ಈ ಬಚ್ಚಬರಿಯ ಬಯಲ ಕಂಡಿಹೆನೆಂದರೆ, ಕಾಣಬಾರದು.
ಕೇಳಿಹೆನೆಂದರೆ ಕೇಳಬಾರದು, ಹೇಳಿಹೆನೆಂದರೆ ಹೇಳಬಾರದು.
ಇವ ಮೂರರ ಕಾಳಿಕೆಯ ಕಳೆದು,
ಈ ಹನ್ನೆರಡ ಜಾಣಿಯಲ್ಲಿ ದಾಂಟಿ, ಒಂದರ ಮೇಲೆ ನಿಂದು,
ಅಂದವಳಿಯದೆ, ಬಿಂದು ತುಳುಕದೆ,
ಅಂದಂದಿನ ಹೊಸಪೂಜೆಯ ನೋಡಿ, ಕಣ್ದೆರೆದು
ಕರಗಿ ಒಂದಾದ ಶರಣರ ಚರಣವ ತೋರಿ ಬದುಕಿಸಯ್ಯಾ ಎನ್ನ ,
ಬಸವಪ್ರಿಯ ಕೂಡಲಚೆನ್ನಬಸವಣ್ಣಾ.