ಅಥವಾ

ಒಟ್ಟು 172 ಕಡೆಗಳಲ್ಲಿ , 40 ವಚನಕಾರರು , 124 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭವಿಸಂಗವನೊಲ್ಲೆನೊಲ್ಲೆ- ಆ ಸಂಗ ಮುಂದೆ ಅನಂತ ಭವಂಗಳಲ್ಲಿ ಬರಿಸುವುದಾಗಿ, ಅನ್ಯ ದೈವದ ಭಜನೆಯನೊಲ್ಲೆನೊಲ್ಲೆ- ಆ ಭಜನೆ ಮುಂದೆ ಅನಂತ ಘೋರವನುಣಿಸುವುದಾಗಿ, ಈ ಉಭಯ ಜಡತೆಯ ಹೊದ್ದದೆ ಹಿಂಗಿ ನಿಂದೆ, ಕೂಡಲಸಂಗಮದೇವಾ.
--------------
ಬಸವಣ್ಣ
ಲಿಖಿತಕ್ಕೆ ಲಿಖಿತ ಮಹಾಲಿಖಿತವುಂಟೆಂಬೆನೆ ? ಲಿಂಗ ಸಂಸಾರಿ, ಲಿಂಗವಿಲ್ಲೆಂಬೆನೆ ? ಅಂಗ ಸಂಸಾರಿ, ಇಲ್ಲಿನ್ನಾವುದ ಘನವೆಂಬೆ, ಆವುದ ಕಿರಿದೆಂಬೆ, ತಾಳಸಂಪುಟಕ್ಕೆ ಬಾರದ ಘನವ ? ಸುಖಕ್ಕೆ ಸುಖ ತಾರುಗಂಡು, ಸಮಸುಖವಾಗಿ, ಉಪಮಾತೀತ ತ್ರಿವಿಧ ಸಂಪತ್ತುಗಳೆಂಬ ವಾಯುವಾಕುದಲ್ಲಿ, ಆದಿ ಮಧ್ಯ ಅವಸಾನರಹಿತ ಅನಂತ ಶರಣ ಅಜಾತ ಕೂಡಲಚೆನ್ನಸಂಗಾ ನಿರ್ನಾಮ ಲಿಂಗೈಕ್ಯ.
--------------
ಚನ್ನಬಸವಣ್ಣ
ಒಂದು ಜಡಿಯ ಬಿಚ್ಚಿ ಸಹಸ್ರ ಹುರಿಗೂಡಿದ ಒಂದು ಹಗ್ಗ. ಮೂರು ಹುರಿಗೂಡಿದ ಒಂದು ಹಗ್ಗ. ಒಂದು ಹುರಿಗೂಡಿದ ಒಂದು ಹಗ್ಗ. ನಾಲ್ಕು ಹುರಿಗೂಡಿದ ಒಂದು ಹಗ್ಗ. ಆರು ಹುರಿಗೂಡಿದ ಒಂದು ಹಗ್ಗ. ಹತ್ತು ಹುರಿಗೂಡಿದ ಒಂದು ಹಗ್ಗ. ದ್ವಾದಶ ಹುರಿಗೂಡಿದ ಒಂದು ಹಗ್ಗ. ಷೋಡಶ ಹುರಿಗೂಡಿದ ಒಂದು ಹಗ್ಗ. ಎರಡು ಹುರಿಗೂಡಿದ ಒಂದು ಹಗ್ಗ. ಇಂತೀ ಹುರಿಗೂಡಿದ ಹಗ್ಗ ಮೊದಲಾದ ಅನೇಕ ಹುರಿಗೂಡಿದ ಒಂದು ಅಖಂಡ ಹಗ್ಗವಮಾಡಿ, ನಾಲ್ಕು ಹುರಿ ಹಗ್ಗದಿಂ ಬ್ರಹ್ಮನ ಕಟ್ಟಿ, ಷಡುಹುರಿ ಹಗ್ಗದಿಂ ವಿಷ್ಣುವಿನ ಕಟ್ಟಿ, ದಶಹುರಿ ಹಗ್ಗದಿಂ ರುದ್ರನ ಕಟ್ಟಿ, ದ್ವಾದಶಹುರಿ ಹಗ್ಗದಿಂ ಈಶ್ವರನ ಕಟ್ಟಿ, ಷೋಡಶಹುರಿ ಹಗ್ಗದಿಂ ಸದಾಶಿವನ ಕಟ್ಟಿ, ದ್ವಿಹುರಿ ಹಗ್ಗದಿಂ ಶಿವನ ಕಟ್ಟಿ, ಸಹಸ್ರ ಹುರಿಹಗ್ಗದಿಂ ಮತ್ರ್ಯದರಸನ ಕಟ್ಟಿ, ಮೂರು ಹುರಿಹಗ್ಗದಿಂ ಸ್ವರ್ಗಲೋಕದರಸನ ಕಟ್ಟಿ, ಒಂದು ಹುರಿಹಗ್ಗದಿಂ ಪಾತಾಳಲೋಕದರಸನ ಕಟ್ಟಿ, ಅನಂತ ಹುರಿಗೂಡಿದ ಅಖಂಡ ಹಗ್ಗದಿಂ ಚತುರ್ದಶಭುವನಯುಕ್ತವಾದ ಬ್ರಹ್ಮಾಂಡವ ಕಟ್ಟಿ, ಕಾಯಕವ ಮಾಡುತಿರ್ದನಯ್ಯ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ. ಈ ಭೇದವ ಬಲ್ಲವರು ಲಿಂಗಸಂಬಂದ್ಥಿಗಳು ಈ ಭೇದವ ತಿಳಿಯದವರು ಅಂಗಸಂಬಂದ್ಥಿಗಳು.
--------------
ಕಾಡಸಿದ್ಧೇಶ್ವರ
ಆ ಅಖಂಡ ಮಹಾಮೂಲಸ್ವಾಮಿಯ ಸ್ಥಲದ ವಚನವೆಂತೆಂದೊಡೆ : ನಿರಂಜನಾತೀತಪ್ರಣವ, ಅವಾಚ್ಯಪ್ರಣವ, ಕಲಾಪ್ರಣವ, ಅನಾದಿಪ್ರಣವ, ಆದಿಪ್ರಣವ ಶಿವಪ್ರಣವ, ಶಕ್ತಿಪ್ರಣವ, ಶಿವಶಕ್ತಿರಹಿತವಾಗಿಹ ಮಹಾಪ್ರಣವ ಮೊದಲಾದ ಅನಂತಕೋಟಿ ಪ್ರಣವಂಗಳಿಲ್ಲದಂದು, ಚಿತ್ಪ್ರಕಾಶ ಚಿದಾಕಾಶ ಮಹದಾಕಾಶ ಮಹಾಕಾಶ ಶಿವಾಕಾಶ ಬಿಂದ್ವಾಕಾಶ ನಾದಾಕಾಶ ಕಲಾಕಾಶ ಪ್ರಣವಾಕಾಶ ಮೊದಲಾಗಿ ಅನಂತಕೋಟಿ ಮಹಾಪ್ರಣವಾಕಾಶ, ಅತಿಪ್ರಣವಾಕಾಶ ಅತಿಮಹಾತೀತಪ್ರಣವಾಕಾಶಗಳಿಲ್ಲದಂದು, ಆದಿ ಅನಾದಿ ಸಂಗತ ಅನಂತ ಅರ್ಭಕ ತಮಂಧ ತಾರಜ ತಂಡಜ ಬ್ಥಿನ್ನಜ ಬ್ಥಿನ್ನಾಯುಕ್ತ ಅವ್ಯಕ್ತ ಅಮದಾಯುಕ್ತ ಮಣಿರಣ ಮಾನ್ಯರಣ ವಿಶ್ವಾರಣ ವಿಶ್ವಾವಸು ಅಲಂಕೃತ ಕೃತಯುಗ ತ್ರೇತಾಯುಗ ದ್ವಾಪರಯುಗ ಕಲಿಯುಗಂಗಳೆಂಬ ಇಪ್ಪತ್ತೊಂದು ಯುಗ ಮೊದಲಾಗಿ ಅನಂತಕೋಟಿ ಯುಗಂಗಳು ಅತಿಮಹಾಯುಗಂಗಳು, ಅತಿಮಹಾತೀತಮಹಾಯುಗಂಗಳಿಲ್ಲದಂದು, ಆದಿಮೂಲ ಅನಾದಿಮೂಲಂಗಳಿಗತ್ತತ್ತವಾದ ಮಹಾಮೂಲಸ್ವಾಮಿಯ ಮೀರಿದ ಅತಿಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡ ಮಹಾಮೂಲಸ್ವಾಮಿಯು ಇದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣ ಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇಂತೀ ಮರ್ತ್ಯಲೋಕದ ಮಹಾಗಣಂಗಳು ಅನಂತ ಪರೀಕ್ಷಣೆಯಿಂದ ಲಕ್ಷಣಾಲಕ್ಷಣಂಗಳಿಂದ ವಿಚಾರಿಸಿ ಮಾರ್ಗಕ್ರಿಯೆವಿಡಿದು ಭಕ್ತಗಣ ಮಧ್ಯದಲ್ಲಿ ಸಾಕಾರಕಂಥೆಯ ನಡೆನುಡಿಗಳ, ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮಾರ್ಗಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯವಾದರು ನೋಡ ! ಇಂತು ಮಾರ್ಗಾಚರಣೆಯನರಿದು ಅದರಲ್ಲಿ ಸಂತೃಪ್ತರಾಗಿ ಅದರಿಂದ ಮೀರಿತೋರುವ ಮೀರಿದ ಕ್ರಿಯಾಚರಣೆಯನರಿದು ಇದ್ಧು ಇಲ್ಲದಂತೆ, ಹೊದ್ದಿ ಹೊದ್ದದಂತೆ ನಿರಾಕಾರಕಂಥೆಯ ಪರಿಮಳ ನಡೆನುಡಿಗಳ ನಿರಾಕಾರ ಪರಶಿವ ಗುರುಲಿಂಗಜಂಗಮಕ್ಕೆ ಸಮರ್ಪಿಸಿ ನಿರ್ಮಾಲ್ಯವಾದ ಪುಷ್ಪವ ಮೀರಿದ ಕ್ರಿಯಾಸ್ವರೂಪ ಸಮಾಧಿಯಲ್ಲಿ ಬಿಟ್ಟು ನಿರವಯ ನಿರಂಜನರಾದರು ನೋಡ ! ಇಂತು ಮಾರ್ಗಕ್ರಿ[ಯೆ]ಯ ಮೀರಿದ ಕಿ[ಯೆ]ಯ ನಡೆ_ನುಡಿ_ಪರಿಣಾಮ_ತೃಪ್ತಿಯಲ್ಲಿ ತಾವೆ ತಾವಾಗಿರ್ಪರು ನೋಡ ! ಗುಹೇಶ್ವರಲಿಂಗಪ್ರಭುವೆಂಬ ನಾಮರೂಪುಕ್ರಿಯವಳಿದು ಸಂಗನಬಸವಣ್ಣನ ಬೆಳಗಿನೊಳಗೆ ಮಹಾಬಯಲಾದರು ನೋಡ !
--------------
ಅಲ್ಲಮಪ್ರಭುದೇವರು
ಪರಶಿವನ ಷಟ್‍ಕಾಯದೊಳಗೆ ತೋರಿದಾ ಆರಾರು ಆರು ಹನ್ನೆರಡು ನೂರಾಯೆಂಟು ತತ್ವವಾಯಿತು. ಈ ನೂರಾಯೆಂಟರೊಳಗೆ ಸಹಸ್ರ ಲಕ್ಷ ಕೋಟಿ ಶಂಖ ಪದ್ಮ ಅರ್ಬುದ ಅನಂತ ಅಗಣಿತ ಅಗಮ್ಯ ಅಗೋಚರ ಅಪ್ರಮಾಣಿತ ಅತೀತ ಅಣೋರಣೀಯಾನ್ ಮಹತೋ ಮಹೀಯಾನ್ ಏನೋ ಎನೋ ಎನಿಸಿದಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಶ್ರೀಮತ್ ಸಚ್ಚಿದಾನಂದ ನಿತ್ಯಪರಿಪೂರ್ಣ ಅವಿರಳಪರಂಜ್ಯೋತಿಸ್ವರೂಪವೇ ಮಹಾಂತ ಅಖಂಡಪರಶಿವಬ್ರಹ್ಮದ ನಿಜಚಿದ್ವಿಲಾಸದೊಳಾದ ಬ್ರಹ್ಮಾಂಡಮಂಡಲಕ್ಕೆ ನಡುಗಂಬವಾದ ಬಳಿಕ ಅನಂತ ನರ ನಾಗ ಸುರ ಅಸುರ ಮನು ಮುನಿ ಮನೋವಿಷ್ಟಪ್ರದಾಯಕ ಈರೇಳುಲೋಕಾಧಾರ ಮಹಾಮೇರುಶಿಖರಮಂದಿರಮಂಟಪಮಧ್ಯದೊಳೆಸೆವಾ ನವರತ್ನಸಿಂಹಾಸನಾಗ್ರದಮ್ಯಾಲೆ ಆ ನಿರ್ಬಯಲವೇ ಗಟ್ಟಿಗೊಂಡು ಆ ಅಖಂಡಪರಬ್ರಹ್ಮವೇ ವಿನೋದದೊಳಗೊಂದು ವಿನೋದವಾಗಿ ತಾನೇ ರೂಪದೋರಿ, ಪಂಚಮುಖ ದಶಭುಜ ತ್ರಿಪಂಚನೇತ್ರ ವಿಷಕಂಠ ಗಂಗೋತ್ತುಮಾಂಗ ಚಂದ್ರಮೌಳಿ ಅಹಿಕುಂಡಲಿ ಗಜಚರ್ಮಾಂಬರ ಅರ್ಧನಾರೀಶ ವ್ಯಾಘ್ರಾಜಿನುಡಿಗೆ ಹರಿನಯನಾಂಕಿತ ಪಾದಪಂಕಜ ಶ್ರೀಮನ್‍ಮಹಾದೇವ ಮೂರ್ತಿಗೊಂಡಿರಲು ಅಲ್ಲಿ ಹರಿ ಅಜ ಇಂದ್ರಾದ್ಯಷ್ಟ ದಿಕ್ಪಾಲಕರು ಅಷ್ಟವಸುಗಳು ಹದಿನಾಲ್ಕು ಮನುಗಳು ಎಂಬತ್ತೆಂಟುಕೋಟಿ ಮುನಿಗಳು ಮುನ್ನೂರಾಮೂವತ್ತಾರು ಕೋಟಿ ದೇವತೆಗಳು ಕಿನ್ನರರು ಕಿಂಪುರುಷರು ಗರುಡರು ಗಂಧರ್ವರು ಸಿದ್ಧರು ಸಾಧ್ಯರು ಸಾಧಕರು ಅಪ್ಸರೆಯರು ನಾಗದೇವತೆಗಳು ಮೊದಲಾದ ಅನಂತ ದೇವತೆಗಳು, ಮತ್ತೆ ವೀರೇಶ ನಂದೀಶ ಭೃಂಗೀಶ ವಿಘ್ನೇಶ ಕಾಲಭೈರವ ಮಹಾಕಾಯ ಗಜಕರ್ಣ ಘಂಟಾಕರ್ಣ ಶಂಖಕರ್ಣಾದಿ ವ್ಯಾಘ್ರಮುಖ ಸಿಂಹಮುಖ ವಾಮಮುಖ ಗಜಮುಖಾದಿಯಾದ ಅನಂತ ಮುಖದವರು, ಏಕಾಕ್ಷ ದ್ವಿಯಕ್ಷ, ತ್ರಿಯಕ್ಷ ಶತಾಕ್ಷ ಸಹಸ್ರಾಕ್ಷ ಅನಂತಾಕ್ಷರರು, ಏಕಜಿಹ್ವೆ ದ್ವಿಜಿಹ್ವೆ ತ್ರಿಜಿಹ್ವೆ ಶತಜಿಹ್ವೆ ಸಹಸ್ರಜಿಹ್ವೆ ಮೊದಲಾದ ಅನಂತ ಜಿಹ್ವೆಗಳು, ಏಕ ದ್ವಿತೀಯ ಪಂಚ ಶತ ಸಹಸ್ರನಾಸಿಕ ಮೊದಲಾದ ಅನಂತ ನಾಸಿಕರು, ಇದರಂತೆ ಅನಂತಪಾದ ಅನಂತಬಾಹು ಅನಂತಶಿರ ಮೊದಲಾದ ಗಂಗೆಯ ಮೇಲ್ಗಣಿತಕ್ಕೆ ಮೀರಿದ ಪ್ರಮಥಗಣ ರುದ್ರಗಣ ಅಮರಗಣ ಮಹಾಗಣಂಗಳು, ಓಲೈಸಿ ಮೆರೆಯುವ ವೇದಾಗಮ ಪುರಾಣಶಾಸ್ತ್ರ ಉಪನಿಷತ್ತು ಬಲ್ಲ ಪಾಂಡಿತ್ಯರು ವೇದಾಧ್ಯಯನರು ನವರಸವ ಬಲ್ಲ ಕವಿಗಳು ಗಮಕಿ ವಾದಿ ವಾಗ್ಮಿಗಳು, ರಾಗವಿಶಾರದರಾದ ನಾರದ ತುಂಬುರ ಕಂಬಲ ಅಶ್ವತ್ಥರು, ಪಾಠಕ ಪರಿಹಾಸಕರ ಬಹುನಾಟ್ಯದಿಂ ಭೇರಿ ಮೃದಂಗ ಮೊದಲಾದ ಅನಂತ ನಾದಘೋಷ ಅನಂತ ಮಾಂಗಲ್ಯೋತ್ಸವದಿಂದ ಓಲಗವ ಕೈಕೊಂಡು ಅನಂತ ಸೌಖ್ಯದಲಿ ಪರಮಾತ್ಮನೆನಿಸಿ ಮೆರೆಯುವಿಯಲ್ಲಾ ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಋಗ್ವೇದ ಯಜುರ್ವೇದ ತಾನಿರ್ದಲ್ಲಿ, ಸಾಮದೇವ ಅಥರ್ವಣವೇದ ತಾನಿರ್ದಲ್ಲಿ, ಉದಾತ್ತ ಅನುದಾತ್ತ ಸ್ವರಿತ ಪ್ರಚರವೆಂಬ ಸ್ವರಂಗಳು ಮೊದಲಾಗಿ, ಅನಂತ ವೇದಸ್ವರಂಗಳೆಲ್ಲ ತಾನಿರ್ದಲ್ಲಿ, ಅಜಪೆ ಗಾಯತ್ರಿ ತಾನಿರ್ದಲ್ಲಿ, ಛಂದಸ್ಸು ನಿಘಂಟು ಶಾಸ್ತ್ರಂಗಳೆಲ್ಲ ತಾನಿರ್ದಲ್ಲಿ, ಅಷ್ಟಾದಶಪುರಾಣಂಗಳು ತಾನಿರ್ದಲ್ಲಿ, ಅಷ್ಟವಿಂಶತಿ ದಿವ್ಯಾಗಮಂಗಳು ತಾನಿರ್ದಲ್ಲಿ, ಅನಂತಕೋಟಿ ವೇದಂಗಳು ತಾನಿರ್ದಲ್ಲಿ, ಇವೆಲ್ಲ ತನ್ನಲ್ಲಿ ಉತ್ಪತ್ತಿ ಸ್ಥಿತಿ ಲಯವಲ್ಲದೆ ಮತ್ತಾರುಂಟು ಹೇಳಾ ? ತನ್ನಿಂದದ್ಥಿಕವಪ್ಪ ಪರಬ್ರಹ್ಮವಿಲ್ಲವಾಗಿ ತಾನೇ ಸಹಜ ನಿರಾಲಂಬವಾಗಿಹ ಸ್ವಯಂಭುಲಿಂಗ ನೋಡಾ ಅನಂತ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಹಜ್ಜೆ ಇಲ್ಲದ ಪುರುಷ, ಆ ಸಜ್ಜನಸ್ತ್ರೀ, ಷಡುಪಂಚಮರುದ್ರ, ಕಾಳಾಂಧರ, ವಾರಿದ್ಥಿ, ಆತ್ಮಾನಾತ್ಮ ಇಂತಿವೇನೂ ಇಲ್ಲದಂದು, ಅತ್ತತ್ತಲಿರ್ದ ಬೆಳಗಿನ ಚಿನ್ಮೂರ್ತಿಯಲ್ಲಿ ಚಿದ್ವಿಭೂತಿ ಇದ್ದಿತ್ತು. ಆ ಚಿದ್ವಿಭೂತಿ ಚಿದ್ಘನಾತ್ಮಕ ರತ್ನವಾಯಿತ್ತು. ಆ ಚಿದ್ಘನಾತ್ಮಕ ರತ್ನವೆ ಚಿಚ್ಛಕ್ತಿಯಾಯಿತ್ತು. ಆ ಚಿಚ್ಛಕ್ತಿ ಸಕಲಚೈತನ್ಯಾತ್ಮಕ ಶರಣನಾಯಿತ್ತು. ಆ ಶರಣನೊಳಗೊಂದು ಕೋಳಿ ದ್ವಾದಶವರ್ಣದ ಸುನಾದವಾಗಿ ಕೂಗಿತ್ತು. ಆ ಸುನಾದಂಗಳ ಝೇಂಕಾರವು ಚತುರ್ದಶ ಸಾವಿರಕ್ಷರ ರೂಪಕವಾಗಿ, ಆ ಶರಣನ ಸಪ್ತಚಕ್ರದ ಕಮಲದೊಳಗೆ ಪ್ರವೇಷ್ಟಿಸಿ, ಗೋಪ್ಯವಾಗಿದವು. ಆ ಶರಣನಲ್ಲಿ ಷಡುಶಿವಮೂರ್ತಿಗಳುದಯಿಸಿದರು. ಆ ಮೂರ್ತಿಗಳಲ್ಲಿ ಷಡುಸ್ಥಲ ಸತ್ಕ್ರಿಯೆಗಳು ತೋರಿದವು. ಅವರೆಲ್ಲರಲ್ಲಿ ಅನಂತಕೋಟಿ ಮೂರ್ತಿಗಳ ಮೇಲೆ, ತೊಂಬತ್ತಾರುಸಾವಿರ ಶಿವಮೂರ್ತಿಗಳುದಯಿಸಿದರು. ಆ ಶರಣನ ನಾಡಿಗಳೊಳಗೆ ಚಿದ್ಮಣಿ, ಚಿದ್ಭಸ್ಮ, ಚಿಲ್ಲಿಂಗ ಇಂತಿವೆಲ್ಲ ತೋರಿದವು. ಇವನೆಲ್ಲವ, ಶಿವಗಣಂಗಳಲ್ಲಿ ಆ ಶರಣನು, ಉಪದೇಶಮಾರ್ಗದಿಂ ಧರಿಸಿಕೊಂಡು, ನೂರೊಂದರ ಮೇಲೆ ನಿಂದು, ದ್ವಾದಶ ಸಪ್ತವಿಂಶತಿ ಛತ್ತೀಸದ್ವಯವೆ ಎಪ್ಪತ್ತು ಶತಾಷ್ಟವೆಂಬ ಪಂಚಜಪಮಾಲೆಗಳಿಗೆ ಹನ್ನೆರಡು ಸಿಡಿಲ ಸುನಾದವನೊಡದು, ತ್ರಿ ಆರುವೇಳೆ ಕೂಡಿ, ನೂರೆಂಟಕ್ಕೆ ಸಂದಾನಿಸಿ ಜಪಿಸುತ್ತಿಪ್ಪ ಅನಂತ ಪ್ರಮಥರಂ, ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಕಂಡು ಸುಖಿಯಾದೆನು.
--------------
ಸಂಗಮೇಶ್ವರದ ಅಪ್ಪಣ್ಣ
ಆದಿ ಅನಾದಿಯಿಲ್ಲದಂದು ತಾನೆ ಪ್ರಣವಸ್ವರೂಪನು. ಅನಂತ ಬ್ರಹ್ಮಾಂಡವಿಲ್ಲದಂದು ತಾನೆ ನಾದಬಿಂದುಕಲಾತೀತನು. ಜೀವಪರಮರಿಲ್ಲದಂದು ತಾನೆ ನಾಮ ಸ್ವರೂಪ ಕ್ರಿಯಾತೀತನು. ಸಚರಾಚರಂಗಳೆಲ್ಲಾ ರಚನೆಗೆ ಬಾರದಂದು ತಾನೆ ಅಖಂಡಪರಿಪೂರ್ಣ ಅಪ್ರಮೇಯ ಅಗೋಚರ ಅಪ್ರಮಾಣ ಅನಂತ ತೇಜೋಮಯವಾಗಿಹ ಮಹಾಘನಲಿಂಗ ನೋಡಾ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಯ್ಯಾ, ಘನಗಂಭೀರವಪ್ಪ ಸಮುದ್ರದೊಳಗೊಂದು ರತ್ನ ಹುಟ್ಟಿದಡೆ, ಆ ಸಮುದ್ರದೊಳಗಡಗಿರ್ಪುದಲ್ಲದೆ ಘನವಾಗಿ ತೋರಬಲ್ಲುದೆ ? ನಿಮ್ಮ ಕರುಣಕಟಾಕ್ಷದಿಂದುದಯಿಸಿ, ಅನಂತ ಪುರಾಣವೆಲ್ಲವು ನಿಮ್ಮ ಕೃಪೆಯಿಂದ ಸಾಧ್ಯವಾಯಿತ್ತೆನಗೆ. ಆದಿಯನಾದಿ ಇಲ್ಲದಂದು ನೀನೊಬ್ಬನೆ ಪ್ರಸಾದಿ. ಉಮೆಯ ಕಲ್ಯಾಣವಿಲ್ಲದಂದು ನೀನೊಬ್ಬನೆ ಪ್ರಸಾದಿ. ಕೂಡಲಚೆನ್ನಸಂಗಮದೇವರು ಸಾಕ್ಷಿಯಾಗಿ ಬಸವಣ್ಣಾ, ನಿಮ್ಮ ತೊತ್ತಿನ ತೊತ್ತಿನ ಮರುದೊತ್ತಿನ ಮಗ ನಾನಯ್ಯಾ.
--------------
ಚನ್ನಬಸವಣ್ಣ
ಭವಕ್ಕೆ ಬೀಜವಾದುದು ತನುವೊ ? ಮನವೊ ? ಎಂದು ವಿವರಿಸಿ ನೋಡಲು ಮನವೆ ಕಾರಣವಾಗಿಪ್ಪುದರಿಂದೆ, ಈ ಕೆಟ್ಟಮನದ ಸಂಗದಿಂದೆ ಮತ್ರ್ಯಲೋಕದಲ್ಲಿ ಹುಟ್ಟಿ ತಾಪತ್ರಯಾಗ್ನಿಯಿಂದೆ ಕಂದಿ ಕುಂದಿ ನೊಂದು ಬೆಂದೆನಯ್ಯ. ಈ ಮನದ ಸಂಗದಿಂದೆ ಭವಭವಂಗಳಲ್ಲಿ ತೊಳಲಿ ಬಳಲಿದೆನಯ್ಯ. ಈ ಮನದ ಸಂಗದಿಂದೆ ಅನಂತ ಮರವೆಯ ಚೋಹಂಗಳಲ್ಲಿ ಸೆರೆಸಿಕ್ಕಿದೆನಯ್ಯ. ಈ ಮನದ ಸಂಗವ ಬಿಡಿಸಿ ನಿಮ್ಮ ನೆನಹಿನ ಸಂಗದಲ್ಲಿರಿಸಿ ಸಲಹಯ್ಯ ಎನ್ನ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ತನುಲಿಂಗವೆಂದೆಂಬ ಅದ್ವೈತಿಯ ಮಾತ ಕೇಳಲಾಗದು. ಮನಲಿಂಗವೆಂದೆಂಬ ಮೂರ್ಖನ ಮಾತ ಕೇಳಲಾಗದು. ಪ್ರಾಣಲಿಂಗವೆಂದೆಂಬ ಪ್ರಪಂಚಿಗಳ ಮಾತ ಕೇಳಲಾಗದು. ತನುಲಿಂಗವಾದರೆ ಹೊನ್ನು ಹೆಣ್ಣು ಮಣ್ಣು ಮೂರೆಂಬ ಅನ್ಯವಿಷಯಕ್ಕೆ ಸಿಲ್ಕಿ ಅನಂತ ಪಾಡಿಗೆ ಗುರಿಯಾಗಬಹುದೇ ? ಮನಲಿಂಗವಾದರೆ ಮನವಿಕಾರದ ಭ್ರಮೆಯಲ್ಲಿ ತೊಳಲಿ ಬಳಲಿ ಅಜ್ಞಾನಕ್ಕೆ ಗುರಿಯಾಗಬಹುದೇ ? ಪ್ರಾಣಲಿಂಗವಾದರೆ ಪ್ರಳಯಕ್ಕೆ ಗುರಿಯಾಗಿ ಸತ್ತು ಸತ್ತು ಹೂಳಿಸಿಕೊಳಬಹುದೇ ? ತನು ಮನ ಪ್ರಾಣಲಿಂಗವಾದರೆ ಜನನ ಮರಣವೆಂಬ ಅಣಲಿಂಗೆ ಗುರಿಯಾಗಿ ನಾನಾ ಯೋನಿಯಲ್ಲಿ ತಿರುಗಬಹುದೇನಯ್ಯಾ ? ತನು ಮನ ಪ್ರಾಣವಾ ಘನಮಹಾಲಿಂಗಕ್ಕೆ ಸರಿಯೆಂದು ಅಜ್ಞಾನದಿಂದ ತನುವೆ ಲಿಂಗ ಮನವೆ ಲಿಂಗ ಪ್ರಾಣವೆ ಲಿಂಗವೆಂದು ಇಷ್ಟಲಿಂಗವ ಜರಿದು ನುಡಿವ ಭ್ರಷ್ಟ ಬಿನುಗು ದುರಾಚಾರಿ ಹೊಲೆಯರ ನಾಯಕನರಕದಲ್ಲಿಕ್ಕುವ ನಮ್ಮ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ಅನಂತ ವರುಷದವರ ಹಿರಿಯರೆಂಬೆನೆ ? ಎನ್ನೆನು_ ಅವರು ಭೂಭಾರಕರಾಗಿ. ಏಳು ವರುಷದ ಹಿರಿಯ ಚೀಲಾಳ; ಹನ್ನೆರಡು ವರುಷದ ಹಿರಿಯಳು ಮಹಾದೇವಿಯಕ್ಕ. ಅಂಡಜ ಪಿಂಡಜ ಮೀನಜರೆಂಬವರೆಲ್ಲಾ ಅಂದಂದಿನ ಬಾಲಕರು. ನಿಮಗೆ ಬುದ್ಧಿಯ ಹೇಳುವಡೆ ಎನಗೆ ಬುದ್ಧಿಯಿಲ್ಲ, ಕೂಡಲಚೆನ್ನಸಂಗಮದೇವಾ.
--------------
ಚನ್ನಬಸವಣ್ಣ
ಆ ಪರಶಿವನ ಅಷ್ಟಾಂಗದಿಂದಾದ ಬ್ರಹ್ಮಾಂಡದ ಸ್ಥಿರ ಚರ ಪ್ರಾಣಿಗಳ ಲಯವ ನೋಡಿ ಚಿಂತೆಯೊಳಗಾಗಿ, ಕಂತುಹರನ ಧ್ಯಾನವ ಮಾಡಲು, ಆ ಹರ ಗುರುರೂಪವ ತಾಳ್ದು ಬಂದು, ತನ್ನ ಚಿಂತಿಸಿದ ಸುಜ್ಞಾನಿಗಳಿಗೆ, ಮನವನೊಬ್ಬುಳಿಗೊಳಿಸುವುದಕ್ಕೆ ಕಾರಣವೆಂದು ಹೇಳಿದ ಷಣ್ಮುಖ, ಶಾಂಭವಿ, ಖೇಚರಿ, ಭೂಚರಿ, ಸಾಚರಿ, ಕುರಂಗ, ಪಾಲೋತಕ, ಹಠ, ಲಯ, ಲಂಬಿಕ, ಮೊದಲಾದ ಅನಂತ ಮುದ್ರೆಗಳ ಸಾಧಿಸಿ, ಆ ಮುದ್ರೆ ಸಾಧನದಲ್ಲಿ ಕಂಡ, ಮಾಯ, ಛಾಯ, ಅಭ್ರಛಾಯ, ಪುರುಷಛಾಯ, ಮಿಂಚಿನ ಛಾಯ, ಬಳ್ಳಿಮಿರುಪಿನ ಛಾಯ, ಆರು ವರ್ಣದ ಛಾಯ, ಮೃತ್ಯುವಿನ ಛಾಯ, ಜೀವ ಜಪ ಮರಣ ಚಿನ್ನ ಕನಸಸಂಭ್ರಮ, ಕುಂಡಲಿನೋಟ, ಘೋಷಲಂಪಟ, ಮಾನಸಪೂಜೆ, ಬೈಲವಾಣಿ, ಪಶ್ಚಿಮಕೋಣೆ, ಆತ್ಮಭೆಟ್ಟಿ, ಮಂತ್ರಪಾಠ, ಒಳಬೆಳಗು, ಹೊರಬೆಳಗು ಪರಿಪರಿಯ ಬೆರಗುಗಳ ತಿಳಿದು, ಇದೇ ನಿಜಬ್ರಹ್ಮವೆಂದು ಹೆಮ್ಮೆ ೈಸಿ, ಆಸೆವೊಡಿಯದೆ, ಕ್ಲೇಶ ಕಡಿಯದೆ, ಘಾಶಿಯಾಗಿ ಹೇಸಕಿಯೊಳಗೆ ಮುಳಿಗಿ ಮುಂದುಗಾಣದೇ ಹೋದರು ನಿರುಪಮ ನಿರಾಳ ಮಹತ್ಪ್ರಭು ಮಹಾಂತಯೋಗಿ.
--------------
ಮಡಿವಾಳಪ್ಪ / ಕಡಕೋಳ ಮಡಿವಾಳಪ್ಪ
ಇನ್ನಷ್ಟು ... -->