ಅಥವಾ

ಒಟ್ಟು 86 ಕಡೆಗಳಲ್ಲಿ , 36 ವಚನಕಾರರು , 81 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಗುರುವಿನಲ್ಲಿ ಗುಣವನರಸುವರೆ ? ಲಿಂಗದಲ್ಲಿ ಲಕ್ಷಣವನರಸುವರೆ ? ಜಂಗಮದಲ್ಲಿ ಜಾತಿಯನರಸುವರೆ ? ಅರಸಿದರೆ ನಾಯಕನರಕ ತಪ್ಪದು ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಅಂಧಕನು ಓಡ ಹಿಡಿದು ಸ್ವರೂಪವ ತಾ ನೋಡುವಂತೆ, ಶೈವ ಗುರುವಿನಲ್ಲಿ ಲಿಂಗ ಸಾಹಿತ್ಯವಾದ ಶಿಷ್ಯನ ವಿಧಿಯ ನೋಡಿರೆ ! ಗುರುವಿಂಗೆ ದೂರಾರ್ಚನೆ ಶಿಷ್ಯಂಗೆ ಇಷ್ಟಲಿಂಗಾರ್ಚನೆ, ಗುರು ವಾಯುಪ್ರಾಣಿ, ಶಿಷ್ಯ ಲಿಂಗಪ್ರಾಣಿ, ಗುರು ಭೂತದೇಹಿ, ಶಿಷ್ಯ ಲಿಂಗದೇಹಿ, ಗುರು ಅನರ್ಪಿತಭುಂಜಕ, ಶಿಷ್ಯ ಲಿಂಗಾರ್ಪಿತಭುಂಜಕ, ಗುರು ಅಗ್ನಿದಹನಸಂಪತ್ತು, ಶಿಷ್ಯ ಸಿದ್ಧಸಮಾಧಿಸಂಪತ್ತು, ಎಂತುಂಟು ಹೇಳಿರಣ್ಣಾ ? ``ಜ್ಞಾನಹೀನಗುgõ್ಞ ಪ್ರಾಪ್ತೇ ಶಿಷ್ಯಜ್ಞಾನಂ ನ ಸಿಧ್ಯತಿ ಮೂಲಚ್ಛಿನ್ನೇ ಯಥಾ ವೃಕ್ಷೇ ಕಥಂ ಪುಷ್ಪಂ ಫಲಂ ಭವೇತ್ ಎಂದುದಾಗಿ ಇವರಿಬ್ಬರ ಗುರುಶಿಷ್ಯಸಂಬಂಧಕ್ಕೆ ನರಕ ತಪ್ಪದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಸುಜ್ಞಾನವೆಂಬ ಭಾವವು ಗುರುವಿನಲ್ಲಿ ಸಾಹಿತ್ಯವು. ಜ್ಞಾನವೆಂಬ ಭಾವವು ಶಿಷ್ಯನಲ್ಲಿ ಸಾಹಿತ್ಯವು. ಮನವೆಂಬ ಭಾವವು ಲಿಂಗದಲ್ಲಿ ಸಾಹಿತ್ಯವು. ಲಿಂಗಕ್ಕೆ ಮಜ್ಜನ ಮಾಡಲಾಗದು, ಅದೇನು ಕಾರಣ ? ಮನವೆಂಬ ಲಿಂಗವು ಭಾವದಲ್ಲಿ ಸಾಹಿತ್ಯವಾದ ಕಾರಣ. ಲಿಂಗಕ್ಕೆ ಗಂಧ ಧೂಪ ನಿವಾಳಿಯ ಕುಡಲಾಗದು, ಅದೇನು ಕಾರಣ ?
--------------
ಚನ್ನಬಸವಣ್ಣ
ಗುರುವೆಂಬಾತ ಶಿಷ್ಯನಂತುವನರಿಯ, ಶಿಷ್ಯನೆಂಬಾತ ಗುರುವನಂತುವನರಿಯ. ಗುರುವಿನಲ್ಲಿ ಸಮವಿಲ್ಲ, ಶಿಷ್ಯನಲ್ಲಿ ಸಮವಿಲ್ಲ, ಜಂಗಮ ಜಂಗಮದಲ್ಲಿ ಸಮವಿಲ್ಲ, ಭಕ್ತ ಭಕ್ತನಲ್ಲಿ ಸಮವಿಲ್ಲ. ಇದು ಕಾರಣ ಕಲಿಯುಗದಲ್ಲಿ ಉಪದೇಶವ ಮಾಡುವ ಕಾಳುಕುರಿಕೆಯ ಮಕ್ಕಳನೇನೆಂಬೆ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಗುರುವಿನಲ್ಲಿ ಗುಣ ವಿದ್ಯೆ ಕುಲ ಬಾಲ್ಯ ಯೌವನ ವೃದ್ಧನೆಂದು ಅರಸಲುಂಟೇ ? ಅರಸಿದರೆ ಮಹಾಪಾತಕ. ಸಾಕ್ಷಿ :`` ಆಚಾರ್ಯೇ ಬಾಲಬುದ್ಧಿಶ್ಚ ನರಬುದ್ಧಿಸ್ತಥೈವ ಚ | ಅಸಿಷ್ಟ ಬುದ್ಧಿಭಾವೇನ ರೌರವಂ ನರಕಂ ವ್ರಜೇತ್ || '' ಎಂದುದಾಗಿ, ಎನ್ನ ಗುರು ಬಾಲನೂ ಅಲ್ಲ, ಯೌವನನೂ ಅಲ್ಲ, ವೃದ್ಧನೂ ಅಲ್ಲ. ಮೃತರಹಿತ ಪರಶಿವ. ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆಂಬ ಗುರುವ ಮರೆದವರಿಗೆ ಇದೇ ನರಕ.
--------------
ಹೇಮಗಲ್ಲ ಹಂಪ
ಗುರುಶಿಷ್ಯ ಸಂಬಂಧವನರಸುವ ಮಹಂತರ ನಾನೇನೆಂಬೆನಯ್ಯಾ; ಶಿಷ್ಯಂಗೆ ಗುರು ಶಿವಸೋದರ, ಗುರುವಿಂಗೆ ಲಿಂಗ ಶಿವಸೋದರ, ಲಿಂಗಕ್ಕೆ ಜಂಗಮ ಶಿವಸೋದರ, [ಜಂಗಮಕ್ಕೆ ಪ್ರಸಾದ ಶಿವಸೋದರ] ಪ್ರಸಾದಕ್ಕೆ ಪರಿಣಾಮವೆ ಶಿವಸೋದರ, ಇದು ಕಾರಣ, ಗುರುವಿನಲ್ಲಿ ಗುಣವ, ಲಿಂಗದಲ್ಲಿ ಸ್ಥಲವ (ಶಿಲೆಯ?) ಜಂಗಮದಲ್ಲಿ ಕುಲವ, ಪ್ರಸಾದದಲ್ಲಿ ರುಚಿಯ, ಪರಿಣಾಮದಲ್ಲಿ ಕುರುಹನರಸುವ ಪಾತಕರ ತೋರದಿರು ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ವಿಶ್ವಾಸವಿಲ್ಲದವಂಗೆ ಭಕ್ತಸ್ಥಲವಿಲ್ಲ, ಗುರು ಭಕ್ತನಲ್ಲ. ವಿಶ್ವಾಸವಿಲ್ಲದವಂಗೆ ಮಾಹೇಶ್ವರಸ್ಥಲವಿಲ್ಲ, ಲಿಂಗ ಭಕ್ತನಲ್ಲ. ವಿಶ್ವಾಸವಿಲ್ಲದವಂಗೆ ಪ್ರಸಾದಿಸ್ಥಲವಿಲ್ಲ, ಜಂಗಮ ಭಕ್ತನಲ್ಲ. ವಿಶ್ವಾಸವಿಲ್ಲದವಂಗೆ ಪ್ರಾಣಲಿಂಗಿಸ್ಥಲವಿಲ್ಲ, ಸರ್ವ ವ್ಯವಧ್ಯಾನಿಯಲ್ಲ. ವಿಶ್ವಾಸವಿಲ್ಲದವಂಗೆ ಶರಣಸ್ಥಲವಿಲ್ಲ, ಆರೂಢಭಾವಿಯಲ್ಲ. ವಿಶ್ವಾಸವಿಲ್ಲದವಂಗೆ ಐಕ್ಯಸ್ಥಲವಿಲ್ಲ, ಸರ್ವಲೇಪನಲ್ಲ. ಇಂತೀ ಷಟ್‍ಸ್ಥಲಸಂಬಂಧ. ಗುರುವಿನಲ್ಲಿ ಶ್ರದ್ಧೆ, ಲಿಂಗದಲ್ಲಿ ಅಬ್ಥಿನ್ನನಲ್ಲದೆ ಜಂಗಮದಲ್ಲಿ ಮನೋಮೂರ್ತಿಯಾಗಿಪ್ಪುದೆ ಸರ್ವಾಂಗಲಿಂಗಸಂಬಂಧದ ಇರವು ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗದಲ್ಲಿ.
--------------
ಬಾಹೂರ ಬೊಮ್ಮಣ್ಣ
ಗಂಡನೆಂಜಲಿಗೆ ಹೇಸುವಳು ಮಿಂಡನ ತಂಬುಲ ತಿಂಬ ತೆರನಂತೆ, ಗುರುವಿನಲ್ಲಿ ಉಪದೇಶ ಪಡೆದು ಪ್ರಸಾದಕ್ಕೆ ಸೂತಕವ ಮಾಡುವ ಪಂಚಮಹಾಪಾತಕರು ನೀವು ಕೇಳಿ ಭೋ. ಅಂಡದೊಳಗೆ ಹುಟ್ಟಿದ ಉತ್ಪತ್ತಿಯೆಲ್ಲವೂ ಗುರುವಿಂದಾಯಿತ್ತು. ಮತ್ತೆ ಮಿಂಡ ಮೈಲಾರ ಬೀರ ಭೈರವ ಯಕ್ಕನಾತಿ ಕುಕ್ಕನೂರ ಬಸದಿ ಕೇತಧೂಳನೆಂಬ ಕಾಳುದೈವಕ್ಕೆರಗಿ, ಶಿವಭಕ್ತನೆನಿಸಿಕೊಂಬ ಚಂಡಿನಾಯಿಗಳ ಕಂಡು, ಎನ್ನ ಮನ ಹೇಸಿತ್ತು ಕಾಣಾ, ಕಲಿದೇವರದೇವಾ.
--------------
ಮಡಿವಾಳ ಮಾಚಿದೇವ
ಯೋನಿಯಲ್ಲಿ ಜನಿಸಿದ ಭಾವ ಸಂಸಾರದಲ್ಲಿ ತೊಳಲುವುದೇ ಸಾಕ್ಷಿ. ಸಂಸಾರದಲ್ಲಿ ತೊಳಲುವ ಭಾವ ಮುಂದೆ ಮರಣಬಾಧೆಯಲ್ಲಿ ಮುಳುಗುವುದೇ ಸಾಕ್ಷಿ. ಅದಲ್ಲದೆ ಗುರುವಿನಲ್ಲಿ ಜನಿಸಿದ ಭಾವ ಸರ್ವಾಚಾರ ಸಂಪತ್ತಿನೊಳಗೆ ಭೋಗೋಪಭೋಗಿಯಾಗಿಹುದೇ ಸಾಕ್ಷಿ. ಸರ್ವಾಚಾರಸಂಪತ್ತಿನೊಳಗೆ ಭೋಗೋಪಭೋಗಿಯಾಗಿರ್ದ ಭಾವ ಮಹಾಲಿಂಗೈಕ್ಯಪದಲೋಲವಾದುದೇ ಸಾಕ್ಷಿ. ಇದು ಕಾರಣ ಆ ಭಾವಕ್ಕೆ ಸಂದುಸಂಶಯದ ಗೊಂದಣವುಂಟಲ್ಲದೆ ಈ ಭಾವಕ್ಕೆ ಸಂದುಸಂಶಯದ ಗೊಂದಣವುಂಟೆ ? ಇದೇ ಗುರುನಿರಂಜನ ಚನ್ನಬಸವಲಿಂಗ ತಾನಾದ ಶರಣಸದ್ಭಾವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಭಾಜನಕ್ಕೆ ಸರ್ವಾಂಗವ ಬಾಸಣಿಸುವಾಗ ಅದು ಆ ಕುಂಭಕ್ಕೊ, ತನ್ನಂಗಕ್ಕೊ ಎಂಬುದನರಿತು, ಸರ್ವಾಂಗ ಪಾವಡವ ಕಟ್ಟುವ ವಿವರ ; ಮನ, ಬುದ್ಧಿ, ಚಿತ್ತ, ಅಹಂಕಾರ ಎಂಬ ಚತುರ್ಭಾವದ ಸೆರಗಿನಲ್ಲಿ ಗುಹ್ಯೇಂದ್ರಿಯವಂ ಕಳೆದು, ಜಿಹ್ವೇಂದ್ರಿಯವೆಂಬ ಅಂಗ ಭಾಜನಕ್ಕೆ ಸರ್ವಾಂಗ ಪಾವಡವಂ ಕಟ್ಟಿ, ಮಣ್ಣೆಂಬ ಆಸೆಯ ಬಿಟ್ಟು, ಹೊನ್ನೆಂಬ ಆಸೆಯ ಬಿಟ್ಟು, ಹೆಣ್ಣೆಂಬ ಮೋಹದಲ್ಲಿ ಮಗ್ನವಾಗದೆ, ಮಣ್ಣೆಂಬ ಆಸೆಯ ಗುರುವಿನಲ್ಲಿ, ಹೊನ್ನೆಂಬ ಆಸೆಯ ಲಿಂಗದಲ್ಲಿ, ಹೆಣ್ಣೆಂಬ ಮೋಹವ ಜಂಗಮದಲ್ಲಿ, ಕೊಡುವ ವ್ರತವನರಿಯದೆ ಆಚಾರ ಅಂಗದಲ್ಲಿ ಇಂತೀ ವ್ರತನೇಮವಲ್ಲದ ಮಣ್ಣ ಮಡಕೆಯ ಗನ್ನದಲ್ಲಿ ಕಟ್ಟಿದಡೆ ಪ್ರಸನ್ನನ ವ್ರತದಣ್ಣಗಳೆಲ್ಲರು ಇದ ಚೆನ್ನಾಗಿ ತಿಳಿದು ನೋಡಲಾಗಿ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗದಲ್ಲಿ ವ್ರತ ನೇಮ ಹರಿತವಾಯಿತ್ತು.
--------------
ಅಕ್ಕಮ್ಮ
ಗುರುವಿನಲ್ಲಿ ಆಚರಣೆಯ, ಲಿಂಗದಲ್ಲಿ ಅನುಸರಣೆಯ, ಜಂಗಮದಲ್ಲಿ ದೂಷಣ ಮಾಡುತ್ತ ಲಿಂಗವನರಿತು, ಗುರುವ ಮರೆಯಬೇಕು. ಅರಿವನರಿತು, ಜಂಗಮವ ಮರೆಯಬೇಕು. ಗುರುವೆ ಲಿಂಗವಾಗಿ, ಲಿಂಗವೆ ಜಂಗಮವಾಗಿ, ಜಂಗಮವೆ ಅರಿವಾಗಿ ನಿಂದಲ್ಲಿ ಲಿಂಗವನರಿತು, ಗುರುವೆಂಬುದ ಮರೆಯಬೇಕು. ಗುರುವನರಿತು, ಜಂಗಮವ ಮರೆಯಬೇಕು. ಜಂಗಮವ ಮರೆದಲ್ಲಿ ಅರಿವು ಕರಿಗೊಂಡಿತ್ತು, ಮನಸಂದ ಮಾರೇಶ್ವರಾ.
--------------
ಮನಸಂದ ಮಾರಿತಂದೆ
ನಿರಾಕಾರ ಪರವಸ್ತು ತನ್ನ ಲೀಲಾವಿನೋದದಿಂದ ಎರಡು ಮುಖದಿಂದ ಎರಡು ಸೃಷ್ಟಿಯ ಮಾಡಿದರು. ಒಂದು ಊಧ್ರ್ವಸೃಷ್ಟಿ, ಒಂದು ಅಧೋಸೃಷ್ಟಿ. ಅಧೋಸೃಷ್ಟಿ ಯಾವುದೆಂದಡೆ : ಅಂಡಜ ಪಿಂಡಜ ಜರಾಯುಜ ಉದ್ಭಿಜ ಇವು ನಾಲ್ಕು ಕೂಡಿ ಎಂಬತ್ತುನಾಲ್ಕು ಜೀವರಾಶಿಯ ಮಾಡಿದರು. ಸ್ವರ್ಗ ನರಕ ಇಹ ಪರ ಪುಣ್ಯ ಪಾಪ ಧರ್ಮ ಕರ್ಮ ಸತ್ಯ ಅಸತ್ಯ ಜ್ಞಾನ ಅಜ್ಞಾನ ಹೆಣ್ಣು ಗಂಡು ಹಿರಿದು ಕಿರಿದು ಉತ್ಪತ್ತಿ-ಸ್ಥಿತಿ-ಲಯಕ್ಕೆ ಅದ್ಥಿಕಾರಿಗಳಾದ ಬ್ರಹ್ಮ-ವಿಷ್ಣು-ರುದ್ರರು ಮಾಡಿಟ್ಟರು. ಇನ್ನು ಊಧ್ರ್ವಸೃಷ್ಟಿ ಹೇಗೆಂದಡೆ : ಅಸಂಖ್ಯಾತ ಮಹಾಪ್ರಮಥಗಣಂಗಳು, ಇವರಿಗೆ ಸ್ವರ್ಗ-ನರಕವಿಲ್ಲ, ಇಹ-ಪರವಿಲ್ಲ, ಪುಣ್ಯ-ಪಾಪವಿಲ್ಲ, ಧರ್ಮ-ಕರ್ಮವಿಲ್ಲ, ಹುಸಿ-ಖರೆಯಿಲ್ಲ, ಜ್ಞಾನ-ಅಜ್ಞಾನವಿಲ್ಲ, ಹೆಣ್ಣು-ಗಂಡುವಿಲ್ಲ, ಹಿರಿದು-ಕಿರಿದುವಿಲ್ಲ, ಉತ್ಪತ್ತಿ-ಸ್ಥಿತಿ-ಲಯವಿಲ್ಲ, ಅವರಿಗೆ ಬ್ರಹ್ಮ-ವಿಷ್ಣು ರುದ್ರರು ಇಲ್ಲ. ಅವರಿಗೆ ಮತ್ತಂ, ಆ ನಿರಾಕಾರ ಪರವಸ್ತು ತಾನೆ ಗುರು-ಲಿಂಗ-ಜಂಗಮವಾಗಿ ಗುರುವಿನಲ್ಲಿ ಉತ್ಪತ್ತಿ, ಲಿಂಗದಲ್ಲಿ ಸ್ಥಿತಿ, ಜಂಗಮದಲ್ಲಿ ನಿಜೈಕ್ಯರು. ಮತ್ತೆ ಪರಶಿವಮೂರ್ತಿ ತನ್ನ ವಿನೋದಕ್ಕೆ ಆಟವ ಆಡಬೇಕಾಗಿ ಮಹದಾಕಾಶವ ಮಂಟಪವ ಮಾಡಿ, ಆಕಾಶವ ಪರದೆಯ ಕಟ್ಟಿ, ಅಸಂಖ್ಯಾತ ಪ್ರಮಥಗಣಂಗಳಿಗೆ ಮೂರ್ತವ ಮಾಡಿಸಿ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳನೆ ಸೂತ್ರವ ಮಾಡಿ ತಮ್ಮ ಕೈಯಲ್ಲಿ ಪಿಡಿದು, ಚಿತ್ರವಿಚಿತ್ರದಾಟವ ಆಡಿಸುತ್ತಿಹುದಕ್ಕೆ ಲೆಕ್ಕವಿಲ್ಲ, ಹೇಳುವುದಕ್ಕೆ ಅಸಾಧ್ಯ. ಆ ಪ್ರಮಥಗಣಂಗಳು ನೋಡಿ, ಆ ಬೊಂಬೆಗಳೇನು ಆಡಿಹವು ? ಸೂತ್ರಿಕನು ಆಡಿಸಿದ ಹಾಂಗೆ ಆಡ್ಯಾವು. ಆ ಗೊಂಬೆಗೆ ಸೂತ್ರವಲ್ಲದೆ ಶಿವನಿಲ್ಲ. ಆ ಗೊಂಬೆಯೊಳಗೆ ಶಿವನಿದ್ದರೆ, ಆಡಿಸುವುದು ಹ್ಯಾಂಗೆ ? ಇವೆಲ್ಲವು ಅನಿತ್ಯವೆಂದು ತಿಳಿದು ಪ್ರಮಥಗಣಂಗಳು ತಮ್ಮ ಲಿಂಗದಲ್ಲಿ ನಿಜ ಮೋಕ್ಷಿಗಳಾಗಿ ಶಾಂಭವಪುರಕ್ಕೆ ಹೋದ ಭೇದವ ಎನ್ನೊಳರುಹಿದಾತ ನಮ್ಮ ಶಾಂತಕೂಡಲಸಂಗಮದೇವ.
--------------
ಗಣದಾಸಿ ವೀರಣ್ಣ
ಆದಿ ಅನಾದಿ ನಿತ್ಯಾನಿತ್ಯವ ತಿಳಿಯಲರಿಯದೆ ವಾಯಕ್ಕೆ ಪರಬ್ರಹ್ಮವ ನುಡಿವ ವಾಯುಪ್ರಾಣಿಗಳವರೆತ್ತ ಬಲ್ಲರೋ, ಆ ಪರಬ್ರಹ್ಮದ ನಿಜದ ನಿಲವ ? ಅದೆಂತೆಂದಡೆ ; ಆದಿಯೆ ದೇಹ, ಅನಾದಿಯೆ ನಿರ್ದೇಹ, ಆದಿಯೆ ಸಕಲ, ಅನಾದಿಯೆ ನಿಷ್ಕಲ, ಆದಿಯೆ ಜಡ, ಅನಾದಿಯೆ ಅಜಡ. ಆದಿಯೆ ಕಾಯ, ಅನಾದಿಯೆ ಪ್ರಾಣ. ಈ ಎರಡರ ಯೋಗವ ಭೇದಿಸಿ ತನ್ನಿಂದ ತಾನೆ ತಿಳಿದು ನೋಡಲು, ಆದಿ ಸಂಬಂಧವಪ್ಪ ಭೂತಂಗಳು ನಾನಲ್ಲ. ದಶವಿಧೇಂದ್ರಿಯಂಗಳು ನಾನಲ್ಲ, ದಶವಾಯುಗಳು ನಾನಲ್ಲ. ಅಷ್ಟಮದಂಗಳು, ಸಪ್ತವ್ಯಸನಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು, ಷಡ್ಬ್ರಮೆಗಳು, ಷಡ್ಭಾವವಿಕಾರಂಗಳು, ಷಟ್ಕರ್ಮಂಗಳು, ಷಡ್ಧಾತುಗಳು, ತನುತ್ರಯಂಗಳು, ಜೀವತ್ರಯಂಗಳು, ಮಲತ್ರಯಂಗಳು, ಮನತ್ರಯಂಗಳು, ಗುಣತ್ರಯಂಗಳು, ಭಾವತ್ರಯಂಗಳು, ತಾಪತ್ರಯಂಗಳು, ಅಂತಃಕರಣಂಗಳು ಇಂತಿವಾದಿಯಾಗಿ ತೋರುವ ತೋರಿಕೆಯೇನೂ ನಾನಲ್ಲ, ನನ್ನವಲ್ಲ. ಇಂತಿವೆಲ್ಲವೂ ನನ್ನಾಧೀನವಾಗಿಪ್ಪವು ನಾನಿವರಾಧೀನದವನಲ್ಲ. ನಾನು ತೂರ್ಯ ತೂರ್ಯಾತೀತವಪ್ಪ ಸತ್ತು ಚಿತ್ತಾನಂದ ನಿತ್ಯಪರಿಪೂರ್ಣವಸ್ತುವೆ ತನ್ನಿರವೆಂದು ತಿಳಿಯೆ, ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದ ಬೆಸುಗೆ ಬಿಟ್ಟು ನಿರಾಳದಲ್ಲಿ ನಿಜವನೈದಲರಿಯದೆ ಮತ್ತೆಯುಂ ಭೌತಿಕ ತತ್ವಸಂಬಂಧಿಯಾಗಿ ಇರುತ್ತಿರಲು, ಇಂತೀ ತತ್ವದಾದಿ ತಾನೆಂತೆನಲು ಆ ಪರಬ್ರಹ್ಮವಪ್ಪ ನಿತ್ಯನಿರಾಳ ನಿಃಶೂನ್ಯಲಿಂಗವೆ ತನ್ನ ಲೀಲಾವಿಲಾಸದಿಂದ ತಾನೆ ಸುನಾದ ಬಿಂದು ಪ್ರಕಾಶ ತೇಜೋಮೂರ್ತಿಯಾಗಿ ನಿಂದು ಮಹಾಲಿಂಗವೆಂದೆನಿಸಿತ್ತು. ಆ ಮಹಾಲಿಂಗವೆ ಪಂಚಸಾದಾಖ್ಯವೆಂದೆನಿಸಿತ್ತು. ಆ ಪಂಚಸಾದಾಖ್ಯವೆ ಪಂಚಲಿಂಗ ಪ್ರಕಾಶವೆಂದೆನಿಸಿತ್ತು. ಆ ಪಂಚಲಿಂಗ ಪ್ರಕಾಶವೆ ಪಂಚಮುಖವೆಂದೆನಿಸಿತ್ತು. ಆ ಪಂಚಮುಖದಿಂದವೆ ಪಂಚಾಕ್ಷರಿಯುತ್ಪತ್ತಿ. ಆ ಪಂಚಾಕ್ಷರಿಯಿಂದವೆ ಪಂಚಕಲೆಗಳುತ್ಪತ್ತಿ. ಆ ಪಂಚಕಲೆಗಳಿಂದವೆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳುತ್ಪತ್ತಿ. ಆ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಗಳಿಂದವೆ ಪಂಚತನ್ಮಾತ್ರಂಗಳುತ್ಪತ್ತಿ. ಆ ಪಂಚತನ್ಮಾತ್ರಂಗಳಿಂದವೆ ಪಂಚಭೂತಂಗಳುತ್ಪತ್ತಿ. ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು. ಆ ಅಂಗಕ್ಕೆ ಜ್ಞಾನೇಂದ್ರಿಯಂಗಳು ಕರ್ಮೇಂದ್ರಿಯಂಗಳು ಪ್ರತ್ಯಂಗವೆಂದೆನಿಸಿತ್ತು. ಇಂತು ದೇಹ ಸಂಬಂಧಮಂ ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ, ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು ಎಲ್ಲಿಯಾಯಿತ್ತು ಅಲ್ಲಿಯೇ ಅಡಗಿಸಿ ಆ ಕಾಯದ ಪೂರ್ವಾಶ್ರಯವನಳಿದು ಮಹಾ ಘನಲಿಂಗವ ವೇಧಿಸಿ ಕೊಟ್ಟು, ಶಿವ ತಾನೆ ಗುರುವಾಗಿ ಬಂದು ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿ ಎಂತೆಂದಡೆ ಆತ್ಮಗೂಡಿ ಪಂಚಭೂತಂಗಳನೆ ಷಡ್ವಿಧ ಅಂಗವೆಂದೆನಿಸಿ, ಆ ಅಂಗಕ್ಕೆ ಆ ಕಲೆಗಳನೆ ಷಡ್ವಿಧ ಶಕ್ತಿಗಳೆಂದೆನಿಸಿ, ಆ ಶಕ್ತಿಗಳಿಗೆ ಷಡ್ವಿಧ ಭಕ್ತಿಯನಳವಡಿಸಿ, ಆ ಭಕ್ತಿಗಳಿಗೆ ಭಾವ ಜ್ಞಾನ ಮನ ಬುದ್ಧಿ ಚಿತ್ತ ಅಹಂಕಾರಂಗಳನೆ ಷಡ್ವಿಧ ಹಸ್ತಂಗಳೆಂದೆನಿಸಿ, ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ ಷಡ್ವಿಧ ಲಿಂಗಂಗಳೆಂದೆನಿಸಿ, ಆ ಮುಖಂಗಳಿಗೆ ತನ್ಮಾತ್ರಂಗಳನೆ ದ್ರವ್ಯಪದಾರ್ಥಂಗಳೆಂದೆನಿಸಿ, ಆ ದ್ರವ್ಯಪದಾರ್ಥಂಗಳು ಆಯಾಯ ಮುಖದ ಲಿಂಗಂಗಳಲ್ಲಿ ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ. ಅಂಗಸ್ಥಲಂಗಳಡಗಿ ತ್ರಿವಿಧ ಲಿಂಗಾಂಗಸ್ಥಲಂಗಳುಳಿದು ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ ಗುರುವಿನಲ್ಲಿ ಶುದ್ಧಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ, ಜಂಗಮದಲ್ಲಿ ಪ್ರಸಿದ್ಧಪ್ರಸಾದ. ಇಂತೀ ತ್ರಿವಿಧ ಪ್ರಸಾದವು ಏಕಾರ್ಥವಾಗಿ, ಮಹಾಘನ ಪರಿಪೂರ್ಣಪ್ರಸಾದವಳವಟ್ಟ ಶರಣ ಜ್ಞಾನಿಯಲ್ಲ, ಅಜ್ಞಾನಿ ಮುನ್ನವೇ ಅಲ್ಲ. ಶೂನ್ಯನಲ್ಲ, ನಿಃಶೂನ್ಯ ಮುನ್ನವೇ ಅಲ್ಲ. ದ್ವೈತಿಯಲ್ಲ, ಅದ್ವೈತಿ ಮುನ್ನವೇ ಅಲ್ಲ. ಇಂತೀ ಉಭಯಾತ್ಮಕ ತಾನೆಯಾಗಿ ? ಇದು ಕಾರಣ, ಇದರ ಆಗುಹೋಗು ಸಕೀಲಸಂಬಂಧವ ಚೆನ್ನಮಲ್ಲಿಕಾರ್ಜುನಯ್ಯಾ, ನಿಮ್ಮ ಶರಣರೇ ಬಲ್ಲರು.
--------------
ಅಕ್ಕಮಹಾದೇವಿ
ಅಯ್ಯಾ, ಗುರುವರನ ಹೊಂದಿ ಗುರುಪುತ್ರನಾದ ಬಳಿಕ ಅಕಸ್ಮಾತ್ ಆ ಗುರುವಿನಲ್ಲಿ ಅನಾಚಾರ ದುರಾಚಾರಗಳು ಮೈದೋರಿದಲ್ಲಿ, ಅವು ಸೂಕ್ಷ್ಮವಿದ್ದಡೆ ತಿದ್ದಿಕೊಳ್ಳಬೇಕು, ಸ್ಧೂಲವಿದ್ದಡೆ ಆ ಗುರುವ್ಯಕ್ತಿಯನುಳಿದು ತಾನರಿದ ಗುರುತತ್ವವ ನಂಬಿ ಸದಾಚಾರವ ಸಾಧಿಸುತ್ತಿರಬೇಕು. ಇಂತೀ ಆಚರಣೆಯೆ ನಿಮ್ಮ ಶರಣರಿಗೆ ಸದಾ ಸಮ್ಮತವಾಗಿರ್ಪುದು ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಗುರುವಿನಲ್ಲಿ ಗುಣವನರಸಿ ಕಡಿದುಹಾಕಿದಲ್ಲಿ ಎನಗೆ ಶುದ್ಧಪ್ರಸಾದ ಸಾಧ್ಯವಾಯಿತ್ತು. ಲಿಂಗದಲ್ಲಿ ಶಿಲೆಯನರಸಿ ಸುಟ್ಟು ಬಿಸಾಟಿದಲ್ಲಿ ಎನಗೆ ಸಿದ್ಧಪ್ರಸಾದ ಸಾಧ್ಯವಾಯಿತ್ತು. ಜಂಗಮದಲ್ಲಿ ಕುಲವನರಸಿ ಕೊಂದು ಹಾಕಿದಲ್ಲಿ ಎನಗೆ ಪ್ರಸಿದ್ಧಪ್ರಸಾದ ಸಾಧ್ಯವಾಯಿತ್ತು. ಇಂತು ಇವರ ದುರ್ಗುಣ ಕಠಿಣ ಅಕುಲವನರಸದೆ ಕೊಡುಕೊಳ್ಳೆ ಸಮರಸದೊಳಿರ್ದೆನಾದಡೆ ಕಡೆಯಿಲ್ಲದ ನರಕವೆಂಬ ಶ್ರುತಿ ಗುರುಸ್ವಾನುಭಾವದಿಂದರಿದು ನೂಂಕಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ಸಮರಸಪ್ರಸಾದಿಯಾಗಿರ್ದೆನಯ್ಯಾ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->