ಅಥವಾ

ಒಟ್ಟು 13 ಕಡೆಗಳಲ್ಲಿ , 8 ವಚನಕಾರರು , 13 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆದಿಯಲ್ಲಿ ಬಯಲು, ಅಂತ್ಯದಲ್ಲಿ ಬಯಲು, ಮಧ್ಯದಲ್ಲಿ ತೋರಿ ಕೆಡುವುದದು ನೋಡಾ, ಈ ಘಟವು. ತೋರಿ ತೋರಿ ಕೆಡುವುದಕ್ಕೆ, ಈ ಜಗದ್ಲ ಇದೆ ದೃಷ್ಟ ನೋಡಾ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಗರ್ಭದಾ ಅಂತ್ಯದಲ್ಲಿ ಒಬ್ಬನೆಯಿದ್ದ ಅಯ್ಯಾ, ಸರ್ಬಗತ ನೀನೆ ಕಂಡಾ ಅಯ್ಯಾ. ಒಂದೊಂದು ಪರಿಯಲ್ಲಿ ಆಡುವಾನಂದ ಗುಣವ ನೋಡಯ್ಯಾ. ಶೂನ್ಯ ಶೂನ್ಯಕಾಯನಾ ಕರಸ್ಥಲಕೆ ದೇವನಾದೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಆದಿ ಅನಾದಿಯೆಂಬವು ನಾದಕ್ಕೆ ಬಾರದ ಮುನ್ನ, ಶೂನ್ಯ ನಿಃಶ್ಶೂನ್ಯ ಸುರಾಳವೆಂಬವು ಸುಳುಹುದೋರದ ಮುನ್ನ, ಬೆಳಗು ಕತ್ತಲೆಯಿಲ್ಲದ ಮುನ್ನ, ಅಳಿವು ಉಳಿವು ಸುಳುವು ಸೂತ್ರ ಜಂತ್ರ ಜಡ ಅಜಡವಿಲ್ಲದ ಮುನ್ನ, ಕಡೆ ನಡು ಮೊದಲಿಲ್ಲದ ಅಡಿಯಲಾಧಾರ ಹಿಡಿವರೆ ರೂಹಿಲ್ಲದ ಮುನ್ನ, ಒಡೆಯನಿಲ್ಲ ಬಂಟನಿಲ್ಲ ನಡೆಯಿಲ್ಲ ನುಡಿಯಿಲ್ಲ ಬೆಡಗಿಲ್ಲ ಒಡಲಿಲ್ಲದ ಮುನ್ನ, ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಚಂದ್ರ, ಸೂರ್ಯರು ತಲೆದೋರದ ಮುನ್ನ, ದೇವನಿಲ್ಲ ಭಕ್ತನಿಲ್ಲದ ಮುನ್ನ, ನೀನು ನಾನುಯಿಲ್ಲದ ಮುನ್ನ, ಆಕಾರ ನಿರಾಕಾರವೇನೂಯಿಲ್ಲದ ಮುನ್ನ, ತಾನು ತಾನೆಂಬ ತಲ್ಲಣವಿಲ್ಲದಂದು, ಆ ಬಟ್ಟಬಯಲ ಬ್ರಹ್ಮವೆ ಘಟ್ಟಿಯಾದ ಘನವೆಂತೆಂದಡೆ: ನಿಮ್ಮನುವ ನೀವರಿದ ಘನಮಹಿಮರು ತಿಳಿದು ನೋಡಿರಣ್ಣ. ಆ ಬಟ್ಟಬಯಲೆಂದಡಾರು ಬಸವ, ಆ ಬಸವನೆಂದಡಾರು ಬಟ್ಟಬಯಲು. ಆ ಬ್ರಹ್ಮನೆಂದಡಾರು ಬಸವ, ಬಸವನೆಂದಡಾರು ಬ್ರಹ್ಮ. ಅಂತಪ್ಪ ಬಸವನ ಆ ಮೂಲವ ಬಲ್ಲವರು ನೀವು ಕೇಳಿರಣ್ಣ. ಬಸವ ಎಂಬ ಮೂರಕ್ಷರವೆ ಮೂಲಪ್ರಣವ. ಅದೆಂತೆಂದಡೆ:ಬಯೆಂಬುದೆ ಚಿನ್ನಾದ ಆಕಾರವಾಯಿತ್ತು, ಸಯೆಂಬುದೆ ಚಿದ್ಬಿಂದುವಾಯಿತ್ತು, ಮತ್ತಂ ಬಯೆಂಬುದೆ ಅಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾ ಯೆಂಬುದೆ ಚಿತ್ಕಳೆಯಾಯಿತ್ತು. ಮತ್ತಂ ಬಯೆಂಬುದೆ ಆಕಾರವಾಯಿತ್ತು, ಸ ಎಂಬುದೆ ಉಕಾರವಾಯಿತ್ತು. ವಾಯೆಂಬುದೆ ಮಕರವಾಯಿತ್ತು. ಮತ್ತೆ ಬಯೆಂಬುದೆ ನಾದವಾಯಿತ್ತು, ಸಯೆಂಬುದೆ ಬಿಂದುವಾಯಿತ್ತು, ವಾಯೆಂಬುದೆ ಕಳೆಯಾಯಿತ್ತು. ಮತ್ತೆ ಬ ಎಂಬುದೆ ಗುರುವಾಯಿತ್ತು, ಸಯೆಂಬುದೆ ಅಂಗವಾಯಿತ್ತು, ವಾ ಎಂಬುದೆ ಜಂಗಮವಾಯಿತ್ತು. ಬ ಎಂಬ ನಾದವೆತ್ತಲು, ಸ ಎಂಬ ಬಿಂದು ಕೂಡಲು, ವಾಯೆಂಬ ಕಳೆ ಬೆರೆಯಲು, ಗೋಳಕಾಕಾರವಾಗಿ ಆದಿಪ್ರಣಮವೆನಿಸಿತ್ತು. ಆದಿಪ್ರಣಮ, ಅನಾದಿಪ್ರಣಮ, ಅಂತ್ಯಪ್ರಣಮವೆಂಬವು ನಮ್ಮ ಬಸವಣ್ಣನ ಸ್ಥೂಲ ಸೂಕ್ಷ್ಮ ಕಾರಣ ಕಾಣಿರೆ. ಇಂತಪ್ಪ ಬಸವಣ್ಣ ಬಯಲಬ್ರಹ್ಮವನೆ ಮೆಯಿದು, ಮೆಲುಕಿರಿದು ಗೋಮಯವಿಕ್ಕಲು ಪೃಥ್ವಿಯಾಯಿತ್ತು. ಇಂತಪ್ಪ ಬಸವಣ್ಣ ಜಲವ ಬಿಡಲು ಅಪ್ಪುಮಯವಾಯಿತ್ತು. ಇಂತಪ್ಪ ಬಸವಣ್ಣನ ತೇಜವೆ ಅಗ್ನಿಯಾಯಿತ್ತು. ಇಂತಪ್ಪ ಬಸವಣ್ಣನ ಉಚ್ಛ್ವಾಸ ನಿಶ್ವಾಸವೆ ವಾಯುವಾಯಿತ್ತು. ಇಂತಪ್ಪ ಬಸವಣ್ಣನ ಶಬ್ದವೆ ಆಕಾಶವಾಯಿತ್ತು. ಇಂತಪ್ಪ ಬಸವಣ್ಣನ ಕಂಗಳ ಬೆಳಗೆ ಚಂದ್ರ ಸೂರ್ಯರಾದರು. ಇಂತಪ್ಪ ಬಸವಣ್ಣನ ಬುದ್ಧಿಯೆ ಆತ್ಮವೆನಿಸಿ, ಅಷ್ಟತನುಮೂರ್ತಿಯೆ ತನುವೆನಿಸಿ, ಪಿಂಡ ಬ್ರಹ್ಮಾಂಡ ಕೋಟ್ಯಾನುಕೋಟಿ ಅಂಡಪಿಂಡಾಂಡಂಗಳಿಗೆ ಒಡಲಾಗಿ, ಅಡಿಮುಡಿಗೆ ತಾನೆ ಆದಿಯಾಗಿ, ಸರ್ವವೂ ನಮ್ಮ ಬಸವಣ್ಣನ ಒಡಲಲ್ಲಿ ಹುಟ್ಟುತ್ತ ಬೆಳೆಯುತ್ತ ಅಳಿವುತಿಪ್ಪವು ಕಾಣಿರೆ. ಇಂತಪ್ಪ ಸಕಲಪ್ರಾಣಿಗಳಿಗೆ ನಮ್ಮ ಬಸವಣ್ಣನ ಗೋಮಯದಲ್ಲಿ ಹುಟ್ಟಿದ ಪೃಥ್ವಿಯೆ ಪದಾರ್ಥವೆ ಆದಿಜಲದಿಂದ ಹುಟ್ಟಿದ ಉದಕವೆ ಸಾರ. ತೇಜದಿಂದ ಹುಟ್ಟಿದ ಅಗ್ನಿಯೆ ಕಳೆ. ಉಚ್ಛ್ವಾಸ ನಿಶ್ವಾಸದಿಂದ ಹುಟ್ಟಿದ ಚಂದ್ರಸೂರ್ಯರೇ ಅರಿವು ಮರವೆ. ಬುದ್ಧಿಯಿಂದ ಹುಟ್ಟಿದ ಆತ್ಮನೆ ಚೈತನ್ಯಾತ್ಮ. ಇಂತೀ ಸರ್ವಪ್ರಾಣಿಗಳಿಗೆ ನಮ್ಮ ಬಸವಣ್ಣನೆ ಆದಿ ಕಾಣಿರೇ. ಆದಿಯಲ್ಲಿ ಹುಟ್ಟಿ, ಮಧ್ಯದಲ್ಲಿ ಬೆಳೆದು, ಅಂತ್ಯದಲ್ಲಿ ಲಯವನೆಯ್ದಿದರೆ, ಮತ್ತೆ ನಿಲ್ಲುವದಕ್ಕೆ ನಮ್ಮ ಬಸವಣ್ಣನೆ ಆದಿ ಕಾಣಿರೆ. ಇಂತೀ ಒಳ ಹೊರಗೆ ಕೈಕೊಂಬರೆ, ದೇವರು ಬೇರೊಬ್ಬರುಂಟಾದರೆ ಬಲ್ಲರೆ ನೀವು ಹೇಳಿ ತೋರಿರೆ. ಅಲ್ಲದಿರ್ದರೆ ನಿಮ್ಮ ವೇದಾಗಮಶಾಸ್ತ್ರಪುರಾಣಗಳ ಕೈಯಲ್ಲಿ ಹೇಳಿಸಿರೆ. ಇಂತೀ ಅನಾದಿಸಂಸಿದ್ಧ ಬಟ್ಟಬಯಲಬ್ರಹ್ಮವೆ ಬಸವನೆಂಬುದಂ ಕಾಣುತಿರ್ದು ಕೇಳುತಿರ್ದು ಹೇಳುತಿರ್ದು ಅರಿದಿರ್ದು, ಮತ್ತೆ ಕೀಳುದೈವಂಗಳನಾರಾಧಿಸಿ ಅರ್ಚನೆ ಪೂಜೆಯ ಹಲವು ಚಂದದಲ್ಲಿ ಮಾಡಿ, ಹಲವು ಜಾತಿ ಹಲವುದರುಶನವೆನಿಸಿಕೊಂಡುಸ ಹೊಲಬುದಪ್ಪಿದಿರಿ, ಹುಲುಮನುಜರಿರಾ. ಇನ್ನಾದರೂ ಅರಿದು ನೆನದು ಬದುಕಿ, ನಮ್ಮ ಬಸವಪ್ರಿಯ ಕೂಡಲ[ಚೆನ್ನ]ಸಂಗಮದೇವನ ಶ್ರೀಪಾದಪದ್ಮವ.
--------------
ಸಂಗಮೇಶ್ವರದ ಅಪ್ಪಣ್ಣ
ಸರ್ಬರಾದಿ ಅಂತ್ಯದಲ್ಲಿ ಒಬ್ಬನೆ ಇದ್ದೆಯಯ್ಯಾ, ಸರ್ವಗತ ನೀನೆ ಕಂಡಯ್ಯಾ, ಒಂದೊಂದು ಪರಿಯಲ್ಲಿ ಆಡುವ ಆನಂದಗುಣವ ನೋಡಯ್ಯಾ. ಶೂನ್ಯಶೂನ್ಯ! ಕಾಯದ ಕರಸ್ಥಲಕ್ಕೆ ದೇವನಾದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶ್ರೀಗುರುಲಿಂಗಜಂಗಮಕರುಣಕಟಾಕ್ಷೆಯಿಂದ ತ್ರಿವಿಧದೀಕ್ಷೆ ತ್ರಿವಿಧಾಚಾರ ತ್ರಿವಿಧಲಿಂಗಾರ್ಚನೆ ತ್ರಿವಿಧಲಿಂಗಾರ್ಪಣ ತ್ರಿವಿಧಲಿಂಗಾನುಭಾವ, ತ್ರಿವಿಧಭಕ್ತಿ ಜ್ಞಾನವೈರಾಗ್ಯ ಸತ್ಯಸನ್ಮಾರ್ಗಾಚಾರಾನ್ವಿತ ಸದ್ಭಕ್ತ_ಮಾಹೇಶ್ವರ_ಶರಣಗಣಂಗಳು, ಮೊಟ್ಟಮೊದಲಲ್ಲಿ, ಮಡು ಹೊಂಡ ನದಿ ಹಳ್ಳ ಕೆರೆ ಬಾವಿ ಕೊಳ ಗುಂಡ ಚಿಲುಮೆ ಮೊದಲಾದ ಸ್ಥಾನಂಗಳಲ್ಲಿ ಸ್ವಚ್ಛನಿರ್ಮಲತರವಾದ ಪರಿಣಾಮೋದಕವನ್ನು ಭಾಜನಮುಖಂಗಳಿಗೆ ಕ್ರಿಯಾ_ಜ್ಞಾನಯುಕ್ತವಾದ ಉಭಯಮಡಿಕೆಯ ಪಾವಡವ ಹಾಕಿ ಶೋಧಿಸಿ ಮೇಲುಪಾವಡವ ಬಾಸಣಿಸಿ, ಭವಿಜನಾತ್ಮರ ಸೋಂಕದೆ ತೆಗೆದುಕೊಂಡು ಬಂದು ಶ್ರೀಗುರುಲಿಂಗಜಂಗಮದ ಪಾದ ಪ್ರಕ್ಷಾಲನವಂ ಮಾಡಿ ಆ ಮೇಲೆ ಉಭಯ ಪಾದದ ಅಡಿಯಲ್ಲಿ ಮೂರುವೇಳೆ, ದಶಾಂಗುಲಿ ಒಂದು ವೇಳೆ, ಸ್ಪರ್ಶನವಾದಂಥ ಗುರುಪಾದೋದಕವ ಸಮಸ್ತ ಭಾಂಡ ಭಾಜನಂಗಳಲ್ಲಿ ತುಂಬಿ ಕ್ರಿಯಾಶಕ್ತಿಯರು ಕ್ರಿಯಾಭೃತ್ಯರಾದರು ಸರಿಯೆ ಲಿಂಗಾಭಿಷೇಕ ಲಿಂಗಾರ್ಚನಕ್ರಿಯಗಳ ತೀರ್ಚಿಸಿಕೊಂಡು ಮಂತ್ರಧ್ಯಾನಾರೂಢರಾಗಿ ಲಿಂಗಬಾಹ್ಯರ ಸ್ಪರ್ಶನಸಂಭಾಷಣೆಗಳನುಳಿದು ಸಕಲಪದಾರ್ಥಂಗಳ ಕ್ರಿಮಿಕೀಡೆಕೀಟಕಂಗಳ ಕಾಷ*ಮೃಣ್ ಪಾಷಾಣಂಗಳ ಶೋಧಿಸಿ, ಅತಿ ಸುಯಿದಾನದಿಂದ ಪಾದೋದಕದಲ್ಲಿ ಪಾಕವ ಮಾಡಿ, ಆ ಪಾಕದ ಭಾಜನಂಗಳಿಗೆ, ಹಸ್ತಸ್ಪರ್ಶನ ಮಂತ್ರನ್ಯಾಸ ಲಿಂಗದೃಷ್ಟಿ ವಾಕ್ಶೀಲ ಮಂತ್ರಸ್ಮರಣೆ ಚಿದ್ಭಸ್ಮದಿಂದ, ಆ ಪದಾರ್ಥದ ಪೂರ್ವಾಶ್ರಯವ ಕಳೆದು ಶ್ರೀಗುರುಲಿಂಗಜಂಗಮದ ಶುದ್ಧಪ್ರಸಾದವೆಂದು ಭಾವಿಸಿ ಸಾವಧಾನಭಕ್ತಿಯಿಂದ ಮಹಾನೈಷೆ* ಕರಿಗೊಂಡು ಮಂತ್ರಸ್ಮರಣೆಯಿಂದ ಸತ್ಯಸದಾಚಾರ ಸತ್ಕ್ರಿಯಾಸಮ್ಯಜ್ಞಾನವುಳ್ಳ ಗುರುಲಿಂಗಜಂಗಮಕ್ಕೆ ಸಮರ್ಪಣೆಯಂ ಮಾಡಿ ಅವರ ಕರುಣಪ್ರಸಾದವ ಸಮಸ್ತಶಕ್ತಿ ಭಕ್ತಶರಣಂಗಳೆಲ್ಲ ಪರಿಣಾಮಿಸಿ, ಭಾಂಡಭಾಜನಂಗಳಲ್ಲಿ ಉಳಿದ ಶೇಷಪಾದೋದಕವ ಇಷ್ಟಲಿಂಗಬಾಹ್ಯವಾದ ಭವಿಜನಾತ್ಮರುಗಳಿಗೆ ಹಾಕಲಾಗದು. ಅದಕ್ಕೆ ಹರವಾಕ್ಯವುಂಟು. ಹರಗುರುವಾಕ್ಯವ ಮೀರಿ ವೇದಶ್ರುತಿವಾಕ್ಯವ ಹಿಡಿದು ಗುರುಮಾರ್ಗಾಚಾರಬಾಹ್ಯರಿಗೆ ಲಿಂಗಪದಾರ್ಥವ ಕೊಟ್ಟಾತಂಗೆ ಯಮದಂಡಣೆ ಉಂಟು. ಅಂತ್ಯದಲ್ಲಿ ಕಾಲಕಾಮರಿಗೊಳಗು ನೋಡ ಕೂಡಲಚೆನ್ನಸಂಗಮದೇವ.
--------------
ಚನ್ನಬಸವಣ್ಣ
ಆದಿಯ ಪ್ರಸಾದವ ಸಾಧಿಸಬಾರದು, ಬೇಧಿಸಬಾರದು. ನಿಮ್ಮ ಪ್ರಸಾದಿಗಲ್ಲದೆ ನೆಲೆಗೊಳಗಾಗದು. ಚರಾಚರದಲ್ಲಿ ಅನುಶ್ರುತ ಸುಖ ಪ್ರಸಾದವ ಭಕ್ತಿಪದಾರ್ಥವೆಂದು ರೂಹಿಸಿದ ಪರಿಯ ನೋಡಾ. ಅರ್ಚನಮುಖದಲ್ಲಿ ಪದಾರ್ಥವೆಂದು, ಅರ್ಪಣಮುಖದಲ್ಲಿ ಪ್ರಸಾದವೆಂದು ಕಲ್ಪಿಸಿದ ಪರಿಯ ನೋಡಾ. ಆದಿಯಲ್ಲಿ ಪ್ರಸಾದ, ಅಂತ್ಯದಲ್ಲಿ ಪ್ರಸಾದ, ಮಧ್ಯದಲ್ಲಿ ಒಂದು ಕ್ಷಣ ಪದಾರ್ಥವೆಂದು ಮಾಡಿದ ಪರಿಯ ನೋಡಾ. ಕಡೆ ಮೊದಲಿಲ್ಲದ ಪ್ರಸಾದವು ಭಕ್ತಿಗೆ ಸಾಧ್ಯವಾದ ಪರಿಯ ನೋಡಾ. ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು ಭಕ್ತಿಪ್ರಿಯನಾದ ಕಾರಣ, ಭಕ್ತಿಪ್ರಸಾದವ ಪಡೆದೆನಾಗಿ ಎನಗೆ ಪ್ರಸಾದ ಸಾಧ್ಯವಾಯಿತ್ತು.
--------------
ಸ್ವತಂತ್ರ ಸಿದ್ಧಲಿಂಗ
ಬಸವ ಮೊದಲಾದ ಮಹಾಪ್ರಮಥಣಂಗಳ ಸಮೂಹಕ್ಕೆ ಕಾರಣರಾದ, ಮತ್ರ್ಯಲೋಕದ ಮಹಾಗಣಂಗಳ ಅಂಶೋದ್ಧಾರಕರಾದ, ಲಿಂಗಾಚಾರ ಭಕ್ತಮಾಹೇಶ್ವರರ ಪಾಣಿಗ್ರಹಣ ಕ್ರಿಯಾಶಕ್ತಿಯರು ಸದಾವಾಸ ಪರಿಯಂತರ ಇಷ್ಟಮಹಾಲಿಂಗವ ತಮ್ಮ ಅಂಗವ ಬಿಟ್ಟು ಅಗಲಿಸಲಾಗದು. ನಿರಂತರ ಶ್ರೀಗುರುಲಿಂಗಜಂಗಮದ ಚರಣೋದ್ಧೂಳನವನ್ನು ಲಲಾಟದಲ್ಲಿ ತ್ರಿಪುಂಡ್ರ ರೇಖೆಗಳ ಧರಿಸಿ, ಮಂತ್ರಸ್ಮರಣೆಯಿಂದ ಲಿಂಗಜಂಗಮಕ್ಕೆ ಪಾಕವ ಮಾಡಿ ಸಮರ್ಪಿಸಿ, ಕುಶಬ್ದವನಳಿದು ಆಚರಿಸುವದೆ ಸತ್ಯಸದಾಚಾರ. ಈಸನ್ಮಾರ್ಗವ ಬಿಟ್ಟು, ಭವಿಪ್ರಾಣಿಗಳಂತೆ ಸರ್ವಾಂಗಕ್ಕೆ ಹಚ್ಚೆಯನೂರಿಸಿಕೊಂಡು, ಲಲಾಟದಲ್ಲಿ ಕುಂಕುಮಗಂಧದ ಬೊಟ್ಟು, ಏಕಾಂತವಾಸದಲ್ಲಿ ಹಲವುಪ್ರಸಂಗ. ಭವಿಜನ್ಮಾತ್ಮರು ತೊಳೆದು ಹೊದಿಕೆ, ಅವರ ಸಂಸರ್ಗ ಮೊದಲಾದ ದುಃಕೃತ್ಯವ ಮಾಡಿದಲ್ಲಿ ಕಂಡು ಸುಮ್ಮನಿರಲಾಗದು. ಭಕ್ತಮಾಹೇಶ್ವರರು ಆ ಸ್ತ್ರೀಯರಿಗೆ ಪ್ರತಿಜ್ಞೆಯ ಮಾಡುವದು. ಅದ ಮೀರಿದಡೆ ಅವರಿಂದ ಪಾಕವ ಕೊಳ್ಳಲಾಗದು. ಈ ಮಾರ್ಗವನಾಚರಿಸದಿರ್ದಂಥ ಭಕ್ತನಲ್ಲಿ, ಗುರುಚರಮೂರ್ತಿಗಳು, ಅವನ ಮನೆಯ ಹೊಕ್ಕು, ಲಿಂಗಾರ್ಚನೆ ಲಿಂಗಾರ್ಪಣವ ಮಾಡಲಾಗದು. ಗುರುವಾಕ್ಯವ ಮೀರಿ, ಅರ್ಥದಿಚ್ಫೆಗೆ ಹೊಕ್ಕು ಬೆರಸಿದಡೆ, ಅನಾದಿ ಗುರುಲಿಂಗಜಂಗಮ ಭಕ್ತಪ್ರಸಾದಕ್ಕೆ ಹೊರಗಾಗಿ, ಅಂತ್ಯದಲ್ಲಿ ಶತಸಹಸ್ರ ವೇಳೆ ಶುನಿಸೂಕರಾದಿಗಳಲ್ಲಿ ಬಪ್ಪುದು ತಪ್ಪದು ನೋಡಾ, ಕಲಿದೇವರದೇವ.
--------------
ಮಡಿವಾಳ ಮಾಚಿದೇವ
ಅಯ್ಯ, ಎನ್ನ ಕರ-ಮನ-ಭಾವ-ಕಂಗಳ ಕೊನೆಯಲ್ಲಿ ಬೆಳಗುವ ಪರಂಜ್ಯೋತಿಮೂರ್ತಿ ಕೇಳ ! ನಿತ್ಯನಿಜಾನಂದ ಪರಿಪೂರ್ಣದರಿವೆ! ಆದಿಯಲ್ಲಿ ಪ್ರಸಾದವಯ್ಯ, ಅಂತ್ಯದಲ್ಲಿ ಪ್ರಸಾದವಯ್ಯ, ಮಧ್ಯದಲ್ಲಿ ಪದಾರ್ಥವಯ್ಯ. ಈ ಪ್ರಸಾದ-ಪದಾರ್ಥವನರಿಯದವರೆಲ್ಲ ಹುಟ್ಟಂಧಕರೆಂಬೆನಯ್ಯ. ಈ ಪ್ರಸಾದ-ಪದಾರ್ಥವ ಭೇದಿಸಿ ಬಸವಣ್ಣ ಬಯಲಾದ. ಚೆನ್ನಬಸವಣ್ಣ, ಪ್ರಭು, ಸಿದ್ಧರಾಮ, ಅಜಗಣ್ಣ, ಮರುಳಶಂಕರ, ನೀಲಲೊಚನೆ, ಅಕ್ಕಮಹಾದೇವಿ, ಮುಕ್ತಾಯಕ್ಕ ಮೊದಲಾದ ಮಹಾಚಿದ್ಘನಗಣಂಗಳೆಲ್ಲ ಜ್ಯೋತಿರ್ಮಯಾದರು ನೋಡ. ಮತ್ತಂ, ಸಚ್ಚಿದಾನಂದನಿಜದಿಂದ ಭೇದಿಸಿ, ಹರುಷಾನಂದಿಜಲವುಕ್ಕಿ, ಅತಿಮೋಹದಿಂದ ಪದವನೆ ನೂರೆಂಟೆಳೆಯದಾರವ ಮಾಡಿ, ಅರ್ಥವನೆ ನವವರ್ಣಯುಕ್ತವಾದ ಮಣಿಯ ಮಾಡಿ, ಮಹಾಪರಿಪೂರ್ಣಜ್ಞಾನವೆಂಬ ರಂಧ್ರÀ್ರವ ರಚಿಸಿ, ಮಹಾಚಿದ್ಘನಪ್ರಕಾಶವೆಂಬ ಬಣ್ಣವನ್ನಿಟ್ಟು, ಒಂದು ದಾರದಲ್ಲಿ ಹನ್ನೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಮೂವತ್ತಾರು ಮಣಿಯ ಪವಣಿಸಿದರಯ್ಯ. ಮಿಗಿಲೊಂದು ದಾರದಲ್ಲಿ ನಾಲ್ವತ್ತೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಅರುವತ್ತು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಪ್ಪತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಬತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ತೊಂಬ್ತಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನೂರೆಂಟು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಇನ್ನೂರಹದಿನಾರು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ನಾಲ್ಕುನೂರಮೂವತ್ತೆರಡು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಎಂಟುನೂರ ಅರುವತ್ತುನಾಲ್ಕು ಮಣಿಯ ಪವಣಿಸಿದರಯ್ಯ. ಮತ್ತೊಂದು ದಾರದಲ್ಲಿ ಸಾವಿರದಏಳೂನೂರ ಇಪ್ಪತ್ತೆಂಟು ಮಣಿಯ ಪವಣಿಸಿದರಯ್ಯ. ಈ ಪ್ರಕಾರದಿಂದ ಹದಿಮೂರೆಳೆಯ ಮಣಿಗಳ ಸರಗೊಳಿಸಿ, ಆಯಾಯ ಸರದ ಎಸಳುಗಳ ಮಧ್ಯದಲ್ಲಿ ಮುತ್ತು ಮಾಣಿಕ್ಯ ನವರತ್ನಪ್ರಕಾಶಕ್ಕೆ ಮಿಗಿಲಾದ ಮಹಾಜ್ಯೋತಿರ್ಮಯ ಶ್ರೀಗುರುಲಿಂಗಜಂಗಮವೆಂಬ ಮಹಾಪ್ರಸಾದವ ಪದಕವ ಮಾಡಿ ರಚಿಸಿ, ಅಂಗ-ಲಿಂಗ, ಪ್ರಾಣ-ಲಿಂಗ, ಭಾವ-ಲಿಂಗವೆಂಬ ಉಭಯಚಿಹ್ನವಳಿದು ಮಹಾಬೆಳಗಿನೊಳಗೆ ನಿಂದು, ಸರ್ವಾವಸ್ಥೆಗಳಿಲ್ಲದೆ ಕಂಠಾಭರಣವ ಮಾಡಿ ಧರಿಸಿ ಮಹಾಪರಿಪೂರ್ಣಪ್ರಕಾಶವೆಂಬ ಮಹಾಚಿದ್ಘನ ಪ್ರಸಾದಭಾಜನದಲ್ಲಿ ಪರಿಪೂರ್ಣರಾಗಿ, ಸತ್ಯ ಸದಾಚಾರ ಸತ್ಕಾಯಕ ಸದ್ಭಕ್ತಿಯಾನಂದ ಸತ್ಕ್ರಿಯಾ ಸಮ್ಯಜ್ಞಾನದ ಬೆಳಗಿನೊಳಗಣ ಮಹಾಬೆಳಗ ಸಾಧಿಸಿ, ಆನಾದಿಬಯಲೊಳಗಣ ಮಹಾಬಯಲೊಳಗೆ ಜನಿತರಾಗಿ, ಚತುರ್ಮುಖನ ಜಡಸಂಸಾರಕ್ಕೊಳಗಾಗದೆ, ಯದೃಷ್ಟಂ ತನ್ನಷ್ಟಂ ಎಂದುದಾಗಿ, ಮತ್ತಂ ಮರಳಿ ಬಯಲೊಳಗಣ ಮಹಾಬಯಲಾದರು ನೋಡ, ಸಂಗನಬಸವೇಶ್ವರ.
--------------
ಗುರುಸಿದ್ಧದೇವರು
ಅನಾದಿಪರಶಿವನಿಂದ ಸಾಕಾರಲೀಲೆಯ ಧರಿಸಿ, ಮರ್ತ್ಯಕ್ಕವತರಿಸಿ, ಶ್ರೀಗುರುಲಿಂಗಜಂಗಮದಿಂದ ವೇಧಾ-ಮಂತ್ರ-ಕ್ರಿಯಾದೀಕ್ಷೆಯ ಪಡೆದು, ಲಿಂಗಾಂಗಸಮರಸಾನಂದವನರಿದು, ತನ್ನ ಸ್ವಸ್ವರೂಪು ನಿಲುಕಡೆಯ ತಿಳಿದು, ಸತ್ಯ-ಸದಾಚಾರ-ಸನ್ಮಾರ್ಗದ ಗೊತ್ತನರಿದು, ಪಂಚಸೂತಕಪಾತಕ, ಅರುವೈರಿ, ಅಷ್ಟಮದಂಗಳಡಿಮೆಟ್ಟಿ, ಆಚರಿಸುವ ಭಕ್ತಗಣಂಗಳು ಇಂತಿಷ್ಟು ಸತ್ತುಚಿತ್ತಾನಂದನಿತ್ಯಪರಿಪೂರ್ಣ ಅವಿರಳಾನಂದ ನಿಜಾಚರಣೆಯನರಿಯದ ಗುರುವಾಗಲಿ, ಲಿಂಗವಾಗಲಿ, ಜಂಗಮವಾಗಲಿ, ಶರಣನಾಗಲಿ, ಭಕ್ತನಾಗಲಿ, ಪ್ರಸಾದಿಯಾಗಲಿ, ಅವರಿಂದ ಪಾದೋದಕಪ್ರಸಾದವ ಕೊಂಡರೆ ಯಮದಂಡಣೆಗೊಳಗು ನೋಡಾ, ಅಂತ್ಯದಲ್ಲಿ ಠೌರವ, ಎಂದಾತನಂಬಿಗರ ಚೌಡಯ್ಯ.
--------------
ಅಂಬಿಗರ ಚೌಡಯ್ಯ
ಪಂಚಸ್ಥಾನದ ಕಳೆಯ ಬೆಳಗಿನ ಬೆಳಗ ಕಂಡು ಕೂಡಿ ಸುಖಿಸಿದೆನು ಆದಿಯಲ್ಲಿ. ಮತ್ತೆ ಪಂಚಸ್ಥಾನದ ಕಳೆಯ ಬೆಳಗಿನ ಬೆಳಗ ಕಂಡು ಕೂಡಿ ಸುಖಿಸಿದೆನು ಮಧ್ಯದಲ್ಲಿ. ಮತ್ತು ಪಂಚಸ್ಥಾನದ ಕಳೆಯ ಬೆಳಗಿನ ಬೆಳಗ ಕಂಡು ಕೂಡಿ ಸುಖಿಸಿದನು ಅಂತ್ಯದಲ್ಲಿ. ಇಂತು ತ್ರಿವಿಧ ಕಲೆಯ ಬೆಳಗಿನ ಬೆಳಗು ಗುರುನಿರಂಜನ ಚನ್ನಬಸವಲಿಂಗ ತಾನೆ ಬೇರಿಲ್ಲ.
--------------
ದೇಶಿಕೇಂದ್ರ ಸಂಗನಬಸವಯ್ಯ
ತನುಗುಣದ ಪಾತ್ರೆಯಲಿ ತವಕಿಸುವ ಭೇದವನು ಅನುನಯದ ಮಲತ್ರಯದ ದುರ್ವಾಕ್ಯವನು ಘನತರದ ಸುದ್ದಿಯನು ಐದೈದುವೊಂದಾಗಿ ತನುಗುಣವನತಿಗಳೆದು ಪ್ರಾಪಂಚಿಕಾತತ್ವದಿಂದತ್ತತ್ತ ಮತ್ತೆ ತ್ವಮಸಿಯಾಗಿ ಭಕ್ತಿ ಕಾರಣ ಲೋಕರೂಪನಾಗಿ ಏಕೈಕ ಸಂಬಂಧಿ ಆಕಾರ ನಿರ್ವಿಘ್ನ ಆನಂದದವ್ಯಯದ ಅಂತ್ಯದಲ್ಲಿ ಅವ್ವೆಯ ಮುಖಕಮಳ ಐಯನಜಾತಸ್ಯ ಸಂಯೋಗಕದು ಶುದ್ಧ ಮುಗ್ಧನಾಗಿ ಮೂರ ಮತ್ತೊಂದೆಂದು ಒಂದು ಮೂರರ ತೃಪ್ತಿ ಸಂದಳಿದೆ ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಅಯ್ಯಾ, ಸಮಸ್ತ ಮಾಯಾಬಲೆಯಲ್ಲಿ, ಜನ್ಮಜನ್ಮಾಂತರವೆತ್ತತೊಳಲಿ ಬಳಲಿ ಅಂತ್ಯದಲ್ಲಿ ಜ್ಞಾನೋದಯವಾಗಿ `ಶಿವಧೋ' ಎಂದು ಗುರೂಪಾವಸ್ಥೆಯ ಮಾಡುತಿರ್ದ ಶಿವಕಳಾತ್ಮಂಗೆ ಶ್ರಿಗುರು ಪ್ರತ್ಯಕ್ಷವಾಗಿ ಕೃಪಾದೃಷ್ಟಿಯಿಂದ ನೋಡಲು ಆ ಶಿವಕಳಾತ್ಮನು ಅತಿಸಂತೋಷದಿಂದ `ಎಲೆ ಗುರುನಾಥನೆ, ಎನ್ನ ಅಪರಾಧವ ನೋಡದೆ ನಿನ್ನ ದಯಾಂಬುಧಿಯಲ್ಲಿ ಮಡಗಿಕೋ, ಎನ್ನ ಸರ್ವಾಧಾರ ಮೂರ್ತಿಯೆ' -ಎಂದು ಅಭಿನಂದಿಸಲು ಆಗ, ಶ್ರೀಗುರುನಾಥನು ಮಹಾಸಂತೋಷ ಹುಟ್ಟಿ ಆ ಶಿವಕಳಾತ್ಮಂಗೆ ಪೂರ್ವದ ಜಡಶೈವಮಾರ್ಗವ ಬಿಡಿಸಿ ನಿಜ ವೀರಶೈವದೀಕ್ಷೆಯನೆ ಇತ್ತು ಹಸ್ತಮಸ್ತಕಸಂಯೋಗವ ಮಾಡಿ ಅಂತರಂಗದಲ್ಲಿರುವ ಪ್ರಾಣಲಿಂಗವ ಬಹಿಷ್ಕರಿಸಿ, ಕರಸ್ಥಲಕ್ಕೆ ತಂದುಕೊಟ್ಟನು. ಮತ್ತಾ ಲಿಂಗವ ಸರ್ವಾಂಗದಲ್ಲಿ ಪೂರ್ಣವ ಮಾಡಿ ಲಿಂಗಾಂಗ ಷಟ್‍ಸ್ಥಾನವ ತೋರಿ ಚಿದ್ವಿಭೂತಿ, ರುದ್ರಾಕ್ಷಿ, ಪಂಚಾಕ್ಷರಿ, ಷಡಕ್ಷರಿ ಮೊದಲಾದ ಸಪ್ತಕೋಟಿ ಮಹಾಮಂತ್ರವನರುಹಿ ಷಟ್‍ಸ್ಥಲಮಾರ್ಗ, ಷಡ್ವಿಧ ಶೀಲ ವತ್ರನೇಮಂಗಳನರುಹಿ ಷೋಡಶಭಕ್ತಿಯ ಮಾರ್ಗವ ತಿಳುಹಿ, ಬತ್ತೀಸ ಕಳೆಯ ನೆಲೆಯನರುಹಿ ಷೋಡಶವರ್ಣ, ದ್ವಾದಶಾಚಾರ, ಸಗುಣನಿರ್ಗುಣಲೀಲೆಯ ಕರುಣಿಸಿ ನನಗೂ ನಿನಗೂ ಚೈತನ್ಯಸ್ವರೂಪವಾದ ನಿರಂಜನಜಂಗಮಲಿಂಗ ಲಿಂಗಜಂಗಮವೆ ಗತಿಯೆಂದು ನಿರೂಪವ ಕೊಡಲು- ಆಚರಣೆಯ ವಿಚಾರವ ಕರುಣಿಸಬೇಕಯ್ಯಾ ಸ್ವಾಮಿ ಎಂದು ಬೆಸಗೊಳಲು, ಕೇಳಯ್ಯಾ, ವರಕುಮಾರ ದೇಶಿಕೋತ್ತಮನೆ ಆ ಲಿಂಗಜಂಗಮ ಜಂಗಮಲಿಂಗದಾಚರಣೆಯ ಸಂಬಂಧವ: ಸದ್ಗುರುಮಾರ್ಗಹಿಡಿದ ಜಂಗಮ, ಭಕ್ತನಾದ ನಿಜಪ್ರಸಾದಿ ಇವರಿಬ್ಬರಾಚರಣೆಯ ನಿನ್ನೊಬ್ಬನಲ್ಲಿ ಹುರಿಗೊಳಿಸಿಕೊಟ್ಟೆವು ನೋಡಯ್ಯಾ. ಅದೆಂತೆಂದಡೆ:ಕ್ರಿಯಾಜಂಗಮಮೂರ್ತಿಗಳು ನಿನ್ನರ್ಚನಾ ಸಮಯಕ್ಕೆ ದಿವಾರಾತ್ರಿಗಳೆನ್ನದೆ ಒದಗಿ ಬಂದಲ್ಲಿ, ಅಚ್ಚಪ್ರಸಾದಿಯೋಪಾದಿಯಲ್ಲಿ, ಕ್ರಿಯಾಚರಣೆಯನ್ನಾಚರಿಸುವುದಯ್ಯಾ. ನಿನ್ನ ಸಮಯೋಚಿತಕ್ಕೆ ಕ್ರಿಯಾಜಂಗಮ ದೊರೆಯದಿರ್ದಡೆ ದಿವಾರಾತ್ರಿಯಲ್ಲಿ ನಿಚ್ಚಪ್ರಸಾದಿ ಸಂಬಂಧದಂತೆ ಜ್ಞಾನಜಂಗಮಸ್ವರೂಪವಾದ ಇಷ್ಟಮಹಾಲಿಂಗದಲ್ಲಿ ಚಿದ್ಘನತೀರ್ಥಪ್ರಸಾದವ ಸಮರ್ಪಿಸಿ ತಾನಾ ಪರಿಣಾಮಪ್ರಸಾದದಲ್ಲಿ ಲೋಲುಪ್ತನಾದಾತನೆ ಲಿಂಗಭಕ್ತನಾದ ಸಮಯಪ್ರಸಾದಿ ನೋಡಾ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಜನ್ಮ ಜರೆ ಮರಣ ಭವಭವಾಂತರದಲ್ಲಿ ತೊಳಲುವ, ನೂರೊಂದುಕುಲ ಹದಿನೆಂಟುಜಾತಿಗಿಕ್ಕಿದ, ಅನಂತದೈವದುಚ್ಫಿಷ್ಟೋದಕ ಅದರೆಂಜಲನ್ನಪಾನ್ಯವ ತಂದು, ಶ್ರೀಗುರು ಕರುಣಿಸಿಕೊಟ್ಟ ಇಷ್ಟಲಿಂಗಕ್ಕೆ ನೈವೇದ್ಯವ ಮಾಡಿ ಭುಂಜಿಸುವ ಮೂಳಹೊಲೆಯರ ಮನೆಯಲ್ಲಿ ಮಾಡಿದ ಪಾಕವನು, ತ್ರಿವಿಧದೀಕ್ಷಾನ್ವಿತವಾದ ಇಷ್ಟಮಹಾಲಿಂಗಕ್ಕೆ ಅರ್ಪಿಸಿ ಭುಂಜಿಸುವ ಅಧಮ ಹೊಲೆಯರು, ಶತಸಹಸ್ರವೇಳೆ ಶುನಿಸೂಕರಾದಿಗಳಲ್ಲಿ ಜನಿಸಿ, ಅಂತ್ಯದಲ್ಲಿ ಕಾಲಕಾಮರ ಪ್ರಳಯಕ್ಕೊಳಗಾಗದೆ ಮಾಣ್ಬರೇನೊ, ಕಲಿದೇವರದೇವಾ ?
--------------
ಮಡಿವಾಳ ಮಾಚಿದೇವ
-->