ಇಂತಪ್ಪ ರುದ್ರಾಕ್ಷಿಯನು ಅಂತರಂಗ ಬಹಿರಂಗದಲ್ಲಿ
ಧರಿಸಿ ಆಚರಿಸಲರಿಯದೆ
ಬಹಿರಂಗದಲ್ಲಿ ಕ್ರೀಯವಿಟ್ಟು
ಹಸ್ತ, ತೋಳು, ಕಂಠ, ಕರ್ಣ, ಉತ್ತಮಾಂಗ, ಶಿಖೆ,
ಕಕ್ಷೆಯಲ್ಲಿ ಧರಿಸಿದವರಿಗೆ
ಪುಣ್ಯಫಲಪ್ರಾಪ್ತಿಯಾಗುವುದಲ್ಲದೆ ಭವ ಹಿಂಗದು ನೋಡಾ.
ಇಂತಪ್ಪ ಮೂಢಾತ್ಮರು ರುದ್ರಾಕ್ಷಿಯನು ಧರಿಸಿದ
ಆಚಾರವೆಂತೆಂದಡೆ:
ಔಡಲಗಿಡಕ್ಕೆ ಔಡಲಗೊನಿ ಬಿಟ್ಟಂತಾಯಿತು ನೋಡಾ.
ಇಂತಪ್ಪ ನಿರ್ಣಯವನು ಸುಜ್ಞಾನಿ ಶರಣನು
ತನ್ನ ಪರಮಜ್ಞಾನದಿಂದ ವಿಸರ್ಜಿಸಿ,
ಹಿಂದೆ ಹೇಳಿದ ವಚನದ ನಿರ್ಣಯವನು ತಿಳಿದು,
ತನ್ನ ಸರ್ವಾಂಗದಲ್ಲಿ ರುದ್ರಾಕ್ಷಿಯ ಧರಿಸಿ
ಚಿದ್ಘನಲಿಂಗದಲ್ಲಿ ನಿರ್ವಯಲಾದನು ನೋಡಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.