ಆರೂ ಇಲ್ಲದ ಅರಣ್ಯಕ್ಕೆ ಪೋಗಿ,
ನಾನಾ ವರ್ಣದ ಕಟ್ಟಿಗೆಯ ತಂದು,
ಸೂರ್ಯವರ್ಣದ ಕಟ್ಟಿಗೆಯಿಂದ ಗಳಿಗೆಯ ಬಂಧಿಸಿ,
ಚಂದ್ರವರ್ಣದ ಕಟ್ಟಿಗೆಯಿಂದ ಗುಮ್ಮಿಯ ಬಂಧಿಸಿ,
ಅಗ್ನಿವರ್ಣದ ಕಟ್ಟಿಗೆಯಿಂದ ಬುಟ್ಟಿಯ ಬಂಧಿಸಿ,
ಉಳಿದ ವರ್ಣದ ಕಟ್ಟಿಗೆಯಿಂದ ತಟ್ಟಿ, ಹೆಡಗಿಯ ಬಂಧಿಸಿ,
ಜ್ಯೋತಿವರ್ಣದ ಕಟ್ಟಿಗೆಯಿಂದ ಊರೆಲ್ಲವ ಬಂಧಿಸಿ,
ಇಂತೀ ಪದಾರ್ಥವ ಮಾರಿ, ಕಾಯಕವ ಮಾಡುತಿರ್ದೆನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.