ಅಥವಾ

ಒಟ್ಟು 249 ಕಡೆಗಳಲ್ಲಿ , 57 ವಚನಕಾರರು , 183 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಂಚಭೂತವಂಗವಾಗಿಪ್ಪ ಆತ್ಮಂಗೆ ಪಂಚೇಂದ್ರಿಯಂಗಳೇ ಮುಖಂಗಳು, ಪಂಚಕರಣಂಗಳೇ ಕೈಗಳು, ಪಂಚವಿಷಯಂಗಳೇ ಪೂಜೆ, ಪಂಚಪದಾರ್ಥವೇ ಭೋಗ. ಇದನೆಲ್ಲವ ನಿಜಮೂರ್ತಿಯಪ್ಪ ಘನಕ್ಕೆಯ್ದಿಸಬಲ್ಲಡೆ, ಆತ ಸರ್ವನಿರ್ವಾಣಿ, ಸಕಲನಿಷ್ಕಲಾತ್ಮಕನು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.
--------------
ಉರಿಲಿಂಗಪೆದ್ದಿ
ಶಿವನೆ, ನೀನು ಗುರುವಾದೆ ಲಿಂಗವಾದೆ ಜಂಗಮವಾದೆ ಭಕ್ತನಾದೆ. ಗುರುವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಗುರುವಿಂಗೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಗುರುವು ತನ್ನೊಳಡಗಿದ. ಲಿಂಗವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಲಿಂಗಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆತ ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಲಿಂಗವು ಭಕ್ತನೊಳಡಗಿದ. ಜಂಗಮವಾಗಿದ್ದು ಭಕ್ತನೊಳಡಗಿದೆ. ಅದೇನು ಕಾರಣವೆಂದಡೆ ಜಂಗಮಕ್ಕೆ ಅರ್ಥಪ್ರಾಣಾಭಿಮಾನವನು ಕೊಟ್ಟು, ಆ ಜಂಗಮವು ಭೋಗಿಸಿದ ಬಳಿಕ ತಾನಾ ಪ್ರಸಾದ ಮುಂತಾಗಿ ಭೋಗಿಸುವನಾಗಿ, ಆ ಜಂಗಮವು ಭಕ್ತನೊಳಡಗಿದ. ಇಂತಡಗುವರೆ ಹಿರಿಯರು; ಇಂತಡಗುವರೆ ಗುರುವರು; ಇಂತಡಗುವರೆ ಮಹಿಮರು; ಇವರಿಗೆ ಭಾಜನವೊಂದೆ ಭೋಜನವೊಂದೆ. ಈ ನಾಲ್ಕು ಒಂದಾದ ಘನಕ್ಕೆ ಪರಿಯಾಣಬೇರೆಂಬ ಶಾಸ್ತ್ರದ ಸೂತಕಿಗಳನೆನಗೆ ತೋರದಿರಯ್ಯಾ, ಮಸಣಯ್ಯಪ್ರಿಯ ಗಜೇಶ್ವರಾ.
--------------
ಗಜೇಶಮಸಣಯ್ಯಗಳ ಪುಣ್ಯಸ್ತ್ರೀ
ಗುರುಭಕ್ತನಾದಲ್ಲಿ ಘಟಧರ್ಮವಳಿದು ಲಿಂಗಭಕ್ತನಾದಲ್ಲಿ ಮನಸಂಚಲ ನಿಂದು ಜಂಗಮಭಕ್ತಿಯಲ್ಲಿ ಧನದಾಸೆಯಳಿದು ತ್ರಿವಿಧಾಂಗ ಸಲೆ ಸಂದು ತ್ರಿಕರಣ ಶುದ್ಧನಾಗಿದ್ದವಂಗೆ ಮತ್ರ್ಯ ಕೈಲಾಸವೆಂಬ ಕಾಳುಮಾತಿಲ್ಲ ಆತ ನಿಶ್ಚಿಂತ ನಿಜಮುಕ್ತನಯ್ಯಾ, ರಾಮನಾಥ.
--------------
ಜೇಡರ ದಾಸಿಮಯ್ಯ
ಊದ್ರ್ವಮುಖವಾದ, ಅನಂತೇಶನೆಂಬ ವಾಸುಕಿಯ ಶಿರದ ಮೇಲಿಹ ಅಷ್ಟದಳಾಬ್ಜಮಧ್ಯದಲ್ಲಿ, ಒಪ್ಪುತ್ತಿಹ ಶುದ್ಧವಿದ್ಯೆಯೇ ಪೀಠವಾದ ಶಿವಲಿಂಗವೊಂದರಲ್ಲಿ, ದೃಢಭಕ್ತಿಯುಳ್ಳಾತನ ದೇಹವೇ ಲಿಂಗದೇಹವು. ಆ ಚಿದ್ರೂಪನಾದ ಪರಮ ಸ್ವರೂಪನ ಮೂರ್ತಿ ತಾನೇ ಇಷ್ಟಲಿಂಗವು. ಆ ಇಷ್ಟಲಿಂಗದಲ್ಲಿ ದೇಹವನಡಗಿಸಿದ ಮಹಾತ್ಮನ ಮನ ಬುದ್ಧಿ ಅಹಂಕಾರ ಇಂದ್ರಿಯಾದಿ ಗುಣಂಗಳು ಜನನಾದಿ ವಿಕಾರಂಗಳ ಹೊದ್ದವಾಗಿ, ಆತ ನಿರ್ದೇಹಿ, ನಿಜಗುರು ಸ್ವತಂತ್ರಲಿಂಗೇಶ್ವರನ ಶರಣನುಪಮಾತೀತನು.
--------------
ಸ್ವತಂತ್ರ ಸಿದ್ಧಲಿಂಗ
ಅಯ್ಯ, ಮಣ್ಣಿಂಗೆ ಹೊಡೆದಾಡುವಾತನ ಗುರುವೆಂಬೆನೆ? ಆತ ಗುರುವಲ್ಲ. ಹೆಣ್ಣಿಂಗೆ ಹೊಡೆದಾಡುವಂತಾ [ಗೆ?]À ಲಿಂಗವೆಂಬೆನೆ ? ಅದು ಲಿಂಗವಲ್ಲ. ಹೊನ್ನಿಂಗೆ ಹೊಡೆದಾಡುವಾತನ ಜಂಗಮವೆಂಬೆನೆ ? ಆತ ಜಂಗಮವಲ್ಲ. ಈ ತ್ರಿವಿಧಮಲಕ್ಕೆ ಹೊಡೆದಾಡುವಾತನ ಶರಣನೆಂಬೆನೆ ? ಆತ ಶರಣನಲ್ಲ ನೋಡಾ. ಈ ವಿಚಾರವನರಿದು, ಮಲತ್ರಯಂಗಳ ಸರ್ವಾವಸ್ಥೆಯಲ್ಲಿ ಹೊದ್ದಲೀಯದೆ ಗೌರವ ಬುದ್ಧಿ ಲಿಂಗಲೀಯ ಜಂಗಮಾನುಭಾವ ಸರ್ವಾಚಾರಸಂಪತ್ತಿನಾಚರಣೆಯ ಶ್ರುತಿ_ಗುರು_ಸ್ವಾನುಭಾವದಿಂದರಿದು ಆಚರಿಸಿದಡೆ, ಗುಹೇಶ್ವರಲಿಂಗದಲ್ಲಿ ಪರಾತ್ಪರಗುರುಲಿಂಗಜಂಗಮಶರಣನೆಂಬೆ ನೋಡ ಜೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಅನಲನ ತಾಹಲ್ಲಿ, ಅನಿಲನ ಗಂಧ ಒಡಗೂಡಿ ಸೋಂಕುವಲ್ಲಿ, ಅಲ್ಲಿ ವ್ರತದಾಯತದ ಲಕ್ಷಣವನರಿಯಬೇಕು; ಮಿಕ್ಕಾದ ತಿಲ, ತೈಲ, ಫ್ಸೃತ, ಕ್ಷೀರ, ದದ್ಥಿ, ಮಧುರ, ಇಕ್ಷುದಂಡ, ಕ್ರಮುಕ, ಪರ್ಣ, ಚೂರ್ಣ, ರಸ, ದ್ರವ್ಯ ಮುಂತಾದವಿಂತು ಮಿಕ್ಕಾದ ಫಲ ಕುಸುಮ ವಿದಳ ಬಹುಧಾನ್ಯ ಮುಂತಾದ ಸಕಲಸುಯಿಧಾನಂಗಳಲ್ಲಿ ಲಿಂಗವ್ಯವಧಾನದಲ್ಲಿ ತಂದು ಸತ್ಕ್ರೀ ತಪ್ಪದೆ, ವ್ರತಕ್ಕೆ ಭಂಗವಿಲ್ಲದೆ, ನಾಣ್ಣುಡಿಗೆ ಇದಿರೆಡೆಯಾಗದೆ, ವಿಶ್ವಲಕ್ಷಣ ಶಸ್ತ್ರ ಅಭ್ಯಾಸಿಯಂತೆ, ಆವೆಡೆಯಲ್ಲಿ ಇದಿರಿಂಗೆ ತೆರಪಿಲ್ಲದೆ, ತಾ ಮುಟ್ಟುವಲ್ಲಿ ಒಳಗೆ ಕೊಂಡಂತೆ ಇರಬೇಕು. ಇಷ್ಟನರಿತು ಆಚರಣೆಯಲ್ಲಿ ಆದರಿಸಿ ನುಡಿವುದೆ ಸದ್ಭಕ್ತನ ಸ್ಥಲ. ಆತ ಸರ್ವಶೀಲಸಂಪನ್ನ ಸರ್ವಾಂಗಲಿಂಗ ಸನ್ನದ್ಧ ಆತ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವು ತಾನೆ.
--------------
ಅಕ್ಕಮ್ಮ
ಎಮ್ಮ ನಲ್ಲ ಮನೆಯೊಳಗೆ ಏಕಾಂತಂಬೊಕ್ಕಹನು, ಬೇಗ ಬೇಗ ಹೊರವಂಡಿರಣ್ಣಗಳಿರಾ. ನೀವಿದ್ದಡೆ ಮೃತ್ಯು ಬಪ್ಪುದು; ಆತ ಮನೆಯೊಳಗೊಬ್ಬರಿದ್ದಡೂ ಸೈರಿಸ ಕಪಿಲಸಿದ್ಧಮಲ್ಲಿಕಾರ್ಜುನನೆಂಬ ನಲ್ಲನು.
--------------
ಸಿದ್ಧರಾಮೇಶ್ವರ
ಮಾತಿನಲ್ಲಿ ಬಲ್ಲೋತ್ತರವಂತರೆಲ್ಲರೂ ಆತನನರಿದುದಿಲ್ಲ ಆತ ಏತರೊಳಗೂ ಸಿಕ್ಕದ ಅಜಾತ ಶಂಭು. ಆತನ ನೀತಿಯನರಿವುದಕ್ಕೆ ಅಸುರ ಕರ್ಮವ ಬಿಟ್ಟು ವೇಷದಿಂದಾದ ಘಾತಕತನವನೊಲ್ಲದೆ ಭಕ್ತಿಯೆಂಬ ಆಶೆ ಕುರಿತು ಪೋಷಣವ ಹೊರೆಯದೆ ನಿಜ ತತ್ವದ ಆಶೆಯೇ ಸಾಕಾರವಾಗಿ ಅರಿದ ಆತ್ಮ ಕರಿಗೊಂಡಲ್ಲಿ ಹರಿಪ್ರಿಯ ಅಘೋರನಾಶನ ರಾಮನಾಥಾ.
--------------
ಗುಪ್ತ ಮಂಚಣ್ಣ
ಧರೆ ಸಲಿಲ ಅನಲ ಅನಿಲ ಆಕಾಶ ಮುಂತಾದ ಭೇದಂಗಳ ಕಲ್ಪಿಸುವಲ್ಲಿ, ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವಮೂರ್ತಿಗಳು ಕುರುಹುಗೊಂಬಲ್ಲಿ, ನಾದಬಿಂದುಕಳೆ ಲಕ್ಷಿಸುವಲ್ಲಿ, ಆ ಪರಶಿವತತ್ವದ ಅಂಗ ಗುರುರೂಪಾಗಿ, ಆ ಪರತತ್ವದ ಅಂಗ ಲಿಂಗವಾಗಿ, ಆ ಪರತತ್ವದ ಅಂಗ ಜಂಗಮವಾಗಿ, ಆ ಜಂಗಮ ಲಿಂಗದಲ್ಲಿ ಲೀಯವಾಗಿ, ಆ ಲಿಂಗ ಗುರುವಿನಲ್ಲಿಲೀಯವಾಗಿ, ಆ ಗುರು ಉಭಯಸ್ಥಲವ ಗಬ್ರ್ಥೀಕರಿಸಿ, ಗುರುವೆಂಬ ಭಾವ ತನಗಿಲ್ಲದೆ ತರು ಫಲವ ಹೊತ್ತಂತೆ, ಫಲ ರಸವ ಇಂಬಿಟ್ಟುಕೊಂಡಂತೆ, ಅಂಗಕ್ಕೆ ಆತ್ಮತೇಜವರತು, ಭಾವಕ್ಕೆ ಬ್ಥೀಷ್ಮ ನಿಂದು, ಮನ ಮಹವನೊಡಗೂಡಿದಲ್ಲಿ, ಆತ ಸದ್ಗುರುಮೂರ್ತಿಯ ಕರದಲ್ಲಿ ಬಂದ ಲಿಂಗ, ಕರ್ಣದಲ್ಲಿ ಹೇಳಿದ ಮಂತ್ರ, ಕಪಾಲವ ಮುಟ್ಟಿದ ತಂತ್ರ. ಆದು ಸದ್ಗುರು ಕಾರುಣ್ಯ, ಆ ಶಿಷ್ಯಂಗೆ ಜೀವನ್ನುಕ್ತಿ. ಇದು ಆಚಾರ್ಯಮತ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ವೇದವೆಂಬುದು ವೇದ್ಯರಿಗಲ್ಲದೆ ಸಾಧ್ಯವಲ್ಲ. ಅದೆಂತೆಂದಡೆ : ಬಿಂದು ವ್ಯಂಜನ ಗುರು ಲಘು ಸಮಾಸ ವಿಭಕ್ತಿಯ ನೇಮ ಬೀಜಾಕ್ಷರ ಐವತ್ತೆರಡರ ಭೇದದೊಳಗಲ್ಲದೆ, ಇಂತಿವೆಲ್ಲವೂ ಒಂದರಲ್ಲಿ ಹುಟ್ಟಿ, ಒಂದರಲ್ಲಿ ಬೆಳೆದು, ಒಂದರಲ್ಲಿ ಲಯವಹ ಕಾರಣ, ಇಂತೀ ವೇದಿಗಳೆಲ್ಲರೂ ವೇದಾಂತ ಸಿದ್ಧಾಂತದನುವನರಿಯದೆ, ಯಾಗವ ಮಾಡಿಹೆವೆಂದು ತಿಲ ಘೃತ ಸಮಿದೆ ಮೊದಲಾದ ಅಜಹತ ದಿಗ್ಭಂಧನಂಗಳಲ್ಲಿ ಪ್ರವರ್ತನ ಗ್ರಹಂಗಳಲ್ಲಿ ಕರ್ಮವ ಮಾಡಿ, ಅಗ್ನಿಗಾಹುತಿ ಕೊಟ್ಟಲ್ಲಿ , ಆತ ವೇದಾಂತನೆ ಬಲುರೋಗಾಂತನಲ್ಲದೆ ? ಇನ್ನು ವೇದಾಂತಸಿದ್ಧಿಯ ಕೇಳಿರೊ : ಪೂರ್ವದಲ್ಲಿ ಹುಟ್ಟುವದನರಿದು, ಮಧ್ಯದಲ್ಲಿ ಬೆಳೆವುದ ನಿಧಾನಿಸಿ, ಉತ್ತರದಲ್ಲಿ ಕಟ್ಟಕಡೆ ಎಂಬುದ ವಿಚಾರಿಸಿ ಲಕ್ಷಿಸಿ, ಇಂತೀ ತ್ರಿವಿಧದ ಭೇದವ ಕಿತ್ತುಹಾಕಿ, ಒಂ ಎಂಬ ಅರ್ಥವ ತಿಳಿದು, ನಯೆಂಬ ನಕಾರಮಂ ತಿಳಿದು, ನಾನಾರೆಂಬುದ ಭಾವಿಸಿ, ಮಯೆಂಬ ಮದರೂಪಂ ವರ್ಜಿಸಿ, ಶಿಯೆಂಬ ಶಿಕಾರವ ಸ್ವೀಕರಿಸಿ, ಯಯೆಂಬ ಯಕಾರವ ನಾಲ್ಕರಲ್ಲಿ ಏಕೀಕರಿಸಿದ ಮತ್ತೆ , ವೇದವೇದ್ಯನು ನೋಡಾ, ಲಲಾಮಬ್ಥಿಮಸಂಗಮೇಶ್ವರಲಿಂಗವು.
--------------
ವೇದಮೂರ್ತಿ ಸಂಗಣ್ಣ
ಹೆತ್ತ ತಾಯಿ ನೀನೆ ಅವ್ವಾ; ನನ್ನ ಹತ್ತಿರ ಬಂದಾಕೆ ನೀನೆ ಅವ್ವಾ; ಲಿಂಗದ ಮೊತ್ತವಾದಾಕೆ ನೀನೆ ಅವ್ವಾ; ನಮ್ಮ ಕಪಿಲಸಿದ್ಧಮಲ್ಲಿಕಾರ್ಜುನನ ರಾಣಿ ನೀನೆ ಅವ್ವಾ. ಇದರನುಭಾವವ ತಿಳಿದಾತನೆ ಜಂಗಮ; ಇದರನುಭಾವವ ಕೇಳಿದಾತನೆ ಭಕ್ತ ನೋಡವ್ವಾ; ಆತ ಪ್ರಾಣಲಿಂಗಿಯವ್ವಾ.
--------------
ಸಿದ್ಧರಾಮೇಶ್ವರ
ಕಣ್ಣ ಮುಚ್ಚಿ ದೃಷ್ಟಿಯಲ್ಲಿ ನೋಡಬಲ್ಲಡೆ ಆತನ ಬಲ್ಲವನೆಂಬೆ. ಬಾಯ ಮುಚ್ಚಿ ನಾಲಗೆಯಲ್ಲಿ ಉಂಡಡೆ, ಆತ ಸಂ[ಗ]ಗೊಳಿಸಿದವನೆಂಬೆ. ತನುವ ಮರೆದು, [ಆ ತ]ನುವ ಕಂಡಡೆ, ಆತನ ಅರಿದವನೆಂಬೆನಯ್ಯಾ. ಬೆಳಗಿನೊಳಗಣ ಬೆಳಗು ಕಳೆಯೊಳಗಣ ಕಾಂತಿ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಶುದ್ಧ ನಿರ್ಮಾಯ ನಿರ್ಮಲವೆಂಬ ಅಂಗತ್ರಯದಲ್ಲಿ ಸದ್ಗತಿ ಸತ್ಕ್ರಿಯೆ ಸದ್ಧರ್ಮವೆಂಬ ಪೀಠತ್ರಯದ ಮೇಲೆ ವಿಚಾರಗುರು ವಿನಯಗುರು ಕೃಪಾಗುರುವೆಂಬ ಗುರುತ್ರಯವ ಧರಿಸಿ ಘನಭಕ್ತಿಯ ಕುರುಹಬಲ್ಲರೆ ಆತ ಸತ್ಯಭಕ್ತನೆಂಬೆ. ಸುಬುದ್ಧಿ ನಿಃಕಾಮ ಅನುಕೂಲೆಯೆಂಬ ಮನತ್ರಯದ ವಿಶೇಷಗತಿ ಸುಜ್ಞಾನ ವಿಮಲಜ್ಞಾನವೆಂಬ ಪೀಠತ್ರಯದಮೇಲೆ ಸಗುಣಲಿಂಗ ನಿರ್ಗುಣಲಿಂಗ ನಿರ್ಭೇದ ಲಿಂಗವೆಂಬ ಲಿಂಗತ್ರಯವ ಧರಿಸಿ, ಚಿನ್ಮಯಭಕ್ತಿಯ ಕುರುಹ ಬಲ್ಲರೆ ಆತ ನಿತ್ಯಭಕ್ತನೆಂಬೆ. ಸಂವಿತ್‍ಕಳಾ ಸಂಧಾನಕಳಾ ಸಮರಸಕಳಾಯೆಂಬ ಭಾವತ್ರಯದಲ್ಲಿ, ಮತಿಗಮನ, ರತಿಗಮನ, ಮಹಾರತಿಗಮನವೆಂಬ ಭಾವತ್ರಯದ ಸತ್ಪ್ರೇಮ ಸುಖಮಯ ಆನಂದವೆಂಬ ಪೀಠತ್ರಯದ ಮೇಲೆ ಜ್ಞಾನಜಂಗಮ, ಮಹಾಜ್ಞಾನಜಂಗಮ, ಪರಮಜ್ಞಾನಜಂಗಮವೆಂಬ ಜಂಗಮತ್ರಯವ ಧರಿಸಿ, ಪರಿಪೂರ್ಣಭಕ್ತಿಯ ಕುರುಹ ಬಲ್ಲರೆ ಆತ ನಿಜಭಕ್ತನೆಂಬೆ. ಈ ಭೇದವನರಿಯದೆ ಬರಿಯ ಕಾಯ ಮನ ಭಾವದಲ್ಲಿ ಹುಸಿನೆರವಿಯ ತುಂಬಿ ಹುಸಿಯ ಡಂಬ್ಥಿನ ಭಕ್ತಿಯ ಕಿಸುಕುಳತ್ವಕ್ಕೆ ಬಿಸಿಯನಿಟ್ಟು, ತಪ್ಪಿಸಿ ತೋರುತಿರ್ದನು ಗಂಬ್ಥೀರ ಭಕ್ತಿಯ ನೆರೆದು ಚೆಲುವಂಗ ಪ್ರಾಣಾತ್ಮಪ್ರಿಯ ಸಿದ್ಧಲಿಂಗನು.
--------------
ದೇಶಿಕೇಂದ್ರ ಸಂಗನಬಸವಯ್ಯ
ಅಂಗದಾಪ್ಯಾಯನಕ್ಕೆ ಅರ್ಪಿತವ ಮಾಡುವನಲ್ಲ, ಆತ ಲಿಂಗದಾಪ್ಯಾಯನಿಯಾದ ಕಾರಣ. ಅಂಗಗುಣಂಗಳಳಿದು ಲಿಂಗದಲ್ಲಿ ನಿರ್ಲೇಪವಾದ ಶರಣ, ಅರ್ಪಿತವನರಿಯ, ಅನರ್ಪಿತವನರಿಯ, ಓಗರವನರಿಯ, ಪ್ರಸಾದವನರಿಯ, ಇದು ಕಾರಣ ಕೂಡಲಚೆನ್ನಸಂಗಯ್ಯ, ತಾನರುಹಿಸಿ ಕೊಟ್ಟು, ತನ್ನ ಕಾರುಣ್ಯ ಪ್ರಸಾದವನಿಕ್ಕಿ ಸಲಹಿದನಾಗಿ, ಆನೇನೆಂದರಿಯೆನಯ್ಯಾ.
--------------
ಚನ್ನಬಸವಣ್ಣ
ಕನ್ನವನ್ನಿಕ್ಕಿ ಚಿನ್ನವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಹಾದರವಮಾಡಿ ಹಾಗವ ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಗಾಣವ ಹಾಕಿ ಮೀನ ಹಿಡಿದು ತಂದು ಜಂಗಮಾರ್ಚನೆಯ ಮಾಡುವದಾವ ಸದಾಚಾರ? ಇಂತಿವರೆಲ್ಲರು ಶಿವಯುಕ್ತವಾದ ಅನಾಚಾರ ಹಿಡಿದು ಬಿಡದೆ ಸದಾಚಾರಕ್ಕೊಳಗಾಗಿ ಮುಕ್ತಿವಡೆದರು. ಮೋಕ್ಷಾಪೇಕ್ಷಿತರಾಗಿ ಪಂಚಾಚಾರಕ್ಕೊಪ್ಪುವ ವ್ರತನೇಮಗಳ ಹಿಡಿದು ಬಿಟ್ಟವಂಗೆ ಮುಂದು ಹಿಂದಾಯಿತು, ಆತ ವ್ರತಗೇಡಿ. ಅದು ಹೇಗೆಂದೊಡೆ ಹಿಡಿದ ನೈಷ್ಠೆಯ ಬಿಟ್ಟಲ್ಲಿಯೇ ಕರ್ಮತ್ರಯಂಗಳು ಬೆನ್ನ ಬಿಡವೆಂದು ಶರಣರ ವಚನಂಗಳು ಸಾರುತ್ತಿವೆ. || ಗ್ರಂಥ || `ಸ್ಥಾವರಂ ಬ್ಥಿನ್ನದೋಷೇಣ ವ್ರತಭ್ರಷ್ಟೇನ ಜಂಗಮಂ| ಉಭಯೋಬ್ರ್ಥಿನ್ನಭಾವೇನ ನಾರ್ಚನಂ ನ ಚ ವಂದನಂ||' ಇಂತೆಂದುದಾಗಿ ಹಿಡಿದು ಬಿಡುವಲ್ಲಿ ಕಮ್ಮಾರನ ಕೈಯ್ಯ ಇಕ್ಕುಳವೇ ಶರಣ? ಹಿಡಿದು ಬಿಡುವಲ್ಲಿ ಚಂದ್ರಸೂರ್ಯರುಗಳ ಗ್ರಹಣವೇ ಶರಣ? ಹಿಡಿದು ಬಿಡುವಲ್ಲಿ ಸಲ್ಲದ ನಾಣ್ಯವೇ ಶರಣ? ಹಿಡಿದು ಬಿಡುವಲ್ಲಿ ಬಾಲಗ್ರಹವೇ ಶರಣ? ಅಲ್ಲಲ್ಲ. ಉರಿ ಕರ್ಪೂರವ ಹಿಡಿದಂತೆ ಹಿಡಿದ ವ್ರತನೇಮಂಗಳ ಬಿಡದಿಪ್ಪುದೀಗ ಶರಣಸ್ಥಲದ ಮತವಯ್ಯಾ, ಘನಲಿಂಗಿಯ ಮೋಹದ ಚೆನ್ನಮಲ್ಲಿಕಾರ್ಜುನಾ.
--------------
ಘನಲಿಂಗಿದೇವ
ಇನ್ನಷ್ಟು ... -->