ಅಥವಾ

ಒಟ್ಟು 62 ಕಡೆಗಳಲ್ಲಿ , 24 ವಚನಕಾರರು , 62 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಾತಿವಿಡಿದು ಜಂಗಮವ ಮಾಡಬೇಕೆಂಬ ಪಾತಕರು ನೀವು ಕೇಳಿರೊ: ಜಾತಿ ಘನವೊ ಗುರುದೀಕ್ಷೆ ಘನವೊ ? ಜಾತಿ ಘನವಾದ ಬಳಿಕ, ಆ ಜಾತಿಯೆ ಗುರುವಾಗಿರಬೇಕಲ್ಲದೆ ಗುರುದೀಕ್ಷೆ ಪಡೆದು, ಗುರುಕರಜಾತರಾಗಿ ಜಾತಕವ ಕಳೆದು ಪುನರ್ಜಾತರಾದೆವೆಂಬುದ ಏತಕ್ಕೆ ಬೊಗಳುವಿರೊ ? ಜಾತಿವಿಡಿದು ಕಳೆಯಿತ್ತೆ ಜಾತಿತಮವು ? ಅಜಾತಂಗೆ ಆವುದು ಕುಲಳ ಆವ ಕುಲವಾದಡೇನು ದೇವನೊಲಿದಾತನೆ ಕುಲಜ. ಅದೆಂತೆಂದಡೆ; ದೀಯತೇ ಜಾÕನಸಂಬಂಧಃ ಕ್ಷೀಯತೇ ಚ ಮಲತ್ರಯಂ ದೀಯತೇ ಕ್ಷೀಯತೇ ಯೇನ ಸಾ ದೀಕ್ಷೇತಿ ನಿಗದ್ಯತೇ ಎಂಬುದನರಿದು, ಜಾತಿ ನಾಲ್ಕುವಿಡಿದು ಬಂದ ಜಂಗಮವೇ ಶ್ರೇಷ್ಠವೆಂದು ಅವನೊಡಗೂಡಿಕೊಂಡು ನಡೆದು ಜಾತಿ ಎಂಜಲುಗಳ್ಳರಾಗಿ ಉಳಿದ ಜಂಗಮವ ಕುಲವನೆತ್ತಿ ನುಡಿದು, ಅವನ ಅತಿಗಳೆದು ಕುಲವೆಂಬ ಸರ್ಪಕಚ್ಚಿ, ಎಂಜಲೆಂಬ ಅಮೇಧ್ಯವ ಭುಂಜಿಸಿ ಹಂದಿ-ನಾಯಂತೆ ಒಡಲ ಹೊರೆವ ದರುಶನಜಂಗುಳಿಗಳು ಜಂಗಮಪಥಕ್ಕೆ ಸಲ್ಲರಾಗಿ. ಅವರಿಗೆ ಗುರುವಿಲ್ಲ ಗುರುಪ್ರಸಾದವಿಲ್ಲ, ಲಿಂಗವಿಲ್ಲ ಲಿಂಗಪ್ರಸಾದವಿಲ್ಲ, ಜಂಗಮವಿಲ್ಲ ಜಂಗಮಪ್ರಸಾದವಿಲ್ಲ. ಇಂತೀ ತ್ರಿವಿಧಪ್ರಸಾದಕ್ಕೆ ಹೊರಗಾದ ನರಜೀವಿಗ? ಸ್ವಯ-ಚರ-ಪರವೆಂದಾರಾಧಿಸಿ ಪ್ರಸಾದವ ಕೊಳಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಮಲದೇಹಿಗಳ ಅಂಗದ ಮೇಲೆ ಲಿಂಗವಿದ್ದರೇನು ಅದು ಲಿಂಗವಲ್ಲ. ಅದೇನು ಕಾರಣವೆಂದರೆ, ಅವನು ಪ್ರಸಾದದೇಹಿ ಸಂಸ್ಕಾರಿದೇಹಿಯಲ್ಲ. ಅವನ ಸೋಂಕಿದ ಲಿಂಗವು ಕೆರೆಯ ಕಟ್ಟೆಯ ಶಿಲೆಯಂತಾಯಿತು. ಅವನು ಲಿಂಗಾಂಗಿ ಲಿಂಗಪ್ರಾಣಿಯಾಗದೆ ಅವನು ಮುಟ್ಟಿದ ಭಾಂಡ ಭಾಜನಂಗಳೆಲ್ಲ ಹೊರಮನೆ ಊರ ಅಗ್ಗವಣಿ ಎಂದೆನಿಸುವವು. ಅವನು ಮಲದೇಹಿ. ಅವನಂಗದಲ್ಲಿ ಗುರುವಿಲ್ಲ ಜಂಗಮವಿಲ್ಲ, ಪಾದೋದಕವಿಲ್ಲ ಪ್ರಸಾದವಿಲ್ಲ. ಅವನು ಅಶುದ್ಧ ಮಲದೇಹಿ. ಅವನ ಪೂಜಿಸಿದವಂಗೆ ರೌರವ ನರಕ ತಪ್ಪದೆಂದಾತ ನಿಮ್ಮ ಶರಣ ಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
--------------
ಚೆನ್ನಯ್ಯ
ವಂತಿಗೆಲಿಂಗವ ಕಟ್ಟಿಕೊಂಡು ಸಂತೆಯ ಸೂಳೆಯಂತೆ ಇರುವರು ನೋಡಾ. ಅಂತಪ್ಪ ಪಾತಕರಿಗೆ ಗುರುವಿಲ್ಲ, ಜಂಗಮವಿಲ್ಲ. ಪಾದೋದಕ ಪ್ರಸಾದವಿಲ್ಲ. ಇಂತಪ್ಪ ಕರ್ಮಿಗಳ ಕಂಡು ಎನ್ನ ಮನ ನಾಚಿತ್ತು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪುಣ್ಯಾಂಗನೆಯ ಸುತಂಗೆ ಪಿತನುಂಟು, ಪಿತಾಮಹನುಂಟು, ಪ್ರಪಿತಾಮಹನುಂಟು. ಪಣ್ಯಾಂಗನೆಯ ಸುತಂಗೆ ಪಿತನಿಲ್ಲ, ಮೇಲೇನೂ ಇಲ್ಲ, ಅವನ ಬದುಕು ನಗೆಗೆಡೆ. ಭಕ್ತಾಂಗನೆಯ ಸುತನಹ ಸದ್ಭಕ್ತಂಗೆ ಪಿತನು ಗುರು, ಪಿತಾಮಹನು ಜಂಗಮ, ಪ್ರಪಿತಾಮಹನು ಮಹಾಲಿಂಗ ಉಂಟು ಕೇಳಿರಣ್ಣಾ. ಅಭಕ್ತಾಂಗನೆಯ ಸುತನಹ ತಾಮಸಭಕ್ತಂಗೆ ಪಿತನಹ ಗುರುವಿಲ್ಲ, ಪಿತಾಮಹ ಜಂಗಮವಿಲ್ಲ, ಪ್ರಪಿತಾಮಹ ಮಹಾಲಿಂಗವಿಲ್ಲ. ಅವನ ಸ್ಥಿತಿ ಗತಿ ನಗೆಗೆಡೆ ಕೇಳಿರಣ್ಣಾ, ಇದು ದೃಷ್ಟ ನೋಡಿರೆ. ಇದು ಕಾರಣ, ಭಕ್ತಿಹೀನನಾದ ಅಭಕ್ತಾಂಗನೆಯ ಮಗನ ಸಂಗವ ಬಿಡಿಸಿ ಸದ್ಭಕ್ತಿ ಸದಾಚಾರಸಂಪನ್ನರಪ್ಪ ಶರಣರ ಸಂಗದಲ್ಲಿರಿಸಯ್ಯಾ, ನಿಮ್ಮ ಬೇಡಿಕೊಂಬೆ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಭವಿಯ ಕಳೆದು ಭಕ್ತನ ಮಾಡಿ ಅಂಗದ ಮೇಲೆ ಲಿಂಗವ ಧರಿಸಿ, ಗುರುರೂಪನ ಮಾಡಿದ ತನ್ನ ನಿಜಗುರುವಪ್ಪ ಪೂರ್ವಾಚಾರ್ಯನನತಿಗಳೆದು; ಯತಿ ಜತಿಗಳಿವರು ಅತಿಶಯರೆಂದು ಅವರಲ್ಲಿ ಹೊಕ್ಕು, ಪ್ರತಿದೀಕ್ಷೆಯ ಕೊಂಡವಂಗೆ ಗುರುದ್ರೋಹ ಕೊಟ್ಟವಂಗೆ ಲಿಂಗದ್ರೋಹ. ಇವರಿಬ್ಬರಿಗೂ ಗುರುವಿಲ್ಲ, ಗುರುವಿಲ್ಲವಾಗಿ ಲಿಂಗವಿಲ್ಲ, ಲಿಂಗವಿಲ್ಲವಾಗಿ ಜಂಗಮವಿಲ್ಲ ಜಂಗಮವಿಲ್ಲವಾಗಿ ಪಾದೋದಕವಿಲ್ಲ, ಪಾದೋದಕವಿಲ್ಲವಾಗಿ ಪ್ರಸಾದವಿಲ್ಲ. ಇಂತೀ ಪಂಚಾಚಾರಕ್ಕೆ ಹೊರಗಾದ ಪತಿತರನು, ಗುರು ಚರ ಪರವೆಂದು ಆರಾಧಿಸಿದವಂಗೆ ಅಘೋರನರಕ ತಪ್ಪದು. ಅದೆಂತೆಂದಡೆ:``ಯಸ್ತು ಗುರು ಭ್ರಷ್ಟಾರಾರಾಧಿತಃ ತಸ್ಯ ಘೋರನರಕಃ' ಎಂದುದಾಗಿ_ ಇವಂದಿರನು ಗುರುಹಿರಿಯರೆಂದು ಸಮಪಂಕ್ತಿಯಲ್ಲಿ ಕೂಡಿ ಪ್ರಸಾದವ ನೀಡಿ, ಒಡಗೂಡಿಕೊಂಡು ನಡೆಯ ಸಲ್ಲದು ಕಾಣಾ ಕೂಡಲಚೆನ್ನಸಂಗಮದೇವಾ
--------------
ಚನ್ನಬಸವಣ್ಣ
ಅರಿವಿಲ್ಲದ ಕಾರಣ ಭವಕ್ಕೆ ಬಂದರು, ಅರಿವಿಲ್ಲದವಂಗೆ ಗುರುವಿಲ್ಲ, ಗುರುವಿಲ್ಲದವಂಗೆ ಆಚಾರವಿಲ್ಲ. ಆಚಾರವಿಲ್ಲದವಂಗೆ ಲಿಂಗವಿಲ್ಲ, ಲಿಂಗವಿಲ್ಲದವಂಗೆ ಜಂಗಮವಿಲ್ಲ. ಜಂಗಮವಿಲ್ಲದವಂಗೆ ಪ್ರಸಾದವಿಲ್ಲ, ಪ್ರಸಾದವಿಲ್ಲದವಂಗೆ ಗಣತ್ವವಿಲ್ಲ. ಅರಿವು ಸಾಹಿತ್ಯ ಗುರು, ಗುರುಸಾಹಿತ್ಯ ಆಚಾರ, ಆಚಾರಸಾಹಿತ್ಯ ಲಿಂಗ, ಲಿಂಗಸಾಹಿತ್ಯ ಜಂಗಮ, ಜಂಗಮಸಾಹಿತ್ಯ ಪ್ರಸಾದ, ಪ್ರಸಾದಸಾಹಿತ್ಯ ಗಣತ್ವ. ಇದು ಕಾರಣ, ಕೂಡಲಚೆನ್ನಸಂಗನಲ್ಲಿ ಈ ಸ್ಥಲವಾದವರಿಗೆಲ್ಲಾ ಭಕ್ತಿ ಉನ್ಮದ ಉಂಟು, [ಸಕಳ] ನಿರ್ವಾಣ ಲಿಂಗೈಕ್ಯಪದವಪೂರ್ವ.
--------------
ಚನ್ನಬಸವಣ್ಣ
ಅರಮನೆಯ ಕೂಳನಾದಡೆಯು ತಮ್ಮುದರದ ಕುದಿಹಕ್ಕೆ ಲಿಂಗಾರ್ಪಿತವೆಂದೆಡೆ ಅದು ಲಿಂಗಾರ್ಪಿತವಲ್ಲ ಆನರ್ಪಿತ. ಅದೆಂತೆಂದೆಡೆ : ಅರ್ಪಿತಂಚ ಗುರೋರ್ವಾಕ್ಯಂ ಕಿಲ್ಬಿಷಸ್ಯ ಮನೋ[s]ರ್ಪಿತಂ ಅನರ್ಪಿತಸ್ಯ ಭುಂಜಿಯಾನ್ ರೌರವಂ ನರಕಂ ವ್ರಜೇತ್ ಎಂದುದಾಗಿ ತನ್ನ ಒಡಲಕಕ್ಕುಲತೆಗೆ ಆಚಾರವನನುಸರಿಸಿ ಭವಿಶೈವ ದೈವ ತಿಥಿವಾರಂಗಳ ಹೆಸರಿನಲ್ಲಿ ಅಟ್ಟಿ ಕೂಳತಂದು ತಮ್ಮ ಇಷ್ಟಲಿಂಗಕ್ಕೆ ಕೊಟ್ಟು ಹೊಟ್ಟೆಯ ಹೊರೆವ ಆಚಾರಭ್ರಷ್ಟ ಪಂಚಮಹಾಪಾತಕರಿಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಪ್ರಸಾದವಿಲ್ಲವಾಗಿ ಮುಕ್ತಿಯಿಲ್ಲ. ಮುಂದೆ ಅಘೋರ ನರಕವನುಂಬರು. ಇದನರಿದು ನಮ್ಮ ಬಸವಣ್ಣನು ತನುವಿನಲ್ಲಿ ಆಚಾರಸ್ವಾಯತವಾಗಿ. ಮನದಲ್ಲಿ ಅರಿವು ಸಾಹಿತ್ಯವಾಗಿ ಪ್ರಾಣದಲ್ಲಿ ಪ್ರಸಾದ ಸಾಹಿತ್ಯವಾಗಿ ಇಂತೀ ತನು-ಮನ-ಪ್ರಾಣಂಗಳಲ್ಲಿ ಸತ್ಯ ಸದಾಚಾರವಲ್ಲದೆ ಮತ್ತೊಂದನರಿಯದ ಭಕ್ತನು ಭವಿಶೈವ ದೈವ ತಿಥಿ ಮಾಟ ಕೂಟಂಗಳ ಮನದಲ್ಲಿ ನೆನೆಯ. ತನುವಿನಲ್ಲಿ ಬೆರಸ ಭಾವದಲ್ಲಿ ಬಗೆಗೊಳ್ಳ ಏಕಲಿಂಗ ನಿಷ್ಠಾಪರನು ಪಂಚಾಚಾರಯುಕ್ತನು ವೀರಶೈವ ಸಂಪನ್ನ ಸರ್ವಾಂಗಲಿಂಗಿ ಸಂಗನಬಸವಣ್ಣನು ಈ ಅನುವ ಎನಗೆ ಅರುಹಿಸಿ ತೋರಿದ ಕಾರಣ ನಾನು ಬದುಕಿದೆನು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ನಾನು ಮಜ್ಜನವ ಮಾಡುವುದಕ್ಕೆ ಮುನ್ನವೆ ಜಂಗಮಕ್ಕೆ ಮಜ್ಜನವ ಮಾಡಿಸುವೆ. ನಾನು ಸೀರೆಯನುಡುವುದಕ್ಕೆ ಮುನ್ನವೆ ಜಂಗಮಕ್ಕೆ ದೇವಾಂಗವನುಡಿಸುವೆ. ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೆ ಜಂಗಮಕ್ಕೆ ಸುಗಂಧದ್ರವ್ಯಂಗಳ ಲೇಪಿಸುವೆ. ನಾನು ಅಕ್ಷತೆಯನಿಡುವುದಕ್ಕೆ ಮುನ್ನವೆ ಜಂಗಮಕ್ಕೆ ಅಕ್ಷತೆಯನಿಡುವೆ. ನಾನು ಪುಷ್ಪವ ಮುಡಿವುದಕ್ಕೆ ಮುನ್ನವೆ ಜಂಗಮಕ್ಕೆ ಪರಿಮಳಪುಷ್ಪವ ಮುಡಿಸುವೆ. ನಾನು ಧೂಪವಾಸನೆಯ ಕೊಳ್ಳುವ ಮುನ್ನವೆ ಜಂಗಮಕ್ಕೆ ಧೂಪವಾಸನೆಯ ಕೊಡುವೆ. ನಾನು ದೀಪಾರತಿಯ ನೋಡುವ ಮುನ್ನವೆ ಜಂಗಮಕ್ಕೆ ಆರತಿಯ ನೋಡಿಸುವೆ. ನಾನು ಸಕಲ ಪದಾರ್ಥಂಗಳ ಸ್ವೀಕರಿಸುವ ಮುನ್ನವೆ ಜಂಗಮಕ್ಕೆ ಮೃಷ್ಟಾನ್ನವ ನೀಡುವೆ. ನಾನು ಪಾನಂಗಳ ಕೊಳ್ಳುವ ಮುನ್ನವೆ ಜಂಗಮಕ್ಕೆ ಅಮೃತಪಾನಂಗಳ ಕೊಡುವೆ. ನಾನು ಕೈಯ ತೊಳೆಯುವ ಮುನ್ನವೆ ಜಂಗಮಕ್ಕೆ ಹಸ್ತಪ್ರಕ್ಷಾಲನವ ಮಾಡಿಸುವೆ. ನಾನು ವೀಳೆಯವ ಮಾಡುವುದಕ್ಕೆ ಮುನ್ನವೆ ಜಂಗಮಕ್ಕೆ ತಾಂಬೂಲವ ಕೊಡುವೆ. ನಾನು ಗದ್ದುಗೆಯ ಮೇಲೆ ಕುಳ್ಳಿರುವುದಕ್ಕೆ ಮುನ್ನವೆ ಜಂಗಮಕ್ಕೆ ಉನ್ನತಾಸನವನಿಕ್ಕುವೆ. ನಾನು ಸುನಾದಂಗಳ ಕೇಳುವುದಕ್ಕೆ ಮುನ್ನವೆ ಜಂಗಮಕ್ಕೆ ಸುಗೀತ ವಾದ್ಯಂಗಳ ಕೇಳಿಸುವೆ. ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೆ ಜಂಗಮಕ್ಕೆ ಆಭರಣಂಗಳ ತೊಡಿಸುವೆ. ನಾನು ವಾಹನಂಗಳನೇರುವುದಕ್ಕೆ ಮುನ್ನವೆ ಜಂಗಮಕ್ಕೆ ವಾಹಂಗಳನೇರಿಸುವೆ. ನಾನು ಮನೆಯೊಳಗಿಹುದಕ್ಕೆ ಮುನ್ನವೆ ಜಂಗಮಕ್ಕೆ ಗೃಹವಕೊಡುವೆ. ಇಂತೀ ಹದಿನಾರು ತೆರದಭಕ್ತಿಯನು ಚರಲಿಂಗಕ್ಕೆ ಕೊಟ್ಟು ಆ ಚರಲಿಂಗಮೂರ್ತಿ ಭೋಗಿಸಿದ ಬಳಿಕ ನಾನು ಪ್ರಸಾದ ಮುಂತಾಗಿ ಭೋಗಿಸುವೆನಲ್ಲದೆ ಜಂಗಮವಿಲ್ಲದೆ ಇನಿತರೊಳೊಂದು ಭೋಗವನಾದಡೂ ನಾನು ಭೋಗಿಸಿದೆನಾದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ. ಇಂತೀ ಕ್ರಮದಲ್ಲಿ ನಡೆವಾತಂಗೆ ಗುರುವುಂಟು ಲಿಂಗವುಂಟು ಜಂಗಮವುಂಟು, ಪಾದೋದಕವುಂಟು ಪ್ರಸಾದವುಂಟು ಆಚಾರವುಂಟು ಭಕ್ತಿಯುಂಟು. ಈ ಕ್ರಮದಲ್ಲಿ ನಡೆಯದಾತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲಾಚಾರವಿಲ್ಲ ಭಕ್ತಿಯಿಲ್ಲ. ಅವನ ಬಾಳುವೆ ಹಂದಿಯ ಬಾಳುವೆ. ಅವನ ಬಾಳುವೆ ನಾಯ ಬಾಳುವೆ. ಅವನ ಬಾಳುವೆ ಕತ್ತೆಯ ಬಾಳುವೆ. ಅವನು ಸುರೆಮಾಂಸ ಭುಂಜಕನು, ಅವನು ಸರ್ವ ಚಾಂಡಾಲನಯ್ಯಾ ಚೆನ್ನಮಲ್ಲಿಕಾರ್ಜುನಾ.
--------------
ಅಕ್ಕಮಹಾದೇವಿ
ನಿರವಯಸ್ಥಲದಲ್ಲಿ ನಿಂದ ಬಳಿಕ ಹೊನ್ನ ಹಿಡಿಯೆನೆಂಬ ಭಾಷೆ ಎನಗೆ. ಹೆಣ್ಣು ಹೊನ್ನು ಮಣ್ಣು ಹಿಡಿದು ಲಿಂಗೈಕ್ಯನಾದೆನೆಂದಡೆ ಎನ್ನ ಅಂಗದ ಮೇಲೆ ಲಿಂಗವಿಲ್ಲ. ಪಟ್ಟೆಮಂಚ ಹಚ್ಚಡ ಬಂದಡೆ ದಿಟ್ಟಿಸಿ ನೋಡೆ. ಸಣ್ಣ ಬಣ್ಣಗಳು ಬಂದಡೆ ಕಣ್ಣೆತ್ತಿ ನೋಡೆನೆಂಬ ಭಾಷೆ ಎನಗೆ. ಎನ್ನ ಲಿಂಗಕ್ಕೆ ಸೆಜ್ಜೆ ಶಿವದಾರವ ಬಾಯೆತ್ತಿ ಭಕ್ತ ಜಂಗಮವ ಬೇಡಿದೆನಾದಡೆ, ಎನ್ನ ಅರುವಿಂಗೆ ಭಂಗ ನೋಡಾ. ಬಸವಣ್ಣ ಸಾಕ್ಷಿಯಾಗಿ, ಪ್ರಭುವಿಗರಿಕೆಯಾಗಿ. ಪ್ರಭುದೇವರ ಕಂಡು ಕೈಯಲ್ಲಿ ಕಟ್ಟಿದ ಬಿರಿದಿಂಗೆ ಹಿಂದೆಗೆದೆನಾದಡೆ ಎನಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ, ಪಾದೋದಕ ಪ್ರಸಾದವೆಂಬುದು ಎಂದೆಂದಿಗೂ ಇಲ್ಲ. ಅಮುಗೇಶ್ವರನೆಂಬ ಲಿಂಗವು ಸ್ವಪ್ನದಲ್ಲಿ ಸುಳಿಯಲಿಲ್ಲ.
--------------
ಅಮುಗೆ ರಾಯಮ್ಮ
ಶ್ರೀಗುರುಕರುಣಕಟಾಕ್ಷದಲ್ಲಿ ಉತ್ಪತ್ಯವಾದ ಅಜಾತಂಗೆ ಜಾತಿಸೂತಕ, ಜನನಸೂತಕ, ಪ್ರೇತಸೂತಕ, ರಜಸ್ಸೂತಕವುಂಟೆಂಬವಂಗೆ ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ, ಪ್ರಸಾದವಿಲ್ಲವಯ್ಯಾ ಕೂಡಲಚೆನ್ನಸಂಗಯ್ಯ.
--------------
ಚನ್ನಬಸವಣ್ಣ
ಸೋಮವಾರ ಮಂಗಳವಾರ ಹುಣ್ಣಿಮೆ ಸಂಕ್ರಾಂತಿ ಶಿವರಾತ್ರಿ_ ಮೊದಲಾದ ತಿಥಿವಾರಂಗಳಲ್ಲಿ ಏಕಭುಕ್ತೋಪವಾಸಿಯಾಗಿ ಆ ಕ್ಷುದ್ರ ತಿಥಿಗಳಲ್ಲಿ, ಮಾಡಿದ ನೀಚೋಚ್ಛಿಷ್ಟವಂ ತಂದು ತನ್ನ ಕರಸ್ಥಲದ ಇಷ್ಟಲಿಂಗಕ್ಕೆ ಕೊಟ್ಟು ಕೊಂಡು ಭಕ್ತನೆನಿಸಿಕೊಂಡೆನೆಂಬ ಅನಾಚಾರಿಯ ಮುಖವ ನೋಡಲಾಗದು ನೋಡಲಾಗದು. ಅದೇನು ಕಾರಣವೆಂದಡೆ: ದಿನ ಶ್ರೇಷ್ಠವೊ ? ಲಿಂಗ ಶ್ರೇಷ್ಠವೊ ? ದಿನ ಶ್ರೇಷ್ಠವೆಂದು ಮಾಡುವ ದುರಾಚಾರಿಯ ಮುಖವ ನೋಡಲಾಗದು, ನೋಡಲಾಗದು, ಅದೆಂತೆಂದಡೆ: ಆವ ದಿನ ಶ್ರೇಷ್ಠವೆಂದು ದಿನವೆ ದೈವವೆಂದು ಮಾಡುವನಾಗಿ, ಅವನು ದಿನದ ಭಕ್ತನು. ಅವನಂತಲ್ಲ ಕೇಳಿರಣ್ಣ ಸದ್ಭಕ್ತನು_ಲಿಂಗವೆ ಘನವೆಂದು ಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ಶ್ರೇಷ್ಠವೆಂದು ಆ ಲಿಂಗಜಂಗಮವೆ ದೈವವೆಂದು ಮಾಡುವನಾಗಿ ಆತ ಲಿಂಗಭಕ್ತನು. ಈ ಲಿಂಗಭಕ್ತಂಗೆ ದಿನದ ಭಕ್ತನ ತಂದು ಸರಿಯೆಂದು ಹೋಲಿಸಿ ನುಡಿವಂಗೆ, ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ ಪಾದೋದಕವಿಲ್ಲ ಪ್ರಸಾದವಿಲ್ಲ, ಅವ ಭಕ್ತನಲ್ಲ, ಅವಂಗೆ ಅಘೋರನರಕ. ಭವಿದಿನ_ತಿಥಿ_ವಾರಂಗಳಲ್ಲಿ ಕೂರ್ತುಮಾಡುವಾತ ಭಕ್ತನಲ್ಲ. ಅಲ್ಲಿ ಹೊಕ್ಕು ಲಿಂಗಾರ್ಚನೆಯ ಮಾಡುವಾತ ಜಂಗಮವಲ್ಲ. ಈ ಉಭಯರನು ಕೂಡಲಚೆನ್ನಸಂಗಯ್ಯ ಕುಂಭೀಪಾತಕ ನಾಯಕನರಕದಲ್ಲಿಕ್ಕುವನು
--------------
ಚನ್ನಬಸವಣ್ಣ
ಯುಗದ ಉತ್ಸಾಹವ (ಉತ್ಸವವ?) ನೋಡಿರೆ ! ಪಂಚಶಕ್ತಿಗಳಿಗೆ ಪಂಚಪ್ರಧಾನರು. ಅವರ ಆಗುಹೋಗನು ಆ ಶರಣನೆ ಬಲ್ಲ. ಆ ಶರಣನು ತಾನು ತಾನಾಗಿ ಆರು ದರುಶನಕ್ಕೆ ಯಾಚಕನಲ್ಲ ! ಮೂರು ದರುಶನಕ್ಕೆ ಮುಯ್ಯಾನುವನಲ್ಲ, ವೇದ ಶಾಸ್ತ್ರಾಗಮ ಪುರಾಣ ಛಂದಸ್ಸು, ನಿಘಂಟುಗಳೆಂಬುವಕ್ಕೆ ಭೇದಕನಲ್ಲ, ಅದೆಂತೆಂದಡೆ:ಅವರ ಅಂಗದ ಮೇಲೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪ್ರಸಾದವಿಲ್ಲ ಪಾದೋದಕವಿಲ್ಲದ ಭಾಷೆ. ಆ ಗುರು ಲಿಂಗ ಜಂಗಮ ಪ್ರಸಾದ ಪಾದೋದಕ ಏಕಾರ್ಥವಾದ ಕಾರಣ ಪ್ರಾಣಿಗಳೆಲ್ಲವು ಪ್ರಣಾಮಂಗೆಯ್ಯುತ್ತಿದ್ದವು, ಜೀವಿಗಳೆಲ್ಲವು ಜಯ ಜೀಯಾ ಎನುತ್ತಿದ್ದುವು. ಆತ್ಮಂಗಳೆಲ್ಲ ಅನುವ ಬೇಡುತ್ತಿದ್ದವು. ಗುಹೇಶ್ವರಾ ಸಂಗನಬಸವಣ್ಣನ ಪಾದಕ್ಕೆ ಈರೇಳುಭುವನವೆಲ್ಲವೂ ಜಯ ಜೀಯಾ ಎನುತ್ತಿದ್ದವು.
--------------
ಅಲ್ಲಮಪ್ರಭುದೇವರು
ಶಿವಶಿವಾ, ನಾವು ಗುರುಗಳು, ನಾವು ಜಂಗಮಲಿಂಗಪ್ರೇಮಿಗಳು, ನಾವು ಪಟ್ಟದಯ್ಯಗಳು, ನಾವು ಚರಂತಿಯ ಹಿರಿಯರು, ನಾವು ಸದಾಚಾರ ಸತ್ಯಸದ್ಭಕ್ತರೆಂದು ಬೊಗಳುತ್ತಿಪ್ಪಿರಿ. ಅದೆಲ್ಲಿಯದೊ ಸದಾಚಾರ? ಮಣ್ಣುಹಿಡಿದವಂಗೆ ಗುರುವಿಲ್ಲ, ಹೆಣ್ಣುಹಿಡಿದವಂಗೆ ಲಿಂಗವಿಲ್ಲ, ಹೊನ್ನುಹಿಡಿದವಂಗೆ ಜಂಗಮವಿಲ್ಲ. ಇಂತೀ ತ್ರಿವಿಧಮಲವ ಕಚ್ಚಿದ ಶೂಕರ ಶುನಿಗಳಿಗೆ ತೀರ್ಥಪ್ರಸಾದ ಅದೆಲ್ಲಿಯದೋ? ಇಲ್ಲವಾಗಿ, ಅಷ್ಟಾವರಣವು ಇಲ್ಲ. ಇಂತಪ್ಪ ಪಂಚಮಹಾಪಾತಕರು ನಾವು ಮೋಕ್ಷವ ಹಡೆಯಬೇಕೆಂದು ಗುರು-ಲಿಂಗ-ಜಂಗಮವ ತಮ್ಮಂಗದಿಂದಿದಿರಿಟ್ಟು ಪೂಜೋಪಚಾರವ ಮಾಡಿ, ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯವೆಂಬ ಚರ್ತುವಿಧ ಖಂಡಿತಫಲಪದವ ಪಡೆದು, ಅನುಭವಿಸಿ ಕಡೆಯಲ್ಲಿ ಎಂಬತ್ತುನಾಲ್ಕುಲಕ್ಷದ ಭವಮಾಲೆಯಲ್ಲಿ ಬಪ್ಪುದು ತಪ್ಪುದು. ಇಂತಪ್ಪ ವಿಚಾರವನು ಸ್ವಾನುಭಾವಗುರುಮುಖದಿಂ ತಿಳಿದು ವಿಚಾರಿಸಿ ಸಕಲ ಪ್ರಪಂಚವೆಲ್ಲವನು ನಿವೃತ್ತಿಯ ಮಾಡಿ ದ್ವೈತಾದ್ವೈತವ ನಷ್ಟವ ಮಾಡಿ, ಸಕಲ ಸಂಸಾರ ವ್ಯಾಪರದ ವ್ಯಾಕುಲಚಿಂತನೆಯ ಬಿಟ್ಟು, ನಿಶ್ಚಿಂತನಾಗಿ ಏಕಾಗ್ರಚಿತ್ತದಲ್ಲಿ ಸ್ವಸ್ಥಿರನಾಗಿ ಮುಂದೆ ಶಿವಪಥವ ಸಾದ್ಥಿಸಬೇಕಲ್ಲದೆ ಇದನರಿಯದೆ ತನು-ಮನ-ಧನದ ಪ್ರಕೃತಿಯಲ್ಲಿ ಹರಿದಾಡಿ ಮಾತಾಪಿತರು, ಸತಿಸುತರು, ಸ್ನೇಹಿತರು, ಬಾಂಧವರು ಎನ್ನವರು ಎಂದು ಹೊನ್ನು ಹೆಣ್ಣು ಮಣ್ಣೆಂಬ ತ್ರಿವಿಧಮಲವ ತಿಂದು ಸಂಸಾರ ರಸೋದಕವೆಂಬ ನೀರು ಕುಡಿದು ಹಾಳಕೇರಿಗೆ ಹಂದಿ ಜಪಯಿಟ್ಟ ಹಾಂಗೆ ಈ ಸಂಸಾರವೆಂಬ ಹಾಳಕೇರಿಗೆ ಜೀವನೆಂಬ ಹಂದಿ ಮೆಚ್ಚಿ ಮರುಳಾಗಿ ಹೊಡೆದಾಡಿ ಹೊತ್ತುಗಳೆದು ಸತ್ತುಹೋಗುವ ಹೇಸಿ ಮೂಳ ಹೊಲೆಮಾದಿಗರಿಗೆ ಶಿವಪಥವು ಎಂದಿಗೂ ಸಾಧ್ಯವಿಲ್ಲವೆಂದಾತ ವೀರಾದ್ಥಿವೀರ ನಿಮ್ಮ ಶರಣ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಅಯ್ಯಾ, ಗುರುಲಿಂಗಜಂಗಮದ ಶುದ್ಧಸಿದ್ಧಪ್ರಸಿದ್ಧಪ್ರಸಾದಿಯಾದಡೆ ತನ್ನ ಪವಿತ್ರಸ್ವರೂಪವಾದ ಗುರುಲಿಂಗಜಂಗಮಕ್ಕೆ ನಿಂದ್ಯಕುಂದ್ಯಗಳ ಕಲ್ಪಿಸಿ, ಅರ್ಥಪ್ರಾಣಾಬ್ಥಿಮಾನವ ಕೊಂಡ ಗುರುಲಿಂಗಜಂಗಮದ್ರೋಹಿಗಳ ಸಮಪಙÂ್ತಯಲ್ಲಿ ಅರ್ಚನಾರ್ಪಣಗಳ ಮಾಡ ನೋಡಾ. ಆ ದ್ರೋಹಿಗಳಿಗೆ ಪಾದೋದಕ ಪ್ರಸಾದವ ಕೊಟ್ಟು ಕೊಳ್ಳ ನೋಡಾ. ಆ ದ್ರೋಹಿಗಳ ಸರ್ವಾವಸ್ಥೆಯಲ್ಲಿ ಧ್ಯಾನಕ್ಕೆ ತಾರ ನೋಡಾ. ಆ ದ್ರೋಹಿಗಳಿಗೆ ಶರಣೆಂದು ನುಡಿದು ವಂದಿಸ ನೋಡಾ. ಈ ವಿಚಾರವನರಿದಡೆ ಮಹಾಚಿದ್ಘನಪ್ರಸಾದಿಯೆಂಬೆನಯ್ಯಾ. ಈ ವಿಚಾರವನರಿಯದ ವೇಷಧಾರಕ ಉದರಪೋಷಕ ನುಡಿಜಾಣರ ನೋಡಿ, ಮನ ಭಾವಂಗಳಲ್ಲಿ ಊರಿಂದ ಹೊರಗಣ ಹಿರಿಯಕುಲದವರ ಮನೆಯ ಹೊರಬಳಕೆಯ ಬೋಕಿಯೆಂದು ಬಿಡುವೆ ನೋಡಾ, ಕಲಿದೇವರ ದೇವ. ಇಂತು ಗುರುವಾಕ್ಯವ ಮೀರಿ ತನ್ನ ಅಂಗವಿಕಾರದಾಸೆಗೆ ಚರಿಸುವಾತಂಗೆ ಗುರುವಿಲ್ಲ ಲಿಂಗವಿಲ್ಲ ಜಂಗಮವಿಲ್ಲ. ಪಾದೋದಕ ಪ್ರಸಾದ ಮುನ್ನವೆ ಇಲ್ಲ ನೋಡಾ, ಸಂಗನಬಸವಣ್ಣ.
--------------
ಮಡಿವಾಳ ಮಾಚಿದೇವ
ಗುರುವಿಂಗೆ ಗುರುವಿಲ್ಲ, ಲಿಂಗಕ್ಕೆ ಲಿಂಗವಿಲ್ಲ ; ಜಂಗಮಕ್ಕೆ ಜಂಗಮವಿಲ್ಲ, ನನಗೆ ನಾನಿಲ್ಲ. ಕಣೆರೆದು ನೋಡುವಡೆ ಆರಿಗೆ ಆರೂ ಇಲ್ಲ, ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಇನ್ನಷ್ಟು ... -->