ಅಥವಾ

ಒಟ್ಟು 47 ಕಡೆಗಳಲ್ಲಿ , 20 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ನಾನಾವೇಳೆಯಲ್ಲಿ ಸಹಸ್ರವೇಳೆಯಲ್ಲಿ ಬರುವದು ದುರ್ಲಾಭ. ಬಂದ ಬಳಿಕ ಶಿವಭಕ್ತಜನ್ಮ ಸಾಧ್ಯವಾಯಿತು. ಶಿವಭಕ್ತ ಜನ್ಮದಲ್ಲಿ ಬಂದು ಶಿವಲಿಂಗೈಕ್ಯರ ನಿಂದೆಮಾಡಿ ಕೆಡದಿರು ಕೆಡದಿರು. ಎಲೋ ವೇಷಧಾರಿಗಳಿರಾ, ಶಿವಭಕ್ತ ಬ್ರಹ್ಮವೆಂಬುದು, ಶಿವನ ಸಾಕಾರವೆ ಜಂಗಮದೇವ. ಇಂತೆಂಬ ಉಭಯಭೇದ ನಿಮಗೆ ತಿಳಿಯದು. ವೇಷಾಧಾರಿಗಳು ನೀವು ಕೇಳಿರೋ, ಶುನಕ ಬೆಟ್ಟಕ್ಕೆ ಬೊಗಳಿದಂತೆ ಭಕ್ತಂಗೆ ಜಾತಿಸೂತಕವುಂಟೆ ಎಂದ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ಮತ್ತಂ, ಆ ಶಿಷ್ಯನ ಪ್ರಳಾಪವೆಂತೆಂದಡೆ : ಅಯ್ಯಾ, ಅನಂತ ಜನ್ಮದಲ್ಲಿ ಮಾಡಿದ ಪಾಪಂಗಳೆಂಬ ಪಂಕವ ನಿಮ್ಮ ಚಿದ್ವಾಕ್ಯಪ್ರಭೆಯಲ್ಲಿ ಮುಳುಗಿಸುವುದಯ್ಯ. ಎನ್ನ ಭವಾರಣ್ಯವ ನಿಮ್ಮ ಮಹಾಜಾÕನ ಶಸ್ತ್ರದಲ್ಲಿರಿದು ಖಂಡಿಸುವುದಯ್ಯ. ಎನ್ನ ಭವರೋಗಂಗಳೆಂಬ ಕಾಷ್ಠಂಗಳ ನಿಮ್ಮ ಮಹಾಜಾÕನಾಗ್ನಿಯಲ್ಲಿ ದಹಿಸುವುದಯ್ಯ. ಅಪ್ರಮಾಣಕೂಡಲಸಂಗಮದೇವಾ ಶಿವಧೋ ಶಿವಧೋ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ನವಮಾಸಕ್ಕೆ ಶ್ರೋತ್ರಾದಿಗಳೈದು, ಶಬ್ದಾದಿಗಳೈದು, ಮಂಡಲಮೂರು, ಗುಣಮೂರು, ವ್ಯಾದ್ಥಿಮೂರು, ಈಷಣಮೂರು, ನಾಡಿಹತ್ತು, ವಾಯುಹದಿನಾಲ್ಕು, ಕ್ಲೇಷಂಗಳೈದು, ಧಾತುಗಳೇಳು, ಮದವೆಂಟು, ಸುಖದುಃಖಂಗಳೆರಡು, ಎಪ್ಪತ್ತೆರಡುಸಾವಿರ ನಾಡಿಗಳು, ಎಂಬತ್ತೆಂಟುಕೋಟಿ ರೋಮದ್ವಾರಂಗಳು, ಎಂಬತ್ನಾಲ್ಕುನೂರುಸಾವಿರ ಸಂದುಗಳು, ಇಪ್ಪತ್ತೊಂದುಸಾವಿರದಾರುನೂರು ಶ್ವಾಸಂಗಳು, ಮೂವತ್ತೆರಡು ಲಕ್ಷಣಂಗಳು, ಐವತ್ತಾರಕ್ಷರಂಗಳು, ಅರುವತ್ನಾಲ್ಕು ಕಲೆ, ಜ್ಞಾನಂಗಳು ಕೂಡಿ ಸುಜ್ಞಾನಸಂಪನ್ನನಾಗಿ ಪೂರ್ವಜನ್ಮದಲ್ಲಿ ಎಂಬತ್ನಾಲ್ಕುನೂರುಸಾವಿರ ಜನ್ಮದಲ್ಲಿ ಬಂದ ಜನ್ಮವ ವಿವೇಕಿಸುತ್ತಿಹುದು ನೋಡಾ. ಅದೆಂತೆಂದಡೆ: ಮಾನವಜನ್ಮ ಒಂಬತ್ತುಸಾವಿರ ಜನ್ಮ. ಉರುವ ಜೀವಜನ್ಮ ಹನ್ನೊಂದುಸಾವಿರಜನ್ಮ. ಜಲಚರ ಜೀವಜನ್ಮದಲ್ಲಿ ಎಂಬತ್ನಾಲ್ಕುನೂರುಸಾವಿರಜನ್ಮದಲ್ಲಿ ಹತ್ತುಸಾವಿರ ಜನ್ಮ. ಹಾರುವ ಪಕ್ಷಿಗಳ ಜೀವಜನ್ಮದಲ್ಲಿ ಹತ್ತುಸಾವಿರಜನ್ಮ. ಚತುಷ್ಪಾದಜೀವರಾಶಿಗಳ ಜನ್ಮದಲ್ಲಿ ಹತ್ತುಸಾವಿರಜನ್ಮ. ದೈತ್ಯ ಜೀವಜನ್ಮದಲ್ಲಿ ಹದಿನಾರುಸಾವಿರಜನ್ಮ. ಸ್ಥಾವರಂಗಳ ಜನ್ಮದಲ್ಲಿ ಹದಿನೆಂಟುಸಾವಿರಜನ್ಮ. ಇಂತು ಎಂಬತ್ನಾಲ್ಕುನೂರುಜನ್ಮ ಅಂಡಜ ಸ್ವೇದಜ ಉದ್ಬಿಜ ಜರಾಯುಜವೆಂಬ ನಾಲ್ಕು ಯೋನಿಯಲ್ಲಿ ಜನಿಸಿದನು. ಇನ್ನು ಹುಟ್ಟಿದಾಕ್ಷಣದಲ್ಲಿಯೆ ಮರಣ, ಮರಣದಾಕ್ಷಣದಲ್ಲಿಯೇ ಜನನವೆಂದರಿದು ಸ್ಮರಿಸುತ್ತಿಹುದು ನೋಡಾ. ಇದಕ್ಕೆ ಈಶ್ವರ ಉವಾಚ : ``ಮಾಸೇಕಂ ನವಮೇ ಪ್ರಾಪ್ತೇ ಗರ್ಭೇತ ತತ್‍ಸ್ಮರತಿ ಸ್ವಯಂ | ಮೃತಸ್ಯಾಹಂ ಪುನರ್ಜಾತಃ ಜಾತಸ್ಯಾಹಂ ಮೃತಃ ಪುನಃ | ನಾನಾಯೋನಿಸಹಸ್ರೇಷು ಮಯಾ ದೃಷ್ಟಮನೇಕಶಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆವ ಜಾತಿಯಾದಡೂ ಆಗಲಿ; ಪುರಾತನ ಚಾರಿತ್ರದಲ್ಲಿ ನಡೆದು, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನಮಂ ಕೊಟ್ಟು, ಅಹಂಕಾರವಳಿದಿಹಂತಹ ಮಹಾತ್ಮರ ಬಾಯ ತಂಬುಲವ ಮೆಲುವೆ, ಬೀಳುಡಿಗೆಯ ಹೊದಿವೆ. ಅವರ ಪಾದರಕ್ಷೆಗಳೆರಡನೂ, ಮಂಡೆಯ ಮೇಲೆ ಹೊತ್ತುಕೊಂಡು ಬದುಕುವೆನಯ್ಯಾ. ಆ ಗಣಂಗಳ ದಾಸನ ದಾಸ ನಾನು, ಜನ್ಮ ಜನ್ಮದಲ್ಲಿ ಆಗುವೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
ಪೂರ್ವಜನ್ಮದಲ್ಲಿ ಮಾಡಿದ ಕರ್ಮ, ಈಗಿನ ಜನ್ಮದಲ್ಲಿ ಭೋಗಿಸಲಿಕ್ಕೀಡಾಯಿತ್ತು. ಈಗ ಮಾಡಿದ ಕರ್ಮ, ಮುಂದಕ್ಕೆ ಬಿತ್ತಿದ ಬೆಳೆಯನುಂಬಂತೆ ಬರ್ಪುದು ತಪ್ಪದು. ಈ ಕರ್ಮವುಳ್ಳನ್ನಕ್ಕ ಆರಿಗಾದರೂ ಬಳಲಿಕೆ ಬಿಡದು. ಈ ಕರ್ಮ ಹರಿದಂದಿಗೆ ನಿಮ್ಮ ಕಾಂಬರು ಕಾಣಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಶಿವಶಿವಾ ದ್ವಿಜರೆಂಬ ಪಾತಕರು ನೀವು ಕೇಳಿ ಭೋ ! ನೀವು ಎಲ್ಲಾ ಜಾತಿಗೂ ನಾವೇ ಮಿಗಿಲೆಂದು, `ವರ್ಣಾನಾಂ ಬ್ರಾಹ್ಮಣೋ ಗುರುಃ' ಎಂದು, ಬಳ್ಳಿಟ್ಟು ಬಾಸ್ಕಳಗೆಡವುತಿಪ್ಪಿರಿ ನೋಡಾ. `ಆದಿ ಬಿಂದುದ್ಭವೇ ಬೀಜಂ' ಎಂಬ ಶ್ರುತಿಯಿಂ ತಿಳಿದು ನೋಡಲು ಆದಿಯಲ್ಲಿ ನಿಮ್ಮ ಮಾತಾಪಿತರ ಕೀವು ರಕ್ತದ ಮಿಶ್ರದಿಂದ ನಿಮ್ಮ ಪಿಂಡ ಉದಯಿಸಿತ್ತು. ಆ ಕೀವು ರಕ್ತಕ್ಕೆ ಆವ ಕುಲ ಹೇಳಿರೆ ? ಅದೂ ಅಲ್ಲದೆ ಪಿಂಡ ಒಂಬತ್ತು ತಿಂಗಳು ಒಡಲೊಳಗೆ ಕುರುಳು, ಮಲಮೂತ್ರ, ಕೀವು, ದುರ್ಗಂಧ, ರಕ್ತ ಖಂಡಕಾಳಿಜ ಜಂತುಗಳೊಳಗೆ, ಪಾತಾಳದೊಳಗಣ ಕ್ರಿಮಿಯಂತೆ ಹೊದಕುಳಿಗೊಂಬಂದು ನೀನಾವ ಕುಲ ಹೇಳಿರೆ ? ಅದುವಲ್ಲದೆ ಮೂತ್ರದ ಕುಳಿಯ ಹೊರವಡುವಾಗ, ಹೊಲೆ ಮುಂತಾಗಿ ಮುದುಡಿ ಬಿದಲ್ಲಿ, ಹೆತ್ತವಳು ಹೊಲತಿ, ಹುಟ್ಟಿದ ಮಗುವು ಹೊಲೆಯನೆಂದು ನಿಮ್ಮ ಕುಲಗೋತ್ರ ಮುಟ್ಟಲಮ್ಮದೆ, ಹನ್ನೆರಡು ದಿನದೊಂದು ಪ್ರಾಯಶ್ಚಿತ್ತವನಿಕ್ಕಿಸಿಕೊಂಡು ಬಂದು ನಿನ್ನಾವ ಕುಲ ಹೇಳಿರೆ ? ಮುಂಜಿಗಟ್ಟದ ಮುನ್ನ ಕೀಳುಜಾತಿ, ಮುಂಜಿಗಟ್ಟಿದ ಬಳಿಕ ಮೇಲುಜಾತಿಗಳು ಎಂಬ ಪಾತಕರು ನಿಮ್ಮ ನುಡಿ ಕೊರತೆಗೆ ನೀವು ನಾಚಬೇಡವೆ ? ನೀವು ನಾಚದಿರ್ದಡೆ ನಾ ನಿಮ್ಮ ಕುಲದ ಬೇರನೆತ್ತಿ , ತಲೆಕೆಳಗು ಮಾಡಿ ತೋರಿಹೆನು. ನಾನು ಉತ್ತಮದ ಬ್ರಾಹ್ಮಣರೆಂಬ ನಿಮ್ಮ ದೇಹ ಬ್ರಹ್ಮನೊ ? ನಿಮ್ಮ ಪ್ರಾಣ ಬ್ರಹ್ಮನೊ ? ಆವುದು ಬ್ರಾಹ್ಮಣ್ಯ ? ಬಲ್ಲಡೆ ಬಗುಳಿರಿ ! ಅರಿಯದಿರ್ದಡೆ ಕೇಳಿರಿ. ದೇಹ ಕುಲಜನೆಂದಡೆ ಚರ್ಮಕ್ಕೆ ಕುಲವಿಲ್ಲ, ಖಂಡಕ್ಕೆ ಕುಲವಿಲ್ಲ, ನರವಿಂಗೆ ಕುಲವಿಲ್ಲ, ರಕ್ತಕ್ಕೆ ಕುಲವಿಲ್ಲ, ಕೀವಿಂಗೆ ಕುಲವಿಲ್ಲ. ಕರುಳಿಂಗೆ ಕುಲವಿಲ್ಲ, ಮಲಮೂತ್ರಕ್ಕಂತೂ ಕುಲವಿಲ್ಲ, ಒಡಲೆಂಬುದು ಅಪವಿತ್ರವಾಯಿತ್ತು, ಕುಲವೆಲ್ಲಿಯದೊಡಲಿಂಗೆ ? ಅವಂತಿರಲಿ ; ಇನ್ನು ನಿಮ್ಮ ಪ್ರಾಣಕ್ಕೆ ಕುಲವುಂಟೆಂದಡೆ. ಪ್ರಾಣ ದಶವಾಯುವಾದ ಕಾರಣ, ಆ ವಾಯು ಹಾರುವನಲ್ಲ. ಅದುವಲ್ಲದೆ ನಿಮ್ಮ ಒಡಲನಲಗಾಗಿ ಇರಿವ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರಂಗಳು ಉತ್ತಮ ಕುಲವೆಂಬ ಅವು ಮುನ್ನವೆ ಪಾಪಕಾರಿಗಳಾದ ಕಾರಣ, ಅವಕ್ಕೆ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಳಗಣ ಸಪ್ತವ್ಯಸನಂಗಳು ಉತ್ತಮ ಕುಲವೆಂಬ ಅವು ಮುನ್ನವೆ ದುರ್ವ್ಯಸನಂಗಳಾದ ಕಾರಣ, ಅದಕೆಂದೂ ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮ ಅಷ್ಟಮದಂಗಳು ಉತ್ತಮ ಕುಲವೆಂಬ ಅವು ನಿನ್ನ ಸುರೆಯ ಸವಿದ ಕೋಡಗದ ಹಾಂಗೆ ನಿಮ್ಮ ಗಾಣಲೀಯವಾದ ಕಾರಣ, ಅವು ಕುಲವಿಲ್ಲ. ನಿಲ್ಲು ! ಬಗುಳದಿರು ! ಇನ್ನು ಒಡಲ ತಾಪತ್ರಯಂಗಳು ಉತ್ತಮ ಕುಲವೆಂಬ ಅವು ನಿಮ್ಮ ಇರಿದಿರಿದು ಸುಡುವ ಒಡಗಿಚ್ಚುಗಳು. ಅವು ಕುಲವಿಲ್ಲ. ನಿಲ್ಲು ! ಮಾಣು ! ನಿಮ್ಮೊಡಲ ಮುಚ್ಚಿದ ಮಲಮೂತ್ರಂಗಳ ಕುಲವುಂಟೆ ? ಅವು ಅರಿಕೆಯಲಿ ಮಲಮೂತ್ರಂಗಳಾದ ಕಾರಣ, ಅವಕ್ಕೆ ಕುಲವಿಲ್ಲ ನಿಲ್ಲು ! ಮಾಣು ! ಇನ್ನು ಉಳಿದ ಅಂತಃಕರಣಂಗಳಿಗೆ ಉತ್ತಮ ಕುಲವೆಂಬಿರಿ. ಅವ ನೀವು ಕಾಣಿರಿ, ನಿಮ್ಮನವು ಕಾಣವು. ಅದು ಕಾರಣ ಬಯಲಭ್ರಮೆಗೆ ಉತ್ತಮ ಕುಲವುಂಟೆ ? ಇಲ್ಲ ! ಇಲ್ಲ !! ನಿಲ್ಲು ! ಮಾಣು ! ಇಂತು ನಿಮ್ಮ ಪಂಚಭೂತ ಸಪ್ತಧಾತು ಪಂಚೇಂದ್ರಿಯಂಗಳು ಉತ್ತಮ ಕುಲವೆಂಬ ಅವು ಎಲ್ಲಾ ಜೀವರಾಶಿಗೂ ನಿಮಗೂ ಒಂದೇ ಸಮಾನ. ಅದೆಂತೆಂದಡೆ : ಸಪ್ತಧಾತುಸಮಂ ಪಿಂಡಂ ಸಮಯೋನಿಸಮುದ್ಭವಂ | ಆತ್ಮಾಜೀವಸಮಾಯುಕ್ತಂ ವರ್ಣಾನಾಂ ಕಿಂ ಪ್ರಯೋಜನಂ || ಎಂದುದಾಗಿ, ನಿಮ್ಮ ದೇಹಕ್ಕೆ ಕುಲವಾವುದು ಹೇಳಿರೆ ! ಇದಲ್ಲದೆ ಆತ್ಮನು ದೇಹವ ಬಿಟ್ಟು, ಒಂದು ಘಳಿಗೆ ತೊಲಗಿರಲು ಆ ದೇಹ ಹಡಿಕೆಯಾಗಿ ಹುಳಿತು, ನಾಯಿ ನರಿ ತಿಂಬ ಕಾರಣ ನಿಮ್ಮ ದೇಹ ಅಪವಿತ್ರ ಕಾಣಿರೆ ! ಇಂತಪ್ಪ ಅಪವಿತ್ರ ಕಾರ್ಯಕ್ಕೆ ಕುಲವಿಲ್ಲ. ಆ ಕಾರ್ಯಕ್ಕೆ ಕುಲವುಂಟೆಂದಡೆ ಮೇಲುಜಾತಿಯ ದೇಹದೊಳಗೆ ಹಾಲುವುಳ್ಳಡೆ ಕೀಳುಜಾತಿಯ ದೇಹದೊಳಗೆ ರಕ್ತವುಳ್ಳಡೆ ಅದು ಕುಲವಹುದು ! ಅಂಥಾ ಗುಣ ನಿಮಗಿಲ್ಲವಾಗಿ, ಎಲ್ಲಾ ಜೀವರಾಶಿಯ ದೇಹವು, ನಿಮ್ಮ ದೇಹವು ಒಂದೇ ಸಮಾನವಾದ ಕಾರಣ ನಿಮಗೆ ಕುಲವಿಲ್ಲ ! ನಿಲ್ಲು ! ಮಾಣು ! ಒಡಲು ಕರಣಾದಿಗಳು ಕುಲವಿಲ್ಲದೆ ಹೋದಡೂ ಎಲ್ಲವೂ ಅರಿವ ಚೈತನ್ಯಾತ್ಮಕನೆ, ಸತ್ಕುಲಜನೆ ಆತ್ಮನು, ಆವ ಕುಲದೊಳಗೂ ಅಲ್ಲ. ಶರೀರ ಬೇರೆ, ಆತ್ಮ ಬೇರೆ. ಅದೆಂತೆಂದಡೆ : ಭೂದೇವಮೃದ್ಭಾಂಡಮನೇಕ ರೂಪಂ ಸುವರ್ಣಮೇಕಂ ಬಹುಭೂಷಣಾನಾಂ | ಗೋಕ್ಷೀರಮೇಕಂ ಬಹುವರ್ಣಧೇನುಃ | ಶರೀರಭೇದಸ್ತೆ ್ವೀಕಃ ಪರಮಾತ್ಮಾ || ಎಂದುದಾಗಿ, ಶರೀರಂಗಳು ಅನಂತ, ಆತ್ಮನೊಬ್ಬನೆ. ಅದು ಕಾರಣ, ಆ ಆತ್ಮನು ಆವ ಕುಲದಲ್ಲೂ ಅಲ್ಲ. ಇನ್ನು ಆವ ಠಾವಿನಲ್ಲಿ ನಿಮ್ಮ ಕುಲದ ಪ್ರತಿಷ್ಠೆಯ ಮಾಡಿ ತೋರಿವಿರೊ ? ದೇಹದ ಮೃತ್ತಿಕೆ ಆತ್ಮ ನಿರಾಕಾರನೆನುತ್ತಿರಲು, ಇನ್ನಾವ ಪರಿಯಲ್ಲಿ ನಾ ಉತ್ತಮ ಕುಲಜರೆಂಬಿರೊ ? ಜೀವಶ್ಶಿವೋ ಶಿವೋ ಜೀವಸ್ಸಜೀವಃ ಕೇವಲಃ ಶಿವಃ | ಪಾಶಬದ್ಧಸ್ಥಿತೋ ಜೀವಃ ಪಾಶಮುಕ್ತಃ ಸದಾಶಿವಃ || ಎಂಬ ಶ್ರುತಿಯಂ ತಿಳಿದು ನೋಡಲು, ನೀವೆಲ್ಲಾ ಪಾಶಬದ್ಧ ಜೀವಿಗಳಾಗುತ್ತ ಇರಲು, ನಿಮಗೆಲ್ಲಿಯ ಉತ್ತಮ ಕುಲ ? ಪಾಶಮುಕ್ತರಾದ ಎಮ್ಮ ಶಿವಭಕ್ತರೆ ಕುಲಜರಲ್ಲದೆ ನಿಮಗೆ ಉತ್ತಮ ಕುಲ ಉಂಟಾದಡೆ, ನಿಮ್ಮ ದೇಹದೊಳಗೆ ಹೊರಗೆ ಇಂಥಾ ಠಾವೆಂದು ಬೆರಳುಮಾಡಿ ತೋರಿ ! ಅದೂ ಅಲ್ಲದೆ ಒಂದು ಪಕ್ಷಿಯ ತತ್ತಿಯೊಳಗೆ ಹಲವು ಮರಿ ಹುಟ್ಟಿದಡೆ ಒಂದರ ಮರಿಯೋ, ಹಲವು ಪಕ್ಷಿಯ ಮರಿಯೋ ? ತಿಳಿದು ನೋಡಿದಡೆ ಅದಕ್ಕೆ ಬೇರೆ ಬೇರೆ ಪಕ್ಷಿಗಳೆಂಬ ಕುಲವಿಲ್ಲ. ಅಹಂಗೆ ಒಬ್ಬ ಬ್ರಹ್ಮನ ಅಂಡವೆಂಬ ತತ್ತಿಯೊಳಗೆ ಸಕಲ ಜೀವರಾಶಿ ಎಲ್ಲಾ ಉದಯಿಸಿದವು. ಅದೆಂತೆಂದಡೆ : ಪೃಥಿವ್ಯಾಕಾಶಯೋರ್ಭಾಂಡಂ ತಸ್ಯಾಂಡಂ ಜಾಯತೇ ಕುಲಂ | ಅಂತ್ಯಜಾತಿದ್ರ್ವಿಜಾತಿರ್ಯಾ ಏಕಯೋನಿಸಹೋದರಾ || ಎಂದುದಾಗಿ, ಇರುಹೆ ಮೊದಲು, ಆನೆ ಕಡೆಯಾದ ಸಚರಾಚರವೆಲ್ಲವು ಒಬ್ಬ ಬ್ರಹ್ಮನ ಅಂಡದೊಳಗೆ ಹುಟ್ಟಿ, ಏಕಯೋನಿ ಸಹೋದರರೆಂದು ಪ್ರತಿಷ್ಠಿಸುತ್ತಿರಲು, ನಿಮಗೆಲ್ಲಿಯ ಕುಲವೊ ? ಶಿವಭಕ್ತರೆ ಉತ್ತಮ ಕುಲಜರೆಂದು, ಮಿಕ್ಕಿನವರೆಲ್ಲಾ ಕೀಳುಜಾತಿ ಎಂಬುದನು ಓದಿ ಬರಿದೊರೆಯಾದಡು ನಾನು ನಿಮಗೆ ಹೇಳಿಹೆನು ಕೇಳಿ ಶ್ವಪಚೋಪಿ ಮುನಿಶ್ರೇಷ್ಠಶ್ಶಿವ ಸಂಸ್ಕಾರಸಂಯುತಃ | ಶಿವಸಂಸ್ಕಾರಹೀನಶ್ಚ ಬ್ರಾಹ್ಮಣಃ ಶ್ವಪಚಾಧಮಃ || ಎಂಬ ಶ್ರುತಿಗೆ ಇದಿರುತ್ತರವ ಕೊಟ್ಟಡೆ, ಬಾಯಲ್ಲಿ ಕಾಷ್ಟವ ಮೂಡುವುದಾಗಿ ನೀವೇ ಕೀಳುಜಾತಿಗಳು, ಅರಿದ ಶಿವಭಕ್ತರು ಸತ್ಕುಲಜರೆಂದು ಸುಮ್ಮನಿರಿರೋ. ಅಲ್ಲದ ಅಜ್ಞಾನರಾದುದೆಲ್ಲಾ ಒಂದು ಕುಲ. ಸುಜ್ಞಾನರಾದುದೆಲ್ಲಾ ಒಂದು ಕುಲವೆಂದು ಶಾಸ್ತ್ರಗಳು ಹೇಳುತ್ತಿದಾವೆ. ಅದೆಂತೆಂದಡೆ : ಆಹಾರನಿದ್ರಾಭಯಮೈಥುನಂ ಚ ಸಾಮಾನ್ಯಮೇತತ್ಪಶುಬ್ಥಿರ್ನರಾಣಾಂ | ಜ್ಞಾನಂ ಹಿ ತೇಷಾಂ ಅದ್ಥಿಕೋ ವಿಶೇಷಃ ಜ್ಞಾನೇನ ಹೀನಾಃ ಪಶುಬ್ಥಿಃ ಸಮಾನಾಃ || ಎಂದುದಾಗಿ, ಅಜ್ಞಾನತಂತುಗಳು ನೀವೆಲ್ಲರೂ ಕರ್ಮಪಾಶಬದ್ಧರು. ನಿಮಗೆಲ್ಲಿಯದೊ ಸತ್ಕುಲ ? ಇದು ಅಲ್ಲದೆ ನಿಮ್ಮ ನುಡಿಯೊಡನೆ ನಿಮಗೆ ಹಗೆಮಾಡಿ ತೋರಿಹೆನು. ಕೇಳೆಲವೊ ನಿಮಗೆ ಕುಲವು ವಶಿಷ್ಟ, ವಿಶ್ವಾಮಿತ್ರ, ಭಾರದ್ವಾಜ, ಕೌಂಡಿಲ್ಯ, ಕಾಶ್ಯಪನೆಂಬ ಋಷಿಗಳಿಂದ ಬಂದಿತ್ತೆಂಬಿರಿ. ಅವರ ಪೂರ್ವವನೆತ್ತಿ ನುಡಿದಡೆ ಹುರುಳಿಲ್ಲ. ಅವರೆಲ್ಲಾ ಕೀಳುಜಾತಿಗಳಾದ ಕಾರಣ, ನೀವೇ ಋಷಿಮೂಲವನು, ನದಿಮೂಲವನೆತ್ತಲಾಗದೆಂಬಿರಿ. ಇನ್ನು ನಿಮ್ಮ ನುಡಿ ನಿಮಗೆ ಹಗೆಯಾಯಿತ್ತೆಂದೆ ಕೇಳಿರೊ. ಆ ಋಷಿಗಳ ಸಂತಾನವಾಗಿ ನಿಮ್ಮ ಮೂಲವನೆತ್ತಿದಡೂ ಹುರುಳಿಲ್ಲ. ಅದಂತಿರಲಿ. ನಿಮ್ಮ ಕುಲಕೆ ಗುರುವೆನಿಸುವ ಋಷಿಗಳೆಲ್ಲರೂ ಲಿಂಗವಲ್ಲದೆ ಪೂಜಿಸರು, ವಿಭೂತಿ ರುದ್ರಾಕ್ಷಿಯನಲ್ಲದೆ ಧರಿಸರು, ಪಂಚಾಕ್ಷರಿಯನಲ್ಲದೆ ಜಪಿಸರು, ಜಡೆಯನ್ನಲ್ಲದೆ ಕಟ್ಟರು. ಹಾಗೆ ನೀವು ಲಿಂಗವ ಪೂಜಿಸಿ, ವಿಭೂತಿ ರುದ್ರಾಕ್ಷಿಯ ಧರಿಸಿ, ಪಂಚಾಕ್ಷರಿಯ ಜಪಿಸಿ, ಜಡೆಯ ಕಟ್ಟಿ, ಈಶ್ವರನ ಲಾಂಛನವ ಧರಿಸಿದಡೆ ನೀವು ಋಷಿಮೂಲದವರಹುದು. ಹೇಗಾದಡೂ ಅನುಸರಿಸಿಕೊಳಬಹುದು. ಅದು ನಿಮಗಲ್ಲದ ಮಟ್ಟಿಯನ್ನಿಟ್ಟು ವಿಷ್ಣುವಂ ಪೂಜಿಸಿ ಮುಡುಹಂ ಸುಡಿಸಿಕೊಂಡು, ಸಾಲಿಗ್ರಾಮ, ಶಕ್ತಿ, ಲಕ್ಷ್ಮಿ, ದುರ್ಗಿ ಎಂಬ ಕಿರುಕುಳದೈವವಂ ಪೂಜಿಸಿ, ನರಕಕ್ಕಿಳಿದು ಹೋಹರಾದ ಕಾರಣ, ನೀವೇ ಹೀನಜಾತಿಗಳು. ನಿಮ್ಮ ಋಷಿಮಾರ್ಗವ ವಿಚಾರಿಸಿ ನಡೆಯಿರಾಗಿ ನೀವೇ ಲಿಂಗದ್ರೋಹಿಗಳು. ಲಿಂಗವೆ ದೈವವೆಂದು ಏಕನಿಷ್ಠೆಯಿಂದಲಿರಿರಾಗಿ ನೀವೇ ಲಿಂಗದ್ರೋಹಿಗಳು. ಪಂಚಾಕ್ಷರಿಯ ನೆನೆಯಿರಾಗಿ ಮಂತ್ರದ್ರೋಹಿಗಳು. ರುದ್ರಾಕ್ಷಿಯ ಧರಿಸರಾದ ಕಾರಣ ನೀವು ಶಿವಲಾಂಛನ ದ್ರೋಹಿಗಳು. ಶಿವಭಕ್ತರಿಗೆರಗದ ಕಾರಣ ನೀವು ಶಿವಭಕ್ತರಿಗೆ ದ್ರೋಹಿಗಳು. ನಿಮ್ಮ ಮುಖವ ನೋಡಲಾಗದು. ಬರಿದೆ ಬ್ರಹ್ಮವನಾಚರಿಸಿ ನಾವು ಬ್ರಹ್ಮರೆಂದೆಂಬಿರಿ. ಬ್ರಹ್ಮವೆಂತಿಪ್ಪುದೆಂದರಿಯಿರಿ. ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಸತ್ಯಂ ಬ್ರಹ್ಮ ಶುಚಿಬ್ರ್ರಹ್ಮ ಇಂದ್ರಿಯನಿಗ್ರಹಃ | ಸರ್ವಜೀವದಯಾಬ್ರಹ್ಮ ಇತೈ ್ಯೀದ್ಬ್ರಹ್ಮ ಲಕ್ಷಣಂ | ಸತ್ಯಂ ನಾಸ್ತಿ ಶುಚಿರ್ನಾಸ್ತಿ ನಾಸ್ತಿ ಚೇಂದ್ರಿಯ ನಿಗ್ರಹಃ | ಸರ್ವಜೀವ ದಯಾ ನಾಸ್ತಿ ಏತಚ್ಚಾಂಡಾಲ ಲಕ್ಷಣಂ || ಬ್ರಹ್ಮಕ್ಕೂ ನಿಮಗೂ ಸಂಬಂಧವೇನೊ ? ಬ್ರಹ್ಮವೆ ನಿಃಕರ್ಮ, ನೀವೇ ಕರ್ಮಿಗಳು. ಮತ್ತೆಂತೊ `ಬ್ರಹ್ಮಂ ಚರೇತಿ ಬ್ರಹ್ಮಣಾಂ' ಎಂದು ಗಳವುತ್ತಿಹಿರಿ. ಗಾಯತ್ರಿಯ ಜಪಿಸಿ ನಾವು ಕುಲಜರೆಂಬಿರಿ. ಆ ಗಾಯತ್ರಿ ಕರ್ಮವಲ್ಲದೆ ಮುಕ್ತಿಗೆ ಕಾರಣವಿಲ್ಲ. ಅಂತು ಗಾಯತ್ರಿಯಿಂದ ನೀವು ಕುಲಜರಲ್ಲ. ವೇದವನೋದಿ ನಾವೇ ಬ್ರಹ್ಮರಾದೆವೆಂಬಿರಿ. ವೇದ ಹೇಳಿದ ಹಾಂಗೇ ನಡೆಯಿರಿ. ಅದೆಂತೆಂದಡೆ : ``ದ್ಯಾವಾಭೂವಿೂ ಜನಯನ್ ದೇವ ಏಕಃ'' ಎಂದೋದಿ ಮರದು, ವಿಷ್ಣು ವನೆ ಭಜಿಸುವಿರಿ. ನೀವೇ ವೇದವಿರುದ್ಧಿಗಳು. ``ವಿಶ್ವತೋ ಮುಖ ವಿಶ್ವತೋ ಚಕ್ಷು ವಿಶ್ವತೋ ಬಾಹು'' ಎಂದೋದಿ ಮತ್ತೆ , ``ಏಕೋ ರುದ್ರೋ ನ ದ್ವಿತೀಯಾಯ ತಸ್ಥೇ'' ಎಂದು ಮರದು, ಬೇರೊಬ್ಬ ದೈವ ಉಂಟೆಂದು ಗಳಹುತ್ತಿದಿರಿ. ನೀವೇ ವೇದದ್ರೋಹಿಗಳು. ``ಏಕಮೇವಾದ್ವಿತಿಯಂ ಬ್ರಹ್ಮ''ವೆಂದೋದಿ, ಕರ್ಮದಲ್ಲಿ ಸಿಕ್ಕಿದೀರಿ. ನೀವೇ ದುಃಕರ್ಮಿಗಳು. ``ಅಯಂ ಮೇ ಹಸ್ತೋ ಭಗವಾನ್, ಅಯಂ ಮೇ ಭಗವತ್ತರಃ |'' ಎಂದೋದಿ, ಅನ್ಯಪೂಜೆಯ ಮಾಡುತಿದೀರಿ. ನೀವೇ ಪತಿತರು. ``ಶಿವೋ ಮೇ ಪಿತಾ'' ಎಂದೋದಿ, ಸನ್ಯಾಸಿಗಳಿಗೆ ಮಕ್ಕಳೆಂದಿರಿ. ನೀವೇ ಶಾಸ್ತ್ರವಿರುದ್ಧಿಗಳು. ಸದ್ಯೋಜಾತದ್ಭವೇದ್ಭೂಮಿರ್ವಾಮದೇವಾದ್ಭವೇಜ್ಜಲಂ | ಅಘೋರಾದ್ವನ್ಹಿರಿತ್ಯುಕ್ತಸ್ತತ್ಪುರುಷಾದ್ವಾಯುರುಚ್ಯತೇ || ಈಶಾನ್ಯಾದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಎಂದೋದಿ, ಸರ್ವವಿಷ್ಣುಮಯ ಎನ್ನುತ್ತಿಪ್ಪಿರಿ. ನಿಮ್ಮಿಂದ ಬಿಟ್ಟು ಶಿವದ್ರೋಹಿಗಳಾರೊ ? ``ಭಸ್ಮ ಜಲಮಿತಿ ಭಸ್ಮ ಸ್ಥಲಮಿತಿ ಭಸ್ಮ |'' ಎಂದೋದಿ, ಮರದು ವಿಭೂತಿಯ ನೀಡಲೊಲ್ಲದೆ ಮಟ್ಟಿಯಂ ನೀಡುವಿರಿ. ನಿಮ್ಮಿಂದ ಪತಿತರಿನ್ನಾರೊ ? ``ರುದ್ರಾಕ್ಷಧಾರಣಾತ್ ರುದ್ರಃ'' ಎಂಬುದನೋದಿ ರುದ್ರಾಕ್ಷಿಯಂ ಧರಿಸಲೊಲ್ಲದೆ, ಪದ್ಮಾಕ್ಷಿ ತೊಳಸಿಯ ಮಣಿಯಂ ಕಟ್ಟಿಕೊಂಬಿರಿ. ನಿಮ್ಮಿಂದ ಪಾಪಿಗಳಿನ್ನಾರೊ ? ``ಪಂಚಾಕ್ಷರಸಮಂ ಮಂತ್ರಂ ನಾಸ್ತೀ ತತ್ವಂ ಮಹಾಮುನೇ '' ಎಂಬುದನೋದಿ, ಪಂಚಾಕ್ಷರಿಯ ಜಪಿಸಲೊಲ್ಲದೆ, ಗೋಪಳಾ ಮಂತ್ರವ ನೆನವಿರಿ ಎಂತೊ ? ನಿಮ್ಮ ನುಡಿ ನಿಮಗೆ ವಿರುದ್ಧವಾಗಿರಲು, ನಿಮ್ಮ ಓದು ವೇದ ನಿಮಗೆ ವಿರುದ್ಧವಾಗಿರಲು, ನಿಮ್ಮ ಉತ್ತಮ ಕುಲಜರೆಂದು ವಂದಿಸಿದವರಿಗೆ ಶೂಕರ ಜನ್ಮದಲ್ಲಿ ಬಪ್ಪುದು ತಪ್ಪದು ನೋಡಿರೆ ! ವಿಪ್ರಾಣಾಂ ದರಿಶನೇ ಕಾಲೇ ಪಾಪಂ ಭುಂಜಂತಿ ಪೂಜಕಾಃ | ವಿಪ್ರಾಣಾಂ ವದನೇನೈವ ಕೋಟಿಜನ್ಮನಿ ಶೂಕರಃ || ಇಂತೆಂದುದಾಗಿ, ನಿಮ್ಮೊಡನೆ ಮಾತನಾಡಿದಡೆ ಪಂಚಮಹಾಪಾತಕಃ ನಿಮ್ಮ ಮುಖವ ನೋಡಿದಡೆ ಅಘೋರನರಕ. ಅದೆಂತೆಂದಡೆ : ಒಬ್ಬ ಹಾರುವನ ದಾರಿಯಲ್ಲಿ ಕಂಡದಿರೆ ಇರಿದು ಕೆಡಹಿದಲ್ಲದೆ ಹೋಗಬಾರದೆಂದು ನಿಮ್ಮ ವಾಕ್ಯವೆಂಬ ನೇಣಿಂದ ಹೆಡಗುಡಿಯ ಕಟ್ಟಿಸಿಕೊಳುತಿಪ್ಪಿರಿ. ಮತ್ತು ನಿಮ್ಮ ದುಶ್ಯರೀರತ್ರಯವನೆಣಿಸುವಡೆ ``ಅಣೋರಣೀಯಾನ್ ಮಹತೋ ಮಹೀಯಾನ್'' ಎಂಬುದ ನೀವೇ ಓದಿ, ಪ್ರಾಣಿಯಂ ಕೊಂದು ಯಾಗವನ್ನಿಕ್ಕಿ, ದೇವರ್ಕಳುಗಳಿಗೆ ಹೋಮದ ಹೊಗೆಯಂ ತೋರಿ, ಕೊಬ್ಬು ಬೆಳೆದ ಸವಿಯುಳ್ಳ ಖಂಡವನೆ ತಿಂದು, ಸೋಮಪಾನವೆಂಬ ಸುರೆಯನೆ ಕುಡಿದು, ನೊಸಲಕಣ್ಣ ತೋರುವಂತಹ ಶಿವಭಕ್ತನಾದಡೂ ನಿಂದಿಸಿ ನುಡಿವುತಿಪ್ಪಿರಿ. ನಿಮ್ಮೊಡನೆ ನುಡಿವಡೆ ಗುರುಲಿಂಗವಿಲ್ಲದವರು ನುಡಿವರಲ್ಲದೆ, ಗುರುಲಿಂಗವುಳ್ಳವರು ನುಡಿವರೆ ? ಇದು ಶ್ರುತ ದೃಷ್ಟ ಅನುಮಾನದಿಂದ ವಿಚಾರಿಸಿ ನೋಡಲು, ನೀವೇ ಪಂಚಮಹಾಪಾತಕರು. ಶಿವಭಕ್ತಿಯರಿಯದ ನರರು ಪೀನಕುರಿಗಳು. ನಿಮ್ಮಿಂದ ಏಳುಬೆಲೆ ಹೊರಗಾದ ಹೊಲೆಯನೆ ಉತ್ತಮ ಕುಲಜನೆಂದು ಮುಂಡಿಗೆಯ ಹಾಕಿದೆನು, ಎತ್ತಿರೊ ಸತ್ಯವುಳ್ಳಡೆ ! ಅಲ್ಲದಡೆ ನಿಮ್ಮ ಬಾಯಬಾಲವ ಮುಚ್ಚಿಕೊಳ್ಳಿರೆ. ಎಮ್ಮ ಶಿವಭಕ್ತರೇ ಅದ್ಥಿಕರು, ಎಮ್ಮ ಶಿವಭಕ್ತರೇ ಕುಲಜರು, ಎಮ್ಮ ಶಿವಭಕ್ತರೇ ಸದಾಚಾರಿಗಳು, ಎಮ್ಮ ಶಿವಭಕ್ತರೇ ಪಾಪರಹಿತರು, ಎಮ್ಮ ಶಿವಭಕ್ತರೇ ಸರ್ವಜೀವ ದಯಾಪಾರಿಗಳು, ಎಮ್ಮ ಶಿವಭಕ್ತರೇ ಸದ್ಯೋನ್ಮುಕ್ತರಯ್ಯಾ, ಘನಗುರು ಶಿವಲಿಂಗ ರಾಮನಾಥ.
--------------
ವೀರಶಂಕರದಾಸಯ್ಯ
ಗುರುವಚನದಿಂದಲ್ಲದೆ ಲಿಂಗವನರಿಯಬಾರದು. ಗುರುವಚನದಿಂದಲ್ಲದೆ ಜಂಗಮವನರಿಯಬಾರದು. ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು. ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು. ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ ? ತನ್ನಲ್ಲಿ ತಾನು ಸನ್ನಹಿತನಾದೆಹೆನೆಂದಡೆ ಗುರುವಿಲ್ಲದೆ ಆಗದು ಕೇಳಾ. ಎನ್ನ ಅಜಗಣ್ಣನೆಂಬ ಗುರುವಿಲ್ಲದೆ ಆರೂಢಿಯ ಕೂಟ ಸಮನಿಸದು ಕೇಳಾ.
--------------
ಮುಕ್ತಾಯಕ್ಕ
ಹುಟ್ಟಲೇಕೊ ನರರ ಜನ್ಮದಲ್ಲಿ ? ಕಟ್ಟಲೇಕೋ ಕೊರಳಲ್ಲಿ ಲಿಂಗವ ? ಕಟ್ಟಿಯೂ ಕಾಣದೆ, ತೊಟ್ಟನೆ ತೊಳಲಿ, ಅರಸಲೇಕೊ ಧರೆಯ ಮೇಲೆ ? ಅರಸಿಯೂ ಕಾಣದೆ, ಸತ್ತು ಮೆಟ್ಟಿ ಮೆಟ್ಟಿ ಹೂಳಿಸಿಕೊಳಲೇಕೊ ? ಇದನರಿದರಿದು, ಹುಟ್ಟು ಹೊಂದಳಿದ ಶರಣರ ನಿತ್ಯನಿತ್ಯ ನೆನೆದು ಬದುಕಿದೆ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ .
--------------
ಹಡಪದ ಅಪ್ಪಣ್ಣ
ಆದಿ ಅನಾದಿಯಿಲ್ಲದತ್ತಣ ದೂರಕ್ಕೆ ದೂರದಲ್ಲಿ ಭಾವಕ್ಕೆ ನಿರ್ಭಾವಕ್ಕೆ ಬಾರದಿರ್ದ ನಿಷ್ಕಳಂಕ ಪರಬ್ರಹ್ಮವೇ ಮುನ್ನ ನೀನು ಶಾಖೆದೋರುವಲ್ಲಿ ನಿನ್ನೊಳಂಕುರಿಸಿ ನಾನು ತಾಮಸ ಮುಸುಂಕಿ ಜನನ ಮರಣಕ್ಕೊಳಗಾಗಿ ಚೌರಾಶಿ ಎಂಬತ್ತುನಾಲ್ಕು ಲಕ್ಷ ಪ್ರಾಣಿಗಳ ಗರ್ಭದಿಂದ ಬಂದು ಬಂದು ಒಮ್ಮೆ ಮಾನವನಪ್ಪಂದಿಗೆ ನಾನುಂಡು ಮೊಲೆಹಾಲು ಸಪ್ತಸಮುದ್ರಕ್ಕೆ ಸರಿಯಿಲ್ಲವಯ್ಯ. ಇಂತಪ್ಪ ಮಾನವ ಜನ್ಮದಲ್ಲಿ ಬಂದ ಬಂದುದು ಗಣಿತಕ್ಕೆ ಬಾರದಯ್ಯ. ಈ ಜನ್ಮದಲ್ಲಿ ಪಿಂಡೋತ್ಪತ್ತಿಯಲ್ಲಿಯೇ ಶರಣಸತಿ ಲಿಂಗಪತಿಯೆಂಬ ಜ್ಞಾನ ತಲೆದೋರಿ ಶರಣವೆಣ್ಣಾಗಿ ಹುಟ್ಟಿದೆನಯ್ಯ. ಎನಗೆ ನಿನ್ನ ಬಯಕೆಯೆಂಬ ಸಿಂಗಾರದ ಸಿರಿಮುಡಿಯಾಯಿತು. ಎನಗೆ ನಿನ್ನ ನೋಡುವೆನೆಂಬ ಮುಗುಳ್ಮೊಲೆ ಮೂಡಿದವು. ಎನಗೆ ನಿನ್ನೊಳು ನುಡಿಯಬೇಕೆಂಬ ಉರವಣೆಯ ಸಂಪದದ ಜವ್ವನ ಕುಡಿವರಿಯಿತ್ತು. ಎನಗೆ ನಿನ್ನನೊಲಿಸಬೇಕೆಂಬ ಸಂಭ್ರಮದ ಕಾಂಚೀಧಾಮ ಕಟಿಸೂತ್ರ ನೇವುರ ನಿಡುಗೊಂಡೆಯವೆಂಬಾಭರಣ ಅನುಲೇಪನ ವಸ್ತ್ರಂಗಳೆನಗೆ ಅಲಂಕಾರವಾಯಿತ್ತು. ಭಕ್ತಿಯೆಂಬ ವಿರಹಾಗ್ನಿ ಎನ್ನ ಹೃದಯಕಮಲದಲ್ಲಿ ಬೆಳೆದು ಬೀದಿವರಿದು ನಿಂತಲ್ಲಿ ನಿಲಲೀಸದಯ್ಯ. ಕುಳಿತಲ್ಲಿ ಕುಳ್ಳಿರಲೀಸದಯ್ಯ. ಮನ ನಿಂದಲ್ಲಿ ಮನೋಹರವಪ್ಪುದಯ್ಯ. ಅಂಗ ಮನ ಪ್ರಾಣ ನೇತ್ರ ಚಿತ್ತಂಗಳೊಳು ಪಂಚಮುಖವೆಂಬ ಪಂಚಬಾಣಂಗಳು ನೆಟ್ಟವಯ್ಯ. ನಾನು ಧರೆಯೊಳುಳಿವುದರಿದು. ಪ್ರೇಮದಿಂ ಬಂದು ಕಣ್ದುಂಬಿ ನೋಡಿ ಮನವೊಲಿದು ಮಾತಾಡಿ ಕರುಣದಿಂ ಕೈವಿಡಿದು ಅಕ್ಕರಿಂದಾಲಂಗಿಸಿ ದಿಟ್ಟಿಸಿ ಬೊಟ್ಟಾಡಿ ಲಲ್ಲೆವಾತಿಂ ಗಲ್ಲವ ಪಿಡಿದು ಪುಷ್ಪ ಪರಿಮಳದಂತೆ ನಾನು ನೀನುಭಯವಿಲ್ಲದಂತೆ ಕೂಡೆನ್ನ ಪ್ರಾಣೇಶನೇ. ಕೂಡಿದಿರ್ದೊಡೆ ಗಲ್ಲವ ಪಿಡಿ. ಪಿಡಿಯದಿರ್ದೊಡೆ ಬೊಟ್ಟಾಡು. ಬೊಟ್ಟಾಡದಿರ್ದೊಡೆ ಆಲಂಗಿಸು. ಆಲಂಗಿಸದಿರ್ದೊಡೆ ಕೈವಿಡಿ. ಕೈವಿಡಿಯದಿರ್ದೊಡೆ ಮಾತಾಡು. ಮಾತಾಡದಿರ್ದೊಡೆ ನೋಡು. ನೋಡದಿರ್ದೊಡೆ ಬಾ. ಬಾರದಿರ್ದೊಡೆ ಪ್ರಮಥಗಣಂಗಳೊಡನೆನ್ನವಳೆಂದು ನುಡಿ. ನುಡಿಯದಿರ್ದೊಡೆ ನಿನ್ನ ಮನದಲ್ಲಿ ನನ್ನವಳೆಂದು ಭಾವಿಸು. ಭಾವಿಸದಿರ್ದೊಡೆ ಪುಣ್ಯ ಕಣ್ದೆರೆಯದು. ಕರ್ಮ ಕಾಂತಿಯಪ್ಪುದು. ಕಾಮ ಕೈದುಗೊಂಬ, ಕಾಲ ಕಲಿಯಪ್ಪ. ಭವಕ್ಕೆ ಬಲ್ಮೆ ದೊರೆವುದು. ಇಂತೀ ಐವರು ಎನಗೆ ಅವಾಂತರದೊಳಗಾದ ಹಗೆಗಳಯ್ಯ, ಇವರೆನ್ನ ತಿಂದುತೇಗಿ ಹಿಂಡಿ ಹಿಪ್ಪೆಯಮಾಡಿ ನುಂಗಿ ಉಗುಳ್ದು ಹಿಂದಣ ಬಟ್ಟೆಗೆ ನೂಂಕುತಿಪ್ಪರಯ್ಯ. ಹೊಗಲಂಜುವೆನಯ್ಯ. ಹೋದರೆ ಚಂದ್ರಸೂರ್ಯಾದಿಗಳುಳ್ಳನಕ್ಕ ನಿನ್ನ ನೆನವ ಮನಕ್ಕೆ ನಿನ್ನ ಕೊಂಡಾಡುವ ಬಾಯ್ಗೆ ನಿನ್ನ ನೋಡುವ ಕಂಗಳಿಗೆ ಸೆರೆ ಸಂಕಲೆಯಪ್ಪುದಯ್ಯ. ಇಂತಿವಂ ತಿಳಿದು ನಿನ್ನ ಮನದೊಳು ನನ್ನವಳೆಂದರೆ ದಿವಾರಾತ್ರೆಯುಳ್ಳನ್ನಬರ ಎನ್ನ ಮನ ಜಿಹ್ವೆ ನೇತ್ರಂಗಳಿಗೆ ಬಂಧನಗಳೆಂಬಿವು ಮುಂಗೆಡುವುವಯ್ಯ. ನಿನ್ನನು ನೆನೆನೆನೆದು ನನ್ನ ಮನ ಬೀಗಿ ಬೆಳೆದು ತಳಿರಾಗಿ ಹೂ ಮಿಡಿಗೊಂಬುದಯ್ಯ. ನಿನ್ನ ಹಾಡಿ ಹಾಡಿ ನನ್ನ ಜಿಹ್ವೆ ಅಮೃತಸಾಗರದೊಳೋಲಾಡುತ್ತಿಪ್ಪುದಯ್ಯ. ನಿನ್ನಂ ನೋಡಿ ನೋಡಿ ಕಂಗಳು ನಿಜಮೋಕ್ಷಮಂ ಪಡೆವುವಯ್ಯ. ನಾನು ಈರೇಳು ಲೋಕಕ್ಕೆ ಬರುವ ಹಾದಿ ಹಾಳಾಗಿಪ್ಪುದಯ್ಯ. ಶತ್ರುಗಳೆನಗೆ ಮಿತ್ರರಪ್ಪರಯ್ಯ. ಭವದ ಬಳ್ಳಿ ಅಳಿವುದು. ಕಾಲಿನ ಕಲಿತನ ಕೆಡುವುದು. ಕಾಮನ ಕೈದು ಖಂಡಿಸುವುದು. ಕರ್ಮದ ಕಾಂತಿ ಕರಗುವುದು. ಪುಣ್ಯದ ಕಣ್ಣು ಬಣ್ಣಗೆಡುವುದಯ್ಯ. ನಿನಗೊಲಿದವರ ನಿನ್ನಂತೆ ಮಾಡು ಕೃಪಾಕರನೆ. ನಿನಗೆ ಮೆಚ್ಚಿದೆನಯ್ಯ. ನಿನ್ನ ಮೆಚ್ಚಿಸಿಕೊಳ್ಳಲರಿಯದ ಮುಗ್ಧವೆಣ್ಣಿನ ಪತಿಭಕ್ತಿಯಂ ಸಾಧಿಸು. ಎನ್ನವಸ್ಥೆಯಂ ಲಾಲಿಸು, ನಿನ್ನ ಶ್ರೀಪಾದಪದ್ಮದೊಳಗೆನ್ನನೊಡಗೂಡಿಸು. ಎನ್ನ ಬಿನ್ನಪಮಂ ಲಾಲಿಸು, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಹಿಂದಣ ಜನ್ಮದಲ್ಲಿ ಗುರುಲಿಂಗಜಂಗಮವ ಶಿವನೆಂದರಿದು ನಂಬಿ ಪೂಜಿಸಿದ ಕಾರಣ ಮುಂದೆ ಹುಟ್ಟುವನು ಸತ್ಕುಲಜ ಬಲವಂತನಾಗಿ, ಧನಧಾನ್ಯ ಸಕಲ ಭೋಗೈಶ್ವರ್ಯ ಉಳ್ಳವನಾಗಿ, ಸಕಲಲೋಕಕ್ಕೆ ಮನ್ನಣೆ ಉಳ್ಳವನಾಗಿ, ವಿದ್ಯೆಬುದ್ಧಿಯಲ್ಲಿ ವಿಶೇಷನಾಗಿ, ಸತ್ಯ ಸದಾಚಾರ ಭಕ್ತಿಜ್ಞಾನ ಉಳ್ಳವನಾಗಿ, ನಮ್ಮ ಅಖಂಡೇಶ್ವರನ ಪೂರ್ಣ ಒಲುಮೆ ಉಳ್ಳವನಾಗಿರ್ಪನು ನೋಡಿರೋ.
--------------
ಷಣ್ಮುಖಸ್ವಾಮಿ
ಮಧುರಗುಣವ ಇರುವೆ ಬಲ್ಲುದು. ವೇಳೆಯ ಗುಣವ ಕೋಳಿ ಬಲ್ಲುದು. ಗೋತ್ರದ ಗುಣವ ಕಾಗೆ ಬಲ್ಲುದು ಈ ಮನುಷ್ಯ ಜನ್ಮದಲ್ಲಿ ಹುಟ್ಟಿ, ಶಿವಜ್ಞಾನಿಗಳ ಬರವನರಯದಿದ್ದಡೆ ಆ ಕೋಳಿ ಕಾಗೆ ಇರುವೆಗಿಂದಲು ಕರಕಷ್ಟ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಕಟಾ, ರಾಟಾಳದ ಘಟದಂತೆ ಭವಾರಣ್ಯದೊಳು ತಿರುಗಿತಿರುಗಿ ಸತ್ತು ಸತ್ತು ಹುಟ್ಟುವಂತಿದ್ದೆನಯ್ಯಾ. ಅದು ಎಂತೆಂದರೆ : ಶ್ವೇದಜ ಉದ್ಬಿಜ ಜರಾಯುಜ ಅಂಡಜವೆಂಬ ನಾಲ್ಕು ತೆರದ ಮುಖ್ಯ ಆನೆ ಕಡೆ ಇರುವೆ ಮೊದಲು ಎಂಬತ್ತುನಾಲ್ಕು ಲಕ್ಷ ಜೀವರಾಶಿಯಲ್ಲಿ ಒಂದೊಂದು ಯೋನಿಯಲ್ಲಿ ಸಾವಿರಬಾರಿ ತಿರುಗಿ, ಆವಾವ ಜನ್ಮದಲ್ಲಿ ಆವಾವ ಆಹಾರವನುಂಡು, ಆವಾವ ಭೂಮಿಯಲ್ಲಿ ಪುಟ್ಟಿ, ಆವಾವ ಕರ್ಮವ ಕಂಡು, ಭಂಗ ಬಡುತ್ತಿದ್ದುದಯ್ಯಾ ಶರೀರ. ಸಾಕ್ಷಿ :``ನಾನಾಯೋನಿಸಹಸ್ರಾಣಿ ಕೃತಂ ಚೈವ ತು ಮಾಯಯಾ | ಅನೇಕಂ ವಿವಿಧಾಹಾರಂ ಪೀತಾಶ್ಚ ವಿವಿಧಾಃ ಸ್ತನಾಃ ||'' ಎಂದುದಾಗಿ, ಇಂತಪ್ಪ ಸಂಸಾರಭ್ರಾಂತಿನ ಬಲೆಯ ತೊಲಗಿಸಿ ನಿಃಸಂಸಾರಿಯಾಗಿಪ್ಪ ಶರಣರ ಪಾದಕ್ಕೆ ನಮೋ ನಮೋಯೆಂಬೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ಕಾಯದ ಕೀಲನರಿತು ಕವಿತ್ವವನು ಮಾಡುವಂಥ ಭೇದವನು ಬಲ್ಲರೆ ಹೇಳಿ, ಅರಿಯದಿರ್ದರೆ ಕೇಳಿ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತು ಕೊಟ್ಟು ಇಳಿಯ ತೆಗೆದು ಜನ್ಮದಲ್ಲಿ ನುಡಿಸಬಲ್ಲರೆ ಆತನೀಗ ಪಂಚತತ್ವದ ಮೂಲವ ತಿಳಿದು ಮನವೆಂಬ ಗದ್ದಿಗೆಯ ಅಜ್ಞಾನವೆಂಬ ನಾದಸ್ವರವನು ಹಿಡಿದುಕೊಂಡು ಅದರ ಅನುವರಿತು ಊದಿ, ಪಿಂದೆ ದಾಡೆಯಿಂದ ಪೃಥ್ವಿಯ ಎತ್ತಿದ ಸರ್ಪನ ಎಬ್ಬಿಸಿ ಬ್ರಹ್ಮಾಂಡಕ್ಕೆ ಮುಖ ಮಾಡಿ ನಿಲ್ಲಿಸಬಲ್ಲರೆ ಆತನಿಗಾಗಿ ಗೀತ ಗಾಯನ ವಾದ್ಯ ಪ್ರಾಸ ದೀರ್ಘ ಗುರು ಲಘುಗಳೆಂಬ ಭೇದವ ಬಲ್ಲೆನೆಂದೆನ್ನಬಹುದು. ನಿಮ್ಮ ಅಂಗ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಕಾಣಿರೋ ! ಗುಡಿಸ ಕೊಟ್ಟು, ಗುಡಿಸಿನ ಒಳಗೆ ಸುಳಿದು ಜಿಹ್ವೆಯಲ್ಲಿ ನುಡಿಸಬಲ್ಲರೆ ಅಂತಹವನಿಗೆ ತನ್ನ ತನುವೆಂಬ ಹುತ್ತದ ಒಂಬತ್ತು ಹೆಜ್ಜವನು ಮುಚ್ಚಿದ ದ್ವಾರಂಗಳನ್ನೆಲ್ಲ ಬಳಿದು ಅಂಬರಮಂಟಪದೊಳಗೆ ಸುಳಿದಾಡುವಂಥ ಶಂಭುಲಿಂಗವನು ನೋಡಿಕೊಂಡು ಸಂತೈಸಿ, ವರುಷ ವರುಷಕ್ಕೆ ಒಂದು ಸಂಭ್ರಮದ ಜಾತ್ರೆಯ ನೆರೆಯಬಲ್ಲರೆ ಆತನಿಗೆ ಮಹಾಪ್ರೌಢನೆಂದೆನ್ನಬಹುದು ಕಾಣಿರೋ. ನಿಮ್ಮ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಕೊಂಬಿನಿಂದಿಳಿಯ ತೆಗೆದು ಆತನಿಗೆ ಆರು ಮೂರುಗಳೆಂಬ ನವರಸವಿದ್ಯ ನಾದವನೆಬ್ಬಿಸುವಂಥ ತಾಳಗತಿಯ ಪದಕಾರಣವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಮೇಲೆತ್ವವಂ ಕೊಟ್ಟು, ಕೆಳಗೈತ್ವವಂ ಕೊಟ್ಟು, ಇವೆರಡನು ಕೂಡಿ ಒಂದಮಾಡಿ ನುಡಿಸಬಲ್ಲರೆ ಆತನಿಗೆ ಸ್ವರ್ಗ ಮತ್ರ್ಯ ಪಾತಾಳ ಇಂತೇಳು ಭುವನ, ಹದಿನಾಲ್ಕು ಲೋಕ, ಸಪ್ತೇಳುಸಾಗರ, ಅಷ್ಟಲಕ್ಷ ಗಿರಿಪರ್ವತಗಳನ್ನೆಲ್ಲ ತನ್ನ ಅಂತರಂಗವೆಂಬ ಕುಕ್ಷಿಯೊಳಗೆ ಇಂಬಿಟ್ಟುಕೊಂಡು ಪರರಿಗೆ ಕಾಣಬಾರದಂತಹ ಕುರೂಪಿಯಾಗಿ ಇರಬಲ್ಲರೆ ಆತನಿಗೆ ಮಹಾಶಿವಜ್ಞಾನಿಯೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಉತ್ವ ಔತ್ವ ಕೊಟ್ಟು, ಉತ್ವ ಔತ್ವವೆರಡನು ಕೂಡಿ ಒಂದುಮಾಡಿ ನಿಲಿಸಿ ಜಮ್ಮೆದಲ್ಲಿ ನುಡಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮುಡಿಯಂ ಮಂದಿರ ಮನೆಯೊಳಗೆ ಮುಹೂರ್ತವ ಮಾಡಿಕೊಂಡಿಹುದು. ಓಂಕಾರವೆಂಬುವದೊಂದು ಅಕ್ಷರವ ನೋಡಿ ಅನಂತ ಪರಿಪರಿಯ ವಚನಗಳ ಮಾಡಬಲ್ಲರೆ ಆತನಿಗೆ ಮಹಾ ಉತ್ತಮ ಶಿವಕವೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಒಂದು ಸೊನ್ನೆಯ ಕೊಟ್ಟರೆ `ವಂ' ಎಂದು ಅಂತರಂಗದಲ್ಲಿ ತಿಳಿದು, ಜಿಹ್ವೆಯಲ್ಲಿ ನುಡಿಯಬಲ್ಲರೆ ಆತನಿಗೆ ಕಾಯಪುರವೆಂಬ ಪಟ್ಟಣದೊಳಗೆ ಹರಿದಾಡುವಂಥ ಆರುಮಂದಿ ತಳವಾರರ ತಲೆಯ ಕುಟ್ಟಿ, ಮೂರುಮಂದಿ ಗರ ಬೆರೆದ ನೆಂಟರ ಮೂಗ ಕೊಯ್ದು, ಸಾವಿರೆಸಳಿನ ಕಮಲದೊಳಗೆ ಪೊಕ್ಕು, ತನ್ನ ಸಾವು ಮರಣ ತಪ್ಪಿಸಿಕೊಳ್ಳಬಲ್ಲರೆ ಆತನಿಗೆ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಎರಡು ಸೊನ್ನೆಯ ಕೊಟ್ಟರೆ `ವಃ' ಎಂದು ಅಂತರಂಗದಲ್ಲಿ ತಿಳಿದು ಜಿಹ್ವೆಯಲ್ಲಿ ನುಡಿಯಬಲ್ಲರೆ, ಆತನಿಗೆ ತನ್ನ ಅಂತರಂಗವೆಂಬ ಹರಿವಾಣದೊಳಗೆ ತುಂಬಿಟ್ಟಿದ್ದಂತಹ ಷಡುರಸ ಪಂಚಾಮೃತ ಪಂಚಕಜ್ಜಾಯಗಳೆಲ್ಲ ಸವಿದುಂಡು ಚಪ್ಪರಿಸಿ ಹಿಪ್ಪೆಯ ಮಾಡಿ ಬೀದಿಯೊಳಗೆ ಬಿಸುಟಬಲ್ಲರೆ ಆತನಿಗೆ ಕಾಯದ ಕೀಲನರಿತು ಕವಿತ್ವವನು ಮಾಡುವಂತಹ ಪ್ರೌಢನೆಂದೆನ್ನಬಹುದು ಕಾಣಿರೋ. ಇಂತೀ ಕಾಯದ ಕೀಲನರಿಯದ ಕವಿಗಳು ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹೆಂಚ ಹೊಡೆದು ನೆತ್ತಿಯ ಮೇಲೆ ಹೊತ್ತುಕೊಂಡು ತಿರುಗುವ ಕವಿಗಳೆಂಬ ಚಾತುರ್ಯದ ಮಾತ ನಿಟ್ಟಿಸಲು ಆಡ ಸವಿವ ಜಾತಿಗಳ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರು ಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಕಂದ : ಬಣ್ಣಿಪರಳವೆ ಶ್ರೀ ಪಂಚಾಕ್ಷರಿ ಉನ್ನತ ಮಹಿಮೆಯ ತ್ರಿಜಗದೊಳಗಂ ಎನ್ನಯ ಬಡಮತಿಯುಳ್ಳಷ್ಟಂ ಇನ್ನಂ ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. ರಗಳೆ :ಗುರು ಮಹಿಮೆಯನೋಪ ಪಂಚಾಕ್ಷರಿಯು ನಾಗಭೂಷಣನರ್ತಿನಾಮ ಪಂಚಾಕ್ಷರಿಯು | 1 | ನಡೆವುತಂ ನುಡಿವುತಂ ಶಿವನೆ ಪಂಚಾಕ್ಷರಿಯು ಕುಡುತಲಿ ಕೊಂಬುತಲಿ ಹರನೆ ಪಂಚಾಕ್ಷರಿಯು ಉಡುತಲಿ ಉಂಬುತಲಿ ಸದ್ಗುರುವೇ ಪಂಚಾಕ್ಷರಿಯು ಬಿಡದೆ ಜಪಿಸಲು ಸದ್ಯೋನ್ಮುಕ್ತಿ ಪಂಚಾಕ್ಷರಿಯು. | 2 | ಸಟೆ ಠಕ್ಕು ಠೌಳಿಯಲ್ಲಿ ಬಿಡದೆ ಪಂಚಾಕ್ಷರಿಯು ದಿಟಪುಟದಲ್ಲಿ ಆವಾ ಪಂಚಾಕ್ಷರಿಯು ಕುಟಿಲ ವಿಷಯಂಗಳೊಲಿದು ಪಂಚಾಕ್ಷರಿಯು ನಟಿಸಿ ಜಪಿಸಲು ಮುಕ್ತಿ ಈವ ಪಂಚಾಕ್ಷರಿಯು. | 3 | ಮಂತ್ರಯೇಳ್ಕೋಟಿಗೆ ತಾಯಿ ಪಂಚಾಕ್ಷರಿಯು ಅಂತ್ಯಜಾಗ್ರಜ ವಿಪ್ರರೆಲ್ಲ ಪಂಚಾಕ್ಷರಿಯು ಸಂತತಂ ಬಿಡದೆ ಜಪಿಸುವದು ಪಂಚಾಕ್ಷರಿಯು ಎಂತು ಬಣ್ಣಿಪರಳವಲ್ಲ ಪಂಚಾಕ್ಷರಿಯು. | 4 | ಆದಿ ಪಂಚಾಕ್ಷರಿಯು ಅನಾದಿ ಪಂಚಾಕ್ಷರಿಯು ಭೇದ್ಯ ಪಂಚಾಕ್ಷರಿಯು [ಅಭೇದ್ಯ ಪಂಚಾಕ್ಷರಿಯು] ಸಾಧಿಸುವಗೆ ಸತ್ಯ ನಿತ್ಯ ಪಂಚಾಕ್ಷರಿಯು ಬೋಧೆ ಶೃತಿತತಿಗಳಿಗೆ ಮಿಗಿಲು ಪಂಚಾಕ್ಷರಿಯು. | 5 | ಪಂಚಾನನದುತ್ಪತ್ಯದಭವ ಪಂಚಾಕ್ಷರಿಯು ಪಂಚಮಯ ಬ್ರಹ್ಮಮಯಂ ಜಗತ್ ಪಂಚಾಕ್ಷರಿಯು ಪಂಚವಿಂಶತಿತತ್ವಕಾದಿ ಪಂಚಾಕ್ಷರಿಯು ಪಂಚಶತಕೋಟಿ ಭುವನೇಶ ಪಂಚಾಕ್ಷರಿಯು. | 6 | ಹರಿಯಜರ ಗರ್ವವ ಮುರಿವ ಪಂಚಾಕ್ಷರಿಯು ಉರಿಲಿಂಗವಾಗಿ ರಾಜಿಸುವ ಪಂಚಾಕ್ಷರಿಯು ಸ್ಮರಣೆಗೆ ಸರಿಯಿಲ್ಲ ಪ್ರಣಮಪಂಚಾಕ್ಷರಿಯು ಸ್ಮರಿಸುವಾತನೆ ನಿತ್ಯಮುಕ್ತ ಪಂಚಾಕ್ಷರಿಯು. | 7 | ಪರಮ ಮುನಿಗಳ ಕರ್ಣಾಭರಣ ಪಂಚಾಕ್ಷರಿಯು ಹರನ ಸಾಲೋಕ್ಯದ ಪದವನೀವ ಪಂಚಾಕ್ಷರಿಯು ಉರಗತೊಡೆಶಿವನನೊಲಿಸುವರೆ ಪಂಚಾಕ್ಷರಿಯು ಕರ್ಮಗಿರಿಗೊಜ್ರ ಸುಧರ್ಮ ಪಂಚಾಕ್ಷರಿಯು. | 8 | ನಾನಾ ಜನ್ಮದಲ್ಲಿ ಹೊಲೆಯ ಕಳೆವ ಪಂಚಾಕ್ಷರಿಯು ಮನಸ್ಮರಣೆಗೆ ಸರಿಯಿಲ್ಲ ಪಂಚಾಕ್ಷರಿಯು ಜ್ಞಾನವೇದಿಕೆ ಮುಖ್ಯ ಪಂಚಾಕ್ಷರಿಯು ಧ್ಯಾನಿಸುವ ನೆರೆವ ತಾನೆ ಪಂಚಾಕ್ಷರಿಯು. | 9 | ಏನ ಬೇಡಿದಡೀವ ದಾನಿ ಪಂಚಾಕ್ಷರಿಯು ಸ್ವಾನುಜ್ಞಾನದಲ್ಲು[ದಿ]ಸಿದಂಥ ಪಂಚಾಕ್ಷರಿಯು ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು ಕ್ಷಿತಿಭುವನಗಳ ಬೇಡಲೀವ ಪಂಚಾಕ್ಷರಿಯು. | 10 | ಕಾನನ ಭವತರು ವಹ್ನಿ ಪಂಚಾಕ್ಷರಿಯು ಯತಿಗೆ ಯತಿತನವೀವ ಗತಿಯು ಪಂಚಾಕ್ಷರಿಯು ಉನ್ನತ ಸಿದ್ಧತ್ವವನೀವ ಸಿದ್ಧಿ ಪಂಚಾಕ್ಷರಿಯು ಭಾನು ಅಘತಿಮಿರಕ್ಕೆ ತಾನೆ ಪಂಚಾಕ್ಷರಿಯು ಗತಿ ಮೋಕ್ಷಗಳ ಬೇಡೆ ಕುಡುವ ಪಂಚಾಕ್ಷರಿಯು. | 11 | ಅವಲಂಬಿಗೆ ಅವಲಂಬ ಪಂಚಾಕ್ಷರಿಯು ನಿರಾವಲಂಬಿಗೆ ನಿರಾವಲಂಬ ಪಂಚಾಕ್ಷರಿಯು ಕಾವ ಸಂಹರ ಭಜಿಪರಿಗೆ ಪಂಚಾಕ್ಷರಿಯು ಮಾವದ್ಯುಮಣಿಧರನನೊಲಿಪ ಪಂಚಾಕ್ಷರಿಯು. | 12 | ಅರಿವರ್ಗಗಳ ಮುರಿವ ಶತೃ ಪಂಚಾಕ್ಷರಿಯು ಕರಿಗಳೆಂಟನು ಹೊಡೆವ ಸಿಂಹ ಪಂಚಾಕ್ಷರಿಯು ಹರಿವ ದಶವಾಯುಗಳನಳಿವ ಪಂಚಾಕ್ಷರಿಯು ನೆರೆ ಸಪ್ತವ್ಯಸನಗಳಿಗೊಹ್ನಿ ಪಂಚಾಕ್ಷರಿಯು. | 13 | ತ್ರಿಗುಣಗಳ ಕೆಡಿಪ ನಿರ್ಗುಣವು ಪಂಚಾಕ್ಷರಿಯು ಅಘವೈದೇಂದ್ರಿಯಕೆ ಲಿಂಗೇಂದ್ರಿಯ ಪಂಚಾಕ್ಷರಿಯು ಮಿಗೆ ಕರ್ಮೇಂದ್ರಿಗಳ ತೆರೆತೆಗೆವ ಪಂಚಾಕ್ಷರಿಯು ಝಗಝಗಿಸಿ ಸರ್ವಾಂಗಪೂರ್ಣ ಪಂಚಾಕ್ಷರಿಯು. | 14 | ಷಡೂರ್ಮಿಗಳ ಗಡವನಳಿವ ಪಂಚಾಕ್ಷರಿಯು ಷಡುಕರ್ಮಗಳ ಮೆಟ್ಟಿನಿಲುವ ಪಂಚಾಕ್ಷರಿಯು ಷಡುವೇಕದಂತಿಗೆ ನಾಥ ಪಂಚಾಕ್ಷರಿಯು ಬಿಡದೆ ಜಪಿಸಿದಡವ ಮುಕ್ತ ಪಂಚಾಕ್ಷರಿಯು. | 15 | ಸಂಸಾರಸಾಗರಕೆ ಹಡಗ ಪಂಚಾಕ್ಷರಿಯು ವಂಶಗಳನಳಿವ ನಿರ್ವಂಶ ಪಂಚಾಕ್ಷರಿಯು ಸಂಶಯವಿಲ್ಲದಲಿ ನಿಸ್ಸಂಶಯ ಪಂಚಾಕ್ಷರಿಯು ವಿಂಶಾರ್ಥ ಬಿಡದೆ ಜಪಿಸುವದು ಪಂಚಾಕ್ಷರಿಯು. | 16 | ಗುರುಕೃಪಕಧಿಕದಿ ಭವದಗ್ಧ ಪಂಚಾಕ್ಷರಿಯು ಕರದ ಲಿಂಗಬೆಳಗು ಪ್ರಣಮಪಂಚಾಕ್ಷರಿಯು ನೆರೆಶ್ರೋತ್ರಬೋಧೆ ನಿರ್ಬೋಧೆ ಪಂಚಾಕ್ಷರಿಯು ನಿರುತ ಜಪಿಸುವನೆ ನಿರಾಪೇಕ್ಷ ಪಂಚಾಕ್ಷರಿಯು. | 17 | ದೀಕ್ಷಾ ಪಂಚಾಕ್ಷರಿಯು ದೀಕ್ಷ ಪಂಚಾಕ್ಷರಿಯು ಮೋಕ್ಷಾ ಪಂಚಾಕ್ಷರಿಯು ಮೋಕ್ಷ ಪಂಚಾಕ್ಷರಿಯು ಶಿಕ್ಷಾ ಪಂಚಾಕ್ಷರಿಯು ಶಿಕ್ಷ ಪಂಚಾಕ್ಷರಿಯು ಭಿಕ್ಷಾ ಪಂಚಾಕ್ಷರಿಯು ಭಿಕ್ಷ ಪಂಚಾಕ್ಷರಿಯು | 18 | ಚಿದ್ಭಸ್ಮದೊಳುವಾಭರಣ ಪಂಚಾಕ್ಷರಿಯು ಚಿದ್ಮಣಿಗಳ ಸ್ಥಾನ ಸ್ಥಾನ ಪಂಚಾಕ್ಷರಿಯು ಚಿದಂಗ ಸರ್ವದೊಳು ಪೂರ್ಣ ಪಂಚಾಕ್ಷರಿಯು ಚಿದಂಗ ಲಿಂಗಸಂಗಸಂಯೋಗ ಪಂಚಾಕ್ಷರಿಯು. | 19 | ಪಾದಸಲಿಲಂ ಪ್ರಸಾದಾದಿ ಪಂಚಾಕ್ಷರಿಯು ಆದಿಕ್ಷೇತ್ರಕ್ಕೆ ವೀರಶೈವ ಪಂಚಾಕ್ಷರಿಯು ಸಾಧಿಸುವ ಸದ್ಭಕ್ತಿಯನೀವ ಪಂಚಾಕ್ಷರಿಯು ಓದುವಾತನ ವೇದವಿತ್ತು ಪಂಚಾಕ್ಷರಿಯು. | 20 | ಅಷ್ಟಾವರಣಕೆ ಮಹಾಶ್ರೇಷ* ಪಂಚಾಕ್ಷರಿಯು ದುಷ್ಟನಿಗ್ರಹ ಶಿಷ್ಟಪಾಲ ಪಂಚಾಕ್ಷರಿಯು ಮುಟ್ಟಿ ನೆನದರೆ ಮುಕ್ತಿಸಾರ ಪಂಚಾಕ್ಷರಿಯು ಇಷ್ಟಪ್ರಾಣಭಾವದೀಶ ಪಂಚಾಕ್ಷರಿಯು. | 21 | ಭಕ್ತಿಯುಕ್ತಿಯು ಮಹಾಬೆಳಗು ಪಂಚಾಕ್ಷರಿಯು ನಿತ್ಯನೆನೆವರಿಗೆ ತವರ್ಮನೆಯು ಪಂಚಾಕ್ಷರಿಯು ಸತ್ಯಸದ್ಗುಣಮಣಿಹಾರ ಪಂಚಾಕ್ಷರಿಯು ವಿತ್ತ ಸ್ತ್ರೀ ನಿರಾಸೆ ಮಹೇಶ ಪಂಚಾಕ್ಷರಿಯು. | 22 | ಪರಧನ ಪರಸ್ತ್ರೀಗೆಳಸ ಪಂಚಾಕ್ಷರಿಯು ನಿರುತ ಮಹೇಶ್ವರಾಚಾರ ಪಂಚಾಕ್ಷರಿಯು ಪರಮ ಪ್ರಸಾದಿಸ್ಥಲ ತಾನೆ ಪಂಚಾಕ್ಷರಿಯು | 23 | ಈ ಪರಿಯ ತೋರೆ ಮಹಾಮೂರುತಿ ಪಂಚಾಕ್ಷರಿಯು ತಾ ಪರಬ್ರಹ್ಮ ನಿನಾದ ಪಂಚಾಕ್ಷರಿಯು | 24 | ತಟ್ಟಿ ಮುಟ್ಟುವ ರುಚಿ ಶಿವಾರ್ಪಣ ಪಂಚಾಕ್ಷರಿಯು ಕೊಟ್ಟುಕೊಂಬುವ ಪ್ರಸಾದಾಂಗ ಪಂಚಾಕ್ಷರಿಯು ನಷ್ಟ ಶರೀರಕೆ ನೈಷೆ*ವೀವ ಪಂಚಾಕ್ಷರಿಯು ಭ್ರಷ್ಟ ಅದ್ವೈತಿಗತೀತ ಪಂಚಾಕ್ಷರಿಯು. | 25 | ಸ್ಥೂಲತನುವಿಗೆ ಇಷ್ಟಲಿಂಗ ಪಂಚಾಕ್ಷರಿಯು ಮೇಲೆ ಸೂಕ್ಷ್ಮಕೆ ಪ್ರಾಣಲಿಂಗ ಪಂಚಾಕ್ಷರಿಯು ಲೀಲೆ ಕಾರಣ ಭಾವಲಿಂಗ ಪಂಚಾಕ್ಷರಿಯು ಬಾಳ್ವ ತ್ರಿತನುವಿಗೆ ತ್ರಿಲಿಂಗ ಪಂಚಾಕ್ಷರಿಯು. | 26 | ಪ್ರಾಣಲಿಂಗದ ಹೊಲಬು ತಾನೆ ಪಂಚಾಕ್ಷರಿಯು ಕಾಣಿಸುವ ಇಷ್ಟರೊಳು ಭಾವ ಪಂಚಾಕ್ಷರಿಯು ಮಾಣದೊಳಹೊರಗೆ ಬೆಳಗು ಪಂಚಾಕ್ಷರಿಯು ಕ್ಷೋಣಿಯೊಳು ಮಿಗಿಲೆನಿಪ ಬಿರಿದು ಪಂಚಾಕ್ಷರಿಯು. | 27 | ಆರು ಚಕ್ರಕೆ ಆಧಾರ ಪಂಚಾಕ್ಷರಿಯು ಆರು ಅಧಿದೈವಗಳ ಮೀರ್ದ ಪಂಚಾಕ್ಷರಿಯು ಆರು ವರ್ಣಗಳ ಬಗೆದೋರ್ವ ಪಂಚಾಕ್ಷರಿಯು ಆರು ಚಾಳ್ವೀಸೈದಕ್ಷರಂಗ ಪಂಚಾಕ್ಷರಿಯು. | 28 | ಆರು ಶಕ್ತಿಗಳ ಆರಂಗ ಪಂಚಾಕ್ಷರಿಯು ಆರು ಭಕ್ತಿಗಳ ಚಿದ್ರೂಪ ಪಂಚಾಕ್ಷರಿಯು ಆರು ಲಿಂಗದ ಮೂಲ ಬೇರು ಪಂಚಾಕ್ಷರಿಯು ಆರು ತತ್ವವಿಚಾರ ಪಂಚಾಕ್ಷರಿಯು. | 29 | ಯೋಗಷ್ಟ ಶಿವಮುಖವ ಮಾಡ್ವ ಪಂಚಾಕ್ಷರಿಯು ನಾಗಕುಂಡಲ ಊಧ್ರ್ವವಕ್ತ್ರ ಪಂಚಾಕ್ಷರಿಯು ಜಾಗ್ರ ಸ್ವಪ್ನ ಸುಷುಪ್ತಿಯಲ್ಲಿ ಪಂಚಾಕ್ಷರಿಯು ಸಾಗಿಸಿ ಸುಜ್ಞಾನವೀವ ಪಂಚಾಕ್ಷರಿಯು. | 30 | ಇಷ್ಟ ಪ್ರಾಣಲಿಂಗ ಹೊಲಿಗೆ ಪಂಚಾಕ್ಷರಿಯು ಅಷ್ಟದಳಕಮಲದ ಪೀಠ ಪಂಚಾಕ್ಷರಿಯು ದೃಷ್ಟಿ ಅನುಮಿಷಭಾವ ಪಂಚಾಕ್ಷರಿಯು ಕೊಟ್ಟು ಸಲಹುವದಷ್ಟ ಪಂಚಾಕ್ಷರಿಯು. | 31 | ತನು ಸೆಜ್ಜೆ ಪ್ರಾಣವೆ ಲಿಂಗ ಪಂಚಾಕ್ಷರಿಯು ಮನ ಪೂಜಾರಿಯು ಭಾವ ಪುಷ್ಪ ಪಂಚಾಕ್ಷರಿಯು ಇನಿತು ಕೂಡುವುದು ಶಿವಶರಣ ಪಂಚಾಕ್ಷರಿಯು ಬಿನುಗಿಗಳವಡದ ಈ ಸತ್ಯ ಪಂಚಾಕ್ಷರಿಯು. | 32 | ಶರಣಸ್ಥಲದಂಗ ವೈರಾಗ್ಯ ಪಂಚಾಕ್ಷರಿಯು ಶರಣಸತಿ ಲಿಂಗಪತಿ ತಾನೆ ಪಂಚಾಕ್ಷರಿಯು ಶರಣುವೊಕ್ಕರ ಕಾವ ಬಿರಿದು ಪಂಚಾಕ್ಷರಿಯು ಶರಣಗಣರಿಗೆ ಮಾತೆಪಿತನು ಪಂಚಾಕ್ಷರಿಯು. | 33 | ಶರಣಂಗೆ ಸುಜ್ಞಾನದಿರವು ಪಂಚಾಕ್ಷರಿಯು ಶರಣಂಗೆ ಮುಕ್ತಿಯಾಗರವು ಪಂಚಾಕ್ಷರಿಯು ಶರಣಂಗೆ ಭಕ್ತಿಯ ಸೋಪಾನ ಪಂಚಾಕ್ಷರಿಯು ಶರಣಂಗೆ ಪರಮಜಲಕೂಪ ಪಂಚಾಕ್ಷರಿಯು. | 34 | ಶರಣಂಗೆ ಶೈವದ ಗೃಹವು ಪಂಚಾಕ್ಷರಿಯು ಶರಣರಿಗೆ ಸುರಧೇನು ಅಮೃತ ಪಂಚಾಕ್ಷರಿಯು ಶರಣರಿಗೆ ಕಲ್ಪತರು ಫಲವು ಪಂಚಾಕ್ಷರಿಯು ಶರಣರಿಗೆ ಚಿಂತಾಮಣಿ ತಾನೆ ಪಂಚಾಕ್ಷರಿಯು. | 35 | ಶರಣಪದ ಬೇಡುವರಿಗೀವ ಪಂಚಾಕ್ಷರಿಯು ಶರಣ ನಡೆನುಡಿ ಪೂರ್ಣಮಯವು ಪಂಚಾಕ್ಷರಿಯು ಶರಣರಿಗೆ ಶಿವನಚ್ಚು ಮೆಚ್ಚು ಪಂಚಾಕ್ಷರಿಯು ಶರಣರ್ದೂಷಣರೆದೆಗಿಚ್ಚು ಪಂಚಾಕ್ಷರಿಯು. | 36 | ಶರಣು ಶಿವಾನಂದ ಜಲಗಡಲು ಪಂಚಾಕ್ಷರಿಯು ಶರಣರ ಶರೀರ ಮೇಲೆ ಹೊದಿಕೆಯು ಪಂಚಾಕ್ಷರಿಯು ಶರಣು ಕೃತ್ಯಕೆ ವೈದ್ಯ ಕಾಣಾ ಪಂಚಾಕ್ಷರಿಯು ಶರಣು ಸುಜ್ಞಾನದರ್ಪಣವು ಪಂಚಾಕ್ಷರಿಯು. | 37 | ಶರಣ ಚಿದ್ರೂಪದ ಬಯಕೆಯಳಿದ ಪಂಚಾಕ್ಷರಿಯು ಶರಣಷ್ಟೈಶ್ವರ್ಯದೊಳಗಿಡದ ಪಂಚಾಕ್ಷರಿಯು ಶರಣಪೂಜಿಸಿ ಫಲವ ಬೇಡು[ವ] ಪಂಚಾಕ್ಷರಿಯು ಶರಣೊಜ್ರಪಂಜರದ ಬಿರಿದು ಪಂಚಾಕ್ಷರಿಯು. | 38 | ಶರಣಾಸೆ ರೋಷವನಳಿವ ಪಂಚಾಕ್ಷರಿಯು ಶರಣಾಸೆಯ ಮೋಹಲತೆ ಚಿವುಟುವ ಪಂಚಾಕ್ಷರಿಯು ಶರಣಜ್ಞಾನದತರು ಕುಠಾರ ಪಂಚಾಕ್ಷರಿಯು ಶರಣರುದಯಾಸ್ತಮಾನ ತಾನೆ ಪಂಚಾಕ್ಷರಿಯು. | 39 | ಶರಣರ ನಡೆನುಡಿ ಒಂದು ಮಾಡಿ[ದ] ಪಂಚಾಕ್ಷರಿಯು ಶರಣ ಸಂಸಾರಕಿಕ್ಕಿಡದ ಪಂಚಾಕ್ಷರಿಯು ಶರಣಗುಣ ಚಿಹ್ನಕೊರೆ ಶಿಲೆಯು ಪಂಚಾಕ್ಷರಿಯು ಶರಣರೊಡಗೂಡಿದಾನಂದ ಪಂಚಾಕ್ಷರಿಯು. | 40 | ಶರಣರ ಕರ್ಣದಾಭರಣ ಪಂಚಾಕ್ಷರಿಯು ಶರಣ ನುಡಿವ ಮಹಾವಸ್ತು ಪಂಚಾಕ್ಷರಿಯು ಶರಣ ಕೇಳುವ ಕೀರ್ತಿವಾರ್ತೆ ಪಂಚಾಕ್ಷರಿಯು ಶರಣಾಸರ ಬೇಸರಗಳ ಕಳೆವ ಪಂಚಾಕ್ಷರಿಯು. | 41 | ಶರಣರ ಚರಿತ್ರೆಯ ಬರೆವ ಲಿಖಿತ ಪಂಚಾಕ್ಷರಿಯು ಶರಣೀಶ ಲಾಂಛನಕಿಡದ ಪಂಚಾಕ್ಷರಿಯು ಶರಣ ತನು ಬಾಳಳಿದ ಬೋಧೆ ಪಂಚಾಕ್ಷರಿಯು ಶರಣನ ಮನ ಬೋಳಮಾಡಿರುವ ಪಂಚಾಕ್ಷರಿಯು. | 42 | ಶರಣಂಗೆ ಪರತತ್ವಬೋಧವೆ ಪಂಚಾಕ್ಷರಿಯು ಶರಣ ಪರವು ಶಾಂತಿ ಭಸ್ಮಧೂಳ ಪಂಚಾಕ್ಷರಿಯು ಶರಣ ಪರಬ್ರಹ್ಮಮಣಿ ಪಂಚಾಕ್ಷರಿಯು ಶರಣ ಪರಾತ್ಪರವು ಪಂಚಾಕ್ಷರಿಯು, | 43 | ಶರಣಂಗೆ ದೃಢವೆಂಬ ದಂಡ ಪಂಚಾಕ್ಷರಿಯು ಶರಣ ಕರ್ಮವ ಸುಟ್ಟಗ್ನಿ ಪಂಚಾಕ್ಷರಿಯು ಶರಣ ತೃಪ್ತಿಗೆ ನಿತ್ಯಾಮೃತ ಪಂಚಾಕ್ಷರಿಯು ಶರಣ ಹಿಡಿದ ವ್ರತವೈಕ್ಯ ಪಂಚಾಕ್ಷರಿಯು. | 44 | ಶರಣ ಪೂಜಿಪ ಪೂಜೆ ಐಕ್ಯ ಪಂಚಾಕ್ಷರಿಯು ಶರಣಂಗೆ ಐಕ್ಯಪದವೀವ ಪಂಚಾಕ್ಷರಿಯು ಶರಣ ಮಾಡುವ ಕ್ರಿಯಾದ್ವೈತ ಪಂಚಾಕ್ಷರಿಯು ಶರಣಂಗೆ ಇವು ನಾಸ್ತಿ ಪಂಚಾಕ್ಷರಿಯು. | 45 | ನೇಮ ನಿತ್ಯಂಗಳು ಲಿಂಗೈಕ್ಯ ಪಂಚಾಕ್ಷರಿಯು ಕಾಮ ಧರ್ಮ ಮೋಕ್ಷತ್ರಯಕ್ಕೆ ಪಂಚಾಕ್ಷರಿಯು ಕಾಮಿಸುವ ಬಾಹ್ಯಕ್ಕಿಲ್ಲದೈಕ್ಯ ಪಂಚಾಕ್ಷರಿಯು ನಾಮರೂಪಿಲ್ಲದ ನಿರ್ನಾಮ ಪಂಚಾಕ್ಷರಿಯು. | 46 | ಮಾನಸ್ವಾಚಕ ತ್ರಿಕರಣೈಕ್ಯ ಪಂಚಾಕ್ಷರಿಯು ಜ್ಞಾನ ಜ್ಞಾತೃಜ್ಞೇಯದೈಕ್ಯ ಪಂಚಾಕ್ಷರಿಯು ಸ್ವಾನುಭಾವವು ಲಿಂಗದೊಳೈಕ್ಯ ಪಂಚಾಕ್ಷರಿಯು ಮೋನಮುಗ್ಧಂ ತಾನಾದೈಕ್ಯ ಪಂಚಾಕ್ಷರಿಯು. | 47 | ನಡೆವ ಕಾಲ್ಗೆಟ್ಟ ಲಿಂಗೈಕ್ಯ ಪಂಚಾಕ್ಷರಿಯು ಷಡುರೂಪುಗೆಟ್ಟ ನೇತ್ರೈಕ್ಯ ಪಂಚಾಕ್ಷರಿಯು ಜಡ ಘ್ರಾಣೇಂದ್ರಿಲ್ಲದ ಲಿಂಗೈಕ್ಯ ಪಂಚಾಕ್ಷರಿಯು ಷಡುಯಿಂದ್ರಿಯಕೆ ಷಡುಲಿಂಗೈಕ್ಯ ಪಂಚಾಕ್ಷರಿಯು ಷಡುಸ್ಥಲವ ಮೀರಿರ್ದ ಲಿಂಗೈಕ್ಯ ಪಂಚಾಕ್ಷರಿಯು. | 48 | ಭಕ್ತಿ ಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು ವ್ಯಕ್ತ ಮಹೇಶ್ವರ ಭಜನೈಕ್ಯ ಪಂಚಾಕ್ಷರಿಯು ಮುಕ್ತಪ್ರಸಾದಿ ಸ್ಥಲದೈಕ್ಯ ಪಂಚಾಕ್ಷರಿಯು ಸತ್ಯ ಪ್ರಾಣಲಿಂಗವೆನ್ನದೈಕ್ಯ ಪಂಚಾಕ್ಷರಿಯು. | 49 | ಶರಣಸ್ಥಲದಾಸೆಳಿದೈಕ್ಯ ಪಂಚಾಕ್ಷರಿಯು ನಿರವಯಲ ಬೆರದ ಮಹಾಐಕ್ಯ ಪಂಚಾಕ್ಷರಿಯು ಉರಿವುಂಡ ಕರ್ಪುರದ ತೆರನು ಪಂಚಾಕ್ಷರಿಯು ಸರ[ವು] ಸರವು ಬೆರದಂತೆ ಮಾಡ್ವ ಪಂಚಾಕ್ಷರಿಯು. | 50 | ಪರಿಮಳ ವಾಯು ಸಂಗದಂತೆ ಪಂಚಾಕ್ಷರಿಯು ನಿರವಯಲಪ್ಪಿದಂತೆ ಪಂಚಾಕ್ಷರಿಯು ನೆರೆ ಮಾಡಿತೋರುವ ನಿತ್ಯ ಪಂಚಾಕ್ಷರಿಯು ಪರಮ ಬೋಧೆಯನೇನ ಹೇಳ್ವೆ ಪಂಚಾಕ್ಷರಿಯು. | 51 | ನಕಾರ ಮಕಾರ ಭಕ್ತ ಮಹೇಶ ಪಂಚಾಕ್ಷರಿಯು ಶಿಕಾರವೆ ಪ್ರಸಾದಿಸ್ಥಲದಂಗ ಪಂಚಾಕ್ಷರಿಯು ವಕಾರವೆ ಪ್ರಾಣಲಿಂಗಿ ತಾನೆ ಪಂಚಾಕ್ಷರಿಯು ಯಕಾರಂ ಓಂಕಾರಂ ಶರಣೈಕ್ಯ ಪಂಚಾಕ್ಷರಿಯು. | 52 | ಷಡಕ್ಷರ ಷಡುಸ್ಥಲದ ಬೀಜ ಪಂಚಾಕ್ಷರಿಯು ಷಡುಭಕ್ತಿಗಳ ಮುಖವು ಪಂಚಾಕ್ಷರಿಯು ಬಿಡದೆ ಸರ್ವತೋಮುಖವಾದ ಪಂಚಾಕ್ಷರಿಯು ಷಡುದರುಶನಕೆ ಮುಖ್ಯವಾದ ಪಂಚಾಕ್ಷರಿಯು. | 53 | ಪರಮ ಪಂಚಾಕ್ಷರಿಯು ಪ್ರಣಮ ಪಂಚಾಕ್ಷರಿಯು ಅರಿವು ಪಂಚಾಕ್ಷರಿಯು ಚರವು ಪಂಚಾಕ್ಷರಿಯು ಸಿರಿಯು ಪಂಚಾಕ್ಷರಿಯು ಕರುಣ ಪಂಚಾಕ್ಷರಿಯು ಹರುಷ ಪಂಚಾಕ್ಷರಿಯು ನಿಧಿಯು ಪಂಚಾಕ್ಷರಿಯು. | 54 | ನಿತ್ಯ ಪಂಚಾಕ್ಷರಿಯು ಮುಕ್ತ ಪಂಚಾಕ್ಷರಿಯು ಸತ್ಯ ಪಂಚಾಕ್ಷರಿಯು ವ್ಯಕ್ತ ಪಂಚಾಕ್ಷರಿಯು ಭಕ್ತ ಪಂಚಾಕ್ಷರಿಯು ಯುಕ್ತ ಪಂಚಾಕ್ಷರಿಯು ಮೌಕ್ತಿಕ ಮಾಣಿಕಹಾರ ಪಂಚಾಕ್ಷರಿಯು. | 55 | ಹರನೆ ಪಂಚಾಕ್ಷರಿಯು ಗುರುವೆ ಪಂಚಾಕ್ಷರಿಯು ಇರವೆ ಪಂಚಾಕ್ಷರಿಯು ಪರವೆ ಪಂಚಾಕ್ಷರಿಯು ಸರ್ವ ಪಂಚಾಕ್ಷರಿಯು ಹೊರೆವ ಪಂಚಾಕ್ಷರಿಯು ಸ್ಥಿರವೇ ಪಂಚಾಕ್ಷರಿಯು ಅರಿವು ಪಂಚಾಕ್ಷರಿಯು. | 56 | ಸ್ಥೂಲ ಪಂಚಾಕ್ಷರಿಯು ಸೂಕ್ಷ್ಮ ಪಂಚಾಕ್ಷರಿಯು ಲೀಲೆ ಪಂಚಾಕ್ಷರಿಯು ಕಾರಣ ಪಂಚಾಕ್ಷರಿಯು ಶೂಲಿ ಪಂಚಾಕ್ಷರಿಯು ಪೀಠ ಪಂಚಾಕ್ಷರಿಯು ಲೋಲ ಪಂಚಾಕ್ಷರಿಯು ಚರ್ಯ ಪಂಚಾಕ್ಷರಿಯು. | 57 | ಯಂತ್ರ ಪಂಚಾಕ್ಷರಿಯು ಮಂತ್ರ ಪಂಚಾಕ್ಷರಿಯು ಸಂತು ಪಂಚಾಕ್ಷರಿಯು ನಿಸ್ಸಂತು ಪಂಚಾಕ್ಷರಿಯು ಚಿಂತ ಪಂಚಾಕ್ಷರಿಯು ನಿಶ್ಚಿಂತ ಪಂಚಾಕ್ಷರಿಯು ಇಂತು ಪಂಚಾಕ್ಷರಿಯು ಜಪಿಸಿ ಪಂಚಾಕ್ಷರಿಯು. | 58 | ಕಂದ :ನಮಃ ಶಿವಾಯಯೆಂಬೀ ಅಮಲ ತೆರದ ನಾಮವ ನೋಡಿ ಜಪಿಸಲಿರುತಂ ಉಮೆಯರಸನನ್ನೊಲಿಸುವ ಕ್ರಮವಿದೆಂದು ಪೊಗಳ್ವೆ ಸಿದ್ಧಮಲ್ಲನ ಕೃಪೆಯಿಂ. | 1 | ಷಡುಸ್ಥಲ ಪಂಚಾಕ್ಷರಿಯನು ಬಿಡದೆ ಜಪಿಸಲು ಮುಕ್ತಿಯೆಂದು ಪೊಗಳ್ದ ಹೇಮಗಲ್ಲಂ ತನ್ನ ದೃಢಮೂರ್ತಿ ಶಂಭು ಗುರುರಾಯ ಪಡುವಿಡಿ ಸಿದ್ಧಮಲ್ಲಿನಾಥ ಕೃಪೆಯಿಂ. | 2 | ಷಡುಸ್ಥಲ ಪಂಚಾಕ್ಷರಿಯ ರಗಳೆ ಸಂಪೂರ್ಣಂ
--------------
ಹೇಮಗಲ್ಲ ಹಂಪ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ. 4
--------------
ಬಸವಣ್ಣ
ಇನ್ನಷ್ಟು ... -->