ಸಾಗರ ಘನವೆಂದಡೆ, ಧರೆಯೊಳಗಡಗಿತ್ತು. ಧರೆ ಘನವೆಂದಡೆ, ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು. ನಾಗೇಂದ್ರನ ಘನವೆಂದಡೆ, ದೇವಿಯರ ಕಿರುವೆರಳಿನ ಮುದ್ರಿಕೆಯಾಯಿತ್ತು. ಅಂಥ ದೇವಿಯ ಘನವೆಂದಡೆ, ಶಿವನರ್ಧಾಂಗಿಯಾದಳು, ಶಿವ ಘನವೆಂದಡೆ, ಬಾಣನ ಬಾಗಿಲ ಕಾಯ್ದ, ನಂಬಿಯ ಹಡಪವ ಹಿಡಿದ. ಇದು ಕಾರಣ, ಸೊಡ್ಡಳಾ ನಿಮ್ಮ ಭಕ್ತರೇ ಘನ.
ಅಂಥ ಬ್ರಹ್ಮಾಂಡವ ತೊಂಬತ್ತು ಲಕ್ಷದ ಮೇಲೆ ಸಾವಿರದ ಎಂಟುನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಧರ್ಮವೆಂಬ ಭುವನ. ಆ ಭುವನದೊಳು ಧರ್ಮಸ್ವರೂಪನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತು ನೂರಾ ನಾಲ್ವತ್ತೈದು ಕೋಟಿ ದೇವರ್ಕಳು ವೇದಪುರುಷರು ಇಂದ್ರಚದ್ರಾದಿತ್ಯರು ಇಹರು ನೋಡಾ. ಒಂಬತ್ತು ನೂರಾ ನಾಲ್ವತ್ತೈದು ಕೋಟಿ ರುದ್ರ ಬ್ರಹ್ಮ ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
ಅಂಥ ಬ್ರಹ್ಮಾಂಡವ ಮೂವತ್ತೊಂದುಸಾವಿರದ ಮುನ್ನೂರಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು ರೌದ್ರಿಯೆಂಬ ಭುವನ. ಆ ಭುವನದೊಳು ಸಹಸ್ರಾಕ್ಷನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾಐವತ್ತೈದು ಕೋಟಿದೇವರ್ಕಳು, ಇಂದ್ರಚಂದ್ರಾದಿತ್ಯರು, ವೇದಪುರುಷರು, ಮುನೀಂದ್ರರು, ನೂರಾಐವತ್ತೈದು ಕೋಟಿ ನಾರಾಯಣ ರುದ್ರ ಬ್ರಹ್ಮಾದಿಗಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
ಅಂಥ ಬ್ರಹ್ಮಾಂಡವ ಎಂಬತ್ತಾರುಲಕ್ಷದ ಮೇಲೆ ಸಾವಿರದ ಎಂಟುನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಉಭಯನಖವೆಂಬ ಭುವನ. ಆ ಭುವನದೊಳು ಉಪಮಾತೀತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬಯಿನೂರಾ ಇಪ್ಪತ್ತೈದು ಕೋಟಿ ಬ್ರಹ್ಮ ನಾರಾಯಣ ರುದ್ರಾದಿಗಳಿಹರು ನೋಡಾ. ಒಂಬಯಿನೂರಾ ಇಪ್ಪತ್ತೈದು ಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ