ಅಥವಾ

ಒಟ್ಟು 5 ಕಡೆಗಳಲ್ಲಿ , 2 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಮಾಯದ ಮರಣದೊಳು ಛಾಯದ ಗಿಡ ಹುಟ್ಟಿ, ಒಂಬತ್ತು ಗಳಿಗೆಗೆ ಹೂವು ಕಾಯಿ ಹಣ್ಣು ಫಲವಾಗಿ, ಮರ ಬೇರುವರಿದು ಪ್ರಜ್ವಲಿಸಿದುದ ಕಂಡೆನಯ್ಯಾ ! ಇದೇನು ಚೋದ್ಯ ಹೇಳಾ ! ಮಾರುದ್ದ ಮರನಡಗಿ ಛಾಯದ ಗಿಡವಾಗಿ, ಪಿರಿದಪ್ಪ ವೃಕ್ಷವಾಗಿ, ಜಗಕೆ ತೋರಿದ ಭೇದವ ವೃಕ್ಷಕೆ ನೀರೆರೆದು ಸಲಹಿದಾತ ಬಲ್ಲ ; ಉಳಿದವರಿಗಸಾಧ್ಯ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ವಾಯುಮುಖದಲುಲಿವಾವಯದ ವೃಕ್ಷದೊಳು ಆಯತವಾಗಿಹ ಹಣ್ಣಿನ ರುಚಿಯನು ಸವಿಯನರಿಯದೆ ಯತಿ ಸಿದ್ಧ ಸಾಧ್ಯರು ಬಾಯಸವಿಯನುಂಬರು. ಪದ :ಸರಸಿಜನೆಂಬ ಭೂಮಿಗೆ ವಿಷ್ಣುವೆಂಬ ನೀರಾಗಿ ನೆರದು ರುದ್ರಾಗ್ನಿಯೆಂದೆಂಬುವ ಮೂಲದ ಪರಬ್ರಹ್ಮವೃಕ್ಷದ ತುಟ್ಟತುದಿಯಲ್ಲಿಹ ವರ ಅಮೂರ್ತ ಹಣ್ಣಿನ ಸವಿಗೆರಗೊಡದಲ್ಲಾಡಿ. | 1 | ಐದು ಹತ್ತನು ಕೂಡಿದ ಸ್ವಸ್ಥಾನದಲ್ಲಿ ನಿಂದು ಈ ರೈದು ಗುಣವ ಕೊಟ್ಟು ಒರಲಿ ಚೇತರಿಸುತಿರಲಿ ಮೈಗುಂದಿ ಮೂಲೋಕ ಅಸುರಪಡೆಗೆ ಸಿಲ್ಕಿ ಸಾಯಸಬಡುತಿದೆ ಸಂಸಾರಬಂಧನದೊಳು. | 2 | ವಾಯು ಸರ್ಪನ ನುಂಗಿ ಮೇಲೆ ಗಗನವನಡರಿ ಛಾಯದ ಮನೆಯೊಳು ನಿಂದು ಚತುಃಕರಣ ಮಾಯಮದದಹಂಕಾರಗಿರಿಯನೇರಿ ಆಯಸಗೊಳುತಿದೆ ಬರಿದೆ ಅಜ್ಞಾನದೊಳು. | 3 | ವಾಯುಮುಖದ ತನು ವಾಯುಮುಖದ ಮನವು ವಾಯುಮುಖದ ಕರಣ ವಾಯುಮುಖದ ಚಿತ್ತ ವಾಯುಮುಖದ ಬುದ್ಧಿ ವಾಯುಮುಖದ ಆತ್ಮ ವಾಯುವಿಂಗೆ ಗುರಿಯಾಯಿತ್ತು . | 4 | ಗುಡಿಯಮುಖದಿ ದೇವರ ಕಾಣ್ಬಂದದಿಂ ಒಡಲ ವಾಯುಮುಖದಿ ಲಿಂಗವ ಕಂಡು ಕೂಡಿಯೆ ಒಡವೆರದು ಗುರುಸಿದ್ಧಮಲ್ಲಿನಾಥನ ಪಾದ ದೆಡೆಯ ನಂಬಿಯೆ ನಿತ್ಯನಾದೆನೆಲೆ ದೇವ. | 5 |
--------------
ಹೇಮಗಲ್ಲ ಹಂಪ
ಶುದ್ಧ ಕಾನನದೊಳಗೆ ಶುದ್ಧವಾಯುವು ಬೀಸಿ ಪ್ರಸಿದ್ಧ ಕಮಲದಲ್ಲಿ ಬಹು ಛಾಯದ ಹಲವು ಪರಿಯಲ್ಲಿ ಎಸೆವ ತೆರಹಿಲ್ಲಹ ಗಮನ ಕುರುಹಿಂಗೆ ಬಾರಹ ಶೂನ್ಯಾಂಗನ ಸ್ವಾನುಭಾವದ ಮನೆಯ ನಾನೊಡನೆ ಓಲಾಡಿ ನೀನು ನಾನಾದೆ ಕಪಿಲಸಿದ್ಧಮಲ್ಲೇಶ್ವರಾ.
--------------
ಸಿದ್ಧರಾಮೇಶ್ವರ
ಹೆಣ್ಣು ಗಂಡು ಕೂಡಿ ರಚಿಸಿದ ಬಣ್ಣದ ಕೊತ್ತಳದೊಳು ಮನೆಮಾಡಿಕೊಂಡಿರ್ಪ ದುರ್ಗಿಯ ಕಂಡೆನಿಂದು. ಆಕೆಯ ಮುಖ ಮೂರು, ಕಣ್ಣಾರು, ಬಾಯಿ ಮೂರು, ನಾಸಿಕ ಮೂರು, ನಾಲಗೆ ಮೂರು, ಮೊಲೆ ಏಳು, ಅಂಗವೆರಡು, ಶೃಂಗಾರ ನಾಲ್ಕು, ಬಯಕೆ ಎಂಟು, ಬಾಳ್ವೆ ಎರಡು, ದುಃಖವೈದು. ದುರಿತ ನೂರಿಪ್ಪತ್ತರ ದುಮ್ಮಾನದಲ್ಲಿ ಮಾಯದ ರಕ್ಷಿಯ ಮುಂದಿಟ್ಟುಕೊಂಡು, ಛಾಯದ ಕೊಳಗದಲಳೆವುತ್ತಲಳೆವುತ್ತ ಮುಡಿ ಮಾಸಿತೆಂದು ಮಾನುನಿ ಮರುಗಿ, ರಾಸಿಗೆ ಕಾಲ ಮಾಡಿ, ಮಾನಕೆ ತಲೆಯನಿಟ್ಟು, ರೋಷದಿಂದ ಶೋಕಂಗೈವುತ್ತಿಪ್ಪ ಅಂಗನೆ, ಮುಖ ಮೂರ ತಿರುವೆ, ಮೂರುಲೋಕವದರಿದ್ದ ಕಂಡೆ. ಕಣ್ಣಾರಲ್ಲಿ ಉರಿವುತ್ತಿಪ್ಪ ಅಗ್ನಿ ಲೋಕವ ಸುತ್ತುವುದ ಕಂಡೆನು. ಬಾಯಿ ಮೂರು ತೆರೆಯೆ ಎಣೆಯಿಲ್ಲದ ತಾರೆಯ ಕಂಡೆನು. ಏಳು ಮೊಲೆಯೊಳಗಣ ವಿಷ ಹೊರಹಬ್ಬಿ ಹರಿವುದ ಕಂಡೆನು. ಅಂಗವೆರಡು ಅಲೆದಾಡುವುದ ಕಂಡೆನು. ಶೃಂಗಾರವು ನಾಲ್ಕು ದಿಕ್ಕಿಗೆ ಬೆಳಗುವುದ ಕಂಡೆನು. ಬಯಕೆ ಎಂಟು ಬ್ರಹ್ಮಾಂಡವ ಕೊಂಡು ಮುಣುಗುವುದ ಕಂಡೆನು. ದುಃಖವೈದು ಮೊರೆಯಿಡುವುದ ಕಂಡೆನು. ದುರಿತ ನೂರಿಪ್ಪತ್ತು ಧೂಳಿಗೊಟ್ಟಿಯ ಕೊಂಬುದ ಕಂಡೆ, ಕೋಟೆಯ ಅರಸು ಬೆನ್ನೂರಿಲಿ ನಿಂದು ತಾಪಸಬಡುತಿರ್ದ, ಮಾಯದುರಿತಕಂಜಿ. ಇದೇನು ಚೋದ್ಯ ಹೇಳಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
-->