ಕುದುರೆಯ ಕುಪ್ಪಟ ಘನವಾಯಿತ್ತು. ಆನೆಯ ಹರಿದಾಟ ನಿಲಬಾರದು.
ಒಂಟೆಯ ಕತ್ತು ನೆಟ್ಟಗಾಯಿತ್ತು. ಬಂಟರ ಹರಿದಾಟ ಉಂಟು
ಕಟ್ಟಿಗೆಯವರು ಉಗ್ಗಡಿಸುತ್ತ, ಭಟರುಗಳು ಪೊಗಳುತ್ತ ,
ಸಕಲವಾದ್ಯ ರಭಸದೊಳಗೆ ಸಂದಳಿಯೆಂಬ ಅಂದಳದ ಮೇಲೆ
ಚಂದವಾಗಿ ಮನೋರಾಜ್ಯಂಗೆಯ್ವುತ್ತಿರಲು,
ಈ ಸುಖವನೊಲ್ಲದೆ, ಮುಂದೆ ದುಃಖ ಉಂಟೆಂದು ಶರಣನರಿದು,
ತಲೆ ಎತ್ತಿ ನೋಡಿ, ಘನಗುರುವಿನ ಹಸ್ತದಿಂದ ಅನುಜ್ಞೆಯಂ ಪಡೆದು,
ಧ್ಯಾನ ಧಾರಣ ಸಮಾಧಿಯಿಂದ ತಿಳಿದು ನೋಡಲಾಗಿ,
ಇತ್ತ ಶೂನ್ಯವೆಂಬ ಪಟ್ಟಣದೊಳಗೆ ಅನಾಮಿಕನೆಂಬ ಲಿಂಗ ಅರಸು,
ಆ ಅರಸಿನ ಗೊತ್ತುವಿಡಿದು ಇತ್ತಲೆ
ಮನವೆಂಬ ಅರಸನು ಹಿಡಯಲಾಗಿ ಹಿಡಿದು,
ಆನೆ, ಕುದುರೆ, ಸೇನೆಯನೆಲ್ಲ ಸೂರೆಗೊಂಡು,
ಭಂಡಾರ ಬೊಕ್ಕಸ ಅರಮನೆಯನೆಲ್ಲ ಸುಟ್ಟು ಬಟ್ಟಬಯಲಮಾಡಿದ,
ನಮ್ಮ ಬಸವಪ್ರಿಯ ಕೂಡಲಚೆನ್ನಬಸವಣ್ಣ.