ಅಥವಾ

ಒಟ್ಟು 46 ಕಡೆಗಳಲ್ಲಿ , 17 ವಚನಕಾರರು , 33 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನ್ನಲ್ಲಿ ನಾನು ದೃಷ್ಟವೆಂದಡೆ ನಿಮ್ಮಲ್ಲಿ ನೀವು ಮೆಚ್ಚುವಿರೆ ? ಸಂದೇಹದಿಂದ ಸವೆಯಿತ್ತು ಲೋಕವು. ಕನ್ನಡಿಯುಂಡ ಬಿಂಬ, ಕಬ್ಬನವುಂಡ ನೀರು, ಕಬ್ಬಿಸಿಲು ಅರಿಸಿನವ ನುಂಗಿದಂತೆ ಗುಹೇಶ್ವರಾ ನಿಮ್ಮ ಶರಣರು.
--------------
ಅಲ್ಲಮಪ್ರಭುದೇವರು
ಮನ ಮನ ಬೆರಸಿದಲ್ಲಿ ತನು ಕರಗದಿದ್ದಡೆ, ಸೋಂಕಿನಲ್ಲಿ ಪುಳಕಂಗಳು ಹೊರಹೊಮ್ಮದಿದ್ದಡೆ, ಕಂಡಾಗಳಶ್ರುಜಲಂಗಳು ಸುರಿಯದಿದ್ದಡೆ, ನುಡಿವಲ್ಲಿ ಗದ್ಗದಂಗಳು ಪೊಣ್ಮದಿದ್ದಡೆ, ಕೂಡಲಸಂಗಮದೇವರ ಭಕ್ತಿಗಿದು ಚಿಹ್ನ ಎನ್ನಲ್ಲಿ ಇವಿಲ್ಲಾಗಿ, ಆನು ಡಂಬಕ ಕಾಣಿರೇ. 379
--------------
ಬಸವಣ್ಣ
ಶಿವ ಶಿವ! ಮಹಾದೇವ, ಎನ್ನ ಗುಣಾವಗುಣವರಿಯದೆ ಇದಿರ ಗುಣವ ವಿಚಾರಿಸುವೆ. ಅವರು ವಂಚಿಸಿಹರೆಂದು ಕೊಡರೆಂದು ನಿಂದಿಸಿಹರೆಂದು ಮಾತಾಪಿತ ಸತಿಸುತರುಗಳಿಗೆ ಸ್ನೇಹಿಸಿಹರೆಂದು ಶಿವ ಶಿವಾ! ಬುದ್ಧಿಯನರಿಯದೆ ನಾ ನಿಮಗೆ ವಂಚನೆಯಿಲ್ಲದೆ ಒಲಿದೆನಾದಡೆ ನೀವೆನಗೆ ಒಳ್ಳಿದರು. `ಸತ್ಯಭಾವಿ ಮಹತ್ಸತ್ಯಂ' ಎಂಬುದಾಗಿ, ನಿಮ್ಮಡಿಗಳ ಸ್ನೇಹಿತರು, ಎನಗೆ ಒಳ್ಳಿದರು. ಸ್ನೇಹ ತಾತ್ಪರ್ಯವ ಮಾಡಿ ಬೇಡಿತ್ತನಿತ್ತು ದೇವಾ ಎನುತಿಪ್ಪರು. ಒಳ್ಳಿತ್ತು ಹೊಲ್ಲೆಹ ಎನ್ನಲ್ಲಿ, ಇದಿರಿಂಗೆ ಅದು ಸ್ವಭಾವ ಗುಣ. ಎನ್ನ ದುರ್ಗುಣಂಗಳ ಕಳದು ಸದ್ಗುಣವ ಮಾಡಿ ನಿನ್ನೊಳಗು ಮಾಡಿಕೊಳ್ಳಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.
--------------
ಉರಿಲಿಂಗಪೆದ್ದಿ
ಸಮಸ್ತ ಲೋಕಾದಿ ಲೋಕಂಗಳಿಲ್ಲದಂದು ಅನಾದಿಪರಶಿವ ನೀನೊರ್ಬನೆ ಇರ್ದೆಯಯ್ಯ. ಆ ನಿರಕಾರ ಪರಶಿವನಿಂದ ನಾನುದಯವಾಗಿ, ಮಾಯಾರಂಜನೆ ಹುಟ್ಟದ ಮುನ್ನ ನಿರಂಜನನೆಂಬ ಗಣೇಶ್ವರನಾಗಿರ್ದೆನು. ಜ್ಞಾನಾಜ್ಞಾನಗಳಿಲ್ಲದಂದು ಜ್ಞಾನಾನಂದನೆಂಬ ಗಣೇಶ್ವರನಾಗಿರ್ದೆನು. ಈ ಶರೀರವಿಲ್ಲದಂದು ನಿರ್ಮಲನೆಂಬ ಗಣೇಶ್ವರನಾಗಿರ್ದೆನು. ಬಸವ ಮೊದಲಾದ ಪ್ರಮಥರೆಲ್ಲರೂ ಪ್ರಸಾದವ ಎನ್ನಲ್ಲಿ ಸಂಬಂಧಿಸಿ, ನಿನ್ನ ಕೃಪಾಪ್ರಸಾದವನೆನ್ನಲ್ಲಿ ಮೂರ್ತಿಗೊಳಿಸಿ, `ಇನ್ನಾವುದಕ್ಕೂ ಅಂಜಬೇಡ'ವೆಂದು, ನೀನು, ನಿನ್ನ ಪ್ರಮಥರು ಎನ್ನ ಆಜ್ಞಾಪಿಸಿ ಮತ್ರ್ಯಕ್ಕೆ ಕಳುಹಿದಿರಿಯಾಗಿ, ಕಳುಹಿದ ಭೇದವ ಶಿವಜ್ಞಾನೋದಯದಿಂದ ಅರಿದು ಸಿದ್ಧಲಿಂಗನೆಂಬ ನಾಮ ಎನಗೆ ನಿನ್ನಿಂದ ಬಂದಿತ್ತೆಂಬುದ ಅರಿದೆನು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಹಮ್ಮಿ ಹನ್ನೆರಡು ಸಂವತ್ಸರ ಹಿಂದಾಯಿತ್ತು, ಏನ ಮಾಡಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ ಏನ ಹಮ್ಮಿದಡೇನಯ್ಯಾ, ಎನ್ನಲ್ಲಿ ದಿಟವಿಲ್ಲದನ್ನಕ್ಕರ ಎನ್ನ ಪುಣ್ಯದ ಫಲ, ಕೂಡಲಸಂಗಮದೇವಾ, ಬಾಯಿನದುಂಡೆಗೆ ತೋಯನಟ್ಟಂತಾಯಿತ್ತು.
--------------
ಬಸವಣ್ಣ
ಎನ್ನಲ್ಲಿ ನಾನು ನಿಜವಾಗಿ ನಿಮ್ಮನರಿದೆಹೆನೆಂದಡೆ ಅದು ನಿಮ್ಮ ಮತಕ್ಕೆ ಬಪ್ಪುದೆ? ಎನ್ನ ನಾನು ಮರೆದು, ನಿಮ್ಮನರಿದಡೆ, ಅದು ನಿಮ್ಮ ರೂಪೆಂಬೆ. ಎನ್ನ ನಿನ್ನೊಳು ಮರೆದಡೆ, ಕನ್ನಡಿಯೊಳಗಣ ಪ್ರತಿಬಿಂಬದಂತೆ ಭಿನ್ನವಿಲ್ಲದೆ ಇದ್ದೆನು ಕಾಣಾ ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಎನ್ನ ವಿಶ್ವಾಸದಿಂದ ನಿನ್ನ ನೋಡಿಹೆನೆಂದಡೆ, ನೀ ವಿಶ್ವಾಸಹೀನ. ನಿನ್ನ ವಿಶ್ವಾಸ ಎನ್ನಲ್ಲಿ ಕರಿಗೊಂಡು, ಎನ್ನ ಅದೃಢ, ನಿಮ್ಮ ಅದೃಢವಾಗಿ ನಿಂದಲ್ಲಿ, ಲಿಂಗ ಭಕ್ತ, ಭಕ್ತಲಿಂಗವೆಂಬ ಶ್ರುತಿ ತಪ್ಪದು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಕಟ್ಟಣೆಯೊಳಗಣ ಕಾಂಸ್ಯಕದಂತೆ, ಅಣಿಯೊಳಗಣ ಕೇಣದಂತೆ, ಚಿನ್ನದೊಳಗಣ ಬಣ್ಣದಂತೆ, ಪಟದೊಳಗಣ ತಂತುವಿನಂತೆ, ಎನ್ನಲ್ಲಿ ಭಿನ್ನವಿಲ್ಲದಿದ್ದೆಯಲ್ಲಾ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಎಲೆ ಅಯ್ಯಾ ಅಯ್ಯಾ, ಎನ್ನ ಶಿರ ನಿಮ್ಮ ಚರಣವ ಮುಟ್ಟಿದ ಬಳಿಕ ಎನ್ನಲ್ಲಿ ಗುಣದೋಷವನರಸುವರೆ ? `ಭೃತ್ಯಾಪರಾಧಃ ಸ್ವಾಮಿನೋ ದಂಡಃ' ! ಕಪಿಲಸಿದ್ಧಮಲ್ಲಿಕಾರ್ಜುನದೇವಾ, ತ್ರಾಹಿ ತ್ರಾಹಿ, ಕಾಯಯ್ಯಾ.
--------------
ಸಿದ್ಧರಾಮೇಶ್ವರ
ಅರಿಯಲಿಲ್ಲದ ಅರಿವು ಎನ್ನಲ್ಲಿ ತೋರಿತ್ತಾಗಿ ಧರೆ ಮೊದಲಖಿಳವನಳಿದುಳಿದ ಅಮಲಮೂರುತಿಯ ಕಂಡೆ. ಆ ಮೂರುತಿಯಿಂದೆ ಅನಂತ ಮನುಮುನಿಗಳ ಅರಿತಕ್ಕಗೋಚರವಾದ ಅನಾಮಯಮೂರುತಿಯ ಕಂಡೆ. ಆ ಮೂರುತಿಯನೆನ್ನ ಕರದೊಳು ಧರಿಸಿಕೊಂಡು ಅಗಣಿತಮಹಿಮನಾದೆನು ಕಾಣಾ ನಿರಂಜನ ಚನ್ನಬಸವಲಿಂಗಾ ನಿಮ್ಮಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಯ್ಯಾ, ಎನ್ನಲ್ಲಿ ವಂಚನೆಗಿಂಬಿಡಲೆಡೆಯಿಲ್ಲ ಮನವೆಂಬ ಸುಳುಹಿಲ್ಲ ಲಿಂಗಕ್ಕೆ ಆಲಯವಾಗಿತ್ತಾಗಿ. ಅಯ್ಯಾ, ಎನ್ನಲ್ಲಿ ಭಿನ್ನಭಾವಕ್ಕನುವಿಲ್ಲ ಮಹಾನುಭಾವವಾಗಿ ಮಹದಲ್ಲೆರಕವಾಯಿತ್ತಾಗಿ. ಅಯ್ಯಾ, ಎನ್ನಲ್ಲಿ ಜ್ಞಾನವಿಡಿದು ನಿನ್ನ ನೋಡಿ ಆಲಿಂಗಿಸಬೇಕೆಂಬ ಅನುವಿಲ್ಲ ಗುರುನಿರಂಜನ ಚನ್ನಬಸವಲಿಂಗವೆನ್ನನಾವರಿಸಿಕೊಂಡಿರ್ದನಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಜನ್ಮ ಹೊಲ್ಲೆಂಬೆನೆ, ಜನ್ಮವ ಬಿಡಲಹೆನು. ಭಕ್ತರೊಲವ ಪಡೆವೆನೆ, ಭಕ್ತಿಯ ಪಥವನರಿವೆನು. ಲಿಂಗವೆಂದು ಬಲ್ಲೆನೆ, ಜಂಗಮವೆಂದು ಕಾಬೆನು. ನಿಚ್ಚ ನಿಚ್ಚ ಶಿವರಾತ್ರಿಯ ಮಾಡಬಲ್ಲೆನೆ, ಕೈಲಾಸವ ಕಾಣಬಲ್ಲೆನು. ಎನ್ನಲ್ಲಿ ನಡೆುಲ್ಲಾಗಿ, ನಾನು ಭಕ್ತನೆಂತಹೆನಯ್ಯಾ, ಕೂಡಲಸಂಗಮದೇವಾ 292
--------------
ಬಸವಣ್ಣ
ಮೂರುಸ್ಥಲದಲ್ಲಿ ಎಯ್ದಿಹೆನೆಂದಡೆ, ಮಲಮೂರು ಮುಟ್ಟಲೀಸದಿವೆ ನೋಡಾ. ಆರುಸ್ಥಲದಲ್ಲಿ ಕೂಡಿಹೆನೆಂದಡೆ, ಅರಿಷಡುವರ್ಗಂಗಳು ಹಗೆಯಾಗಿವೆ ನೋಡಾ. ಐದು ಗುಣದಲ್ಲಿ ಅರಿದೆಹೆನೆಂದಡೆ, ಈರೈದು ಕೊಂದು ಕೂಗುತ್ತವೆ ನೋಡಾ. ಇವರ ಸಂದನಳಿದು ಒಂದರಲ್ಲಿ ಕೂಡೆಹೆನೆಂದಡೆ, ಇಂದ್ರಿಯಂಗಳ ಬಂಧ ಬಿಡದು. ಈ ಉಭಯಸಂದೇಹ, ನೀನು ಎನ್ನಲ್ಲಿ ಬಂದಡೆ ಬಿಡುಗು, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಅಯ್ಯಾ, ನಾನು ದಾಸೋಹವ ಮಾಡುವೆನಲ್ಲದೆ, ಸಮಯವನರಿಯೆ, ಅಯ್ಯಾ, ನಾನು ಭಕ್ತಿಯ ಮಾಡುವೆನಲ್ಲದೆ, ಭಾವವನರಿಯೆ. ಸ್ಥಳಕುಳವ ವಿಚಾರಿಸಿದಡೆ, ಎನ್ನಲ್ಲಿ ಏನೂ ಹುರುಳಿಲ್ಲ, ನಿಮ್ಮ ಶರಣರ ಸೋಂಕಿನಲ್ಲಿ ಶುದ್ಧನಾದೆನು. ಕೂಡಲಸಂಗಮದೇವರು ಸಾಕ್ಷಿಯಾಗಿ, ಮಡಿವಾಳ ಮಾಚಿತಂದೆಗಳ ಶ್ರೀಪಾದಕ್ಕೆ ನಮೋ ನಮೋ ಎಂದು ಬದುಕಿದೆನು.
--------------
ಬಸವಣ್ಣ
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು. ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯಾ ನೀನು. ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯಾ ನೀನು. ಅರಿವು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು. ಭಾವಶುದ್ಭವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು. ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು. ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು. ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು. ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ ?
--------------
ಅಕ್ಕಮಹಾದೇವಿ
ಇನ್ನಷ್ಟು ... -->