ಎಲೆ ನಿರೀಶ್ವರವಾದಿಗಳಿರಾ ನೀವು ಕೇಳಿರೆ, ನೀವು ಕೇಳಿರೆ, ನೀವು ಕೇಳಿರೆ,
ನಿಮ್ಮ ನಿಟಿಲದಲ್ಲಿ ಸಂಚಿತ ಪ್ರಾರಬ್ಧ ಆಗಾಮಿ ಎಂಬ
ಲಿಖಿತವ ಬರೆದವಾರು ಹೇಳಿರೆ ?
ನೀವೆ ಬ್ರಹ್ಮ, ಬೇರೆ ಈಶ್ವರನಿಲ್ಲೆಂದು ನುಡಿವಿರಿ.
ತಪಸ್ಸು ತನ್ನಂತೆ, ಊಟ ಮನದಿಚ್ಛೆಯೆಂಬ
ಲೋಕಗಾದೆಯ ಮಾತು ನಿಮಗಾಯಿತ್ತು.
ಅಶನವನುಂಡು ವ್ಯಸನಕ್ಕೆ ಹರಿದು ವಿಷಯಂಗಳೆಂಬ ಹಿಡಿಮೊಲಕ್ಕೆ ಸಿಲ್ಕಿ
ಪಂಚೇಂದ್ರಿಯಂಗಳೆಂಬ ನಾಯಿಗಳಿಚ್ಛೆಗೆ ಹರಿದು,
ನಾಯಾಗಿ ಬಗುಳಿ ನಾಯ ಡೋಣಿಯಲ್ಲಿ ಉಂಡು
ನಾಯ ಸಾವ ಸಾವ ಅದ್ವೈತಿಗಳಿರಾ, ನಿಮಗೇಕೋ ಬೊಮ್ಮದ ಮಾತು ?
ಬ್ರಹ್ಮ ವಿಷ್ಣ್ವಾದಿಗ?ು `ಬ್ರಹ್ಮೋಹಂ' ಎಂದು ಕೆಮ್ಮನೆ ಕೆಟ್ಟು
ಹದ್ದು ಹೆಬ್ಬಂದಿಗಳಾದುದನರಿಯಿರೆ ?
ಹಮ್ಮಿಂದ ಸನತ್ಕುಮಾರ ಒಂಟೆಯಾದುದನರಿಯಿರೆ ?
ಕರ್ತನು ಭರ್ತನು ಹರ್ತನು ಶಿವನಲ್ಲದೆ
ಬೇರೆ ಮತ್ತೊಬ್ಬ ಕಾವರಿಲ್ಲ ಕೊಲುವರಿಲ್ಲ, ಮತ್ತೊಬ್ಬರು?್ಳಡೆ ಹೇಳಿರೆ,
ತ್ವಂ ವಿಶ್ವಕರ್ತಾ ತವ ನಾಸ್ತಿ ಕರ್ತಾ
ತ್ವಂ ವಿಶ್ವಭರ್ತಾ ತವ ನಾಸ್ತಿ ಭರ್ತಾ
ತ್ವಂ ವಿಶ್ವಹರ್ತಾ ತವ ನಾಸ್ತಿ ಹರ್ತಾ
ತ್ವಂ ವಿಶ್ವನಾಥಸ್ತವ ನಾಸ್ತಿ ನಾಥಃ
ಅಸತ್ಯಮಪ್ರತಿಷ್ಠಂ ಚ ಜಗದಾಹುರನೀಶ್ವರವರಿï ಎಂದುದಾಗಿ
ಶಿವನೆ, ನಿಮ್ಮನಿಲ್ಲೆಂದು, ಬೊಮ್ಮವಾವೆಂಬ
ಹಮ್ಮಿನ ಅದ್ವೈತಿಗಳ ಹಿಡಿದು, ಕಾಲನ ಕೈಯಲ್ಲಿ ಕೆಡಹಿ
ಬಾಯಲ್ಲಿ ಹುಡಿಯ ಹೊಯ್ಸಿ,
ನರಕಾಗ್ನಿಯಲ್ಲಿ ಅನೇಕಕಾಲ ಇರಿಸದೆ ಮಾಣ್ಬನೆ
ನಮ್ಮ ಕೂಡಲಚೆನ್ನಸಂಗಮದೇವರು ?