ಅಥವಾ

ಒಟ್ಟು 81 ಕಡೆಗಳಲ್ಲಿ , 15 ವಚನಕಾರರು , 36 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ವೀರಶೈವಸಂಪನ್ನರಾದ ಸದ್ಭಕ್ತ ಶರಣಗಣಂಗಳಾದಡೆಯೂ ವೀರಮಾಹೇಶ್ವರರಾದಡೆಯೂ ಕ್ರಿಯಾಪಾದೋದಕ ಮಾಡಬೇಕಾದಡೆ, ತನ್ನ ಎರಡು ಅಂಗುಲಗಳಿಂದ, ಆ ಮಾಹೇಶ್ವರರ ಅಂಗುಷ್ಠ ಎಂಟು ಅಂಗುಲಗಳಲ್ಲಿ ತರ್ಜನಿ ಬೆರಳಿನಿಂದ ಬಲದ ಪಾದಾಂಗುಷ್ಠದ ಮೇಲೆ ಮೂರು ವೇಳೆ ಸ್ಪರ್ಶನವ ಮಾಡಿ, ನಾಲ್ಕನೆಯ ವೇಳೆಗೆ ಅದೇ ಬಲಪಾದದ ನಾಲ್ಕು ಬೆರಳುಗಳನ್ನು ಒಂದು ವೇಳೆ ಸ್ಪರ್ಶನ ಮಾಡಿದಡೆ ಗುರುಪಾದೋದಕವೆನಿಸುವುದು. ಇದೇ ರೀತಿಯಲ್ಲಿ ಎಡದ ಪಾದವ ಮಾಡಿದಡೆ ಲಿಂಗೋದಕವೆನಿಸುವುದು. ಈ ಎರಡರ ಕೂಟವೆ ಜಂಗಮಪಾದೋದಕವೆನಿಸುವುದು. ತನ್ನ ಹಸ್ತದಿಂದ ಪಾದವ ಮುಟ್ಟಿ ಮಾಡಿದಂತಹದೆ ಸ್ಪರ್ಶನೋದಕವೆನಿಸುವುದು. ಆ ಪಾದದ ಮೇಲಣ ದ್ರವವ ತೆಗೆದಂತಹದೆ ಅವಧಾನೋದಕವೆನಿಸುವುದು. ಅದರ ಮೇಲಣ ಅಪೇಕ್ಷೆ ಮುಂದುಗೊಂಡು ತಾನು ಮಾಡಿಕೊಂಡಂತಹದೆ ಅಪ್ಯಾಯನೋದಕವೆನಿಸುವುದು. ಹಸ್ತದಿಂದ ಮುಟ್ಟಿ ಮಾಡಿದಂತಹದೆ ಹಸ್ತೋದಕವೆನಿಸುವುದು. ಆ ಭಾಜನವ ತನ್ನ ಕೈಯಲ್ಲಿ ತೆಗೆದುಕೊಂಡು ಆ ಜಂಗಮಕ್ಕೆ ನಮಸ್ಕರಿಸುವಂತಹದೆ ನಿರ್ಣಾಮೋದಕವೆನಿಸುವುದು. ಆ ಜಂಗಮಕ್ಕೆ ನಮಸ್ಕರಿಸಿ ಆ ಭಾಜನವನ್ನು ತನ್ನ ಕ್ರಿಯೆಗೆ ಇಟ್ಟುಕೊಂಡಂತಹುದೆ ಸತ್ಯೋದಕವೆನಿಸುವುದು_ ಈ ಪ್ರಕಾರದಲ್ಲಿ ಹತ್ತು ಪಾದೋದಕವು, ಶಿಕ್ಷಾಪಾದೋದಕದಲ್ಲಿ ಆಗುವುದೆಂದು ಅರಿದು ಆಚರಿಸುವುದು. ಆಚರಿಸಲಾಗದೆಂಬ ಹಚ್ಚಮಾನವರನೇನೆಂಬೆನಯ್ಯಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಅಯ್ಯಾ ಆಚಾರವುಳ್ಳಕಾಂಚೀಪಟ್ಟಣದಲ್ಲಿ ಒಂದು ಗಂಡುಕತ್ತೆಯು ಸತ್ತುಬಿದ್ದಿರಲು, ಕತ್ತೆಯಂ ಕೈಲಾಸದ ಪಾಲುಮಾಡಬೇಕೆಂದಿದ್ದರಯ್ಯಾ, ಯಾರ್ಯಾರು ಎಂದರೆ: ಶೆಟ್ಟಿಗಾದರಿ, ಪೃಥ್ವಿಶೆಟ್ಟಿ, ಕೋರಿಶೆಟ್ಟಿ, ಬಳೇಶೆಟ್ಟಿ, ನಾಡನಾಲಗೆ, [ಮಿಂಡ]ಗುದ್ದಲಿ, ಬಡವ, ಬೋವಿಯಂತಪ್ಪ ಎಂಟು ಕಟ್ಟೆಯವರು ಕೂಡಿಕೊಂಡು ಆ ಕತ್ತೆಯಂ ಮಂಚದ ಮೇಲೆ ಇಟ್ಟುಕೊಂಡು ಕಮ್ಮೆಣ್ಣೆ, ಕಸ್ತೂರಿ, ಗಂಧ, ಪುನುಗು, ಜವ್ವಾಜಿ, ಬುಕ್ಕಹಿಟ್ಟು, ಊದಿನಕಡ್ಡಿ - ಇಂತಪ್ಪ ಅಷ್ಟಗಂಧದಿಂದ ಮೇಳ ಭಜಂತ್ರಿಯಿಂದ ಒಯ್ದು, ನರಿ ಪಾಲು ಮಾಡಿ ಬಂದರಯ್ಯಾ. ಛೇ, ಛೇ ಎಂದು ಕಣ್ಣಯ್ಯಗಳ ಎಡದ ಪಾದರಕ್ಷೆಯಂ ತೆಗೆದುಕೊಂಡು ಅವರ ಮುದ್ದುಮುಖದ ಮೇಲೆ ಕುಟ್ಟಿದಾತನೆ ನಮ್ಮ ಅಂಬಿಗರ ಚೌಡಯ್ಯನೆಂಬೊ ಶಿವಶರಣನು.
--------------
ಅಂಬಿಗರ ಚೌಡಯ್ಯ
ಇನ್ನು ಹಠಯೋಗಕ್ಕೆ ಸಾಧನಮಾದ ಬಂಧತ್ರಯಂಗಳ ಭೇದವೆಂತೆಂದೊಡೆ : ವಾಮಪಾದದ ಹಿಮ್ಮಡದಿಂ ಯೋನಿಸ್ಥಾನವನೊತ್ತಿ ಬಲಪಾದಮಂ ನೀಡಿ, ಎರಡು ಹಸ್ತಗಳಿಂದೆ ಅಂಗುಷ್ಠಮಂ ಪಿಡಿದು, ಕಂಠಸ್ಥಾನದಲ್ಲಿ ಚುಬುಕವನಿರಿಸಿ, ವಾಯುಧಾರಣಮಂ ಮಾಡುವುದೆ ಜಾಲಂಧರಬಂಧವೆನಿಸುವುದು. ವಾಮಪಾದದ ಹಿಮ್ಮಡದಿಂದಾಧಾರವನೊತ್ತಿ , ಎಡದ ತೊಡೆಯ ಮೇಲೆ ಬಲದ ಪಾದವನಿರಿಸಿ ವಾಯುಪೂರಣಮಂ ಮಾಡಿ, ಜಾಲಂಧರಮಂ ಬಂದ್ಥಿಸುವುದೆ ಮಹಾಬಂಧವೆನಿಸುವುದು. ನಾಬ್ಥಿಯ ಊಧ್ರ್ವ ಅಧೋಭಾಗಂಗಳನು ಬಲಾತ್ಕಾರದಿಂ ಬಂದ್ಥಿಪುದೆ ಉಡ್ಯಾಣಬಂಧವೆನಿಸುವುದು. ಈ ಬಂಧತ್ರಯಂಗಳಿಂದೆ ಛೇದನ ಚಾಲನ ದೋಹನಾದಿ ಕ್ರೀಯಂಗಳಿಂದೆ ಪೆಚ್ಚಿರ್ದ ಜಿಹ್ವೆಯನು ಭ್ರೂಮಧ್ಯಸ್ಥಾನಕ್ಕೇರಿಸಿ ಸ್ಥಿರದೃಷ್ಟಿಯಾಗಿಹುದೇ ಹಠಯೋಗ ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಎನ್ನ ಸ್ಥೂಲತನುವಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಸೂಕ್ಷ್ಮತನುವಿಂಗೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಕಾರಣತನುವಿಂಗೆ ಭಾವಲಿಂಗವಾದಾತ ಬಸವಣ್ಣ. ಎನ್ನ ದೃಕ್ಕಿಂಗೆ ಇಷ್ಟಲಿಂಗವಾದಾತ ಬಸವಣ್ಣ. ಎನ್ನ ಮನಕ್ಕೆ ಪ್ರಾಣಲಿಂಗವಾದಾತ ಬಸವಣ್ಣ. ಎನ್ನ ಭಾವಕ್ಕೆ ತೃಪ್ತಿಲಿಂಗವಾದಾತ ಬಸವಣ್ಣ. ಎನ್ನ ನಾಸಿಕಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಜಿಹ್ವೆಗೆ ಗುರುಲಿಂಗವಾದಾತ ಬಸವಣ್ಣ. ಎನ್ನ ನೇತ್ರಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ತ್ವಕ್ಕಿಂಗೆ ಜಂಗುರುಲಿಂಗವಾದಾತ ಬಸವಣ್ಣ. ಎನ್ನ ಶ್ರೋತ್ರಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಹೃದಯಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಸುಚಿತ್ತವೆಂಬ ಹಸ್ತಕ್ಕೆ ಆಚಾರಲಿಂಗವಾದಾತ ಬಸವಣ್ಣ. ಎನ್ನ ಸುಬುದ್ಧಿಯೆಂಬ ಹಸ್ತಕ್ಕೆ ಗುರುಲಿಂಗವಾದಾತ ಬಸವಣ್ಣ. ಎನ್ನ ನಿರಹಂಕಾರವೆಂಬ ಹಸ್ತಕ್ಕೆ ಶಿವಲಿಂಗವಾದಾತ ಬಸವಣ್ಣ. ಎನ್ನ ಸುಮನವೆಂಬ ಹಸ್ತಕ್ಕೆ ಜಂಗಮಲಿಂಗವಾದಾತ ಬಸವಣ್ಣ. ಎನ್ನ ಸುಜ್ಞಾನವೆಂಬ ಹಸ್ತಕ್ಕೆ ಪ್ರಸಾದಲಿಂಗವಾದಾತ ಬಸವಣ್ಣ. ಎನ್ನ ಸದ್ಭಾವವೆಂಬ ಹಸ್ತಕ್ಕೆ ಮಹಾಲಿಂಗವಾದಾತ ಬಸವಣ್ಣ. ಎನ್ನ ಆಧಾರಚಕ್ರದಲ್ಲಿ ಆಚಾರಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಸ್ವಾದಿಷ್ಠಾನಚಕ್ರದಲ್ಲಿ ಗುರುಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಮಣಿಪೂರಕಚಕ್ರದಲ್ಲಿ ಶಿವಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಅನಾಹತಚಕ್ರದಲ್ಲಿ ಜಂಗಮಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವಿಶುದ್ಧಿ ಚಕ್ರದಲ್ಲಿ ಪ್ರಸಾದಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಆಜ್ಞಾಚಕ್ರದಲ್ಲಿ ಮಹಾಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಬ್ರಹ್ಮರಂಧ್ರದಲ್ಲಿ ನಿಃಕಲಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಶಿಖಾಚಕ್ರದಲ್ಲಿ ಶೂನ್ಯಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ಪಶ್ಚಿಮಚಕ್ರದಲ್ಲಿ ನಿರಂಜನಲಿಂಗವಾಗಿ ಮೂರ್ತಿಗೊಂಡಾತ ಬಸವಣ್ಣ. ಎನ್ನ ವದನಕ್ಕೆ ಓಂಕಾರವಾದಾತ ಬಸವಣ್ಣ. ಎನ್ನ ಬಲದ ಭುಜಕ್ಕೆ ನಕಾರವಾದಾತ ಬಸವಣ್ಣ. ಎನ್ನ ಎಡದ ಭುಜಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಒಡಲಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಬಲದ ಪಾದಕ್ಕೆ ವಕಾರವಾದಾತ ಬಸವಣ್ಣ. ಎನ್ನ ಎಡದ ಪಾದಕ್ಕೆ ಯಕಾರವಾದಾತ ಬಸವಣ್ಣ. ಎನ್ನಾ ಆಪಾದಮಸ್ತಕ ಪರಿಯಂತರ ಮಂತ್ರರೂಪಕಸಂಬಂಧವಾದಾತ ಬಸವಣ್ಣ. ಎನ್ನ ನಾದಕ್ಕೆ ಆಕಾರವಾದಾತ ಬಸವಣ್ಣ. ಎನ್ನ ಬಿಂದುವಿಂಗೆ ಉಕಾರವಾದಾತ ಬಸವಣ್ಣ. ಎನ್ನ ಕಳೆಗೆ ಮಕಾರವಾದಾತ ಬಸವಣ್ಣ. ಎನ್ನ ರುದ್ಥಿರಕ್ಕೆ ನಕಾರವಾದಾತ ಬಸವಣ್ಣ. ಎನ್ನ ಮಾಂಸಕ್ಕೆ ಮಕಾರವಾದಾತ ಬಸವಣ್ಣ. ಎನ್ನ ಮೇಧಸ್ಸಿಂಗೆ ಶಿಕಾರವಾದಾತ ಬಸವಣ್ಣ. ಎನ್ನ ಅಸ್ಥಿಗೆ ವಕಾರವಾದಾತ ಬಸವಣ್ಣ. ಎನ್ನ ಮಜ್ಜೆಗೆ ಯಕಾರವಾದಾತ ಬಸವಣ್ಣ. ಎನ್ನ ಸರ್ವಾಂಗಕ್ಕೆ ಓಂಕಾರವಾದಾತ ಬಸವಣ್ಣ. ಇಂತು ಬಸವಣ್ಣನೆ ಪರಿಪೂರ್ಣನಾಗಿ, ಬಸವಣ್ಣನೆ ಪ್ರಾಣವಾಗಿ, ಬಸವಣ್ಣನೆ ಅಂಗವಾಗಿ, ಬಸವಣ್ಣನೆ ಲಿಂಗವಾದ ಕಾರಣ, ನಾನು ಬಸವಣ್ಣಾ ಬಸವಣ್ಣಾ ಬಸವಣ್ಣಾ ಎಂದು ಬಯಲಾದೆನು ಕಾಣಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಆದಿ ಅನಾದಿ ಇಲ್ಲದಂದು, ಸ್ಥಿತಿಗತಿ ಉತ್ಪನ್ನವಾಗದಂದು ಭಕ್ತಿಯನುಭಾವಿಯ ಬಸುರೊಳಗೆ ಸತ್ಯಜ್ಞಾನವೆಂಬ ಶಾಸ್ತ್ರಂಗಳು ಹುಟ್ಟಿದವು. ಆ ಶಾಸ್ತ್ರದೊಳಡಗಿದವು ವೇದಪುರಾಣಾಗಮಂಗಳು. ಆ ಆಗಮಂಗಳೊಳಡಗಿದವು ಐವತ್ತೆರಡಕ್ಷರಂಗಳು ಆ ಅಕ್ಷರಂಗಳೊಳಡಗಿದವು ಇಪ್ಪತ್ತೇಳು ನಕ್ಷತ್ರಂಗಳು. ಆ ಇಪ್ಪತ್ತೇಳು ನಕ್ಷತ್ರಂಗಳೊಳಡಗಿದವು ಈರೇಳು ಲೋಕದ ಗಳಿಗೆ ಜಾವ ದಿನ ಮಾಸ ಸಂವತ್ಸರಂಗಳು. ಇಂತಿವೆಲ್ಲವನು ಒಳಗಿಟ್ಟುಕೊಂಡಿಹಾತ `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಹೊರಗಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಉಳಿದಿಪ್ಪಾತನು `ಓಂ ನಮಃ ಶಿವಾಯ ಎಂಬಾತ ಕಾಣಿರೆ ! ಮತ್ತಿದ್ದ ಯೋನಿಜರೆಲ್ಲರೂ ಶಾಪಹತರಾಗಿ ಹೋದರು. ಇದು ಕಾರಣ- `ಓಂ ನಮಃ ಶಿವಾಯ ಎಂಬಾತನೆ ಲಿಂಗವು ಪಂಚಾಕ್ಷರಿಯೆ ಪರಮೇಶ್ವರನು, ಪಂಚಾಕ್ಷರಿಯೆ ಪರಮತತ್ವ, ಪಂಚಾಕ್ಷರಿಯೆ ಪರಮಯೋಗ, ಪಂಚಾಕ್ಷರಿಯೆ ಪರಂಜ್ಯೋತಿ, ಪಂಚಾಕ್ಷರಿಯೆ ಪಾಪಾಂತಕ. `ನ ಎಂಬಕ್ಷರವೆ ದೇವರ ಚರಣ, `ಮ ಎಂಬಕ್ಷರವೆ ದೇವರ ಒಡಲು, `ಶಿ ಎಂಬಕ್ಷರವೆ ದೇವರ ಹಸ್ತ, `ವಾ ಎಂಬಕ್ಷರವೆ ದೇವರ ನಾಸಿಕ, `ಯ ಎಂಬಕ್ಷರವೆ ದೇವರ ನೇತ್ರ. ಮತ್ತೆ ; `ನ ಎಂಬಕ್ಷರವೆ ದೇವರ ದಯೆ, `ಮ ಎಂಬಕ್ಷರವೆ ದೇವರ ಶಾಂತಿ, `ಶಿ ಎಂಬಕ್ಷರವೆ ದೇವರ ಕ್ರೋಧ, `ವಾ ಎಂಬಕ್ಷರವೆ ದೇವರ ದಮನ, `ಯ ಎಂಬ ಅಕ್ಷರವೆ ದೇವರ ಶಬ್ದ, ಮತ್ತೆ ; `ನ ಎಂಬಕ್ಷರವೆ ಪೃಥ್ವಿ, `ಮ ಎಂಬಕ್ಷರವೆ ಅಪ್ಪು, `ಶಿ` ಎಂಬಕ್ಷರವೆ ಅಗ್ನಿ, `ವಾ ಎಂಬಕ್ಷರವೆ ವಾಯು, `ಯ ಎಂಬಕ್ಷರವೆ ಆಕಾಶ. ಮತ್ತೆ; `ನ ಎಂಬಕ್ಷರವೆ ಬ್ರಹ್ಮ, `ಮ ಎಂಬಕ್ಷರವೆ ವಿಷ್ಣು, `ಶಿ ಎಂಬಕ್ಷರವೆ ರುದ್ರ, `ವಾ ಎಂಬಕ್ಷರವೆ ಶಕ್ತಿ, `ಯ ಎಂಬಕ್ಷರವೆ ಲಿಂಗ, ಇಂತು ಪಂಚಾಕ್ಷರದೊಳಗಳಿವಕ್ಷರ ನಾಲ್ಕು, ಉಳಿವಕ್ಷರ ಒಂದು. ಈ ಪಂಚಾಕ್ಷರವನೇಕಾಕ್ಷರವ ಮಾಡಿದ ಬಳಿಕ ದೇವನೊಬ್ಬನೆ ಎಂದರಿದು, ಬ್ರಹ್ಮ ದೈವವೆಂಬ ಬ್ರಹ್ಮೇತಿಕಾರರನೇನೆಂಬೆನಯ್ಯ ! ವಿಷ್ಣು ದೈವವೆಂಬ ವಿಚಾರಹೀನರನೇನೆಂಬೆನಯ್ಯ ! ಅಶ್ವಿನಿ ಭರಣಿ ಕೃತ್ತಿಕೆ ಮೊದಲಾದ ಇಪ್ಪತ್ತೇಳು ನಕ್ಷತ್ರಂಗಳೊಳಗೆ, ಮೂಲಾನಕ್ಷತ್ರದಲ್ಲಿ (ವಿಷ್ಣು) ಹುಟ್ಟಿದನಾಗಿ ಮೂಲನೆಂಬ ಹೆಸರಾಯಿತ್ತು. ದೇವರ ಸೇವ್ಯಕಾರ್ಯಕ್ಕೆ ಪ್ರಾಪ್ತನೆಂದು ವೇದಂಗಳು ಬಿನ್ನೈಸಲು, ಜ್ಯೋತಿಷ್ಯಜ್ಞಾನ ಶಾಸ್ತ್ರಂಗಳು ಹುಸಿಯಾದೆವೆಂದು ನಿಮ್ಮ ಹರಿಯ ಅಡವಿಯಲ್ಲಿ ಬೀಸಾಡಲು, ಅಲ್ಲಿ ಆಳುತ್ತಿದ್ದ ಮಗನ ಭೂದೇವತೆ ಸಲಹಿ, ಭೂಕಾಂತನೆಂಬ ಹೆಸರುಕೊಟ್ಟು, ಭೂಚಕ್ರಿ ತನ್ನ ಪ್ರತಿರೂಪ ತೋಳಲ್ಲಿ ಸೂಡಿಸಿ ಶಿವಧರ್ಮಾಗಮ ಪೂಜೆ ಭಕ್ತಿಯಲ್ಲಿ ಯುಕ್ತನ ಮಾಡಿದ ಬಳಿಕ, ಮತ್ತೆ ನಮ್ಮ ದೇವರ ಶ್ರೀಚರಣದಲ್ಲಿರ್ದು ಒಳಗೆ ತೋರಲು ದೇವರು ಪುರಾಣಂಗ? ಕರೆದು ವಿಷ್ಣುವಿನ ಪಾಪಕ್ಷಯವ ನೋಡಿ ಎಂದರೆ ಆ ಪುರಾಣಂಗಳಿಂತೆಂದವು; ``ಪಾಪಂತು ಮೂಲನಕ್ಷತ್ರಂ ಜನನೀವರಣಂ ಪುನಃ ಪಾಪಂ ತು ಪರ್ವತಸ್ಥೂಲಂ ಶಿವೇ ವೈರಮತಃ ಪರಂ ಶಿವದಾಸೋಹಭಾವೇನ ಪಾಪಕ್ಷಯಮವಾಪ್ನುಯಾತ್ ಎಂದು ಪುರಾಣಂಗಳು ಹೇಳಲಾಗಿ; ವಿಷ್ಣು ಕೇಳಿ, ಪುರಾಣದ ಕೈಯಲು ದೀಕ್ಷಿತನಾಗೆ, ಪುರಾಣ ಪುರುಷೋತ್ತಮನೆಂಬ ಹೆಸರು ಬಳಿಕಾಯಿತ್ತು. ಮತ್ತೆ ನಮ್ಮ ದೇವರ ಪಾದರಕ್ಷೆಯ ತಲೆಯಲ್ಲಿ ಹೊತ್ತುಕೊಂಡು ಭೂತಂಗಳಿಗಂಜಿ ಶಂಖಮಂ ಪಿಡಿದುಕೊಂಡು, ದುರಿತಂಗಳಿಗಂಜಿ ನಾಮವನಿಟ್ಟು, ಪ್ರಳಯಂಗಳಿಗಂಜಿ ವೇಷವ ತೊಟ್ಟು. ರಾಕ್ಷಸರಿಗಂಜಿ ಚಕ್ರಮಂ ಪಿಡಿದು, ಶಿವನ ದಾಸೋಹದ ದಾಸಿಯೆಂದು ಕಸಕಿಲಂ ಪಿಡಿದು ಬಯಲನುಡುಗಿ, ಹೊತ್ತ ನೀರಲ್ಲಿ ಪುತ್ಥಳಿಯ ¸õ್ಞಖ್ಯಮಂ ಮಾಡಿ ಇಪ್ಪತ್ತೇಳು ಲಕ್ಷವರುಷ ಶಿವನ ಸೇವೆಯಂ ಮಾಡಿ ಮತ್ತೆ ಗರುಡವಾಹನ ಸತಿಲಕ್ಷ್ಮಿ ವಾರ್ಧಿಜಯಮಂ ಪಡೆದು ದೇವರ ಎಡದ ಗದ್ದುಗೆಯನೋಲೈಸಿಪ್ಪವನ ದೇವರೆಂದರೆ ನೀವೆಂದಂತೆ ಎಂಬರೆ ? ಕೇಳಿರಣ್ಣಾ ! ವಚನಶುದ್ಧ ಭಾವದಲ್ಲಿ ಭಕ್ತಿಯುಳ್ಳವರು ನೀವು ಹೊತ್ತಿದ್ದ ವೇಷದಲ್ಲಿ ತಿಳಿದು ನೋಡಿ. ತಂದೆತಾಯಿ ಇಂದ್ರಿಯದಲ್ಲಿ ಬಂದವರು ದೇವರೆ ? ಸಂದೇಹ ಭ್ರಮೆಯೊಳಗೆ ಸಿಕ್ಕಿದವರು ದೇವರೆ ? ಶುಕ್ಲ ಶೋಣಿತದೊಳಗೆ ಬೆಳೆದವರು ದೇವರೆ ? ಆ ತಂದೆ ತಾಯ ಹುಟ್ಟಿಸಿದರಾರೆಂದು ಕೇಳಿರೆ; ಹಿಂದೆ ಸಂದ ಯುಗಂಗಳು ಶತಕೋಟಿ ಸಂಖ್ಯೆಯ ಮೇಲೆ ಏಳುನೂರೆಪ್ಪತ್ತುಸಾವಿರ ಯುಗಂಗಳು, ಇದಕ್ಕೆ ನವಕೋಟಿ ನಾರಾಯಣರಳಿದರು, ಶತಕೋಟಿ ಸಂಖ್ಯೆ ಬ್ರಹ್ಮರಳಿದರು ಉಳಿದವರ ಪ್ರಳಯವ ಹೊಗಳಲಿನ್ನಾರ ವಶ ? ಇಂತಿವೆಲ್ಲವನು ಬಿಟ್ಟು ಉಳಿದಿಪ್ಪಾತನೊಬ್ಬನೆ, ಆತಂಗೆ ನಮೋ ಎಂಬೆ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಕೇಳಿರಯ್ಯಾ ಮಾನವರೆ, ಗಂಡ ಹೆಂಡಿರ ಮನಸ್ಸು ಒಂದಾಗಿದ್ದರೆ ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ. ಗಂಡ ಹೆಂಡಿರ ಮನಸ್ಸು ಬೇರಾದರೆ ಗಂಜಳದೊಳಗೆ ಹಂದಿ ಹೊರಳಾಡಿ ಒಂದರ ಮೇಲೆ ಒಂದು ಬಂದು ಮೂಸಿದ ಹಾಗೆ. ಛೇ, ಛೇ, ಇದು ಭಕ್ತಿಯಲ್ಲಣ್ಣ. ಅದೇನು ಕಾರಣವೆಂದೊಡೆ, ಕಾಶಿಗೆ ಹೋದೆನೆಂಬವರು ಹೇಸಿ ತೊತ್ತಿನ ಮಕ್ಕಳಯ್ಯ. ಮೈಲಾರಕ್ಕೆ ಹೋದೆನೆಂಬವರು ಮಾದಗಿತ್ತಿಯ ಮಕ್ಕಳಯ್ಯ. ಪರ್ವತಕ್ಕೆ ಹೋದೆನೆಂಬವರು ಹಾದರಗಿತ್ತಿಯ ಮಕ್ಕಳಯ್ಯ. ರಾಚೋಟಿಗೆ ಹೋದೆನೆಂಬವರು ಲಜ್ಜೆಮಾರಿ ತೊತ್ತಿನ ಮಕ್ಕಳಯ್ಯ. ಛೇ, ಛೇ, ಇದು ಭಕ್ತಿಯಲ್ಲವಯ್ಯ. ಅದೆಂತೆಂದೊಡೆ; ಪರಬ್ರಹ್ಮ ಮೂರುತಿಯಾದ ಪರಶಿವನೆ ಗುರುನಾಮದಿಂ ಬಂದು ಇಷ್ಟಲಿಂಗವ ಧರಿಸಿ, ಪಂಚಾಕ್ಷರಿಯ ಬೋದ್ಥಿಸಿದ ಮೇಲೆ ಆ ಭಕ್ತನ ಕಾಯವೇ ಕೈಲಾಸ. ಅವನ ಒಡಲೆ ಸೇತುಬಂಧ ರಾಮೇಶ್ವರ. ಅವನ ಶಿರವೆ ಶ್ರೀಶೈಲ. ಆತ ಮಾಡುವ ಆಚಾರವೆ ಪಂಚಪರುಷ. ಇದು ತಿಳಿಯದೆ ಶಾಸ್ತ್ರದಿಂದ ಕೇಳಿ, ಅರಿಯದೆ ಮಂದಬುದ್ಧಿಯಿಂದ ಪರ್ವತಕ್ಕೆ ಹೋಗಿ ಪಾತಾಳಗಂಗೆಯಲ್ಲಿ ಮುಳುಮುಳುಗೆದ್ದರೆ, ಛೇ, ಛೇ, ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ, ನಿನ್ನ ಪಾಪವು ಹೋಗಲಿಲ್ಲವು. ಅಲ್ಲಿಂದ ಕಡೆಗೆ ಬಂದು, ಕೆಟ್ಟ ಕತ್ತಿಯ ಕೊಂಡು ಕೆರವಿನಟ್ಟೆಯ ಮೇಲೆ ಮಸೆದು ಮಸ್ತಕವ ತೋಯಿಸಿ ತಲೆಯ ಬೋಳಿಸಿಕೊಂಡರೆ, ನಿನ್ನ ತಲೆಯ ತಿಂಡಿ ಹೋಯಿತಲ್ಲದೆ ನಿನ್ನ ಪಾಪವು ಬಿಡಲಿಲ್ಲವಯ್ಯ ! ಅಲ್ಲಿಂದ ಕೋಲು ಬುಟ್ಟಿಯ ತೆಗೆದುಕೊಂಡು ಬರುವಂತಹ ದಿಂಡೆತೊತ್ತಿನ ಮಕ್ಕಳ ಕಣ್ಣಲಿ ಕಂಡು, ಪಡಿಹಾರಿ ಉತ್ತಣ್ಣನ ಎಡದ ಪಾದ ಎಕ್ಕಡದಿಂದೆ ಪಟಪಟನೆ ಹೊಡೆ ಎಂದಾತ ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
--------------
ಅಂಬಿಗರ ಚೌಡಯ್ಯ
ಎಡದ ಕೈಯಲು ನಿಗಳವನಿಕ್ಕಿ ಬಲದ ಕೈಯ ಕಡಿದುಕೊಂಡಡೆ ನೋಯದಿಪ್ಪುದೆ ಪ್ರಾಣವೊಂದಾಗಿ ದೇಹ ಬೇರಿಲ್ಲ. ಲಿಂಗವ ಪೂಜಿಸಿ ಜಂಗಮವನುದಾಸೀನವ ಮಾಡಿದಡೆ ಬೆಂದೆನಯ್ಯಾ ನಾನು, ಕೂಡಲಸಂಗಮದೇವಾ. 406
--------------
ಬಸವಣ್ಣ
ಮೃಡನನೊಂದು ದೈವಕ್ಕೆ ಪಡಿಗಟ್ಟಿ ನುಡಿವನ ಬಾಯಲ್ಲಿ, ಬಿಡದೆ ನೆಟ್ಟುವೆನೈದಾರು ಗೆಜ್ಜೆಯ ಗೂಟಗಳನು. ಭೂಮಂಡಲದೊಳಗೆ ಕಲಿದೇವಂಗೆ ಹುಲುದೈವವ ಸರಿಯೆಂದು ನುಡಿವನ ಬಾಯ, ಎಡದ ಕಾಲ ಕೆರಹಿಂದ ಬಡಿಯೆಂದ, ಮಡಿವಾಳ ಮಾಚಯ್ಯ.
--------------
ಮಡಿವಾಳ ಮಾಚಿದೇವ
ಸರ್ವಬ್ರಹ್ಮಾಂಡವ ಗರ್ಭೀಕರಿಸಿಕೊಂಡಿರ್ದ ಮೂರ್ತಿಗೆ ಭಕ್ತನೆ ಎಡದ ಪಾದ, ಮಹೇಶ್ವರನೆ ಬಲದ ಪಾದ, ಪ್ರಸಾದಿಯೆ ಎಡದ ಹಸ್ತ, ಪ್ರಾಣಲಿಂಗಿಯೆ ಬಲದ ಹಸ್ತ, ಶರಣನೆ ಎಡದ ಕಣ್ಣು, ಐಕ್ಯನೆ ಬಲದ ಕಣ್ಣು, ಓಂಕಾರವೆ ನಿಜಮುಖ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಮಸ್ತಕದಲ್ಲಿ ಮಹಾದೇವನೆಂಬ ರುದ್ರನಿಪ್ಪನಯ್ಯಾ, ನೊಸಲಲ್ಲಿ ಲಕುಲೀಶ್ವರನೆಂಬ ರುದ್ರನಿಪ್ಪನಯ್ಯಾ. ನಾಭಿಯಲ್ಲಿ ಶಂಕರನೆಂಬ ರುದ್ರನಿಪ್ಪನಯ್ಯಾ, ಎದೆಯಲ್ಲಿ ಮಹೇಶ್ವರನೆಂಬ ರುದ್ರನಿಪ್ಪನಯ್ಯಾ. ಕೊರಳಲ್ಲಿ ಲೋಕೇಶ್ವರನೆಂಬ ರುದ್ರನಿಪ್ಪನಯ್ಯಾ. ಬಲದ ಭುಜದಲ್ಲಿ ಶ್ರೀಕÀಠನೆಂಬ ರುದ್ರನಿಪ್ಪನಯ್ಯಾ, ಎಡದ ಭುಜದಲ್ಲಿ ದೇವೇಶನೆಂಬ ರುದ್ರನಿಪ್ಪನಯ್ಯಾ. ಬಲದ ಬಾಹುವಿನಲ್ಲಿಈಶ್ವರನೆಂಬ ರುದ್ರನಿಪ್ಪನಯ್ಯಾ. ಎಡದ ಬಾಹುವಿನಲ್ಲಿ ಶೂಲಪಾಣಿಯೆಂಬ ರುದ್ರನಿಪ್ಪನಯ್ಯಾ. ಬಲದ ಮುಂಗೈಯಲ್ಲಿ ಕೋದಂಡನೆಂಬ ರುದ್ರನಿಪ್ಪನಯ್ಯಾ, ಎಡದ ಮುಂಗೈಯಲ್ಲಿ ಲಿಂಗಕಾಮಿಯೆಂಬ ರುದ್ರನಿಪ್ಪನಯ್ಯಾ. ಬಾಯಲ್ಲಿ ಭವನಾಶನೆಂಬ ರುದ್ರನಿಪ್ಪನಯ್ಯಾ, ನಾಸಿಕದಲ್ಲಿ ನಾಗಭೂಷಣನೆಂಬ ರುದ್ರನಿಪ್ಪನಯ್ಯಾ. ಬಲದ ಕಣ್ಣಲ್ಲಿ ಕಾಮಸಂಹರನೆಂಬ ರುದ್ರನಿಪ್ಪನಯ್ಯಾ, ಎಡದ ಕಣ್ಣಲ್ಲಿ ತ್ರಿಪುರಸಂಹರನೆಂಬ ರುದ್ರನಿಪ್ಪನಯ್ಯಾ. ಬಲದ ಕರ್ಣದಲ್ಲಿ ಪಾರ್ವತೀಪ್ರಿಯನೆಂಬ ರುದ್ರನಿಪ್ಪನಯ್ಯಾ, ಎಡದ ಕರ್ಣದಲ್ಲಿ ಏಕಾದಶನೆಂಬ ರುದ್ರನಿಪ್ಪನಯ್ಯಾ. ಹಿಂದಲೆಯಲ್ಲಿ ಪಂಚಮುಖನೆಂಬ ರುದ್ರನಿಪ್ಪನಯ್ಯಾ. ಬ್ರಹ್ಮರಂಧ್ರದಲ್ಲಿ ಬ್ರಹ್ಮಾಂಡಖಂಡಿತನೆಂಬ ರುದ್ರನಿಪ್ಪನಯ್ಯಾ; ಇಂತೀ ರುದ್ರರುಗಳು ತಮ್ಮ ತಮ್ಮಸ್ಥಾನಂಗಳೊಳಗಿಪ್ಪರಾಗಿ; ಇದನರಿಯದೆ ವಿಭೂತಿಯ ಧರಿಸಿದಡೆ ಕತ್ತೆ ಬೂದಿಯಲ್ಲಿ ಹೊರಳಿದಂತೆ ಕಾಣಾ ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಎಡದ ಕೈಯಲಿ ಕತ್ತಿ, ಬಲದ ಕೈಯಲಿ ಮಾಂಸ, ಬಾಯಲಿ ಸುರೆಯ ಗಡಿಗೆ, ಕೊರಳಲಿ ದೇವರಿರಲು ಅವರ ಲಿಂಗನೆಂಬೆ, ಸಂಗನೆಂಬೆ, ಕೂಡಲಸಂಗಮದೇವಾ, ಅವರ ಮುಖಲಿಂಗಿಗಳೆಂಬೆನು.
--------------
ಬಸವಣ್ಣ
ಇಷ್ಟಲಿಂಗಕ್ಕೆ ಅರ್ಪಿಸುವಾಗ, ಇಷ್ಟಲಿಂಗದಲ್ಲಿ ಮೂಲಮಂತ್ರವ ಧ್ಯಾನಿಸುವ ಕ್ರಮವು: ಓಂ ಹ್ರಾಂ ನಾಂ ಸದ್ಯೋಜಾತ ಆಚಾರಲಿಂಗಾಯನಮಃ ಇಷ್ಟಲಿಂಗದ ಶಕ್ತಿ ಪೀಠದ ಹಿಂದೆಸೆಯಲ್ಲಿ ಸಂಬಂಧ. ಓಂ ಹ್ರೀಂ ಮಾಂ ವಾಮದೇವ ಗುರುಲಿಂಗಾಯನಮಃ ಇಷ್ಟಲಿಂಗದ ಎಡದ ಕೈಯಲ್ಲಿ ಸಂಬಂಧ. ಓಂ ಹ್ರೂಂ ಸಿಂ ಅಘೋರ ಶಿವಲಿಂಗಾಯನಮಃ ಇಷ್ಟಲಿಂಗದ ಬಲಭಾಗದ ವರ್ತುಳದ ಸಂಧಿಲಿ ಸಂಬಂಧ. ಓಂ ಹ್ರೈಂ ವಾಂ ತತ್ಪುರುಷ ಜಂಗಮಲಿಂಗಾಯನಮಃ ಇಷ್ಟಲಿಂಗದ ಎಡದ ಭಾಗದ ಗೋಮುಖದಲ್ಲಿ ಸಂಬಂಧ. ಓಂ ಹ್ರೌಂ ಯಾಂ ಈಶಾನ್ಯ ಪ್ರಸಾದಲಿಂಗಾಯನಮಃ ಇಷ್ಟಲಿಂಗದ ನಾಳದಲ್ಲಿ ಸಂಬಂಧ. ಓಂ ಹ್ರಃ ಓಂ ಗೋಪ್ಯಮುಖ ಮಹಾಲಿಂಗಾಯನಮಃ ಇಷ್ಟಲಿಂಗದ ಗೋಳಕದಲ್ಲಿ ಸಂಬಂಧ. ಓಂ ಬಾಂ ಅಂ ಇಷ್ಟಲಿಂಗಾಯನಮಃ ಇಷ್ಟಲಿಂಗದ ಮಸ್ತಕದಲ್ಲಿ ಸಂಬಂಧ. ಓಂ ಸಾಂ ಉಂ ಪ್ರಾಣಲಿಂಗಾಯ ನಮಃ ಇಷ್ಟಲಿಂಗದ ಬಲಭಾಗದ ವರ್ತುಳದಲ್ಲಿ ಸಂಬಂಧ. ಓಂ ವಾಂ ಮಾಂ ಭಾವಲಿಂಗಾಯ ನಮಃ ಇಷ್ಟಲಿಂಗದ ಬಲಭಾಗದ ಗೋಮುಖದ ತುದಿಯಲ್ಲಿ ಸಂಬಂಧ ಶಾಂತಕೂಡಲಸಂಗಮದೇವಾ.
--------------
ಗಣದಾಸಿ ವೀರಣ್ಣ
ಎಡದ ಪಾದದಲೊದ್ದಡೆ ಬಲದ ಪಾದವ ಹಿಡಿವೆ, ಬಲದ ಪಾದದಲೊದ್ದಡೆ ಎಡದ ಪಾದವ ಹಿಡಿವೆ, ತ್ರಾಹಿ ತ್ರಾಹಿ ತಪ್ಪೆನ್ನದು, ಕ್ಷಮೆ ನಿಮ್ಮದು. ಕೂಡಲಸಂಗಮದೇವಾ, ನಿಮ್ಮ ಕರುಣದ ಕಂದ ನಾನು.
--------------
ಬಸವಣ್ಣ
ನಾಲ್ಕು ವೇದವನೋದಿದ ವಿಪ್ರರ ಮನೆಯ ಎಣ್ಣೆಹೊಳಿಗೆ ತುಪ್ಪ ಸಕ್ಕರೆ ಎಂದಡೆ ನಮ್ಮ ಶಿವಭಕ್ತರ ಮನೆಯ ಶ್ವಾನ, ಮೂಸಿನೋಡಿ ಒಲ್ಲದೆ ಹೋಯಿತ್ತು. ಅದೆಂತೆಂದಡೆ:ಸಾಮವೇದಿ ಹೋಗುತ್ತಿರಲು ಶ್ವಪಚಯ್ಯಗಳು, ತಮ್ಮ ಪಾಕಕ್ಕೆ ಪಾದರಕ್ಷೆಯ ತೆರೆಯ ಹಿಡಿದಿದ್ದರಾಗಿ. ಆ ಶ್ವಾನನೆ ಶುಚಿಯೆಂದು ಹಾಕಿದ ಮುಂಡಿಗೆಯ ಆರಾದಡೂ ಎತ್ತುವಿರೊ, ಜಗದ ಸಂತೆಯ ಸೂಳೆಯ ಮಕ್ಕಳಿರಾ ? ಜಗಕ್ಕೆ ಪಿತನೊಬ್ಬನೆ ಅಲ್ಲದೆ ಇಬ್ಬರೆಂದು ಬಗಳುವನ ಬಾಯಲ್ಲಿ ನಮ್ಮ ಪಡಿಹಾರಿ ಉತ್ತಣ್ಣಗಳ ಎಡದ ಪಾದರಕ್ಷೆಯ ಅವನಂಗಳ ಮೆಟ್ಟಿಕ್ಕುವೆನೆಂದ_ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಬ್ರಹ್ಮರಂಧ್ರದಲ್ಲಿ ಅನಾದಿಗಣೇಶ್ವರನೆನಿಸಿ, ಸರ್ವತೋಮುಖ[ವಾ]ಗಿಪ್ಪಿರಯ್ಯ. ಲಲಾಟದಲ್ಲಿ ಆದಿಗಣೇಶ್ವರನೆನಿಸಿಪ್ಪಿರಯ್ಯ. ಬಲದ ಕರ್ಣದಲ್ಲಿ ಆತ್ಮಗಣೇಶ್ವರನೆನಿಸಿಪ್ಪಿರಯ್ಯ. ಎಡದ ಕರ್ಣದಲ್ಲಿ ಆಧ್ಯಾತ್ಮಗಣೇಶ್ವರನೆನಿಸಿಪ್ಪಿರಯ್ಯ. ಬಲದ ನಯನದಲ್ಲಿ ನಿರ್ಮಾಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ನಯನದಲ್ಲಿ ನಿರ್ಮಲನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ನಾಸಿಕದಲ್ಲಿ ನಿರ್ಭಯನೆಂಬ ಗಣೇಶ್ವರನೆನೆಸಿಪ್ಪಿರಯ್ಯ. ಜಿಹ್ವೆಯಲ್ಲಿ ನಿರ್ಭಾವನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬೆನ್ನಿನಲ್ಲಿ ಪಂಚವದನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಕಂಠದಲ್ಲಿ ಜ್ಞಾನಾನಂದನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಭುಜದಲ್ಲಿ ಅಕ್ಷಯನೆಂಬ ಗಣೇಶ್ವರನೆಸಿಪ್ಪಿರಯ್ಯ. ಎಡದ ಭುಜದಲ್ಲಿ ವ್ಯೋಮಸಿದ್ಧನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ತೋಳಿನಲ್ಲಿ ಸದಾಶಿವನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ತೋಳಿನಲ್ಲಿ ಶೂಲಪಾಣಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮುಂಗೈಯಲ್ಲಿ ಭಾಳಲೋಚನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮುಂಗೈಯಲ್ಲಿ ಪಶುಪತಿಯೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಬರಿಯಲ್ಲಿ ಭವಹರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಬರಿಯಲ್ಲಿ ಮೃಡನೆಂಬ ಗಣೇಶ್ವರನೆನಿಸಿಪ್ಪಿರಯ್ಯ ಹೃದಯದಲ್ಲಿ ಓಂಕಾರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ನಾಭಿಯಲ್ಲಿ ಶಂಕರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಕಟಿಯಲ್ಲಿ ಮೃತ್ಯುಂಜಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ ಗುಹ್ಯದಲ್ಲಿ ಕಾಮಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಗುಧಸ್ಥಾನದಲ್ಲಿ ಕಾಲಾಂತಕನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ತೊಡೆಯಲ್ಲಿ ಪ್ರಮಥನಾಥನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ತೊಡೆಯಲ್ಲಿ ಮಹಾಮಹೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮಣಿಪಾದದಲ್ಲಿ ಪಟ್ಟವರ್ಧನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮಣಿಪಾದದಲ್ಲಿ ಚಂದ್ರಶೇಖರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಕಣಪಾದದಲ್ಲಿ ಅಖಂಡಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಕಣಪಾದದಲ್ಲಿ ವ್ಯೋಮಕೇಶನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಹರಡಿನಲ್ಲಿ ಜನನ ವಿರಹಿತನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಹರಡಿನಲ್ಲಿ ವಿಶ್ವೇಶ್ವರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಮೇಗಾಲಲ್ಲಿ ಮೇಘವಾಹನನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಮೇಗಾಲಲ್ಲಿ ಈಶಾನ್ಯನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಉಂಗುಷ*ದಲ್ಲಿ ಮಣಿಭೂಷಣನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಉಂಗುಷ*ದಲ್ಲಿ ವಿರೂಪಕ್ಷನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಬಲದ ಆರೆಪಾದದಲ್ಲಿ ಊಧ್ರ್ವಮುಖನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಎಡದ ಅರೆಪಾದದಲ್ಲಿ ಸಚರಾಚರನೆಂಬ ಗಣೇಶ್ವರನೆನಿಸಿಪ್ಪಿರಯ್ಯ. ಆಧಾರಸ್ಥಾನದಲ್ಲಿ ಆಚಾರಲಿಂಗವೆನಿಸಿಪ್ಪಿರಯ್ಯ. ಸ್ವಾಧಿಷಾ*ನದಲ್ಲಿ ಗುರುಲಿಂಗವೆನಿಸಿಪ್ಪಿರಯ್ಯ. ಮಣಿಪೂರಕದಲ್ಲಿ ಶಿವಲಿಂಗವೆನಿಸಿಪ್ಪಿರಯ್ಯ. ಅನಾಹತದಲ್ಲಿ ಜಂಗಮಲಿಂಗವೆನಿಸಿಪ್ಪಿರಯ್ಯ. ವಿಶುದ್ಧಿಯಲ್ಲಿ ಪ್ರಸಾದಲಿಂಗವೆನಿಸಿಪ್ಪರಯ್ಯ. ಆಜ್ಞಾಯಲ್ಲಿ ಮಹಾಲಿಂಗವೆನಿಸಿಪ್ಪಿರಯ್ಯ. ಇಂತಿವೆಲ್ಲಾ ನಾಮಂಗಳನೊಳಕೊಂಡು, `ಓಂ ನಮಃ ಶಿವಾಯ ಇತಿಮಂತ್ರಂ ಸರ್ವಮಂತ್ರಾನ್ ಸ್ಥಾಪಯೇತ್. ಮಂತ್ರಮೂರ್ತಿ ಮಹಾರುದ್ರಂ, ಓಂ ಇತಿ ಜ್ಯೋತಿರೂಪಕಂ' ಎನಿಸಿಕೊಂಡು ಬಾಹ್ಯಾಭ್ಯಂತರದೊಳು ಪರಿಪೂರ್ಣವಾಗಿ ಪ್ರಕಾಶಿಸುತ್ತಿಪ್ಪಿರಿಯಾಗಿ ಸರ್ವಾಂಗವು ಲಿಂಗಮಯವೆಂದರಿದು ಅಡಿಗಡಿಗೆ ಶ್ರೀ ವಿಭೂತಿಯನೆ ಧರಿಸುತಿಪ್ಪೆನಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಇನ್ನಷ್ಟು ... -->