ಅಥವಾ

ಒಟ್ಟು 105 ಕಡೆಗಳಲ್ಲಿ , 12 ವಚನಕಾರರು , 102 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಾರ್ಚನೆಯಿಂದ ಜಂಗಮಾರ್ಚನೆಯದ್ಥಿಕ ನೋಡಾ. ಅದೆಂತೆಂದೊಡೆ : ಆದಿಯಲ್ಲಿ ಲಿಂಗಾರ್ಚನೆಯಮಾಡಿದ ತಾರಜ ತಂಡಜ ರೋಮಜರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ನವಕೋಟಿಬ್ರಹ್ಮರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಶತಕೋಟಿ ನಾರಾಯಣರಿಗೆ ಪ್ರಳಯವಾಯಿತ್ತು. ಆದಿಯಲ್ಲಿ ಲಿಂಗಾರ್ಚನೆಯಮಾಡಿದ ಅನಂತಕೋಟಿ ರುದ್ರರಿಗೆ ಪ್ರಳಯವಾಯಿತ್ತು. ಇದು ಕಾರಣ ಲಿಂಗಾರ್ಚನೆ ಪ್ರಳಯಕ್ಕೊಳಗು, ಜಂಗಮಾರ್ಚನೆ ಪ್ರಳಯಾತೀತವೆಂದರಿದು ಜಂಗಮವೇ ಪ್ರಾಣವೆಂದು ನಂಬಿ, ಅನಂತಕೋಟಿ ಪ್ರಳಯಂಗಳ ಮೀರಿ, ಪರಬ್ರಹ್ಮವನೊಡಗೂಡಿದ ಸಂಗನಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಶ್ರೀಗುರುವಿನಿಂದದ್ಥಿಕರು ಆವ ಲೋಕದೊಳಗಿಲ್ಲವಯ್ಯಾ. ಶ್ರೀಗುರುವಿನಂತೆ ಪರೋಪಕಾರಿಗಳ ಮತ್ತಾರನೂ ಕಾಣೆನಯ್ಯಾ. ಅದೆಂತೆಂದೊಡೆ : ಎನ್ನ ಕಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕಿವಿಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ನಾಸಿಕ ನಾಲಗೆಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಕರಚರಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ತನುಮನಪ್ರಾಣಂಗಳ ಭಕ್ತರ ಮಾಡಿದನಯ್ಯಾ ಶ್ರೀಗುರು ಪರಮಶಿವಲಿಂಗಕ್ಕೆ. ಎನ್ನ ಸಕಲಕರಣೇಂದ್ರಿಯಂಗಳ ಭಕ್ತರ ಮಾಡಿದನಯ್ಯ ಶ್ರೀಗುರು ಪರಮಶಿವಲಿಂಗಕ್ಕೆ. ಇಂತಿವು ಮೊದಲಾಗಿ ಎನ್ನ ಸರ್ವ ಅವಯವಂಗಳನೆಲ್ಲ ಸದ್ಭಕ್ತರ ಮಾಡಿ ಲಿಂಗಾರ್ಪಿತಕ್ಕೆ ಅನುಗೊಳಿಸಿದ ಶ್ರೀಗುರುವಿನ ಮಹಾಘನ ನಿಲವಿಂಗೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಒಳಗೆ ತಿಳಿಯದೆ ಹೊರಗೆ ಮಾಡುವ ಮಾಟವೆಲ್ಲ ಅಜ್ಞಾನದ ಗಡಣದೊಳಗು. ಒಳಗೆ ಗುರುಲಿಂಗಜಂಗಮದ ಪಾದತೀರ್ಥಪ್ರಸಾದವ ಕೊಂಡೆವೆಂದು ಹೊರಗೆ ಮಾಡುವ ಭಕ್ತಿಯ ಬಿಟ್ಟರೆ ಮುಂದೆ ಒದಗುವ ಮುಕ್ತಿಯ ಕೇಡು. ಅದೆಂತೆಂದೊಡೆ : ಅಸಲು ಕಳೆದ ಬಳಿಕ ಲಾಭವುಂಟೇ ? ಇಲ್ಲ ಇಲ್ಲ, ಮಾಣು. ಒಳಗಣ ಕೂಟ, ಹೊರಗಣ ಮಾಟವನರಿಯದೆ ಕೆಟ್ಟರು ನೋಡಾ ಹಿರಿಯರೆಲ್ಲರು ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಗುರುಭಕ್ತರಾದವರು ತ್ರಿಕಾಲದಲ್ಲಿ ಹರಸ್ಮರಣೆಯಲ್ಲದೆ ಹರಿಯೆಂದು ನುಡಿಯಲಾಗದು. ಹರಿ ಶಬ್ದವ ಕೇಳಲಾಗದು, ಹರಿಯ ರೂಪವ ನೋಡಲಾಗದು. ಅದೇನು ಕಾರಣವೆಂದೊಡೆ : ಪೂರ್ಣಾಯುಷ್ಯವು, ವಿಮಲಮತಿಯು, ಸತ್ಕೀರ್ತಿಯು, ಮಹಾಬಲವು, ಕೆಟ್ಟು ಹೋಗುತ್ತಿಹುದು ನೋಡಾ ! ಅದೆಂತೆಂದೊಡೆ :ಬ್ರಹ್ಮಾಂಡಪುರಾಣೇ ``ನ ಪ್ರದೋಷೇ ಹರಿಂ ಪಶ್ಯೇತ್ ಯದಿ ಪಶ್ಯೇತ್ ಪ್ರಮಾದತಃ | ಚತ್ವಾರಿ ತಸ್ಯ ನಶ್ಯಂತಿ ಆಯುಃ ಪ್ರಜ್ಞಾ ಯಶೋ ಬಲಮ್ ||'' ಎಂದುದಾಗಿ, ಸತ್ತು ಹುಟ್ಟುವ ಹರಿಗೆ ಇನ್ನೆತ್ತಣ ದೇವತ್ವ ಹೇಳಾ ಅಖಂಡೇಶ್ವರಾ ?
--------------
ಷಣ್ಮುಖಸ್ವಾಮಿ
ವಿರಕ್ತನೆನಿಸುವಂಗಾವುದು ಚಿಹ್ನೆವೆಂದೊಡೆ : ವಿಷಯವಿಕಾರವ ಸುಟ್ಟಿರಬೇಕು. ಬಯಕೆ ನಿರ್ಬಯಕೆಯಾಗಿರಬೇಕು. ಸ್ತ್ವರಜತಮವೆಂಬ ತ್ರೈಗುಣಂಗಳನಿಟ್ಟೊರಸಿರಬೇಕು. ಅದೆಂತೆಂದೊಡೆ : ``ವಿಕಾರಂ ವಿಷಯಾತ್‍ದೂರಂ ರಕಾರಂ ರಾಗವರ್ಜಿತಂ | ತಕಾರಂ ತ್ರೈಗುಣಂ ನಾಸ್ತಿ ವಿರಕ್ತಸ್ಯ ಸುಲಕ್ಷಣಂ ||'' ಇಂತಪ್ಪ ವಿರಕ್ತನ ಶ್ರೀಪಾದಕ್ಕೆ ನಮೋ ನಮೋ ಎಂಬೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಂಗಮಫಲವೆಲ್ಲವೂ ದೇವತೆಗಳಾಹಾರವು; ಸ್ಥಾವರಫಲವೆಲ್ಲವೂ ಮನುಷ್ಯರಾಹಾರವು. ಅದೆಂತೆಂದೊಡೆ : ದೇವತಾಬಿಂದುವಿನಲ್ಲಿ ಮನುಷ್ಯಕೃತ್ಯದಿಂದುದ್ಭವಿಸುವುದೆಲ್ಲ ಸ್ಥಾವರವು; ಮನುಷ್ಯ ಬಿಂದುವಿನಲ್ಲಿ ದೇವತಾ ಕೃತ್ಯದಿಂದುದ್ಭವಿಸುವುದೆಲ್ಲ ಜಂಗಮವು. ಮನುಷ್ಯರು ಶೂದ್ರಮುಖದಿಂ ಕೊಂಬುತಿರ್ಪರು. ದೇವತೆಗಳು ಬ್ರಾಹ್ಮಣಮುಖದಿಂ ಕೊಂಬುತಿರ್ಪರು. ಪೃಥ್ವಿಯಲ್ಲಿ ಎಂಬತ್ತುನಾಲ್ಕುಲಕ್ಷವಿಧ ಜಂಗಮಗಳು ಹೇಗೋ ದೇವತೆಗಳಲ್ಲಿಯೂ ಹಾಗೆ. ದೇವತೆಗಳು ತಮ್ಮ ಕರ್ಮಫಲವು ತೀರಿದೊಡೆ, ತದ್ಧೋಷ ಕರ್ಮಾನುಸಾರಮಾಗಿ ಪಂಚಾಶಲ್ಲಕ್ಷ ದೇಹಗಳೊಂದಂ ಹೊಂದಿ ಆಯಾ ಆಹಾರಂಗಳಂ ಭುಂಜಿಸುತ್ತಾ. ತದಾನುಗುಣ್ಯಮಾಗಿ ಕ್ರೀಡಿಸುತ್ತರ್ಪಂದದಿ, ಮನುಷ್ಯನು ಇಹಲೋಕಕರ್ಮವು ತೀರಿದಲ್ಲಿ ಆ ಕರ್ಮಫಲಕ್ಕೆ ತಕ್ಕ ಮರಣವಂ ಹೊಂದಿ, ದೇವತಾ ಪಿಶಾಚಾಂತಮಾದ ದೇಹಗಳೊಳೊಂದು ದೇಹವನ್ನೆತ್ತಿ, ಸುಖದುಃಖಗಳನನುಭವಿಸುತ್ತಾ ತನ್ನ ಅದ್ಥಿಕಾರಕ್ಕೆ ದೇವತೆಯನ್ನು ಗ್ರಹಿಸಿ, ಆ ದೇವತಾಮುಖದಿಂ ಆಹಾರಂಗಳಂ ಗ್ರಹಿಸುವಂತೆ, ಆ ದೇವತೆಗಳು ತಮ್ಮ ಅದ್ಥಿಕಾರಕ್ಕನುಗುಣವಾಗಿ ಮನುಷ್ಯರಂ ಗ್ರಹಿಸಿ, ಆ ಮನುಷ್ಯಮುಖದಿಂ ಆಹಾರಂಗಳಂ ಕೊಂಬುತಿರ್ಪರು. ದೇವೆತಗಳಿಗೆ ಮಂತ್ರದಿಂದಾವಾಹನೋಚ್ಚಾಟನೆಗಳು, ಮನುಷ್ಯರಿಗೆ ತಂತ್ರದಿಂದಾವಾಹನೋಚ್ಚಾಟನೆಗಳು. ಮನುಷ್ಯರಿಗೆ ತಂತ್ರದಿಂ ಕೂಡಿದ ಮಂತ್ರವು, ದೇವತೆಗಳಿಗೆ ಮಂತ್ರದಿಂ ಕೂಡಿದ ತಂತ್ರವು, ಇಂತು ಮನುಷ್ಯರೂಪದಿಂದ ಸತ್ತು. ದೇವತಾರೂಪದಿಂ ಹುಟ್ಟುತ್ತಿರ್ಪ ದಂದುಗವಂ ಬಿಡಿಸಿ, ನಿನ್ನಲ್ಲಿ ಸತ್ತು ಹುಟ್ಟುತ್ತಿರ್ಪ ನಿಜಸುಖವಂ ಕೊಟ್ಟು ಸಲಹಾ ಮಹಾಘನ ದೊಡ್ಡದೇಶಿಕಾರ್ಯಗುರುಪ್ರಭುವೆ.
--------------
ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ
ಗುರುಕಾರುಣ್ಯವಂ ಪಡೆದು ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ ಭಕ್ತನಾಗಲಿ ಜಂಗಮನಾಗಲಿ ಭಕ್ತಿ ಭೃತ್ಯಾಚಾರ ಸಂಪನ್ನರಾಗಿ ಗುರುಲಿಂಗ ಜಂಗಮವನಾರಾಧಿಸಿ, ಪ್ರಸಾದವಕೊಂಡು ನಿಜಮುಕ್ತರಾಗಲರಿಯದೆ ಪರಮಪಾವನಪ್ಪ ಗುರುರೂಪ ಹೊತ್ತು ಮತ್ತೆ ತಾವು ಪರಸಮಯದಂತೆ ದೂಷಕ ನಿಂದಕ ಪರವಾದಿಗಳಾಗಿ ಭಕ್ತ ಜಂಗಮ ಪ್ರಸಾದವನೆಂಜಲೆಂದು ಅತಿಗಳೆದು ತೊತ್ತು ಸೂಳೆಯರೆಂಜಲ ತಿಂದು ಮತ್ತೆ ನಾ ಘನ ತಾ ಘನವೆಂದು ಸತ್ಯ ಸದ್ಭಕ್ತಯಕ್ತರಾದ ಭಕ್ತಜಂಗಮವ ಜರೆದು, ಅವರ ಕುಲವೆತ್ತಿ ಕೆಡೆನುಡಿದು ಹೊಲತಿ ಮಾದಿಗಿತ್ತಿಯರಿಗುರುಳಿ ಹಲವು ದೈವದೆಂಜಲತಿಂದು ಮತ್ತೆ ತಾವು ಕುಲಜರೆಂದು ಬಗುಳುವ ಹೊಲೆ ಜಂಗುಳಿಗಳೆಲ್ಲರು ಈ ಗುರು ಕೊಟ್ಟಲಿಂಗವಿರಲು ಅದನರಿಯದೆ ಶ್ರೀಶೈಲ, ಹಂಪಿ, ಕಾಶಿ, ಕೇತಾರ ಗಯಾ ಪ್ರಯಾಗ ರಾಮೇಶ್ವರ ಆದಿಯಾದ ಹೊಲೆಕ್ಷೇತ್ರಂಗಳಲ್ಲಿ ಆಸಕ್ತರಾಗಿ ಹೋಗಿ ಅಲ್ಲಲ್ಲಿಯ ಭವಿಶೈವದೈವಂಗಳ ದರ್ಶನ ಸ್ಪರುಶನ ಆರಾಧನೆಗಳ ಮಾಡಿ ಅವಕ್ಕೆ ಶರಣೆಂದು ಅವರೆಂಜಲ ತಿಂದು ಆ ಕ್ಷೇತ್ರಂಗಳಲ್ಲಿ ಆಶ್ರಮಸ್ಥರಾಗಿರ್ದು ಗತಿಪದ ಮುಕ್ತಿಯ ಪಡೆವೆನೆಂಬ ವೇಷಧಾರಿಗಳೆಲ್ಲರು ಶ್ವಪಚಗೃಹದ ಶ್ವಾನಯೋನಿಗಳಲ್ಲಿ ಶತಸಹಸ್ರವೇಳೆ ಬಪ್ಪುದು ತಪ್ಪುದು. ಅದೆಂತೆಂದೊಡೆ ; ಇದಂ ತೀರ್ಥಮಿದಂ ತೀರ್ಥಂ ಭ್ರಮಂತಿ ತಾಮಸಾ ನರಾಃ ಶಿವಜ್ಞಾನೇನ ಜಾನಂತಿ ಸರ್ವತೀರ್ಥನಿರರ್ಥಕಂ ಪ್ರಾಣಲಿಂಗಮವಿಶ್ವಾಸ್ಯ ತೀರ್ಥಲಿಂಗಂತು ವಿಶೇಷತಃ ಶ್ವಾನಯೋನಿಶತಂ ಗತ್ವಾಶ್ಚಾಂಡಾಲಂ ಗೃಹಮಾಚರೇತ್ ಚರಶೇಷ ಪರಿತ್ಯಾಗಾದ್ಯೋಜನಾದ್ಭಕ್ತ ನಿಂದಕಾಃ ಅನ್ಯಪಣ್ಯಾಂಗನೋಚ್ಚಿಷ್ಟಂ ಭುಂಜಯಂತಿರೌರವಂ-ಇಂತೆಂದುದಾಗಿ, ಇದು ಕಾರಣ, ಇಂತಪ್ಪ ಅನಾಚಾರಿಗಳು ಭಕ್ತ ಜಂಗಮ ಸ್ಥಲಕ್ಕೆ ಸಲ್ಲರು. ಅವರಿರ್ವನು ಕೂಡಲಚೆನ್ನಸಂಗಯ್ಯ ಸೂರ್ಯ-ಚಂದ್ರರುಳ್ಳನ್ನಕ್ಕ ನಾಯಕನರಕದಲ್ಲಿಕ್ಕುವ.
--------------
ಚನ್ನಬಸವಣ್ಣ
ಎಲೆ ಶಿವನೆ, ನೀನು ಎನ್ನ ಮೆಚ್ಚಿ ಕೈವಿಡಿದ ಕಾರಣ ಎಮ್ಮವರು ಸಕಲಗಣಂಗಳ ಸಾಕ್ಷಿಯಮಾಡಿ ನಿನಗೆ ಎನ್ನ ಮದುವೆಯಮಾಡಿಕೊಟ್ಟರು. ನೀನು ಎನ್ನನಗಲಿದಡೆ ಗುರುದ್ರೋಹಿ. ಆನು ನಿನ್ನನಗಲಿದಡೆ ಸಮಯಕ್ಕೆ ಹೊರಗು. ಅದೆಂತೆಂದೊಡೆ : ಮುನ್ನ ಶ್ರೀಗುರುಸ್ವಾಮಿ ಎನ್ನ ಪ್ರಾಣದೊಳಗೆ ನಿನ್ನ ಪ್ರಾಣವ ಹುದುಗಿಸಿ, ನಿನ್ನ ಪ್ರಾಣದೊಳಗೆ ಎನ್ನ ಪ್ರಾಣವ ಹುದುಗಿಸಿ ಎಂದೆಂದೂ ಅಗಲಬೇಡೆಂದು ನಿರೂಪಿಸಿದನು. ಆ ನಿರೂಪವನು ಮಹಾಪ್ರಸಾದವೆಂದು ಕೈಕೊಂಡ ಬಳಿಕ ನಾವಿಬ್ಬರು ಎಂದೆಂದಿಗೂ ಅಗಲದಿರಬೇಕಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಜಂಗಮಕ್ಕೆ ನೀಡಿದ ತೃಪ್ತಿ ಜಗಕೆಲ್ಲ ತೃಪ್ತಿಯಾಯಿತ್ತು ಕಾಣಿರೋ ! ಜಂಗಮಕ್ಕೆ ನೀಡಿದ ತೃಪ್ತಿ ಹರಿ ಸುರ ಬ್ರಹ್ಮಾದಿಗಳಿಗೆಲ್ಲ ತೃಪ್ತಿಯಾಯಿತ್ತು ಕಾಣಿರೋ ! ಜಂಗಮಕ್ಕೆ ನೀಡಿದ ತೃಪ್ತಿ ಸ್ವರ್ಗ ಮತ್ರ್ಯ ಪಾತಾಳ ಸಚರಾಚರಂಗಳಿಗೆಲ್ಲ ತೃಪ್ತಿಯಾಯಿತ್ತು ನೋಡಿರೋ ! ಜಂಗಮಕ್ಕೆ ನೀಡಿದ ತೃಪ್ತಿ ಸಾಕ್ಷಾತ್ಪರಬ್ರಹ್ಮ ಪರಶಿವಂಗೆ ತೃಪ್ತಿಯಾಯಿತ್ತು ನೋಡಿರೋ ! ಅದೆಂತೆಂದೊಡೆ : ``ಸುರತೃಪ್ತಂ ಬುಧಸ್ತೋಮಂ ಮಮ ತೃಪ್ತಂತು ವೈಷ್ಣವಮ್ | ಜಂಗಮಂತು ಜಗತ್ ತೃಪ್ತಂ ಶಿವತೃಪ್ತಂ ತು ಪದ್ಮಿನಿ ||'' ಎಂದುದಾಗಿ, ಇಂತಪ್ಪ ಜಂಗಮ ತೃಪ್ತಿಯಾದಡೆ ನಮ್ಮ ಅಖಂಡೇಶ್ವರಲಿಂಗ ತೃಪ್ತಿಯಾಯಿತ್ತು ನೋಡಿರೋ !
--------------
ಷಣ್ಮುಖಸ್ವಾಮಿ
ಮಹದೈಶ್ವರ್ಯವು ಕೈಗೂಡುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಪರಮಪವಿತ್ರನೆನಿಸಬೇಕಾದಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಸರ್ವೈಶ್ವರ್ಯ ಸರ್ವಸಿದ್ಧಿ ದೊರೆಕೊಂಬುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಮಹಾಪುಣ್ಯದ ಫಲವು ಪ್ರಾಪ್ತಿಸುವಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ದಿನದಿನಕ್ಕೆ ಪಾಪ ಪಲ್ಲಟವಪ್ಪಡೆ ಶ್ರೀ ವಿಭೂತಿಯಿಂದಲ್ಲದೆ ಇಲ್ಲ ನೋಡಾ. ಅಂಗಕ್ಕೆ ಶ್ರೀ ವಿಭೂತಿಯೇ ಶೃಂಗಾರ ನೋಡಾ. ಅದೆಂತೆಂದೊಡೆ : `` ಶ್ರೀಕರಂ ಚ ಪವಿತ್ರಂ ಚ ಹಾರಾದ್ಯಾಭರಣಂ ತಥಾ | ಲೋಕವಶ್ಯಕರಂ ಪುಣ್ಯಂ ಪಾಪನಾಶಂ ದಿನೇ ದಿನೇ ||'' ಎಂದುದಾಗಿ, ಇಂತಪ್ಪ ಶ್ರೀ ವಿಭೂತಿಯ ಅಂತರಂಗದಲ್ಲಿ ವಿಶ್ವಾಸ ತುಂಬಿ ಧರಿಸಿದ ಮನುಜರಿಗೆ ಅನಂತಕೋಟಿ ಪಾತಕಂಗಳು ಪರಿಹಾರವಾಗಿ ಮುಂದೆ ಶಿವಸಾಯುಜ್ಯಪದವು ದೊರೆಕೊಂಬುದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಭಕ್ತನಾದಡೆ ಚಿತ್ತ ನಿಶ್ಚಲವಾಗಿ ಸದ್ಭಕ್ತಿ ನೆಲೆಗೊಂಡಿರಬೇಕು. ಮಹೇಶ್ವರನಾದಡೆ ಸಕಲಕರ್ಮವು ಕ್ಷಯವಾಗಿರಬೇಕು. ಪ್ರಸಾದಿಯಾದಡೆ ಶಿವಜ್ಞಾನಪರಾಯಣನಾಗಿರಬೇಕು. ಪ್ರಾಣಲಿಂಗಿಯಾದಡೆ ನಿತ್ಯಾನಿತ್ಯವಿಚಾರವನರಿದಿರಬೇಕು. ಶರಣನಾದಡೆ ಗರ್ವ ಅಹಂಕಾರದ ಮೊಳೆಯ ಮುರಿದಿರಬೇಕು. ಐಕ್ಯನಾದಡೆ ಬ್ಥಿನ್ನಭಾವವನಳಿದು ಮಹಾಜ್ಞಾನದೊಳಗೆ ಓಲಾಡಬೇಕು. ಅದೆಂತೆಂದೊಡೆ : ``ಭಕ್ತಿಃ ಕರ್ಮಕ್ಷಯೋ ಬುದ್ಧಿರ್ವಿಚಾರೋ ದರ್ಪಸಂಕ್ಷಯಃ | ಸಮ್ಯಗ್‍ಜ್ಞಾನಮಿತಿ ಪ್ರಾಜ್ಞೆ ೈಃ ಸ್ಥಲಷಟ್ಕಮುದಾಹೃತಮ್ ||'' ಎಂದುದಾಗಿ, ಇಂತಪ್ಪ ಷಟ್‍ಸ್ಥಲವೇದ್ಯರಾದ ಮಹಾಶರಣರ ಒಕ್ಕುಮಿಕ್ಕ ಪ್ರಸಾದವನೇ ಕರುಣಿಸಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಾಣಿಯ ಮೇಲೆ ಶ್ರೀಗಂಧವನಿಟ್ಟು, ಗಂಧ ಗಂಧವೆಂದಡೆ ಗಂಧವ ಕೊಡಬಲ್ಲುದೆ ? ಜಡಚಕ್ರದೊಳಗೆ ಧಾನ್ಯವ ನೀಡಿ ಹಿಟ್ಟೆಂದಡೆ ಹಿಟ್ಟಾಗಬಲ್ಲುದೆ ? ಗಾಣಕ್ಕೆ ಎಳ್ಳು ನೀಡಿ, ಎಣ್ಣೆ ಎಣ್ಣೆ ಎಂದಡೆ ಎಣ್ಣೆ ಬೀಳಬಲ್ಲುದೆ ? ಪಂಚಾಮೃತವ ಪಾಕವ ಮಾಡಿ ಎಡೆಯ ಬಡಿಸಿ ಮುಂದಿಟ್ಟುಕೊಂಡು, ಹೊಟ್ಟೆ ತುಂಬು ತುಂಬು ಎಂದಡೆ ಹೊಟ್ಟೆ ತುಂಬಿ ಹಸುವಡಗಬಲ್ಲುದೆ ? ಹಾಗೆ ಜಡರೂಪವಾದ ಲಿಂಗವ ಜಡಮತಿಗಳಾದ ಗುರುಮುಖದಿಂ ಪಡಕೊಂಡು ಅಂಗದ ಮೇಲೆ ಇಷ್ಟಲಿಂಗವೆಂದು ಧರಿಸಿ ಆ ಲಿಂಗಕ್ಕೆ ಮುಕ್ತಿಯ ಕೊಡು ಕೊಡು ಎಂದಡೆ, ಆ ಲಿಂಗವು ಮುಕ್ತಿಯ ಕೊಡಲರಿಯದು. ಅದೆಂತೆಂದೊಡೆ : ಚಂದನ, ಧಾನ್ಯ, ತಿಲಪಂಚಪಾಕವನು 'ಮರ್ದನಂ ಗುಣವರ್ಧನಂ' ಎಂದುದಾಗಿ, ಇಂತೀ ಎಲ್ಲವು ಮರ್ದನವಿಲ್ಲದೆ ಸ್ವಧರ್ಮಗುಣ ತೋರಲರಿಯವು. ಹಾಗೆ ಅಂತಪ್ಪ ಜಡಸ್ವರೂಪನಾದ ಲಿಂಗವನು ಜ್ಞಾನಗುರುಮುಖದಿಂ ಶಿಲಾಲಿಖಿತವ ಕಳೆದು, ಕಳಾಭೇದವ ತಿಳಿದು, ಆ ಲಿಂಗವೇ ಘನಮಹಾ ಇಷ್ಟಲಿಂಗವೆಂಬ ವಿಶ್ವಾಸ ಬಲಿದು ತುಂಬಿ ಅಂತಪ್ಪ ಇಷ್ಟಬ್ರಹ್ಮದಲ್ಲಿ ಅವಿರಳಸಂಬಂದ್ಥಿಯಾಗಿ ಆ ಇಷ್ಟಲಿಂಗದ ಸತ್ಕ್ರಿಯಾಚಾರದಲ್ಲಿ ಸರ್ವಾಂಗವನು ದಹಿಸಿದಲ್ಲದೆ ಭವಹಿಂಗದು, ಮುಕ್ತಿದೋರದು, ಮುಕ್ತಿಯ ಪಡೆಯಲರಿಯದೆ ಪ್ರಾಣಲಿಂಗಿಯಾಗಲರಿಯನು ನೋಡಾ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಶಿವಭಕ್ತನೆನಿಸುವಾತಂಗೆ ಆವುದು ಚಿಹ್ನವೆಂದೊಡೆ : ಸದಾಚಾರದಲ್ಲಿ ನಡೆವುದು, ಶಿವನಲ್ಲಿ ಭಕ್ತಿಯಿಂದಿರುವುದು, ಲಿಂಗಜಂಗಮ ಒಂದೆಯೆಂದು ಕಾಂಬುದು. ವಿಭೂತಿ ರುದ್ರಾಕ್ಷಿ ಲಿಂಗಧಾರಣ ಮುಂತಾದ ಶಿವಲಾಂಛನವನುಳ್ಳ ಶಿವಶರಣರಲ್ಲಿ ಅತಿಭಕ್ತಿಯಾಗಿರ್ಪಾತನೇ ಸದ್‍ಭಕ್ತ ನೋಡಾ ! ಅದೆಂತೆಂದೊಡೆ : ``ಸಾದಾಚಾರಃ ಶಿವೇ ಭಕ್ತಿರ್ಲಿಂಗೇ ಜಂಗಮ ಏಕದ್ಥೀಃ| ಲಾಂಛನೇ ಶರಣೇ ಭಕ್ತಿಃ ಭಕ್ತಸ್ಥಲಮನುತ್ತಮಮ್ ||'' ಎಂದುದಾಗಿ, ಇಂತಪ್ಪ ಸಹಜ ಭಕ್ತರ ತೋರಿ ಬದುಕಿಸಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ನೇತ್ರದ ಸೂತ್ರದಲ್ಲಿ ಸಕಲ ವಿಸ್ತಾರದ ರೂಪಿರ್ಪುದನಾರೂ ಅರಿಯರಲ್ಲ ! ಅದೆಂತೆಂದೊಡೆ :``ನೇತ್ರದೇವೋ ನ ಚ ಪರಃ'' ಎಂಬ ಶ್ರುತಿ ಸಾಕ್ಷಿಯಾಗಿ ನೇತ್ರವೆ ಶಿವನೆಂದರಿದು, ಆ ಶಿವನಿರ್ದಲ್ಲಿಯೆ ಕೈಲಾಸ ಮೇರು ಮಂದರವಿರ್ಪುವು. ಆ ಶಿವನಿರ್ದಲ್ಲಿಯೆ ಸಕಲಪ್ರಮಥಗಣಂಗಳಿರ್ಪರು. ಆ ಶಿವನಿರ್ದಲ್ಲಿಯೆ ಸಕಲತೀರ್ಥಕ್ಷೇತ್ರಂಗಳಿರ್ಪುವು. ಆ ಶಿವನಿರ್ದಲ್ಲಿಯೆ ಸಕಲವೇದವೇದಾಂತಗಳಿರ್ಪುವು. ಆ ಶಿವನಿರ್ದಲ್ಲಿಯೆ ಸಕಲ ಸಚರಾಚರಂಗಳಿರ್ಪುವು. ಇಂತೀ ಸಕಲವಿಸ್ತಾರವನೊಳಕೊಂಡ ನೇತ್ರದ ನಿಲವು ನೀನೇ ಅಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಸಂಗವನರಿದು ಜರೆದು ಸಂಗಸಂಬಂಧವಾದ ಚಿನುಮಯ ಚನ್ನಮಹೇಶ್ವರನ ತನುಮನಭಾವಂಗಳು ಮತ್ತೊಂದಕ್ಕೆ ಆಸ್ಪದವಿರಹಿತವಾಗಿರ್ದವು. ಅದೆಂತೆಂದೊಡೆ, ಗುರುಭಕ್ತಿಸೇವಾನುಕೂಲಿ ಕಾಯದ ಗತಿಯುಳ್ಳನ್ನಕ್ಕರ ಕಂಡು ಮಾಡಿ ವಿನೋದಿಸಬೇಕೆಂಬುದೊಂದು ನಿರುತ, ಮಂತ್ರ ಧ್ಯಾನ ಜಪ ಸ್ತೋತ್ರಾದಿಗಳಿಂದೆ ಲಿಂಗಾರ್ಚನೆಯವಸರ ಮನವುಳ್ಳನ್ನಕ್ಕರ ಮಾಡಿ ನೋಡಿ ಆನಂದಿಸಬೇಕೆಂಬುದೊಂದು ನಿಷ್ಠೆ. ಅನ್ನ ವಸ್ತ್ರ ಆಭರಣಾದಿ ಹದಿನೆಂಟು ತೆರದ ಭಕ್ತಿಯಾರಾಧನೆ ಪ್ರಾಣಾದಿ ದ್ರವ್ಯವುಳ್ಳನ್ನಕ್ಕರ ಮಾಡಿ ನೀಡಿ ಸುಖಿಸಬೇಕೆಂಬುದೊಂದು ಭಾವದ ನಿರುತ. ಇಂತು ತ್ರಿವಿಧ ಪದದಲ್ಲಿ ತ್ರಿವಿಧ ವಿದ್ಯಾಸನ್ನಿಹಿತನಾಗಿ ಎಡೆದೆರಹಿಲ್ಲದಿರುತಿರ್ದನು ಗುರುನಿರಂಜನ ಚನ್ನಬಸವಲಿಂಗನಲ್ಲಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->