ಅಥವಾ

ಒಟ್ಟು 46 ಕಡೆಗಳಲ್ಲಿ , 9 ವಚನಕಾರರು , 11 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಯ್ಯ, ಇಂತು ನಿರಂಜನ ಮಹಾಲಿಂಗಾನುಭಾವಸೂತ್ರವ ಎರಡೆಂಬತ್ತೆಂಟುಕೋಟಿ ಹರಗುರು ವಾಕ್ಯಪ್ರಮಾಣವಚನಾನುಭಾವವ ಪ್ರಕಟಿಸಿ ಈ ಒಂದು ವಚನಾರ್ಥದಲ್ಲಿ ಅತಿಗೋಪ್ಯದಿಂದ ಅನಾದಿ ನಿಃಕಳಂಕ ನಿಶ್ಶೂನ್ಯ ನಿರಂಜನ ನಿರಾವಯ ಶರಣಸೂತ್ರವಿಡಿದು ನಿರಾಯಾಸಂ ಆಯಾಸಂಗಳೇನು ತೋರದೆ ಈ ವಚನಾರ್ಥದ ಆದಿ-ಅಂತ್ಯವನರುಹಿಸಿಕೊಟ್ಟೆವು ನೋಡ. ಆ ವಿಚಾರವೆಂತೆಂದಡೆ : ಶ್ರೀ ಮದ್ಗುರು ಕಾರುಣ್ಯವೇದ್ಯನು, ವಿಭೂತಿ-ರುದ್ರಾಕ್ಷಧಾರಕನು, ಪಂಚಾಕ್ಷರೀ ಭಾಷಾಸಮೇತನು, ಲಿಂಗಾಂಗಸಂಬಂದ್ಥಿ, ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ, ಪಾದೋದಕ-ಪ್ರಸಾದಗ್ರಾಹಕನು, ಗುರುಭಕ್ತಿ ಸಂಪನ್ನನು, ಏಕಲಿಂಗ ನಿಷ್ಠಾಪರನು, ಚರಲಿಂಗ ಲೋಲುಪ್ತನು, ಶರಣ ಸಂಗವೈಶ್ವರ್ಯನು, ತ್ರಿವಿಧಕ್ಕಾಯತನು, ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂದ್ಥಿ, ಅನ್ಯದೈವದ ಸ್ಮರಣೆಯ ಹೊದ್ದ, ಭವಿಸಂಗವ ಮಾಡ, ಭವಿಪಾಕವ ಕೊಳ್ಳ, ಪರಸ್ತ್ರೀಯರ ಬೆರಸ, ಪರಧನವನೊಲ್ಲ, ಪರನಿಂದ್ಯವನಾಡ, ಅನೃತವ ನುಡಿಯ, ಹಿಂಸೆಯ ಮಾಡ, ತಾಮಸಭಕ್ತರ ಸಂಗವಮಾಡ, ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಬ್ಥಿಮಾನ ಮುಂತಾದವೆಲ್ಲವ ಸಮರ್ಪಿಸಿ ಪ್ರಸಾದ ಮುಂತಾಗಿ ಭೋಗಿಸುವ, ಜಂಗಮನಿಂದ್ಯವ ಸೈರಿಸ, ಪ್ರಸಾದನಿಂದ್ಯವ ಕೇಳ, ಅನ್ಯರನಾಸೆಗೈಯ್ಯ, ಪಾತ್ರಾಪಾತ್ರವನರಿದೀವ, ಚತುರ್ವಿಧಪದವಿಯ ಹಾರೈಸ, ಅರಿಷಡ್ವರ್ಗಕ್ಕೆ ಅಳುಕ, ಕುಲಾದಿಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ, ಸಂಕಲ್ಪ-ವಿಕಲ್ಪವ ಮಾಡುವನಲ್ಲ, ಕಾಲೋಚಿತವ ಬಲ್ಲ, ಕ್ರಮಯುಕ್ತನಾಗಿ ಷಟ್‍ಸ್ಥಲಭರಿತ, ಸರ್ವಾಂಗಲಿಂಗಿ, ದಾಸೋಹಂ ಸಂಪನ್ನ ಇಂತೀ ಭಾವನ್ನದಿರವ ಅಂತರಂಗದಲ್ಲಿ ಒಳಕೊಂಡು ಬಹಿರಂಗದಲ್ಲಿ ನಡೆದಂತೆ ನುಡಿದು, ನುಡಿದಂತೆ ನಡದು, ಸದ್ಭಕ್ತಿ-ಜ್ಞಾನ-ವೈರಾಗ್ಯ ಸಂಪನ್ನತ್ವದಿಂದ ಸಕಲಪ್ರಮಥಗಣಂಗಳಿರುವ ಕೀರ್ತಿಸಿಕೊಳ್ಳುತ್ತ, ಆ ಆದಿಪ್ರಮಥರ ಕೀರ್ತನೆ ವಿಚಾರವೆಂತೆಂದಡೆ : ಶ್ರೀಮದನೇಕಲೋಕ-ವಿಸ್ತಾರಕ ಕಾರಣರೂಪ, ಸತ್ತಿಚಿತ್ತಾನಂದ ನಿತ್ಯಪರಿಪೂರ್ಣ ಅವಿರಳ ಪರಂಜ್ಯೋತಿಸ್ವರೂಪ, ಪರತರ ಪರಬ್ರಹ್ಮಾನುಭಾವ ಸಾರ್ವಭೌಮ, ಷಟ್ಸ್ಥಲಸ್ಥಾಪನಾಚಾರ್ಯ, ಪಂಚಾಚಾರ ಪ್ರಮಥನಾಯಕ ಸರ್ವಾಚಾರ ನಿಷ್ಠಾಗರಿಷ್ಠ, ಲಿಂಗಲೋಲುಪ್ತ, ಲಿಂಗಭೋಗೋಪಭೋಗಿ, ಜಂಗಮಾನುಭಾವ, ಸದ್ಭಕ್ತ ಹೃನ್ಮಂದಿರವಾಸ, ನಿತ್ಯ ಕಲ್ಯಾಣೋತ್ಸಹಪೂರ್ಣಾವತರ್ಯ, ಲಿಂಗಲೀಲಾನಂದ, ಏಕವಿಂಶತಿಯುಗಸ್ಥಾಪನಾಚಾರ್ಯವರ್ಯ, ಮಂಜುಳಾಂತರಂಗ, ಮನುಮುನಿವಂದ್ಯ, ಪ್ರದಾಯಕ ತ್ರೈದಶಪರ್ವತಾದ್ಥೀಶ್ವರ, ಮದನಮರ್ದನ, ಮಾಯಾಕೋಲಾಹಲ, ಅಷ್ಟಾವರಣ ಸ್ವರೂಪ, ತ್ರಿವಿಧಾನುಗ್ರಹ ಪ್ರತಿಪಾದಕ, ತ್ರಿವಿಧ ಪಾದೋದಕ ಪ್ರಸಾದಲೋಲುಪ್ತ, ತ್ರಿವಿಧಾಚಾರಸನ್ಮೋಹಿ, ತ್ರಿಗುಣಾನಂದಭರಿತ, ತ್ರಿಮಲದೂರ, ನಿರ್ಮಲ-ನಿಃಕಳಂಕ-ನಿಃಶೂನ್ಯ-ನಿರಂಜನ, ಅನುಮಿಷಾರಾಧ್ಯ, ತ್ರಿವಿಧ ಲಿಂಗಾನುಭಾವ ಅಖಿಳಾಂಡ ಪ್ರತಿಷ್ಠಾಪ್ರದಾಯಕ, ಸದ್ಧರ್ಮಸ್ವರೂಪ, ಸತ್ಕ್ರಿಯಾ ಸಮ್ಯಜ್ಞಾನ ಸದಾಭರಿತ, ನಿತ್ಯ ತೃಪ್ತಾನಂದಮಂತ್ರಸ್ವರೂಪ, ಅನಂತಸೂರ್ಯಚಂದ್ರಾಗ್ನಿಪ್ರಕಾಶ, ಅಜ್ಞಾನ ತಿಮಿರಾಂಧಸ್ಯ, ಕಾರಣಾವತಾರ ಸರ್ವಜ್ಞ ಪ್ರದಾಯಕ, ಕಾಮಧೇನು-ಕಲ್ಪವೃಕ್ಷ, ಚಿಂತಾಮಣಿಗೆ ಮಾತೃಸ್ವರೂಪ, ವಾಚಾತೀತ-ವರ್ಣಾತೀತ-ಭಾವಾತೀತ-ಜ್ಞಾನಾತೀತ, ಚಿತ್ಕಲಾಸ್ವರೂಪ, ಅಯೋನಿಸಂಭವ, ಅಜಡಸ್ವರೂಪ, ಬತ್ತೀಶಕಳಾಮೂರ್ತಿ, ಜರೆಮರಣ ಸಂಸ್ಕøತಿದೂರ, ವರವೀರಶೈವಮತ ಸ್ಥಾಪನಾಚಾರ್ಯ, ನಿಜ ಶಿವಯೋಗಭರಿತಾನಂದಮೂರ್ತಿ, ಗುರುಮಾರ್ಗಾಚಾರ ಪ್ರತಿಷ್ಠಾಪ್ರದಾಯಕ, ಅನಾಚಾರ ಸಂಹಾರ, ಮಹಿಮಾಸ್ವರೂಪ, ಸದ್ಭಕ್ತಜಿಹ್ವಾಗ್ರ ಹೃನ್ಮಂದಿರಾವಾಸ. ಏಕವಿಂಶತಿ ದೀಕ್ಷಾಬೋಧಸ್ವರೂಪ, ಷಡ್ಗುಣೈಶ್ವರ್ಯ ಸಂಪತ್ಕರವನುಳ್ಳ ಮುಕ್ತಿಪ್ರದಾಯಕ, ಮೂಲಮಂತ್ರಮೂರ್ತಿ ಲೋಕಪಾವನಾರ್ಥ ಕೂಡಲಸಂಗಮೇಶ್ವರನ ಚಿದ್ಗರ್ಭೋದಯ ಬಸವದಂಡನಾಥ ಪ್ರಮಥಗಣಂಗಳ ಭಕ್ತಿಹಿತಾರ್ಥವಾಗಿ, ಅವತರಿಸಿದಂಥ ವಿರಾಣ್ಮೂರ್ತಿ! ಅನಾದಿಗಣೇಶ್ವರ, ಅನಾದಿಗಣೇಶ್ವರನ ಶಿಷ್ಯರು ಆದಿಗಣೇಶ್ವರ, ಆದಿಗಣೇಶ್ವರನ ಶಿಷ್ಯರು ನಿರ್ಮಾಯವೆಂಬ ಗಣೇಶ್ವರ, ನಿರ್ಮಾಯನೆಂಬ ಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ, ನಿರಂಜನನೆಂಬ ಗಣೇಶ್ವರನ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರ, ಜ್ಞಾನಾನಂದನೆಂಬ ಗಣೇಶ್ವರನ ಶಿಷ್ಯರು ಆತ್ಮ ಗಣೇಶ್ವರ, ಆತ್ಮಗಣೇಶ್ವರನ ಶಿಷ್ಯರು ಆಧ್ಯಾತ್ಮ ಗಣೇಶ್ವರ, ಆಧ್ಯಾತ್ಮಗಣೇಶ್ವರನ ಶಿಷ್ಯರು ರುದ್ರನೆಂಬ ಗಣೇಶ್ವರ, ರುದ್ರನೆಂಬ ಗಣೇಶ್ವರನ ಶಿಷ್ಯರು ಬಸವಪ್ರಭುದೇವರು, ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು, ಆದಿಲಿಂಗದೇವರ ಶಿಷ್ಯರು ಚೆನ್ನವೀರೇಶ್ವರದೇವರು, ಚೆನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿ ಗೋಸಲದೇವರು, ಹರದನಹಳ್ಳಿ ಗೋಸಲದೇವರ ಶಿಷ್ಯರು ಶಂಕರದೇವರು, ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು, ದಿವ್ಯಲಿಂಗದೇವರ ಶಿಷ್ಯರು ಚೆನ್ನಬಸವೇಶ್ವರದೇವರು, ಚೆನ್ನಬಸವೇಶ್ವರದೇವರ ಶಿಷ್ಯರು ತೋಂಟದ ಸಿದ್ಧೇಶ್ವರಸ್ವಾಮಿಗಳು, ತೋಂಟದ ಶಿದ್ಧೇಶ್ವರಸ್ವಾಮಿಗಳ ಸಿಷ್ಯರು ಮರುಳಸಿದ್ಧೇಶ್ವರಸ್ವಾಮಿಗಳು, ಮರುಳಸಿದ್ಧೇಶ್ವರಸ್ವಾಮಿಗಳ ಶಿಷ್ಯರು ರೇವಣಸಿದ್ಧೇಶ್ವರಸ್ವಾಮಿಗಳು, ರೇವಣಸಿದ್ಧೇಶ್ವರಸ್ವಾಮಿಗಳ ಶಿಷ್ಯರು ಶಿವಲಿಂಗೇಶ್ವರಸ್ವಾಮಿಗಳು, ಶಿವಲಿಂಗೇಶ್ವರಸ್ವಾಮಿಗಳ ಶಿಷ್ಯರು ನಿರಂಜನೇಶ್ವರಸ್ವಾಮಿಗಳು, ನಿರಂರನೇಶ್ವರಸ್ವಾಮಿಗಳ ಶಿಷ್ಯರು ಮರಿಬಸವಲಿಂಗೇಶ್ವರಸ್ವಾಮಿಗಳು, ಮರಿಬಸವಲಿಂಗೇಶ್ವರಸ್ವಾಮಿಗಳ ಶಿಷ್ಯರು ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳು, ಸ್ವತಂತ್ರಸಿದ್ಧಲಿಂಗೇಶ್ವರಸ್ವಾಮಿಗಳ ಶಿಷ್ಯರು ಚೆನ್ನಮಲ್ಲೇಶ್ವರಸ್ವಾಮಿಗಳು ಚೆನ್ನಮಲ್ಲೇಶ್ವರಸ್ವಾಮಿಗಳ ಶಿಷ್ಯರು ಚೆನ್ನಂಜೇಶ್ವರಸ್ವಾಮಿಗಳು, ಚೆನ್ನಂಜೇಶ್ವರಸ್ವಾಮಿಗಳ ಶಿಷ್ಯರು ಗುರುಶಾಂತೇಶ್ವರಸ್ವಾಮಿಗಳು, ಗುರುಶಾಂತೇಶ್ವರಸ್ವಾಮಿಗಳ ಶಿಷ್ಯರು ಶಾಂತಮಲ್ಲಸ್ವಾಮಿಗಳು ಶಾಂತಮಲ್ಲಸ್ವಾಮಿಗಳ ಕರ-ಮನ-ಭಾವದಲ್ಲುದಯವಾದ ಗುರುಸಿದ್ಧಲಿಂಗ ನಾನಯ್ಯ. ಆ ಗುರುಸಿದ್ಧಲಿಂಗನ ಕರ-ಮನ-ಸುಭಾವದಲ್ಲಿ ಶರಣಗಣಂಗಳ ಶುದ್ಧಸಿದ್ಧಪ್ರಸಿದ್ಧ ಪ್ರಸಾದವಾಗಿ ಅಷ್ಟವಿಧಾರ್ಚನೆ-ಷೋಡಶೋಪಚಾರ-ಮಂತ್ರ-ಧ್ಯಾನ- ಜಪ-ಸ್ತೋತ್ರ-ಮನೋರ್ಲಯ-ನಿರಂಜನ ಪೂಜೆಯ ಕೈಕೊಂಡು ಪ್ರಮಥಗಣಂಗಳ ಸ್ವಾನುಭಾವಸೂತ್ರವನೊಳಕೊಂಡು ಒಳಗು ಬೆಳಗನೆ ನುಂಗಿ ಬೆಳಗು ಒಳಗನೆ ನುಂಗಿ, ಛಳಿ ಮೋಹಕದ ಮಂಜು ನುಂಗಿದಂತೆ ಹಲವು ದೀಪವ ಬಯಲ ಗಾಳಿ ನುಂಗಿದ ತೆರದಿ ಕಳೆಯಳಿದ ಕೂಡಲಚೆನ್ನಸಂಗಯ್ಯನು. ಇಂತು ಚಿಕ್ಕದಂಡನಾಥ ಚೆನ್ನಬಸವೇಶ್ವರಸ್ವಾಮಿಗಳ ಪ್ರಸನ್ನಪ್ರಸಾದಕ್ಕೆ ಒಪ್ಪಿಗೆಯಾಗಿ ಈ ವಚನಾನುಭಾವಶಾಸ್ತ್ರವ ಕೈಕೊಂಡು ಸದ್ಭಕ್ತಶರಣಗಣಂಗಳಿಗೆ ಬೋದ್ಥಿಸಿ ಸಂಪೂರ್ಣವಮಾಡುವುದಕ್ಕೆ ಕರ್ತುಗಳಾಗಿ ಒಪ್ಪುತಿರ್ಪಿರಿ ನೋಡ ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅನಾದಿಪರಶಿವನ ಶಿಷ್ಯ ಆದಿಶಂಭುವೆಂಬ ಗಣೇಶ್ವರ. ಆದಿಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ. ನಿರಂಜನನೆಂಬ ಗಣೇಶ್ವರನ ಶಿಷ್ಯರು ಆದಿ ಪಡುವಿಡಿ, ಅನಾದಿ ಪಡುವಿಡಿ, ಶಿವಸಿದ್ಧಪಡುವಿಡಿಯಪ್ರಭುವೆಂಬ ಗಣೇಶ್ವರ. ಪ್ರಭುವೆಂಬ ಗಣೇಶ್ವರನ ಶಿಷ್ಯರು ಮಹಾಂತಮಲ್ಲಿಕಾರ್ಜುನನೆಂಬ ಗಣೇಶ್ವರ. [ಮಹಾಂತ ಮಲ್ಲಿಕಾರ್ಜುನನ] ಶಿಷ್ಯರು ಜಾಲಹಳ್ಳಿಯ ಶಾಂತದೇವರು. ಜಾಲಹಳ್ಳಿಯ ಶಾಂತದೇವರ ಶಿಷ್ಯರು ಸಿದ್ಧಮಲ್ಲಿನಾಥೇಶ್ವರ. ಸಿದ್ಧಮಲ್ಲಿನಾಥೇಶ್ವರನ ಶಿಷ್ಯರು ಪಡುವಿಡಿಯ ರಾಚೇಶ್ವರ. ಪಡುವಿಡಿಯ ರಾಚೇಶ್ವರನ ಕರಕಮಲದಲ್ಲಿ ಉತ್ಪತ್ಯವಾದ ಶಿಶುವು ಹೇಮಗಲ್ಲ ಹಂಪ ನಾನಯ್ಯ. ಹೀಗೆ, ಅನಾದಿವಿಡಿದು ಬಂದ ಗುರು-ಶಿಷ್ಯ ಸಂಬಂಧ, ಅನಾದಿವಿಡಿದು ಬಂದ ಲಿಂಗ-ಜಂಗಮ, ಅನಾದಿವಿಡು ಬಂದ ಭಕ್ತಿ-ಜ್ಞಾನ-ವೈರಾಗ್ಯ. ಇದು ಸತ್ಯ, ಇದು ಸತ್ಯ ಎನ್ನಾಳ್ದ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅಯ್ಯಾ, ಏಳೇಳು ಜನ್ಮದಲ್ಲಿ ಶಿವಭಕ್ತನಾಗಿ ಬಾರದಿರ್ದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆ ! ನಿಮ್ಮ ಪ್ರಸಾದಕ್ಕಲ್ಲದೆ ಬಾಯ್ದೆರೆಯೆನಯ್ಯಾ. ಪ್ರಥಮಭವಾಂತರದಲ್ಲಿ ಶಿಲಾದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಭೃತ್ಯನ ಮಾಡಿ ಎನನ್ನಿರಿಸಿಕೊಂಡಿರ್ದಿರಯ್ಯಾ. ಎರಡನೆಯ ಭವಾಂತರದಲ್ಲಿ ಸ್ಕಂದನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಕಾರುಣ್ಯವ ಮಾಡಿರಿಸಿಕೊಂಡಿರ್ದಿರಯ್ಯಾ. ಮೂರನೆಯ ಭವಾಂತರದಲ್ಲಿ ನೀಲಲೋಹಿತನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಲೀಲಾವಿನೋದದಿಂದಿರಿಸಿಕೊಂಡಿರ್ದಿರಯ್ಯಾ. ನಾಲ್ಕನೆಯ ಭವಾಂತರದಲ್ಲಿ ಮನೋಹರನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಮನಃಪ್ರೇರಕನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಐದನೆಯ ಭವಾಂತರದಲ್ಲಿ ಕಾಲಲೋಚನನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ಸರ್ವಕಾಲಸಂಹಾರವ ಮಾಡಿಸುತ್ತಿರ್ದಿರಯ್ಯಾ. ಆರನೆಯ ಭವಾಂತರದಲ್ಲಿ ವೃಷಭನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮಗೇರಲು ವಾಹನವಾಗಲೆಂದಿರಿಸಿಕೊಂಡಿರ್ದಿರಯ್ಯಾ. ಏಳನೆಯ ಭವಾಂತರದಲ್ಲಿ ಬಸವದಣ್ಣಾಯಕನೆಂಬ ಗಣೇಶ್ವರನ ಮಾಡಿ, ಹೆಸರಿಟ್ಟು ಕರೆದು ನಿಮ್ಮ ಒಕ್ಕುದ ಮಿಕ್ಕುದಕ್ಕೆ ಯೋಗ್ಯನಾಗಲೆಂದಿರಿಸಿಕೊಂಡಿರ್ದಿರಯ್ಯಾ. ಇದು ಕಾರಣ ಕೂಡಲಸಂಗಮದೇವಾ, ನೀವು ಬರಿಸಿದ ಭವಾಂತರದಲ್ಲಿ ನಾನು ಬರುತಿರ್ದೆನಯ್ಯಾ. 4
--------------
ಬಸವಣ್ಣ
ಶುದ್ಧವೆ ತದ್ರೂಪವಾಗಿ ಬಾರನೆ ಅಂದು ಅನಾಹತನೆಂಬ ಗಣೇಶ್ವರನು ಬಂದೆನ್ನ ಜರಿಯನೆ? ಜರಿದರೆ ನೀನು ಕೊಟ್ಟ ತಲೆಯ ಹುಣ್ಣ ಕಣ್ಣೆಂದು ತೆರೆದು ಲಜ್ಜೆಗೆಡನೆ ಆನಾ ಗಣೇಶ್ವರನ ಕೈಯಲ್ಲಿ? ಶುದ್ಧಕಾತನೊಡೆಯ, ಸಿದ್ಧಕಾತನೊಡೆಯ, ಪ್ರಸಿದ್ಧಕಾತನೊಡೆಯ! ಒಪ್ಪಿಪ್ಪಾರು ಆತನ ಸೀಮೆ. ಮೂವತ್ತಾರರ ಮೇಲಿಂದಾತನ ಸಂಯೋಗ. ಇಂತಪ್ಪಾತನ ನೀನೆನ್ನಲರಿಯದೆ ನೊಂದೆ ಕೆಲವು ದಿನ. ಈ ನೋವ ಮಾಣಿಸಿದಾತನೂ ಆತನೆ, ಎನ್ನ ಭವವ ತಪ್ಪಿಸಿದಾತನೂ ಆತನೆ, ಆತನಿಂದ ಉರುತರ ಕೈವಲ್ಯಕ್ಕೆ ಕಾರಣಿಕನಾದೆ! ಆತನ ಪ್ರಸಾದದಿಂದ ನಿನ್ನವರ ಪಾದೋದಕ ಪ್ರಸಾದಕ್ಕೆ ಯೋಗ್ಯನಾದೆ. ಫಲಪದಕ್ಕೆ ದೂರವಾದೆ ಕಪಿಲಸಿದ್ಧಮಲ್ಲಿಕಾರ್ಜುನ, ಬಸವಣ್ಣನಿಂದ!
--------------
ಸಿದ್ಧರಾಮೇಶ್ವರ
ಹಿಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು. ಮುಂದೆ ಮುನ್ನೂರರವತ್ತು ಸಾವಿರ ಯುಗ ಹೋಯಿತ್ತು. ಇನ್ನೂ ಕೊಯ್ದಾನೆ ಪುಷ್ಪಂಗಳನು. ಉನ್ನತನೆಂಬ ಗಣೇಶ್ವರನ ಕರಡಗೆ ತುಂಬದು ನೋಡಾ ! ಇನ್ನೂ ಕೊಯ್ದಾನೆ ಪುಷ್ಪಂಗಳನು_ಆ ಕುಲಗಿರಿಗೆ ಮೇರುಗಿರಿ ಘನವೆಂದರಿಯರು. ಗುಹೇಶ್ವರಾ, ನಿಮ್ಮ ಮಹಿಮೆಯ ಹರಿಬ್ರಹ್ಮಾದಿಗಳೂ ಅರಿಯರು.
--------------
ಅಲ್ಲಮಪ್ರಭುದೇವರು
ನಿರವಯನೆಂಬ ಗಣೇಶ್ವರನ ಶಿಷ್ಯ ನಿರಾಮಯನೆಂಬ ಗಣೇಶ್ವರ. ನಿರಾಮಯನೆಂಬ ಗಣೇಶ್ವರನ ಶಿಷ್ಯ ನಿರಾಕುಳನೆಂಬ ಗಣೇಶ್ವರ. ನಿರಾಕುಳನೆಂಬ ಗಣೇಶ್ವರನ ಶಿಷ್ಯ ನಿರ್ಭೇದ್ಯನೆಂಬ ಗಣೇಶ್ವರ. ನಿರ್ಭೇದ್ಯನೆಂಬ ಗಣೇಶ್ವರನ ಶಿಷ್ಯ ನಿರ್ಮಳ ನಿಜೈಕ್ಯನೆಂಬ ಗಣೇಶ್ವರ. ನಿರ್ಮಳ ನಿಜೈಕ್ಯನೆಂಬ ಗಣೇಶ್ವರನ ಶಿಷ್ಯ ನಿರ್ಭಾವ ನಿಃಪುರುಷ ನಿರಂಜನನೆಂಬ ಗಣೇಶ್ವರ. ನಿರ್ಭಾವ ನಿಃಪುರುಷ ನಿರಂಜನನೆಂಬ ಗಣೇಶ್ವರನ ಶಿಷ್ಯ ನಿರಾಕಾರ ನಿರಾವರಣನೆಂಬ ಗಣೇಶ್ವರ. ನಿರಾಕಾರ ನಿರಾವರಣನೆಂಬ ಗಣೇಶ್ವರನ ಶಿಷ್ಯ ನಿರುಪಮನೆಂಬ ಗಣೇಶ್ವರ. ನಿರುಪಮನೆಂಬ ಗಣೇಶ್ವರನ ಶಿಷ್ಯ ನಿರ್ಗುಣ ನಿರಾಧಾರ ನಿರಾಲಂಬನೆಂಬ ಗಣೇಶ್ವರ. ನಿರ್ಗುಣ ನಿರಾಧಾರ ನಿರಾಲಂಬನೆಂಬ ಗಣೇಶ್ವರನ ಶಿಷ್ಯ ಸರ್ವಾಧಾರ ಸದಾಶಿವನೆಂಬ ಗಣೇಶ್ವರ. ಸರ್ವಾಧಾರ ಸದಾಶಿವನೆಂಬ ಗಣೇಶ್ವರರ ಸ್ವರೂಪರಾದಂಥ ಆದಿನಾಥೇಶ್ವರದೇವರು. ಆದಿನಾಥೇಶ್ವರದೇವರ ಶಿಷ್ಯರು ಸತ್ಯೇಶ್ವರದೇವರು. ಸತ್ಯೇಶ್ವರದೇವರ ಶಿಷ್ಯರು ಘಟಯಂತ್ರದೇವರು. ಘಟಯಂತ್ರದೇವರ ಶಿಷ್ಯರು ಭೃಕುಟೇಶ್ವರದೇವರು. ಭೃಕುಟೇಶ್ವರದೇವರ ಶಿಷ್ಯರು ವಿಶ್ವೇಶ್ವರದೇವರು. ವಿಶ್ವೇಶ್ವರದೇವರ ಶಿಷ್ಯರು ಮುಕ್ತೇಶ್ವರದೇವರು. ಮುಕ್ತೇಶ್ವರದೇವರ ಶಿಷ್ಯರು ಬ್ರಹ್ಮೇಶ್ವರದೇವರು. ಬ್ರಹ್ಮೇಶ್ವರದೇವರ ಶಿಷ್ಯರು ಶಿವದೇವಯ್ಯನವರು. ಶಿವದೇವಯ್ಯನವರ ಶಿಷ್ಯರು ಶಿವಜ್ಞಾನೇಶ್ವರದೇವರು. ಶಿವಜ್ಞಾನೇಶ್ವರದೇವರ ಶಿಷ್ಯರು ಓಂಕಾರದೇವರು. ಓಂಕಾರದೇವರ ಶಿಷ್ಯರು ಸೋಮಲಿಂಗದೇವರು. ಸೋಮಲಿಂಗದೇವರ ಶಿಷ್ಯರು ಸಂಗಮೇಶ್ವರದೇವರು. ಸಂಗಮೇಶ್ವರದೇವರ ಕರಕಮಲದಲ್ಲಿ ಉತ್ಪತ್ಯವಾದ ಶಿಶುವು ಕಾಡಸಿದ್ಧ ನಾನಯ್ಯ. ಹಾಂಗೆಂದು ಅನಾದಿವಿಡಿದು ಬಂದ ಗುರುಶಿಷ್ಯಸಂಬಂಧ, ಹಾಂಗೆ ಅನಾದಿವಿಡಿದು ಬಂದ ಲಿಂಗ, ಅನಾದಿವಿಡಿದು ಬಂದ ಜಂಗಮ, ಅನಾದಿವಿಡಿದು ಬಂದ ಪಾದೋದಕ-ಪ್ರಸಾದ, ಅನಾದಿವಿಡಿದು ಬಂದ ವಿಭೂತಿ-ರುದ್ರಾಕ್ಷಿ-ಮಂತ್ರ, ಅನಾದಿವಿಡಿದು ಬಂದ ಭಕ್ತಿ-ಜ್ಞಾನ-ವೈರಾಗ್ಯ. ಅನಾದಿವಿಡಿದು ಬಂದ ವೀರಶೈವಷಟ್‍ಸ್ಥಲದ ಆಚಾರವು. ಕಾಡನೊಳಗಾದ ಶಂಕರಪ್ರಿಯ ಚೆನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಬ್ರಹ್ಮದೇವರಾದಡೆ ಬ್ರಹ್ಮನವಾಹನ ಹಂಸ ಹಂಸನಲ್ಲಿ ಹರ[ಗಿ] ಬೆಳದುಂಡನೆ ? ವಿಷ್ಣು ದೇವರಾದಡೆ ವಿಷ್ಣುವಿನ ವಾಹನ ಗರುಡ ಗರುಡನಲ್ಲಿ ಹರ[ಗಿ] ಬೆಳದುಂಡನೆ ? ಇಂದ್ರ ದೇವರಾದಡೆ ಇಂದ್ರನ ವಾಹನ ಆನೆ ಆನೆಯಲ್ಲಿ ಬಿತ್ತಿ ಬೆಳದುಂಡನೆ ? ಮೈಲಾರ ದೇವರಾದಡೆ ಮೈಲಾರನ ವಾಹನ ಕುದುರೆ ಕುದುರೆಯಲ್ಲಿ ಬಿತ್ತಿ ಬೆಳದುಂಡನೆ ? ಜಿನ್ನ ದೇವರಾದಡೆ ಜಿನ್ನನ ವಾಹನ ಕತ್ತೆ ಕತ್ತೆಯಲ್ಲಿ ಬಿತ್ತಿ ಬೆಳದುಂಡನೆ ? ಭೈರವ ದೇವರಾದಡೆ ಭೈರವನ ವಾಹನ ಚೇಳು ಚೇಳಿನಲ್ಲಿ ಬಿತ್ತಿ ಬೆಳದುಂಡನೆ ? ಗಣೇಶ್ವರ ದೇವರಾದಡೆ ಗಣೇಶ್ವರನ ವಾಹನ ಇಲಿ ಇಲಿಯಲ್ಲಿ ಬಿತ್ತಿ ಬೆಳದುಂಡನೆ ? ದೇವರಲ್ಲವೆನಲಾರೆನು ಮತ್ತೆ ದೇವರೆಂಬುದು ಸತ್ಯ. ಅದೆಂತೆಂದಡೆ ಗಣೇಶಗೆ ಈಶ್ವರನ ಹೆಸರುಂಟು, ಅದು ಹೇಗೆ ಗಣೇಶ್ವರ ? ಮತ್ತೆ ಅದೆಲ್ಲದೆ ಪಾರ್ವತಿಗೆ ಮೋಹದ ಕುಮಾರ. ಅದಲ್ಲದೆ ಜಿತೇಂದ್ರಿ. ಸರ್ವಜಗಕೆ ವಿದ್ಯೆ ಬುದ್ಧಿಯಂ ಕೊಡುವನು, ಅದರಿಂದ ಸತ್ಯನು. ಒಂಕಾರ ವಸ್ತುವೆ ಸಾಕ್ಷಿಯಾಗಿ ಮತ್ತಂ ನಮ್ಮ ಸದಾಶಿವನ ವಾಹನ ಬಸವಣ್ಣ. ಬಸವಣ್ಣನ ಬಿರಿದೆಂತೆಂದರೆ ಸಪ್ತಸಮುದ್ರ ಜಲಪ್ರಳಯಕ್ಕೆ ಹೆಪ್ಪಕೊಟ್ಟ ಕಾರುಣ್ಯದಲ್ಲಿ ಎತ್ತೆಂಬ ಶಬ್ದಾಯಿತ್ತು. ಎತ್ತ ನೋಡಿದಡತ್ತ ತನ್ನಲಿಂದುತ್ಪತ್ಯವಾಯಿತೆಂಬ ಶಬವೆತ್ತಾಯಿತ್ತು. ತನ್ನಿಂದ ಹರಗಿ ಬಿತ್ತಿ ಬೆಳೆಯಲಿಕೆ ಪವಿತ್ರಸ್ವಾಮಿಗೆ ನೈವೇದ್ಯವಾಯಿತ್ತು . ಹಸ್ತಪರುಷವ ಮಾಡಲಿಕೆ ಘನವರುಷ ಪ್ರಸಾದವಾಯಿತ್ತು. ಇಂತಿರ್ದ ನಮ್ಮ ಬಸವನ ಪ್ರಸಾದವನುಂಡು ನನ್ನ ದೇವರು ಹೆಚ್ಚು ತನ್ನ ದೇವರು ಹೆಚ್ಚು ಎಂದು ಕಚ್ಚಾಡುವ ಕುನ್ನಿ ಮೂಕೊರೆ ಮೂಳ ಹೊಲೆಯರಿಗೆ ಏನೆಂಬೆನಯ್ಯಾ ಗುರು ವಿಶ್ವೇಶ್ವರಾ.
--------------
ವರದ ಸೋಮನಾಥ
ಕೇಳಿ ಕೇಳಿರಯ್ಯಾ ಮತ್ರ್ಯಲೋಕದ ಮಹಾಗಣಂಗಳು ನೀವೆಲ್ಲ. ನಾವು ನಮ್ಮ ಲಿಂಗದೊಳಗೆ ಅಂಗಸಹಿತ ಐಕ್ಯವಾಗುವ ಠಾವ ಹೇಳಿಹೆವು ಕೇಳಿರಯ್ಯಾ ! ಕೇಳಿರಯ್ಯಾ, ಏಕಚಿತ್ತರಾಗಿ ಲಾಲಿಸಿರಯ್ಯಾ. ಷಣ್ಮುಖನೆಂಬ ಗಣೇಶ್ವರನ ಹೃದಯಕಮಲದಲ್ಲಿ ಸದಾನಂದನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಸದಾನಂದನೆಂಬ ಗಣೇಶ್ವರನ ಹೃದಯಕಮಲಕರ್ಣಿಕದಲ್ಲಿ ವಿಶ್ವತೋಮುಖನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ವಿಶ್ವತೋಮುಖನೆಂಬ ಗಣೇಶ್ವರನ ಹೃದಯಕಮಲದಲ್ಲಿ ಆದಿನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಆದಿನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅನಾದಿನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅನಾದಿನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ ಗೋಳಕನಾಥನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಗೋಳಕನಾಥನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಗಮ್ಮೇಶ್ವರನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಗಮ್ಮೇಶ್ವರನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಖಂಡೇಶ್ವರನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಖಂಡೇಶ್ವರನೆಂಬ ಗಣೇಶ್ವರನ ಹೃದಯಕಮಲದಲ್ಲಿ ಜ್ಯೋತಿರ್ಮಯನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಜ್ಯೋತಿರ್ಮಯನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಭೇದ್ಯನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಭೇದ್ಯನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅಪ್ರಮಾಣನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅಪ್ರಮಾಣನೆಂಬ ಗಣೇಶ್ವರನ ಹೃದಯಕಮಲದಲ್ಲಿ ಅವಾಚ್ಯಾತ್ಮಕನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಅವಾಚ್ಯಾತ್ಮಕನೆಂಬ ಗಣೇಶ್ವರನ ಹೃದಯಕಮಲದಲ್ಲಿ ಸರ್ವಶೂನ್ಯ ನಿರಾಲಂಬನೆಂಬ ಗಣೇಶ್ವರನು ಮೂರ್ತಿಗೊಂಡಿರ್ಪನು. ಆ ಸರ್ವಶೂನ್ಯ ನಿರಾಲಂಬನೆಂಬ ಗಣೇಶ್ವರನ ಹೃದಯಕಮಲಮಧ್ಯದ ಮಹಾಬಯಲೊಳಗೆ ನಮ್ಮ ಅಖಂಡೇಶ್ವರಲಿಂಗಸಹಿತ ನಿರವಯಲಾಗಿ ಮರಳಿ ಇತ್ತ ಬಾರದಿರ್ಪೆವು ಕೇಳಿರಯ್ಯಾ.
--------------
ಷಣ್ಮುಖಸ್ವಾಮಿ
ಅನಾದಿಗಣೇಶ್ವರನ ಶಿಷ್ಯ ಆದಿಗಣೇಶ್ವರ. ಆದಿಗಣೇಶ್ವರನ ಶಿಷ್ಯ ನಿರ್ಮಾಯನೆಂಬ ಗಣೇಶ್ವರ. ನಿರ್ಮಾಯನೆಂಬ ಗಣೇಶ್ವರನ ಶಿಷ್ಯರು ನಿರಂಜನನೆಂಬ ಗಣೇಶ್ವರ. ನಿರಂಜನನೆಂಬ ಗಣೇಶ್ವರನ ಶಿಷ್ಯರು ಜ್ಞಾನಾನಂದನೆಂಬ ಗಣೇಶ್ವರನು. ಜ್ಞಾನಾನಂದನೆಂಬಗಣೇಶ್ವರನ ಶಿಷ್ಯರು ಆತ್ಮಗಣೇಶ್ವರನು. ಆತ್ಮಗಣೇಶ್ವರನ ಶಿಷ್ಯರು ಅಧ್ಯಾತ್ಮಗಣೇಶ್ವರ. ಅಧ್ಯಾತ್ಮಗಣೇಶ್ವರನ ಶಿಷ್ಯರು ರುದ್ರನೆಂಬ ಗಣೇಶ್ವರ. ರುದ್ರನೆಂಬ ಗಣೇಶ್ವರನ ಶಿಷ್ಯರು ಬಸವಪ್ರಭುದೇವರು. ಬಸವಪ್ರಭುದೇವರ ಶಿಷ್ಯರು ಆದಿಲಿಂಗದೇವರು. ಆದಿಲಿಂಗದೇವರ ಶಿಷ್ಯರು ಚೆನ್ನವೀರೇಶ್ವರದೇವರು. ಚೆನ್ನವೀರೇಶ್ವರದೇವರ ಶಿಷ್ಯರು ಹರದನಹಳ್ಳಿಯ ಗೋಸಲದೇವರು. ಹರದನಹಳ್ಳಿಯ ಗೋಸಲದೇವರ ಶಿಷ್ಯರು ಶಂಕರದೇವರು. ಶಂಕರದೇವರ ಶಿಷ್ಯರು ದಿವ್ಯಲಿಂಗದೇವರು. ದಿವ್ಯಲಿಂಗದೇವರ ಶಿಷ್ಯರು ಚೆನ್ನಬಸವೇಶ್ವರದೇವರು. ಚೆನ್ನಬಸವೇಶ್ವರದೇವರ ಕರಕಮಲದಲ್ಲಿ ಉತ್ಪತ್ತಿಯಾದ ಶಿಶು ಸಿದ್ಧಲಿಂಗ ನಾನಯ್ಯ. ಹೀಂಗೆ ಅನಾದಿವಿಡಿದು ಬಂದ ಗುರು ಅನಾದಿವಿಡಿದು ಬಂದ ಲಿಂಗ ಅನಾದಿವಿಡಿದು ಬಂದ ಜಂಗಮ ಅನಾದಿವಿಡಿದು ಬಂದ ಗುರು-ಶಿಷ್ಯ ಸಂಬಂಧ ಅನಾದಿವಿಡಿದು ಬಂದ ಪಾದೋದಕ-ಪ್ರಸಾದ ಅನಾದಿವಿಡಿದು ಬಂದ ಭಕ್ತಿ-ಜ್ಞಾನ-ವೈರಾಗ್ಯ ಅನಾದಿ ಸಂಸಿದ್ಧವಾದ ವೀರಶೈವಾಚಾರಸಂಪತ್ತು, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಜಲ ಕೂರ್ಮ ನಾಗ ಮೇದಿನಿ ಸಪ್ತಸಾಗರ ಅಜಾಂಡ ಹರಿವಿರಂಚಿಗಳು ನಿಮ್ಮ ಉದರದ ಕೊನೆಯ ಪ್ರಾಣಿಗಳಯ್ಯಾ. ಕೂಡಲಸಂಗನ ಮಹಾಮನೆಯಲ್ಲಿ ಅಸ್ತಿಗ್ರಾಹಕನೆಂಬ ಗಣೇಶ್ವರನ ಇಚ್ಛಾಮಾತ್ರದಿಂದ ಜಗಜುಗವಯ್ಯಾ.
--------------
ಬಸವಣ್ಣ
ಆದಿಯ ಲಿಂಗವ ತೋರಿದ ಅನಿಮಿಷನ ಕಂಡೆನಯ್ಯಾ ಇಂದು. ಕೃತಯುಗದ ಸ್ಕಂದನೆಂಬ ಗಣೇಶ್ವರನ ಕಂಡೆನಯ್ಯಾ ಇಂದು. ತ್ರೇತಾಯುಗದ ನೀಲಲೋಹಿತನೆಂಬ ಗಣೇಶ್ವರನ ಕಂಡೆನಯ್ಯಾ ಇಂದು. ದ್ವಾಪರಯುಗದ ವೃಷಭನೆಂಬ ಗಣೇಶ್ವರನ ಕಂಡೆನಯ್ಯಾ ಇಂದು. ಕಲಿಯುಗದಲ್ಲಿ ಅನಿಮಿಷಬಸವನೆಂಬ ಗಣೇಶ್ವರನ ಕಂಡೆನಯ್ಯಾ ಇಂದು. ಎನ್ನ ಕಂಡವರನೂ, ನಿನ್ನ ಕಂಡವರನೂ, ಇಂದು ಕಂಡೆ ಕಾಣಾ ಗುಹೇಶ್ವರಾ
--------------
ಅಲ್ಲಮಪ್ರಭುದೇವರು
-->