ಸ್ವಯಂಪಾಕದಲ್ಲಿ ಆದ ದ್ರವ್ಯವ,
ಪರರು ಕಂಡಹರೆಂದು ಮರೆಮಾಡಿಕೊಂಡಿಪ್ಪ ಪರಿಯಿನ್ನೆಂತೊ ?
ಮಹಾಘನವನಾ ಧರಿಸಿ ನುಡಿವುತ್ತಿಪ್ಪ ನಾಲಗೆ,
ಛಂಡತಾಂಬೂಲ ಮೊದಲಾದ ಭಾವವನೆಲ್ಲರೂ ಕಾಣುತ್ತ,
ವ್ರತದ ಠಾವೆಲ್ಲಿ ಸಿಕ್ಕಿತ್ತು ?
ಮೊಲೆಯ ಮುಚ್ಚಿ, ಸೀರೆಯ ತೆಗೆದಂತಾಯಿತ್ತು.
ಇಂತಿವನರಿದು, ಇದಿರಿಚ್ಛೆಯ ಮರೆದು, ತನ್ನ ಸ್ವಯಿಚ್ಛೆಯನರಿದುದು,
ತನ್ನ ಮುಚ್ಚು, ಘನಲಿಂಗದ ಅಚ್ಚು.
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗದ
ವ್ರತಾಚಾರಕ್ಕೆ ಇಕ್ಕದ ಗೊತ್ತು.