪಿತವ ಕೈಕೊಂಡು ಪ್ರಸನ್ನವಾಗಲು, ಸದ್ಬಕ್ತಂಗೆ ಬಹುವಿಧ: ಗುರುಮುಖದಲ್ಲಿ ಶುದ್ಧಪ್ರಸಾದ, ಲಿಂಗಮುಖದಲ್ಲಿ ಸಿದ್ಧಪ್ರಸಾದ, ಜಂಗಮಮುಖದಲ್ಲಿ ಪ್ರಸಿದ್ಧಪ್ರಸಾದ. ಗುರುಮುಖದಲ್ಲಿ ನೇತ್ರ ಪ್ರಸಾದ, ಶ್ರೋತ್ರ ಪ್ರಸಾದ, ಘ್ರಾಣ ಪ್ರಸಾದ, ಜಿಹ್ವೆ ಪ್ರಸಾದ, ಪರುಶನ ಪ್ರಸಾದ, ಭಾವ ಪ್ರಸಾದ, ಮನ ಪ್ರಸಾದ ವಾಕ್ ಪ್ರಸಾದ, ಕಾಯ ಪ್ರಸಾದ ಇವುವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಭಕ್ತ ಮಹೇಶ್ವರ ಪ್ರಸಾದಿ ಮನವಿಡಿದು ನಡೆವುವು ತ್ರಿವಿಧಸಂಪತ್ತುಗಳು. ಪ್ರಾಣಲಿಂಗಿ ಶರಣನೈಕ್ಯವಾಗಿ ನಡೆದರಯ್ಯಾ ಕ್ರಿಯಾನುಭಾವವಿಡಿದು. ಸ್ಥಾವರಂ ಜಂಗಮಶ್ಚೈವ ದ್ವಿವಿಧಂ ಲಿಂಗಮುಚ್ಯತೇ ಜಂಗಮಸ್ಯಾವಮಾನೇನ ಸ್ಥಾವರಂ ನಿಷ್ಫಲಂ ಭವೇತ್ ಈ ಭೇದವನು ಭೇದಿಸಬಲ್ಲಡೆ ಇಂದೇ ಇಹವಿಲ್ಲ ಪರವಿಲ್ಲ. ಈ ಒಂದೇ ನಾನಾವಿಧಪ್ರಸಾದ ಅನೇಕದಿನದಿಂ ಪ್ರಸನ್ನನಾಗಲು ಪ್ರಸಾದ ಒಂದೇ ವಸ್ತು ಪರಶಿವನು. ಇದು ಕಾರಣ, ಶ್ರೀಗುರು ಪರಶಿವನು ಜಂಗಮವು ಪ್ರಸಾದವು ಒಂದೇ ಕಾಣಿರಣ್ಣಾ. ಚತುಷ್ಟವನು ವೇದ ಶಾಸ್ತ್ರ ಆಗಮ ಪುರಾಣದಿಂ ವಿಚಾರಿಸಲು ಒಂದೇ ವಸ್ತು. ಆ ವಿಚಾರವ ನಂಬದೇ ಕೆಡಬೇಡ. ಜಂಗಮವೆಯಿದು `ಸ ಭಗವಾನ್ ಯಸ್ಯ ಸರ್ವೇ' ಎಂದುದಾಗಿ `ಸರ್ವಕಾರಣಕಾರಣಾತ್' ಎಂದು ಪರಶಿವಲಿಂಗವಲ್ಲದೆ ಇಲ್ಲ. ಆತನ ಪ್ರಸನ್ನವೇ ಪ್ರಸಾದ, ಆ ಪ್ರಸಾದವೇ ಮುಕ್ತಿ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಎಲಾ ಶಿವಭಕ್ತನೇ ನೀ ಕೇಳು : ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವಿರಲ್ಲ ಶಿವಭಕ್ತಿಯ ನೆಲೆಯ ಬಲ್ಲಿರೇನಯ್ಯಾ ? ಅದು ಎಂತೆಂದರೆ : ಶಿವಭಕ್ತನಾದ ಬಳಿಕ ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಡಬೇಕು : ತನುವ ಕೊಡಬೇಕು ಗುರುವಿಗೆ ; ಮನವ ಕೊಡಬೇಕು ಲಿಂಗಕ್ಕೆ ; ಧನವ ಕೊಡಬೇಕು ಜಂಗಮಕ್ಕೆ]. ತ್ರಿವಿಧ ಪದಾರ್ಥವನ್ನು ತ್ರಿವಿಧರಿಗೆ ದಾನವ ಕೊಟ್ಟು, ನಿಷ್ಕಳಂಕವೇ ತಾನಾಗಿ, ಆರು ಚಕ್ರವ ಹತ್ತಿ, ವಿೂರಿದ ಸ್ಥಲದೊಳಗಿರ್ಪ ಲಿಂಗಮಂ ಪೂಜಿಸಿ, ಮೋಕ್ಷಮಂ ಪಡೆದಡೆ, ಶಿವಭಕ್ತನೆಂದು ನಮೋ ಎಂಬುವೆನಯ್ಯಾ. ಬರಿದೆ 'ನಾ ಶಿವಭಕ್ತ' 'ನೀ ಶಿವಭಕ್ತನೆ'ಂದು ತಿರುಗುವ, ಮೂಳ ಹೊಲೆಯರ ಮುಖವ ನೋಡಲಾಗದು ಕಾಣೋ ಕೂಡಲಾದಿ ಚನ್ನಸಂಗಮದೇವಾ !
--------------
ಕೂಡಲಸಂಗಮೇಶ್ವರ
ಅಯ್ಯಾ ಲಿಂಗವ ಪೂಜಿಸಿಹೆನೆಂದು ಅಂಗದ ಕುರುಹ ಮರೆದೆ. ಜಂಗಮವ ಪೂಜಿಸಿಹೆನೆಂದು ಪ್ರಾಣದ ಕುರುಹ ಮರೆದೆ. ಪ್ರಸಾದವ ಕೊಂಡಿಹೆನೆಂದು ಪರವ ಮರೆದೆ. ಈ ತ್ರಿವಿಧದ ಭೇದವನು ಶ್ರುತಿ ಸ್ಮೃತಿಗಳರಿಯವು. ಹರಿ ಹರ ಬ್ರಹ್ಮದೇವ ದಾನವ ಮಾನವರು ಅರಿಯರು. ನಮ್ಮ ಶರಣರೆ ಬಲ್ಲರು. ಇವ ಬಲ್ಲ ಶರಣ ಚೆನ್ನಮಲ್ಲೇಶ್ವರ ಹೋದ ಹಾದಿಯಲ್ಲದೆ ಎನಗೆ ಬೇರೊಂದು ಹಾದಿ ಇಲ್ಲವಯ್ಯಾ, ಬಸವಪ್ರಿಯ ಕೂಡಲಚೆನ್ನ ಬಸವಣ್ಣಾ. ಇದಕ್ಕೆ ಮತ್ರ್ಯಲೋಕದ ಮಹಾಗಣಂಗಳೇ ಸಾಕ್ಷಿ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->