Some error occurred
ಅಥವಾ

ಒಟ್ಟು 40 ಕಡೆಗಳಲ್ಲಿ , 15 ವಚನಕಾರರು , 32 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

Created with Highcharts 3.0.6Chart context menuಪದವಿರುವ ವಚನಗಳುವಚನಕಾರರು121113751221311ಒಟ್ಟು3ಅಲ್ಲಮಪ್ರಭುದೇವರು36ಆದಯ್ಯ65ಇಮ್ಮಡಿಮುರಿಘಾಗುರುಸಿದ್ಧ/ಗುರುಸಿದ್ಧಸ್ವಾಮಿ 45ಗುಮ್ಮಳಾಪುರದಸಿದ್ಧಲಿಂಗ 35ಗುರುಸಿದ್ಧದೇವರು 7ಚನ್ನಬಸವಣ್ಣ24ಜಕ್ಕಣಯ್ಯ 30ತೋಂಟದಸಿದ್ಧಲಿಂಗಶಿವಯೋಗಿಗಳು 1ಬಸವಣ್ಣ41ಬಾಲಸಂಗಯ್ಯಅಪ್ರಮಾಣದೇವ64ಮುಮ್ಮಡಿಕಾರ್ಯೇಂದ್ರ/ಮುಮ್ಮಡಿಕಾರ್ಯಕ್ಷಿತೀಂದ್ರ 62ಶಿವಲೆಂಕಮಂಚಣ್ಣ25ಷಣ್ಮುಖಸ್ವಾಮಿ53ಸಂಗಮೇಶ್ವರದಅಪ್ಪಣ್ಣ 5ಸಿದ್ಧರಾಮೇಶ್ವರ0510
ಆದಿ ಅನಾದಿಯೆಂಬವು ಸಂಗಷ್ಟವಾಗಿರ್ದು, ವಿಭೇದವಾಗುವಲ್ಲಿ ಕುಂಡಲಿಯ ಶಕ್ತಿಯಲ್ಲಿ ಪ್ರಾಣವಾಯು ಪ್ರಣವಸ್ವರವನೊಡಗೂಡಿ ಬ್ರಹ್ಮಸ್ಥಾನದಲ್ಲಿ ಸ್ಥಾಪ್ಯ ಶಿವನಾಗಿ, ಭ್ರೂಮಧ್ಯಕಂಠಸ್ಥಾನದಲ್ಲಿ ನಿಃಕಲಸ್ವರೂಪನಾಗಿ, ಹೃದಯನಾಬ್ಥಿಯಲ್ಲಿ ಸಕಲನಿಃಕಲನಾಗಿ, ಸ್ವಾದ್ಥಿಷ್ಠಾನ ಆಧಾರದಲ್ಲಿ ಕೇವಲಸಖನಾಗಿ, ಆ ಸಕಲಕ್ಕೆ ಎರಡು ಪಾದವನಿತ್ತು, ಒಂದು ಪಾದಕ್ಕೆ ಕ್ರಿಯಾಶಕ್ತಿ, ಒಂದು ಪಾದಕ್ಕೆ ಜ್ಞಾನಶಕ್ತಿಯ ಮಾಡಿ ನಿಲ್ಲಿಸಿ, ಮೇಲಣ ಸಕಲ ನಿಃಕಲತತ್ತ್ವಕೈದಿ, ಅಲ್ಲಿಗೆ ಎರಡು ಹಸ್ತವನಿತ್ತು, ಒಂದು ಹಸ್ತಕ್ಕೆ ಆದಿಶಕ್ತಿ, ಒಂದು ಹಸ್ತಕ್ಕೆ ಇಚ್ಛಾಶಕ್ತಿಯನಾದಿ ಮಾಡಿ ನಿಲಿಸಿ, ಮೇಲಣ ನಿಃಕಲತತ್ತ್ವವನೈದಿ, ಅಲ್ಲಿಗೆ ನಾಲ್ಕು ಪಾದವನಿತ್ತು, ಅವು ಆವವು ಎಂದಡೆ, ಜಿಹ್ವೆ ಘ್ರಾಣ ನೇತ್ರ ಶ್ರೋತ್ರವೆಂಬ ನಾಲ್ಕು ಪಾದ ವನಾದಿಮಾಡಿ ನಿಲ್ಲಿಸಿ, ನಾಲ್ಕು ಪಾದವಂ ನಿಲ್ಲಿಸಿದುದರಿಂದ ನಂದಿಯೆಂಬ ನಾಮವಾಯಿತ್ತು. ಆ ನಂದೀಶ್ವರಂಗೆ ಚಿತ್‍ಶಕ್ತಿಯೆ ಅಂಗ, ಪರಶಕ್ತಿಯೆ ಮುಖ. ಇಂತಪ್ಪ ನಂದೀಶ್ವರ ನಲಿದಾಡಿ ಅನಾದಿ ಪರಶಿವ ಅಖಿಳ ಬ್ರಹ್ಮಾಂಡವ ಹೊತ್ತಿಪ್ಪನಲಾಯೆಂದರಿದು, ಆದಿವಾಹನವಾದನು, ಅದೀಗ ಆದಿವೃಷಭನೆಂಬ ನಾಮವಾಯಿತ್ತು. ಆದಿವೃಷಭನ ಆದಿಯಲ್ಲಿ ಪರಶಿವನಿಪ್ಪನು, ಆ ಪರಶಿವನಾದಿಯಲ್ಲಿ ನಿಃಕಲವಿಪ್ಪುದು, ಆ ನಿಃಕಲದಾದಿಯಲ್ಲಿ ಸಕಲ ನಿಃಕಲವಿಪ್ಪುದು. ಆ ಸಕಲ ನಿಃಕಲದಾದಿಯಲ್ಲಿ ಕೇವಲ ಸಕಲವಿಪ್ಪುದು. ಆ ಸಕಲವೆಂದರೆ ಅನಂತತತ್ತ್ವ. ಬ್ರಹ್ಮಾಂಡ ಕೋಟ್ಯಾನುಕೋಟಿ ಲೋಕಾಲೋಕಂಗಳು ದೇವದಾನವ ಮಾನವರು ಸಚರಾಚರ ಎಂಬತ್ತನಾಲ್ಕು ಲಕ್ಷ ಜೀವಜಂತುಗಳುದ್ಭವಿಸಿದವು. ಆ ಪಿಂಡ ಬ್ರಹ್ಮಾಂಡದ ಹೊರೆಯಲ್ಲಿ ಸಕಲಪದಾರ್ಥಗಳುದ್ಭವಿಸಿದವು. ಸಕಲಪದಾರ್ಥಂಗಳ ಪುಣ್ಯಪಾಪದ ಸಾರವ ಕೈಕೊಂಬುದಕ್ಕೆ ದೇವನಾವನುಂಟೆಂದು ಆಹ್ವಾನಿಸಿ ನೋಡಲು, ಆ ನಿಃಕಲ ಮಹಾಲಿಂಗವೆ ಕ್ರಿಯಾಶಕ್ತಿಯ ಮುಖದಲ್ಲಿ ಇಷ್ಟಲಿಂಗವಾಗಿ ಬಂದು, ಜ್ಞಾನಶಕ್ತಿಮುಖದಲ್ಲಿ ಸಕಲಪದಾರ್ಥಂಗಳ ಕೈಕೊಂಬಲ್ಲಿ, ಪುಣ್ಯಪಾಪಂಗಳ ಸಾರವಳಿದು, ಲಿಂಗ ಸಾರವಾದ ರೂಪ ಇಷ್ಟಲಿಂಗಕ್ಕೆ ಕೊಟ್ಟು, ಆ ರುಚಿಪ್ರಸಾದವ ಜ್ಞಾನಶಕ್ತಿ ಆದಿಶಕ್ತಿ ಕೈಯಲ್ಲಿಪ್ಪ ಪ್ರಾಣಲಿಂಗಕ್ಕೆ ಇಚ್ಛಾಶಕ್ತಿಯ ಮುಖದಲ್ಲಿ ಕೊಡಲು, ಆ ರುಚಿ ಪ್ರಸಾದವ ಪ್ರಾಣಲಿಂಗವಾರೋಗಿಸಿ, ಪರಮ ಪರಿಣಾಮವನೈದಲು, ಆ ಪರಿಣಾಮ ಪ್ರಸಾದವ ಜ್ಞಾನಶಕ್ತಿಯು ನಂದೀಶ್ವರಂಗೆ ಕೊಡಲು, ಆ ಪರಮ ತೃಪ್ತಿಯ ಶೇಷ ನಂದೀಶ್ವರ ಆರೋಗಿಸಿ ಪರವಶವನೈದಲು, ಆ ಪರವಶದ ಶೇಷವ ಜ್ಞಾನಶಕ್ತಿ ಆರೋಗಿಸಿ, ಅಡಿಮುಡಿಗೆ ತಾನೆ ಆದಿಯಾಗಲು, ಅದೀಗ ಅಡಿಮುಡಿಯ ಶೇಷ ಹೊತ್ತಿಪ್ಪನೆಂದು ವೇದಾಗಮಶಾಸ್ತ್ರಪುರಾಣಪುರುಷರು ನುಡಿಯುತಿಪ್ಪರು. ಇಂತಪ್ಪ ಬಸವನ ಆದಿಮೂಲವ ಬಲ್ಲ ಶರಣನಾಯಿತ್ತು ತೊತ್ತು ಮುಕ್ಕುಳಿಸಿ ಉಗುಳುವ ಪಡುಗ, ಮೆಟ್ಟುವ ಚರ್ಮ ಹಾವುಗೆಯಾಗಿ ಬದುಕಿದೆನು ಕಾಣಾ, ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವಾ, ನಿಮ್ಮ ಧರ್ಮ ನಿಮ್ಮ ಧರ್ಮ.
--------------
ಸಂಗಮೇಶ್ವರದ ಅಪ್ಪಣ್ಣ
ನಿರಾಮಯವೆಂಬ ಭಕ್ತನ ಅಂಗದಲ್ಲಿ ಝೇಂಕಾರವೆಂಬ ಜಂಗಮವು ಜಂಗಿಟ್ಟು ನಡೆಯಲೊಡನೆ ನಿರಂಜನವಾಯಿತ್ತು. ಆ ನಿರಂಜನದೊಡನೆ ನಿರಾಕಾರವಾಯಿತ್ತು. ಆ ನಿರಕಾರದೊಡನೆ ಆಕಾರಲಿಂಗವಾಗಿ, ಮಂತ್ರಘೋಷವ ಘೋಷಿಸುತಿರ್ಪುದು ನೋಡಾ. ಆ ಲಿಂಗದ ಬೆಳಗಿನೊಳಗೆ ನಾದಪ್ರಭೆ, ಬಿಂದುಪ್ರಭೆ, ಕಳಾಪ್ರಭೆ ಇಂತೀ ತ್ರಿವಿಧಪ್ರಭೆಗಳು ಒಂದೊಂದು ಎರಡೆರಡಾಗಿ ಆರುತೆರನಾಯಿತ್ತು ನೋಡಾ. ನಾದಪ್ರಭೆಯು ಭಕ್ತ-ಮಹೇಶ್ವರ, ಬಿಂದು ಪ್ರಭೆಯು ಪ್ರಸಾದಿ-ಪ್ರಾಣಲಿಂಗಿ, ಕಳಾಪ್ರಭೆಯು ಶರಣ-ಐಕ್ಯ. ಇಂತೀ ಷಡ್ವಿಧಮೂರ್ತಿಗಳಿಗೆ ಷಡ್ವಿಧಲಿಂಗವು. ಅವು ಆವಾವುಯೆಂದೊಡೆ: ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ ಮಹಾಲಿಂಗ. ಈ ಷಡ್ವಿಧಲಿಂಗಕು ಷಡ್ವಿಧ ಶಕ್ತಿಯರು ಅವು ಆವಾವುಯೆಂದೊಡೆ: ಕ್ರಿಯಾಶಕ್ತಿ, ಜ್ಞಾನಶಕ್ತಿ, ಇಚ್ಫಾಶಕ್ತಿ, ಆದಿಶಕ್ತಿ, ಪರಾಶಕ್ತಿ, ಚಿತ್‍ಶಕ್ತಿ. ಇಂತೀ ಶಕ್ತಿಯರಿಗೂ ಷಡ್ವಿಧಭಕ್ತಿ. ಅವು ಆವಾವುಯೆಂದೊಡೆ: ಸದ್ಭಕ್ತಿ, ನೈಷ್ಠಿಭಕ್ತಿ, ಸಾವಧಾನಭಕ್ತಿ, ಅನುಭಾವಭಕ್ತಿ, ಸಮರತಿಭಕ್ತಿ, ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೂ ಷಡ್ವಿಧಹಸ್ತ. ಅವು ಆವಾವುಯೆಂದೊಡೆ: ಸುಚಿತ್ತಹಸ್ತ, ಸುಬುದ್ಧಿಹಸ್ತ, ನಿರಹಂಕಾರಹಸ್ತ, ಸುಮನಹಸ್ತ, ಸುಜ್ಞಾನಹಸ್ತ, ನಿರ್ಭಾವಹಸ್ತ, ಈ ಷಡ್ವಿಧಹಸ್ತಗಳಿಗೂ ಷಡ್ವಿಧ ಕಲೆಗಳು. ಅವು ಆವಾವುಯೆಂದೊಡೆ: ನಿವೃತ್ತಿಕಲೆ, ಪ್ರತಿಷ್ಠಕಲೆ, ವಿದ್ಯಾಕಲೆ, ಶಾಂತಿಕಲೆ, ಶಾಂತ್ಯತೀತಕಲೆ, ಶಾಂತ್ಯತೀತೋತ್ತರ ಕಲೆ. ಈ ಷಡ್ವಿಧಕಲೆಗಳಿಗೂ ಷಡ್ವಿಧಪರಂಗಳು. ಅವು ಆವಾವುಯೆಂದೊಡೆ: ಶುದ್ಧಜ್ಞಾನವೇ ಪರ, ಬದ್ಧಜ್ಞಾನವೇ ಪರ, ನಿರ್ಮಲಜ್ಞಾನವೇ ಪರ, ಮನೋಜ್ಞಾನವೇ ಪರ, ಸುಜ್ಞಾನವೇ ಪರ, ಪರಮಜ್ಞಾನವೇ ಪರ. ಈ ಷಡ್ವಿಧಪರಗಳಿಂದತ್ತತ್ತ ಮಹಾಜ್ಞಾನದ ಬೆಳಗು, ಸ್ವಯಜ್ಞಾನದ ತಂಪು, ನಿರಂಜನದ ಸುಖ. ಆ ನಿರಂಜನದ ಸುಖದೊಳಗೆ ಸುಳಿದಾಡುವ ಝೇಂಕಾರವೆಂಬ ಜಂಗಮವ ನಿರಾಮಯವೆಂಬ ಭಕ್ತನೇ ಬಲ್ಲ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಓಂಕಾರವೇ ಶಿವ, ಯಕಾರವೇ ಸದಾಶಿವ, ವಾಕಾರವೇ ಈಶ್ವರ, ಶಿಕಾರವೇ ಮಹೇಶ್ವರ, ಮಃಕಾರವೇ ಈಶ್ವರ, ನಕಾರವೇ ಈಶಾನ. ಈ ಷಡಕ್ಷರವೆ ಷಡ್ವಿಧಮಂತ್ರಮೂರ್ತಿಯಾಗಿ ಒಪ್ಪುತಿಪ್ಪುದಯ್ಯ, ಮತ್ತೆ-ನಕಾರವೇ ಮೂರ್ತಿಬ್ರಹ್ಮ, ಮಃಕಾರವೇ ಪಿಂಡಬ್ರಹ್ಮ, ಶಿಕಾರವೇ ಕಲಾಬ್ರಹ್ಮ, ವಾಕಾರವೇ ಆನಂದಬ್ರಹ್ಮ, ಯಕಾರವೇ ವಿಜ್ಞಾನಬ್ರಹ್ಮ, ಓಂಕಾರವೇ ಪರಬ್ರಹ್ಮ, ಈ ಷಡಕ್ಷರವೆ ಷಡ್ವಿಧಬ್ರಹ್ಮವೆಂದು ಹೇಳಲ್ಪಟ್ಟಿತ್ತು ನೋಡಾ. ಮತ್ತೆ-ನಕಾರವೇ ಕ್ರಿಯಾಶಕ್ತಿ:ಮಕಾರವೇ ಜ್ಞಾನಶಕ್ತಿ, ಶಿಕಾರವೇ ಇಚ್ಛಾಶಕ್ತಿ, ವಾಕಾರವೇ ಆದಿಶಕ್ತಿ, ಯಕಾರವೇ ಪರಶಕ್ತಿ, ಓಂಕಾರವೇ ಚಿಚ್ಛಕ್ತಿ, ಇಂತಿವು ಮಂತ್ರಶಕ್ತಿಸ್ವರೂಪೆಂದರಿವುದು ನೋಡಾ. ಮತ್ತೆ-ನಕಾರವೇ ಕರ್ಮಸಾದಾಖ್ಯ, ಮಃಕಾರವೇ ಕರ್ತೃಸಾದಾಖ್ಯ, ಶಿಕಾರವೇ ಮೂರ್ತಿಸಾದಾಖ್ಯ, ವಾಕಾರವೇ ಅಮೂರ್ತಿಸಾದಾಖ್ಯ; ಯಕಾರವೇ ಶಿವಸಾದಾಖ್ಯ, ಓಂಕಾರವೇ ಮಹಾಸಾದಾಖ್ಯ ನೋಡ. ಮತ್ತೆ-ನಕಾರವೇ ಪೀತವರ್ಣ, ಮಃಕಾರವೇ ನೀಲವರ್ಣ, ಶಿಕಾರವೇ ಕುಂಕುಮವರ್ಣ, ವಾಕಾರವೇ ಶ್ವೇತವರ್ಣ, ಯಕಾರವೇ ಸ್ಫಟಿಕವರ್ಣ, ಓಂಕಾರವೇ ಜ್ಯೋತಿರ್ಮಯಸ್ವರೂಪು ನೋಡಾ. ಇಂತಿವು ಮಂತ್ರಮೂರ್ತಿಯ ವರ್ಣಭೇದವೆಂದರಿವುದಯ್ಯ. ಮತ್ತೆ-ನಕಾರವೇ ಸದ್ಯೋಜಾತಮಂತ್ರಮೂರ್ತಿ. ಮಃಕಾರವೇ ವಾಮದೇವಮಂತ್ರಮೂರ್ತಿ. ಶಿಕಾರವೇ ಅಘೋರಮಂತ್ರಮೂರ್ತಿ. ವಾಕಾರವೇ ತತ್ಪುರುಷಮಂತ್ರಮೂರ್ತಿ. ಯಕಾರವೇ ಈಶಾನ್ಯಮಂತ್ರಮೂರ್ತಿ. ಓಂಕಾರವೇ ಮಹಾಮಂತ್ರಮೂರ್ತಿ. ಇಂತಿವು ಮಂತ್ರಮೂರ್ತಿಯ ವದನಭೇದವೆಂದರಿವುದು ನೋಡಾ. ಮತ್ತೆ-ನಕಾರವೇ ಸತ್ತು, ಮಃಕಾರವೇ ಚಿತ್ತು, ಶಿಕಾರವೇ ಆನಂದ ವಾಕಾರವೇ ನಿತ್ಯ, ಯಕಾರವೇ ಪರಿಪೂರ್ಣ, ಓಂಕಾರವೇ ನಿರಂಜನಸ್ವರೂಪವೆಂದರಿವುದಯ್ಯ. ಮತ್ತೆ-ನಕಾರವೇ ಆಚಾರಲಿಂಗ, ಮಃಕಾರವೇ ಗುರುಲಿಂಗ, ಶಿಕಾರವೇ ಶಿವಲಿಂಗ, ವಾಕಾರವೇ ಜಂಗಮಲಿಂಗ, ಯಕಾರವೇ ಪ್ರಸಾದಲಿಂಗ, ಓಂಕಾರವೇ ಮಹಾಲಿಂಗ ಇಂತಿವು ಷಡಕ್ಷರ ಮಂತ್ರಲಿಂಗವೆಂದರಿವುದಯ್ಯ. ಇಂತಿವು ಲಿಂಗಷಡಕ್ಷರವೆಂದು ಹೇಳಲ್ಪಟ್ಟವು ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಭಕ್ತ ಮಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣೈಕ್ಯರೆಂಬ ಷಡ್ವಿಧಮೂರ್ತಿಗಳಿಗೂ ಷಡ್ವಿಧಲಿಂಗವ ಕಂಡೆನಯ್ಯ ಅದು ಹೇಗೆಂದಡೆ: ಭಕ್ತಂಗೆ ಆಚಾರಲಿಂಗ, ಮಹೇಶ್ವರಂಗೆ ಗುರುಲಿಂಗ, ಪ್ರಸಾದಿಗೆ ಶಿವಲಿಂಗ, ಪ್ರಾಣಲಿಂಗಿಗೆ ಜಂಗಮಲಿಂಗ, ಶರಣಂಗೆ ಪ್ರಸಾದಲಿಂಗ, ಐಕ್ಯಂಗೆ ಮಹಾಲಿಂಗ. ಈ ಷಡ್ವಿಧಲಿಂಗಕೂ ಷಡ್ವಿಧಶಕ್ತಿಯ ಕಂಡೆನಯ್ಯ ಅದು ಹೇಗೆಂದಡೆ: ಆಚಾರಲಿಂಗಕ್ಕೆ ಕ್ರಿಯಾಶಕ್ತಿ, ಗುರುಲಿಂಗಕ್ಕೆ ಜ್ಞಾನಶಕ್ತಿ, ಶಿವಲಿಂಗಕ್ಕೆ ಇಚ್ಚಾಶಕ್ತಿ, ಜಂಗಮಲಿಂಗಕ್ಕೆ ಆದಿಶಕ್ತಿ, ಪ್ರಸಾದಲಿಂಗಕ್ಕೆ ಪರಾಶಕ್ತಿ, ಮಹಾಲಿಂಗಕ್ಕೆ ಚಿಚ್ಚಕ್ತಿ. ಈ ಷಡ್ವಿಧಶಕ್ತಿಯರಿಗೂ ಷಡ್ವಿಧಭಕ್ತಿಯ ಕಂಡೆನಯ್ಯ. ಅದು ಹೇಗೆಂದಡೆ: ಕ್ರಿಯಾಶಕ್ತಿಗೆ ಸದ್ಭಕ್ತಿ, ಜ್ಞಾನಶಕ್ತಿಗೆ ನೈಷ್ಠಿಕಭಕ್ತಿ, ಇಚ್ಚಾಶಕ್ತಿಗೆ ಸಾವಧಾನ ಭಕ್ತಿ, ಆದಿಶಕ್ತಿಗೆ ಅನುಭಾವಭಕ್ತಿ, ಪರಾಶಕ್ತಿಗೆ ಸಮರತಿಭಕ್ತಿ, ಚಿತ್‍ಶಕ್ತಿಗೆ ಸಮರಸಭಕ್ತಿ. ಈ ಷಡ್ವಿಧ ಭಕ್ತಿಗೆ ಷಡ್ವಿಧಹಸ್ತವ ಕಂಡೆನಯ್ಯ. ಅದು ಹೇಗೆಂದಡೆ: ಸದ್ಭಕ್ತಿಗೆ ಸುಚಿತ್ತಹಸ್ತ, ನೈಷ್ಠಿಕಭಕ್ತಿಗೆ ಸುಬುದ್ಧಿಹಸ್ತ, ಸಾವಧಾನಭಕ್ತಿಗೆ ನಿರಹಂಕಾರಹಸ್ತ, ಅನುಭಾವ ಭಕ್ತಿಗೆ ಸುಮನಹಸ್ತ, ಸಮರತಿಭಕ್ತಿಗೆ ಸುಜ್ಞಾನಹಸ್ತ, ಸಮರಸಭಕ್ತಿಗೆ ನಿರ್ಭಾವಹಸ್ತ. ಈ ಷಡ್ವಿಧ ಹಸ್ತಂಗಳಿಗೂ ಷಡ್ವಿಧಕಲೆಗಳ ಕಂಡೆನಯ್ಯ. ಅದು ಹೇಗೆಂದಡೆ: ಸುಚಿತ್ತಹಸ್ತಕ್ಕೆ ನಿವೃತ್ತಿಕಲೆ, ಸುಬುದ್ಧಿ ಹಸ್ತಕ್ಕೆ ಪ್ರತಿಷ್ಠಾಕಲೆ, ನಿರಹಂಕಾರಹಸ್ತಕ್ಕೆ ವಿದ್ಯಾಕಲೆ, ಸುಮನಹಸ್ತಕ್ಕೆ ಶಾಂತಿಕಲೆ, ಸುಜ್ಞಾನಹಸ್ತಕ್ಕೆ ಶಾಂತ್ಯತೀತಕಲೆ, ನಿರ್ಭಾವಹಸ್ತಕ್ಕೆ ಶಾಂತ್ಯತೀತೋತ್ತರಕಲೆ, ಈ ಷಡ್ವಿಧಕಲೆಗಳಿಗೂ ಷಡ್ವಿಧ[ಜ್ಞಾನ]ಸಂಬಂಧವ ಕಂಡೆನಯ್ಯ. ಅದು ಹೇಗೆಂದಡೆ: ನಿವೃತ್ತಿಕಲೆಗೆ ಶುದ್ಧಜ್ಞಾನವೇ ಸಂಬಂಧ, ಪ್ರತಿಷ್ಠಾಕಲೆಗೆ ಬದ್ಧಜ್ಞಾನವೇ ಸಂಬಂಧ, ವಿದ್ಯಾಕಲೆಗೆ ನಿರ್ಮಲಜ್ಞಾನವೇ ಸಂಬಂಧ, ಶಾಂತಿಕಲೆಗೆ ಮನಜ್ಞಾನವೇ ಸಂಬಂಧ, ಶಾಂತ್ಯತೀತಕಲೆಗೆ ಸುಜ್ಞಾನವೇ ಸಂಬಂಧ, ಶಾಂತ್ಯತೀತೋತ್ತರಕಲೆಗೆ ಪರಮಜ್ಞಾನವೇ ಸಂಬಂಧ. ಈ ಷಡ್ವಿಧಸಂಬಂಧಗಳಿಂದತ್ತ ಮಹಾಘನ ಅಗಮ್ಯ ಅಗೋಚರ ಅಪ್ರಮಾಣ ನಿರಾಕುಳ ನಿರಂಜನಲಿಂಗ ತಾನೇ ನೋಡಾ ಂ್ಞhiೀಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ನಿಃಶಬ್ದವೆಂಬ ಪರಬ್ರಹ್ಮದ ಚಿಂತಾಶಕ್ತಿಯ ಸಹಸ್ರಾಂಶದಲ್ಲಿ ಚಿಚ್ಛಕ್ತಿ ಹುಟ್ಟಿದಳು. ಆ ಚಿತ್‍ಶಕ್ತಿಯ ಸಹಸ್ರಾಂಶದಲ್ಲಿ ಪರಾಶಕ್ತಿ ಹುಟ್ಟಿದಳು. ಆ ಪರಾಶಕ್ತಿಯ ಸಹಸ್ರಾಂಶದಲ್ಲಿ ಆದಿಶಕ್ತಿ ಹುಟ್ಟಿದಳು. ಆ ಆದಿಶಕ್ತಿಯ ಸಹಸ್ರಾಂಶದಲ್ಲಿ ಇಚ್ಛಾಶಕ್ತಿ ಹುಟ್ಟಿದಳು. ಆ ಇಚ್ಛಾಶಕ್ತಿಯ ಸಹಸ್ರಾಂಶದಲ್ಲಿ ಜ್ಞಾನಶಕ್ತಿ ಹುಟ್ಟಿದಳು. ಆ ಜ್ಞಾನಶಕ್ತಿಯ ಸಹಸ್ರಾಂಶದಲ್ಲಿ ಕ್ರಿಯಾಶಕ್ತಿ ಹುಟ್ಟಿದಳು ನೋಡಾ. ಇದಕ್ಕೆ ಮಹಾವಾತುಲಾಗಮೇ : ``ಚಿಂತಾಶಕ್ತಿಸಹಸ್ರಾಂಶೇ ಚಿಚ್ಛಕ್ತಿಶ್ಚ ಸಮುದ್ಭವಃ | ಚಿಚ್ಛಕ್ತಿಶ್ಚ ಸಹಸ್ರಾಂಶೇ ಪರಶಕ್ತಿಶ್ಚ ಸಮುದ್ಭವಃ || ಪರಶಕ್ತಿ ಸಹಸ್ರಾಂಶೇ ಆದಿಶಕ್ತಿ ಸಮುದ್ಭವಾಃ | ಆದಿಶಕ್ತಿಶ್ಚ ಸಹಸ್ರಾಂಶೇ ಇಚ್ಛಾಶಕ್ತಿ ಸಮುದ್ಭವಃ | ಇಚ್ಛಾಶಕ್ತಿ ಸಹಸ್ರಾಂಶೇ ಜ್ಞಾನಶಕ್ತಿಶ್ಚ ಸಮುದ್ಭವಃ | ಏಕೈಕಂ ಪ್ರಣವಾಖ್ಯಾತಂ ಏಕೈಕಂ ಕುಸುಮಾಹಿತಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪವನವೆ ಅಂಗವಾದ ಪ್ರಾಣಲಿಂಗಿಗೆ ಸುಮನವೆ ಹಸ್ತ. ಆ ಹಸ್ತಕ್ಕೆ ಆದಿಶಕ್ತಿ, ಆ ಶಕ್ತಿಗೆ ಜಂಗಮಲಿಂಗ, ಆ ಲಿಂಗಕ್ಕೆ ತ್ವಗಿಂದ್ರಿಯವೆ ಮುಖ, ಆ ಮುಖಕ್ಕೆ ಸ್ಪರ್ಶನಪದಾರ್ಥ; ಆ ಪದಾರ್ಥವನು ತ್ವಕ್ಕಿನಲ್ಲಿಹ ಜಂಗಮಲಿಂಗಕ್ಕೆ ಅನುಭಾವಭಕ್ತಿಯಿಂದರ್ಪಿಸಿ, ಆ ಸುಸ್ಪರ್ಶನ ಪ್ರಸಾದವನು ಪಡೆದು ಸುಖಿಸುವಾತನೆ ಪ್ರಾಣಲಿಂಗಿಯಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಅತಕ್ರ್ಯ ಅಪ್ರಮಾಣ ಅನಾಮಯ ಅನುಪಮ ಸರ್ವಗತ ಸರ್ವಜ್ಞ ಸರ್ವೇಶ್ವರನಪ್ಪ ಪರಶಿವನು ಜಗತ್‍ಸೃಷ್ಟ್ಯರ್ಥವಾಗಿ ಸಮಸ್ತತತ್ವಂಗಳುತ್ಪತ್ತಿಗೆ ಮೂಲಿಗನಾಗಿ ತನ್ನಿಚ್ಛೆಯ ನೆನಹೆಂಬ ಚಿಂತಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕುಂಡಲಿನಿಯಪ್ಪ ಪರೆ ಜನಿಸಿತ್ತು. ಆ ಪರಶಿವನಪ್ಪ ನಿಷ್ಕಲಬ್ರಹ್ಮವು ಈ ಕುಂಡಲಿನಿಯು [ತಾದಾತ್ಯ]ದಿಂ ಬ್ಥಿನ್ನವಿಲ್ಲದಿಹುದೆ ಸಕಲ ನಿಷ್ಕಲವಪ್ಪ ಸದಾಶಿವನು. ಆ ಸದಾಶಿವನು ತಾನೆ ಸಾದಾಖ್ಯದಿಂ ಪಂಚಬ್ರಹ್ಮಮೂರ್ತಿಯಾದುದು. ಎಂತೆಂದೊಡೆ: ಆ ಕುಂಡಲಿನಿಯಪ್ಪ ಪರೆಯ ಸಹಸ್ರದೊಳೊಂದಂಶಂದಲ್ಲಿ ಆದಿಶಕ್ತಿ ಜನಿಸಿತ್ತು. ಆದಿಶಕ್ತಿಯ ಸಹಸ್ರದೊಳೊಂದಂಶದಲ್ಲಿ ಇಚ್ಛಾಶಕ್ತಿ ಜನಿಸಿತ್ತು. ಇಚ್ಛಾಶಕ್ತಿಯ ಸಹಸ್ರದೊಳೊಂದಂಶದಲ್ಲಿ ಜ್ಞಾನಶಕ್ತಿ ಜನಿಸಿತ್ತು. ಜ್ಞಾನಶಕ್ತಿಯ ಸಹಸ್ರದೊಳೊಂದಂಶದಲ್ಲಿ ಕ್ರಿಯಾಶಕ್ತಿ ಜನಿಸಿತ್ತು. ಆ ನಿಷ್ಕಲವಪ್ಪ ಶಿವನ ನಿಷ್ಕಲೆಯಪ್ಪ ಕುಂಡಲಿನಿಯಪ್ಪ ಪರೆಯ ಹತ್ತರೊಳೊಂದಂಶದಲ್ಲಿ ಶಿವಸಾದಾಖ್ಯ ಜನಿಸಿತ್ತು. ಆದಿಶಕ್ತಿಯ ಹತ್ತರೊಳೊಂದಂಶದಲ್ಲಿ ಅಮೂರ್ತಿಸಾದಾಖ್ಯ ಜನಿಸಿತ್ತು. ಇಚ್ಛಾಶಕ್ತಿಯ ಹತ್ತರೊಳೊಂದಂಶದಲ್ಲಿ ಮೂರ್ತಿಸಾದಾಖ್ಯ ಜನಿಸಿತ್ತು. ಜ್ಞಾನಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ತೃಸಾದಾಖ್ಯ ಜನಿಸಿತ್ತು. ಕ್ರಿಯಾಶಕ್ತಿಯ ಹತ್ತರೊಳೊಂದಂಶದಲ್ಲಿ ಕರ್ಮಸಾದಾಖ್ಯ ಜನಿಸಿತ್ತು. ಆ ಕರ್ಮಸಾದಾಖ್ಯವಪ್ಪ ಮಾಹೇಶ್ವರನು ಸಕಲಸ್ವರೂಪದಿಂ ಸೋಮಧರ ಮೊದಲಾದ ಲಿಂಗೋದ್ಭವ ಕಡೆಯಾದ ಪಂಚವಿಂಶತಿಲೀಲೆಯ ತಾಳ್ದ ಸಕಲವಪ್ಪ ಮಾಹೇಶ್ವರನು ಸಕಲನಿಷ್ಕಲವಪ್ಪ ಸದಾಶಿವನು ನಿಷ್ಕಲವಪ್ಪ ಶಿವನೊಬ್ಬನಲ್ಲದೆ ಬೇರಲ್ಲವೆಂಬುದಕ್ಕೆ `ತತ್ಪರಂ ಬ್ರಹ್ಮೇತಿ, ಸ ಏಕೋ ರುದ್ರಸ ಈಶಾನಸ್ಸ ಭಗವಾನ್ ಶ್ರುತಿ: ಸ ಮಹೇಶ್ವರಸ್ಸ ಮಹಾದೇವ ಇತಿ ಇಂತೆಂದುದಾಗಿ, ಏಕಮೇವ ಅದ್ವಿತೀಯನಪ್ಪ ಸೋಮಧರನು, ಉಮಾಸಹವಾದ ಸೋಮನಿಂದ ವಾಯು, ಅಗ್ನಿ, ಪೃಥ್ವಿ, ರವಿ ಮೊದಲಾದ ಅಷ್ಟಮೂರ್ತಿಗಳು ದೇವರ್ಕಳು ಸುರಪ ಹರಿವಿರಿಂಚಿಗಳು ಜನಿಸಿದುದಕ್ಕೆ ಶ್ರುತಿ:ಸೋಮಃ ಪವತೇ ಜನಿತಾ ಮತೀನಾಂ ಜನಿತಾ ದಿವೋ ಜನಿತಾ ಪೃಥಿವ್ಯಾರ್ಜನಿತಾಗ್ನಿ ಸೂರ್ಯಸ್ಯ ಜನಿತೇಂದ್ರಸ್ಯ ಜನಿತಾಥ ವಿಷ್ಣೋಃ ಎಂದುದಾಗಿ, ತನ್ಮಹೇಶ್ವರಕೋಟ್ಯಂಶ ಬ್ರಹ್ಮವಿಷ್ಣುಸಮುದ್ಭವಂ ಋಷಯಃ ಕೃತವೋ ಕೋಟಿರ್ನಿಮಿಷೇಣ ಸಮುದ್ಭವಂ ಎಂದುದಾಗಿ, ಅಷ್ಟತನುವಿನೊಳಗಾದ ಜಗದ ರಚನೆ ಆರಿಂದ ರಚಿಸಿತ್ತು? ಅದ್ಥಿಕಾರ ಲಯ ಭೋಗಕ್ಕೆ ಅವನೊರ್ವ ಕರ್ತನು ಸೃಷ್ಟಿ, ಸ್ಥಿತಿ, ಸಂಹೃತಿ ತಿರೋಧಾನಾನುಗ್ರಹವಾವನಿಂದಹುದು; ಸರ್ವಜ್ಞತ್ವ ಕರ್ತೃತ್ವ ಅನಾದಿಬೋಧತ್ವ ಸ್ವತಂತ್ರತ್ವ ನಿತ್ಯತ್ವ ಅಲುಪ್ತಶಕ್ತಿತ್ವವಾವಗುಂಟು, ಆ ಶಿವನೆ ಘೃತಕಾಠಿಣ್ಯದಂತೆ, ನೀರಾಲಿಕಲ್ಲಂತೆ, ಸಕಲ ಸಕಲನಿಷ್ಕಲ ನಿಷ್ಕಲವಾದವನು, ಸೌರಾಷ್ಟ್ರ ಸೋಮೇಶ್ವರಲಿಂಗನೊಬ್ಬನೆ ಕಾಣಿರೆ.
--------------
ಆದಯ್ಯ
ಅರ್ಥ ಪ್ರಾಣ ಅಭಿಮಾನವನೊಪ್ಪಿಸಿದಲ್ಲಿ ಭಕ್ತನಪ್ಪನೆ ಅಲ್ಲ. ಆದಿರುದ್ರನ ಮಗಳು ಆದಿಶಕ್ತಿ, ಆದಿಶಕ್ತಿಯ ಮಗ ವಿಷ್ಣು, ವಿಷ್ಣುವಿನ ಅರ್ಧಾಂಗಿ ಲಕ್ಷ್ಮಿ. ಈ ತೊತ್ತಿನ ತೊತ್ತಿನ ಪಡಿದೊತ್ತನೊಪ್ಪಿಸಿದಲ್ಲಿ ಭಕ್ತನಪ್ಪನೆ ಅಲ್ಲ. ಎನ್ನ ಮನದೊಡೆಯ ಮಹಾದೇವಾ, ನಿಮ್ಮ ಮನವ ನಿಮಗೊಪ್ಪಿಸಿ ಶುದ್ಧ ನಾನು ಕಾಣಾ, ಕೂಡಲಸಂಗಮದೇವಾ.
--------------
ಬಸವಣ್ಣ
ಶಕ್ತಿ ಎನಲಾ ಮಹಾಲಿಂಗದೊಳಗುಷ್ಣದಂತವಿರಳಮಾದ ಕ್ರಿಯಾಶಕ್ತಿ ಜ್ಞಾನಶಕ್ತಿ ಇಚ್ಛಾಶಕ್ತಿ ಆದಿಶಕ್ತಿ ಪರಾಶಕ್ತಿ ಚಿಚ್ಛಕ್ತಿಗಳೆಂಬಿವು ಮುಖಮೆನೆ ಘ್ರಾಣ ಜಿಹ್ವೆ ನೇತ್ರ ತ್ವಕ್ಕು ಶ್ರೋತ್ರ ಹೃದಯಮೆಂಬೀ ಮುಖಂಗಳಲ್ಲಿ ಪೂರ್ವೋಕ್ತ ಷಡ್ಲಿಂಗಾಕಾರದಿಂದಿರ್ಪೆಯಯ್ಯಾ, ಪರಮ ಶಿವಲಿಂಗ ಷಟ್ವಾಮ್ನಾಯ ಪ್ರಸಂಗ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
ಆದಿಶಕ್ತಿ ಅನಾದಿಶಕ್ತಿಯೆಂಬರು ಅದನಾರು ಬಲ್ಲರಯ್ಯಾ ? `ಆದಿ' ಎಂದಡೆ ಕುರುಹಿಂಗೆ ಬಂದಿತ್ತು. `ಅನಾದಿ' ಎಂದಡೆ ನಾಮಕ್ಕೆ ಬಂದಿತ್ತು. ಆದಿಯೂ ಅಲ್ಲ ಅನಾದಿಯೂ ಅಲ್ಲ, ನಾಮವಿಲ್ಲದ ಸೀಮೆಯಿಲ್ಲದ ನಿಜಭಕ್ತಿಯೆ ಚಿಚ್ಛಕ್ತಿಯಾಯಿತ್ತು ನೋಡಾ. ಅಂತರಂಗದ ಪ್ರಭೆ ಬಹಿರಂಗವೆಲ್ಲಾ ತಾನೆಯಾಗಿ ಗುಹೇಶ್ವರಲಿಂಗದಲ್ಲಿ ಸಂದಿಲ್ಲದಿಪ್ಪ ಮಹಾದೇವಿಯಕ್ಕನ ಶ್ರೀಪಾದಕ್ಕೆ ನಮೋ ನಮೋ ಎಂಬೆನು
--------------
ಅಲ್ಲಮಪ್ರಭುದೇವರು
ಓಂ ನಮೋ ಶಿವಾಯವೆಂಬ ಮಂತ್ರವು ನೆನಹಿಂಗೆ ಬಾರದಂದು. ತಾನುತಾನೆಂಬುದು ಭಾವಕೆ ತೋರದಂದು. ಎಂತಿರ್ದ ಬ್ರಹ್ಮವು ತಾನೇ ನೋಡಾ ! ಆ ಬ್ರಹ್ಮದ ಚಿದ್ವಿಲಾಸದಿಂದ ಚಿದಾತ್ಮನಾದ. ಆ ಚಿದಾತ್ಮನ ಭಾವದಿಂದ ಜ್ಞಾನಾತ್ಮನಾದ. ಆ ಜ್ಞಾನಾತ್ಮನ ಭಾವದಿಂದ ಆಧ್ಯಾತ್ಮನಾದ. ಆ ಆಧ್ಯಾತ್ಮನ ಭಾವದಿಂದ ನಿರ್ಮಲಾತ್ಮನಾದ. ಆ ನಿರ್ಮಲಾತ್ಮನ ಭಾವದಿಂದ ಶುದ್ಧಾತ್ಮನಾದ. ಆ ಶುದ್ಧಾತ್ಮನ ಭಾವದಿಂದ ಬದ್ಧಾತ್ಮನಾದ. ಆ ಬದ್ಧಾತ್ಮನ ಭಾವಕೆ ಭಕ್ತನಾದ. ಆ ಶುದ್ಧಾತ್ಮನ ಭಾವಕೆ ಮಹೇಶ್ವರನಾದ. ಆ ನಿರ್ಮಲಾತ್ಮನ ಭಾವಕೆ ಪ್ರಸಾದಿಯಾದ ಆ ಆಧ್ಯಾತ್ಮನ ಭಾವಕೆ ಪ್ರಾಣಲಿಂಗಿಯಾದ. ಆ ಜ್ಞಾನಾತ್ಮನ ಭಾವಕೆ ಶರಣನಾದ. ಆ ಚಿದಾತ್ಮನ ಭಾವಕೆ ಐಕ್ಯನಾದ. ಆ ಐಕ್ಯನ ಕರಕಮಲಕೆ ಮಹಾಲಿಂಗನಾದ. ಆ ಶರಣನ ಕರಕಮಲಕೆ ಪ್ರಸಾದಲಿಂಗನಾದ. ಆ ಪ್ರಾಣಲಿಂಗಿಯ ಕರಕಮಲಕೆ ಜಂಗಮಲಿಂಗನಾದ. ಆ ಪ್ರಸಾದಿಯ ಕರಕಮಲಕೆ ಶಿವಲಿಂಗನಾದ. ಆ ಮಹೇಶ್ವರನ ಕರಕಮಲಕೆ ಗುರುಲಿಂಗನಾದ. ಆ ಭಕ್ತನ ಕರಕಮಲಕೆ ಆಚಾರಲಿಂಗನಾದ. ಆ ಆಚಾರಲಿಂಗಕೆ ಕ್ರಿಯಾಶಕ್ತಿ, ಆ ಗುರುಲಿಂಗಕೆ ಜ್ಞಾನಶಕ್ತಿ, ಆ ಶಿವಲಿಂಗಕೆ ಇಚ್ಫಾಶಕ್ತಿ, ಆ ಜಂಗಮಲಿಂಗಕೆ ಆದಿಶಕ್ತಿ, ಆ ಪ್ರಸಾದಲಿಂಗಕೆ ಪರಾಶಕ್ತಿ, ಆ ಮಹಾಲಿಂಗಕೆ ಚಿಚ್ಭಕ್ತಿ. ಆ ಚಿಚ್ಫಕ್ತಿಸಂಗದಿಂದ ಚಿದ್ಬ್ರಹ್ಮವ ಕೂಡಿ ಚಿದಾನಂದಸ್ವರೂಪವಾದನಯ್ಯ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಪ್ರಥಮದಲ್ಲಿ ನಿರಾಕಾರ ಪರವಸ್ತು ತಾನೊಂದೆ. ಆ ನಿರಾಕಾರ ಪರವಸ್ತುವಿನಲ್ಲಿ ಮಹಾಜ್ಞಾನ ಉದಯವಾಗಿ, ಆ ಮಹಾಜ್ಞಾನವೇ ಅನಾದಿ ಶರಣರೂಪಾಗಿ, ಆ ನಿರಾಕಾರ ಪರವಸ್ತುವಿಗೆ ಆಧಾರವಾಗಿ, ಚಿನ್ನ ಬಣ್ಣದ ಹಾಂಗೆ ಭಿನ್ನವಿಲ್ಲದಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ನಿರಾಕಾರ ಪರವಸ್ತುವೆ ನಿಃಕಲಲಿಂಗವಾದಲ್ಲಿ, ಆ ನಿಃಕಲಲಿಂಗದಿಂದ ಜ್ಞಾನಚಿತ್ತುದಯವಾಗಿ, ಆ ಜ್ಞಾನಚಿತ್ತುವೆ ಶರಣರೂಪಾಗಿ, ಆ ನಿಃಕಲಲಿಂಗಕ್ಕಾಶ್ರಯವಾಗಿ, ಚಿದಂಗಸ್ವರೂಪನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ನಿಃಕಲಜ್ಞಾನಚಿತ್ತುವೆ ಬಲಿದು ಚಿಚ್ಛಕ್ತಿಯಾದಲ್ಲಿ, ಆ ಚಿಚ್ಛಕ್ತಿಯ ಸಂಗದಿಂದ ನೀನು ಮಹಾಲಿಂಗವಾದಲ್ಲಿ, ಆ ಶಾಂತ್ಯತೀತೋತ್ತರೆಯೆಂಬ ಕಲೆಯಿಂದ ನಾನುದಯವಾಗಿ, ಆ ಮಹಾಲಿಂಗಕ್ಕಾಶ್ರಯವಾಗಿ, ಐಕ್ಯನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು? ಆ ಚಿಚ್ಛಕ್ತಿಯಿಂದ ಪರಶಕ್ತಿ ಉದಯವಾಗಿ, ಆ ಪರಶಕ್ತಿಯ ಸಂಗದಿಂದ ನೀನು ಪ್ರಸಾದಲಿಂಗವಾದಲ್ಲಿ, ಆ ಶಾಂತ್ಯತೀತೆಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಪ್ರಸಾದಲಿಂಗಕ್ಕಾಶ್ರಯವಾಗಿ, ಶರಣರೂಪಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರುಬಲ್ಲರು ಹೇಳು? ಆ ಪರಶಕ್ತಿಯಿಂದ ಆದಿಶಕ್ತಿ ಉದಯವಾಗಿ, ಆ ಆದಿಶಕ್ತಿಯ ಸಂಗದಿಂದ ನೀನು ಶುದ್ಧ ಸುಜ್ಞಾನವೆಂಬ ಜಂಗಮಲಿಂಗವಾದಲ್ಲಿ ಆ ಶಾಂತಿಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಜಂಗಮಲಿಂಗಕ್ಕಾಶ್ರಯವಾಗಿ, ಪ್ರಾಣಲಿಂಗಿಯಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ಆದಿಶಕ್ತಿಯಿಂದ ಇಚ್ಛಾಶಕ್ತಿ ಉದಯವಾಗಿ, ಆ ಇಚ್ಛಾಶಕ್ತಿಯ ಸಂಗದಿಂದ ನೀನು ದಿವ್ಯ ಶಿವಲಿಂಗಾಕಾರವಾದಲ್ಲಿ ಆ ವಿದ್ಯೆಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಶಿವಲಿಂಗಕ್ಕಾಶ್ರಯವಾಗಿ, ಪರಮ ಪ್ರಸಾದಿಯಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ಇಚ್ಛಾಶಕ್ತಿಯಿಂದ ಸುಜ್ಞಾನಶಕ್ತಿ ಉದಯವಾಗಿ ಆ ಸುಜ್ಞಾನಶಕ್ತಿಯ ಸಂಗದಿಂದ ನೀನು ಗುರುಲಿಂಗವಾದಲ್ಲಿ ಆ ಪ್ರತಿಷೆ*ಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಗುರುಲಿಂಗಕ್ಕಾಶ್ರಯವಾಗಿ, ಮಹೇಶ್ವರನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ಆ ಸುಜ್ಞಾನಶಕ್ತಿಯಿಂದ ಕ್ರಿಯಾಶಕ್ತಿ ಉದಯವಾಗಿ, ಆ ಕ್ರಿಯಾಶಕ್ತಿಯ ಸಂಗದಿಂದ ನೀನು ಆಚಾರಲಿಂಗವಾದಲ್ಲಿ ಆ ನಿವೃತ್ತಿಯೆಂಬ ಕಲೆಯಲ್ಲಿ ನಾನುದಯವಾಗಿ, ಆ ಆಚಾರಲಿಂಗಕ್ಕಾಶ್ರಯವಾಗಿ, ಸದ್ಭಕ್ತನಾಗಿಪ್ಪುದ ನೀ ಬಲ್ಲೆಯಲ್ಲದೆ ಮತ್ತಾರು ಬಲ್ಲರು ಹೇಳು?. ನೀ ನಿನ್ನ ಸ್ವಲೀಲೆಯಿಂದ ನಾನಾರೂಪವಾದಲ್ಲಿ ನಿನ್ನ ಬೆಂಬಳಿವಿಡಿದು ನಾನು ನಾನಾರೂಪಗುತ್ತಿರ್ದೆನಯ್ಯಾ. ನೀನಾವಾವ ರೂಪಾದೆ ನಾನು ಆ ಆ ರೂಪಾಗುತ್ತಿರ್ದೆನಯ್ಯಾ. ಇದು ಕಾರಣ, ಶರಣ ಲಿಂಗವೆರಡಕ್ಕೂ ಭಿನ್ನವಿಲ್ಲವೆಂಬುದನು ಸ್ಥಾನುಭಾವವಿವೇಕದಿಂದ ಅರಿದುದು ಅರುಹಲ್ಲದೆ ಆಗಮಯುಕ್ತಿಯಿಂದ ಅರಿದುದು ಅರುಹಲ್ಲ. ಅದೇನುಕಾರಣವೆಂದೊಡೆ; ಶ್ರುತಜ್ಞಾನದಿಂದ ಸಂಕಲ್ಪಭ್ರಾಂತಿ ತೊಲಗದಾಗಿ, ಈ ಷಡುಸ್ಥಲಮಾರ್ಗವನು ದ್ವೆ ೈತಾದ್ವೆ ೈತದೊಳಗೆ ಕೂಡಲಿಕ್ಕಿ ನುಡಿಯಲಾಗದು. ಈ ಲಿಂಗಾಂಗಸಂಬಂಧ ಸಮರಸೈಕ್ಯವ ತಿಳಿದ ಬಳಿಕ ನಿತ್ಯನಿರಂಜನ ಪರತತ್ವವು ತಾನೆ ನೋಡಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆಕಾರ ನಿರಾಕಾರವಿಲ್ಲದಂದು, ಹಮ್ಮುಬಿಮ್ಮುಗಳಿಲ್ಲದಂದು, ಜೀವ ಪರಮರಿಲ್ಲದಂದು, ಮನ ಮನನ ಮನುನೀಯವಿಲ್ಲದಂದು, ಶೂನ್ಯ ನಿಶೂನ್ಯ ನಾಮ ನಿರ್ನಾಮ ಇವೇನೂ ಇಲ್ಲದೆ, ಬಚ್ಚಬರಿಯ ಬಯಲೆ ಸಹಜದಿಂದ ಗಟ್ಟಿಗೊಂಡು, ಘನಲಿಂಗವೆಂಬ ಪುರುಷತತ್ತ್ವವಾಯಿತ್ತಯ್ಯ. ಆ ಘನಲಿಂಗದಿಂದ ಚಿಚ್ಛಕ್ತಿ ಜನಿಸಿದಳು. ಚಿಚ್ಚಕ್ತಿಯಿಂದ ಪರಶಕ್ತಿ ಪುಟ್ಟಿದಳು. ಪರಶಕ್ತಿಯಿಂದ ನಾದ ಬಿಂದು ಕಳೆಗಳಾದವು. ಅಕಾರವೇ ನಾದ, ಉಕಾರವೇ ಬಿಂದು, ಮಕಾರವೇ ಕಳೆ. ಇಂತೀ ತ್ರಿವಿಧಕ್ಕೆ ಪರಶಕ್ತಿಯೇ ತಾಯಿ. ಇಂತೀ ನಾಲ್ಕು ಒಂದಾದಲ್ಲಿ ಓಂಕಾರವಾಯಿತ್ತಯ್ಯ. ಮುಂದೀ ಪ್ರಣವ ತಾನೆ ಪಂಚಲಕ್ಷಣವಾಯಿತ್ತು. ಆ ಘನಲಿಂಗದಿಂದಲೇ ಪಂಚಸಾದಾಖ್ಯಮೂರ್ತಿಗಳಾದುವು. ಆ ಚಿಚ್ಛಕ್ತಿಯಿಂದಲೇ ಪಂಚಶಕ್ತಿಯರಾದರು. ಆ ಪಂಚಶಕ್ತಿಯರಿಂದಲೇ ಪಂಚಕಲೆಗಳಾದವು. ಆ ಪಂಚಲಕ್ಷಣವುಳ್ಳ ಮೂರ್ತಿ ತಾನೆ ತ್ರಯವಾದ ಭೇದವ ಹೇಳಿಹೆನು. ಅದೆಂತೆಂದಡೆ: ಶಿವತತ್ತ್ವ ಸದಾಶಿವತತ್ತ್ವ ಮಾಹೇಶ್ವರತತ್ತ್ವವೆಂದು ಮೂರುತೆರನಾಗಿಪ್ಪುದು. ಬಾಹ್ಯ ನಿಃಕಲತತ್ತ್ವವಾಗಿಪ್ಪುದು. ಒಂದು ಸಕಲನಿಃಕಲತತ್ತ್ವವಾಗಿಪ್ಪುದು. ಒಂದು ಸಕಲತತ್ತ್ವವಾಗಿಪ್ಪುದು. ಶಿವತತ್ತ್ವ ಏಕಮೇವ ಒಂದೆಯಾಗಿಪ್ಪುದು. ಸದಾಶಿವತತ್ತ್ವ ಐದುತೆರನಾಗಿಪ್ಪುದು. ಮಾಹೇಶ್ವರತತ್ವ ಇಪ್ಪತ್ತೆ ೈದು ತೆರನಾಗಿಪ್ಪುದು. ಹೀಂಗೆ ಶಿವತತ್ತ್ವ ಮೂವತ್ತೊಂದು ತೆರನೆಂದರಿವುದು. ಸ್ಥೂಲ, ಸೂಕ್ಷ ್ಮ, ಪರತತ್ವವೆಂಬ ಈ ಮೂರು ತತ್ತ್ವವೆ ಆರಾದ ಭೇದಮಂ ಪೇಳ್ವೆ. ಅದೆಂತೆಂದಡೆ: ಆ ಘನಲಿಂಗದ ಸಹಸ್ರಾಂಶದಲ್ಲಿ ಚಿತ್‍ಶಕ್ತಿ. ಚಿತ್‍ಶಕ್ತಿಯ ಸಹಸ್ರಾಂಶದಿಂದ ಪರಮೇಶ್ವರ. ಪರಮೇಶ್ವರನ ಸಹಸ್ರಾಂಶದಿಂದ ಪರಶಕ್ತಿ. ಆ ಪರಶಕ್ತಿಯ ಸಹಸ್ರಾಂಶದಿಂದ ಸದಾಶಿವನು. ಆ ಸದಾಶಿವನ ಸಹಸ್ರಾಂಶದಿಂದ ಆದಿಶಕ್ತಿ. ಆದಿಶಕ್ತಿಯ ಸಹಸ್ರಾಂಶದಿಂದ ಈಶ್ವರ. ಆ ಈಶ್ವರನ ಸಹಸ್ರಾಂಶದಿಂದ ಇಚ್ಛಾಶಕ್ತಿ. ಇಚ್ಛಾಶಕ್ತಿಯ ಸಹಸ್ರಾಂಶದಿಂದ ಮಾಹೇಶ್ವರ. ಮಾಹೇಶ್ವರನ ಸಹಸ್ರಾಂಶದಿಂದ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ಸಹಸ್ರಾಂಶದಿಂದ ರುದ್ರನು. ಆ ರುದ್ರನ ಸಹಸ್ರಾಂಶದಿಂದ ಕ್ರಿಯಾಶಕ್ತಿ. ಆ ಕ್ರಿಯಾಶಕ್ತಿಯ ಸಹಸ್ರಾಂಶದಿಂದ ಈಶಾನ್ಯಮೂರ್ತಿಯಾದನು. ಹೀಂಗೆ ಮೂರು ಆರು ತೆರನಾಯಿತ್ತಯ್ಯ. ಇನ್ನೀ ಲಿಂಗಂಗಳಿಗೆ ಸರ್ವ ಲಕ್ಷಣ ಸಂಪೂರ್ಣವ ಹೇಳಿಹೆನು. ಅದೆಂತೆಂದಡೆ: ಒಂದು ಮೂರ್ತಿ ಸರ್ವತೋಮುಖ ಸರ್ವತೋಚಕ್ಷು, ಸರ್ವತೋಬಾಹು, ಸರ್ವತೋಪಾದ, ಸರ್ವಪರಿಪೂರ್ಣನಾಗಿ ಮಾಣಿಕ್ಯವರ್ಣದ ಧಾತುವಿನಲ್ಲಿ ಭಾವಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಏಕ ಶಿರಸ್ಸು, ತ್ರಿಣೇತ್ರ, ಎರಡು ಹಸ್ತ, ಎರಡು ಪಾದ. ಮಿಂಚಿನವರ್ಣದ ಧಾತುವಿನಲ್ಲಿ ಜ್ಞಾನಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಎರಡು ಶಿರಸ್ಸು, ಆರು ಕಂಗಳು, ನಾಲ್ಕು ಭುಜ, ಎರಡು ಪಾದ, ಸುವರ್ಣದ ಧಾತುವಿನಲ್ಲಿ ಮನೋಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಮೂರು ಮುಖ, ಒಂಬತ್ತು ಕಂಗಳು, ಆರು ಭುಜ, ಎರಡು ಪಾದ, ಶ್ವೇತವರ್ಣದ ಧಾತುವಿನಲ್ಲಿ ಅಹಂಕಾರಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ನಾಲ್ಕುಮುಖ, ಹನ್ನೆರಡು ಕಂಗಳು, ಎಂಟು ಭುಜ, ಎರಡು ಪಾದ, ಕುಂಕುಮವರ್ಣದ ಧಾತುವಿನಲ್ಲಿ ಬುದ್ಧಿಗಮ್ಯವಾಗಿ ಒಪ್ಪುತಿಪ್ಪುದು. ಅದರಿಂದಲಾದ ಮೂರ್ತಿಗೆ ಪಂಚಮುಖ, ದಶಭುಜ, ದಶಪಂಚನೇತ್ರ, ದ್ವಿಪಾದ, ತನುಯೇಕ, ಶುದ್ಧಸ್ಫಟಿಕವರ್ಣದ ಧಾತುವಿನಲ್ಲಿ ಚಿತ್ತಗಮ್ಯವಾಗಿ ಒಪ್ಪುತಿಪ್ಪುದು. ನಿರಾಕಾರವೇ ಸಾಕಾರವಾಗಿ ತೋರಿತ್ತು. ಸಾಕಾರ ನಿರಾಕಾರವೇಕವೆಂಬುದನು ಸ್ವಾನುಭಾವದಿಂದ ಅನುಭಾವಕೆ ತಂದೆನಯ್ಯ. ಇದು ತನ್ನಿಂದ ತಾನೆ ಸ್ವಯಂಭುವಾದ ಮೂರ್ತಿಯಲ್ಲದೆ ಮತ್ತೊಂದರಿಂದಾದುದಲ್ಲ. ಇಂತೆಸೆವ ಶಿವನ ಮುಖದಲ್ಲಿ ಒಗೆದ ಭೂತಂಗಳಾವವೆಂದಡೆ: ಸದ್ಯೋಜಾತ ಮುಖದಲ್ಲಿ ಪೃಥ್ವಿ. ವಾಮದೇವ ಮುಖದಲ್ಲಿ ಅಪ್ಪು. ಅಘೋರ ಮುಖದಲ್ಲಿ ಅಗ್ನಿ. ತತ್ಪುರುಷ ಮುಖದಲ್ಲಿ ವಾಯು. ಈಶಾನ್ಯ ಮುಖದಲ್ಲಿ ಆಕಾಶ. ಇಂತುದಯವಾದ ಪಂಚಭೂತಂಗಳು ಪಂಚವಿಂಶತಿತತ್ವವಾದ ಭೇದವ ಹೇಳಿಹೆನು. ಆವಾವೆಂದರೆ: ಪೃಥ್ವಿ ಅಪ್ಪು ತೇಜ ವಾಯು ಆಕಾಶ ಇಂತಪ್ಪ ಸ್ಥೂಲಭೂತಿಕವೈದು. ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂದು ವಾಯುಗಳೈದು. ವಾಕು ಪಾಣಿ ಪಾದ ಪಾಯು ಗುಹ್ಯವೆಂದು ಕರ್ಮೇಂದ್ರಿಯಂಗಳೈದು. ಶ್ರೋತ್ರ ತ್ವಕ್ಕು ನೇತ್ರ ಜಿಹ್ವೆ ಘ್ರಾಣವೆಂದು ಬುದ್ಧೀಂದ್ರಿಯಂಗಳೈದು. ಮನ ಬುದ್ಧಿ ಚಿತ್ತ ಅಹಂಕಾರವೆಂದು ಕರಣ ಚತುಷ್ಟಯ ನಾಲ್ಕು. ಜೀವನೊಬ್ಬನು; ಅಂತು ಆತ್ಮತತ್ತ್ವವಿಪ್ಪತ್ತೆ ೈದು. ವಿದ್ಯಾತತ್ತ್ವಹತ್ತು ತೆರನು. ಅದೆಂತೆಂದಡೆ: ಶಾಂತಾತೀತ, ಶಾಂತಿ, ವಿದ್ಯೆ, ಪ್ರತಿಷೆ*, ನಿವೃತ್ತಿ ಎಂದು ಕಲಾಶಕ್ತಿಯರೈದು. ಶಿವಸಾದಾಖ್ಯ ಅಮೂರ್ತಿಸಾದಾಖ್ಯ ಮೂರ್ತಿಸಾದಾಖ್ಯ ಕರ್ತೃಸಾದಾಖ್ಯ ಕರ್ಮಸಾದಾಖ್ಯವೆಂದು ಶಿವಾದಿಯಾದ ಸಾದಾಖ್ಯಮೂರ್ತಿಗಳೈದು. ಅಂತು ವಿದ್ಯಾತತ್ವ ಹತ್ತು ತೆರನು. ದ್ವಿತೀಯ ತತ್ತ್ವಮೂವತ್ತೆ ೈದು ತೆರನು. ಇವೆಲ್ಲಾ ತತ್ತ್ವಂಗಳಿಗನುತ್ತರತತ್ತ್ವವಾಗಿ ಶಿವತತ್ತ್ವವೊಂದು. ಅಂತು ತತ್ತ್ವ ಮೂವತ್ತಾರು. ಅಂತು ಆತ್ಮತತ್ತ್ವ ವಿದ್ಯಾತತ್ತ್ವ ಶಿವತತ್ತ್ವವೆಂಬ ತ್ರೆ ೈತತ್ತ್ವ ಮೂವತ್ತಾರು ತೆರನು. ಈ ತತ್ತ್ವಂಗಳಲ್ಲಿಯೇ ತತ್ತ್ವಮಸ್ಯಾದಿ ವಾಕ್ಯಾರ್ಥ ಕಾಣಲಾಯಿತ್ತು. ಅದು ಹೇಂಗೆಂದಡೆ: ತತ್‍ಪದ ತ್ತ್ವಂಪದ ಅಸಿಪದವೆಂದು ಮೂರು ತೆರನು. ತತ್‍ಪದವೆಂದು ತೂರ್ಯನಾಮದ ಶಿವತತ್ತ್ವವು. ತ್ವಂ ಪದವೆಂದು ಇಪ್ಪತ್ತೆ ೈದು ತೆರನಾಗುತಂ ಇದ್ದಂಥಾ ಆತ್ಮತತ್ತ್ವವು. ಅಸಿ ಪದವೆಂದು ಹತ್ತು ತೆರನಾಗುತಂ ಇದ್ದಂಥಾ ವಿದ್ಯಾತತ್ತ್ವವು. ತತ್‍ಪದವೇ ಲಿಂಗ, ತ್ವಂ ಪದವೇ ಅಂಗ, ಅಸಿ ಪದವೇ ಲಿಂಗಾಂಗ ಸಂಬಂಧ. ಈ ತ್ರಿವಿಧ ಪದವನೊಳಕೊಂಡು ನಿಂದುದೇ ಪರತತ್ತ್ವವಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಮಹಾಮೇರುವೆಂಬ ಪಟ್ಟಣದರಸಂಗೆ ಮೂರು ಪ್ರಧಾನಿಗಳು, ಆರು ಮಂದಿ ವಜೀರರು, ಮೂವತ್ತಾರು ಮಂದಿ ಸರದಾರರು, ಐವತ್ತೆರಡು ಮಂದಿ ಮಹಾಲದಾರರು ಕೂಡಿ ಕತ್ತಲ ಕಾಳಂಧವೆಂಬ ದೇಶವನು ಕಾಳಗವ ಮಾಡಿ ತಕ್ಕೊಂಬುವುದ ಕಂಡೆನಯ್ಯ. ಅದು ಹೇಗೆಂದಡೆ: ಹತ್ತುಲಕ್ಷ ರಾವುತರ ಹಿಡಿದು, ಎಂಟು ಸಾವಿರ ಕುದುರೆಗಳ ಹಿಡಿದು, ಅರವತ್ತು ಕೋಟಿ ಕಾಲಮಂದಿಯ ಸಂದಿಸಂದಿನಲ್ಲಿ ನಿಲಿಸಿ, ಸಪ್ತೇಳುಸಾಗರವ ದಾಂಟಿ, ಕತ್ತಲಕಾಳಂಧವೆಂಬ ದೇಶವನು, ಕೈಸೆರೆಯ ಮಾಡಿಕೊಂಡು, ಐದು ಠಾಣ್ಯವ ಬಲಿದು, ಕಡೆಯ ಠಾಣ್ಯದ ಮುಂದೆ ಚಾವಡಿಯ ರಚಿಸುವುದ ಕಂಡೆನಯ್ಯ. ಅದು ಹೇಗೆಂದಡೆ: ಅದಕೆ ಕಂಬ ಒಂದು, ತೊಲೆ ಮೂರು, ಆರು ಜಂತಿಗಳು, ಮೂವತ್ತಾರು ನೆಲೆಗಳ ಹೂಡಿ. ಒಂಬತ್ತು ಬಾಗಿಲಲ್ಲಿ ನವ ಬೊಂಬೆಗಳ ನಿಲಿಸಿ, ಅವಕ್ಕೆ ನವರತ್ನವ ಕೆತ್ತಿಸಿ, ಐದು ತೊಂಡಲಂಗಳ ಕಟ್ಟಿ, ಹವಳ ನೀಲ ರತ್ನ ಧವಳ ಮುತ್ತು ಮಾಣಿಕ್ಯದ ಗದ್ದುಗೆಯ ಮೇಲೆ ಆ ಅರಸನ ಮೂರ್ತಂಗೊಳಿಸಿ, ಸಪ್ತದ್ವೀಪಂಗಳಂ ರಚಿಸಿ, ಸೋಮವೀದಿ ಸೂರ್ಯವೀದಿಯ ಶೃಂಗಾರವ ಮಾಡಿ, ಆ ಅರಸಿಂಗೆ ಒಡ್ಡೋಲಗವಂ ಮಾಡುವುದ ಕಂಡೆನಯ್ಯ. ಅದು ಹೇಗೆಂದಡೆ: ಪಾತಾಳಲೋಕವೆಂಬ ಠಾಣ್ಯದಲ್ಲಿ ತಾಳ, ಕಂಸಾಳ, ಘಂಟೆ, ಜಾಗಟೆ ಮೊದಲಾದ ಶಬ್ದಂಗಳು, ಮತ್ರ್ಯಲೋಕವೆಂಬ ಠಾಣ್ಯದಲ್ಲಿ ಕಿನ್ನರವೇಣು ತಂಬೂರವೇಣು ಕೈಲಾಸವೇಣುಗಳು ಮೊದಲಾದ ಶಬ್ದಗಳು, ಸ್ವರ್ಗಲೋಕವೆಂಬ ಠಾಣ್ಯದಲ್ಲಿ ಭೇರಿ ಡಮರು ತುಡುಮೆ ಡಿಂಡಿಮ ಮೊದಲಾದ ಶಬ್ದಂಗಳು, ತತ್ಪುರುಷವೆಂಬ ಲೋಕದಲ್ಲಿ, ಕೊಳಲು ನಾಗಸ್ವರ ಶಂಖ ಸನಾಯ ಬುರುಗು ನಪಿರಿ ಹೆಗ್ಗಾಳೆ ಚಿನಿಗಾಳೆ ಚಂದ್ರಗಾಳೆ ಮೊದಲಾದ ಶಬ್ದಂಗಳು, ಈಶಾನ್ಯಲೋಕವೆಂಬ ಠಾಣ್ಯದಲ್ಲಿ ಗೀತಪ್ರಬಂಧ ರಾಗಭೇದ ಮೊದಲಾದ ಶಬ್ದಂಗಳು, ಇಂತಿವು ಆ ಅರಸಿಂಗೆ ಒಡ್ಡೋಲಗವ ಮಾಡುವುದ ಕಂಡೆನಯ್ಯ. ಬ್ರಹ್ಮಂಗೆ ತಾಳ, ವಿಷ್ಣುವಿಂಗೆ ವೇಣು, ರುದ್ರಂಗೆ ಮೃದಂಗ, ಈಶ್ವರಂಗೆ ಉಪಾಂಗ, ಸದಾಶಿವಂಗೆ ಗಾಯನ- ಇಂತೀ ಐವರು ಆ ಅರಸಿಂಗೆ ಗಂಧರ್ವರಾಗಿರ್ಪರು ನೋಡಾ. ಆದಿಶಕ್ತಿ ಮಂತ್ರಶಕ್ತಿ ಕ್ರಿಯಾಶಕ್ತಿ ಇಚ್ಫಾಶಕ್ತಿ ಜ್ಞಾನಶಕ್ತಿ ಇಂತೈವರು ನಾಂಟ್ಯವನಾಡುತಿರ್ಪರು ನೋಡಾ. ಒಬ್ಬ ಸತಿಯಳು ಆ ಅರಸಿಂಗೆ ಸಜ್ಜನವೆಂಬ ಮಜ್ಜನವ ನೀಡಿ, ಅಂತರಂಗದ ಬೆಳಗಿನ ಮಹಾಚಿದ್ವಿಭೂತಿಯಂ ಧರಿಸಿ, ನಿರ್ಮಲವೆಂಬ ಗಂಧವನೊರೆದು, ಸುಜ್ಞಾನವೆಂಬ ಅಕ್ಷತೆಯನಿಟ್ಟು, ನಿರ್ಭಾವವೆಂಬ ಪತ್ರಿಯನೇರಿಸಿ, ನಿದ್ರ್ವಂದ್ವವೆಂಬ ಧೂಪವ ತೋರಿ, ಭಕ್ತನೆಂಬ ಅಡ್ಡಣಿಗೆಯ ಮೇಲೆ, ಮಹೇಶ್ವರನೆಂಬ ಹರಿವಾಣವನಿಕ್ಕಿ, ಮಹಾಪ್ರಸಾದವ ನೆಲೆಯಂಗೊಂಡು, ಪ್ರಾಣಲಿಂಗಿಯೆಂಬ ತುಪ್ಪವನೆರೆದು, ಶರಣನೆಂಬ ಸಕ್ಕರೆಯ ತಳೆದು, ಆ ಅರಸಿಂಗೆ ನೈವೇದ್ಯವ ಮಾಡುತಿರ್ಪಳು ನೋಡಾ. ನವರತ್ನದ ಹರಿವಾಣದೊಳಗೆ ಪಂಚಾರ್ತಿಯ ಮೇಲೆ ಏಕಾರ್ತಿಯನಿಕ್ಕಿ ಪಂಚದೀಪಂಗಳ ರಚಿಸಿ, ಆ ಅರಸಿಂಗೆ ಓಂ ನಮೋ ಓಂ ನಮೋ ಎಂದು ಬೆಳಗುತಿರ್ಪಳು ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅನುಪಮ ಶರಣನ ನೆನಹಿನ ಕೊನೆಯಲ್ಲಿ ಘನಲಿಂಗವು. ಆ ಘನಲಿಂಗದ ನೆನಹಿನ ಕೊನೆಯಲ್ಲಿ ನಿರವಯವು. ಆ ನಿರವಯದ ನೆನಹಿನ ಕೊನೆಯಲ್ಲಿ ನಿರಾಲಂಬವು. ಆ ನಿರಾಲಂಬದ ನೆನಹಿನ ಕೊನೆಯಲ್ಲಿ ನಿರಾಳವು. ಆ ನಿರಾಳದ ನೆನಹಿನ ಕೊನೆಯಲ್ಲಿ ಆದಿಮಹಾಲಿಂಗವು. ಆ ಆದಿ ಮಹಾಲಿಂಗದ ನೆನಹಿನ ಕೊನೆಯಲ್ಲಿ ಚಿತ್‍ಶಕ್ತಿ. ಆ ಚಿತ್‍ಶಕ್ತಿಯ ನೆನಹಿನ ಕೊನೆಯಲ್ಲಿ ಪರಮೇಶ್ವರನು. ಆ ಪರಮೇಶ್ವರನ ನೆನಹಿನ ಕೊನೆಯಲ್ಲಿ ಪರಾಶಕ್ತಿ. ಆ ಪರಾಶಕ್ತಿಯ ನೆನಹಿನ ಕೊನೆಯಲ್ಲಿ ಸದಾಶಿವನು. ಆ ಸದಾಶಿವನ ನೆನಹಿನ ಕೊನೆಯಲ್ಲಿ ಆದಿಶಕ್ತಿ. ಆ ಆದಿಶಕ್ತಿಯ ನೆನಹಿನ ಕೊನೆಯಲ್ಲಿ ಈಶ್ವರನು. ಆ ಈಶ್ವರನ ನೆನಹಿನ ಕೊನೆಯಲ್ಲಿ ಇಚ್ಛಾಶಕ್ತಿ. ಆ ಇಚ್ಛಾಶಕ್ತಿಯ ನೆನಹಿನ ಕೊನೆಯಲ್ಲಿ ಮಹೇಶ್ವರನು. ಆ ಮಹೇಶ್ವರನ ನೆನಹಿನ ಕೊನೆಯಲ್ಲಿ ಜ್ಞಾನಶಕ್ತಿ. ಆ ಜ್ಞಾನಶಕ್ತಿಯ ನೆನಹಿನ ಕೊನೆಯಲ್ಲಿ ಶ್ರೀರುದ್ರಮೂರ್ತಿ. ಆ ಶ್ರೀರುದ್ರಮೂರ್ತಿಯ ನೆನಹಿನ ಕೊನೆಯಲ್ಲಿ ವಿಷ್ಣುವು. ಆ ವಿಷ್ಣುವಿನ ನೆನಹಿನ ಕೊನೆಯಲ್ಲಿ ಮಹಾಲಕ್ಷ್ಮಿ. ಆ ಮಹಾಲಕ್ಷ್ಮಿಯ ನೆನಹಿನ ಕೊನೆಯಲ್ಲಿ ಬ್ರಹ್ಮನು. ಆ ಬ್ರಹ್ಮನ ನೆನಹಿನ ಕೊನೆಯಲ್ಲಿ ಸರಸ್ವತಿ. ಆ ಸರಸ್ವತಿಯ ನೆನಹಿನ ಕೊನೆಯಲ್ಲಿ ಸಕಲ ಚರಾಚರಂಗಳು. ಇಂತಿವೆಲ್ಲವು ಶರಣನ ನೆನಹುದೋರಿದಲ್ಲಿಯೇ ತೋರುತಿರ್ಪವು, ಆ ಶರಣನ ನೆನಹು ನಿಂದಲ್ಲಿಯೇ ಅಡುಗುತಿರ್ಪುವಾಗಿ, ಅಖಂಡೇಶ್ವರಾ, ನಿಮ್ಮ ಶರಣನು ಘನಕ್ಕೆ ಘನಮಹಿಮ, ವಾಙ್ಮನಕ್ಕಗೋಚರನು, ಉಪಮೆಗೆ ಉಪಮಾತೀತನು ನೋಡಾ.
--------------
ಷಣ್ಮುಖಸ್ವಾಮಿ
ಇನ್ನಷ್ಟು ... -->
Some error occurred