ಅಯ್ಯಾ, ವೈಷ್ಣವರಾದವರು ತಮ್ಮ ವಿಷ್ಣುವ ಬಿಟ್ಟು ಕಳೆದು,
ಲಿಂಗಭಕ್ತರಾದರನೇಕರು.
ಅಯ್ಯಾ, ಜೈನರಾದವರು ತಮ್ಮ ಜಿನನ ಬಿಟ್ಟು ಕಳೆದು,
ಲಿಂಗಭಕ್ತರಾದರನೇಕರು.
ಅಯ್ಯಾ, ದ್ವಿಜರಾದವರು ತಮ್ಮ ಕರ್ಮಂಗಳ ಬಿಟ್ಟು ಕಳೆದು,
ಲಿಂಗಭಕ್ತರಾದರನೇಕರು.
ಲಿಂಗವ ಬಿಟ್ಟು, ಇತರವ ಹಿಡಿದವರುಳ್ಳರೆ ಹೇಳಿರಯ್ಯಾ ?
ಉಳ್ಳಡೆಯೂ ಅವರು ವ್ರತಗೇಡಿಗಳೆನಿಸಿಕೊಂಬರು.
ಇದು ಕಾರಣ, ಋಷಿ ಕೃತಕದಿಂದಲಾದ ಕುಟಿಲದೈವಂಗಳ
ದಿಟವೆಂದು ಬಗೆವರೆ, ಬುದ್ಧಿವಂತರು ?
ಸಟೆಯ ಬಿಡಲಾರದೆ, ದಿಟವ ನಂಬಲಾರದೆ,
ನಷ್ಟವಾಗಿ ಹೋಯಿತ್ತೀ ಜಗವು ನೋಡಾ.
ಸಕಲದೈವಂಗಳಿಗೆ, ಸಕಲಸಮಯಂಗಳಿಗೆ
ನೀವೇ ಘನವಾಗಿ, ನಿಮಗೆ ಶರಣುವೊಕ್ಕೆನಯ್ಯಾ,
ಬಸವಪ್ರಿಯ ಕೂಡಲಚೆನ್ನಸಂಗಮದೇವಾ.