ಮೃತ್ತಿಕೆಯ ತಿಟ್ಟದಿಂದ ಮಯಣದ ಕರುವಿಟ್ಟು,
ಆ ಘಟವ ಲಕ್ಷಿಸಲಿಕ್ಕಾಗಿ,
ಪುನರಪಿಯಾಗಿ ಮೃತ್ತಿಕೆಯ ಬಲಿದು
ಈ ಉಭಯದ ಮಧ್ಯದಲ್ಲಿ ನಿಂದ ತಿಟ್ಟದಂತೆ
ಇಂತೀ ತ್ರಿವಿಧ ಜಾರಿ ಉಳುಮೆ ಒಂದೆ ನಿಂದುದನರಿದು,
ಭಕ್ತಿಯ ಮರೆಯಲ್ಲಿದ್ದ ಸತ್ಯ,
ಸತ್ಯದ ಮರೆಯಲ್ಲಿ ವಿಶ್ರಮಿಸಿದ್ದ ಜ್ಞಾನ,
ಜ್ಞಾನವ ವಿಶ್ರಮಿಸಿಕೊಂಡಿಹ ಶಿವಲಿಂಗಮೂರ್ತಿಧ್ಯಾನ,
ಅದು ತದ್ಧ್ಯಾನವಾಗಲಿಕ್ಕಾಗಿ, ಅದು ನಿಜದ ಉಳುಮೆ;
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
ಸಾವಧಾನಿಯ ಸಂಬಂಧ.