ಅಥವಾ

ಒಟ್ಟು 117 ಕಡೆಗಳಲ್ಲಿ , 36 ವಚನಕಾರರು , 103 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂತು ಅಂತರಂಗದಲ್ಲಿ ಲಿಂಗಧಾರಣವಾಯಿತ್ತೆಂದಡೆ, ಬಹಿರಂಗದಲ್ಲಿ ಅಂಗದ ಮೇಲೆ ಇಷ್ಟಲಿಂಗಧಾರಣವಿಲ್ಲದೆ ಇರಬಹುದೆ? ಇರಬಾರದು ಅದು ವೀರಮಾಹೇಶ್ವರರ ಆಚರಣೆಯಲ್ಲದ ಕಾರಣ. ಎಷ್ಟು ಅರುಹಾದರೂ ಅಂಗದಮೇಲೆ ಶಿವಲಿಂಗಧಾರಣವಿಲ್ಲದಿರ್ದಡದು ಅರುಹಲ್ಲ; ಅದು ನಮ್ಮ ಪುರಾತನರ ಮತವಲ್ಲ. ಸಾಕ್ಷಾತ್ ಪರಮೇಶ್ವರನಾದರೂ ಆಗಲಿ, ಅಂಗದಮೇಲೆ ಲಿಂಗಧಾರಣವಿಲ್ಲದಿದ್ದರೆ, ಅವನ ಮುಖವ ನೋಡಲಾಗದು ಕಾಣ. ಅದೇನು ಕಾರಣವೆಂದರೆ: ಅದು ಶಿವಾಚಾರದ ಪಥವಲ್ಲದ ಕಾರಣ. ಗುರುಕರುಣದಿಂದ ಪಡೆದ ಲಿಂಗವ ಕಕ್ಷೆ ಕರಸ್ಥಲ ಕಂಠ ಉತ್ತಮಾಂಗ ಮುಖ ಸೆಜ್ಜೆ ಅಮಳೋಕ್ಯ ಮೊದಲಾದ ಸ್ಥಾನಂಗಳಲ್ಲಿ ಧರಿಸುವುದೇ ಸತ್ಪಥ ಕಾಣಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಅದ್ವೈತವ ಅಂತರಂಗದಲ್ಲಿ ಅರಿದು ಹೊರಗೆ ದಾಸೋಹವ ಮಾಡದಿರ್ದಡೆ ಎಂತಯ್ಯಾ ಉಭಯ ಸಂದೇಹದಲ್ಲಿ ನಿಜವಪ್ಪುದು ನಿಮ್ಮ ಶರಣರ ಮನ ನೊಂದಲ್ಲಿ ನಾನು ಸೈರಿಸಿಕೊಂಬೆನೆಂತಯ್ಯಾ ಕೂಡಲಸಂಗಮದೇವಾ, ಹಾವು ಸಾಯದೆ ಕೋಲು ನೋಯದಂತೆ ಮಾಡಾ, ನಿಮ್ಮ ಧರ್ಮ.
--------------
ಬಸವಣ್ಣ
ಅಂತರಂಗದಲ್ಲಿ ಅರಿವಾದಡೇನಯ್ಯಾ ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ ? ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ ? ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ ? ಸಾಕಾರ ನಿರಾಕಾರ ಏಕೋದೇವ, ನಮ್ಮ ಕೂಡಲಚೆನ್ನಸಂಗಯ್ಯನು.
--------------
ಚನ್ನಬಸವಣ್ಣ
ಅಯ್ಯ! ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿಗಳೆಂದು ಒಪ್ಪವಿಟ್ಟು ನಿಚ್ಚ ನಿಚ್ಚ ನುಡಿವ ಅಣ್ಣಗಳಿರ! ನೀವು ಅಚ್ಚಪ್ರಸಾದ, ನಿಚ್ಚಪ್ರಸಾದ, ಸಮಯಪ್ರಸಾದವಾದ ವಿಚಾರವ ಹೇಳಿರಣ್ಣ! ಅರಿಯದಿರ್ದಡೆ ಕೇಳಿರಣ್ಣ! ಸಮಸ್ತಪದಾರ್ಥವ ಗುರುಲಿಂಗಜಂಗಮದಿಂದ ಪವಿತ್ರವ ಮಾಡಿ ಅವರವರ ಪದಾರ್ಥವ ಅವರವರಿಗೆ ವಂಚಿಸದೆ ನಿರ್ವಂಚಕತ್ವದಿಂದ ಸಮರ್ಪಿಸುವದೆ ತ್ರಿವಿಧಪ್ರಸಾದಸ್ವರೂಪು ನೋಡ! ಕ್ರಿಯಾಮುಖದಲ್ಲಿ ಇಷ್ಟಲಿಂಗಕ್ಕೆ ಸಮರ್ಪಿಸುವ ಪೃಥ್ವಿಸಂಬಂಧವಾದ, ಅಷ್ಟತನುಗಳಿಂದುದಯವಾದ, ಗಂಧರಸರೂಪುಸ್ಪರ್ಶನಶಬ್ದ ಮೊದಲಾದ ಸಮಸ್ತಪದಾರ್ಥಂಗಳ ಆ ಕ್ರಿಯಾಗುರುಲಿಂಗಜಂಗಮಕ್ಕೆ ಸಮರ್ಪಿಸಿ, ಅವರೊಕ್ಕುಮಿಕ್ಕ ರೂಪುರುಚಿತೃಪ್ತಿಪ್ರಸಾದವ ಭೋಗಿಸುವಾತನೆ ತ್ರಿವಿಧಪ್ರಸಾದಿ ನೋಡ! ಜ್ಞಾನಮುಖದಲ್ಲಿ ಪ್ರಾಣಲಿಂಗಕ್ಕೆ ಸಮರ್ಪಿಸುವ ಮನಸಂಬಂಧವಾದ ಸ್ತ್ರೀಯಳೆಂಬ ರೂಪುರುಚಿತೃಪ್ತಿ ಮೊದಲಾದ ಪದಾರ್ಥಂಗಳ ಸತ್ಕ್ರೀಯಾಗುರುಲಿಂಗಜಂಗಮವನೆ ಜ್ಞಾನಗುರುಲಿಂಗಜಂಗಮವೆಂದು ಭಾವಿಸಿ ತನ್ನ ವಿವಾಹಸಮಯದಲ್ಲಿ ಗುರುಲಿಂಗಜಂಗಮಕ್ಕೆ ಭಕ್ತಗಣಸಾಕ್ಷಿಯಾಗಿ ತನ್ನ ಕೂಟದ ಶಕ್ತಿಯ ಗುರುಲಿಂಗಜಂಗಮಕ್ಕೆ ಕೊಡುವ ಭಕ್ತಿ ಮೊದಲಾಗಿ, ಆ ಶಕ್ತಿಯರ ಅಂತರಂಗದಲ್ಲಿ ಬೆಳಗುವ ಪರಂಜ್ಯೋತಿರ್ಲಿಂಗವ ಬಹಿಷ್ಕರಿಸಿ ಸದ್ಗುರುಮುಖದಿಂ ಹಸ್ತಮಸ್ತಕಸಂಯೋಗವ ಮಾಡಿಸಿ, ಆ ಲಿಂಗಾಂಗಕ್ಕೆ ಪಾಣಿಗ್ರಹಣವ ಮಾಡಿಸಿ, ಮಂತ್ರದೀಕ್ಷೆಯ ಬೋದ್ಥಿಸಿ, ಪಾದೋದಕಪ್ರಸಾದವ ಕೊಡಿಸಿ, ಸದಾಚಾರ-ಸದ್ಭಕ್ತಿ-ಸತ್ಕ್ರೀಯಾ-ಸಮ್ಯಜ್ಞಾನವ ಬೋಧಿಸಿ, ಶಕ್ತಿಭಾರವಳಿದು ಕ್ರಿಯಾಶಕ್ತಿಯರೆಂದು ಭಾವಿಸಿ, ಪ್ರಥಮದಲ್ಲಿ ಗುರುಲಿಂಗಜಂಗಮಕ್ಕೆ ಆ ಕ್ರಿಯಾಶಕ್ತಿಯ ಭಕ್ತಗಣಸಾಕ್ಷಿಯಾಗಿ ಪ್ರಮಾಣದಿಂದ ಕಂಕಣವ ಕಟ್ಟಿ, ಶರಣಾರ್ಥಿಯೆಂದು ಒಪ್ಪದಿಂದ ಒಪ್ಪಿಸಿ, ಅದರಿಂ ಮೇಲೆ, ಆ ಗುರುಲಿಂಗಜಂಗಮದ ಕರುಣವ ಹಡೆದು, ಆ ಕ್ರಿಯಾಶಕ್ತಿಯ ಭಕ್ತಗಣಮಧ್ಯದಲ್ಲಿ ಕೂಡಿ, ಸೆರಗ ಹಿಡಿದು ಗಣಪದಕ್ಕೆ ಶರಣೆಂದು ವಂದಿಸಿ ಅವರ ಕರುಣವ ಹಾರೈಸಿ ನಿಜಭಕ್ತಿಜ್ಞಾನವೈರಾಗ್ಯವ ಬೆಸಗೊಂಡು ಸಚ್ಚಿದಾನಂದಲಿಂಗನಿಷ್ಠಾಪರತ್ವದಿಂದ ಗುರುಲಿಂಗಜಂಗಮಶಕ್ತಿ ಮೊದಲಾಗಿ ಗುರುಭಕ್ತಿಯಿಂದ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ! ಮಹಾಜ್ಞಾನಮುಖದಲ್ಲಿ ಭಾವಲಿಂಗಕ್ಕೆ ಸಮರ್ಪಿಸುವ ಧನಸಂಬಂಧವಾದ ದ್ರವ್ಯವನ್ನು ಆ ಕ್ರಿಯಾಜ್ಞಾನಯುಕ್ತವಾದ ಗುರುಲಿಂಗಜಂಗಮವನೆ ಮಹಾಜ್ಞಾನಗುರುಲಿಂಗಜಂಗಮವೆಂದು ಭಾವಿಸಿ, ತಾ ಧರಿಸುವಂಥ ವಸ್ತ್ರಾಭರಣರಕ್ಷೆ ಮೊದಲಾಗಿ ಪ್ರತಿಪದಾರ್ಥವ ವಿಚಾರಮುಖದಲ್ಲಿ ಪಾತ್ರಾಪಾತ್ರವ ತಿಳಿದು ಸಮರ್ಪಿಸಿ, ನಿಜನೈಷ್ಠೆಯಿಂದ, ಪರದ್ರವ್ಯವ ತಂದು ಗುರುಲಿಂಗಜಂಗಮವ ಒಡಗೂಡಿ ಋಣಭಾರಕ್ಕೊಳಗಾಗದೆ ನಡೆ ನುಡಿ ಒಂದಾಗಿ ಆಚರಿಸುವರೆ ತ್ರಿವಿಧಪ್ರಸಾದಿಗಳು ನೋಡ! ಈ ವಿಚಾರವ ಸದ್ಗುರುಮುಖದಿಂದ ಬೆಸಗೊಂಡು ಆಚರಿಸುವರೆ ಅಚ್ಚಪ್ರಸಾದಿ, ನಿಚ್ಚಪ್ರಸಾದಿ, ಸಮಯಪ್ರಸಾದಿ ನೋಡ! ಈ ವಿಚಾರವನರಿಯದೆ, ಶ್ರುತಿ-ಗುರು-ಸ್ವಾನುಭಾವವ ತಿಳಿಯದೆ, ವಾಚಾಳಕತ್ವದಿಂದ ನುಡಿದು, [ತಾವು] ಗುರುಲಿಂಗಜಂಗಮಪ್ರಸಾದಿಗಳೆಂಬ ಮೂಳರ ಬಾಯ ಮೇಲೆ ಗಣಂಗಳು ಮೆಟ್ಟಿದ ಚಮ್ಮಾವಿಗೆಯ ತೆಗೆದುಕೊಂಡು ಪಟಪಟನೆ ಹೊಡೆಯೆಂದಾತನಂಬಿಗರ ಚೌಡಯ್ಯನು ನೋಡ, ಸಂಗನ ಬಸವೇಶ್ವರ.
--------------
ಅಂಬಿಗರ ಚೌಡಯ್ಯ
ಅಯ್ಯ ತನುತ್ರಯಂಗಳು, ಜೀವತ್ರಯಂಗಳು, ಆತ್ಮತ್ರಯಂಗಳು, ಅವಸ್ಥಾತ್ರಯಂಗಳು, ಗುಣತ್ರಯಂಗಳು, ಮನತ್ರಯಂಗಳು, ತಾಪತ್ರಯಂಗಳು, ಕಾಲತ್ರಯಂಗಳು, ಕರ್ಮತ್ರಯಂಗಳು, ಭಾವತ್ರಯಂಗಳು, ಮಲತ್ರಯಂಗಳು, ಕರಣತ್ರಯಂಗಳು ಮೊದಲಾದ ಪ್ರವೃತ್ತಿಮಾರ್ಗವನುಳಿದು, ಹಿಂದೆ ಹೇಳಿದ ಸದ್ಭಕ್ತ_ಮಹೇಶ್ವರಸ್ಥಲದಲ್ಲಿ ನಿಂದು_ ಅಷ್ಟಾವಧಾನ ಅವಿರಳಾನಂದಮೂರ್ತಿಯಾಗಿ ಪ್ರಕಾಶಿಸುವ ನಿಜಪ್ರಸಾದಿಯಂತರಂಗದಲ್ಲಿ ಚಿತ್ಘನ ಸ್ವರೂಪವಲೀಲೆಯಿಂ ಅಂತರಂಗದಲ್ಲಿ ಅಂಗತತ್ತ್ವ, ಲಿಂಗತತ್ತ್ವ, ಶಿವತತ್ತ್ವ, ಪರತತ್ತ್ವ ಮೊದಲಾದ ಸಮಸ್ತ ತತ್ತ್ವಂಗಳನೊಳಕೊಂಡು, ಹದಿನಾರು ಸ್ಥಲಂಗಳ ಗರ್ಭೀಕರಿಸಿಕೊಂಡು, ನಾಲ್ಕು ಸಾವಿರದ ಮುನ್ನೂರಿಪ್ಪತ್ತು ಮಂತ್ರಮಾಲಿಕೆಗಳ ಪಿಡಿದುಕೊಂಡು ಇಪ್ಪತ್ತುನಾಲ್ಕು ಸಕೀಲಗರ್ಭದಿಂ ಪಾದೋದಕ ಪ್ರಸಾದವ ಕೊಂಡ ಅಂಗ_ಮನ_ಪ್ರಾಣ_ಭಾವ_ಇಂದ್ರಿಯಂಗಳೆಲ್ಲ ಪಾದೋದಕ ಪ್ರಸಾದಮಯವೆಂಬ ಹರಗುರುವಾಕ್ಯದಿಂ ಚಿನ್ನಬಣ್ಣ ಪ್ರಕಾಶದ ಹಾಂಗೆ ಭಿನ್ನ ಭಾವವಿಲ್ಲದೆ ಏಕರೂಪಿನಿಂದ ನಿರೀಕ್ಷಣಾಮೂರ್ತಿ ಶಿವಲಿಂಗವಾಗಿ ನೆಲಸಿರ್ಪುದು ನೋಡ ! ನಿರವಯಶೂನ್ಯಲಿಂಗಮೂರ್ತಿ ಗುಹೇಶ್ವರಲಿಂಗವು ಚೆನ್ನಬಸವಣ್ಣ.
--------------
ಅಲ್ಲಮಪ್ರಭುದೇವರು
ಪಾದತೀರ್ಥವೆಂದಡೆ ಪರಾತ್ಪರವು ತಾನೆ ನೋಡಾ. ಪಾದತೀರ್ಥವೆಂದಡೆ ಪರಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಪರಿಪೂರ್ಣ ಮಹಾಜ್ಞಾನವು ತಾನೆ ನೋಡಾ. ಪಾದತೀರ್ಥವೆಂದಡೆ ಪರಾತ್ಪರವಾದ ಪರವಸ್ತುವು ತಾನೆ ನೋಡಾ. ಪಾದತೀರ್ಥವೆಂದಡೆ ನಿತ್ಯನಿರವಯ ನಿರಂಜನಬ್ರಹ್ಮವು ತಾನೆ ನೋಡಾ. ಪಾದತೀರ್ಥವೆಂದಡೆ ಮಹಾಘನ ಪರತರ ಪರಂಜ್ಯೋತಿ ತಾನೆ ನೋಡಾ. ಪಾದತೀರ್ಥವೆಂದಡೆ ಸಾಕ್ಷಾತ್ ಪರಶಿವನು ತಾನೆ ನೋಡಾ. ಇಂತಪ್ಪ ಪಾದತೀರ್ಥದ ಘನವ ಕಂಡು ತನುಕರಗಿ ಮನಹಿಗ್ಗಿ ಹೃದಯ ಪಸರಿಸಿ ಅಂತರಂಗದಲ್ಲಿ ವಿಶ್ವಾಸ ತುಂಬಿ, ಬಹಿರಂಗದ ಭಕ್ತಿಯಿಂದೆ ಸಾಷ್ಟಾಂಗ ನಮಸ್ಕರಿಸಿ, ಆ ಮಹಾಘನ ಪರಾತ್ಪರವಾದ ಪಾದತೀರ್ಥವನು ಹದುಳಿಗಚಿತ್ತನಾಗಿ ಹರ್ಷಾನಂದದಿಂ ಸೇವನೆಯಮಾಡಿ ಭವಸಾಗರವ ದಾಂಟಿ, ಕಾಯಜೀವದ ಸಂಸಾರವ ನೀಗಿ, ಪರಮಪವಿತ್ರ ಶಿವಮಯನಾಗಿರ್ದೆನಯ್ಯಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
ಕೂರ್ಮನ ಶಿಶುವಿನ ಸ್ನೇಹದಂತಿರ್ಪ ದೇವನೆನಗಿಂದು ಪ್ರತ್ಯಕ್ಷ ಕಣ್ಣ ಮುಂದೆ ಗೋಚರವಾದ ನೋಡಾ. ಎನ್ನ ಅಂತರಂಗದಲ್ಲಿ ಹೂಣೆಹೊಕ್ಕು, ವಿನಯ ಸದ್ಗೋಷಿ*ಯ ಮಾಡುವ ನಿಷ್ಕಳಂಕ ಚೈತನ್ಯನು ಸಕಲರೂಪ ಸನ್ನಹಿತವಾದ ನೋಡಾ. ಬಟ್ಟಬಯಲು ಬಲಿದು ಗಟ್ಟಿಗೊಂಡಂತೆ, ಏಕಾಂತವೀರ ಸೊಡ್ಡಳಾ, ನಿಮ್ಮ ಶರಣ ಪ್ರಭುದೇವರ ನಿಲವು.
--------------
ಸೊಡ್ಡಳ ಬಾಚರಸ
ಕಕ್ಷೆ ಕರಸ್ಥಲ ಕÀಂಠ ಉತ್ತಮಾಂಗ ಮುಖಸೆಜ್ಜೆ ಅಂಗಂಸೋಂಕೆಂಬದು; ಷಡುಸ್ಥಲದರುಶನಾದಿಗಳಿಗೆ, ಬಹಿರಂಗದಲ್ಲಿ ವೇಷಲಾಂಛನವಯ್ಯಾ. ಅಂತರಂಗದಲ್ಲಿ ನಾಲ್ಕು ಸ್ಥಲ; ಬ್ರಹ್ಮರಂಧ್ರ ಭ್ರೂಮಧ್ಯ ನಾಶಿಕಾಗ್ರ ಚೌಕಮಧ್ಯ, _ಇಂತೀ ಸ್ಥಾನಂಗಳನರಿಯರಾಗಿ! ಬ್ರಹ್ಮರಂಧ್ರದಲ್ಲಿ ಲಿಂಗಸ್ವಾಯತ, ಭ್ರೂಮಧ್ಯದಲ್ಲಿ ಜಂಗಮಸ್ವಾಯತ, ನಾಶಿಕಾಗ್ರದಲ್ಲಿ ಪ್ರಸಾದಸ್ವಾಯತ, ಚೌಕಮಧ್ಯದಲ್ಲಿ ಅನುಭಾವಸ್ವಾಯತ, ಅಷ್ಟದಳಕಮಲದಲ್ಲಿ ಸರ್ವಸ್ವಾಯತ._ ಇದು ಕಾರಣ ಗುಹೇಶ್ವರಾ ನಿಮ್ಮಶರಣರು ಸದಾ ಸನ್ನಹಿತರು.
--------------
ಅಲ್ಲಮಪ್ರಭುದೇವರು
ಅಂತರಂಗದಲ್ಲಿ ವಸ್ತುವ ಕಂಡೆನಯ್ಯ. ಬಹಿರಂಗದಲ್ಲಿ ಆಚಾರವಿರಬೇಕಯ್ಯ. ಆ ಆಚಾರವಿಡಿದು ಗುರು ಲಿಂಗ ಜಂಗಮ ಪಾದೋದಕ ಪ್ರಸಾದವ ಸ್ವೀಕರಿಸಬೇಕಯ್ಯ. ಆ ಪಾದೋದಕ ಪ್ರಸಾದವನರಿತು ಆ ವಸ್ತುವಿನಲ್ಲಿ ಕೂಡಬಲ್ಲಾತನೆ ಒಳಗೆ ಲಿಂಗಮಯ, ಹೊರಗೆ ಲಿಂಗಮಯ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ವೇದ ದೊಡ್ಡದೆಂದು ನುಡಿವ ವಾದಿಯ ಮಾತ ಹೇಳಲಾಗದು ಕೇಳಲಾಗದು. ಶಾಸ್ತ್ರ ದೊಡ್ಡದೆಂದು ನುಡಿವ ಪಾತಕನ ಮಾತ ಹೇಳಲಾಗದು ಕೇಳಲಾಗದು. ಪುರಾಣ ದೊಡ್ಡದೆಂದು ನುಡಿವ ಪುಂಡರ ಮಾತ ಹೇಳಲಾಗದು ಕೇಳಲಾಗದು. ಆಗಮ ದೊಡ್ಡದೆಂದು ನುಡಿವ ಅಹಂಕಾರಿಯ ಮಾತ ಹೇಳಲಾಗದು ಕೇಳಲಾಗದು. ಜ್ಯೋತಿಷ್ಯ ದೊಡ್ಡದೆಂದು ನುಡಿವ ಘಾತುಕನ ಮಾತ ಹೇಳಲಾಗದು, ಕೇಳಲಾಗದು. ಅದೇನು ಕಾರಣವೆಂದಡೆ, ತನ್ನ ಅಂತರಂಗದಲ್ಲಿ ಪರಬ್ರಹ್ಮದ ನಿಲವ ಅರಿತ ಮಹಾತ್ಮಂಗೆ ಇನ್ನೆಲ್ಲಿಯ ವೇದವೋ ? ಇನ್ನೆಲ್ಲಿಯ ಶಾಸ್ತ್ರವೋ ? ಇನ್ನೆಲ್ಲಿಯ ಪುರಾಣವೋ? ಇನ್ನೆಲ್ಲಿಯ ಆಗಮವೋ ? ಇನ್ನೆಲ್ಲಿಯ ಜ್ಯೋತಿಷ್ಯವೋ ? ಇಂತೀ ಇವಕ್ಕೆ ಸಿಲ್ಕದೆ ಅತ್ತತ್ತಲೆಯಾಗಿರ್ದನಯ್ಯ ನಿಮ್ಮ ಶರಣನು ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಹುದಹುದು, ಭಕ್ತಿಭಾವದ ಭಜನೆ ಎಂತಿರ್ದುದಂತೆ ಅಂತರಂಗದಲ್ಲಿ ಅರಿವು. ಆ ಅಂತರಂಗದ ಅರಿವಿಂಗೆ ಆಚಾರವೆ ಕಾಯ. ಆಚಾರವೆಂಬ ಕಾಯವಿಲ್ಲದಡೆ ಅರಿವಿಂಗೆ ಆಶ್ರಯವಿಲ್ಲ. ಅರಿವು ಆಚಾರದಲ್ಲಿ ಸಮವೇಧಿಸಿದ ಲಿಂಗೈಕ್ಯನ ಕ್ರಿಯಾಬದ್ಧನೆಂದು ನುಡಿದಡೆ ಪಂಚಮಹಾಪಾತಕ. ನಿನ್ನ ಅರಿವಿಂಗೆ ಆಚಾರವಾಗಿ, ಆಚಾರಕ್ಕೆ ಆಳಾಗಿ ನಮ್ಮ ಗುಹೇಶ್ವರನು ನಿನ್ನ ಕೈವಶಕ್ಕೆ ಒಳಗಾದನು ನಿನ್ನ ಸುಖಸಮಾಧಿಯ ತೋರು, ಬಾರಾ ಸಿದ್ಧರಾಮಯ್ಯ
--------------
ಅಲ್ಲಮಪ್ರಭುದೇವರು
ಪರಮಪವಿತ್ರ ಹರಗಣಸಾಕ್ಷಿಯಾಗಿ, ಸೂತ್ರ ಗೋತ್ರ ಪರಿಪೂಜ್ಯತ್ವವುಳ್ಳಂಥ ಕ್ರಿಯಾಶಕ್ತಿಯ ಸರ್ವೇಂದ್ರಿಮುಖದವಯವಂಗಳನು ಕೂನಗಳ ವಿಚಾರಕತ್ವದಿಂ ಘನಲಿಂಗಮೂರ್ತಿ ಶ್ರೀಗುರುವಿನ ಕರುಣಕಟಾಕ್ಷ ಶಿವದೀಕ್ಷೆಗಳಿಂದ ಪವಿತ್ರಕಾಯವೆನಿಸಿ, ಶಿವಧರ್ಮಾಂತರಾಳವೆಂಬ ದಂಡಕಮಂಡಲಗಳೆ ಕಂಭ ಕುಂಭ ಹಂದರ ಮುತ್ತೈದೆ ಬಾಸಿಂಗದೆ ಸಾಕ್ಷಿಯಾಗಿ, ಪಂಚಕಳಸ ಆರಾಧ್ಯಗಣಸಮೂಹವೆಲ್ಲ ಸಂತೋಷಂಗೈದು, ಇಷ್ಟಲಿಂಗವೆಂಬ ರಮಣಂಗೆ ಪ್ರಾಣಲಿಂಗವೆಂಬ ರಮಣಿಗೆ ಸುಹಸ್ತಗಳ ಕೂಡಿಸಿ, ಅರ್ಚಿಸಿ, ನವಸೂತ್ರವೆಂಬ ಕಂಕಣವ ಕಟ್ಟಿ, ಸ್ಥಿರಸೇಸೆಯನೆರೆದು, ಭಾವಭರಿತವಾಗಿ, ಸಮರಸಾಚರಣೆಗಳಿಂದ ಪರತತ್ವಲಿಂಗಲೋಲುಪ್ತರಾಗಿ, ಜಂಗಮಾರಾಧನೆ ದಾಸೋಹಂಭಾವದಿಂದ ಶಿವಯೋಗಸಂಪನ್ನರಾಗಿರಿಯೆಂದು ಅಭಯಕರವಿತ್ತು ಶರಣಮಹಾರುದ್ರ ಗಂಟೆಹೊಡೆದಂಥ ಕ್ರಿಯಾಶಕ್ತಿಗಳೆಷ್ಟಾದರೂ ರತಿವಿರತಿಗಳೊಳ್ ಬಳಸಿಬ್ರಹ್ಮವಾಗಿರ್ಪುದೆ ಸತ್ಯಸದ್ಧರ್ಮಿಗಳ ಸನ್ಮಾರ್ಗವು. ಈ ಸನ್ಮಾರ್ಗವನುಳಿದು, ವಿಷಯಾತುರ ಹೆಚ್ಚಿ, ಒಬ್ಬರು ಭೋಗಿಸಿದ ಎಂಜಲಸ್ತ್ರೀಯರ ಆಲಿಂಗಿಸಿ, ತನ್ನ ರಾಣಿಯೆಂದು ನುಡಿಗಣದಿಂದ ಭಾವಿಸುವುದೊಂದು ದುರಾಚಾರ. ಜಿಹ್ವೆಯಿಂದ ಮಾತುಮಾತಿಗೆ ಹೆಂಡತಿ ಅಕ್ಕ ಅವ್ವ ತಂಗಿಯೆಂದು ಬೊಗಳುವುದೊಂದು ದುರಾಚಾರ. ಪರಪುರಷಂಗೆ ರಾಣಿಯಾದ ಸ್ತ್ರೀಯಳ ಹಾವಭಾವ ವಿಲಾಸಗಳ ನೋಡಿ, ವಿಭ್ರಮಣೆಗೊಂಡು, ಅಂತರಂಗದಲ್ಲಿ ಕಳವಳಿಸಿ, ಹಾಸ್ಯರಹಸ್ಯವ ಮಾಡಬೇಕೆಂಬುದೊಂದು ದುರಾಚಾರ. ಇಂತು ತ್ರಿವಿಧರತಿಗಳಿಂದ ವರ್ತಿಸುವುದೆ ದ್ವಿತೀಯಪಾತಕ. ಇದಕ್ಕೆ ಹರನಿರೂಪ ಸಾಕ್ಷಿ : ``ಪರಸ್ತ್ರೀಣಾಂ ಚ ಸಂಸರ್ಗಾತ್ ಮೋಕ್ಷೋ ನಾಸ್ತಿ ವರಾನನೇ | ಜಪಹಾನಿಃ ತಪೋಹಾನಿಃ ರೌರವಂ ನರಕಂ ವ್ರಜೇತ್ ||'' ``ಹರಿಣಪಾದಮಾತ್ರೇಣ ಬಂಧಿತಂ ಚ ಜಗತ್ರಯಂ | ತತ್ಸುಖಂ ಬಿಂದುಮಾತ್ರೇಣ ದುಃಖಂ ಪರ್ವತಮೇವ ಚ ||'' ಇಂತೆಂಬ ಹರಗುರುವಾಕ್ಯ ಪ್ರಮಾಣವಾಗಿ, ಸದ್ಭಕ್ತ ಮಹೇಶ್ವರರು ಪರರೆಂಜಲಸ್ತ್ರೀಯಳ ಭೋಗಿಸಿದಡೆ ಹಿಂದಣ ಭವಪಾಶ ಬೆನ್ನಬಿಡದುಯೆಂದು ದ್ವಿತೀಯ ಪಾತಕಂಗಳ ನಿರಸನಂಗೈದು, ತ್ರಿಕರಣಶುದ್ಧವಾಗಿ, ನಡೆದಂತೆ ನುಡಿದು, ನುಡಿದಂತೆ ನಡೆದು, ದೃಢಚಿತ್ತರಾಗಿ, ಜಾಗ್ರ ಜಾಗ್ರ ಇನ್ನು ತಿರುಗಿ ಭವಕ್ಕೆ ಬಂದಡೆ ನಿಮ್ಮಾಣೆ, ನಿಮ್ಮ ಪ್ರಮಥರಾಣೆಯೆಂದು ತ್ರಿವಿಧಬಿಂದುಗಳ ತಡೆದು, ಸಾಕ್ಷಿ : ``ಕಾಮಃ ಕ್ರೋಧಶ್ಚ ಲೋಭಶ್ಚ ದೇಹೇ ತಿಷ*ಂತಿ ತಸ್ಕರಾಃ | ಜ್ಞಾನರತ್ನಾಪಹಾರಾಯ ತಸ್ಮಾತ್ತ್ವಂ ಜಾಗೃತೋ ಭವ ||'' ಎಂದರಿದು, ಅರುವಿನ ಮಹಾಜ್ಞಾನರತ್ನವ ಕಳೆದು, ಮತಿಭ್ರಷ್ಟ ಕ್ರಿಮಿಕೀಟ ಜನ್ಮಕ್ಕೆ ಬೀಳದಂತೆ ನಿಜೇಷ್ಟಲಿಂಗಾಂಗಸಮರತಿಯುಳ್ಳ ನಿಷ್ಟನಾಗಿ, ಪರರ ಸಂಗವ ಭವಸಂಗವೆಂದರಿದಾನಂದದಿಂದ ಸತ್ಯಶುದ್ಧನಾಗಿ, ಗುರುಹಿರಿಯರಿಗೆ ಖೊಟ್ಟಿಯಾಗದೆ, ಕಾಲಕಾಮರಟ್ಟುಳಿಯ ಕಾಡಾರಣ್ಯಕ್ಕೆ ಮಹಾಜ್ಞಾನವೆಂಬ ಕಿಚ್ಚನಿಕ್ಕಿ, ಚಿತ್ಪ್ರಭಾಬೆಳಗಿಂಗೆ ಮಹಾಬೆಳಗಾಗಿರ್ಪುದು ಕಾಣಾ ನಿರವಯಪ್ರಭು ಮಹಾಂತ ಸಿದ್ಧಮಲ್ಲಿಕಾರ್ಜುನಲಿಂಗೇಶ್ವರ.
--------------
ಮೂರುಸಾವಿರ ಮುಕ್ತಿಮುನಿ
ಕವಿ ಕವಿಗಳೆಂದು ಹೆಸರಿಟ್ಟುಕೊಂಡು ನುಡಿವ ಅಣ್ಣಗಳಿರಾ ! ಕಾಯದ ಕೀಲನರಿತು ಕವಿತ್ವವನು ಮಾಡುವಂಥ ಭೇದವನು ಬಲ್ಲರೆ ಹೇಳಿ, ಅರಿಯದಿರ್ದರೆ ಕೇಳಿ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತು ಕೊಟ್ಟು ಇಳಿಯ ತೆಗೆದು ಜನ್ಮದಲ್ಲಿ ನುಡಿಸಬಲ್ಲರೆ ಆತನೀಗ ಪಂಚತತ್ವದ ಮೂಲವ ತಿಳಿದು ಮನವೆಂಬ ಗದ್ದಿಗೆಯ ಅಜ್ಞಾನವೆಂಬ ನಾದಸ್ವರವನು ಹಿಡಿದುಕೊಂಡು ಅದರ ಅನುವರಿತು ಊದಿ, ಪಿಂದೆ ದಾಡೆಯಿಂದ ಪೃಥ್ವಿಯ ಎತ್ತಿದ ಸರ್ಪನ ಎಬ್ಬಿಸಿ ಬ್ರಹ್ಮಾಂಡಕ್ಕೆ ಮುಖ ಮಾಡಿ ನಿಲ್ಲಿಸಬಲ್ಲರೆ ಆತನಿಗಾಗಿ ಗೀತ ಗಾಯನ ವಾದ್ಯ ಪ್ರಾಸ ದೀರ್ಘ ಗುರು ಲಘುಗಳೆಂಬ ಭೇದವ ಬಲ್ಲೆನೆಂದೆನ್ನಬಹುದು. ನಿಮ್ಮ ಅಂಗ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಕಾಣಿರೋ ! ಗುಡಿಸ ಕೊಟ್ಟು, ಗುಡಿಸಿನ ಒಳಗೆ ಸುಳಿದು ಜಿಹ್ವೆಯಲ್ಲಿ ನುಡಿಸಬಲ್ಲರೆ ಅಂತಹವನಿಗೆ ತನ್ನ ತನುವೆಂಬ ಹುತ್ತದ ಒಂಬತ್ತು ಹೆಜ್ಜವನು ಮುಚ್ಚಿದ ದ್ವಾರಂಗಳನ್ನೆಲ್ಲ ಬಳಿದು ಅಂಬರಮಂಟಪದೊಳಗೆ ಸುಳಿದಾಡುವಂಥ ಶಂಭುಲಿಂಗವನು ನೋಡಿಕೊಂಡು ಸಂತೈಸಿ, ವರುಷ ವರುಷಕ್ಕೆ ಒಂದು ಸಂಭ್ರಮದ ಜಾತ್ರೆಯ ನೆರೆಯಬಲ್ಲರೆ ಆತನಿಗೆ ಮಹಾಪ್ರೌಢನೆಂದೆನ್ನಬಹುದು ಕಾಣಿರೋ. ನಿಮ್ಮ ಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಕೊಂಬಿನಿಂದಿಳಿಯ ತೆಗೆದು ಆತನಿಗೆ ಆರು ಮೂರುಗಳೆಂಬ ನವರಸವಿದ್ಯ ನಾದವನೆಬ್ಬಿಸುವಂಥ ತಾಳಗತಿಯ ಪದಕಾರಣವ ಬಲ್ಲನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಮೇಲೆತ್ವವಂ ಕೊಟ್ಟು, ಕೆಳಗೈತ್ವವಂ ಕೊಟ್ಟು, ಇವೆರಡನು ಕೂಡಿ ಒಂದಮಾಡಿ ನುಡಿಸಬಲ್ಲರೆ ಆತನಿಗೆ ಸ್ವರ್ಗ ಮತ್ರ್ಯ ಪಾತಾಳ ಇಂತೇಳು ಭುವನ, ಹದಿನಾಲ್ಕು ಲೋಕ, ಸಪ್ತೇಳುಸಾಗರ, ಅಷ್ಟಲಕ್ಷ ಗಿರಿಪರ್ವತಗಳನ್ನೆಲ್ಲ ತನ್ನ ಅಂತರಂಗವೆಂಬ ಕುಕ್ಷಿಯೊಳಗೆ ಇಂಬಿಟ್ಟುಕೊಂಡು ಪರರಿಗೆ ಕಾಣಬಾರದಂತಹ ಕುರೂಪಿಯಾಗಿ ಇರಬಲ್ಲರೆ ಆತನಿಗೆ ಮಹಾಶಿವಜ್ಞಾನಿಯೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು, ಉತ್ವ ಔತ್ವ ಕೊಟ್ಟು, ಉತ್ವ ಔತ್ವವೆರಡನು ಕೂಡಿ ಒಂದುಮಾಡಿ ನಿಲಿಸಿ ಜಮ್ಮೆದಲ್ಲಿ ನುಡಿಸಬಲ್ಲರೆ ಆತನಿಗೆ ಆ ನರಕವಿ ವರಕವಿಗಳ ಕಣ್ಣಿಗೆ ಕಾಣಬಾರದಂತಹ ಮುಸುಕಿನ ಮುಡಿಯಂ ಮಂದಿರ ಮನೆಯೊಳಗೆ ಮುಹೂರ್ತವ ಮಾಡಿಕೊಂಡಿಹುದು. ಓಂಕಾರವೆಂಬುವದೊಂದು ಅಕ್ಷರವ ನೋಡಿ ಅನಂತ ಪರಿಪರಿಯ ವಚನಗಳ ಮಾಡಬಲ್ಲರೆ ಆತನಿಗೆ ಮಹಾ ಉತ್ತಮ ಶಿವಕವೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಒಂದು ಸೊನ್ನೆಯ ಕೊಟ್ಟರೆ `ವಂ' ಎಂದು ಅಂತರಂಗದಲ್ಲಿ ತಿಳಿದು, ಜಿಹ್ವೆಯಲ್ಲಿ ನುಡಿಯಬಲ್ಲರೆ ಆತನಿಗೆ ಕಾಯಪುರವೆಂಬ ಪಟ್ಟಣದೊಳಗೆ ಹರಿದಾಡುವಂಥ ಆರುಮಂದಿ ತಳವಾರರ ತಲೆಯ ಕುಟ್ಟಿ, ಮೂರುಮಂದಿ ಗರ ಬೆರೆದ ನೆಂಟರ ಮೂಗ ಕೊಯ್ದು, ಸಾವಿರೆಸಳಿನ ಕಮಲದೊಳಗೆ ಪೊಕ್ಕು, ತನ್ನ ಸಾವು ಮರಣ ತಪ್ಪಿಸಿಕೊಳ್ಳಬಲ್ಲರೆ ಆತನಿಗೆ ಮಹಾಶಿವಯೋಗೀಶ್ವರನೆಂದೆನ್ನಬಹುದು ಕಾಣಿರೋ. ನಿಮ್ಮ ಅಂಗಕಾಯವೆಂಬ ಅಕ್ಷರಕ್ಕೆ `ವಾ' ಎಂಬ ಒತ್ತುಕೊಟ್ಟು ಎರಡು ಸೊನ್ನೆಯ ಕೊಟ್ಟರೆ `ವಃ' ಎಂದು ಅಂತರಂಗದಲ್ಲಿ ತಿಳಿದು ಜಿಹ್ವೆಯಲ್ಲಿ ನುಡಿಯಬಲ್ಲರೆ, ಆತನಿಗೆ ತನ್ನ ಅಂತರಂಗವೆಂಬ ಹರಿವಾಣದೊಳಗೆ ತುಂಬಿಟ್ಟಿದ್ದಂತಹ ಷಡುರಸ ಪಂಚಾಮೃತ ಪಂಚಕಜ್ಜಾಯಗಳೆಲ್ಲ ಸವಿದುಂಡು ಚಪ್ಪರಿಸಿ ಹಿಪ್ಪೆಯ ಮಾಡಿ ಬೀದಿಯೊಳಗೆ ಬಿಸುಟಬಲ್ಲರೆ ಆತನಿಗೆ ಕಾಯದ ಕೀಲನರಿತು ಕವಿತ್ವವನು ಮಾಡುವಂತಹ ಪ್ರೌಢನೆಂದೆನ್ನಬಹುದು ಕಾಣಿರೋ. ಇಂತೀ ಕಾಯದ ಕೀಲನರಿಯದ ಕವಿಗಳು ಛಂದಸ್ಸು, ನಿಘಂಟು, ಅಮರ, ವ್ಯಾಕರಣ, ನಾನಾರ್ಥಗಳೆಂಬ ಹೆಂಚ ಹೊಡೆದು ನೆತ್ತಿಯ ಮೇಲೆ ಹೊತ್ತುಕೊಂಡು ತಿರುಗುವ ಕವಿಗಳೆಂಬ ಚಾತುರ್ಯದ ಮಾತ ನಿಟ್ಟಿಸಲು ಆಡ ಸವಿವ ಜಾತಿಗಳ ಕಂಡು ನಗುತಿರ್ದಾತ ಸಿದ್ಧಮಲ್ಲನದಾತ ಮೇಗಣಗವಿಯ ಗುರು ಶಿವಸಿದ್ಧೇಶ್ವರಪ್ರಭುವೆ.
--------------
ಸಿದ್ಧಮಲ್ಲಪ್ಪ
ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣ ಐಕ್ಯನೆಂದು ಬೇರು ಮಾಡಿ ನುಡಿದು ಬೇರು ಮಾಡಿ ನಡೆವ ಭಿನ್ನನಲ್ಲ. ಭಿನ್ನವಿಲ್ಲದ ಅಂತರಂಗದಲ್ಲಿ ಅರಿವು ಪರಿಪೂರ್ಣ ಬಸವಣ್ಣ. ಬಹಿರಂಗದಲ್ಲಿ ದಾಸೋಹ ಸಂಪನ್ನ ಬಸವಣ್ಣ. ಮನ ವಚನ ಕಾಯದಲ್ಲಿ ಸದ್ಭಕ್ತಿಸಂಪನ್ನ ಬಸವಣ್ಣ. ಎಡೆದೆರಹಿಲ್ಲದ ಲಿಂಗಸಂಪನ್ನ ಬಸವಣ್ಣ. ಸರ್ವಾಂಗದಲ್ಲಿ ಸರ್ವಾಚಾರಸಂಪನ್ನ ಬಸವಣ್ಣ. ಕೂಡಲಚೆನ್ನಸಂಗನಲ್ಲಿ ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು
--------------
ಚನ್ನಬಸವಣ್ಣ
ಅಂತರಂಗದಲ್ಲಿ ಅರಿಯದಿರ್ದ ಪರಮಮಹಾಲಿಂಗವು ಗುರುಮುಖದಿಂದೆ ಕರ ಮನ ಭಾವದಲ್ಲಿ ಥಳಥಳಿಸಿ ಬೆಳಗುತ್ತಿರಲು, ಅಲ್ಲಿಯೇ ಮುಕ್ತಿಯ ಪಡೆದಾನಂದಿಸಲರಿಯದೆ, ಕಾಶಿ ಗೋಕರ್ಣ ರಾಮೇಶ ನದಿ ಕಡಲತೀರವೆಂಬ ಪುಣ್ಯಕ್ಷೇತ್ರಂಗಳೆಂದು ಕಾಗೆ ಶಿಖರವನೇರಿ ಕರ್ರೆಂದು ಹೋದಂತೆ ಕಂಡರೇನು ಕಾಣಿಸಿಕೊಂಡರೇನು ಹೋಗಿ ಬರುವ ಮಾರ್ಗ ತಪ್ಪದು ಗುರುನಿರಂಜನ ಚನ್ನಬಸವಲಿಂಗ ಸಾಕ್ಷಿಯಾಗಿ.
--------------
ದೇಶಿಕೇಂದ್ರ ಸಂಗನಬಸವಯ್ಯ
ಇನ್ನಷ್ಟು ... -->