ಅಥವಾ

ಒಟ್ಟು 51 ಕಡೆಗಳಲ್ಲಿ , 24 ವಚನಕಾರರು , 48 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಡುವ ಕೊಡುವ ಬಿಡುವ ಕಟ್ಟುವ ಗೊಡವೆಗಾರನಯ್ಯಾ; ಶರಣನು ಗಾಳಿಯ ಮರೆಯ ಜ್ಯೋತಿಯಂತೆ, ಸುಖಸೂಸದೆ ಇಪ್ಪನು. ತನ್ನರಿವು ಮರವೆಗಳೆಲ್ಲಾ ಪ್ರಾಣಲಿಂಗಾಧೀನವಲ್ಲದೆ, ಮತ್ತೊಂದನರಿಯನು. ಆಸರುವನಲ್ಲ ಬೇಸರುವನಲ್ಲ; ಜಗದ ಕಳಕಳಕ್ಕೆ ಎದ್ದು ಹರಿದಾಡುವನಲ್ಲ. ಸುಖಮುದ್ರಿತನು ಕೂಡಲಚೆನ್ನಸಂಗಾ ಲಿಂಗೈಕ್ಯನು.
--------------
ಚನ್ನಬಸವಣ್ಣ
ಘುಟಿಕಾಸಿದ್ಧರ ಘುಟಿಕೆಯುರುಳಿತ್ತು ಯಂತ್ರಿಗಳ ಯಂತ್ರ ಎದ್ದು ಹೋಯಿತ್ತು ಮಂತ್ರಿಗಳ ಮಂತ್ರ ಮರೆತುಹೋಯಿತ್ತು ಔಷಧಿಗರ ಔಷಧವನಾರಡಿಗೊಂಡಿತ್ತು ಸರ್ವವಿದ್ಯಾಮುಖದ ಜ್ಯೋತಿ ನಂದಿತ್ತು ಈ ವಿಷಯದ ಲಹರಿಯಲ್ಲಿ ಮೂರುಲೋಕದವರೆಲ್ಲರು ಮೂರ್ಛಿತರಾದರು ಕಾಣಾ ಗುಹೇಶ್ವರ.
--------------
ಅಲ್ಲಮಪ್ರಭುದೇವರು
ಶುಕ್ಲಶೋಣಿತಾತ್ಮಸಂಬಂಧವಾದ ಮಾತಾ ಪಿತರುಗಳ ಕಾಮವಿಕಾರದಿಂದ ಪುಟ್ಟಿದ ಪಿಂಡಕ್ಕೆ, ಅಂಗೈಯೊಳಗೆ ಇರುವ ಪರಿಯಂತರವಾಗಿ ಜಡೆಯ ಕೂಸೆಂಬುವರು. ಅಂಬೆಗಾಲಲಿ ನಡೆಯುವಾಗ ಹುಡುಗನೆಂಬುವರು. ಎದ್ದು ಕಾಲಲಿ ನಡೆಯುವಾಗ ಪೋರನೆಂಬುವರು ಒಳ ಹೊರಗೆ ಓಡಾಡುವಾಗ ಹೆಸರುಗೊಂಡು ಬಾರಲೇ ಹೋಗಲೆಯೆಂಬುವರು. ಷೋಡಶವರುಷಕ್ಕೆ ತಮ್ಮಾ ಅಪ್ಪಾ ಎಂದು ಕರೆವರು. ಪಂಚವಿಂಶತಿವರುಷಕ್ಕೆ ಅಣ್ಣಾ ಅಪ್ಪಾ ಎಂದು ಕರೆವರು. ಮೂವತ್ತುವರುಷದಿಂ ಐವತ್ತುವರುಷತನಕ ಅಪ್ಪನವರು ಎಂದು ಕರೆವರು, ನೆರೆಯೊಡೆದ ಮೇಲೆ ಹಿರಿಯರೆಂಬುವರು. ಹಲ್ಲುಬಿದ್ದ ಮೇಲೆ ಮುದುಕನೆಂಬುವರು. ಬೆನ್ನುಬಾಗಿ ಕಣ್ಣು ಒಳನಟ್ಟು ಗೂಡುಗಟ್ಟಿ ಗೂರಿಗೂರಿ ಮುಕುಳಿ ನೆಲಕ್ಕೆಹತ್ತಲು ಮುದೋಡ್ಯಾ ಎಂಬುವರು. ಇಂತೀ ನಾಮಂಗಳು ಆತ್ಮಂಗೆ ದೇಹಸಂಗದಿಂದ ಪುಟ್ಟಿದವಲ್ಲದೆ ಆ ದೇಹದೊಳಗಿರುವ ಆತ್ಮನು ಕೂಸಲ್ಲ, ಪೋರನಲ್ಲ, ಹಿರಿಯನಲ್ಲ, ಮುದುಕನಲ್ಲ. ಈ ಭೇದವ ನಿಮ್ಮ ಶರಣರು ಬಲ್ಲರಲ್ಲದೆ ಈ ಲೋಕದ ಗಾದಿಮನುಜರೆತ್ತ ಬಲ್ಲರಯ್ಯಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಆರು ನೆಲೆ ಮಂಟಪದ ಕೋಣೆಯಲ್ಲಿ ಆರು ಜ್ಯೋತಿಯ ಮುಟ್ಟಿಸಿ ಆ ಜ್ಯೋತಿಯ ಬೆಳಗಿನಲ್ಲಿ ಆರು ಲಿಂಗವ ನಿರ್ಮಿಸಿ ಆರು ಲಿಂಗದ ಪ್ರತುಮೆಯಲ್ಲಿ ಆರು ಹಂತದ ಸೋಪಾನದಲ್ಲಿ ಮಹಾ ನಿರ್ಮಳವೆಂಬ ದುರ್ಗಮಂ ನಿರ್ಮಿಸಿ ಆ ದುರ್ಗದಲ್ಲಿ ಅರಸಂಗೆ ಕಾಲಿಲ್ಲದಾಕೆಯ ಮದುವೆಯ ಮಾಡಿ ತೂತಿಲ್ಲದ ಭೋಗಕ್ಕೆ ಕೂಡಿ ಬಿಂದುವಿಲ್ಲದೆ ಮಕ್ಕಳಾದ ಪರಿಯ ನೋಡಾ. ತೊಟ್ಟಿಲಿಲ್ಲದೆ ಹಾಸಿ ಮಲಗಿಸಿ ನಿದ್ರೆಗೆಯ್ಸಿದ ಶರಣನಾಚರಣೆಯನೆಂತೆಂಬೆನು. ಇದ ಕಂಡು ನಡೆಯಲರಿಯದೆ, ತಮ್ಮ ಮನ ಬಂದಂತೆ ನಡೆವರು. ಶಿವಯೋಗಕ್ಕೆ ದೂರವಾದರು ನೋಡಾ. ಹೊನ್ನ ಕಟ್ಟಿ ವಿರಕ್ತನು ಬ್ಥಿಕ್ಷೆಯೆನಲಾಗದು. ಭಕ್ತನ ಗೃಹವೆಂದು ಜಂಗಮವು ಹೋದಲ್ಲಿ ಆ ಭಕ್ತನು ಎದ್ದು ನಮಸ್ಕರಿಸಿ ತನ್ನಲ್ಲಿರ್ದ ಪದಾರ್ಥವಂ ತಾನು ಸಹವಾಗಿ ಶಿವಾರ್ಪಣವ ಮಾಡ[ಬ]ಹುದಲ್ಲದೆ. ಇದಲ್ಲದೆ, ಜಂಗಮವ ಬೇರೆ ಕುಳ್ಳಿರಿಸಿ ಉಂಡನಾದರೆ ಅವನಿಗೆ ದೀಕ್ಷೆಯ ಕೊಟ್ಟ ಗುರುವಿಗೆ ತನ್ನ ಮಾರ್ಗವ ಬಿಟ್ಟು ಶಿವಭಕ್ತನಾದರೆ ಮೋಕ್ಷವಿಲ್ಲವಾಗಿ. ಕೋಳಿ ಒಂದು ಕುಟುಕ ಕಂಡರೆ ತನ್ನ ಮರಿಗೆ ತೋರದುಳಿವುದೆ? ಕಾಗೆ ಒಂದಗುಳ ಕಂಡರೆ ತನ್ನ ಬಳಗವ ಕರೆಯದುಳಿವುದೆ? ಶಿವಭಕ್ತನಾಗಿ ತನ್ನ ಲಿಂಗವ ಪೂಜಿಸಿ ಜಂಗಮವ ಮರೆದವನಾದರೆ ಸತ್ತ ದನವಿಗೆ ನರಿ ಹೋದಂತಾಯಿತ್ತು. ಆ ನರಿ ಹೋದ ನೆನಹಿನಲ್ಲಿ ನಾಯಿ ಹೋದಂತಾಯಿತ್ತು. ಇಷ್ಟಕ್ಕಿಂದ ಕರಕಷ್ಟವೆ ಶಿವಭಕ್ತರು? ಷಟ್ಚಕ್ರದ ಭಾವದಲ್ಲಿವೊಪ್ಪಿರುವ ಶಿವಶರಣರು ತಮ್ಮ ನಡೆ ನುಡಿಗಳ ಬಿಡದೆ ನಡೆವುದು. ಅದ ಕಂಡು ಕಣ್ದೆರೆದು ನೋಡಿದೆನಯ್ಯ. ಆವ ವರ್ತನೆಯಲ್ಲಿ ತಾನಿದ್ದರೇನು? ಆವ ಭಾವ ಹೇಂಗಿದ್ದರೇನು? ನಮ್ಮಾಚರಣೆ ನಮಗೆ ಶುದ್ಧ. ಗುರು ಕಲ್ಪಿತನಾದರು ಅವನು ಹಿಂದೆ ಸಂಬಂಧವಾದ ಕಾರಣ, ಅವನಿಗೆ ಬಂಧ ದೊರಕುವದಲ್ಲದೆ ನನಗೆ ದೊರಕದೆಂದು ತಾನು ನಿಶ್ಚೆಸಿದರೆ ತನಗೆ ದೊರಕಬಲ್ಲದೆ? ತಾನು ಪೂರ್ವದಲ್ಲಿ ತಾ ಪಡದುದು ತನಗೆ ತಪ್ಪುವದೆ? ಪ್ರಾಣಿಹಿಂಸೆಯ ಮಾಡುವಾತನಾದರೆಯು ಅವನಿಗೆ ಕಲ್ಪಿತವೇತಕ್ಕೆ? ಹಿಂದೆ ಅವನು ಶಿವನಪ್ಪಣೆವಿಡಿದು ಬಂದ ಕಾರಣ ಅವನಿಗೆ ಬಂದಿತಲ್ಲದೆ ಗಗನದ ಮಂಟಪದ ಮೇಲೆ ಊಧ್ರ್ವಮುಖದ ಗದ್ದುಗೆಯ ಮಾಡಿ ಮಹಾಪ್ರಕಾಶವೆಂಬ ಬೆಳಗಂ ತೋರಿ ಓಂಕಾರವೆಂಬ ಲಿಂಗವ ಮೂರ್ತಮಾಡಿಸಿ ಅದಕ್ಕೆ ಸದ್ಭಾವವೆಂಬ ಪುಷ್ಪವ ತಂದು ಜ್ಞಾನಪ್ರಕಾಶವೆಂಬ ಜ್ಯೋತಿಯಂ ಪೊತ್ತಿಸಿ ಸದ್ಭಕ್ತಿಯೆಂಬ ನೈವೇದ್ಯಮಂ ಮಾಡಿ ನಿರ್ಮಳವೆಂಬ ಪೂಜಾರಿಯಾಗಿರ್ಪನು. ಇದನರಿಯದೆ ತಮ್ಮ ಮನ ಬಂದಂತೆ ಇಪ್ಪವರ ಲಿಂಗಹೋದವನಾದರು ಅವನ ಕಣ್ಣಲ್ಲಿ ಕಂಡು ಅವನಷ್ಟಕ್ಕಲ್ಲದೆ ಅನ್ಯರ ಗೃಹವ ಬಿಡಲೇತಕ್ಕೇ? ಪಾಪವ ಮಾಡಿದನಾರು ಅವನ ಗೃಹಕ್ಕಲ್ಲದೆ ಅವನೊಂದಿಗೆ ಬೆರಸಿದವನಾದರು ಅವನಿಗೆ ಪಾಪ ಸಂಭವಿಸುವುದುಂಟೇ? ಇದ ಸಂಕಲ್ಪವ ಮಾಡಿ ಬಿಡಲೇತಕ್ಕೆ? ಒರ್ವಾನೊಬ್ಬನು ಭವಿಯ ಒಡನಾಡಲು ಅವನ ಪಾಪವು ಅವನಲ್ಲಿಪ್ಪುದಲ್ಲದೆ ಮಿಕ್ಕಿನ ಗೃಹಕ್ಕೆ ಸಂಬಂಧವೇನು? `ಮಾಡಿದವರನಲ್ಲದೆ ಮಿಕ್ಕಿನವರ ಸಂಕಲ್ಪವ ಮಾಡಲಾಗದು'ಯೆಂಬುದು ಗುರುವಚನ. ಹೆಣ್ಣು ಬಿಂದು ಸಂಬಂಧವಾಗಲು ಆ ಭೋಗಕ್ಕೆ ಶರಣನು ಅದನು ಮನದಲ್ಲಿ ಕಂಡು ಸಂತೋಷವಾಗಿಪ್ಪ. ಇಂತೀ ಭಾವಶುದ್ಧವುಳ್ಳಾತನು ಮತ್ರ್ಯಲೋಕಕ್ಕೆ ಮರಳಿ ಬಾರನೆಂಬುದು. ಶರಣ ಸಕಲವಿದ್ಯವ ಕಲಿತು ಫಲವೇನು? ನಿಂದ್ಯನೆ ದೊರಕೊಂಡಮೇಲೆ? ಹುಣ್ಣು ಹುಗಳು ಕೋಷ್ಠವಾಗಿರಲು, ಅವರ ಕಂಡು ಜರಿಯಲಾರದೆಂಬುದೆನ್ನ ಭಾಷೆ. ಇಂದ್ರಿಯಸುಖಕ್ಕೆ ಹೋಗಿ ಬಿದ್ದು ಶಿವಮಾಡಿದರಾಯಿತ್ತೆಂಬ ಅವಿಚಾರದ ನುಡಿಯ ಕೇಳಲಾಗದು. ತನ್ನ ಮನವು ಶುದ್ಧವಾದ ಮೇಲೆ, ಸಕಲ ಸುಖಂಗಳು ತನಗುಂಟಲ್ಲದೆ, ಜ್ಞಾನಿಗೆ ಕತ್ತಲೆಯಿಲ್ಲ. ಅಜ್ಞಾನಿಗೆ ಪಾಪವಿಲ್ಲ. ಇದನರಿದು, ಮುಂದುಗೊಂಡು ತಿರುಗುವ, ಅಣ್ಣಗಳ ಕಂಡು, ನಗುತಿರ್ಪರು ನಿಮ್ಮ ಶರಣರು, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ.
--------------
ಸ್ವತಂತ್ರ ಸಿದ್ಧಲಿಂಗ
ಒಂದು ಹುತ್ತಕ್ಕೆ ಒಂಬತ್ತು ಬಾಗಿಲು. ಒಂದು ಸರ್ಪ ಒಂಬತ್ತು ಬಾಗಿಲಲ್ಲಿಯೂ ನೋಡುತ್ತಿಪ್ಪುದು. ಒಂಬತ್ತು ಬಾಗಿಲಿಗೆ ಕದವನಿಕ್ಕಿ, ಒಂದು ಬಾಗಿಲ ಅಗುಳಿ ದಾರವಂದವನಿಕ್ಕಿ ಬಲಿಯಲು, ತಿರುಗುವುದಕ್ಕೆ ಠಾವ ಕಾಣದೆ, ಇರುವುದಕ್ಕೆ ಇಂಬ ಕಾಣದೆ, ನಿಲುವುದಕ್ಕೆ ಎಡೆಯ ಕಾಣದೆ, ಉರಿ ಎದ್ದು ಊರ್ದ್ವಕ್ಕೇರಲು, ಶರಧಿ ಬತ್ತಿತ್ತು, ಅಲ್ಲಿದ್ದ ಖಗಮೃಗವೆಲ್ಲ ದಹನವಾದವು. ಸರೋವರವೆಲ್ಲ ಉರಿದು ಹೋದವು, ಕತ್ತಲೆ ಹರಿಯಿತ್ತು. ಮುಂದೆ ದಿಟ್ಟಿಸಿ ನೋಡುವನ್ನಕ್ಕ ಇಟ್ಟೆಡೆಯ ಬಾಗಿಲು ಸಿಕ್ಕಿತ್ತು. ಆ ಇಟ್ಟೆಡೆಯ ಬಾಗಿಲ ಹೊಕ್ಕು ಹೊಡೆಕರಿಸಿ, ಪಶ್ಚಿಮದ ಕದವ ತೆಗೆದು, ಬಟ್ಟ ಬಯಲಲ್ಲಿ ನಿಂದು ನಾನೆತ್ತ ಹೋದೆಹೆನೆಂದರಿಯೆನಯ್ಯಾ ಅಪ್ಪಣ್ಣಪ್ರಿಯ ಚೆನ್ನಬಸವಣ್ಣಾ.
--------------
ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ
ಒಟ್ಟೆಯ ಮರಿ ಮೂರೊಟ್ಟೆಯನಿಕ್ಕಿತ್ತು. ಕಟ್ಟುಗ್ರದಿರುಹೆ ಕತ್ತಲೆಯ ನುಂಗಿತ್ತು. ಬೆಟ್ಟವ ಬೆಳ್ಳಕ್ಕಿ ನುಂಗಿತ್ತು. ಸುಟ್ಟುದು ಎದ್ದು ಕುಳ್ಳಿದ್ದುದಯ್ಯಾ. ಕಟ್ಟಿರ್ದುದು ತೋರದೆ ಗುಹೇಶ್ವರನಲ್ಲಿಯೆ ಅಡಗಿತ್ತು ನೋಡಾ !
--------------
ಅಲ್ಲಮಪ್ರಭುದೇವರು
ಹೊತ್ತಾರೆ ಎದ್ದು ಹೂ ಪತ್ರೆಯ ಕುಯಿ[ದು] ತಂದು ಹೊರ ಉಪಚಾರವ ಮಾಡುವುದೆಲ್ಲ ಬರಿಯ ಭಾವದ ಬಳಲಿಕೆ ನೋಡಾ. ಅಳಲದೆ ಬಳಲದೆ ಆಯಾಸಂಬಡದೆ ಒಳಗಣ ಜ್ಯೋತಿಯ ಬೆಳಗಿನ ಕಳೆಯ ಕಮಲವ ಪೂಜಿಸಬಲ್ಲ ಶರಣಂಗೆ ಬೆಳಗಾಗೆದ್ದು ಪೂಜಿಸಿಹೆನೆಂಬ ಕಳವಳವೆಂದೇನು ಹೇಳಾ? ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು. ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು. ದಿವದಲ್ಲಿ ಎದ್ದು, ರಾತ್ರಿಯಲ್ಲಿ ಒರಗುವನ್ನಕ್ಕರ ಅದ್ವೈತ ಅಸತ್ಯ ನೋಡಾ. ಇದು ಕಾರಣ, ಕ್ರಿಯೆ ಮರೆಯಲಿಲ್ಲ, ಅರಿವು ಶೂನ್ಯವೆಂದು ಬಿಡಲಿಲ್ಲ. ಅದು ಶಿಲೆಯ ಮರೆಯ ಪಾವಕ, ತಿಲದೊಳಗಣ ತೈಲ. ಅವರ ಒಲವರದಲ್ಲಿ ಕುಲವ ಕಾಣಬೇಕು, ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ.
--------------
ಆನಂದಯ್ಯ
ಸಂಸಾರವ ಬಿಟ್ಟೆನೆಂದು, ನಿರಾಶಾಪದವ ಮಾಡಿ, ತಲೆಯ ಬೋಳಿಸಿಕೊಂಡು, ಕುದಿದು ಕೋಟಲೆಗೊಂಡು, ಮನೆ ಮನೆ ತಪ್ಪದೆ ಭಿಕ್ಷವ ಬೇಡಿ, ಉಂಡು, ಎದ್ದು ಹೋಗಿ ತತ್ವವ ಬೋಧಿಸಿ, ಉದರವ ಹೊರೆವಂದು ಮುನ್ನವಿಲ್ಲ ಮರುಳಾ ? ಕಾಡಿ ಬೇಡಿ ಹಾಡಿ ಒಡಲ ಹೊರೆವಂಗೆ, ಮುಕ್ತಿಯುಂಟೆ ಮರುಳಾ ? ಜಂಗಮದಂಗವು ನಿರ್ಗಮನಿ, ಭಕ್ತಪ್ರಿಯ ನಮ್ಮ ಗುಹೇಶ್ವರಲಿಂಗದಲ್ಲಿ ಜಂಗಮದ ನಡೆಯಿಲ್ಲ ಕಾಣಾ, ಎಲೆ ಮರುಳಾ.
--------------
ಅಲ್ಲಮಪ್ರಭುದೇವರು
ತೋರಲಿಲ್ಲದ ಸಿಂಹಾಸನದ ಮೇಲೆ ಹೇಳಬಾರದ ಘನವು ಬಂದೆರಗಿದಡೆ, ತೋರಿ ಮೆರೆವ ಸಂಗಮನಾಥನು ಎದ್ದು ಹೋದನು. ನೀಡ ನೀಡ ಸಯದಾನವೆಲ್ಲವೂ ನಿರ್ವಯಲಾಯಿತ್ತು, ಮಾಡ ಮಾಡ ಸಯದಾನವ ಮರಳಿ ನೋಡಲಿಲ್ಲ. ಇದನೇನ ಹೇಳುವೆ ಅನಿಯಮ ಚರಿತ್ರವನು ಇದೆಂತುಪಮಿಸುವೆನು ವಿಸ್ಮಯವನು ಕೂಡಲಸಂಗಮದೇವರ ತೃಪ್ತಿಯ ತೆರನ ಬಲ್ಲಡೆ ಹೇಳಯ್ಯಾ, ಚೆನ್ನಬಸವಣ್ಣಾ.
--------------
ಬಸವಣ್ಣ
ಹದ್ದ ನುಂಗಿದ ಕಾಗೆ ಬದ್ಧ ಭವಿ ನೋಡಾ. ಎದ್ದು ಹಾರಲು ಸಿದ್ಧರ ಗಾರುಡವೆಲ್ಲ ಬಿದ್ದೋಡಿವು ನೋಡಾ. ಬ್ರಹ್ಮಚರಿಯವೆಲ್ಲ ಭ್ರಮೆಗೊಂಡಿತ್ತು ನೋಡಾ. ತ್ರೆ ೈಜಗವೆಲ್ಲಾ ಮೂರ್ಛೆಗತರಾದರು ನೋಡಾ. ವೀರರು ದ್ಥೀರರು ವ್ರತಿಗಳು ಸಾಮಥ್ರ್ಯರೆಲ್ಲ ಮತಿಗೆಟ್ಟು ಮರುಳಾದರು ನೋಡಾ. ಸತಿ ಸುತರ ಕೂಟವನೊಲ್ಲೆನೆಂಬ ವಿರಕ್ತರೆಲ್ಲ ವಿಕಾರಗೊಂಡರು ನೋಡಾ. ಶಿವನಿರ್ಮಿತದಿಂದಾದ ಮಾಯವ ಪರಿಹರಿಸಿಹೆನೆಂದಡೆ, ಅಜ ಹರಿ ರುದ್ರಾದಿಗಳಿಗೆ ಅಸಾಧ್ಯ ನೋಡಾ. ಈ ಮಾಯಾ ಪ್ರಪಂಚ ಕಳೆವಡೆ ಪರಶಿವಜ್ಞಾನ ಮುಖದಿಂದ ಅಲ್ಲದೆ ಪರಿಹರವಾಗದು ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಗುರು ಸಮಾಧಿಯ ಸಮ ತನ್ನ ಸಮಾಧಿಯ ಮಾಡಲಂದು, ವೀರವಿಕ್ರಮಚೋಳನ ದೇಹ ಬಯಗೆ ಬಾಯಿದೆರೆದು ಬರಲಿಲ್ಲವೆ? ಗುರು ಸಮಾಧಿಯ ಮುಂದೆ ತನ್ನ ಸಮಾಧಿಯ ಮಾಡಲಂದು, ರಾಜೇಂದ್ರಚೋಳನ ದೇಹ ಎದ್ದು ನಮಿಸಿ ಸಮಾಧಿಯ ಹೋಗಲಿಲ್ಲವೆ? ಇದರ ಕೀಲ ಪ್ರಮಥರು ಅರಿಯರೆ? ಇದರಂದವ ಗೌರಿ ನಾಗಾಯಿ ಅರಿಯಳೆ? ಇದರ ಕೀಲ ಕಪಿಲಸಿದ್ಧಮಲ್ಲಿಕಾರ್ಜುನ ಶರಣನ ರಾಣಿ ನೀಲಾಂಬಿಕೆಯರಿಯಳೆ ಸೊಡ್ಡಯ್ಯಾ?
--------------
ಸಿದ್ಧರಾಮೇಶ್ವರ
ಆ ಪರಶಿವನ ಮೂಲಮಂತ್ರಸ್ವರೂಪವಾದ ಭುವನಬ್ರಹ್ಮಾಂಡದ, ಸಕಲಜೀವಿಗಳ ವಿಸ್ತಾರವ ಕಂಡು, ತೋರಿ ಅಡಗುವ ಪರಿಗೆ ಸಂಸಾರಮಿಥ್ಯವೆಂದು ಸಜ್ಜನಗುಣದಲ್ಲಿ ಕೂಡಿ, ಸತ್ಪುರುಷರ ಸಂಗವಮಾಡಿ, ಶಾಸ್ತ್ರಾಗಮ ಶಿವಪುರಾಣ, ಶಿವಾಚಾರದಲ್ಲಿ ಮನವಿಟ್ಟು ತತ್ ತ್ವಂ ಅಸಿಯೆಂಬೋ ವಾಕ್ಯಕ್ಕೆ ಚಿತ್ತವೆಳಸಿ ವಸ್ತು ತಿಳಿಯಬೇಕೆಂದು ತತ್ವಜ್ಞಾನಿಗಳ ಹುಡುಕುವ ಶ್ರುತಿಜ್ಞಾನಿಗಳಿಗೆ, ಆ ವಸ್ತುವೇ ಗುರುವಾಗಿ, ತತ್ವೋಪದೇಶವ ಹೇಳಿ, ತತ್ವ ಮಂತ್ರ ವಿವರವ ತಿಳಿಸಲು, ಆ ತತ್ವ ಮಂತ್ರ ವಿವರವ ತನ್ನೊಳಗೆ ಲಕ್ಷವಿಟ್ಟು ನೋಡೆ ಆತ್ಮಜ್ಞಾನ ಅನುಮಿಷವಾಯಿತ್ತು. ಆ ಆತ್ಮಜ್ಞಾನ ಅನುಮಿಷದೃಷ್ಟಿ, ಆ ಆತ್ಮಾನಾತ್ಮವ ಶೋಧಿಸಿತ್ತು. ಆ ಶೋಧನೆ ಮಹಾಜ್ಞಾನ ಬೆಳಗಲು, ಆ ಬೆಳಗಿನೊಳಗೆ ಮೂಲಪ್ರಣವದ ಒಡಲೊಳಗಿನ ಆರು ಆಕೃತಿಗಳೆ ಆರು ಬೀಜಪ್ರಣವಗಳು, ಆ ಆರು ಪ್ರಣವಗಳೇ ಆ ಪರಶಿವನ ಆರು ಮುಖಗಳು, ಆ ಆರು ಮುಖಗಳಿಗೆ ಆರು ತತ್ವಗಳು, ಆರಾರು ಮೂವತ್ತಾರುತತ್ವವು. ಮೂವತ್ತಾರುತತ್ವಗಳಿಗೆ ಬ್ರಹ್ಮಾಂಡ, ಆ ಬ್ರಹ್ಮಾಂಡವೇ ಹನ್ನೆರಡು ಭೂತ, ಹನ್ನೆರಡು ಭೂತಗಳೇ ಪಿಂಡಾಂಡ. ಆ ಪಿಂಡಾಂಡದಲ್ಲಿ ಹನ್ನೆರಡು ಜ್ಞಾನ, ಹನ್ನೆರಡು ಸ್ಥಾನ, ಹನ್ನೆರಡು ಚಕ್ರ, ಹನ್ನೆರಡು ಅಂಗ, ಹನ್ನೆರಡು ಲಿಂಗ, ಹನ್ನೆರಡು ಭಕ್ತಿ, ಹನ್ನೆರಡು ಶಕ್ತಿ, ಹನ್ನೆರಡು ಮಂತ್ರ, ಹನ್ನೆರಡು ಹಸ್ತ, ಹನ್ನೆರಡು ಮುಖ, ಹನ್ನೆರಡು ಪದಾರ್ಥ, ಹನ್ನೆರಡು ಪ್ರಸಾದ, ಹನ್ನೆರಡು ತೃಪ್ತಿ-ಇವು ಮೊದಲಾದ ಸತ್ಕರ್ಮದೊಳಾಗದ ಸರ್ವಸುಗುಣಗಳು, ಸರ್ವದುರ್ಗುಣಗಳು, ಸರ್ವವೂ ಮೂಲಪ್ರಣವವೆಂದು ತಿಳಿದು, ಸರ್ವವೂ ಮೂಲಪ್ರಣವವೇ ಶಿವ, ಆ ಮೂಲಪ್ರಣವವೇ ಅಷ್ಟಾವರಣ, ಆ ಮೂಲಪ್ರಣವವೇ ಸಕಲಪ್ರಾಣಿಗಳು, ಆ ಮೂಲಪ್ರಣವವೇ ನಾನು, ಸರ್ವವೂ ಮೂಲಪ್ರಣವವೆಂದು ಇಲ್ಲೇನು, ಅಲ್ಲೇನು, ಎಲ್ಲೇನು, ಹಿಂಗೇನು, ಹಾಂಗೇನು, ಹ್ಯಾಂಗೇನು, ಇದ್ದಂಗಿರು ಸಿದ್ಧೇಶನೆಂಬುವದ ತಿಳಿದು, ತಿಳಿಯದೇ ನರಕದ ಕೇರಿಗೆ ಕಿರಿಕುಲದ ಸೂಕರ ಹೋದಂತೆ, ಹಸಿಯ ತೊಗಲಿನ ವಸರುವ ತೂತಿನ ಹಳೇ ಘಾಯಿಯ ಬಿರಿಕಿನೊಳಗೆ, ಸರಕನೇ ಎದ್ದು ಜರಕನೇ ಜಾರಿ ಸಿಗಬಿದ್ದರೋ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಮೂಲದ್ವಾರದ ಮೂಲೆಯಲ್ಲಿ ಏಳುಮಂದಿ ಕಳ್ಳರಡಗಿ, ಬಹಳ ಬಂಗಾರವ ಕದ್ದರು ನೋಡಾ. ಕದ್ದ ಕಳವರಗದೆ ಮತ್ತೊಂದು ಬುದ್ಧಿಯ ನೆನೆದು, ಹೊದ್ದಿ ಸೇರಿದರು ಮನೆಯಾತನ. ಅವನಿರುವ ಹೆಜ್ಜೆಯನರಿದು ಎದ್ದು ಹಿಡಿದ. ಕೈಯೊಳಗಾದರು, ಕಳ್ಳರು ಬೆಳ್ಳರೆಂದು ಹೋದರೆ, ಇದ ಬಲ್ಲವರಾರೊ, ನಿಃಕಳಂಕ ಮಲ್ಲಿಕಾರ್ಜುನಾ ?
--------------
ಮೋಳಿಗೆ ಮಾರಯ್ಯ
ಊರ ಮೇಲೆ ಊರ ಕಂಡೆ, ನೀರ ಮೇಲೆ ನೀರ ಕಂಡೆ. ಮರನ ಮೇಲೆ ಮರನ ಕಂಡೆ, ಗಿರಿಯ ಮೇಲೆ ಗಿರಿಯ ಕಂಡೆ. ಉರಿಯ ಮೇಲೆ ಉರಿಯ ಕಂಡೆ. ಈ ಭಾರವ ತಾಳಲಾರದೆ, ಆ ಉರಿಯೆ ಎದ್ದು ಊರು ಬೆಂದಿತ್ತು, ನೀರು ಬೆಂದಿತ್ತು, ಮರನು ಬೆಂದಿತ್ತು, ಗಿರಿಯು ಬೆಂದಿತ್ತು. ಆ ಉರಿ ಉಳಿಯಿತ್ತು, ಆ ಉರಿಯನೆರದು ಸಿರಿಯ ಸೆಳದು ಪರಮಸುಖಪರಿಣಾಮದೊಳೋಲಾಡುತ್ತ , ನಿಮ್ಮ ಬರವನೆ ಹಾರುತಿರ್ದೆನಯ್ಯಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಇನ್ನಷ್ಟು ... -->