ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಯ ಸಂಗದಿಂದ ಆದವನಲ್ಲ, ಅನಾದಿಯ ಸಂಗದಿಂದ ಆದವನಲ್ಲ, ಆದಿ ಅನಾದಿಯನೊಳಗೊಂಡು ತಾನು ತಾನಾಗಿರ್ದನಯ್ಯ ಆ ಶರಣನು. ಆಧಾರವಿಡಿದು ಭಕ್ತನಾಗಿ, ಆಚಾರಲಿಂಗವ ನೆಲೆಯಂಗೊಂಡುದೆ ಆಚಾರಲಿಂಗವೆಂಬೆನಯ್ಯ. ಸ್ವಾಧಿಷಾ*ನವಿಡಿದು ಮಹೇಶ್ವರನಾಗಿ ಗುರುಲಿಂಗವ ನೆಲೆಯಂಗೊಂಡುದೆ ಶಿವಲಿಂಗವೆಂಬೆನಯ್ಯ. ಮಣಿಪೂರಕವಿಡಿದು ಪ್ರಸಾದಿಯಾಗಿ ಶಿವಲಿಂಗವ ನೆಲೆಯಂಗೊಂಡುದೆ ಶಿವಲಿಂಗವೆಂಬೆನಯ್ಯ. ಅನಾಹತವಿಡಿದು ಪ್ರಾಣಲಿಂಗಿಯಾಗಿ ಜಂಗಮಲಿಂಗವ ನೆಲೆಯಂಗೊಂಡುದೆ ಜಂಗಮಲಿಂಗವೆಂಬೆನಯ್ಯ. ವಿಶುದ್ಧಿವಿಡಿದು ಶರಣನಾಗಿ ಪ್ರಸಾದಲಿಂಗವ ನೆಲೆಯಂಗೊಂಡುದೆ ಪ್ರಸಾದಲಿಂಗವೆಂಬೆನಯ್ಯ. ಆಜ್ಞೇಯವಿಡಿದು ಐಕ್ಯನಾಗಿ ಮಹಾಲಿಂಗವ ನೆಲೆಯಂಗೊಂಡುದೆ ಮಹಾಲಿಂಗವೆಂಬೆನಯ್ಯ. ಬ್ರಹ್ಮರಂಧ್ರವಿಡಿದು ಮಹಾಜ್ಞಾನಿಯಾಗಿ ಚಿಲ್ಲಿಂಗವ ನೆಲೆಯಂಗೊಂಡುದೆ ಚಿಲ್ಲಿಂಗವೆಂಬೆನಯ್ಯ. ಶಿಖಾವಿಡಿದು ಸ್ವಯಜ್ಞಾನಿಯಾಗಿ ಚಿದಾನಂದಲಿಂಗವ ನೆಲೆಯಂಗೊಂಡುದೆ ಚಿದಾನಂದಲಿಂಗವೆಂಬೆನಯ್ಯ. ಪಶ್ಚಿಮವಿಡಿದು ನಿರಂಜನನಾಗಿ ಚಿನ್ಮಯಲಿಂಗವ ನೆಲೆಯಂಗೊಂಡುದೆ ಚಿನ್ಮಯಲಿಂಗವೆಂಬೆನಯ್ಯ. ಅಣುಚಕ್ರವಿಡಿದು ಪರಿಪೂರ್ಣನಾಗಿ ಓಂಕಾರಲಿಂಗವ ನೆಲೆಯಂಗೊಂಡುದೆ ಓಂಕಾರಲಿಂಗವೆಂಬೆನಯ್ಯ. ನಿಷ್ಪತಿವಿಡಿದು ನಿಃಕಲನಾಗಿ ನಿರವಯಲಿಂಗವ ನೆಲೆಯಂಗೊಂಡುದೆ ನಿರವಯಲಿಂಗವೆಂದೆಂಬೆನಯ್ಯ. ಇಂತಪ್ಪ ಸುಖವ ನಿಮ್ಮಮಹಾಶರಣರೆ ಬಲ್ಲರಲ್ಲದೆ ಉಳಿದಾದವರು ಇವರೆತ್ತ ಬಲ್ಲರಯ್ಯ, ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಸ್ಥಳ ಕುಳವನರಿಯಬೇಕೆಂಬರು, ಭಕ್ತನಾಗಿ ಮಾಹೇಶ್ವರನಾಗಬೇಕೆಂಬರು. ಮಾಹೇಶ್ವರನಾಗಿ ಪ್ರಸಾದಿಯಾಗಬೇಕೆಂಬರು. ಪ್ರಸಾದಿಯಾಗಿ ಪ್ರಾಣಲಿಂಗಿಯಾಗಬೇಕೆಂಬರು. ಪ್ರಾಣಲಿಂಗಿಯಾಗಿ ಶರಣಾಗಬೇಕೆಂಬರು. ಶರಣನಾಗಿ ಐಕ್ಯನಾಗಬೇಕೆಂಬರು. ಐಕ್ಯ ಏತರಿಂದ ಕೂಟ ? ನಾನರಿಯೆ. ಒಳಗಣ ಮಾತು, ಹೊರಹೊಮ್ಮಿಯಲ್ಲದೆ ಎನಗೆ ಅರಿಯಬಾರದು. ಎನಗೆ ಐಕ್ಯನಾಗಿ ಶರಣಾಗಬೇಕು, ಶರಣನಾಗಿ ಪ್ರಾಣಲಿಂಗಿಯಾಗಬೇಕು. ಪ್ರಾಣಲಿಂಗಿಯಾಗಿ ಪ್ರಸಾದಿಯಾಗಬೇಕು, ಪ್ರಸಾದಿಯಾಗಿ ಮಾಹೇಶ್ವರನಾಗಬೇಕು. ಮಾಹೇಶ್ವರನಾಗಿ ಭಕ್ತನಾಗಬೇಕು, ಭಕ್ತನಾಗಿ ಸಕಲಯುಕ್ತಿಯಾಗಬೇಕು. ಯುಕ್ತಿ ನಿಶ್ಚಯವಾದಲ್ಲಿಯೆ, ಐಕ್ಯಸ್ಥಲ ಒಳಹೊರಗಾಯಿತ್ತು. ಅಲೇಖ ಲೇಖವಾಯಿತ್ತು, ಎನಗೆ ಕಾಣಬಂದಿತ್ತು. ಅಲೇಖನಾದ ಶೂನ್ಯ ಶಿಲೆಯ ಹೊರಹೊಮ್ಮಿ ಕಂಡೆ ನಿನ್ನನ್ನು.
--------------
ವಚನಭಂಡಾರಿ ಶಾಂತರಸ
ಆದಿಯನರಿತು ಭಕ್ತನಾಗಿ, ಆಚಾರಲಿಂಗವ ನೆಲೆಗೊಂಡುದೆ ಸದ್ಭಕ್ತಿಯೆಂಬೆನಯ್ಯ. ಮಂತ್ರವನರಿತು ಮಹೇಶ್ವರನಾಗಿ, ಗುರುಲಿಂಗವ ನೆಲೆಯಂಗೊಂಡುದೆ ನೈಷಿ*ಕಭಕ್ತಿಯೆಂಬೆನಯ್ಯ. ಕ್ರೀಯವನರಿತು ಪ್ರಸಾದಿಯಾಗಿ, ಶಿವಲಿಂಗವ ನೆಲೆಯಂಗೊಂಡುದೆ ಸಾವಧಾನಭಕ್ತಿಯೆಂಬೆನಯ್ಯ. ಇಚ್ಫೆಯನರಿತು ಪ್ರಾಣಲಿಂಗಿಯಾಗಿ, ಜಂಗಮಲಿಂಗವ ನೆಲೆಯಂಗೊಂಡುದೆ ಅನುಭಾವಭಕ್ತಿಯೆಂಬೆನಯ್ಯ. ಜ್ಞಾನವನರಿತು ಶರಣನಾಗಿ, ಪ್ರಸಾದಲಿಂಗವ ನೆಲೆಯಂಗೊಂಡುದೆ ಅನುಪಮಭಕ್ತಿಯೆಂಬೆನಯ್ಯ. ಪರವನರಿತು ಐಕ್ಯನಾಗಿ, ಮಹಾಲಿಂಗವ ನೆಲೆಯಂಗೊಂಡುದೆ ಸಮರಸಭಕ್ತಿಯೆಂಬೆನಯ್ಯ. ಚಿತ್ತವನರಿತು ನಿಜಲಿಂಗವಾಗಿ, ಪರಬ್ರಹ್ಮವು ನೆಲೆಯಂಗೊಂಡುದೆ ನಿಷ್ಪತಿಭಕ್ತಿಯೆಂಬೆನಯ್ಯ. ಇದು ಕಾಣಾ, ಝೇಂಕಾರ ನಿಜಲಿಂಗಪ್ರಭುವೆ ನಿಮ್ಮ ಶರಣನ ಆಚರಣೆಯು.
--------------
ಜಕ್ಕಣಯ್ಯ
ಭಕ್ತನಂಗ ಕಾಮ, ಮಹೇಶ್ವರನಂಗ ಲೋಭ, ಪ್ರಸಾದಿಯಂಗ ಕ್ರೋಧ, ಪ್ರಾಣಲಿಂಗಿಯಂಗ ಮೋಹ, ಶರಣನಂಗ ಮದ, ಐಕ್ಯನಂಗ ಮತ್ಸರ. ಇಂತೀ ಷಡ್ಭಾವಸ್ಥಲಂಗಳ ಕೂಡುವಲ್ಲಿ, ಸ್ಥೂಲವ ಕೂಡಿದಂಗ ಭಕ್ತನಾಗಿ, ಸೂಕ್ಷ್ಮವ ಕೂಡಿದಂಗ ಮಾಹೇಶ್ವರನಾಗಿ, ಕಾರಣವ ಕೂಡಿದಂಗ ಪ್ರಸಾದಿಯಾಗಿ, ಇಂತೀ ಮೂರು ಭಕ್ತಿಸ್ವರೂಪವಾಗಿ, ಆ ಸ್ಥೂಲದ ಕಳೆ ಪ್ರಾಣಲಿಂಗಿಯಾಗಿ, ಆ ಸೂಕ್ಷ್ಮದ ಕಳೆ ಶರಣನಾಗಿ, ಆಕಾಶದ ಕಳೆ ಐಕ್ಯನಾಗಿ, ಏಕಮೂರ್ತಿ ತ್ರೈಮೂರ್ತಿಯಾಗಿ, ಭಕ್ತಿಜ್ಞಾನವೈರಾಗ್ಯವೆಂಬುದನಾಧರಿಸಿದೆಯಲ್ಲಾ. ಅದು ನಿನ್ನ ಲೀಲಾಭಾವ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಮೊದಲಜನ್ಮದಲ್ಲಿ ಶಿವಾಂಶಿಕ ಬಂದನು. ಎರಡನೆಯ ಜನ್ಮದಲ್ಲಿ ಜ್ಞಾನಕಲಾತ್ಮನಾಗಿ ಬಂದನು. ಮೂರನೆಯ ಜನ್ಮದಲ್ಲಿ ಶಿಷ್ಯನಾಗಿ ಬಂದನು. ನಾಲ್ಕನೆಯ ಜನ್ಮದಲ್ಲಿ ಲಿಂಗಭಕ್ತನಾಗಿ ಬಂದನು. ಐದನೆಯ ಜನ್ಮದಲ್ಲಿ ನಿಷಾ*ಮಹೇಶ್ವರನಾಗಿ ಬಂದನು. ಆರನೆಯ ಜನ್ಮದಲ್ಲಿ ನಿಜಪ್ರಸಾದಿಯಾಗಿ ಬಂದನು. ಏಳನೆಯ ಜನ್ಮದಲ್ಲಿ ಪ್ರಾಣಲಿಂಗಿಯಾಗಿ ಬಂದನು. ಎಂಟನೆಯ ಜನ್ಮದಲ್ಲಿ ಶರಣನಾಗಿ ಬಂದನು. ಒಂಬತ್ತನೆಯ ಜನ್ಮದಲ್ಲಿ ಐಕ್ಯನಾಗಿ ಗುರುನಿರಂಜನ ಚನ್ನಬಸವಲಿಂಗದಲ್ಲಿ ನಿರಂತರ ಸುಖಪರಿಣಾಮಿಯಾಗಿ ನಿಂದನು.
--------------
ದೇಶಿಕೇಂದ್ರ ಸಂಗನಬಸವಯ್ಯ
-->