ಹರನೆಂಟಂಗದ ಹರಿಯಲ್ಲಿ ತಿರುಗುವ
ನರಪತಿಯನೊತ್ತಿಕೊಂಡ ಕರಿಗಮನೆ ನಾನು.
ಇರವರಿಯದವರ ನೋಡುವೆ,
ಎನಗೊಲಿದವರ ಕಾಡುವೆ, ಎನ್ನ ಸೋಂಕಿದವರಿಗೆ ಹಾಕುವೆ,
ಎನ್ನ ನೆನೆದವರ ಅನುಗೆಡಿಸುವೆ,
ನೋಡುವವರ ಕಣ್ಣ ತಿರುಹುವೆ,
ನಾಡ ಹಿಡಿದು ನಡೆವವರ ಹಂತಿಯ ಕಟ್ಟಿ ತುಳಿಸಿಹಾಕುವೆ.
ನಾನಂಜಿ ಓಡುವೆ ನಿರಂಜನ ಚನ್ನಬಸವಲಿಂಗ ಶರಣರ ಸುಳುಹು ಕಂಡರೆ.