ಮತ್ತಂ, ಸಾಕಲ್ಯಪ್ರಣವ ನಿರೂಪಣಾನಂತರದಲ್ಲಿ
ಪಂಚಮಾತ್ರಾಸಮನ್ವಿತಮಾದ ಶಾಂಭವಪ್ರಣವವಂ ಪೇಳ್ದೆನೀ
ಪಂಚಪ್ರಣವಂಗಳ್ಗೆಯುಂ ಹ ಎಂಬಕ್ಕರಂ ಪ್ರಸಿದ್ಧಂ.
ತದನಂತರದೊಳ್ಸೌಖ್ಯಪ್ರಣವ ಭೇದಮಂ ಪೇಳ್ವೆನೆಂತೆನೆ
ವರ್ಗಾದಿ ಸಂಜ್ಞಿತವಾದ ಅಕಾರಂ
ಪಂಚಮಸ್ವರ ಸಂಜ್ಞಿತವಾದ ಉಕಾರಂ
ಷಷ್ವವರ್ಗಾಂತ ಸಂಜ್ಞಿತವಾದ ಮಕಾರಂ
ಬೀಜಸಂಜ್ಞಿತವಾದ ಹಕಾರಂ
ತೃತೀಯ ಸ್ವರಸಂಜ್ಞಿತವಾದ ಇಕಾರಂ
ಇಂತು ಅ ಉ ಮ ಹ ಇ ಐದಕ್ಕರಂಗೂಡಿದ
ಸೌಖ್ಯಪ್ರಣವಂ
ಸದಾಶಿವನ ಪಶ್ಚಿಮವದನದೊಳುಣ್ಮಿದುದು.
ಮತ್ತಂ, ಸಾವಶ್ಯಪ್ರಣವವೆಂತೆನೆ-
ಅಕಾರಂ ಸ್ವರಪಂಚಮಾಂತ ಸಂಜ್ಞಿತವಾ ಉಕಾರಂ.
ಪವರ್ಗಾಂತರವಾದ ಮಕಾರಂ ತತ್ವಬೀಜಸಂಜ್ಞಿತವಾದ
ಹಕಾರಂ,
ಏಕಾದಶಕಲಾ ಸಂಜ್ಞಿತವಾದ ಎಕಾರಂ,
ಇಂತು ಆ ಉ ಹ ಎ ಯೇಂಬೀಯೈದಕ್ಕರಂಗೂಡಿದ
ಸಾವಶ್ಯಪ್ರಣವಂ,
ಸದಾಶಿವನ ಸೌಮ್ಮಮುಖದೊಳಾವಿರ್ಭಾವವಾಯಿತ್ತು.
ಮತ್ತಂ, ಸಾಯಜ್ಯಪ್ರಣವವೆಂತೆನೆ-
ಆದಿಪ್ರಕೃತಿಸಂಜ್ಞಿತಮಾದ ಆಕಾರಂ
ಸ್ವರಪಂಚಮಾಂತಮಾದ ಉಕಾರಂ
ಷಡ್ವರ್ಗಾಂತವಾದ ಮಕಾರಂ
ಗುಹ್ಯಸಂಜ್ಞಿತವಾದ ಹಕಾರಂ
ಚತುರ್ದಶಕಲಾಸಂಜ್ಞಿತವಾದ ಔಕಾರಂ.
ಇಂತು ಆ ಉ ಮ ಹ ಔ ಯೆಂಬೀಯೈದಕ್ಕರಂಗೂಡಿದ
ಸಾಯುಜ್ಯಪ್ರಣವವವೆ,
ಸದಾಶಿವನೂಧ್ರ್ವಮುಖದೊಳುದಿಸಿತ್ತೀ
ಈ ತೆರದಿಂ ಪಂಚಪ್ರಣವಂಗಳಕ್ಕರಂಗಳ್ಸಂಖ್ಯಾಯುಕ್ತಂಗಳಾಗಿರ್ಕುಮಾ
ಸಕಲಮಾತ್ರಾಂತಸ್ಥಮಾಗಿ ಹ ಎಂಬಕ್ಕರಮೆ ಗಣ್ಯಮಾಗಿರ್ಪುದೆಂದು
ಪಂಚಪ್ರಣವಭೇದಮಂ ನಿರೂಪಿಸಿದೆಯಯ್ಯಾ,
ಪರಮ ಶಿವಲಿಂಗಯ್ಯ.