ಅಥವಾ

ಒಟ್ಟು 1 ಕಡೆಗಳಲ್ಲಿ , 1 ವಚನಕಾರರು , 1 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಮ್ಮ ಶರಣ ಅಂತರಂಗದ ಅಷ್ಟವಿಧಾರ್ಚನೆಯ ಮಾಡಿ ಸುಜ್ಞಾನದೃಷ್ಟಿಯಿಂದ ನೋಡಲು ಆ ಜ್ಯೋತಿರ್ಲಿಂಗ ಒಂದೆರಡಾಯಿತ್ತು ಎರಡು ಮೂರಾಯಿತ್ತು; ಮೂರಾರಾಯಿತ್ತು; ಆರೊಂಬತ್ತಾಯಿತ್ತು, ಒಂಬತ್ತು ಹದಿನೆಂಟಾಯಿತ್ತು; ಹದಿನೆಂಟು ಮೂವತ್ತಾರಾಯಿತ್ತು; ಆ ಮೂವತ್ತಾರೆ ಇನ್ನೂರ ಹದಿನಾರಾಯಿತ್ತು. ಇನ್ನೂರ ಹದಿನಾರೆ ಸಾವಿರದೇಳನೂರಿಪ್ಪತ್ತೆಂಟಾಯಿತ್ತು. ಆ ಲಿಂಗಂಗಳೆ ಶರಣನ ರೋಮದ ಕುಳಿಯಲ್ಲಿ ನಿಂದು ಸರ್ವಾಂಗ ಲಿಂಗವಾಯಿತ್ತು. ಆ ಲಿಂಗ ಶರಣಂಗೆ ಚೈತನ್ಯವಾಯಿತ್ತು. ಆ ಶರಣನೆ ಲಿಂಗಕ್ಕೆ ಚೈತನ್ಯವಾಗಲು, ಶರಣಸತಿ ಲಿಂಗಪತಿಯೆಂಬೆರಡಳಿದು ಒಬ್ಬ ಶರಣನೆ ಉಳಿಯಲು ಆ ಶರಣನ ಪಾದೋದಕವೆ ಲಿಂಗಕ್ಕೆ ಅಭಿಷೇಕವಾಯಿತ್ತು. ಆ ಶರಣನ ಪಾದಕ್ಕರ್ಪಿಸಿದ ಕುಸುಮವೆ ಪ್ರಸಾದಪುಷ್ಫವಾಯಿತ್ತು. ಆ ಶರಣನ ಪಾದಕ್ಕರ್ಪಿಸಿದ ಗಂಧಾಕ್ಷತೆಯೆ, ತಾಂಬೂಲವೆ ಲಿಂಗಪ್ರಸಾದಗಳಾದವು. ಆ ಶರಣನ ಸನ್ನಿಧಿಯಲ್ಲಿ ಪ್ರಕಾಶವಾದ ಧೂಪದೀಪಂಗಳೆ ಲಿಂಗದ್ರವ್ಯಂಗಳಾಗಿ ಆ ಶರಣನ ಪಾದಪೂಜಾದ್ರವ್ಯವೆ ಲಿಂಗಪೂಜಾದ್ರವ್ಯವಾಗಿ ಆಚರಿಸುತಿರ್ದಲ್ಲಿ ಶರಣಸತಿ ಲಿಂಗಪತಿ ಎಂಬ ನ್ಯಾಯ ಒಂದಾಯಿತ್ತು. ಲಿಂಗ ಹಿರಿದು ಅಂಗ ಕಿರಿದು ಎಂಬ ನ್ಯಾಯ ಇಲ್ಲದೆ ಹೋಯಿತ್ತು_ ಅದೆಂತೆಂದಡೆ; ದೀಪದಿಂದ ದೀಪ ಹುಟ್ಟಿದಲ್ಲಿ, ಆವ ಆವ ದೀಪ ಮೊದಲೆಂಬುದು ಕಾಣದಂತೆ; ಸರ್ಪ ಕಚ್ಚಿದ ಮನುಷ್ಯನ ಅಂಗವಿಷ, ಒಂದರ ಠಾವಿನಲ್ಲಿದೆಯೆಂದು ಕುರುಹಿಡಬಾರದಂತೆ, ಲಿಂಗ ಪ್ರಾಣವಾದ ಶರಣಂಗೆ, ಶರಣ ಪ್ರಾಣವಾದ ಲಿಂಗಕ್ಕೆ ಭೇದವಿಲ್ಲ_ ಹರಗುರು ವಾಕ್ಯದಲ್ಲಿ ಶರಣ_ ಲಿಂಗಾದಾಚರಣೆ ಇಂತಿಹುದು. ಈ ಶರಣ_ ಲಿಂಗದೂಷಣೆಯ ಮಾಡುವ ದ್ರೋಹಿಗಳಿಗೆ ನಾಯಕನರಕ ತಪ್ಪದು, ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
-->